ಮೊಬೈಲ್ ಮಾತು - ೨

ಮೊಬೈಲ್ ಮಾತು - ೨

ಕವನ

 

ಮೊದಲಿಗೆ 'ಮೊಬೈಲ್ ಮಾತನ್ನು' ಓದಿ, ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ನಮನಗಳು. ಇದು ಮೊಬೈಲ್ ಮಾತಿನ ಮುಂದುವರಿದ ಭಾಗವಲ್ಲ ! ಆದರೆ ಆ ಇಬ್ಬರು ಪ್ರೇಮಿಗಳು ಮೊಬೈಲ್ ಸಂದೇಶಗಳಲ್ಲಿ ಏನು ಮಾತಾಡಿದರೋ ಅದು ನಿಗೂಢವಾದ ಸಂಗತಿ, ಆ ಸಂದೇಶಗಳು ಅವರಿಬ್ಬರ ಕಾವ್ಯಮಯ ಸಂಭಾಷಣೆ ಆಗಿದ್ದರೆ ಹೇಗೆ ಇರುತ್ತಿತ್ತು ಎನ್ನುವುದರ ಕಲ್ಪನೆಯ ಪ್ರಯತ್ನ ಅಷ್ಟೇ..
 
ನಾನು ಅವರಿಬ್ಬರಿಗೆ 'ವಿಶ್ವ' ಮತ್ತು 'ಶಾಂತಿ' ಎಂದು ಹೆಸರಿಸಿದ್ದೇನೆ. ಕಾರಣ ಇಷ್ಟೇ. ಈ ವಿಶ್ವದಲ್ಲಿ ನಿತ್ಯ ಗಲಾಟೆ, ಗೊಂದಲ, ಭಯೋತ್ಪಾದನೆ, ಹಿಂಸಾಚಾರ... ಮತ್ತೇನೆಲ್ಲಾ ಅಶಾಂತಿಗೆ ಕಾರಣಗಳೋ ಅವೆಲ್ಲಾ ಇವೆ. ಆದರೆ ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ 'ಪ್ರೀತಿಯೊಂದೇ' ಸಾಕಾರ ಮಂತ್ರವಾಗಬೇಕು. ದಿ|| ಪುಟ್ಟಣ್ಣ ಕಣಗಾಲರ ನಿರ್ದೇಶನದ, ವರನಟ ಡಾ|| ರಾಜಕುಮಾರ್ ಅಮೋಘ ಅಭಿನಯದ 'ಸಾಕ್ಷಾತ್ಕಾರ' ಚಿತ್ರದಲ್ಲಿನ 'ಒಲವೆ ಜೀವನ ಸಾಕ್ಷಾತ್ಕಾರ' ಎಂಬ ವಾಕ್ಯ 'ವಿಶ್ವ-ಶಾಂತಿಗೆ'  ಮೂಲ ಮಂತ್ರವಾಗಬೇಕು ಎಂದು ಆಶಿಸುತ್ತೇನೆ.
 
ವಿಶ್ವ: ನಂಬಿಕೆ ನೋವಾಯಿತು ನಂಬಿದ ನಂಬಿಕೆಯಲಿ,ಕಂಬನಿ ಕಂಡಿತು ಕುರುಡಾದ ಕಣ್ಣಲಿ, ಜೊತೆಗಾತಿ ಹೋದೆ ನನ್ನ ಜೊತೆಯ ಜರಿದು, ಹಿಂಬಾಲಿಸಿದೆ ನಿನ್ನ ಪ್ರೀತಿಯ ನೆನೆದು,ಹೋದರೆ ಹೋಗು ನನಗಿಲ್ಲ ಬೇಸರ, ಉಪ್ಪಾದರೂ ಸವಿಯುವೆ ನಿನ್ನ ನೆನಪಿನ ಸಾಗರ
 
ಶಾಂತಿ: ಮನವು ಮರೆತಿದೆ ಒಡಲ ಒಡತಿಯ, ನಡೆಯು ಮರೆತಿದೆ ನಡೆವ ದಾರಿಯ,ಕಾಣದ ಕತ್ತಲೆಯಲಿ ಕಂಡೆ ನಿನ್ನನು, ಮರೆಯದಂತ ನೆನಪಲೂ ಮರೆಯಾದೆ ನೀನು, ನೊಂದ ಒಡಲ ಸುಟಾಯಿತು ಇಂದು, ಸುಟ್ಟರು ನಗುತಿದೆ ಹೃದಯ, ನಿನ್ನ ನಗುವ ಕಂಡು.
 
ವಿಶ್ವ: ಕರಗಿ ಮೋಡ ತಣಿಸಿತು ಇಳೆಯ, ಕಾಮನ ಬಿಲ್ಲೇ ಬಾಗಿತು ಚುಂಬಿಸಲು ಭುವಿಯ, ನೆನಪಾದರೆ ನೀ ನಕ್ಕ ನೆನಪು, ನರಕ ದೂಡಿತು ನನ್ನ ನೀ ರಕ್ಕಸ ಎಂದು.
 
ಶಾಂತಿ: ನೆನಪಾಗುವೆ ನೀನು ಕ್ಷಣ ಕ್ಷಣಕ್ಕೆ, ಬದುಕುವಾಸೆ ನಿನ್ನಿಂದ ಯುಗಾಂತ್ಯಕ್ಕೆ, ಹೆಸರೇ ಇಲ್ಲ ಈ ನೋವಿನ ಬಣ್ಣಕ್ಕೆ, ಹಚ್ಚಿದೆ ನೀನು ಬೇಡವೆಂದರು ನಾ, ಈ ಜೀವನದ ಮುಖಕ್ಕೆ
 
ವಿಶ್ವ: ಮೋಸ ಮಾಡಿದೆ ನೀ ಎನ್ನಲಾರೆ, ಒಲವಿನ ದೇವತೆ ನಿನ್ನ ಮರೆಯಲಾರೆ, ತಿಳಿಯದೆ ಆಯಿತು ಪ್ರೀತಿಯ ತ್ಯಾಗ. ಜಗಕೆ ಅರಿವಾಗದು ನಮ್ಮ ಪ್ರೇಮಾನುರಾಗ
 
ಶಾಂತಿ: ಕತ್ತಲು ನೆರಳು ಜೊತೆಯಾಯಿತು, ಒಲವಿನ ಬೆಳಕು ಮರೆಯಾಯಿತು. ಆಣೆ ಮಾಡುವೆ ನಾ ಬದುಕಲಾರೆ ಇಂದು, ಬದುಕಿದರೆ ಬರುವೆ ನಿನ್ನ ಜೋತೆಯಾಗಲೆಂದು.
 
ವಿಶ್ವ: ಅವಿತುಕೋ ನನ್ನೆದೆಯ ಅಂತರಾಳದಲಿ, ಯಾರೇ ಬಂದರು ಬಿಡಲಾರೆ ಜೀವಂತ ಮರಳಿ, ನಾ ನಂಬಿದ ದೇವರು ಬಂದರು ಸರಿಯೇ, ಕೇಳುವೆ ಅವನಾಣೆ ನಾವು ಮಾಡಿದ ತಪ್ಪು ಏನೆಂದು. ಸಾವಿನಲ್ಲೂ ಕೈ ಹಿಡಿವೆ, ನೀನು ನನ್ನ ಜೋತೆಯದಾರಿಂದು.
 
ಶಾಂತಿ: ನಿನ್ನೆದೆಯ ಗೂಡಲ್ಲಿ ಪ್ರಾಣ ಪಕ್ಷಿ ನಾನು, ಹಾರಿ ಹೋದರೆ ನಾ ಬದುಕ ಬಯಸುವೆಯಾ ನೀನು, ಬಿಡಬೇಡ ನನ್ನನು ನಿನ್ನ ಪ್ರೀತಿಯ ಪಂಜರದಿಂದ, ಕಾಯುತಿಹರು ಬೇಟೆಗಾರರು ನಿನ್ನ ಪ್ರೀತಿಯ ಕೊಲ್ಲಲೆಂದು
 
ವಿಶ್ವ: ಕಾಯುವೆಯ ಹೇಳು ನನಗಾಗಿ ನೀನು, ಕತ್ತರಿಸುವೆ ನಮ್ಮ ಪ್ರೀತಿಗೆ ಎದುರಾದವರನ್ನು, ಪ್ರಾಣ ಹೋದರು ಸರಿಯೇ ಬರುವೆ ನಾನು, ನಿನ್ನ ಬಾಳು ಬಂಗಾರವಾಗಿಸಲು, ಹರಿಶಿನ ಕುಂಕುಮ ನಿನ್ನ ಹಣೆಗೆ ಸಿಂಗರಿಸಲು,
 
ಶಾಂತಿ: ನೀ ಬರುವ ಭರವಸೆ ನೀಡು ಸಾಕು ನನಗೆ, ಯುಗಗಳೇ ಸೋಲಬೇಕು ನನ್ನ ಕಾಯುವಿಕೆಗೆ.  ನೀ ಸಾಯುವ ಸುಳಿವ ಕೊಡು ಸಾಕು ನನಗೆ, ಸ್ವರ್ಗವನ್ನೇ ಅಲಂಕರಿಸಿ ಸ್ವಾಗತ ಕೋರುವೆ ನಿನಗೆ.

 

ಚಿತ್ರ್