ಭಾಗ-೧
ಒಂದು ವಾರದ ಬೆಳವಣಿಗೆಗಳು ಒಂದಕ್ಕಿಂತ ಒಂದು ಆಘಾತಕಾರಿಯಾಗಿವೆ.
ರಸಗೊಬ್ಬರ ಗಲಾಟೆ ಧಾರವಾಡದ ಮಟ್ಟಿಗೆ ಖಂಡಿತ ಹೊಸದಲ್ಲ. ಆದರೆ, ಅದು ದೊಂಬಿಯ ರೂಪಕ್ಕೆ ತಿರುಗಿದ್ದು ತೀರಾ ಅಪರೂಪ. ನಾನು ಚಿಕ್ಕವಳಿದ್ದಾಗಿಂದ ನೋಡಿದ್ದೇನೆ. ಪ್ರತಿ ವರ್ಷ ಮೊದಲ ಮಳೆ ಬೀಳುತ್ತಲೇ ಸಿಬಿಟಿ (ಸಿಟಿ ಬಸ್ ಟರ್ಮಿನಸ್) ಸುತ್ತಮುತ್ತಲಿನ ಗೊಬ್ಬರ ಹಾಗೂ ಬಿತ್ತನೆ ಬೀಜ ಮಾರುವ ಅಂಗಡಿಗಳಲ್ಲಿ ರೈತರ ದಂಡು ಕಂಡು ಬರುತ್ತಿತ್ತು. ಒಮ್ಮೆಮ್ಮೆ ಬೇಕಾದ ಬಿತ್ತನೆ ಬೀಜದ ಕೊರತೆಯಿಂದಾಗಿ, ರೈತರು ಹಾಗೂ ಅಂಗಡಿಕಾರರ ನಡುವೆ ವಾಗ್ಯುದ್ಧ ನಡೆಯುತ್ತಿತ್ತು. ಆದರೆ, ಅದು ಗಲಾಟೆಯಾದ ಸಂದರ್ಭಗಳು ತೀರಾ ಅಪರೂಪ.
ಆಗ ರಸಗೊಬ್ಬರದ ಹುಚ್ಚೂ ಇಷ್ಟೊಂದು ಕಂಡು ಬರುತ್ತಿದ್ದಿಲ್ಲ. ಬಂಡಿಗೊಬ್ಬರ ಎಂದು ಕರೆಯಲ್ಪಡುವ ಕೊಟ್ಟಿಗೆ ಗೊಬ್ಬರದ ಮೇಲೆಯೇ ರೈತರು ಹೆಚ್ಚು ಅವಲಂಬಿತರಾಗಿದ್ದರು. ಉಳ್ಳ ರೈತರು ಮಾತ್ರ ರಸಗೊಬ್ಬರ ಬಳಸುತ್ತಿದ್ದರು.