ನೆಲದ ಮರೆಯ ನಿದಾನ-1
ಈ ಬರೆಹಗಳಿಗೆ ಒಂದು ಪೀಠಿಕೆಯ ಅಗತ್ಯವಿದೆ ಎಂದು ಭಾವಿಸಿ ಇದನ್ನು ಬರೆಯುತ್ತಿದ್ದೇನೆ ಗೆಳೆಯ ಹಾಗೂ ಸಹದ್ಯೋಗಿ ರಾಜಶೇಖರ ಹೆಗಡೆ ಉದಯವಾಣಿಯ ಕೃಷಿ ಪುಟದ ಹೊಣೆ ಹೊತ್ತಾಗ ಕೊಟ್ಟ ಒಂದು ಐಡಿಯಾ ಈ ಬರೆಹಗಳಿಗೆ ಕಾರಣ. ಇವುಗಳು ನೆಲದ ಮರೆಯ ನಿದಾನ ಎಂಬ ಶೀರ್ಷಿಕೆಯಡಿಯಲ್ಲಿ ಉದಯವಾಣಿಯ ಕೃಷಿ ಸಂಪದ ಪುಟದಲ್ಲಿ ಪ್ರಕಟವಾಗಿದ್ದವು. ಇವು ನಿಜಕ್ಕೂ ಏನು? ಅದು ನನಗೂ ಗೊತ್ತಿಲ್ಲ. ಇವುಗಳನ್ನು ಹರಿಪ್ರಸಾದ್ ಅವರಿಗೆ ಓದಲು ಕೊಟ್ಟಾಗ `ನನಗೆ ಇಷ್ಟವಾಗಲಿಲ್ಲ' ಎಂದಿದ್ದರು. ಹಾಗೆಯೇ ಇನ್ನು ಕೆಲವು ಗೆಳೆಯರು ಇಷ್ಟಪಟ್ಟಿದ್ದರು. ಈಗಲೂ ನಾನೊಂದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊರಟಿದ್ದೇನೆ. ಎಲ್ಲರ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ.
ಇದು ನಡೆದದ್ದು 50 ಕೋಟಿ ವರ್ಷಗಳ ಹಿಂದೆ. ಒಂದು ಹುಲ್ಲು ಕೂಡಾ ಗಾಳಿಗೆ ಅಲುಗುತ್ತಿರಲಿಲ್ಲ. ಹಕ್ಕಿಗಳ ಗುಂಪು ಆಕಾಶದಲ್ಲಿ ಚಿತ್ರ ಬರೆಯುತ್ತಿರಲಿಲ್ಲ. ಒಂದು ಜೀರುಂಡೆಯ ಸದ್ದೂ ಇರಲಿಲ್ಲ. ಇವೆಲ್ಲಾ ಕೋಟ್ಯಂತರ ವರ್ಷಗಳಷ್ಟು ಮುಂದಿನ ಭವಿಷ್ಯದ ಗರ್ಭದಲ್ಲಿ ಅಡಗಿದ್ದವು. ಮನುಷ್ಯನೆಂಬವನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲಡೆಯೂ ಗಾಳಿಗೆ ಹಾರುವ ದೂಳು ಮಾತ್ರ. ಇಂಥ ದಿನಗಳಲ್ಲಿ ಒಬ್ಬ ಮಾನವಶಾಸ್ತ್ರಜ್ಞ ಯಾರನ್ನಾದರೂ ಸಂದರ್ಶಿಸಿ ತನ್ನ ಸಂಶೋಧನೆ ಆರಂಭಿಸುವ ಉದ್ದೇಶದಿಂದ ಅಲೆಯುತ್ತಿದ್ದ.(ಮನುಷ್ಯ ಇರಲಿಲ್ಲ ಎಂದ ಮೇಲೆ ಈ ಮಾನವಶಾಸ್ತ್ರಜ್ಞ ಎಲ್ಲಿಂದ ಬಂದ ಎಂಬ ಪ್ರಶ್ನೆ ಬೇಡ. ಮಾನವಶಾಸ್ತ್ರಜ್ಞನಿಲ್ಲದೆ ಪ್ರಪಂಚ ಪೂರ್ಣವಾಗುವುದಿಲ್ಲ, ಅಷ್ಟೆ!)
ಹೀಗೆ ಅಲೆಯುತ್ತಿದ್ದ ಈ ಸಂಶೋಧಕನಿಗೆ ಸಿಕ್ಕದ್ದು ಲೋಳೆ ಮೀನು. ವಿಶಾಲವಾಗಿ ಹರಡಿದ್ದ ಸಮುದ್ರದ ದಂಡೆಯಲ್ಲಿ ಕಂಡ ಈ ಲೋಳೆ ಮೀನನ್ನು ಸಂಶೋಧಕ ಮಾತನಾಡಿಸಿದ. ಉಭಯ ಕುಶೋಲಪರಿ ಆಯಿತು. ಕೆಲವೇ ಕ್ಷಣಗಳಲ್ಲಿ ಇಬ್ಬರೂ ಗೆಳೆಯರಾಗಿಬಿಟ್ಟರು. ಸಂಶೋಧಕ ತನ್ನ ಪ್ರಶ್ನಾವಳಿಯನ್ನು ಹೊರತೆಗೆದು ವಿಜ್ಞಾನಿಯ ಗತ್ತಿನಲ್ಲಿ ಮಾತಿಗಾರಂಭಿಸಿದ.
`ನಾನೊಬ್ಬ ಅಂತ್ರೋಪಾಲಜಿಸ್ಟ್. ನನ್ನ ಪ್ರಶ್ನೆಗೆ ಉತ್ತರಿಸಿದರೆ ಸಂಶೋಧನೆಗೆ ಅನುಕೂಲವಾಗುತ್ತೆ'
`ಹೌದೇ, ಕೇಳಿ'
`ಜಗತ್ತಿನ ಸೃಷ್ಟಿಯ ಬಗ್ಗೆ ನಿಮಗೆ ಗೊತ್ತಿರುವ ಕಥೆ ಹೇಳಿ'
`ಕಥೆ...?'
`ಅದೇ ಜಗತ್ತು ಹೇಗೆ ಸೃಷ್ಟಿಯಾಯಿತು ಎಂಬುದರ ಬಗ್ಗೆ ನೀವು ಹೇಳುವ ಕಥೆಗಳು'
`ಅಂಥ ಕಥೆಗಳೇನೂ ಇಲ್ಲ. ಯಾಕೆಂದ್ರೆ ನಾವು ತುಂಬಾ ತಾರ್ಕಿಕರು. ನಮ್ಮದೇನಿದ್ದರೂ ವೈಜ್ಞಾನಿಕವಾದ ತಿಳುವಳಿಕೆ ಮಾತ್ರ'
`ಸರಿ ಅದನ್ನೇ ಹೇಳಿ'
`ಕೋಟ್ಯಂತರ ವರ್ಷಗಳ ಕಾಲ ಇಲ್ಲಿ ಯಾವ ಜೀವಿಗಳೂ ಇರಲಿಲ್ಲ. ಕೊನೆಗೆ ಜೀವಿ ಕಾಣಿಸಿಕೊಂಡಿತು'
`ಸರಿ ನಿಮ್ಮ ಕಥೆಯ ಪ್ರಕಾರ... ಕ್ಷಮಿಸಿ.. ನಿಮ್ಮ ವೈಜ್ಞಾನಿಕ ತಿಳುವಳಿಕೆಯ ಪ್ರಕಾರ ಆ ಜೀವಿ ಎಲ್ಲಿ ಕಾಣಿಸಿಕೊಂಡಿತು'
ಈ ಪ್ರಶ್ನೆಯಿಂದ ಸ್ವಲ್ಪ ಗೊಂದಲಕ್ಕೆ ಸಿಲುಕಿದ ಲೋಳೆ ಮೀನು `ಅಂದರೆ ನಿಖರವಾಗಿ ಯಾವ ಜಾಗದಲ್ಲಿ ಕಾಣಿಸಿಕೊಂಡಿತು ಎಂದೇ?' ಎಂದು ಪ್ರಶ್ನಿಸಿತು.
ಮಾನವಶಾಸ್ತ್ರಜ್ಞ ವಿವರಿಸಿದ; `ಹಾಗಲ್ಲ ಈ ಜೀವಿ ಕಾಣಿಸಿಕೊಂಡದ್ದು ನೀರಿನಲ್ಲೋ ಅಥವಾ ಭೂಮಿಯ ಮೇಲೋ?'
`ಭೂಮಿ..? ಹಾಗಂದ್ರೆ'
ಮಾನವ ಶಾಸ್ತ್ರಜ್ಞ ತಾನು ಕುಳಿತಿದ್ದ ನೆಲ ಮತ್ತು ಸುತ್ತ ಮುತ್ತಲಿನ ಪ್ರದೇಶವನ್ನು ತೋರಿಸಿ `ಅದು' ಎಂದ.
`ಓ ಅದನ್ನು ಭೂಮಿ ಎನ್ನುತ್ತೀರಾ... ಅದು ಈ ನೀರು ತುಂಬಿರುವ ಬೋಗುಣಿಯ ಅಂಚು'.
`ಸರಿ ಅಥವಾಯ್ತು. ಮುಂದುವರಿಸಿ...'
ಲಕ್ಷಾಂತರ ವರ್ಷಗಳ ಕಾಲ ಈ ಏಕಕೋಶ ಜೀವಿಗಳು ನೀರಿನಲ್ಲಿ ಅಸಹಾಯಕವಾಗಿ ಅಲೆಯುತ್ತಿದ್ದವು. ಅಮೀಬಾಗಳಂಥ ಜೀವಿಗಳು. ಮತ್ತೆ ನಿಧಾನವಾಗಿ ಸ್ವಲ್ಪ ಸಂಕೀರ್ಣ ಜೀವಿಗಳು ಬಂದವು ಹೀಗೆ... ಕೊನೆಗೊಮ್ಮೆ ಲೋಳೆಮೀನು ಬಂತು...'
ಮಾತು ಮುಗಿಯುವ ವೇಳೆಗೆ ಲೋಳೆ ಮೀನು ಹೆಮ್ಮೆಯಿಂದ ಬೀಗುತ್ತಿತ್ತು. ಇದು ಡ್ಯಾನಿಯಲ್ ಕ್ವಿನ್ನ ಕಾದಂಬರಿಯೊಂದರಲ್ಲಿರುವ ಕಥೆ. ಇದು ಕಥೆಯಷ್ಟೇ ವಾಸ್ತವ ಕೂಡಾ. ವೈಜ್ಞಾನಿಕವಾಗಿ ಚಿಂತಿಸುವ, ಕಾರ್ಯ ಕಾರಣಗಳನ್ನು ಹುಡುಕುವ ಮನುಷ್ಯ ವಿಶ್ವದ ಕುರಿತು ಅರಿತಿರುವುದು ಲೋಳೆಮೀನಿನಷ್ಟೇ. ಮನುಷ್ಯನ ವೈಜ್ಞಾನಿಕ ತಿಳುವಳಿಕೆಯಲ್ಲೂ ಕೊನೆಗೆ ಮನುಷ್ಯ ಬರುತ್ತಾನೆ. ಉಳಿದೆಲ್ಲವೂ ತನಗಾಗಿ ಸೃಷ್ಟಿಯಾಗಿವೆ ಎಂದು ಭಾವಿಸುತ್ತಾನೆ. ಇದಕ್ಕೆ ಭಿನ್ನವಾಗಿ ಅಖಿಲಾಂಡಕೋಟಿ ಬ್ರಹ್ಮಾಂಡದ ಒಂದು ಭಾಗವಾಗಿ ನಿಂತು ಗ್ರಹಿಸಹೊರಟರೆ ಅರ್ಥವಾಗುವುದೇ ಬೇರೆ.

- ismail ರವರ ಬ್ಲಾಗ್
- Printer-friendly version
- Login or register to post comments
- 1708 hits
- Email this blog




RSS:
ಪ್ರತಿಕ್ರಿಯೆಗಳು
ಕ್ಷಮಿಸಿ
ಕ್ಷಮಿಸಿ ನಾ ಹೇಳೋದೆಲ್ಲಾ ತಮಾಷೆಗಾಗಿ ಎನ್ನುವಂತೆ, ನೀವು ಗಂಭೀರವಾದ ವಿಷಯ ಹೇಳುತ್ತಿರುವಾಗ (ಅಥವಾ ನಾನು ಹಾಗೆ ತಿಳಿದುಕೊಂಡಿದ್ದೇನೆ), ನನಗೆ ಒಂದು ಸಂದೇಹ.
ಆ ಮನಶಾಸ್ತ್ರಜ್ಞ ಮತ್ತು ಲೋಳೆ ಮೀನು, ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅಥವಾ ಮಾತೇ ಆಡುತ್ತಿರಲಿಲ್ಲವೆ. ಶಾಸ್ತ್ರಜ್ಞನ ಮಾತುಗಳು(??? ..ಇಲ್ಲಿ ಸಂದೇಹಗಳು ಎನ್ನುವುದು ಸೂಕ್ತ. ಏಕೆಂದರೆ..ಮಾತು ಎಂದರೇನು ಎಂಬುದು ತಿಳಿಯದೇ ಇರುವುದಕ್ಕೆ ಸಾಧ್ಯ. ) ಅದ್ಹಾಗದೆ ಲೋಳೆ ಮೀನಿಗೆ ತಿಳಿದಿರಲಿಕ್ಕೂ ಸಾಕು. ಲೋಳೆ ಮೀನಿನ ಅನಿಸಿಕೆಗಳನ್ನು ಆ ಮನಶಾಸ್ತ್ರಜ್ಞನಿಗೂ ಅದ್ಹಾಗದೆ ತಿಳಿದಿರಲಿಕ್ಕೂ ಸಾಕು.
ಅಂದಹಾಗೆ, ಪ್ರತಿಕ್ರಿಯಿಸುವ ಮುನ್ನ, ಇದರ ಮುಂದಿನ ಭಾಗವನ್ನೂ ಹಾಕಿ. ಅರ್ಧಂಬರ್ಧ ತಲೆಕೆಡಿಸಿ ಕೊಳ್ಳುವುದಕ್ಕಿಂತ ಪೂರ್ತಿ ಕೆಡಿಸಿಕೊಂಡು
ಆಮೇಲೆ (ಏಕೆಂದರೆ ಅಷ್ಟ್ಹೋತ್ತಿಗೆ, ಸಂದೇಹಗಳು ಕಡಿಮೆಯಾಗಿ, ನಮ್ಮ ಹಿಡಿತಕ್ಕೆ ಬಂದಿರುತ್ತದೆ, ನಮ್ಮ ಮನಸ್ಸು) ಪ್ರತಿಕ್ರಿಯಿಸಿದರೆ ಒಂದು ಇದು ಒಂದು ಇದು ಇರುತ್ತೆ.(ಡಿಸ್ಕೋ ರಾಗ ಆದಿ ತಾಳ ಧಾರಾವಾಹಿಯಲ್ಲಿ ನಟ ಶಿವರಾಂ ಅವರ ಬಾಯಿಂದ ಹೊರಬರುತ್ತಿದ್ದ ಅಣಿಮುತ್ತುಗಳು ಇವು
).
ಉತ್ಸುಕತೆ
ಓದಲು ಬಹಳ ಇಂಟರೆಸ್ಟಿಂಗ್ ಆಗಿದೆ. ಇನ್ನೂ ಮುಂದಕ್ಕೆ ಹೋಗಿ. ಇಲ್ಲಿಯವರೆವಿಗೆ ನೀವು ಬರೆದಿರೋದು ಚೆನ್ನಾಗಿದೆ. ಬಹುಶ: ನಾಡಿಗರು ಇನ್ನೂ ಹೆಚ್ಚಿಗೆ ಓದಿರಬೇಕೇನೋ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಹಿಚ್ಹೈಕರ್ಸ್ ಗೈಡ್ ರೀತಿ ಇದೆ
ನೀವು ಇದನ್ನು "ಡ್ಯಾನಿಯಲ್ ಕ್ವಿನ್ನ ಕಾದಂಬರಿಯೊಂದರಲ್ಲಿರುವ ಕಥೆ" ಎಂದು ಹೇಳದಿರುತ್ತಿದ್ದರೆ ನಾನು ಇದನ್ನು ಡಗ್ಲಾಸ್ ಆಡಮ್ಸ್ನ ಹಿಚ್ಹೈಕರ್ಸ್ ಗೈಡ್ ಟು ದಿ ಗ್ಯಾಲಕ್ಸಿಯಿಂದ ಆಯ್ದುಕೊಂಡಿದ್ದೀರಿ ಎಂದುಕೊಳ್ಳುತ್ತಿದ್ದೆ. ಅದೂ ಬಹುಪಾಲು ಇದೇ ರೀತಿ ಇದೆ.
ಸಿಗೋಣ,
ಪವನಜ
-----------
Vishva Kannada
Think globally, Act locally
ಸ್ಪಷ್ಟೀಕರಣ
ಹರಿಪ್ರಸಾದ್ ಅವರು ದೂರವಾಣಿಸಿ `ನಾನು ಚೆನ್ನಾಗಿಲ್ಲ ಎಂದು ಹೇಳಿದ್ದಲ್ಲ. ಈ ಪರಿಕಲ್ಪನೆ ನನಗೇ ಅಷ್ಟೇನೂ ಒಪ್ಪಿಗೆಯಾಗಲಿಲ್ಲ ಎಂದಿದ್ದೆ' ಎಂಬ ಸ್ಪಷ್ಟೀಕರಣ ನೀಡಿದ್ದಾರೆ. ಬಹುಶಃ ನಾನೇ ತಪ್ಪು ತಿಳಿದುಕೊಂಡೆ ಎನಿಸುತ್ತದೆ. ಹರಿಪ್ರಸಾದ್ ನನ್ನನ್ನು ಕ್ಷಮಿಸುತ್ತಾರೆಂದು ಭಾವಿಸಿದ್ದೇನೆ.
ಇನ್ನೊಂದು ಸ್ಪಷ್ಟೀಕರಣ ಕೂಡಾ ಇಲ್ಲೇ ಕೊಟ್ಟು ಬಿಡುತ್ತೇನೆ. `ನೆಲದ ಮರೆಯ ನಿದಾನ' ಒಂದು ಧಾರಾವಾಹಿಯಂಥ ಬರೆಹವಲ್ಲ. ಇದು ಹಲವು ಸ್ವತಂತ್ರ ಬರೆಹಗಳ ಗುಚ್ಛ. ಹಾಗಾಗಿ ಮುಂದಿನ ಬರೆಹಕ್ಕೂ ಇದಕ್ಕೂ ಯಾವ ಸಂಬಂಧವೂ ಇರಲಾರದು. ಆದರೆ ಈ ಎಲ್ಲಾ ಬರೆಹಗಳೂ ಒಂದು ತಾತ್ವಿಕತೆಯ ಹಿನ್ನೆಲೆಯನ್ನು ಹೊಂದಿವೆ.
ಒಪ್ಪಿದೆ
> ಓ ಅದನ್ನು ಭೂಮಿ ಎನ್ನುತ್ತೀರಾ... ಅದು ಈ ನೀರು ತುಂಬಿರುವ ಬೋಗುಣಿಯ ಅಂಚು
...
> ವೈಜ್ಞಾನಿಕವಾಗಿ ಚಿಂತಿಸುವ, ಕಾರ್ಯ ಕಾರಣಗಳನ್ನು ಹುಡುಕುವ ಮನುಷ್ಯ ವಿಶ್ವದ ಕುರಿತು ಅರಿತಿರುವುದು ಲೋಳೆಮೀನಿನಷ್ಟೇ.
ವಿಜ್ಞಾನ, ``ವೈಜ್ಞಾನಿಕ ತಿಳಿವಳಿಕೆ'' ಎನ್ನುವ ಕೂಪಗಳನ್ನು ನಾವಾಗಿ ನಮಗಾಗಿ ನಿರ್ಮಿಸಿಕೊಂಡು ಅದರಾಚೆಗೆ ನಮಗೆ ಕಾಣದ್ದು ಏನೂ ಇಲ್ಲವೆಂದು ಸಾಧಿಸುವವರು, ನಾವು, ಮಂಡೂಕಗಳೊ, ಬೆಪ್ಪರೊ? ನಿಜವಾದ ವಿಜ್ಞಾನದಲ್ಲಿ "ಗೊತ್ತಿಲ್ಲ"ಕ್ಕೆ ದೊಡ್ಡ ಸ್ಥಾನವಿದೆ. ನಮ್ಮ ವಿಜ್ಞಾನದಲ್ಲಿ "ಗೊತ್ತಿಲ್ಲ"ವೆಂದರೆ "ಇಲ್ಲ"ವೆಂದೆ.
ಈ human centric ದೃಷ್ಟಿ ನಿಜವಾಗಿ ನಮಗೆ, ಭಾರತೀಯರಿಗೆ, ಹೊಸದು. ವಿಸ್ತಾರವಾಗಿ ಚರ್ಚಿಸಿ, ತರ್ಕಿಸಿ, ತರ್ಕ ಸಾಲದೆ "ಕೋ ಅಯಂ" ಎಂದಿ ಜಿಜ್ಞಾಸೆ ಮಾಡಹೊರಟ ಭಾರತೀಯರು ಎಲ್ಲವನ್ನೂ ಬಿಟ್ಟು ಈ ದುರಹಂಕಾರದ ವಿಜ್ಞಾನವನ್ನು ಹಿಡಿದಿದ್ದೇವೆ. ನಾವು ನಿಜವಾಗಿ ಬೆಪ್ಪರು.
ವಿಚಿತ್ರ
ಈ ಲೇಖನ ತುಂಬಾ ವಿಭಿನ್ನವಾಗಿದೆ. 50ಕೋಟಿ ವರ್ಶದ ವಿಚಿತ್ರ ವಿಜ್ಞಾನ ತಲೆಯಿಂದ ಹೊರಗೇ ಹೋಗುತ್ತಿಲ್ಲ,ಅದೇನೇನೋ ಪ್ರಶ್ನೆಗಳು ಒಂದರ ನಂತರ ಒಂದರಂತೆ ಸೇರಿಕೊಳ್ಳುತ್ತಿವೆ.50ಕೋಟಿ ವರ್ಶಗಳ ಹಿಂದೆ ವಿಜ್ನಾನದ ಕಲ್ಪನೆಯೇ ಒಂದು ಪ್ರಶ್ನೆ. ವೈಜ್ಞಾನಿಕ ತಿಳುವಳಿಕೆ ಅಂದರೆ ನಿಜವಾಗಿಯೂ ಏನು? ತಾತ್ವಿಕತೆಯಲ್ಲಿ ತಾರ್ಕಿಕತೆ ಕಾಣುವುದಿಲ್ಲವೆ ಮತ್ತು ತಾರ್ಕಿಕತೆಗೂ ಮೂಲ ತಾತ್ವಿಕವಲ್ಲವೆ ? ಆ ಲೋಳೆ ಮೀನಿನ ವೈಜ್ಞಾನಿಕ ದೃಷ್ಟಿಯಲ್ಲಿ ಬೂಮಿಯೆಂಬುದು ಬೋಗುಣಿಯ ಅಂಚು ಎಂದಾದರೆ ಅದಕ್ಕೆ ಬೋಗುಣಿಯ ತಳದ ಪರಿವಿದೆಯೆ? ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂಬ ಪ್ರಶ್ನೆಗೆ ವೈಜ್ಞಾನಿಕ ಉತ್ತರವಿದೆಯೆ?
ಆ ಲೋಳೆ ಮೀನು ಉಳಿದೆಲ್ಲವೂ ತನಗಾಗಿ ಸೃಷ್ಟಿಯಾಯಿತು ಎಂದು ಬಾವಿಸಿ ಹೆಮ್ಮೆಪಡುತ್ತಿತ್ತೆ? ತಾನೇ ಸಂಕೀರ್ಣತೆಯ ಕೊನೆ ಎಂದು ಬಾವಿಸಿ ಹೆಮ್ಮೆಪಟ್ಟ ಲೋಳೆ ಮೀನಿನಂತೆ,ನಾವೂ ಮನುಷ್ಯ ,ಪ್ರಾಣಿಗಳೇ ಸಂಕೀರ್ಣ ಜೀವಿಗಳ ಕೊನೆ ಎಂದು ತಿಳಿದಿರುವೆವಾ? ಒಳ ಹೋದಂತೆ ಇನ್ನೂ ಅರ್ಥವಾಗದ ಅನೇಕ ಪ್ರಶ್ನೆಗಳು ..! ಇದನ್ನು ಓದಿದ ಪ್ರತಿಯೊಬ್ಬರಲ್ಲೂ ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ಪ್ರಶ್ನೆಗಳು ಮೂಡಿರಬಹುದು,ಆ ಪ್ರಶ್ನೆಗಳು ಹೊಸದೊಂದು ಹುಟ್ಟಿಗೆ ಮೂಲ ಹುಡುಕಾಟವಾಗಬಹುದು.ಈ ಲೇಖನ ತುಂಬಾ ಆಳಕ್ಕಿಳಿದು ನೋಡಬೇಕಾದ್ದಾಗಿದೆ.ಇಂತಹ ಲೇಖನ ನೀಡಿದ ಇಸ್ಮಾಯ್ಲ್ ಅವರಿಗೆ ಧನ್ಯವಾದಗಳು.ನನ್ನ ಮನದ ಪ್ರಶ್ನೆಗಳಿಗೆ ನಿಮಗನಿಸಿದ ಉತ್ತರ ನೀಡಿ,ನಾನು ವಿಜ್ಞಾನಿಯಂತೆ ತರ್ಕಿಸುವುದಿಲ್ಲ.