ಕಗ್ಗ ದರ್ಶನ – 10 (1)

ಕಗ್ಗ ದರ್ಶನ – 10 (1)

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು
ತಿಂದು ನಿನ್ನನ್ನ ಋಣ ತೀರುತಲೆ ಪಯಣ
ಹಿಂದಾಗದೊಂದು ಚಣ, ಮುಂದಕುಂ ಕಾದಿರದು
ಸಂದ ಲೆಕ್ಕವದೆಲ್ಲ – ಮಂಕುತಿಮ್ಮ
ಈ ಭೂಮಿಯಲ್ಲಿ ನಮ್ಮ ಬದುಕು ಎಷ್ಟು ದಿನ? ನಮ್ಮ ಋಣ ಮುಗಿಯುವ ವರೆಗೆ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ.
ಇಲ್ಲಿ ನಮ್ಮ ಜೀವನ ಒಂದು ಊಟವಿದ್ದಂತೆ. ಅನ್ನದ ಅಗಳು ಅಗಳಿನಲ್ಲಿಯೂ ಅದರ ಖಚಿತ ಲೆಕ್ಕಾಚಾರ. ಈ ಊಟದಲ್ಲಿ ನಮಗೆ ಒಂದೇ ಒಂದು ಅನ್ನದ ಅಗಳನ್ನು ಹೆಚ್ಚು ತಿನ್ನಲಾಗದು. ಹಾಗೆಯೇ ನಮಗೆ ತಿನ್ನಲು ದಕ್ಕುವ ಅಗಳು ಒಂದೇ ಒಂದು ಕಡಿಮೆಯಾಗದು.
ಯಾವ ಕ್ಷಣ ಇಲ್ಲಿಯ ನಮ್ಮ ಬದುಕಿನ ಲೆಕ್ಕಾಚಾರ ಮುಗಿಯುತ್ತದೆಯೋ, ಅದೇ ಕ್ಷಣ ನಮ್ಮ ಮುಂದಿನ ಪ್ರಯಾಣ ಶುರು. ಈ ಲೆಕ್ಕಾಚಾರವೂ ನೂರಕ್ಕೆ ನೂರು ಖಚಿತ. ಇದರಲ್ಲಿಯೂ ಒಂದೇ ಒಂದು ಕ್ಷಣವೂ ಬೇಗನೇ ಆಗದು ಅಥವಾ ತಡವಾಗದು.
ಭಾರತದ ವೈದಿಕ ಪರಂಪರೆಯ ದಿಗ್ಗಜ ಶಂಕರಾಚಾರ್ಯರು ನಡುವಯಸ್ಸಿನಲ್ಲಿ ವಿಧಿವಶರಾದರು. ಭಾರತದ ವೈದಿಕ ಜ್ನಾನಸಂಪತ್ತಿನ ಸತ್ವವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ದೈತ್ಯಪ್ರತಿಭೆ ಸ್ವಾಮಿ ವಿವೇಕಾನಂದರೂ ನಡುವಯಸ್ಸಿನಲ್ಲಿ ಕಾಲದಲ್ಲಿ ಲೀನವಾದರು. ಅವರು ಇನ್ನಷ್ಟು ವರುಷ ಬದುಕಿದ್ದರೆ, ಇನ್ನೆಷ್ಟು ಸಾಧನೆಗಳನ್ನು ಮಾಡುತ್ತಿದ್ದರೋ! ಅಷ್ಟು ಬೇಗನೇ ಅವರು ನಮ್ಮನ್ನು ಅಗಲಿದ್ದಕ್ಕೆ ಒಂದೇ ಒಂದು ವಿವರಣೆ: ಅವರ ಈ ಮಣ್ಣಿನ ಋಣ ತೀರಿತು.
೧೯ ಸಪ್ಟಂಬರ್ ೨೦೧೪ರಂದು ತೀರಿಕೊಂಡ ಮ್ಯಾಂಡೊಲಿನ್ ಶ್ರೀನಿವಾಸ್ ಮಹಾನ್ ಪ್ರತಿಭೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಬಳಕೆಯಲ್ಲೇ ಇಲ್ಲದಿದ್ದ ಮ್ಯಾಂಡೊಲಿನನ್ನು ಅದಕ್ಕೆ ಒಗ್ಗಿಸಿ ಅಮರರಾದರು. ಯಾರು ಎಣಿಸಿದ್ದರು ಅವರು ೪೫ನೇ ವರುಷದಲ್ಲೇ ತಮ್ಮ ಇಹಲೋಕದ ಪಯಣ ಮುಗಿಸುತ್ತಾರೆಂದು? ಆದರೆ, ಅಷ್ಟರಲ್ಲೇ ಅವರು ಸಂಗೀತಕ್ಕೆ ಅಗಾಧ ಕೊಡುಗೆಯನ್ನಿತ್ತು ತಮ್ಮ ಋಣ ಪೂರೈಸಿದ್ದಾರೆ, ಅಲ್ಲವೇ?