August 7, 2012 - 10:02pm
ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು. ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ ಈ ನಗರವಾಸಿಗಳನ್ನು ನೋಡಿ "ಎಲ್ಲಿಗೆ ಹೋಗಬೇಕು?" ಎಂದು ಕೇಳಿದ. " ಸ್ವಲ್ಪ ದೂರದಲ್ಲಿರುವ ಮಾರನಾಯಕನ ಹಳ್ಳಿಗೆ " ಎಂದು ಹೇಳಿ " ನನ್ನ ಅಲ್ಲಿತನಕ ತಲುಪಿಸಿ ಬಿಟ್ಟರೆ ನಿನ್ನ ಬಾಡಿಗೆ ಏನಿದೆಯೋ ಅದನ್ನ ಕೊಡುತ್ತೀನಿ. ಅಷ್ಟು ಮಾಡಿ ಪುಣ್ಯ ಕಟ್ಕೊ" ಎಂದು ಒಂದೇ ಸಮನೆ ಹೇಳಿದರು. " ಅದಕ್ಕೇನಂತೆ, ನಾನು ಆ ಕಡೆಗೆ ಹೋಗ್ತಾ ಇದೀನಿ. ಬನ್ನಿ ಸ್ವಾಮೀ" ಎಂದು ಸ್ನೇಹದಿಂದ ಕರೆದ. ಎತ್ತಿನ ಗಾಡಿ ಬಹಳ ದಿನದ ನಂತರ ಹತ್ತಿ ಕೂತರು. ಕುಲುಕಾಟದ ಮಣ್ಣಿನ ರಸ್ತೆಯಲ್ಲಿ ಧೂಳು ಅಡರುತ್ತಿತ್ತು ಜೊತೆಗೆ ರಣ ಬಿಸಿಲು. ಇದನ್ನು ಗಮನಿಸಿದ ಗಾಡಿಯವ " ಸ್ವಾಮೀ, ಅಲ್ಲೇ ಛತ್ರಿ ಮಡಗಿವ್ನಿ ಬಿಚ್ಚಿಕೊಳಿ. ಪ್ಯಾಟೆ ಜನಕ್ಕೆ ಈ ಬಿಸಿಲು ಆಗಬರಂಗಿಲ್ಲಾ." ಎಂದು ಸಹಜವಾಗಿ ಅಂದ.
ಗಾಡಿ ಸಾಗುತ್ತ ಇದ್ದಂಗೆ " ಈ ಗ್ರಾಮದಲ್ಲಿ ಒಬ್ಬರು ವೆಂಕಪ್ಪ ನಾಯಕರು ಅಂತ........ ತುಂಬಾ ದೊಡ್ಡ ಮನುಷ್ಯರು, ದೊಡ್ಡ ದಾನಿಗಳು....... ಅವರು ಈಗ ಹೇಗಿದ್ದಾರೆ? ನಿಮಗೇನಾದರೂ ಗೊತ್ತ? ನಾನು ಅವರನ್ನ ......" ಹೇಳುತ್ತಿರುವ ಮಧ್ಯೆ ಬಾಯಿಹಾಕಿ " ಅವ್ರು ಇನ್ನೆಲ್ಲಿ ಸ್ವಾಮೀ? ಅವರನ್ನ ಆ ಸ್ವಾಮೀ ಕರಕ್ಕಂಡು ಬಿಟ್ಟ. ಅದಿರ್ಲಿ, ನೀವು ಯಾಕೆ ಅವರನ್ನ ಕೇಳ್ತಾ ಇದ್ದೀರಿ?" ಎಂದು ಮರು ಪ್ರಶ್ನೆ ಹಾಕಿದ. ಈ ಮಾತು ಕೇಳಿದ ನಗರವಾಸಿಗಳಿಗೆ ಅತ್ಯಂತ ನಿರಾಸೆಯಾಯಿತು. ಏನೂ ತಿಳಿಯದೆ ತಲೆ ಕೆಳಕ್ಕೆ ಮಾಡಿ ಕಣ್ಣು ತುಂಬಿಕೊಂಡರು. ಇದನ್ನು ಗಮನಿಸಿದ ಗಾಡಿಯವ " ನಿಮಗೆ ಸಂಬಂಧವಾ? ನಿಮ್ಮ ಕಣ್ಣನೀರು ನೋಡಿದರೆ ನಿಮಗೆ ತುಂಬಾ ಹತ್ತಿರದವರು ಅನಿಸುತ್ತೆ? " ಎಂದು ಅನುಮಾನ ವ್ಯಕ್ತ ಪಡಿಸಿದ. " ನಾನು ಈ ಊರಿನವನೇ, ಈಗ್ಗೆ 35 ವರ್ಷಗಳ ಹಿಂದೆ ಈ ಊರು ಬಿಟ್ಟು ಪಟ್ನ ಸೇರಿಕೊಂಡವಿ. ವೆಂಕಪ್ಪ ನಾಯಕರು ನನ್ನ ಓದಿಗೆ ಸಹಾಯ ಮಾಡಿ ಚನ್ನಾಗಿ ಓದು ಅಂತ ಪ್ರೋತ್ಸಾಹ ಕೊಟ್ಟರು. ನಾನು ಒಳ್ಳೆ ಕೆಲಸಕ್ಕೆ ಸೇರಿಕೊಂಡು ವಿದೇಶಕ್ಕೆ ಹೋಗಿಬಿಟ್ಟೆ. ಕಳೆದ ಸಾರಿ ಭಾರತಕ್ಕೆ ಬಂದಾಗ ಈ ಹಳ್ಳಿಗೆ ಬರಲಾಗಲಿಲ್ಲ. ಈ ಸಾರಿ ನಾಯಕರನ್ನ ನೋಡೇ ಹೋಗಬೇಕೆಂದು ಬಂದೆ. ಆದರೆ, ನಂಗೆ ಅವರನ್ನ ನೋಡಿ ಆಶೀರ್ವಾದ ಪಡೆಯುವ ಭಾಗ್ಯ ಇಲ್ಲವಾಯಿತಲ್ಲ ಎಂದು ದುಃಖ ಆಗ್ತಾ ಇದೆ. " ಎಂದು ಬಿಕ್ಕಳಿಸಿದರು. ಅಷ್ಟರಲ್ಲಿ ಗಾಡಿ ನಾಯಕರ ಮನೆ ಹತ್ತಿರಕ್ಕೆ ಬಂತು.
" ಸ್ವಾಮೀ......ಇಳೀರಿ. ನಾಯಕರ ಮನೆ ಬಂತು. ಬನ್ನಿ ಒಳಕ್ಕೆ." ಎಂದು ಆತ್ಮೀಯವಾಗಿ ಒಳಕ್ಕೆ ಕರೆದ. ಒಳಗೆ ಹೋಗಿ ಕುರ್ಚಿಯ ಮೇಲೆ ಕೂತ ಅವರ ಕಣ್ಣಿಗೆ ಬಿದ್ದದ್ದು ವೆಂಕಪ್ಪ ನಾಯಕರ ದೊಡ್ಡ ಫೋಟೋ. ಕಣ್ಣು ತುಂಬಿ ಬಂತು. ಎದ್ದು ನಿಂತು ಕೈ ಜೋಡಿಸಿ "ನನ್ನನ್ನ ಕ್ಷಮಿಸಿ ಬಿಡಿ, ನಾನು ನಿಮ್ಮನ್ನ ನೋಡಲು ಬಹಳ ವರ್ಷ ಬರಲಿಲ್ಲ. ನೀವು ನನಗೆ ಮಾಡಿದ ಉಪಕಾರ ಹೇಗೆ ತೀರಿಸಲಿ? " ಎಂದು ಗದ್ಗದಿತರಾದರು. ಅಷ್ಟರಲ್ಲಿ ಮನೆ ಒಳಗಿದ್ದವರೆಲ್ಲ ಹಜಾರಕ್ಕೆ ಬಂದರು. ಗಾಡಿಯವ "ಇವರು ಅಯ್ಯಂಗೆ ಬೇಕಾದವರು." ಎಂದು ಪರಿಚಯ ಹೇಳಿದ. ಜೋಬಿಗೆ ಕೈ ಹಾಕಿ ಗಾಡಿ ಬಾಡಿಗೆ ಕೊಡಲು ಪಾಕೆಟ್ ತೆಗಯಲು ಹೋದಾಗ " ಸ್ವಾಮೀ, ನಾನೂ ನಾಯಕರ ಕುಟುಂಬದ ಕುಡಿ. ಏನೋ ಕಾರಣ ಎಲ್ಲವನ್ನು ಕಳೆದುಕೊಂಡು ಈಗ ನಾವೆಲ್ಲಾ ಗತಿ ಕೆಟ್ಟವರಾಗಿದ್ದೇವೆ. ಕೊನೆ ಉಳಿದಿರುವ ಈ ಜೋಡಿ ಎತ್ತು ನಮ್ಮನ್ನ ಸಾಕ್ತಾ ಇತೆ. ನನ್ನ ಹಿರಿಯರು ನಮ್ಮನ್ನ ಕೈ ಬಿಟ್ಟಿಲ್ಲ ಸ್ವಾಮೀ" ಎಂದ . ಅವರು ದಂಗಾಗಿ ಹೋದರು. ತಕ್ಷಣ ಅವರ ಮನಸ್ಸಿನಲ್ಲಿ ಇದು ನನಗೆ ಸರಿಯಾದ ಸಮಯ ಇವರಿಗೆ ಸಹಾಯ ಮಾಡಲು ಎಂದು ಜೇಬಿಂದ ಸಾವಿರದ ಹತ್ತು ನೋಟುಗಳನ್ನು ಗಾಡಿಯವನ ಕೈಯಲ್ಲಿಡಲು ಮುಂದೆ ಬಾಗಿದರು. ಹಾವು ತುಳಿದವನಂತೆ ನಾಕು ಹೆಜ್ಜ ಹಿಂದೆ ಹೋಗಿ " ನಮ್ಮ ಹಿರಿಯರು ಕೈನೀಡಿ ಕೊಟ್ಟು ಬೆಳೆಸಿದ ನಿಮ್ಮಂತಹವರ ಹತ್ತಿರ ನಾವು ಪಡ ಕೊಂಡರೆ, ದಾನ ಕೊಟ್ಟಿದ್ದನ್ನ ಮತ್ತೆ ಹಿಂದ್ದಕ್ಕೆ ಪಡೆದ ಪಾಪ ಬರುತ್ತೆ. ನಮ್ಮ ಹಿರಿಯರಿಗೆ ಅವಮಾನ ಮಾಡಿದ ಹಾಗಾಗುತ್ತೆ. ಖಂಡಿತ ಬೇಡ. ನಿಮಗೆ ನಮ್ಮ ಅಯ್ಯನ ಮೇಲೆ ಗೌರವ ಇದ್ರೆ ಇವೆಲ್ಲ ಏನೊ ಬೇಡ." ಎಂದು ಸಾರಾಸಗಟಾಗಿ ತಿರಸ್ಕರಿಸಿದ. ಇವರ ಬಾಯಿಂದ ಏನೂ ಹೊರಳಲೇ ಇಲ್ಲ.
ದಾನಶೂರರಾಗಲು ಹಣ ಮುಖ್ಯವೋ? ಮನಸ್ಸು ಮುಖ್ಯವೋ? ನಮ್ಮ ಮನಸ್ಸೇ ಮಿತ್ರ, ನಮ್ಮ ಮನಸ್ಸೇ ಶತ್ರು. ನಾವು ಎಷ್ಟು ದೊಡ್ಡ ಮನಸ್ಸಿನವರು ಆಗಬಹುದು, ಹಾಗೆಯೇ ಚಿಕ್ಕವರೂ ಆಗಬಹುದು. ನಾವು ಏನು ಚಿಂತಿಸುತ್ತೆವೋ ಅದೇ ಆಗುತ್ತೇವೆ. ಎಲ್ಲವು ನಮ್ಮ ಕೈಯಲ್ಲೇ ಇದೆ. ಮನಸ್ಸಿನ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡರೆ ಬದುಕಿನಲ್ಲಿ ಮೇಲೇರಲು ಸಾಧ್ಯ.
(ನನ್ನ ಮಿತ್ರರ ಜೀವನದಲ್ಲಿ ಆದ ಸತ್ಯ ಘಟನೆಯ ಚಿತ್ರಣ )
ಲೇಖನ ವರ್ಗ (Category):
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಉತ್ತಮೋತ್ತಮ ವಿಚಾರ, ಹೀಗೆ ಬರೆಯುತ್ತಿರಿ ನರಸಿಂಹಯ್ಯನವರೆ.
ದನ್ಯವಾದಗಳು,
ರಾಮೋ.
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಆತ್ಮೀಯ ರಾಮ್ ಮೋಹನ್ರವರೆ,
ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಪ್ರಕಾಶ ನರಸಿಂಹಯ್ಯ ರವರಿಗೆ ವಂದನೆಗಳು
ತಮ್ಮ ಬರಹ ಓದಿದೆ, ಚೆನ್ನಾಗಿದೆ, ದಾನಿಗಳಾಗಲು ಮನಸು ಮತ್ತು ಹಣ ಎರಡೂ ಇದ್ದರೆ ಚೆನ್ನ ಎಂದು ನನ್ನ ಅನಿಸಿಕೆ,
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಆತ್ಮೀಯ ಹನುಮಂತ ಪಾಟಿಲರೆ,
ಖಂಡಿತವಾಗಿ ಎರಡೂ ಮುಖ್ಯವೇ! ಆದರೆ, ಈ ಘಟನೆಯಲ್ಲಿ ಮನಸ್ಸು ಮುಖ್ಯ ಪಾತ್ರ ಪಡೆದು ಕೊಂಡಿದೆ. ದಾನಿಯ ಮನಸು, ದಾನ ಪಡೆದ ವ್ಯಕ್ತಿ ಕೃತಜ್ಞತೆ ಅರ್ಪಿಸುವ ಮನಸು ಮತ್ತು ಕೊಟ್ಟ ದಾನವ ಹಿಂದೆ ಪಡೆಯದ ಮನಸು. ಹೀಗೆ ಈ ಮೂವರು ಮನಸಿನ ಮೇಲೆ ಪರಿಣಾಮ ಬೀರುತ್ತಾರೆ. ಯಾರು ಹೆಚ್ಚು ಯಾರು ಕಡಿಮೆ ಇಲ್ಲ. ಎಲ್ಲರು ಪ್ರಶಂಸಾರ್ಹರೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಪಾಟೀಲರೆ ನೀವು ಹಾಗೆ ಭಾವಿಸುತ್ತೀರ ? ದಾನವೆಂದರೆ ಸಹಾಯವೆಂದರೆ ಕೇವಲ ಹಣವ?
ಎಷ್ಟೆ ಹಣವಿರಬಹುದು ಮನಸು ಇರದಿದ್ದರೆ ದಾನ ಸಾದ್ಯವಿಲ್ಲ
ಹಣವಿಲ್ಲದೆ ಇರಬಹುದು ಮನಸು ಇದ್ದಲ್ಲಿ ಹೇಗಾದರು ಮಾಡಿ ಸಾಲ ಮಾಡಿಯಾದರು ದಾನ ಸಹಾಯ ಮಾಡುವಿರಿ ಅಲ್ಲವೆ
ಪಾರ್ಥಸಾರಥಿ
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಆತ್ಮೀಯ ಪಾರ್ಥಸಾರಥಿ ಯವರೇ,
ಒಂದಕ್ಕೆ ಇನ್ನೊಂದು ಪೂರಕ. ಎಲ್ಲಕ್ಕೂ ಮನಸೇ ಮುಖ್ಯವಾಗುತ್ತದೆ. ಮನಸಿಲ್ಲದ ಯಾವ ಕೆಲಸವೂ ಸಮರ್ಪಕವಾಗುವುದಿಲ್ಲ. ನಿಮ್ಮ ಮಾತು ನಿಜ. ನಿಮ್ಮ ಅನಿಸಿಕೆಗೆ ಧನ್ಯವಾದಗಳು.
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಆತ್ಮೀಯ ಪ್ರಕಾಶ್ ಅವರೆ,
ಯಾವುದೋ ಪುರಾಣ ಕತೆ ಕೇಳಿದಂತೆ ಆಶ್ಚರ್ಯವಾಗುತ್ತಿದೆ; ಈ ಕಾಲದಲ್ಲೂ ಪಡೆದುಕೊಂಡ ದಾನಕ್ಕೆ ಕೃತಜ್ಞತೆಯಿಂದ ಸ್ಮರಿಸುವವರು ಮತ್ತು ಕೊಟ್ಟ ದಾನಕ್ಕೆ ಪ್ರತಿಯಾಗಿ ಏನನ್ನೂ ಸ್ವೀಕರಿಸಬಾರದು ಎನ್ನುವವರು? ಓದಿದ ಮೇಲೇ ಹೀಗೂ ಉಂಟೇ! ಎಂದು ಆಶ್ಚರ್ಯವಾಗುತ್ತಿದೆ.
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಆತ್ಮೀಯ ಶ್ರೀಧರ ಬಂಡ್ರಿ ಯವರೇ,
ಇಂದಿಗೂ ಧರ್ಮ ಹೋಗಿಲ್ಲ. ಕಡಿಮೆಯಾಗಿರಬಹುದು. ಈ ವಿಚಾರದಲ್ಲಿ ನನ್ನ ಗುರುನಾಥರ ಮಾತು ಜ್ಞಾಪಕಕ್ಕೆ ಬರುತ್ತದೆ. " ಧರ್ಮ ಎಲ್ಲಿಗೆ ಹೋಗಿದೆ ಸಾರ್? ಇಲ್ಲೇ ಇದೆ. ನಿಮ್ಮಲ್ಲೇ ಇದೆ ಸಾರ್. ನೀವು ಕಳ್ಳತನ ಮಾಡ್ತೀರಾ ಸಾರ್? ಮೋಸ ಮಾಡ್ತೀರಾ ಸಾರ್. ಮಾಡೋಕ್ ಹೋದರು ನಿಮಗೆ ಈ ಧರ್ಮಾನೆ ಅಡ್ಡ ನಿಲ್ಲುತ್ತೆ." ಎಂದಿದ್ದರು.
ನೀವು ಹೇಳಿದ್ದು ನಿಜ. ಕೃತಜ್ಞತೆ ಕಡಿಮೆ ಯಾಗಿರುವ ಈ ಸಮಯದಲ್ಲಿ ಇಂತಹ ಪ್ರಸಂಗ ಕೇಳಿದಾಗ ಹೀಗೂ ಉಂಟೆ ಎಂದೆನಿಸುವುದು ಸಹಜ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಆತ್ಮೀಯ ಪ್ರಕಾಶ್ ಅವರೆ,
ಯಾವುದೋ ಪುರಾಣ ಕತೆ ಕೇಳಿದಂತೆ ಆಶ್ಚರ್ಯವಾಗುತ್ತಿದೆ; ಈ ಕಾಲದಲ್ಲೂ ಪಡೆದುಕೊಂಡ ದಾನಕ್ಕೆ ಕೃತಜ್ಞತೆಯಿಂದ ಸ್ಮರಿಸುವವರು ಮತ್ತು ಕೊಟ್ಟ ದಾನಕ್ಕೆ ಪ್ರತಿಯಾಗಿ ಏನನ್ನೂ ಸ್ವೀಕರಿಸಬಾರದು ಎನ್ನುವವರು? ಓದಿದ ಮೇಲೇ ಹೀಗೂ ಉಂಟೇ! ಎಂದು ಆಶ್ಚರ್ಯವಾಗುತ್ತಿದೆ.
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಈ ವಿಷಯದಲ್ಲಿ ಮನಸ್ಸೆ ಮುಖ್ಯ ಏಕೆಂದರೆ ನಮ್ಮಲ್ಲಿ ಎಲ್ಲಾ ಇದ್ದರೂ ಬೇರೆಯವರಿಗೆ ಸಹಾಯ ಮಾಡಲು ಅಥವಾ ದಾನ ಮಾಡಲು ಮನಸ್ಸೆ ಬರಿದಿದ್ದರೆ ಏನು ಪ್ರಯೋಜನ ಅಲ್ಲವೆ?
ಧನ್ಯವಾದಗಳು
....ಸತೀಶ್
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಒಳ್ಳೆಯ ಲೇಖನ
ಉತ್ತಮ ವಿಚಾರ
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಧನ್ಯವಾದಗಳು ಚೇತನ್ ರವರೆ
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಧನ್ಯವಾದಗಳು ಸತೀಶ್ ರವರೆ
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಕೃತಜ್ಞತೆ ಅರ್ಪಣೆ ದಾನದ ಹಿಂತಿರುಗಿಸುವಿಕೆಯಾಗುವುದೇ ಎಂಬ ವಿಷಯ ಚರ್ಚೆಗೆ ಒಳ್ಳೆಯ ವಿಷಯವಲ್ಲವೇ, ಪ್ರಕಾಶರೇ?
ಉ: ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?
ಆತ್ಮೀಯ ನಾಗರಾಜರೆ,
ಕೃತಜ್ಞತೆ ಅರ್ಪಣೆ ದಾನವನ್ನು ವಾಪಾಸು ಮಾಡುವುದೆಂದು ಚಿಂತಿಸಲಾಗದು. ಕೃತಜ್ಞತೆಯ ಹೆಸರಿನಲ್ಲಿ ಯಾರಿಂದ ದಾನ ನಾವು ಪಡೆದಿದ್ದೇವೋ ಅವರಿಗೆ ಇನ್ಯಾವುದೇ ರೂಪದಲ್ಲಿ ವಾಪಾಸು ಮಾಡಬೇಕೆಂಬ ಭಾವನೆ ಇದೆಯಲ್ಲ ಅದು ನಿಜಕ್ಕೂ ಪ್ರಶ್ನಾರ್ಹ.
ದಾನವನ್ನು ಕೊಡುವಾಗ ಕೊಡುತ್ತಿದ್ದೇನೆ ಎಂಬ ಭಾವ, ಇದರಿಂದ ನನಗೇನೋ ಲಾಭ ಆಗಬೇಕೆನ್ನುವ ಭಾವ, ದಾನ ಪಡೆದವ ನನಗೆ ಯಾವಾಗಲು ಕೃತಜ್ಞ ನಾಗಿರಬೇಕೆನ್ನುವ ಭಾವ, ದಾನ ಪಡೆದವ ಕಿರಿಯ, ದಾನ ಕೊಟ್ಟ ನಾನು ಹಿರಿಯ ಎನ್ನುವ ಭಾವ, ದಾನ ಪಡೆದ ನಾನು ಇವರಿಗೆ ಯಾವುದಾದರು ರೂಪದಲ್ಲಿ ಸಹಾಯ ಮಾಡಿ ಋಣ ಮುಕ್ತನಾಗ ಬೇಕೆನ್ನುವ ಭಾವ, ಇವೆಲ್ಲ ದಾನದ ಹೆಸರಿನಲ್ಲಿರುವ ಅಹಂಕಾರದ ಪ್ರದರ್ಶನವಾಗುತ್ತದೆ ಎಂದು ಮಹಾಭಾರತದ ಒಂದು ಪ್ರಸಂಗದಲ್ಲಿ ಧರ್ಮರಾಯ ಹೇಳುತ್ತಾನೆ.
ನಿಮ್ಮ ಚಿಂತನೆ ಸ್ವಾಗತಾರ್ಹ. ಚರ್ಚೆ ನಡೆದರೆ ನನಗೆ ಗೊತ್ತಿಲ್ಲದ ಇನ್ನಷ್ಟು ವಿಚಾರಗಳು ಬೆಳಕು ಕಾಣಬಹುದು. ಇದು ನಿಮ್ಮಿಂದಲೇ ಶುಭಾರಂಭಗೊಳ್ಳಲಿ. ಧನ್ಯವಾಗಗಳು