ಮುಲ್ಲಾ ಕಥೆ: ಊಟಕ್ಕೆ ಬಂದ ವಿದ್ವಾಂಸ
ನಸ್ರುದ್ದೀನ್ ಮುಲ್ಲಾ ಒಮ್ಮೆ ವಿದ್ವಾಂಸನೊಬ್ಬನನ್ನು ತನ್ನ ಮನೆಗೆ ಊಟಕ್ಕೆ ಕರೆದ. ವಿದ್ವಾಂಸನಿಗೋ ಬಹಳ ಗರ್ವ. ಮುಲ್ಲಾನ ಮನೆಗೆ ಬಂದ. ಬಾಗಿಲು ತಟ್ಟಿದ. ಮತ್ತೆ ತಟ್ಟಿದ. ಉತ್ತರವಿಲ್ಲ. ಕಿಟಕಿಯೊಳಗೆ ಇಣುಕಿದ. ಯಾರೂ ಇಲ್ಲ. ಕ್ಷಣ ಕ್ಷಣಕ್ಕೂ ವಿದ್ವಾಂಸನ ಕೋಪ ಏರುತ್ತಿತ್ತು. “ನಾನು ಯಾರು ಎಂದು ಮುಲ್ಲಾಗೆ ಗೊತ್ತಿಲಲವೇ? ನನ್ನಂಥವನನ್ನು ಕಾಯಿಸುವುದೇ? ನನ್ನ ಪಾಂಡಿತ್ಯಕ್ಕೆ ಅವಮಾನ, ನನಗೆ ಅವಮಾನ” ಎಂದು ಕುದಿ ಕುದಿದು ಮತ್ತೆ ಮನೆಯ ಮುಂಭಾಗಕ್ಕೆ ಬಂದ. ಮುಲ್ಲಾನ ಮನೆಯ ಬಾಗಿಲ ಮೇಲೆ ದೊಡ್ಡದಾಗಿ “ಮೂರ್ಖ” ಎಂದು ಬರೆದು ಹೊರಟುಬಿಟ್ಟ.
ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ಮುಲ್ಲಾ ಮನೆಗೆ ಬಂದ. ತಕ್ಷಣ ಅವನಿಗೆ ವಿದ್ವಾಂಸನ ನೆನೆಪು ಬಂತು. ಮತ್ತೆ ಪೇಟೆ ಬೀದಿಗೆ ಓಡಿದ. ವಿದ್ವಾಂಸನನ್ನು ಹುಡುಕಿದ. “ದಯವಿಟ್ಟು ಕ್ಷಮಿಸಿ. ನೀವು ಊಟಕ್ಕೆ ಬರುವುದು ಮರೆತೇ ಹೋಗಿತ್ತು. ನಮ್ಮ ಮನೆಯ ಬಾಗಿಲ ಮೇಲೆ ನಿಮ್ಮ ಹೆಸರು ಬರೆದಿದ್ದಿರಲ್ಲ ಅದನ್ನು ನೋಡಿದ ಕೂಡಲೆ ನೆನಪಿಗೆ ಬಂತು. ದಯವಿಟ್ಟು ಬನ್ನಿ” ಎಂದ.
[ವಿದ್ಯೆ ನಿಜವಾಗಲೂ ವಿನಯವನ್ನು ಕಲಿಸೀತೆ!]

- Login or register to post comments
- 908 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ವಿದ್ಯೆ ವಿನಯ
ವಿದ್ಯೆ ನಿಜವಾಗ್ಲೂ ವಿನಯ ಕಲಿಸುತ್ತೋ ಇಲ್ವೋ ಹೀಳಲಿಕ್ಕಾಗುವುದಿಲ್ಲ. ಆದರೆ ಈ ಶ್ಲೋಕ ನೋಡಿ.
ವಿದ್ಯಾ ದದಾತಿ ವಿನಯಂ,
ವಿನಯಾತ್ ಯಾತಿ ಪಾತ್ರತಾಂ,
ಪಾತ್ರತ್ವಾತ್ ಧನಂ ಆಪ್ನೋತಿ,
ಧನಾತ್ ಧರ್ಮ ತಥಃ ಸುಖಂ
ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ.