ಕಗ್ಗ ದರ್ಶನ – 6 (2)

ಕಗ್ಗ ದರ್ಶನ – 6 (2)

ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ
ಮೊದಲು ನಾನೆನ್ನವರು ಬಳಿಕ ಉಳಿದವರು
ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ
ಅದುಮಿಕೊ ಅಹಮಿಕೆಯನು – ಮರುಳ ಮುನಿಯ
ತಾನೇ ಮೇಲು, ಉಳಿದೆಲ್ಲರಿಗಿಂತ ತಾನೇ ಮಿಗಿಲು ಎಂಬ ಭಾವ ಯಾವೆಲ್ಲ ರೀತಿಗಳಲ್ಲಿ ಮನುಷ್ಯರಲ್ಲಿ ಕಾಣಿಸುತ್ತದೆ ಎಂಬುದನ್ನು ಗಮನಿಸಿದ್ದೀರಾ? ಅಂಗಡಿಯಲ್ಲಿ, ಬಸ್ ನಿಲ್ದಾಣದಲ್ಲಿ, ರೈಲು ನಿಲ್ದಾಣದಲ್ಲಿ, ಸಿನೆಮಾ ಟಾಕೀಸಿನಲ್ಲಿ ಉದ್ದನೆಯ ಸರತಿಯ ಸಾಲು. ಆದರೆ ಕೆಲವರಿಗೆ ತನ್ನ ಕೆಲಸ ಮೊದಲು ಆಗಬೇಕೆಂಬ ದರ್ಪ; ಅಲ್ಲಿ ಕಾಯುತ್ತಿರುವ ಇತರರ ಬಗ್ಗೆ ಅಸಡ್ಡೆ. ತನ್ನ ಸಮಯ ಮಾತ್ರ ಅಮೂಲ್ಯ, ಇತರರ ಸಮಯಕ್ಕೆ ಬೆಲೆಯಿಲ್ಲ ಎಂಬ ವರ್ತನೆ. ಅವರ ವರ್ತನೆ ಪ್ರಶ್ನಿಸಿದವರ ಮೇಲೆ ರೇಗಾಡಿ ದಬ್ಬಾಳಿಕೆ.
ಇಂತವರಿಗೆ ಸಮಾರಂಭಗಳಲ್ಲಿಯೂ “ಮೊದಲಿನ ಪೀಠ”ವೇ ಬೇಕು. ನನ್ನನ್ನು ವೇದಿಕೆಗೆ ಕರೆದು ಕೂರಿಸಲಿಲ್ಲ, ಮುಂದಿನ ಸಾಲಿನಲ್ಲಿ ಕೂರಿಸಲಿಲ್ಲ; ನನಗೆ ಮಾಲೆ ಹಾಕಲಿಲ್ಲ, ಶಾಲು ಹೊದೆಸಲಿಲ್ಲ ಎಂಬ ಕಾರಣಕ್ಕಾಗಿ ಅದೆಷ್ಟು ಸಮಾರಂಭಗಳು ನಿಂತು ಹೋಗಿವೆ! “ನನಗೆ ಸರಿಯಾಗಿ ಅತಿಥಿ ಸತ್ಕಾರ ಮಾಡಲಿಲ್ಲ. ಇನ್ನು ಮುಂದೆ ನಿಮ್ಮ ಮನೆಗೆ ಕಾಲಿಡುವುದಿಲ್ಲ” ಎಂಬ ಸೊಕ್ಕಿನಿಂದ ಮನೆಯಿಂದ ಹೊರ ನಡೆದವರೆಷ್ಟು!
ಇಂತಹ ಅಹಂಕಾರ ತುಂಬಿಕೊಂಡವರಿಂದಾಗಿ ಏನೆಲ್ಲ ಅನಾಹುತಗಳಾಗಿವೆ! ಮದುವೆಗಳು ಮುರಿದು ಬಿದ್ದಿವೆ; ಮನೆಗಳು ಒಡೆದಿವೆ; ಸಮುದಾಯಗಳು ನರಳಿವೆ; ಊರುಗಳು ನಾಶವಾಗಿವೆ; ದೇಶಗಳು ಧ್ವಂಸವಾಗಿವೆ.
ಮಹಾಭಾರತದ ಕತೆ ನೆನೆಯೋಣ. ಒಬ್ಬನ ಅಹಂನಿಂದಾಗಿ ಲಕ್ಷಗಟ್ಟಲೆ ಯೋಧರ ಸಾವು, ಸೊತ್ತು ನಾಶ, ದೇಶಕ್ಕೆ ವಿನಾಶ. ಇದಕ್ಕೆ ಕಾರಣ – ಪಾಂಡವರ ಅರಗಿನ ಮನೆಯಲ್ಲಿ ನೀರು-ನೆಲ ತಿಳಿಯದೆ ದುರ್ಯೋಧನ ಗೊಂದಲ ಪಟ್ಟಾಗ ದ್ರೌಪದಿ ನಕ್ಕಳು ಎಂಬುದು, ಅಷ್ಟೇ. ಎರಡನೇ ಮಹಾಯುದ್ಧದ ಕಾರಣವೇನು? ನಾನು ಮತ್ತು ನನ್ನವರು ಶ್ರೇಷ್ಠರು; ಉಳಿದವರೆಲ್ಲ ಹುಳಗಳಂತೆ ಸಾಯಬೇಕಾದವರು ಎಂದು ನಂಬಿದ ಹಿಟ್ಲರನ ಅಹಂ. ಅದೇ ಲಕ್ಷಗಟ್ಟಲೆ ಜನರ ಸಾವುನೋವಿನ ಮೂಲವಾಯಿತು.
ಹೀಗೆ, ಮನುಷ್ಯನ ಅಹಂಕಾರವೇ ಈ ಲೋಕದ ಎಲ್ಲ ಕಲಹಗಳಿಗೆ, ದುಃಖಗಳಿಗೆ ಮೂಲ ಕಾರಣವೆನ್ನುತ್ತಾರೆ ಮಾನ್ಯ ಡಿ.ವಿ.ಜಿ.ಯವರು. ಇದಕ್ಕೆ ಪರಿಹಾರವನ್ನೂ ಅವರು ಸೂಚಿಸುತ್ತಾರೆ – “ಅದುಮಿಕೋ ಅಹಂತೆಯನು”. ಇದಕ್ಕಾಗಿಯೇ ಎಲ್ಲ ಧರ್ಮಗಳೂ ಒಂದು ನಿಯಮ ರೂಪಿಸಿವೆ: “ಈ ವಿಶ್ವವನ್ನು ನಡೆಸುವ ಚೈತನ್ಯಕ್ಕೆ ದಿನಕ್ಕೊಮ್ಮೆ ಶರಣಾಗಿ, ನಮಿಸಿ.” ಇನ್ನಾದರೂ ಅದನ್ನು ಪಾಲಿಸೋಣ.