ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅನುವಾದ

ಮುಖ ನೋಡಿ ಮಣೆ ಹಾಕೋದು

ಉಡುಪು ತೊಡುವುದರಲ್ಲಿ ಇರಲಿ ತುಸು ಗಮನ
ಮಟ್ಟಕ್ಕೆ ತಕ್ಕುಡುಗೆ ಇದ್ದರದು ವಯಿನ*;
ಹಳದಿ ರೇಸಿಮೆಯುಟ್ಟವಗೆ ಮಗಳನೇ ಕೊಟ್ಟ
ಕಡಲೊಡೆಯ ತೊಗಲುಟ್ಟವಗೆ ನಂಜುಣಿಸಿಬಿಟ್ಟ!

ಸಂಸ್ಕೃತ ಮೂಲ:

ಕಿಂ ವಾಸಸೇತ್ಯತ್ರ ವಿಚಾರಣೀಯಮ್ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ
ಪೀತಾಂಬರಂ ವೀಕ್ಷ್ಯ ದದೌ ಸ್ವಕನ್ಯಾಂ ಚರ್ಮಾಂಬರಂ ವೀಕ್ಷ್ಯ ವಿಷಂ ಸಮುದ್ರಃ ||

किम् वाससॆत्यत्र पिचारणीयम् वासः प्रदानम् खलु यॊग्यतायाः |
पीतांबरम् वीक्ष्य ददौ स्वकन्यां चर्मांबरम् वीक्ष्य विषम् समुद्रः ||

-ಹಂಸಾನಂದಿ

ಕೊಸರು: ವಯಿನ, ವೈನ : ಸೊಗಸು, ತಕ್ಕದ್ದು, ಅಚ್ಚುಕಟ್ಟು

ಹೆಣ್ಣುಗಳ ಸಿಂಗಾರ

ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟ
ನಯವಾದ ಮೆಲುನುಡಿ ನಾಚಿಕೆಯ ನಸುನಗೆ
ಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆ
ಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಭ್ರೂ ಚಾತುರ್ಯಾಕುಂಚಿತಾಕ್ಷಾಃ ಕಟಾಕ್ಷಾಃ
ಸ್ನಿಗ್ಧಾ ವಾಚೋ ಲಜ್ಜಿತಾಶ್ಚೈವ ಹಾಸಾಃ |
ಲೀಲಾಮಂದ್ರಂ ಪ್ರಸ್ಥಿತಂ ಚ ಸ್ಥಿತಂ ಚ
ಸ್ತ್ರೀಣಾಮೇತದ್ ಭೂಷಣಂ ಚಾಯುಧಂ ಚ ||

-ಹಂಸಾನಂದಿ

ಗಟ್ಟಿಗರಿಗೂ ಇರಬೇಕು ಬೆಂಬಲ

ಗಟ್ಟಿಗನಾದರೂ ಬಲ್ಲವನಾದರೂ
ಒಬ್ಬನೇ ಏನನು ಮಾಡಬಹುದು?
ಸುಯ್ಯುವ ಗಾಳಿಯ ಬೆಂಬಲವಿಲ್ಲದ
ಕಿಚ್ಚದು ತಂತಾನೇ ನಂದುವುದು!

ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)

ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |
ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ ಪ್ರಶಾಮ್ಯತಿ ||

-ಹಂಸಾನಂದಿ

ಬೇಕಿರದ ವಸ್ತುಗಳು

ಮನ್ನಿಸುವ ಗುಣವಿರಲು ಕವಚವೇಕೆ?
ಮುಂಗೋಪಕಿಂತಲು ಹಿರಿಯ ಹಗೆಯುಂಟೆ?
ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?
ಮನವನವರಿವ ಗೆಳೆಯಗೆ ಮಿಗಿಲು ಮದ್ದಿರುವುದೇ?
ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?
ನೆಮ್ಮದಿಯ ತಿಳಿವಿರಲು ಹಣದ ಹಂಗೇಕೆ?
ನಾಚುವ ಮೊಗಕೆ ಬೇರೆ ಸಿಂಗರ ಬೇಕೆ?
ನಲ್ಗಬ್ಬಗಳನೋದಿ ನಲಿಯುವನು ಆಳಬಯಸುವನೆ?

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಕ್ಷಾಂತಿಶ್ಚೇದ್ಕವಚೇನ ಕಿಂ ಕಿಮರಿಭಿಃ ಕ್ರೋಧೋಸ್ತಿ ಚೇದ್ದೇಹಿನಾಂ
ಜ್ಞಾತಿಶ್ಚೇದನಲೇನ ಕಿಂ ಯದಿ ಸುಹೃದ್ದಿವ್ಯೌಷಧೈಃ ಕಿಂ ಫಲಂ |
ಕಿಂ ಸರ್ಪೈರ್ಯದಿ ದುರ್ಜನಾಃ ಕಿಮು ಧನೈರ್ವಿದ್ಯಾSನವದ್ಯಾ ಯದಿ
ವ್ರೀಡಾ ಚೇತ್ಕಿಮು ಭೂಷಣೈಃ ಸುಕವಿತಾ ಯದ್ಯಸ್ತಿ ರಾಜ್ಯೇನ ಕಿಂ ||

क्षान्तिश्चेद्कवचेन किं किमरिभि: क्रोधोऽस्ति चेद्देहिनां
ज्ञातिश्चेदनलेन किं यदि सुहृद्दिव्यौषधै: किं फलम्।
किं सर्पैर्यदि दुर्जना: किमु धनैर्विद्याऽनवद्या यदि  ಮುಂದೆ ಓದಿ »

ಸಮಗಾರ ಸಾವು

ಸಿಡಿಮದ್ದ ಸಿಡಿತದಲಿ ಮುರಿದು ಬಿದ್ದಿಹರಿಬ್ಬರು
ತಾಯ್ನಾಡ ಬಯಕೆಗೆ ಬಾಳ ನೈವೇದ್ಯವಿತ್ತ ಧೀರ ಯೋಧರು
ಹದಿನೆಂಟರ ಹರೆಯದ ಮುಗ್ಧನೊಬ್ಬ ಇನ್ನೂ ಬಲಿಯದ ಮೈ
ನಲ್ವತ್ತರ ಮತ್ತೊಬ್ಬ ಕಂಡಿಹನು ಯುದ್ಧಗಳ, ಬಡಿದಾಡಿಹನು  ಹೊಯ್ ಕಯ್

ಹರೆಯದ ಹುಡುಗನಿಗೆ ಪಳಗಿಲ್ಲ ಮೈ -ಮನ . ಅಳಿದಿಲ್ಲ ಹುಡುಗುತನ
ಎಳೆಯ ಹೃದಯದಲ್ಲಿನ್ನೂ ಕಳೆದಿಲ್ಲ ಮಗುತನ ಮೊಳೆತಿಲ್ಲ ಧೀರತನ
ತುಕಡಿಗವ ನಿಮಿತ್ತ,  ಯುದ್ದದಾವೇಶಕೆ ಬಲಿಯಾದ ಮೇಷ
ಮರಣದ ಮುಂದು ಸಿಡಿದ ಬೈಗಳೋ, ದೇವನನೇ ಕೊಲ್ಲುವಾವೇಶ.  ಮುಂದೆ ಓದಿ »

ಕ್ಷಮೆ ಎಂಬ ಆಯುಧ

ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆ
ಕೆಟ್ಟವರು ಏನ ತಾ ಮಾಡಬಹುದು?
ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿ
ತನ್ನಿಂದಲೇ ತಾ ನಂದಿ ಹೋಗುವುದು!

ಸಂಸ್ಕೃತ ಮೂಲ:

ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |
ಅತೃಣೇ ಪತಿತೋ ವಹ್ನಿಃ ಸ್ವರ್ಯಮೇವೋಪಶಮ್ಯತಿ ||

क्षमा शस्त्रं करे यस्य दुर्जनः किं करिष्यति।
अतृणे पतितो वह्निः स्वयमेवोपशाम्यति॥

-ಹಂಸಾನಂದಿ

(ಇದೇ ತಾನೇ ಫೇಸ್‍ಬುಕ್ ನಲ್ಲಿ ಗೆಳೆಯರೊಬ್ಬರ ಪುಟದಲ್ಲಿ ಓದಿದ ಸುಭಾಷಿತ ಇದು)

ಕೇಡಿಗನ ನಂಜು

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

ಸಂಸ್ಕೃತ ಮೂಲ:

ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||

-ಹಂಸಾನಂದಿ

ಕೊ.ಕೊ: ಚಾಮರಾಜ ಸವಡಿಯವರ ’ವಿಷದ ಗಿಡ’ ಮತ್ತೆ, ಅದಕ್ಕೆ ಬಂದ ಅಡಿಟಿಪ್ಪಣಿಗಳನ್ನು ಓದಿದಾಗ, (http://sampada.net/b...) ಎಂದೋ ಮಾಡಿದ್ದ ಈ ಅನುವಾದ ನೆನಪಾಯ್ತು. ಒಂದೆರಡು ಚಿಕ್ಕ ಬದಲಾವಣೆಗಳೊಡನೆ ಹಾಕಿರುವೆ.

ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ ಬಿಡದಿರುವುದೇ ಲೇಸು.

ಸಂಸ್ಕೃತ ಮೂಲ:

ವಾಕ್ಸಾಯಕಾ ವದನಾನ್ನಿಷ್ಪತಂತಿ
ಯೈರಾಹತಃ ಶೋಚತಿ ರಾತ್ರ್ಯಹಾನಿ |
ಪರಸ್ಪರಂ ಮರ್ಮಸು ತೇ ಪತಂತಿ
ತಾನ್ ಪಂಡಿತೋ ನಾಪಸೃಜೇತ್ಪರೇಷು ||

-ಹಂಸಾನಂದಿ

ಜೊತೆಬಾಳ್ವೆ

ಅಡವಿಯ ತೊರೆದ ಹುಲಿಯ ಕೊಲುವರು
ಹುಲಿಯಿರದ ಅಡವಿಯನೆ ಕಡಿವರು
ಹುಲಿಗೆ ಇರಬೇಕು ಅಡವಿಯ ಕಾವಲು
ಅಡವಿಗಾದರೋ ಹುಲಿಯೇ ಕಾವಲು

ಸಂಸ್ಕೃತ ಮೂಲ (ಮಹಾಭಾರತ, ಉದ್ಯೋಗಪರ್ವ ೨೯-೫೫):

ನಿರ್ವನೋ ವಧ್ಯತೇ ವ್ಯಾಘ್ರೋ ನಿರ್ವ್ಯಾಘ್ರಂ ಛಿದ್ಯತೇ ವನಂ|
ತಸ್ಮಾತ್ ವ್ಯಾಘ್ರೋ ವನಂ ರಕ್ಷೇತ್ ವನಂ ವ್ಯಾಘ್ರಂ ಚ ಪಾಲಯೇತ್ ||

-ಹಂಸಾನಂದಿ

ಕೈಗೆಟುಕುವ ದೇವರು

ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದು
ಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?

ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||

-ಹಂಸಾನಂದಿ

Syndicate content