ಮಳೆಯ ಹನಿಗಾಗಿ ಭೂಮಿ ಕಾದಿದೆ
ಕವನ
ಮೊದಲ ಮಳೆಯ
ಹನಿಗಾಗಿ ಭೂಮಿ ಕಾದಿದೆ
ಅದು ಕಾದೂ ಇದೆ
ಮಳೆಯ ನಂತರದ
ಘಮಕೆ ನಾನೂ ಕಾದಿರುವೆ
ಒಣಗಿ ನಿಂತ ಹುಲ್ಲೂ
ವರ್ಷಿಣಿಯ ಮೊರೆಯಿಟ್ಟಿದೆ
ಮಳೆ ನಂಬಿ ಬಿತ್ತಿರುವ ಬೀಜ
ಕಾಯುತ್ತಲೇ ಇದೆ
ಬಂದರೆ ಮಳೆ ಮೊಳೆತು
ಚಿಗುರಿ ಫಲವಾಗುವುದು
ಫಸಲಾಗುವುದು, ಅಸಲೂ ಆಗಿ
ಬಿತ್ತಿದ ರೈತನಿಗೆ ಕೊಂಚ
ಲಾಭವೂ ಆಗುವುದು
ಹಸಿರೀಕರಣ ಮೊದಲೆಲ್ಲ
ಸಹಜವಾಗಿತ್ತು, ಸಹಜವಾಗಿಯೇ
ಮಳೆ ಬರುತ್ತಿತ್ತು
ಈಗೀಗ ಹಸಿರ ಹರಣ
ಸಹಜವಾಗಿರುವುದರಿಂದ
ಮಳೆ ಅಸಹಜವಾಗಿಬಿಟ್ಟಿದೆ
ಮಾಡಿದ್ದುಣ್ಣೋ ಮಹರಾಯ
- Log in to post comments