ತತ್ತ್ವ ಶೋಡಷ
ಗಣಾಧೀಶ ನೀ ಈಶ ಸರ್ವ ಸದ್ಗುಗುಣಗಳಿಗೆ
ಮೂಲಾರಂಭ ಆರಂಭ ನಿಜದಿ ನಿರ್ಗುಣಕೆ |
ನಮಿಸುವೆನು ಶಾರದೆಗೆ ಶಬ್ದಬ್ರಹ್ಮನ ಸತಿಗೆ
ಕೊಡು ಮತಿಯ ರಚಿಸುವುದಕೆ ತತ್ತ್ವ ಷೋಡಶಕೆ ||೧||
ತಿದ್ದಿ ತೀಡುತಲೆನ್ನ ನಡೆನುಡಿಗಳನು ಸಿಂಗರಿಸಿ
ನನ್ನ ಸೋಲಿಗೆ ಕಣ್ಣ ಕಂಬನಿಯ ಸುರಿಸಿ
ನನ್ನ ಗೆಲುವಿಗೆ ಮಿಂಚ ಕಣ್ಣಲ್ಲಿ ಹರಸುತ್ತ
ಈ ಇಳೆಗೆ ತಂದವಳ ಮೊದಲು ನಮಿಪೆ ||೨||
ಅನ್ನ ವಸನವನಿತ್ತು ಪೊರೆದವಗೆ ನಾ ನಮಿಪೆ
ಶಿಲ್ಪಿಯಂದದಿ ಕಟೆದು ರೂಪವಿತ್ತವಗೆ |
ಅವನಾತ್ಮಪ್ರತಿರೂಪ ನಾನೆಂದು ಮನಗಂಡು
ಪಿತೃರೂಪದಲಿ ಎನ್ನ ಸತತ ಕಾಯ್ದವಗೆ ||೩||
ಅಕ್ಕರಕೆ, ಅರಿವಿಂಗೆ ಗುರುವೊಬ್ಬನಿರಬೇಕು
ನಮಿಪೆ ಗುರಿ ತೋರ್ದವಗೆ ಗುರುವಾದವಂಗೆ |
ನದಿ ದಾಟ ಬಯಸುವವ ಈಸ ಕಲಿಯಲು ಬೇಕು
ಬಾಳ ಪಯಣಕೆ ಬೇಕು ಅನುಭವದ ಬುತ್ತಿ ||೪||
ನಾನು ಯಾರೆಲ್ಲಿಂದ ಇಲ್ಲಿಗೇತಕೆ ಬಂದೆ
ಬಂದ ಕಾರ್ಯವದೇನು ನಾನೊಂದನರಿಯೆ |
ಈ ಜಗದ ನಾಟಕದಿ ನಾನೊಬ್ಬ ನಟನಷ್ಟೆ
ನನ್ನ ಕೃತಿ ಮಾತೆಲ್ಲ ಅವನ ನಿರ್ದೇಶನವು ||೫||
ಜಗವೊಂದು ಚದುರಂಗ ನಾವದರ ದಾಳಗಳು
ಕೈಯ್ಯೊಂದು ಆಡಿಪುದು ಅದರಿಚ್ಛೆಯಂತೆ |
ಆಟ ಗೆಲ್ಲುವುದಕ್ಕೆ ಅಂಕುಡೊಂಕಿನ ದಾರಿ
ಗೆಲುವು ಸೋಲುಗಳೆಲ್ಲ ಅವನಿಚ್ಛೆ ಕಾಣೊ ||೬|||
ಬೆಳಕೀವ ಆ ಭಾನು ತಂಪೆರೆವ ಚಂದಿರನ
ಪ್ರಾಣವಾಯುವ ನೀಡಿ ಕಾಯ್ವ ಮಾರುತನ
ಬಳಲಿ ಬಾಯಾರಿದಗೆ ಅಮೃತವಾಗಿಹ ಜಲದ
ಪೊತ್ತುಕಾಯ್ದಿಳೆಯ ಋಣ ಸತತವಿದೆ ನಮಗೆ ||೭||
ನಡೆದ ದಾರಿಯ ಹಿಂದೆ ನೀ ತಿರುಗಿ ನೋಡು
ಬರುವರೇ ಸತಿಸುತರು ಬಂಧುವರ್ಗಗಳು |
ನೀ ಗೈದ ಕರ್ಮಗಳು ನಿನ್ನ ಬೆನ್ನ ಹಿಂದಿಹವು
ಬೇವ ಬಿತ್ತಿದರೆ ಮಾವು ಸಿಗದು ನಿನಗೆಂದು ||೮||
ನಾನು ಸುಖಿಯೆಂಬುವನು ಯಾರಿಹನು ಲೋಕದೊಳು
ಕರ್ಮಸಂಚಯದಂತೆ ಫಲಪ್ರಾಪ್ತಿಯಿಹುದು |
ಸತಿಸುತರು ವೈಭವವು ಮಾನ ಸಮ್ಮಾನಗಳು
ಕ್ಷಣಿಕ ಕಾಲನ ಕ್ರೀಡೆ ನೀ ತಿಳಿಯೊ ನಿಜದಿ ||೯||
ಸುವರ್ಣಮೃಗವಿರದೆಂದು ಅರಿವಿಲ್ಲವೆ ನೃಪಗೆ
ಬೆಂಬತ್ತಿದನು ರಾಮ ಸತಿಯಿಚ್ಛೆಯಂತೆ |
ದಾಟಿ ಲಕ್ಷ್ಮಣರೇಖೆ ಬಂದಿಯಾದಳು ಸೀತೆ
ಆತುರತೆ ಸಲ್ಲದೈ ಕಾರ್ಯಸಾಧನೆಗೆ ||೧೦||
ಹುಟ್ಟು ಸಾವಿನ ಚಕ್ರ ಜನನಿಯುದರದಿ ವಾಸ
ಮತ್ತೆ ಶೈಶವ ಬಾಲ್ಯ ಯೌವ್ವನವು ವೃದ್ಧಾಪ್ಯ |
ಬಾಲತನದೊಳು ಕ್ರೀಡೆ ವ್ಯಾಮೋಹ ಯೌವ್ವನದಿ
ಏಕಾಂಗಿ ಮುದಿತನಕೆ ಚಿಂತೆ ಸಂಗಾತಿ ||೧೧||
ಸುಖವೆಂಬುದಕೆ ಅರ್ಥ ತಿಳಿಸಿದವರಾರುಂಟು
ತರುಣಿಯಪ್ಪುಗೆಯೊ ಧನ ಕನಕ ಸಿರಿಯೊ |
ಮಾನಸಮ್ಮಾನಗಳೊ ಅಧಿಕಾರ ಪದವಿಗಳೊ
ಅನುಭವಿಸಿದವರುಸುವರು ತಿಳಿದಿಲ್ಲವೆಂದು ||೧೨||
ಮೊಗ್ಗರಳಿ ಹೂವಾಗಿ ಹೀಚು ಕಾಯಾಗಿ
ಫಲಿತವಾಗುವುದಕ್ಕೆ ಸಮಯ ನಿರ್ಬಂಧವಿದೆ |
ಅನುಭವವು ಯೋಜನೆಯು ಕಾರ್ಯತತ್ಪರತೆ
ನಿರತ ಪರಿಶ್ರಮವೊಂದೆ ಸಿದ್ಧಿಸಾಧನೆಗೆ ||೧೩||
ಮನವೆಂಬ ಮಂದಿರದಿ ದುಷ್ಟ ಯೋಚನೆ ಬೇಡ
ಬೇಡ ಅರಿಷಡ್ವರ್ಗಗಳು ಪಾಪಕರ್ಮಗಳು |
ಸದಾ ನೀತಿ ಮಾರ್ಗದೊಳು ಸಾಗು ನೀ ಮುಂದೆ
ರಾಮ ಕಾಯ್ವನು ನಿನ್ನ ಸದಾ ಬೆನ್ನ ಹಿಂದೆ ||೧೪||
ನೆಲೆಸಿರಲಿ ಮನ ಭಕ್ತಿಪಂಥದೊಳು ಅನವರತ
ಶ್ರೀಹರಿಯ ಒಲುಮೆಗಿದು ಸಾಧನವು ಸತತ |
ಜನನಿಂದ್ಯ ಕರ್ಮವದ ಬಿಡು ನೀನು ಅನವರತ
ಜನವಂದ್ಯ ಕರ್ಮದೊಳು ಆಗು ನೀ ನಿರತ ||೧೫||
ಬೆಳಗಿನೊಳು ನೀ ನೆನೆಯೊ ಶ್ರೀರಾಮನಾಮ
ಮಧುರ ವಚನದ ವೈಖರಿಯೊಳು ದಿವ್ಯನಾಮ |
ಸದಾಚಾರ ಸುವಿಚಾರ ಬಿಡಬೇಡ ಎಂದೂ
ರಾಮ ಕಾಯ್ವನು ನಿನ್ನ ಪ್ರೇಮದಲಿ ಎಂದೂ ||೧೬||
- Log in to post comments