ತ್ಯಾಗರಾಜ
ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಬಿದಿಗೆ
September 30, 2008 - 10:45pm — hamsanandiನೆನ್ನೆ ನವರಾತ್ರಿ ಆರಂಭವಾಯಿತು. ಹೆಣ್ಣುಮಕ್ಕಳಿರೋ ಮನೆಯಲ್ಲಿ ಗೊಂಬೆಗಳನ್ನ ಅಟ್ಟ, ಪೆಟ್ಟಿಗೆ - ಎಲ್ಲೆಲ್ಲಿ ಜೋಪಾನ ಮಾಡಿಟ್ಟಿದ್ರೋ, ಅಲ್ಲಿಂದ ತೆಗೆದು ಜೋಡಿಸೋ ಕೆಲಸ. ಬಹುಶ: ಗೊಂಬೆಗಳಿಗೂ ವರ್ಷ ಪೂರ್ತಿ ಒಳಗೇ ಕುಳಿತು ಜಡ್ಡುಗಟ್ಟಿರುತ್ತೋ ಏನೋ. ಆದಕ್ಕೆ ಹೊರಬಂದ ತಕ್ಷಣ ಗಾಳಿ ಕುಡಿದು ಕಳೆಕಳೆಯಾಗಿಬಿಡುತ್ತವೆ!
ನವರಾತ್ರಿ ಎಂದರೆ ಅಲ್ಲಲ್ಲಿ ಸಂಗೀತೋತ್ಸವಗಳು ನಡೆಯುವುದು ರೂಢಿ. ಅದೇ ಕಾರಣಕ್ಕೆ ಹೋದಬಾರಿಯಂತೆ ನಾನೂ ಸಂಗೀತದ ಬಗ್ಗೆಯೇ ಬರೆಯತೊಡಗಿದ್ದೇನೆ. ಇವತ್ತು ನನ್ನ ಮನಸ್ಸಿಗೆ ಬಂದ ಕೃತಿ ತ್ಯಾಗರಾಜರ ’ಗತಿ ನೀವನಿ’ ಎನ್ನುವ ತೋಡಿ ರಾಗದ ರಚನೆ.
ತ್ಯಾಗರಾಜರ ಘನರಾಗ ಪಂಚರತ್ನ ಕೃತಿಗಳು ಬಹಳ ಪ್ರಖ್ಯಾತ ರಚನೆಗಳು - ಅದರಲ್ಲೂ ಕೊನೆಯ ಪಂಚರತ್ನ ಕೃತಿಯಾದ ಎಂದರೋ ಮಹಾನುಭಾವುಲು ಎನ್ನುವುದಂತೂ ಸಂಗೀತವನ್ನು ಅಷ್ಟಾಗಿ ಕೇಳಿ ತಿಳಿಯದವರಿಗೂ ಗೊತ್ತಿರುವುದುಂಟು. ಆದರೆ, ಈ ಪಂಚರತ್ನ ಕೃತಿಗಳಲ್ಲದೇ, ಇನ್ನೂ ಕೆಲವು ಗುಂಪು-ರಚನೆಗಳನ್ನೂ ತ್ಯಾಗರಾಜರು ರಚಿಸಿದ್ದಾರೆ. ಆವುಗಳಲ್ಲಿ ಲಾಲ್ಗುಡಿ ಪಂಚರತ್ನ ಎಂಬ ಗುಂಪೂ ಒಂದು. ಮುಂದೆ ಓದಿ »

ಏನೀ ಮಹಾನಂದವೇ? ಓ ಭಾಮಿನಿ!
September 26, 2008 - 5:24am — hamsanandiಕೆಲವು ದಿನಗಳ ಹಿಂದೆ 'ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?
ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.
ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ. ಮುಂದೆ ಓದಿ »

ವೆಂಕಟಾಚಲ ನಿಲಯಂ ವೈಕುಂಠ ಪುರವಾಸಂ - (ಸಿಂಧು ಭೈರವಿ : ಭಾಗ ಎರಡು)
May 1, 2008 - 11:15pm — hamsanandiಕೆಲವು ದಿನಗಳ ಹಿಂದೆ ಸಿಂಧು ಭೈರವಿ ರಾಗದ ಬಗ್ಗೆ ಒಂದು ಅಸಂಬದ್ಧ ಪೀಠಿಕೆ ಬರೆದಿದ್ದೆ. ನಂತರ, ಕೇಳಿಸಬಹುದಾದ ಕೆಲವು ಒಳ್ಳೆ ಉದಾಹರಣೆಗಳಿಗೆ ಹುಡುಕುತ್ತಿದ್ದೆ. ನಾನು ಹುಡುಕುತ್ತಿದ್ದ ಕೆಲವು ಉತ್ತಮ ಗೀತೆಗಳು ಸಿಕ್ಕಲಿಲ್ಲವಾದ್ದರಿಂದ ಏನು ಮಾಡಲೆಂದು ಯೋಚಿಸುತ್ತಿದ್ದಾಗ, ನೋಡಿಸಿ-ಕೇಳಿಸುವ ಇನ್ನೊಂದಷ್ಟು ಹಾಡುಗಳು ದೊರೆತವು. ಸರಿ ಮತ್ತೆ, ತಡವೇಕೆ?
ಸಿಂಧುಭೈರವಿ ಅನ್ನುವುದು ದಕ್ಷಿಣಾದಿ(ಕರ್ನಾಟಕ) ಹಾಗೂ ಉತ್ತರಾದಿ(ಹಿಂದೂಸ್ತಾನಿ)ಸಂಗೀತ ಎರಡರಲ್ಲೂ ಪ್ರಚಾರದಲ್ಲಿರುವ ರಾಗ. ಹಿಂದೂಸ್ತಾನಿ ಪದ್ಧತಿಯಲ್ಲಿ ಇದಕ್ಕೆ ಭೈರವಿ ಎಂದರೆ, ಕರ್ನಾಟಕ ಸಂಗೀತದಲ್ಲಿ ಸಿಂಧೂಭೈರವಿ ಎನ್ನುತ್ತಾರೆ. ಕರ್ನಾಟಕ ಸಂಗೀತಕ್ಕೆ ಇದು ಹಿಂದೂಸ್ತಾನಿಯಿಂದಲೇ ಬಂದಿದೆ ಎನ್ನುವುದನ್ನು ನೀವು ಈ ಬರಹದಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳನ್ನು ಕೇಳಿದಾಗ ನಿಮಗೆ ಅರಿವಾಗುತ್ತೆ. ಈ ಬರಹದ ಮಟ್ಟಿಗೆ, ನಾನು ಭೈರವಿ ಎಂದಾಗಲೂ, ಸಿಂಧೂಭೈರವಿ ಎಂದಾಗಲೂ ಒಂದೇ ರಾಗದ ಬಗ್ಗೆಯೇ ಹೇಳುತ್ತಿದ್ದೇನೆ ಎಂದುಕೊಳ್ಳಿ. (ಕರ್ನಾಟಕ ಸಂಗೀತದಲ್ಲಿ ಬೇರೊಂದು ಭೈರವಿ ಇದೆ - ಅದೂ ಒಂದು ಮಹಾನ್ ರಾಗವೇ. ಅದರ ವಿಷಯ ಈಗ ಬೇಡ.) ಮುಂದೆ ಓದಿ »

ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ
January 6, 2008 - 7:48am — hamsanandiಇಂದು ಜನವರಿ ಆರು. ಸರಿಯಾಗಿ ನೂರರವತ್ತೊಂದು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.
ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?
(ಚಿತ್ರ: http://www.karnatik.com/ ಕೃಪೆ)
ಮುಂದೆ ಓದಿ »





RSS: