ಆತುರದ ಸ್ವಭಾವವೆ ಒಂದು ಕಳಂಕ. ಆತುರದ ಸ್ವಭಾವದಿಂದ ಆಗಬಾರದ ಅನಾಹುತಗಳು ಘಟಿಸಿಬಿಡುತ್ತದೆ. ಒಂದೇ ಒಂದು ಕ್ಷಣ ನಿಧಾನ ಮಾಡಿದ್ದೆ ಆದರೆ, ಒಂದು ಕ್ಷಣ ತಮ್ಮ ನಿರ್ಧಾರವನ್ನು ಮುಂದೆ ಹಾಕಿದರೆ ಸಾಕು, ಆಗಬಹುದಾದ ಅನಾಹುತ ತಪ್ಪಿಸ ಬಹುದು. ಇಲ್ಲವಾದರೆ, ಕೆಲವೊಂದು ಪ್ರಸಂಗದಲ್ಲಿ ಜೀವನ ಪರ್ಯಂತ ವಿಷಾದ ಪಡಬೇಕಾದ ಸಂಧರ್ಭ ಒದಗಿ ಬಿಡಬಹುದು. "ಆತುರಗಾರನಿಗೆ ಬುದ್ಧಿ ಕಡಿಮೆ" ಯೆನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರು, ನಾವು ದಿನನಿತ್ಯದ ಬದುಕಿನಲ್ಲಿ ಕೆಲವೊಮ್ಮೆ ಆತುರದ ನಿರ್ಧಾರ ಮಾಡಿ ಅಥವಾ ಆಶ್ವಾಸನೆ ನೀಡಿ ಪರಿತಪಿಸುತ್ತೇವೆ.
ರಾಮಾಯಣದ ಒಂದು ಪ್ರಸಂಗ ಇಲ್ಲಿ ಪ್ರಸ್ತುತ ಎನಿಸುತ್ತದೆ .ಕಾಮಾತುರನಾದ ದಶರಥ ಮಹಾರಾಜ ತನ್ನ ರಾಣಿಯಾದ ಕೈಕೇಯಿಗೆ ಆತುರದಲ್ಲಿ ಕೊಟ್ಟ ಮಾತಿನ ಫಲವಾಗಿ ಇಡಿ ರಾಮಾಯಣವೇ ನಡೆದುಹೋಯಿತು. ದುಡಿಕಿನ ಸಮಯದಲ್ಲಿ ಈತನಿಗಿದ್ದ ವಿದ್ಯೆ, ಪಾಂಡಿತ್ಯ ಎಲ್ಲವು ಮರೆಯಾಗಿ, ಮೂಢತನ ಪ್ರದರ್ಶಿಸಿದ. ಈತನಲ್ಲಿದ್ದ ಧಾರ್ಮಿಕ ಮನೋಭಾವ, ಆತ್ಮೊನ್ನತಿಯ ಸಂಸ್ಕಾರ ಎಲ್ಲವು ಆ ಕ್ಷಣದಲ್ಲಿ ಮರೆತು ಹೋಯಿತು. ಕ್ಷಣಮಾತ್ರದ ಸುಖದ ಚಪಲತೆಗಾಗಿ ಈತ ಎಂತಹ ಘೋರ ಅನ್ಯಾಯವೆಸಗಿದ ಎನ್ನುವುದು ಚರಿತ್ರಾರ್ಹ. ಕೈಕೇಯಿಯ ಮನವೊಲಿಸುವ ಸಲುವಾಗಿ ಆತುರದಿಂದ ದಶರಥ ಹೇಳಿದ ಮಾತುಗಳು ಎಷ್ಟು ಅಸಹ್ಯ ತರಿಸುತ್ತದೆ ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ. " ಯಾರನ್ನು ಬೇಕಾದರೂ, ಯಾವ ಅಪರಾಧವಿಲ್ಲದಿದ್ದರು ಕೊಲ್ಲಿಸುತ್ತೇನೆ. ಕೊಲ್ಲಿಸಬೇಕಾದ ಯಾವ ಕಡು ಅಪರಾಧಿಯನ್ನು ಕೈಕೇಯಿ ಸಲುವಾಗಿ ಬಿಡುಗಡೆ ಮಾಡುತ್ತೇನೆ." ಇತ್ಯಾದಿ ಇತ್ಯಾದಿಯಾಗಿ ಅಸಂಬದ್ಧ ಮಾತುಗಳನ್ನು ಆಡುತ್ತಾನೆ. ಕೈಕೇಯಿಯ ಬೇಡಿಕೆ ಮುಂದಿಟ್ಟ ಕೆಲವೇ ಕ್ಷಣಗಳಲ್ಲಿ ಘೋರವಾದ ದುಃಖವನ್ನು ಅನುಭವಿಸುತ್ತಾನೆ. ಕೈಕೇಯಿ ಕಾಲಿಗೆ ಬಿದ್ದು ತನ್ನ ಬೇಡಿಕೆಯನ್ನು ವಾಪಸ್ಸು ಪಡೆಯುವಂತೆ ಬೇಡಿಕೊಳ್ಳುತ್ತಾನೆ. ತನ್ನನ್ನು ತಾನೇ ದಂಡಿಸಿಕೊಳ್ಳುತ್ತ ಪಶ್ಚಾತ್ತಾಪದಿಂದ ಕೊರಗುತ್ತಾನೆ, ಆಡಿದ ಮಾತಿನ ಸಲುವಾಗಿ ಭರಿಸಲಾರದ ದುಃಖದಿಂದ ಜೀವತ್ಯಾಗ ಮಾಡುತ್ತಾನೆ. ರಾಮಾಯಣದ ಕರ್ತ್ರುವಾಗುತ್ತಾನೆ
ದಶರಥ ತಾನು ಕೊಟ್ಟ ಆತುರದ ಮಾತನ್ನು ಶ್ರೀ ರಾಮನಿಗಾಗಿ ತಪ್ಪಿಸಬಹುದಿತ್ತು. ಕೈಕೇಯಿಯನ್ನು ದಂಡಿಸಬಹುದಿತ್ತು. ಇಡಿ ರಾಜ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸ ಹೊರಟ ರಾಣಿಯನ್ನು ದಂಡನೆ ಮಾಡಿದ್ದರೆ ಅದು ಧರ್ಮಸಮ್ಮತವು ಆಗುತ್ತಿತು. ಆದರೆ ಇದನ್ನು ದಶರಥನಿಗೆ ಮಾಡಲಾಗಲಿಲ್ಲ. ಆ ಕ್ಷಣದಲ್ಲಿ ಘಟಿಸಿದ ಘಟನೆಯೇ ಬೇರೆಯಾಯಿತು. " ಮಾತು ಆಡಿದರೆ ಹೇಗೆ ವಾಪಸ್ಸು ಬಾರದೋ ಹಾಗೆ, ಮುತ್ತು ಒಡೆದರೆ ಹೇಗೆ ಜೋಡಿಸಲು ಸಾಧ್ಯವಾಗದೋ ಹಾಗೆ, ಬಾಣ ಬಿಟ್ಟರೆ ಹೇಗೆ ಪುನಃ ಹಿಂದೆ ತರಲು ಸಾಧ್ಯವಿಲ್ಲವೋ ಹಾಗೆ " ಎಲ್ಲವು ನಡೆದು ಹೋಯಿತು.
ಇವೆಲ್ಲವೂ ವಿಧಿಯ ವಿಧಾನವೋ, ಪೂರ್ವ ನಿಯೋಜಿತವೋ ಅದು ನಂತರದ ಮಾತು. ಆದರೆ ಒಂದಂತು ಸ್ಪಷ್ಟ. ಮನುಷ್ಯ ಬೇಕಾದ ಸಮಯದಲ್ಲಿ ತಾಳ್ಮೆ ಕಳೆದುಕೊಂಡರೆ, ನಂತರದಲ್ಲಿ ಹೀಗಾಗಬೇಕಾಗಿತ್ತು ಎಂದು ಸಾವಿರ ಸಲ ಯೋಚನೆ ಮಾಡಿದರು ಪ್ರಯೋಜನಕ್ಕೆ ಬಾರದು. ಆತುರದ ಕೈಗೆ ಬುದ್ಧಿಯನ್ನು ಕೊಟ್ಟರೆ ಅದರಿಂದ ಆಗುವ ಅನಾಹುತ ಮಾತ್ರ ತಪ್ಪಿಸಲು ಸಾಧ್ಯವಿಲ್ಲ. ಮಾಡುವ ಕೆಲಸವನ್ನು ಯೋಚಿಸಿ ಮಾಡುವ, ನೀಡುವ ಆಶ್ವಾಸನೆಯನ್ನು ಸ್ವಲ್ಪ ಚಿಂತಿಸಿ , ನಿರ್ಧಾರ ತೆಗೆದುಕೊಳ್ಳುವ ಮುಂಚೆ ಪರಾಮರ್ಶೆ ಮಾಡುವ ಮನಸ್ಸು ಮಾಡುವಲ್ಲಿ ನಾವು ಸಫಲರಾದರೆ ಹೆಚ್ಚಿನ ನೆಮ್ಮದಿ ನಮ್ಮದಾಗಬಹುದು. ಈ ಬಗ್ಗೆ ಚಿಂತನೆ ಮಾಡಿದರೆ ಚಿಂತೆ ಕಡಿಮೆಯಾಗಬಹುದು, ಇದಕ್ಕೆ ನೀವು ಏನು ಹೇಳುತ್ತೀರಾ?........
ಆ ತುರ ...............ಒಂದಷ್ಟು ಹರಟೆ
June 4, 2012 - 10:12pm
ಲೇಖನ ವರ್ಗ (Category):
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಆ ತುರ ...............ಒಂದಷ್ಟು ಹರಟೆ
ಪ್ರಕಾಶ್ ರವರೆ,
>> ಮಾಡುವ ಕೆಲಸವನ್ನು ಯೋಚಿಸಿ ಮಾಡುವ, ನೀಡುವ ಆಶ್ವಾಸನೆಯನ್ನು ಸ್ವಲ್ಪ ಚಿಂತಿಸಿ , ನಿರ್ಧಾರ...
ನೀವು ಈ ಮೇಲಿನ ಮಾತು ಹೇಳಿದ್ದು ಸರಿಯಾಗಿದೆ. ಆದರೆ ನೀವು ಕೊಟ್ಟ್ ಉದಾಹರಣೆಯು ಸಮಂಜಸವೆನ್ನುಸುವುದಿಲ್ಲ.
>>ಕಾಮಾತುರನಾದ ದಶರಥ ಮಹಾರಾಜ ತನ್ನ ರಾಣಿಯಾದ ಕೈಕೇಯಿಗೆ ಆತುರದಲ್ಲಿ ಕೊಟ್ಟ ಮಾತಿನ ಫಲವಾಗಿ ಇಡಿ ರಾಮಾಯಣವೇ ನಡೆದುಹೋಯಿತು.
ಅದು ಸರಿಯೋ , ತಪ್ಪೋ ಎನ್ನುವುದು ಬೇರೆ ವಿಚಾರಾವಾಗುತ್ತದೆ. ಆದರೆ ದಶರಥನು ಅಂದು ಆತುರಪ್ಪಟ್ಟು ಕೊಟ್ಟ ನಿರ್ದಾರವಲ್ಲವೆಂದು ನೀವು ರಾಮಾಯಣದಲ್ಲಿ ಅಥವ ಒಮ್ಮೆ ಜಯಂತ್ ರಾಮಾಚಾರವರು ಇತ್ತೀಚೆಗೆ ಕೈಕೇಯಿಯ ಬಗೆ ಬರೆದ ಲೇಖನವನ್ನು ಓದಿದ್ದರೆ ತಿಳಿಯುತ್ತದೆ.
ಉ: ಆ ತುರ ...............ಒಂದಷ್ಟು ಹರಟೆ
ಶ್ರೀ ವೀರೇಂದ್ರ ರವರೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು,
"ಕಾಮಾತುರಾಣಾಂ ನ ಭಯಂ ನ ಲಜ್ಜಾ " ಎಂಬಂತೆ ದಶರಥನು ತನ್ನ ಆತುರವನ್ನು ಪ್ರದರ್ಶಿಸಿದ. ಇದು ರಾಮಾಯಣದಲ್ಲಿ ಪ್ರಸ್ತುತವಿದೆ.
ಪ್ರಕಾಶ್
ಉ: ಆ ತುರ ...............ಒಂದಷ್ಟು ಹರಟೆ
ಪ್ರಕಾಶ್ ನರಸಿಂಹಯ್ಯರವರೆ,
"ಕಾಮಾತುರಾಣಾಂ ನ ಭಯಂ ನ ಲಜ್ಜಾ " ವೆಂಬುದು ರಾಮಾಯಣದಲ್ಲಿ ಬಂದಿದೆ ಎಂಬುದು ನಿಜ. ನೀವು ಹೇಳಿದ ಹಾಗೆ ದಶರಥನ ಬಗೆ ಅಲ್ಲ.
ಆದರೆ ಅದು ಅರಣ್ಯಕಾಂಡದಲ್ಲಿ .. ಅದು ಶುರ್ಪಣಕಿ ಮತ್ತು ರಾವಣನ ನಡುವೆ. (3-33-3) ನೀವು ಇನೊಮ್ಮೆ ಪರೀಶಿಲಿಸಿ ಲೇಖನದಲ್ಲಿ 'ಆದರೆ' ಸೂಕ್ತ ಬದಲಾವಣೆಯನ್ನು ಮಾಡಬಹುದು.
ಉ: ಆ ತುರ ...............ಒಂದಷ್ಟು ಹರಟೆ
ಆತುರಗಾರನಿಗೆ ಬುದ್ಧಿಮಟ್ಟ ಎಂಬುದು ಸುಳ್ಳಲ್ಲ. ನಿಮ್ಮ ಹರಟೆಯ ವಿಷಯ ಚೆನ್ನಾಗಿದೆ.
ಉ: ಆ ತುರ ...............ಒಂದಷ್ಟು ಹರಟೆ
ಆತ್ಮೀಯ ನಾಗರಾಜರೆ,
ನಿಮ್ಮ ಆತ್ಮೀಯ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರಕಾಶ್
ಉ: ಆ ತುರ ...............ಒಂದಷ್ಟು ಹರಟೆ
ಪ್ರಕಾಶ ನರಸಿಂಹಯ್ಯ ರವರೆ ವಂದನೆಗಳು
" ಆತುರ ಒಂದಷ್ಟು ಹರಟೆ " ಚಿಂತನೆಗೆ ಹಚ್ಚು ಬರಹ, ರಾಮಾಯಣದ ಘಟನೆಯು ಲೇಖನಕ್ಕೆ ಗಹನತೆಯನ್ನು ತಂದಿದೆ, ಉತ್ತಮ ಲೇಖನ ನೀಡಿದ್ದೀರಿ ಧನ್ಯವಾದಗಳು
ಉ: ಆ ತುರ ...............ಒಂದಷ್ಟು ಹರಟೆ
ಆತ್ಮೀಯ ಹನುಮಂತ ಪಾಟೀಲರೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಪ್ರಕಾಶ್
ಉ: ಆ ತುರ ...............ಒಂದಷ್ಟು ಹರಟೆ
ನಿಮ್ಮ ಅಭಿಪ್ರಾಯ ಸರಿ ಯಾದದ್ದೆ. ಆತುರಗಾರನಿಗೆ ಬುದ್ದಿ ಮಟ್ಟ ಅಂತ ನನ್ನ ಪಿತಾಜಿ ಯವರು ಯಾವಾಗಲು ಹೇಳುತ್ತಿರುತ್ತಾರೆ.
ಉ: ಆ ತುರ ...............ಒಂದಷ್ಟು ಹರಟೆ
ಆತ್ಮೀಯ ಪುರುಶೋತ್ತಮರೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಪ್ರಕಾಶ್
ಉ: ಆ ತುರ ...............ಒಂದಷ್ಟು ಹರಟೆ
"ಆತುರಗಾರನಿಗೆ ಬುದ್ಧಿ ಮಟ್ಟ" ಹಾಗೆಯೇ "ಆಲಸ್ಯಂ ಅಮೃತಂ ವಿಷಮ್" ಎನ್ನುವುದನ್ನೂ ಗಮನದಲ್ಲಿರ ಬೇಕು. ಆತುರದಿಂದ ಒದಗ ಬಹುದಾದ ಅನಾಹುತಗಳ ಬಗ್ಗೆ ಚೆನ್ನಾಗಿ ವಿಶ್ಲೇಷಿಸಿದ್ದೀರ.
ಉ: ಆ ತುರ ...............ಒಂದಷ್ಟು ಹರಟೆ
ಆತ್ಮೀಯ ಶ್ರೀಧರ ಬಂಡ್ರಿ ಯವರೇ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಪ್ರಕಾಶ್
ಉ: ಆ ತುರ ...............ಒಂದಷ್ಟು ಹರಟೆ
ಆತುರ ಎಂದರೆ "ತುರಗ" ದ ಮನಸ್ಸು ಎಂದರ್ಥ, ಚಂಚಲ ವಾದದ್ದು.