December 24, 2011 - 8:46am
ಮಿಂಚಿನಂಚುಗಳ ಹಿಡಿದು ಕೆಂಡದುಂಡೆಗಳ ನುಂಗಿ ನೀರ್ಕುಡಿವ ಸಿಡಿಲ ಮರಿಗಳೇ ಬನ್ನಿ
ಕರಿಬಂಡೆಗಳ ಬರಿಗೈಯಲೆ ಹುಡಿಗೈದು ದಶದಿಕ್ಕುಗಳ ಧೂಳೆಬ್ಬಿಸುವ ಪುಂಡ ಸಾಹಸಿಗಳೆ ಬನ್ನಿ
ಕಾಲಯಮನ ಕೊರಳ ಮುರಿದು ಮೃತ್ಯುವಿನ ಸಮಾಧಿಯ ನಿರ್ಮಿಸುವ ಮೃತ್ಯುಂಜಯರೆ ಬನ್ನಿ
ಕಾರಿರುಳ ಕಗ್ಗತ್ತಲೆಯ ಕೊರಳ ಹಿಸುಕುವ ಕಸುವಿನ ಕುಡಿಗಳೆ ಕೆಂಡದ ಚೆಂಡನಾಡುತ ಬನ್ನಿ
ಹಸಿವಿನಟ್ಟಹಾಸದ ಕಿಚ್ಚ ಕೊಚ್ಚಿ ಕೊಚ್ಚಿ ನೆಲಕಚ್ಚಿಸಿ ಹಸಿರ ಹೆಚ್ಚಿಸುವ ಬಲರಾಮರೇ ಬನ್ನಿ
ಕಷ್ಟಕೋಟಲೆಗಳ ದುಖಃದುಮ್ಮಾನಗಳ ಹಸಿ ಹಸಿಯಾಗಿ ತಿಂದು ತೇಗುವ ಅಗಸ್ತ್ಯರೇ ಬನ್ನಿ
ಮೋಸ ವಂಚನೆಗಳ ಕುಟಿಲ ಕೀಟಲೆಗಳ ನಿಟಿಲಿಗಾಹುತಿ ನೀಡುವ ವಿಶ್ವಾಮಿತ್ರರೇ ಬನ್ನಿ
ಕಳ್ಳ ಖದೀಮರ ದುಷ್ಠ ದುರಳರ ಗರಳ ಗರಗಸದಿ ಕೊಯ್ಯುವ ತಾಂಡವ ಮೂರ್ತಿಗಳೇ ಬನ್ನಿ
ಭವ್ಯ ಭಾರತದ ಕನಸ ಕಾಣುವ ನನಸಿನ ಹರಿಕಾರರೆ ಗುರಿ ಮುಟ್ಟಬೇಕಿದೆ ಬನ್ನಿ ಬೇಗ ಬನ್ನಿ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:








