26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅವಳಿಗಿದೆ, ಇವಳಿಗಿಲ್ಲ

August 14, 2012 - 12:54am
Rajendra Kumar ...


ಅವಳಿಗಿದೆ, ಇವಳಿಗಿಲ್ಲ

 

ಎಲ್ಲವೂ ನನ್ನದಾಗಿ ಬಿಡಬೇಕೆನಿಸುತ್ತದೆ
ಈ ತೊಂಡೆ ಹಣ್ಣಿನ ತುಟಿ
ಅವಳಿಗಿದೆ, ಇವಳಿಗಿಲ್ಲ. ಅವಳು ಬೇಕು.
ಈ ಸಂಪಿಗೆಯ ಮೂಗು
ಇವಳಿಗಿದೆ ಅವಳಿಗಿಲ್ಲ. ಇವಳು ಬೇಕು.
ನಡೆದರೆ ಎದೆ ಝಲ್ ಎನಿಸುವ
ಸೊಂಟದ ಬಳುಕು, ಈ ಇಬ್ಬರಲ್ಲೂ ಕಾಣಿಸುತ್ತಿಲ್ಲ.
ಈ ಇಬ್ಬರ ನಡುವೆ ಬಂದು ನಿಂತಿರುವ ನೆರಳಿಗಿದೆ.
ಈ ನರಳಿನೊಡತಿ ಬೇಕು.
ಹಾಗೇ ಸ್ವಲ್ಪ ಕಣ್ಣು ಮೇಲೆತ್ತಿ ನೋಡಿದರೆ....
ಈ ನರಳಿನೊಡತಿಯ ಮುಖ ಶೂರ್ಪನಖಿಯದು !
ಛೇ, ಇರಲಿ ಇವಳೂ ಎಂದು,
ಕಣ್ಣು ಬೇರೆಲ್ಲೋ ಹೊರಳಿಸಿದರೆ...
ಮುರಿದು ಬೀಳಲು ಅಣಿಯಾಗಿರುವ
ಒಂದು ಗುಡಸಲಿನ ಪುಟ್ಟ ಖಿಡಕಿಯಲಿ,
ಕುಂಕುಮದ ಬೊಟ್ಟಿಟ್ಟ, ಕಣ್ಣಿಗೆ ಕಾಡಿಗೆಯಿಟ್ಟ,
ತುಟಿ ತೊಂಡೆಯಂತಿರುವ,
ಮೂಗು ಸಂಪಿಗೆಯಂತಿರುವ
ಮಂಗಳ ಗೌರಿಯ ಮುಖ..!
ಸಿಗಬಹುದು ಎಲ್ಲವೂ ಇವಳಲ್ಲಿ ಎಂದು
ಧಾವಿಸಿ ಬಂದು ಬಾಗಿಲು ಬಡೆದರೆ,
ತಡವಾಯಿತು ಬಾಗಿಲು ತೆಗೆಯಲು.
ಕಾಲುಗಳಿಲ್ಲದ ಮಂಗಳ ಗೌರಿ
ನಿಂತಿರುವಳೆದುರಿನಲಿ.
ಕಟ್ಟಿಗೆಯ ಕೋಲುಗಳನಿಟ್ಟು ಭುಜದಲಿ ಆಸರೆಗೆಂದು.
ಛೇ...ಎನ್ನಲಿಲ್ಲ ನಾನು ಈ ಸಲವೆಕೋ..
ಅರ್ಥವಾಗುತ್ತಿದೆ ಈಗ,
ಎಲ್ಲಿಯೂ ಎಲ್ಲವೂ ಪೂರ್ಣವಾಗಿಲ್ಲವೆಂದು.
ಈಗ ಇವಳೇ ಇರಲಿ ಎಂದೆ.
ಕೋಲುಗಳನು  ಬದಿಗೆ ಸರಿಸಿ,
ನಾನೇ ಅವುಗಳ ಜಾಗ ತುಂಬಿದೆ.
 
ರಾಜೇಂದ್ರಕುಮಾರ್ ರಾಯಕೋಡಿ - Copyright©

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurudutt_r on
ಮನಸ್ಸು, ಹೃದಯ ಮತ್ತು ಆಸೆಯ ಭಾವನೆಗಳ ಸಾಲುಗಳು ಇಷ್ಟ ಆಯಿತು. ಈ ಪದ್ಯ ಓದಿದಾಗ ನನ್ನ ಆತ್ಮೀಯ ಗೆಳೆಯನೊಬ್ಬ ನಿಮ್ಮ ಕವನದಲ್ಲಿ ಬರುವ ಮಂಗಳ ಗೌರಿಯಂತಿರುವೊಬ್ಬಳನ್ನು ವರಿಸಿದ ನೆನಪು ಬಂತು. ನಿಮ್ಮ ಹಾಡುಗಳನ್ನು ಮಾಲಾಶ್ರೀ ಹಾಗು ಕುಮಾರ್ ಅವರು ಹಾಡಿದ್ದಾರೆ ಎಂದು ತಿಳಿಯಿತು. ಅದು ಅಡಕ ಮುದ್ರಿಕೆ(ಸಿ.ಡಿ)ಯಲ್ಲಿ ಇದೆಯೇ? ದಯವಿಟ್ಟು ತಿಳಿಸಿ. ಇಂತಿ, ರಾ.ಗುರುದತ್

Submitted by Rajendra Kumar ... on
ಆತ್ಮೀಯ ರಾ.ಗುರುದತ್ ಅವರೆ, ನಿಮ್ಮ ಪ್ರತಿಕ್ರಿಯೆ ಸಂತೋಷ ನೀಡಿತು. ನಾನು ಮಾಲಾಶ್ರೀ ಕಣವಿ ಮತ್ತು ಕುಮಾರ್ ಕಣವಿ ಯವರ ಮೊದಲ ಆಲ್ಬಮ್ "ಹನಿ ಹನಿಯಲೆ" ಯ ಎಲ್ಲ ಎಂಟು ಗೀತೆಗಳನ್ನು ಬರೆದಿದ್ದೇನೆ. ಅಡಕ ಮುದ್ರಿಕೆ(ಸಿ.ಡಿ) ಬೆಂಗಳೂರಿನಲ್ಲಿ ಮತ್ತು ಗುಲಬರ್ಗಾದಲ್ಲಿ ಕೆಳಗೆ ಕೊಟ್ಟಿರುವ ವಿಳಾಸದಲ್ಲಿ ಲಭ್ಯವಿದೆ. ಸುವರ್ಣ ಚಾನೆಲ್ ನಲ್ಲಿ ಆದ ಕಾರ್ಯಕ್ರಮದ ಯುಟ್ಯೂಬ್ ಲಿಂಕ್ ಕೆಳಗೆ ಕೊಟ್ಟಿದ್ದೇನೆ. ಕೇಳಿ, ಆನಂದಿಸಿ ನಿಮ್ಮ ಅನುಭವ ಹಂಚಿಕೊಂಡರೆ ನನಗೆ ಇನ್ನೂ ಸಂತೋಷವಾಗುತ್ತದೆ. ಧನ್ಯವಾದಗಳು. COSMOM, MUSIC SHOWROOM, #125, 50ft Road, Hanumanthnagar, Bangalore-560019 CALYPSO, 9th main, 3rd Block, Jayanagar, Bangalore Dreamworld, Ashok complex near goa hotel bhrampur Gulbarga http://www.youtube.com/watch?v=O1EKbuxyizM http://www.youtube.com/watch?v=nw-QGrI52kM http://www.youtube.com/watch?v=6tQlF7_nyvU&feature=relmfu

Submitted by mmshaik on
ಆತ್ಮೀಯ ರಾಜೇಂದ್ರ ಅವ್ರೆ ನಮಸ್ಕಾರ. ಉತ್ತಮ ಕವನ ನೀಡಿದ್ದಕ್ಕೆ ಅಭಿನಂದನೆಗಳು.ಎಲ್ಲವೂ ಎಲ್ಲಿಯೂ ಪೂರ್ಣವಾಗಿಲ್ಲ ಇದು ಜಾಗತಿಕ ಸತ್ಯ...!

Submitted by Rajendra Kumar ... on
ಆತ್ಮೀಯ ರಾಬಿಯ ಅವರೆ, ನಿಮ್ಮ ಪ್ರತಿಕ್ರಿಯೆ ನನಗೆ ಯಾವಾಗಲು ಒಂದು ಪ್ರೋತ್ಸಾಹ. ಧನ್ಯವಾದಗಳು.

Submitted by partha1059 on
ಅವಳು ಪರಿಪೂರ್ಣಳೆ ಇವಳು ಪರಿಪೂರ್ಣಳೆ ಎಂದು ನೆನೆಯುವ ಮನ ಮತ್ತೊಮ್ಮೆ ತನಗೆ ತಾನೆ ಪ್ರಶ್ನಿಸಿತು "ನಾನು" ಪರಿಪೂರ್ಣನೆ? "ಇಲ್ಲ" ಅನ್ನುವಾಗ ಹೊರಗೆ ಪರಿಪೂರ್ಣತೆಯ ನಿರೀಕ್ಷೆ ಏಕೆ ಜಗತ್ತಿನಲ್ಲಿ ಯಾವುದು ಪರಿಪೂರ್ಣವಲ್ಲ

Submitted by Rajendra Kumar ... on
ಆತ್ಮೀಯ ಪಾರ್ಥಸಾರಥಿಯವರೆ, ನಿಮ್ಮ ಮಾತು ನಿಜ. ಹೆಚ್ಚಾಗಿ ಎಲ್ಲರು ಹಾಗೇನೆ. ತಮ್ಮೊಳಗಿನ ಲೋಪವನ್ನು ಅರಿಯದೆ ಇನ್ನೊಬ್ಬರಲಿ ಪರಿಪೂರ್ಣತೆ ಹುಡುಕುತ್ತಿರುತ್ತಾರೆ. ತಮ್ಮ ಸತ್ಯವನ್ನು ಅರಿತು ಇನ್ನೊಬ್ಬರನು ಅವರು ಇದ್ದ ಹಾಗೆ ಒಪ್ಪುವುದೇ ಪ್ರೀತಿ ಮತ್ತು ಜೀವನ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by S.NAGARAJ on
ಆತ್ಮೀಯ ರಾಜೇಂದ್ರ ಕುಮಾರ್ ಅವರೆ, ಪರಿಪೂರ್ಣತೆಯನ್ನು ಹುಡುಕುವ ಮನಸ್ಸಿನ ತುಮಲವನ್ನು ಸುಂದರವಾಗಿ ಕವನವಾಗಿಸಿದ್ದೀರಿ. ಶುಭಾಶಯಗಳು.

Submitted by Soumya Bhat on
ರಾಜೇಂದ್ರ ಕುಮಾರ್ ರವರೆ ಇತ್ತೀಚೆಗೆ ನಿಮ್ಮ ಕವನದ ವಸ್ತುಗಳು ಸುತ್ತ ಮುತ್ತಲಿನ ವಿಷಯಗಳೇ ಆಗಿದೆ. ಹಾಗಾಗಿ ನಿಮ್ಮ ಕವನವು ನಮ್ಮವೇ ಆಗಿ ಚಿಂತನೆಗೆ ಹಚ್ಚುತ್ತದೆ. ಪ್ರಸ್ತುತ ಕವನದಲ್ಲಿ ಎಲ್ಲರಲ್ಲೂ ಅಪೂರ್ಣತೆ ಹುಡುಕುತ್ತ ಕೊನೆಯಲ್ಲಿ ನಿಮ್ಮ ಅಪೂರ್ಣತೆ ತ್ಯಜಿಸಿ ಪರಿಪೂರ್ಣರಾದಿರಲ್ಲ..ಚಂದವಾಯ್ತು, ಶುಭವಾಗಲಿ >ಸೌಮ್ಯ

Submitted by Rajendra Kumar ... on
ಆತ್ಮೀಯ ಸೌಮ್ಯ ಅವರೆ, ಯಾವುದೋ ಲೋಕದ ಮತ್ತು ನಮಗೆ ಸಂಬಂಧವಿಲ್ಲದ ವಸ್ತು ವಿಷಯಗಳನು ನಮ್ಮ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಒಬ್ಬ ವ್ಯಕ್ತಿ, ನಮ್ಮವ / ನಮ್ಮವಳು ಅನ್ನಿಸಿಕೊಂಡಾಗ, ಅವನ / ಅವಳ ಮೇಲೆ ನಮಗೆ ಇನ್ನೂ ಹೆಚ್ಚಿಗೆ ಪ್ರೀತಿ ಮತ್ತು ಆಸಕ್ತಿ ಬರುತ್ತದೆ. ಆದಕಾರಣ, ನಾನು ನಮ್ಮ ಸುತ್ತ ಮುತ್ತಲು ನಡೆಯುವ, ನಮ್ಮವೇ ಅನ್ನಿಸುವ ವಿಷಯಗಳ ಮೇಲೆ ಬರೆಯುತ್ತೇನೆ. ನಿಮ್ಮ ಪ್ರತಿಕ್ರಿಯೆ ಸುಂದರವಾಗಿತ್ತು. ಧನ್ಯವಾದಗಳು.

Submitted by Soumya Bhat on
ರಾಜೇಂದ್ರ ಕುಮಾರ್ ರವರೆ ಇತ್ತೀಚೆಗೆ ನಿಮ್ಮ ಕವನದ ವಸ್ತುಗಳು ಸುತ್ತ ಮುತ್ತಲಿನ ವಿಷಯಗಳೇ ಆಗಿದೆ. ಹಾಗಾಗಿ ನಿಮ್ಮ ಕವನವು ನಮ್ಮವೇ ಆಗಿ ಚಿಂತನೆಗೆ ಹಚ್ಚುತ್ತದೆ. ಪ್ರಸ್ತುತ ಕವನದಲ್ಲಿ ಎಲ್ಲರಲ್ಲೂ ಅಪೂರ್ಣತೆ ಹುಡುಕುತ್ತ ಕೊನೆಯಲ್ಲಿ ನಿಮ್ಮ ಅಪೂರ್ಣತೆ ತ್ಯಜಿಸಿ ಪರಿಪೂರ್ಣರಾದಿರಲ್ಲ..ಚಂದವಾಯ್ತು, ಶುಭವಾಗಲಿ >ಸೌಮ್ಯ

Submitted by Soumya Bhat on
ರಾಜೇಂದ್ರ ಕುಮಾರ್ ರವರೆ ಇತ್ತೀಚೆಗೆ ನಿಮ್ಮ ಕವನದ ವಸ್ತುಗಳು ಸುತ್ತ ಮುತ್ತಲಿನ ವಿಷಯಗಳೇ ಆಗಿದೆ. ಹಾಗಾಗಿ ನಿಮ್ಮ ಕವನವು ನಮ್ಮವೇ ಆಗಿ ಚಿಂತನೆಗೆ ಹಚ್ಚುತ್ತದೆ. ಪ್ರಸ್ತುತ ಕವನದಲ್ಲಿ ಎಲ್ಲರಲ್ಲೂ ಅಪೂರ್ಣತೆ ಹುಡುಕುತ್ತ ಕೊನೆಯಲ್ಲಿ ನಿಮ್ಮ ಅಪೂರ್ಣತೆ ತ್ಯಜಿಸಿ ಪರಿಪೂರ್ಣರಾದಿರಲ್ಲ..ಚಂದವಾಯ್ತು, ಶುಭವಾಗಲಿ >ಸೌಮ್ಯ

Submitted by nanjunda on
ಮನಸ್ಸು ಪರಿಪೂರ್ಣಕ್ಕಾಗಿ ಹಾತೊರೆಯುತ್ತದೆ. ಅದು ಎಲ್ಲಿಯೂ ದಕ್ಕದ ಕಾರಣ ಎಲ್ಲವನ್ನೂ ಬಯಸಲು ಆರಂಭಿಸುತ್ತದೆ. ಜಗತ್ತಿನಲ್ಲಿರುವ ಎಲ್ಲವನ್ನೂ ಸಮಗ್ರವಾಗಿ ಅನುಭವಿಸಿದಾಗ ಮಾತ್ರ ಮನಸ್ಸು ಪರಿಪೂರ್ಣವಾಗಿ ಶಾಂತವಾಗುತ್ತದೆ. ಆದುದರಿಂದಲೇ ಮೋಹಿಸುವುದಾದರೇ ಜಗತ್ತ‌ನ್ನೇ ಪರಿಪೂರ್ಣಸುಂದರಿ ಎಂದು ಭಾವಿಸಿ ಆ ಸೌಂದರ್ಯವನ್ನು ಆರಾಧಿಸಿಬೇಕೆಂದು ಪ್ರಾಚೀನರು ತಿಳಿದಿದ್ದರು. ಉತ್ತಮ ಕವನವನ್ನು ಕೊಟ್ಟಿದ್ದೀರಿ. ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ನಂಜುಂಡ ಸರ್, ಉತ್ತಮ ಬರಹ, ಮಾಹಿತಿ, ಸಂದೇಶ ಮತ್ತು ಪ್ರತಿಕ್ರಿಯೆ ನೀಡಿದಕ್ಕಾಗಿ ಧನ್ಯವಾದಗಳು.

Submitted by makara on
ರಾಜೇಂದ್ರ ಕುಮಾರ್ ಅವರೆ, ನಿಮ್ಮ ಕವನಗಳಷ್ಟೇ ಚೆನ್ನಾಗಿ ನೀವು ಎಲ್ಲಾ ಕವನಗಳಿಗೂ ಒಳ್ಳೆಯ ವಿಮರ್ಶೆಯನ್ನು ಬರೆಯುತ್ತೀರಿ. ನಮಗೆ ಆ ಕವನದ ಬಗ್ಗೆ ಏನೂ ಹೇಳಲು ಉಳಿದಿರುವುದಿಲ್ಲ. ಅದಕ್ಕೇ ಎಷ್ಟೋ ಕವನಗಳಿಗೆ ಸುಮ್ಮನೆ ಸ್ಟಾರ್ ಒತ್ತಿ ಸುಮ್ಮನಾಗುತ್ತೇನೆ. ಈ ಕವನವೂ ಬಹಳ ಆಸಕ್ತಿದಾಯಕ ಮತ್ತು ಚಿಂತನೆಗೆ ಹಚ್ಚುವಂತಹದ್ದಾಗಿದೆ. ಇರಲಿ, ನನಗೆ ನಿಮ್ಮ ಕವನವನ್ನು ಓದುತ್ತಿದ್ದರೆ ೮೦ ದಶಕದಲ್ಲಿ ಪ್ರಚಲಿತವಿದ್ದ ಒಂದು ಜೋಕು ನೆನಪಿಗೆ ಬಂತು. ತಂದೆ ಮಗನನ್ನ ಕೇಳುತ್ತಾನೆ ಅವನಿಗೆ ಎಂತಾ ಕನ್ಯೆ ಬೇಕೆಂದು, ಆಗ ಮಗ ಹೇಳುತ್ತಾನೆ ಅಪ್ಪಾ ನನಗೆ ಪದ್ಮಿನಿ ಕೊಲ್ಹಾಪುರೆ ವಯಸ್ಸು, ಜೂಲಿ ಲಕ್ಷ್ಮಿ ಮೂಗು, ಡಿಂಪಲ್ ಕಪಾಡಿಯ ಸೌಂದರ್ಯ, ರೇಖಾಳ ಅಂಗಸೌಷ್ಠವ, ಹೇಮಾಮಾಲಿನಿ ತರಹ ಡ್ಯಾನ್ಸ್ ಮಾಡುವಂಥಾ ಹುಡುಗಿ ಬೇಕು ಅಂಥಾನೆ. ಆಗ ಅವರಪ್ಪ ಅವೆಲ್ಲಾ ಗುಣ ಇದ್ದರೆ ಆಕೆ ನಿನ್ನನ್ಯಾಕೆ ಮದುವೆಯಾಗ್ತಾಳೆ ಯಾವುದಾದರೂ ಸಿನಿಮಾ ಹೀರೋನ್ನಾ ಇಲ್ಲಾ ಪ್ರೊಡ್ಯಸರನ್ನ ಮದುವೆಯಾಗ್ತಾಳೆ ಅಂಥಾ ಹೇಳ್ತಾನೆ.

Submitted by Rajendra Kumar ... on
ಆತ್ಮೀಯ ಶ್ರೀಧರ್ ಬಂಡ್ರಿ ಸರ್, ಮೊದಲು ನಿಮ್ಮ ಜೋಕ್ ಗಾಗಿ ಮನಪೂರ್ತಿ ನಗುತ್ತೇನೆ ಹ ಹ ಹ ಹ ಹ :) :) :). ಇನ್ನು ಕವನದ ವಿಷಯಕ್ಕೆ ಬಂದರೆ, ನಿಮಗೊಂದು ಗುಟ್ಟು ಹೇಳುತ್ತೇನೆ. ಏನೆಂದರೆ, ಈ ಕವನ ಸಂಪೂರ್ಣ ಕಾಲ್ಪನಿಕವಲ್ಲ... :) ಎಂಥಹದೋ ಸಂದರ್ಭದಲ್ಲಿ ನನ್ನ ಜೊತೆ ಆದ ಗೊಂದಲಗಳ ರೂಪ ಈ ಕವನ. ಓದುಗರು, ಕವಿ / ಕವಿಯತ್ರಿ ಮಿತ್ರರು ತಮ್ಮ ಅಮೂಲ್ಯವಾದ ಸಮಯವನ್ನು ಕೊಟ್ಟು ನಮ್ಮ ಕವನ ಓದಿ, ಅದಕ್ಕೆ ಪ್ರತಿಕ್ರಿಯೆ ಬರೆದಾಗ, ಅವರಿಗೆ ಗೌರವಿಸುವದಕ್ಕಾಗಿ ನಾವು ಉತ್ತರ ಬರೆಯುವುದು ನಮ್ಮ ಜವಾಬ್ದಾರಿಯಾಗುತ್ತದೆ. ಇನ್ನು ನಾವು ಒಬ್ಬರನೊಬ್ಬರು ಪ್ರತಿಕ್ರಿಯಿಸುವಾಗ ನಮ್ಮ ಮನದಲ್ಲಿನ ನಿಜವಾದ ಭಾವ ಮತ್ತು ನಮ್ಮ ವಿಚಾರ ಹೊರಬರುತ್ತವೆ. ಬೇರೆಯವರಿಂದ ತಿದ್ದಿಕೊಳ್ಳಲು ಮತ್ತು ಕಲಿತುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಪ್ರತಿಕ್ರಿಯೆ ನನಗೆ ಬರೀ ಪ್ರತಿಕ್ರಿಯೆಯಲ್ಲ, ಅದು ನಿಮ್ಮ ಪ್ರೀತಿ, ಸ್ನೇಹವಾಗಿ ಕಾಣುತ್ತದೆ. ಧನ್ಯವಾದಗಳು.

Submitted by Rajendra Kumar ... on
ಆತ್ಮೀಯ ವೀಣಾ ಅವರೆ, ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬದುಕಿನಲ್ಲಿ ಒಬ್ಬರಿಗಾದರೂ ಸಂತೋಷ ಮತ್ತು ಮುದನೀಡಲು ನಾವು ಯಶಶ್ವಿಯಾದಲ್ಲಿ ಬದುಕು ಸಾರ್ಥಕವಾಗುತ್ತದೆ. ನೀವು ಆ ಅವಕಾಶ ನನಗೆ ನೀಡಿದಕ್ಕಾಗಿ ಕೃತಜ್ಞತೆಗಳು.