ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
ಪುಸ್ತಕಗಳನ್ನು ಓದುವ/ಇಟ್ಟುಕೊಳ್ಳುವ ಬಗ್ಗೆ ಇಲ್ಲಿ ಹಿಂದೊಮ್ಮೆ ಚರ್ಚೆ ಶುರುವಾಗಿತ್ತು . ನಾನು ಆಗ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ ; ಏಕೆಂದರೆ ನಾನೂ ಆ ಬಗ್ಗೆಯೇ ವಿಚಾರ ಮಾಡುತ್ತಿದ್ದೆ, ಏನೊಂದೂ ತೀರ್ಮಾನಕ್ಕೆ ಬಂದಿರಲಿಲ್ಲ ;
ನಾನೂ ಎಷ್ಟೋ ಪುಸ್ತಕ ಕೊಳ್ಳುತ್ತಿದ್ದೆ, ಕೊಳ್ಳುತ್ತ ಬಂದಿದ್ದೇನೆ. ಇನ್ನು ಮುಂದೆ ಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ.
ಆದರೆ ಅನೇಕ ಒಳ್ಳೆಯ ಪುಸ್ತಕ ನನ್ನ ಹತ್ತಿರ ಸಂಗ್ರಹವಾಗಿವೆ , ಮಾಸ್ತಿ , ಪಿ. ಲಂಕೇಶ್ , ಜಯಂತ ಕಾಯ್ಕಿಣಿ ಅವರ ಪುಸ್ತಕಗಳು , ನಾನೇಕೆ ನಾಸ್ತಿಕ? (ಭಗತ್ ಸಿಂಗ್ ) ಪುಸ್ತಕ , ಎ ಎನ್ ಮೂರ್ತಿರಾಯರ ಪೂರ್ವಸೂರಿಗಳೊಡನೆ. ಎಸ್. ಕೆ. ನಾಡಿಗ್ ರ ವ್ಯಂಗ್ಯಚಿತ್ರ ಪುಸ್ತಕ , ಬಿ.ಜಿ.ಎಲ್. ಸ್ವಾಮಿ , ಶ್ರೀನಿವಾಸ ವೈದ್ಯ ಅವರ ಹಾಸ್ಯಪುಸ್ತಕಗಳು, ಉಡುಪಿ ಚಿತ್ರಕುಟೀರದ ರಂಗೋಲಿ ಪುಸ್ತಕಗಳು. ರಂಗಣ್ಣನ ಕನಸಿನ ದಿನಗಳು , ಈಶ್ವರಯ್ಯ ಅವರ ಸರಸ ,ಕತ್ತರಿಸಿಟ್ಟುಕೊಂಡ ಅ. ರಾ. ಸೇ. ಅವರ ಹಾಸ್ಯ ಲೇಖನಗಳು , 'ಪುಟ್ಟ ರಾಜಕುಮಾರ' , ಗಂಗವ್ವ ಗಂಗಾಮಾಯಿ, ತೇಜಸ್ವಿಯವರ ಜುಗಾರಿ ಕ್ರಾಸ್ ,ಚಿದಂಬರ ರಹಸ್ಯ ಇವೆಲ್ಲ ಸದಾಕಾಲಕ್ಕೂ ಸಂತೋಷ ಕೊಡುವ ಪುಸ್ತಕಗಳು. ಇವುಗಳಿಂದ ನಾನು ಅಗಲಲಿಕ್ಕಿಲ್ಲ . ಯಾವಾಗ ಬೇಕೆಂದರೆ ಓದಿದರೆ ಸಂತೋಷ ಕೊಡುತ್ತವೆ . ಇನ್ನೇನು ಬೇಕು? ನಮಗೆ ಸಂತೋಷವಾದರೆ ಆಯಿತಲ್ಲವೆ ?
ಇನ್ನು ಉಳಿದ ಪುಸ್ತಕಗಳನ್ನು ಏನು ಮಾಡಬೇಕು ಅನ್ನುವ ಪ್ರಶ್ನೆ . ಓದಬೇಕು ಎಂದು ತಂದು ಓದಿಸಿಕೊಳ್ಳದ ಪುಸ್ತಕಗಳು , ಸಾಮಾನ್ಯವೆನಿಸಿದ ಪುಸ್ತಕಗಳು , ನಾನು ಇನ್ನೊಮ್ಮೆ ಎಂದೂ ಓದಬಯಸದ ಪುಸ್ತಕಗಳನ್ನು ಹೇಗೆ ವಿಲೇವಾರಿ ಮಾಡಬೇಕು ? ಹಾಗೆ ವಿಲೇವಾರಿ ಮಾಡಿದಾಗ ತಾನೆ ಹೊಸವಕ್ಕೆ ಜಾಗ ? ಯಾರಿಗಾದರೂ ಕೊಡೋಣವೆಂದರೆ ಇವತ್ತು ಓದುಗರೇ ಕಮ್ಮಿ , ಬಲವಂತಕ್ಕೆ ಯಾರು ಓದಿಯಾರು ? ಸೆಕಂಡ್ ಹ್ಯಾಂಡ್ ಅಂಗಡಿಗೆ ಕೊಡೋಣವೆಂದರೆ , ನಾನಿರುವದು ಮುಂಬೈಯಲ್ಲಿ. ಹಾಗೇ ಇಟ್ಟುಕೊಂಡರೆ ಇವುಗಳಿಗಾಗಿ ನಾವು ಖರ್ಚು ಮಾಡಿದ ಹಣ ನೆನಪಾಗುತ್ತದೆ. ಅದಕ್ಕೆ ನೇರವಾಗಿ ದಿನಪತ್ರಿಕೆಗಳೊಂದಿಗೆ ರದ್ದಿಗೆ ಹಾಕಿಬಿಡುತ್ತೇನೆ.
ನನ್ನ ಓದಿನ ಸಂತೋಷ ಹಂಚಿಕೊಳ್ಳಲಿಕ್ಕೆ ಸಂಪದ ಒಳ್ಳೆಯ ಮಾರ್ಗ ತೋರಿತು. ಪುಸ್ತಕ ವಿಮರ್ಶೆ ಅನ್ನುವ ದೊಡ್ಡ ಹೆಸರಿನಡಿಯಲ್ಲಿ ನನಗೆ ಸಂತೋಷ ಕೊಟ್ಟ ಪುಸ್ತಕಗಳ ಬಗ್ಗೆ ನನ್ನ ತಿಳುವಳಿಕೆಯ ಮಿತಿಯಲ್ಲಿ ಬರೆಯುತ್ತಿದ್ದೇನೆ. ನಾನು ಒಳ್ಳೆಯ ಟಾಯಪಿಸ್ಟ್ ಅಲ್ಲವಾದ್ದರಿಂದ ಕಡಿಮೆ ಪದಗಳಲ್ಲಿ ಸಂತೋಷಕೊಟ್ಟ ಓದಿನ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ. ಯಾರಿಗಾದರೂ ಇದರಿಂದ ಉಪಯೋಗವಾದರೆ ಅಥವಾ ತೋರು ಬೆರಳಿನಂತೆ ಮಾರ್ಗದರ್ಶಿಯಾದರೆ ಸಾಕು.
ಪುಸ್ತಕಗಳನ್ನು ಯಾಕೆ ಸಂಗ್ರಹಿಸಬೇಕು , ನಮ್ಮ ಮಕ್ಕಳು ಓದುತ್ತವೆಯೇ ? ಎಂದಾರೋ ವಿಚಾರ ಮಾಡಿದ್ದಾರೆ . ಯಾವುದನ್ನೇ ಏಕೆ ಸಂಗ್ರಹಿಸುತ್ತೇವೆ ? ಬೆಲೆಯುಳ್ಳದ್ದೆಂದೋ ಅಥವಾ ಮುಂದೆ ಉಪಯೋಗ ಬಂದೀತೆಂದೋ ತಾನೆ ? ಆಸ್ತಿ ಯಾಕೆ ಮಾಡಿಡುತ್ತಾರೆ , ಮಕ್ಕಳು ಹಾಳು ಮಾಡಬಹುದಲ್ಲವೆ , ನಾವು ಕಟ್ಟಿದ ಮನೆಯಲ್ಲಿ ಅವರು ಇರುವ ಸಾಧ್ಯತೆ ಎಷ್ಟು ? ಹಾಗೆಯೇ ಪುಸ್ತಕಗಳು ಕೂಡ. ನಮಗೆ ಸಂತೋಷ , ಲಾಭ ಕೊಟ್ಟ ಪುಸ್ತಕಗಳು ಮುಂದೂ ನಮಗೂ ನಮ್ಮ ಮಕ್ಕಳಿಗೂ ಸಂತೋಷ ಕೊಡಲಿ ಎಂದು ಸಂಗ್ರಹಿಸೋಣ. ಇತರ ಪುಸ್ತಕಗಳನ್ನು ವಿಲೇವಾರಿ ಮಾಡೋಣ . ಚಂ. ಪಾ. ರವರು ತಮ್ಮ ಕವನದಲ್ಲಿ
ಹೂವು , ತಾರೆ , ಹೆಣ್ಣಿನ ಬಗ್ಗೆ
ನಾವು ಹಾಡುವದು ಬೇಡ
ಅಂತ ಹೇಳುವದು ಬೇಡ ಗೆಳೆಯ
ಎಂದು ಹೇಳುವ ಹಾಗೆ ಪುಸ್ತಕಗಳ ಸಂಗ್ರಹವೇ ಬೇಡ , ಓದುವದೇ ಬೇಡ ಎನ್ನುವದು ಬೇಡ.

- Login or register to post comments
- 2981 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಪ್ರತಿಕ್ರಿಯೆಗಳು
ಪುಸ್ತಕ ಕಳೆದುಕೊಳ್ಳುವ ಬಗೆ
ನಿಮ್ಮ ಸಮಸ್ಯೆಗೆ ಎರಡು ಪರಿಹಾರಗಳು-
೧. ಮುಂಬಯಿಯ ವಿಲೇ ಪಾರ್ಲೆ ಸ್ಟೇಶನ್ನಿಂದ ಪೂರ್ವಕ್ಕೆ ಹೊರಕ್ಕೆ ಬನ್ನಿ. ಅಲ್ಲೇ ಒಂದು ಸರ್ಕುಲೇಟಿಂಗ್ ಲೈಬ್ರರಿ ಇದೆ. "ಇಲ್ಲಿ ಕನ್ನಡ ಪುಸ್ತಕಗಳು ದೊರೆಯುತ್ತವೆ" ಎಂಬುದಾಗಿ ಕನ್ನಡದಲ್ಲಿ ಬೋರ್ಡು ನೇತಾಡುತ್ತಿರುತ್ತದೆ. ಅವನಿಗೆ ನಿಮ್ಮ ಪುಸ್ತಕಗಳನ್ನು ಮಾರಿ ಅಥವಾ ದಾನ ಮಾಡಿ.
೨. ಒಬ್ಬರು ನನ್ನಿಂದ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಪುಸ್ತಕವನ್ನು ಓದಲೆಂದು ಎರವು ಪಡೆದವರು ಅದನ್ನು ಇನ್ನೂ ಹಿಂದಿರುಗಿಸಿಲ್ಲ. ಹಿಂದಿರುಗಿಸುವ ಭರವಸೆಯೂ ಇಲ್ಲ. ಇಂತಹ "ಆಪ್ತಮಿತ್ರ"ರನ್ನು ಸಂಪಾದಿಸಿ:-)
ಸಿಗೋಣ,
ಪವನಜ
-----------
Vishva Kannada
Think globally, Act locally
ಪುಸ್ತಕಗಳನ್ನು ಗ್ರಂಥಾಲಯಗಳಿಗೆ ದಾನ ಮಾಡಿ
ಮತ್ತೊಂದು ಆಲೋಚನೆ:
ನಿಮ್ಮಲ್ಲಿರುವ ಪುಸ್ತಕಗಳನ್ನು ಮುಂಬಯಿಯಲ್ಲಿರುವ ಕನ್ನಡ ಶಾಲೆ, ಕಾಲೇಜು, ಸಂಘಗಳ ಗ್ರಂಥಾಲಯಗಳಿಗೆ ದಾನ ಮಾಡಿ. ಮಾತುಂಗದಲ್ಲಿ ಕರ್ನಾಟಕ ಸಂಘ ಮತ್ತು ಮೈಸೂರು ಅಸೋಸಿಯೇಶನ್ ಇವೆ. ಭಾಭಾ ಪರಮಾಣು ಸಂಶೋಧನ ಕೇಂದ್ರದ ವಿಜ್ಞಾನಿಗಳ ಕನ್ನಡ ಸಂಘವೂ ಇದೆ. ನಾನು ಅದರ ಸಕ್ರಿಯ ಕಾರ್ಯಕರ್ತನಾಗಿದ್ದೆ. ನಾವು ಬೆಳಗು ಎಂಬ ಹೆಸರಿನಲ್ಲಿ ವಿಜ್ಞಾನ ಪತ್ರಿಕೆಯನ್ನು ತರುತ್ತಿದ್ದೆವು. ನಾನು ಅದಕ್ಕೆ ಮೊತ್ತಮೊದಲ ಬಾರಿಗೆ ಡಿಟಿಪಿ ವಿಧಾನವನ್ನು ಬಳಸಿದೆ. ಈ ಕನ್ನಡ ಸಂಘದ ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿವೆ. ನಾನು ಬಿಡುವ ವೇಳೆಗೆ ಸುಮಾರು ಆರು ಸಾವಿರ ಪುಸ್ತಕಗಳಿದ್ದವು. ನೀವು ಅವರಿಗೆ ನಿಮ್ಮ ಪುಸ್ತಕಗಳನ್ನು ದಾನ ಮಾಡಬಹುದು. ಅದಕ್ಕಾಗಿ ಗುರದತ್ತ ಬಾಳಿಗರನ್ನು ಸಂಪರ್ಕಿಸಿ. ಅವರ ದೂರವಾಣಿ ಸಂಖ್ಯೆಗಳು- 255790714, 25579641, 9869872773
ಸಿಗೋಣ,
ಪವನಜ
-----------
Vishva Kannada
Think globally, Act locally
Re: ಪುಸ್ತಕ ಕಳೆದುಕೊಳ್ಳುವ ಬಗೆ
೨. ಒಬ್ಬರು ನನ್ನಿಂದ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಪುಸ್ತಕವನ್ನು ಓದಲೆಂದು ಎರವು ಪಡೆದವರು ಅದನ್ನು ಇನ್ನೂ ಹಿಂದಿರುಗಿಸಿಲ್ಲ. ಹಿಂದಿರುಗಿಸುವ ಭರವಸೆಯೂ ಇಲ್ಲ. ಇಂತಹ "ಆಪ್ತಮಿತ್ರ"ರನ್ನು ಸಂಪಾದಿಸಿ:-)
ಸಿಗೋಣ,
ಪವನಜ
'ಪುಸ್ತಕಂ ವನಿತಾ ವಿತ್ತಂ ಪರಹಸ್ತ ಗತಂ ಗತಂ' !
ಈಗಿನ ಕಾಲದಲ್ಲಿ ಬೇಕಿದ್ದರೆ ಸಿ.ಡಿ, ಡಿ.ವಿ.ಡಿ ಗಳನ್ನೂ ಸೇರಿಸಬಹುದು ಈ ಪಟ್ಟಿಗೆ.
- ಶ್ರೀವತ್ಸ ಜೋಶಿ
ಪುಸ್ತಕಗಳನ್ನು ಏನು ಮಾಡಿದಿರಿ?
ಕಡೆಗೂ ಪುಸ್ತಕಗಳನ್ನು ನೀವು ಏನು ಮಾಡಿದಿರಿ? ನನ್ನ ಸಲಹೆಗಳು ಉಪಯೋಗಕ್ಕೆ ಬಂದವೇ?
ಸಿಗೋಣ,
ಪವನಜ
-----------
Vishva Kannada
Think globally, Act locally
ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು .
ಸದ್ಯ ಪುಸ್ತಕಗಳನ್ನು ರದ್ದಿಗೆ ಹಾಕುವದನ್ನು ನಿಲ್ಲಿಸಿದ್ದೇನೆ. ಬೇಡದ ಪುಸ್ತಕಗಳನ್ನು ಒಂದೆಡೆ ಇಡುತ್ತಿದ್ದೇನೆ.
ಒಂದು ದಿನ ನೀವು ಹೇಳಿದ ವಿಲೆಪಾರ್ಲೆ ಅಂಗಡಿ ಹುಡುಕುತ್ತೇನೆ.
ಇನ್ನೊಂದು ಸಣ್ಣ ವಿಚಾರ ; ನನಗೆ ಬೇಡದ ಪುಸ್ತಕಗಳು ಬಹುಶ: ಇನ್ನಾರಿಗೂ ಬೇಡ! . ಏನೇ ಇರಲಿ . ರದ್ದಿ ಹಾಕುವದಿಲ್ಲ .
ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು .
(ಸ್ವಲ್ಪ ದಿನ ನಾನು ಅಂತರ್ಜಾಲದಿಂದ ದೂರವಿದ್ದು ಸಂಪದ ನೋಡಿರಲಿಲ್ಲ ; ಹಾಗಾಗಿ ನಿಮಗೆ ಧನ್ಯವಾದ ಹೇಳುವದು ತಡ ಆಯಿತು. )
Re: ನಿಮ್ಮ ಸಲಹೆಗೆ ಬಹಳ ಧನ್ಯವಾದಗಳು .
ಅವು ನಿಮ್ಮ ಸಮಯವನ್ನು ಬೇಡುವುದಿಲ್ಲವಾದ್ದರಿಂದ 'ಬೇಡದ' ಪುಸ್ತಕಗಳು?
ಬೇಡ + ಆದ ಎಂದು ವಿಗ್ರಹವಾಕ್ಯ. ಲೋಪಸಂಧಿಯಲ್ಲಿ ಪೂರ್ವಪದದ ಕೊನೆಯ ಸ್ವರ ಲೋಪವಾಗುವುದೇ ಹೊರತು ಉತ್ತರಪದದ ಮೊದಲ ಸ್ವರ ಲೋಪವಾಗುವುದು ಅಲ್ಲ. ಹಾಗಾಗಿ 'ಬೇಡಾದ' ಸರಿಯಾದ ಪ್ರಯೋಗ.
ಭಾಷಾಶುದ್ಧಿ ದೃಷ್ಟಿಯಿಂದ ಇದನ್ನು ಇಲ್ಲಿ ಬರೆದೆ; ಕಾಲೆಳೆಯಲು/ಕಿಚಾಯಿಸಲು ಅಲ್ಲ. ಅನ್ಯಥಾ ಭಾವಿಸಬೇಡಿ
- ಶ್ರೀವತ್ಸ ಜೋಶಿ
punಡಿತರಿಗೊಂದು ಪ್ರಶ್ನೆ
ಸ್ವಾಮಿ punಡಿತರೇ,
ಸಾಹಿತ್ಯಕ್ಕೆ ಸಂಬಂಧಿಸಿದ್ದು ಸಾಹಿತ್ಯಕ. ಹಾಗೆಯೇ ಬಾಲಕ್ಕೆ ಸಂಬಂಧಿಸಿದ್ದು ಬಾಲಕ ಆಗುವುದೇ?
ಸಿಗೋಣ,
ಪವನಜ
-----------
Vishva Kannada
Think globally, Act locally
ಬಾಲ + ಕ = ಬಾಲಕ?
ಆದೀತು, ಹಾಗೆಯೇ ಲೋಲ ನಿಗೆ ಸಂಬಂಧಿಸಿದ್ದು ಲೋಲಕ? (absolutely no pun intended
ಆದರೆ ಹೀಗೆ 'ಕ' ಪ್ರತ್ಯಯವನ್ನು ಸೇರಿಸುವ ರೂಢಿ ಶುರುವಾದರೆ ಆಮೇಲೆ ನೀವೇ 'ತೆ'ಗಳಿಕೆ ಕುರಿತು ಹಿಂದೊಮ್ಮೆ ವ್ಯಾಖ್ಯಾನಿಸಿದಂತೆ (http://vishvakannada.com/node/180) 'ಕ' ಗಂಟುಹಾಕುವುದರ ಕುರಿತು 'ಕ'ಗ್ಗಂಟು ಎಂದು ವಿವರವಾದ ಲೇಖನವನ್ನು ಬರೆಯಬೇಕಾದೀತು! ಸಿದ್ಧರಿದ್ದೀರಾ?
- ಶ್ರೀವತ್ಸ ಜೋಶಿ
ಬಾಲಗ್ರಹ
ಹಾಗಾದರೆ ಬಾಲಕ್ಕೆ ಗ್ರಹದೋಷ ಬಂದರೆ ಬಾಲಗ್ರಹ ಎಂದಾಗುತ್ತದೆಯೇ??
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಬಾಲಗ್ರಹ
ಹಾಗಾದರೆ ಬಾಲಕ್ಕೆ ಗ್ರಹದೋಷ ಬಂದರೆ ಬಾಲಗ್ರಹ ಎಂದಾಗುತ್ತದೆಯೇ
ಬಾಲಗ್ರಹ = ಬಾಲ ಇರುವ ಗ್ರಹ = ಧೂಮಕೇತು ಎಂದೂ ಅರ್ಥೈಸಿಕೊಳ್ಳಬಹುದೇನೋ?
ಅಥವಾ ಗ್ರಹದ ಬಾಲ್ಯಾವಸ್ಥೆಯೂ ಅಗಬಹುದೇನೋ?
ಬಾಲವಿಜ್ಞಾನ ಎಂದರೆ? ಕೆಳಗಿನ ಕಾರ್ಟೂನು ನೋಡಿ

ಸಿಗೋಣ,
ಪವನಜ
Re: ಬಾಲಗ್ರಹ
ಹಾಗಾದರೆ ಬಾಲಕ್ಕೆ ಗ್ರಹದೋಷ ಬಂದರೆ ಬಾಲಗ್ರಹ ಎಂದಾಗುತ್ತದೆಯೇ
ಇಂದಿನ ಕೊನೆಯ ಅನಿಸಿಕೆ....
ಬಾಲಗ್ರಹ ಎಂದರೆ ಹೆಚ್ಚಾಗಿ, ಬಾಲ(ಮಗು)ನಿಗೆ, ಗ್ರಹಪೀಡೆಯೆಂಬ ಅರ್ಥದಲ್ಲಿ. ಇದು ಎರಡು ಸಂಸ್ಕೃತ ಮೂಲದ ಪದಗಳಿಂದಾದ ಸಮಾಸ ಪದ.
ಕನ್ನಡದಲ್ಲಿ ಬಾಲವೆಂದರೆ ಪೃಚ್ಛೆ, tail, ಲಾಂಗೂಲ ಎಂದು ಅರ್ಥ.
ಸಾಮಾನ್ಯವಾಗಿ ಸಮಾಸ(ಎರಡಕ್ಕಿಂತ ಹೆಚ್ಚು ಪದಗಳನ್ನು ಸೇರಿಸುವುದು)ಕ್ರಿಯೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಮೂಲ ಪದಗಳನ್ನು ಬರೆಸುವುದು ವಿರಳ. ಹಾಗೆ ಮಾಡಿದಾಗ ಅರ್ಥ ವ್ಯತ್ಯಯವಾಗಬಹುದು.
ಇದೆ ರೀತಿ ಇನ್ನು ಹಲವು ಪದಗಳಿವೆ...
ಉದಾ:
ಕನ್ನಡ = ಅಱಿ(ತಿಳಿ), ಅರಿ(ತೇಯ್ಯಿ, ಅರಿಯುವುದು, ರುಬ್ಬುವುದು?),
ಸಂಸ್ಕೃತ = ಅರಿ(ವೈರಿ)
ಕನ್ನಡ = ಮಾತಾಡಯ..(ಕವನದ ಶೈಲಿಯಲ್ಲಿ, ಮಾತಾಡುವುದಿಲ್ಲವೆ ಎಂದು)
ಸಂಸ್ಕೃತ = ಮಾ ತಾಡಯ (ಹೊಡೆಯಬೇಡ)
ಕನ್ನಡ = ಕಂಡಿತ, ಖಂಡಿತ(ನಿಶ್ಚಿತವಾಗಿ)
ಸಂಸ್ಕೃತ = ಖಂಡಿತ(ತುಂಡು, ತುಂಡಾದ)
ಕನ್ನಡ = ತುಂಡ (ಉದ್ದ ಸಾಲದ, ತುಂಡದಾದ)
ಸಂಸ್ಕೃತ = ತುಂಡ(ಮುಖ, ವದನ, ಉದಾ ವಕ್ರತುಂಡ)
ಇನ್ನು ಬಾಲವಿಜ್ಞಾನ ಅಂದರೆ ಬಾಲರಿಗೆ(ಮಕ್ಕಳಿಗಾಗಿ) ವಿಜ್ಷಾನವೆಂದು.
ಇವು ನನ್ನ ತಿಳಿವಳಿಕೆಯ ಮಟ್ಟಿಗೆ ಸರಿ, ನನ್ನ ಅಭಿಪ್ರಾಯಗಳು. ಇವು ತಪ್ಪಾಗಿರುವ ಸಾಧ್ಯತೆಗಳಿರ ಬಹುದು.
ಎಲ್ಲ ವಾಕ್ಯಗಳು ವಿನಯಪೂರ್ವಕವಾಗಿಯೆ ಬರೆದಿದ್ದೇನೆ, ಯಾರಿಗೆ ಕೂಡ ಆಜ್ಞೆ ಮಾಡಿಲ್ಲ.
ಧನ್ಯವಾದ...
ಶುಭಮಸ್ತು!
ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ
ನಾನು ಚೇಷ್ಟೆಗಾಗಿ ಬರೆದದ್ದು ಮಾರಾಯ್ರೆ..
೧) ಬಾಲಗ್ರಹ ಮೊದಲ ೮ ವರ್ಷಗಳ ಕಾಲದ ವ್ಯಾಧಿ. ಈ ೮ ವರ್ಷಗಳಲ್ಲಿ ಮಕ್ಕಳು ಮಂಕಾಗಿಯೂ, ವಿನಾಕಾರಣ ಅನೇಕ ಗಂಭೀರ ವ್ಯಾಧಿಗಳಿಗೆ ತುತ್ತಾಗುತ್ತಿರುತ್ತಾರೆ ಎಂದು ನಂಬಿಕೆ.
೨)ಕನ್ನಡದಲ್ಲಿ ಕಂಡಿತ ಸರಿಯಾದ ಪ್ರಯೋಗವಲ್ಲ. ಬೇರೆಯೆಲ್ಲಾ ಸರಿಯಾದ ಅಭಿಪ್ರಾಯಗಳು.
ಬಾಲವಿಜ್ಙಾನ ಸರಿಯಾಗಿದೆ. ಆದರೆ "ಬಾಲಸುಂದರ"ದ್ದು ಬೇರೆಯೇ ಕಥೆ. ಅದು ಧೇನುಕಾ ಸಮಾಸ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಬಾಲಗ್ರಹ-ಬಾಲವಿಜ್ಙಾನ-ಬಾಲಸುಂದರ
ನಾನು ಚೇಷ್ಟೆಗಾಗಿ ಬರೆದದ್ದು ಮಾರಾಯ್ರೆ..
ನಾನೂ ಚೇಷ್ಟೆಗೇ ಬರೆದದ್ದು. ಬಾಲಗ್ರಹ ಎಂದರೆ ಏನೆಂದು ನನಗೆ ತಿಳಿಧಿತ್ತು.
ಸಿಗೋಣ,
ಪವನಜ
ತರಲೆ
ತಮಗೆ ತಿಳಿದಿದೆ ಎಂದು ಗೊತ್ತು ಮಾರಾಯ್ರೆ. ಮಹೇಶ್ ಅವರು ನನ್ನ ತರಲೆಗಳನ್ನು ಗಂಭೀರವಾಗಿ ತೆಗೆದುಕೊಂಡಂತೆ ಅನ್ನಿಸಿತು ಅಷ್ಟೆ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಬಾಲಂಗೋಚಿ
ಸಿರಿಗನ್ನಡಂ ಬಾಲ್ಗೆ
ಬಾಲದ ಬಗ್ಗೆ ಸಿರಿಗನ್ನಡದಲ್ಲಿ ಎಷ್ಟೊಂದು ಬಾಲ್ ಹಾಕ್ತಾಯಿದೀರಪ್ಪ!
ಮೆಚ್ಚಬೇಕು ನಿಮ್ಮೆಲ್ಲರ ಪಾಂಡಿತ್ಯವನ್ನು.
ಸುಚರ
ಉ:ಬಾಲಂಗೋಚಿ...ಸುಮ್ ಸುಮ್ಸುಮ್ನೆ ತರಲೆ
ಇದು ಅನ್ಯಾಯ ರೀ...ಅಲ್ಲ ಬಾಲ್ಗೆ (= ಬಾಲೆಗೆ ಪದದ ಸಂಕ್ಷಿಪ್ತ ರೂಪ...ತರಲೆಗಾಗಿ)..ಅಂದರೆ ಕೇವಲ ಹುಡುಗಿಯರಿಗೆ ಮಾತ್ರವೇ ಸಿರಿಗನ್ನಡವೇ.
ಹುಡುಗಿಯರು ಮಾತ್ರ ಕನ್ನಡ ಬಳಸಬೇಕೆ....ಅಥವಾ ಹುಡುಗಿಯರಿಗೆ ಕನ್ನಡ ಸಿರಿ ಹುಡುಗರಿಗೆ ಅದು ಕುರಿ ಎಂದು ಇದರ ಅರ್ಥವೇ. ಇದನ್ನು ಗಂಡುಸಿಂಗಗಳಾದ ನಾವು ಪ್ರತಿಭಟಿಸುತ್ತೇವೆ. (ಮಂಗಗಳಲ್ಲ ಮತ್ತೆ)
ನಗೆ: ತರಲೆ
ತರಲೆಯರ(ತರಳೆಯರ) ವಿಷಯಗಳು ಗಂಭೀರವೆ...?
ತರಲೆ/ತರಲಾ ಎಂದರೆ ಹುಡುಗಿ.
Re: ಬಾಲಗ್ರಹ
ಬಾಲಗ್ರಹ = ಬಾಲ ಇರುವ ಗ್ರಹ = ಧೂಮಕೇತು ಎಂದೂ ಅರ್ಥೈಸಿಕೊಳ್ಳಬಹುದೇನೋ?
ಆದರೆ ಧೂಮಕೇತು ಬರೀ ಆಕಾಶಕಾಯ; ಗ್ರಹಗಳ ಪೈಕಿಯದಲ್ಲ!
===
'ಬಾಲಮಂಗಳ' = "'ಳ' ಅಕ್ಷರದಂತೆ ಸುತ್ತಿಕೊಂಡಿರುವ ಬಾಲವುಳ್ಳ ಮಂಗ"
ಇದು ಸಂಕೀರ್ಣ ಮತ್ತು ಅಸಂಬದ್ದ್ಜವ್ಯಾಖ್ಯೆ. 'ಬಾಲವಿಜ್ಞಾನ' ಪತ್ರಿಕೆಯ ಉಲ್ಲೇಖ ಬಂದಾಗ 'ಬಾಲಮಂಗಳ'ದ್ದೇಕೆ ಆಗದು ಎಂದುಕೊಂಡು ಬರೆದೆ. ಅಂದಹಾಗೆ 'ಳ' ಅಕ್ಷರದಂತೆ ಸುತ್ತಿರುವ ಬಾಲವನ್ನು ನಳಿಗೆಯೊಳಿಟ್ಟು ತೆಗೆದರೆ ಅದು ಮತ್ತೆ 'ಳ'ದಂತೆ ಸುತ್ತಿಕೊಳ್ಳಲಾರದೇನೊ. ಆ ಮಟ್ಟಿಗೆ ಅದು ನಾಯಿಬಾಲಕ್ಕಿಂತ ಸೀದಾಸಾದಾ (ಅಕ್ಷರಶಃ) ಎನ್ನಲಡ್ಡಿಯಿಲ್ಲ.
ಇತಿ 'ಕಿಷ್ಕಿಂಧಾಕಾಂಡ'ದಂತೆ ಕಂಡುಬರುವ 'ಬಾಲ ಕಾಂಡ' ಸಮಾಪ್ತವಾದುದು
- ಶ್ರೀವತ್ಸ ಜೋಶಿ
Re: ಬಾಲಗ್ರಹ
ಬಾಲಗ್ರಹ = ಬಾಲ ಇರುವ ಗ್ರಹ = ಧೂಮಕೇತು ಎಂದೂ ಅರ್ಥೈಸಿಕೊಳ್ಳಬಹುದೇನೋ?
ಆದರೆ ಧೂಮಕೇತು ಬರೀ ಆಕಾಶಕಾಯ; ಗ್ರಹಗಳ ಪೈಕಿಯದಲ್ಲ!
- ಶ್ರೀವತ್ಸ ಜೋಶಿ
ಗೊತ್ತಿದೆ ಸ್ವಾಮಿ. ಸುಮ್ಮನೆ ತಮಾಶೆಗೆ (ಷೆ ಬದಲು ಶೆ ಬರೆದುದು ಉದ್ದೇಶ ಪೂರ್ವಕ) ಬರೆದುದು.
ತಮಾಶೆ ಏಕೆ? ತಮಾಶೆ ಎಂದರೆ ತರೀಕರೆ ಮಾರಪ್ಪ ಶೆಟ್ಟಿ.
ಹಾಗೆಯೇ ಪಿಶಾಚಿ ಎಂದರೆ ಪಿರಿಯಾಪಟ್ಟಣ ಶಾಮಾಚಾರ್ ಚಿರಂಜೀವಿ ಎಂದು.
ಸಿಗೋಣ,
ಪವನಜ
ಉ : punಡಿತರಿಗೊಂದು ಪ್ರಶ್ನೆ
ಹೌದೇ ನಿಜವೇ,?? ಅಥವಾ ಹೀಗೆ ಸಮಾಸ ಮಾಡಬಹುದೇ
ಬಾಲ ಕಡಿಮಿಯಿದ್ದವನು - ಬಾಲಕ
ಬಾಲ ಕತ್ತಿರಿಸುವವನು - ಬಾಲಕರು
(ಹಿರಿಯರ ಬಾಲ ಕತ್ತಿರಿಸುವವರು ಬಾಲಕರು..ಬೇಕಿದ್ದರೆ ಹಿರಿಯರನ್ನೆ ಕೇಳಿ).
ಬಾಲ
"ಬಾಲ" ಈ ಪದಕ್ಕೆ ಸಂಸ್ಕೃತದಲ್ಲಿ "ಹುಡುಗ" ಎಂದು ಅರ್ಥವಿರುವುದು.
ಕನ್ನಡದ "ಬಾಲ"ವೆ ಬೇರೆಯದು.
ಬಾಲಕ ಎಂದರೂ ಒಂದೆ, ಬಾಲ ಎಂದರು ಒಂದೆ. ಹಾಗೆಯೆ "ಬಾಲಾ"ಯೂ ಒಂದೆ "ಬಾಲಿಕಾ" ಎಂದರು ಒಂದೆ. ಇದರಿಂದ ಯಾವ ಹೊಸ ಅರ್ಥವು ಬರದು.
ಸಂಸ್ಖೃತದಲ್ಲಿ ಇದೆ ರೀತಿ ಅನೇಕ ಪದಗಳಿವೆ.
ಉದಾ: ಪುತ್ರ = ಪುತ್ರಕ, ಜ್ಯೋತಿ = ಜ್ಯೋತಿಕಾ, ಶಕಟ = ಶಕಟಕ/ಶಕಟಿಕಾ .. ಈ ಪ್ರಯೋಗಗಳಲ್ಲಿ ಅರ್ಥಪರಿವರ್ತನೆಗಳಾಗವು.
ಉ: ಬಾಲ
ಮಹೇಶ್,
ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದ.
ಡಾ|ಪವನಜ ಮತ್ತು ನನ್ನ ವಿಚಾರವಿನಿಮಯವನ್ನು ಬಹುಷಃ ನೀವು ಗಂಭೀರವಾಗಿ ಪರಿಗಣಿಸಿದಿರೆಂದುಕೊಳ್ಳುತ್ತೇನೆ. ಅದು ಒಂದುರೀತಿಯ ಕುತರ್ಕ, ಪದವಿನೋದ ಕ್ಕಾಗಿ ಬರೆದುದಾಗಿತ್ತು. ಇರಲಿ.
(ಅಂಥ ಕುತರ್ಕ/ವ್ಯಂಗ್ಯ/ವಿನೋದಗಳು 'ಸಂಪದ'ದಲ್ಲಿ ಸಲ್ಲದು ಎಂಬ ಆದೇಶ ಬಂದರೂ ಬರಬಹುದು, ಗೊತ್ತಿಲ್ಲ!)
- ಶ್ರೀವತ್ಸ ಜೋಶಿ
Re: ಉ: ಬಾಲ
ಬಹುಷಃ (ತಪ್ಪು), ಬಹುಶಃ (ಸರಿ)
ಕುರ್ತಕ ಎಂದರೇನು?
ಅದು ಕುಹಕವೆ?
Re: ಉ: ಬಾಲ
ನಾನು ಬರೆದದ್ದರಲ್ಲಿ 'ಕುತರ್ಕ' ಎಂದಿತ್ತು. ಹೌದು, ಒಂದು ರೀತಿ ಕುಹಕದ, ವ್ಯಂಗ್ಯದ, ಛೇಡಿಸುವ ಉದ್ದೇಶದ ತರ್ಕವನ್ನು ಕುತರ್ಕವೆನ್ನುತ್ತಾರೆಂದು ನನ್ನ ಅನಿಸಿಕೆ.
ಅಂದಹಾಗೆ, ನೀವು 'ಕುರ್ತಕ' ಎಂದು ಬರೆದು ಹೊಸದೊಂದು ಪದ (ಬಾಲಕ, ಲೋಲಕ ಇದ್ದಂತೆಯೇ) ಸೃಷ್ಟಿಯಾಯ್ತು! ಕುರ್ತಾ (ಪೈಜಾಮಾ, ಕುರ್ತಾ) ಗೆ ಸಂಬಂಧಿಸಿದ್ದು 'ಕುರ್ತಕ'?
- ಶ್ರ್ರೀವತ್ಸ ಜೋಶಿ
('ಬಹುಶಃ' ತಿದ್ದುಪಡಿಗಾಗಿ ನಿಮಗೆ ಧನ್ಯವಾದ!)
Re: ಬೇಡದ.
ಶ್ರೀವತ್ಸ ಜೋಶಿಗಳೆ,
ನೀವು ತಪ್ಪುಯಾಗಿ ಪದವನ್ನು ಬಡಿಸಿರುವಿರಿ.
ಹೋಗದ, ಬೇಡದ, ನಿಲ್ಲದ, ಹಾರದ, ನಡೆಯದ ಹೀಗೆ ಮುಂತಾದ ಕ್ರಿಯಾಪದ ರೂಪಗಳು ಕನ್ನಡದಲ್ಲಿ ವಿರುದ್ಧಾರ್ಥ ನೀಡುವ ಪ್ರಯೋಗಗಳು. ಇಲ್ಲಿ ಯಾವ ಕನ್ನಡ ವ್ಯಾಕರಣದೋಷವಿಲ್ಲದೆ, ಭಾಷಾ ಶುದ್ಧಿಯಿಂದಿದೆ.
ಒಂದು ವೇಳೆ ನೀವು ಹೇಳಿದ ಹಾಗೆ "ಬೇಡ + ಆದ" ಎoದು ಆದರೆ
ಬೇಡ + ಆದ = ಬೇಡವಾದ( ಬೇಡಾದ ತಪ್ಪು) ವಾಗಿ "ವ"ಕಾರ ಆಗಮ ಸಂಧಿಯಾಗುವುದು ಹೊರತು ಲೋಪ ಸಂಧಿಯಾಗದು.
ನಿಜವಾಗಿ ನೋಡಿದರೆ ಅದು ಬೇಡವು + ಆದ ಆಗಬೇಕು. ಇರಲಿ ಶಾಲೆಯಲ್ಲಿ ಮೇಲಿನಂತೆ ಹೇಳಿಕೊಡುವರು.
ಉ: ಬೇಡದ
ಒಪ್ಪುತ್ತೇನೆ (ಬೇಡ + ಆದ = ಬೇಡವಾದ; ಆಗಮ ಸಂಧಿ). ಲೋಪಸಂಧಿಯಾಗಿ ವಿಂಗಡಿಸಿದ್ದಕ್ಕೆ ಕ್ಷಮೆಯಿರಲಿ.
ಆದರೆ ನಿಮ್ಮ ಪಟ್ಟಿಯಲ್ಲಿ 'ಹೋಗು', 'ನಿಲ್ಲು', 'ಹಾರು', 'ನಡೆಯು'... ಕ್ರಿಯಾಪದಗಳ ವಿರುದ್ಧಾರ್ಥಗಳು ಅನುಕ್ರಮವಾಗಿ 'ಹೋಗದ', 'ನಿಲ್ಲದ', 'ಹಾರದ', 'ನಡೆಯದ'... ಆಗಿವೆ ತಾನೆ?
ಹಾಗಾದರೆ 'ಬೇಡು' ಕ್ರಿಯಾಪದ 'ಬೇಡದ' ಆಗಬೇಕು. ಅದಕ್ಕಾಗಿಯೇ ನಾನು 'ಬೇಡದ' ಪದವನ್ನು ಆರೀತಿ ಅರ್ಥೈಸಿಕೊಂಡೆ!
- ಶ್ರೀವತ್ಸ ಜೋಶಿ
ವ್ಯಾಕರಣದ ಪುಸ್ತಕ
ಕನ್ನಡ ವ್ಯಾಕರಣದ ಯಾವುದಾದರೂ ಪುಸ್ತಕವು ಅಂತರ್ಜಾಲದಲ್ಲಿ (downloadable) ಲಭ್ಯವಿದೆಯೆ?
-----
ಶಶಿಧರ
Re: ಉ: ಬೇಡದ
ಆದರೆ ನಿಮ್ಮ ಪಟ್ಟಿಯಲ್ಲಿ 'ಹೋಗು', 'ನಿಲ್ಲು', 'ಹಾರು', 'ನಡೆಯು'... ಕ್ರಿಯಾಪದಗಳ ವಿರುದ್ಧಾರ್ಥಗಳು ಅನುಕ್ರಮವಾಗಿ 'ಹೋಗದ', 'ನಿಲ್ಲದ', 'ಹಾರದ', 'ನಡೆಯದ'... ಆಗಿವೆ ತಾನೆ?
ಹಾಗಾದರೆ 'ಬೇಡು' ಕ್ರಿಯಾಪದ 'ಬೇಡದ' ಆಗಬೇಕು. ಅದಕ್ಕಾಗಿಯೇ ನಾನು 'ಬೇಡದ' ಪದವನ್ನು ಆರೀತಿ ಅರ್ಥೈಸಿಕೊಂಡೆ!
- ಶ್ರೀವತ್ಸ ಜೋಶಿ
ಸರಿ.. ಈಗ ಗೊಂದಲವು ಪರಿಹಾರವಾಯಿತು.
ನೀವು ವ್ಯಾಕರಣಾಸಕ್ತರೆಂದು ಭಾವಿಸಿ ಒಂದು ಬಿನ್ನಹ...
"ನಡೆಯದ" ಈ ಶಬ್ದದ ಕ್ರಿಯಾಪದದ ಧಾತು "ನಡೆ"ಯೆ ಅಥವಾ "ನಡೆಯು"ವೆ?
ನನಗೆ "ನಡೆ"ಯೆಂದು ಅನ್ನಿಸುವುದು.
Re: ಉ: ಬೇಡದ
ನನಗೆ "ನಡೆ"ಯೆಂದು ಅನ್ನಿಸುವುದು.
'ನಡೆ' ಎಂದು ಕ್ರಿಯಾಪದಧಾತುರೂಪವಾಗಿ ಪರಿಗಣಿಸಬಹುದು; ಆದರೆ 'ನಡೆ' ಎಂಬುದು ನಾಮಪದವೂ ಆಗಬಹುದಾದ್ದರಿಂದ, ಸ್ಪಷ್ಟವಾಗಿ ಕ್ರಿಯಾಪದ ಧಾತುರೂಪವಾಗಿ 'ನಡೆಯು'ಬಳಕೆಯಾಗುತ್ತದೆಯೆಂದು ನನ್ನ ಅಂಬೋಣ.
ಇಂಗ್ಲಿಷ್ನಲ್ಲಿ ಸಹ 'walk' can be cosidered a noun - as in "I went for a morning walk". ಕ್ರಿಯಾಪದಧಾತುರೂಪವನ್ನು ತಿಳಿಸಲು 'to walk' ಎಂದು ನಮೂದಿಸುತ್ತಾರೆ (ನಾಮಪದ, ಕ್ರಿಯಾಪದಗಳ ಗೊಂದಲ ನಿವಾರಣೆಗೆ ಮಾತ್ರ). ನಡೆ/ ನಡೆಯು ಗಳನ್ನು ಸಹ ನಾನು ಹಾಗೆಯೇ ಪರಿಗಣಿಸುತ್ತೇನೆ. ನಿಮ್ಮ ಅಭಿಪ್ರಾಯ ತಿಳಿಸಿ.
- ಶ್ರೀವತ್ಸ ಜೋಶಿ
ನಡೆ
ಶ್ರೀವತ್ಸರೆ,
ನೀವು ಒಂದು ಹೊಸ ಸಂಗತಿಯನ್ನು ಪರಿಚಯಿಸಿದಿರಿ. ನಾಮಪದವು, ಕ್ರಿಯಾಪದವೂ ಆದ ಪದವನ್ನು ಹೇಗೆ ಬರೆಯುವುದೆಂಬುದಾಗಿ.
ನಿಮ್ಮ ಹೇಳಿಕೆಯನ್ನು ಒಪ್ಪುತ್ತೇನೆ.
ಹಾಗಾದರೆ ನಡೆಯು ತರಹ, ಪಡೆಯು, ಹೊಡೆಯು, ಕೊರೆಯು ಮುಂತಾದವು ಕ್ರಿಯಾಪದದ ಧಾತುಗಳಾಗುವವೆ?
ನಾನು ತಿಳಿದಿರುವುದು... ಒಂದು ಕ್ರಿಯಾಪದವನ್ನು ಆಜ್ಞಾರ್ಥಕವಾಗಿ(ಉದಾ: ನೀನು ಮಾಡು, ನೀನು ನಡೆ, ನೀನು ಪಡೆ, ನೀನು ಹೊಡೆ, ನೀನು ತಿಳಿ) ಬಳಸಿದಾಗ ಕ್ರಿಯಾಪದದ ಧಾತುವು ಸಿಗುವುದು ಎಂದು....
ವ್ಯಾಕರಣವು ತುಂಬ ಜಾಸ್ತಿಯಾಯಿತು. ಇಲ್ಲಿಗೆ ಬಿಡೋಣವೆ?.....
ಅಂದಹಾಗೆ "ಅಂಬೋಣ" ಇದರ ಸರಿಯಾದ ಅರ್ಥ ನನಗೆ ತಿಳಿಯದು...
ಧನ್ಯವಾದ....
ಭಾಷಾಶುದ್ಧಿಯ ಚರ್ಚೆ?
ನಾನು ಉಪಯೋಗಿಸಿದ ಒಂದು ಶಬ್ದ ಇಷ್ಟೆಲ್ಲ ಚರ್ಚೆಗೆ ಕಾರಣವಾಗಿದ್ದು ಆಶ್ಚರ್ಯಕರ.
ಈ ಸಂದರ್ಭದಲ್ಲಿ ನನಗೆ ಅನಿಸುವದೇನೆಂದರೆ ,
೧. ಆನೆಗೆ ಆನೆಯೇ ಹೊರಟಿರುವಾಗ ನಾವು ಬಾಲಕ್ಕೆ ಬಡಿದಾಡುತ್ತಿದ್ದೇವೇನೋ ಅಂತ; ಸದ್ಯದ ಕನ್ನಡ ಇಂಗ್ಲೀಷೇ ಆಗುತ್ತಿರುವಾಗ , ( ಪತ್ರಿಕೆಯೊಂದರ ಬಜೆಟ್ ವರದಿಯ ಶೀರ್ಷಿಕೆ- ಲಾಲೂ ರೈಲು , ಬಲು ಕೂಲು ! ಇಂಗ್ಲೀಷ್ ತಿಳಿಯದವರಿಗೆ/ ಹಳ್ಳಿಗರಿಗೆ ಈ ವಾಕ್ಯದ ಅರ್ಥ ಹೇಗೆ ಗೊತ್ತಾಗಬೇಕು?- ಅವರಿಗೆ ಕೂಲು ಶಬ್ದದ ಅರ್ಥ ಯಾವ ಕನ್ನಡ ಡಿಕ್ಷನರಿಯಲ್ಲಿ ಸಿಗುತ್ತದೆ? ಮತ್ತು ಇಂದಿನ ಟೀವಿ ಮತ್ತು ದಿನದ ಆಡುನುಡಿಯಲ್ಲಿಯಲ್ಲಿ ನಿನ್ನೆವರೆಗೆ ಉಪಯೋಗಿಸಿದ ಕನ್ನಡಶಬ್ದಗಳನ್ನು ಮರೆಗೆತಳ್ಳಿ ಇಂಗ್ಲೀಷ್ ಮೆರೆಯಲಾರಂಭಿಸಿರುವಾಗ) ನಾವು ಶಬ್ದ ಪ್ರಯೋಗ , ಅಕ್ಷರಶುದ್ಧಿ , ಅಚ್ಚಣದೋಷ , ಸಂಸ್ಕೃತಶಬ್ದ , ಹಳೆಗನ್ನಡ , ವ್ಯಾಕರಣ ಎಂದೆಲ್ಲ ತಲೆ ಕೆಡಿಸಿಕೊಳ್ಳುತ್ತಿದ್ದೇವೇನೋ ಅಂತ . ಆಷ್ಟೊಂದು ನಿಯಮಾನುಸಾರ ಹೋದರೆ ಕನ್ನಡವೂ ಸಂಸ್ಕೃತದ ಹಾಗೆ ಸತ್ತ ಭಾಷೆಯಾಗಿ ಬಿಡುವದೇನೋ !
೨. 'ನಂಗ್ ಬ್ಯಾಡಾದ್ ಪುಸ್ತ್ಕಾ ಅಂತ' ಬರೆದರೆ ವ್ಯಾಕರಣ ಮತ್ತು ಭಾಷಾಶಾಸ್ತ್ರ ಏನು ಹೇಳುತ್ತದೆ?
ಭಾಷಾಶುದ್ಧಿ ಬೇಕು
ಈ ಮುಂದೆ ಶ್ರೀಕಾಂತರು ಹೇಳಿದ ಎಲ್ಲ ಸಂಗತಿಗಳಿಗೆ, ನಮ್ಮ ಭಾಷಾಶುದ್ಧಿಯ ಮೇಲಿನ ತಾತ್ಸಾರವೆ ಮುಖ್ಯಕಾರಣವು.
ವ್ಯಾಕರಣವು ಬರದೆಂದು, ಅಥವಾ ವ್ಯಾಕರಣವನ್ನು ಓದುಲು ಬೇಸರವೆಂದು, ಎಲ್ಲ ವ್ಯಾಕರಣದ ನಿಯಮಗಳನ್ನು ಗಾಳಿಗೆ ತೂರಲಾಗದು.
ಒಂದು ಭಾಷೆಗೆ ಅದರ ವ್ಯಾಕರಣವೆ ಆಧಾರ, ಅಡಿಪಾಯಗಳು.
ಹೀಗೆಯೆ ಭಾಷಾಶುದ್ಧಿ ಬೇಡವೆಂದೆ, ಇಂದು ಕನ್ನಡವು, ಸಂಸ್ಕೃತ, ಉರ್ದು, ಮರಾಠಿ, ಆಂಗ್ಲ, ಅರಬ್ಬಿ, ತಮಿಳು, ತೆಲುಗು ಮುಂತಾದ ಭಾಷಾಪದಗಳಿಂದ "ಚಿತ್ರಾನ್ನ"ವಾಗಿರುವುದು.
ಕಡೆಪಕ್ಷ ಈಗಲಾದರು ಭಾಷೆಯ ಕಡೆಗೆ, ಭಾಷಾ ಶುದ್ಧತೆಯ ಕಡೆಗೆ ಗಮನ ಹರಿಸಿ, ಕನ್ನಡವನ್ನು ಕನ್ನಡವಾಗೆಯೆ ಉಳಿಸಿ.
ಬೆಂಕಿಬಿದ್ದಾಗಲಾದರು ಬಾವಿತೋಡಲು ಮೊದಲಾಗಿ.
ಉ:ಭಾಷಾಶುದ್ಧಿ ಬೇಕು- i-descriptive usage'ಉ
ಕಡೆಪಕ್ಷ ಈಗಲಾದರು ಭಾಷೆಯ ಕಡೆಗೆ, ಭಾಷಾ ಶುದ್ಧತೆಯ ಕಡೆಗೆ ಗಮನ ಹರಿಸಿ, ಕನ್ನಡವನ್ನು ಕನ್ನಡವಾಗೆಯೆ ಉಳಿಸಿ.
ಬೆಂಕಿಬಿದ್ದಾಗಲಾದರು ಬಾವಿತೋಡಲು ಮೊದಲಾಗಿ.
ಇದನ್ನೇ ನಾವು i-descriptive usage ಅಂತ ಹೇಳುವುದು. ಇಲ್ಲಿ ಉಳಿಸಿ, ಮೊದಲಾಗಿ ಎಂಬ ಪದಗಳು ಬೇರೆಯವರಿಗೆ ಆಜ್ಞೆ ಮಾಡುವಂತಹ ಪದಗಳಾಗಿವೆ.
ಇಂಥಹ ಸಂದರ್ಭಗಳಲ್ಲಿ ಉಳಿಸೋಣ, ಮೊದಲಾಗೋಣ ಎಂಬ ಪದಗಳನ್ನು ಉಪಯೋಗಿಸುವುದು ಹೆಚ್ಚು ಸೂಕ್ತ. ಏಕೆಂದರೆ ಇಂತಹ ಕೆಲಸಗಳನ್ನು ನಾವೆಲ್ಲರೂ ಮಾಡಬೇಕಾದ್ದು.
ಉಳಿಸಿ, ಕೊಡಿ, ಬೆಳೆಸಿ ಇಂತಹ ಪದಗಳನ್ನು ನಾವು ಯಾರಿಗೆ ಹೇಳಬೇಕು. ಹೇಳಿದರೆ ನಾವು(??), ಅವರು (??) ಬೇರೆ ಬೇರೆಯಾಗುತ್ತೇವೆ. ಎಷ್ಟೆೋ ಭಾಷಣಗಳಲ್ಲಿ ನೋಡಿ ಅಥವಾ ಭಿತ್ತಿಪತ್ರಗಳಲ್ಲಿ ನೋಡಿ ಇಂತಹ ತಪ್ಪುಗಳಿರುತ್ತವೆ.
ಇಂತಹ ಪದಪ್ರಯೋಗಗಳೇ ಎಷ್ಟೆೋ ಬಾರಿ ಅವಘಡಕ್ಕೆ ಕಾರಣವಾಗುತ್ತವೆ. ಓಹೆೋ ಇವನೇನೆೋ ಈವ್ನೋಬ್ನನೆ ಸರಿಯಾಗಿದಾನೆ ಅಂತ ಬಡಾಯಿ ಕೊಚ್ಚಿಕೊಳ್ತಾನೆ ಅಂತಾಗುತ್ತದೆ. ಅದೆೇ ನಾನೂ ಕೂಡ ನಿಮ್ಮ ಜೊತೆ ಇದ್ದೇನೆ ಎಂಬಂಥ ಅರ್ಥ ಬರುವ ಪದಪ್ರಯೋಗ ಮಾಡಿದರೆ, ನಮ್ಮ ನಮ್ಮಲ್ಲಿ ಮನಃಸ್ತಾಪ ಗಳು ಬರುವುದಿಲ್ಲ.
Re: ಉ:ಭಾಷಾಶುದ್ಧಿ ಬೇಕು- i-descriptive usage'ಉ
ಕಡೆಪಕ್ಷ ಈಗಲಾದರು ಭಾಷೆಯ ಕಡೆಗೆ, ಭಾಷಾ ಶುದ್ಧತೆಯ ಕಡೆಗೆ ಗಮನ ಹರಿಸಿ, ಕನ್ನಡವನ್ನು ಕನ್ನಡವಾಗೆಯೆ ಉಳಿಸಿ.
ಬೆಂಕಿಬಿದ್ದಾಗಲಾದರು ಬಾವಿತೋಡಲು ಮೊದಲಾಗಿ.
ಅಲ್ಲಿ ಉಳಿಸಿ, ಮೊದಲಾಗಿ ಎಂಬ ಪದಗಳು ಬೇರೆಯವರಿಗೆ ಆಜ್ಞೆ ಮಾಡುವಂತಹ ಪದಗಳೆಂದು ಎಕೆ ಅಂದುಕೊಳ್ಳಬೇಕು? ಆದು ನಮ್ರ ಕೋರಿಕೆಯು ಆಗಬಹುದಲ್ಲವೆ?
ಕನ್ನಡದಲ್ಲಿ ಬಹುವಚನ ಬಳಸಿದರೆ ಮರ್ಯಾದೆ, ಗೌರವವೆಂದು ನನ್ನ ತಿಳಿವಳಿಕೆ.
ಇರಲಿ.. ಈ ಸಲಹೆಯನ್ನು ಪಾಲಿಸೋಣ.
ಉ: i-descriptive usage'ಉ
ಹಾಗಾಗುವುದಿಲ್ಲ, ಮಹೇಶ್. ತೀರ ನೇರವಿಲ್ಲದಾಗ 'pun' ಅನ್ಕೋಬೋದು, ನೇರವಾಗಿ "ಮಾಡಿ, ಹೋಗಿ" ಎಂಬೋದು ('ದಯವಿಟ್ಟು' prefix ಇಲ್ಲದಿದ್ರೆ) ಖಂಡಿತವಾಗಿ ಆಜ್ಞೆಯಾಗುತ್ತೆ, ಕೋರಿಕೆಯಾಗೋದಿಲ್ಲ. 'ನಮ್ರ' ಕೋರಿಕೆಯಂತೂ ಆಗೋದೇ ಇಲ್ಲ
"ಹೀಗೆ ಮಾಡೋಣ" ಅಂತ ಬರೆಯೋದು ಸುನಿಲ್ ಹೇಳಿದಂತೆ ಹೆಚ್ಚು ಸೂಕ್ತ... ಯಾರ ಮೇಲೂ ನಮ್ಮ ನಮ್ಮ ಆಲೋಚನೆಗಳನ್ನ force ಮಾಡಲಾಗೋದಿಲ್ಲ ಅನ್ನೋದು ಸತ್ಯಾಂಶವಷ್ಟೆ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಉ: i-descriptive usage'ಉ
ಸರಿ ಸ್ವಾಮಿ...
ನಾನು ಅಲ್ಲಿ ಯಾರಿಗೆ ಕೂಡ ಆಜ್ಞೆ ಮಾಡಿಲ್ಲ. ನಾನು ಬರೆದ ರೀತಿಯಲ್ಲಿಯೂ ನನಗೆ ಹಾಗೆ ಅನ್ನಿಸುವುದಿಲ್ಲ.
ಯಾರಾದರು ನನ್ನನಿಂದ ಆಜ್ಞೆಪಡೆದಂತೆ ಅಂದುಕೊಂಡರೆ, ನನ್ನನ್ನು ಕ್ಷಮಿಸಿರಿ.
ಶುದ್ಧ ಭಾಷೆ ಬೇಕಿರುವುದು ಯಾರಿಗೆ?
ಇಂಗ್ಲಿಷ್ ಶುದ್ಧವಾಗಿ ಉಳಿಯಲು ಪ್ರಯತ್ನಿಸಿದ್ದರೆ ಅದು ಬ್ರಿಟನ್ ಗೆ ಮಾತ್ರ ಸೀಮಿತವಾಗುತ್ತಿತ್ತು. ಕನ್ನಡದಲ್ಲಿ ತೆಲುಗು, ತಮಿಳು ಪದಗಳಿರುವಂತೇ ಆ ಭಾಷೆಗಳಲ್ಲಿ ಕನ್ನಡ ಪದಗಳೂ ಇವೆ. ಇಂಥದ್ದೆಲ್ಲಾ ಸಂಭವಿಸಬಾರದು ಎಂದಿದ್ದರೆ ನಾವು ಯಾರೊಂದಿಗೂ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳಬಾರದು. ಇಷ್ಟಕ್ಕೂ ಭಾಷೆ ಯಾವತ್ತೂ ವೈಯಾಕರಣಿಗಳ ಮೂಗಿನ ನೇರಕ್ಕೆ ಬೆಳೆದಿಲ್ಲ. ಅದು ಸಾಮಾನ್ಯರ ಅಭಿವ್ಯಕ್ತಿಯ ಮೂಲಕ ಬೆಳೆದಿದೆ. ಈ ಭಾಷಾಶುದ್ಧಿಗೆ ಸಂಬಂಧಿಸಿದ ನನ್ನ ಲೇಖನ ಭಾಷಾಶುದ್ಧಿಯ ನಟ್ಟು ಬೋಲ್ಟುಗಳು ನೋಡಿ.
Re: ಶುದ್ಧ ಭಾಷೆ ಬೇಕಿರುವುದು ಯಾರಿಗೆ?
ಈ ಪ್ರಶ್ನೆಗೆ ಉತ್ತರ ಬಹಳ ಸರಳವಾದದ್ದು.
-ಭಾಷಾಶುದ್ಧತೆ ಯಾರಿಗೆ ಬೇಕೊ, ಅವರಿಗೆ ಎಂದಿಗು ಅದು ಬೇಕಾದದ್ದೆ.
-ಭಾಷಾಶುದ್ಧತೆ ಯಾರಿಗೆ ಬೇಡವಾದದ್ದೊ, ಅವರಿಗೆ ಎಂದಿಗು ಅದು ಬೇಡವಾದದ್ದೆ.
ಭಾಷಾಶುದ್ಧತೆಗು, ಬೇರೆಯವರೊಂದಿಗೆ ಸಂಪರ್ಕವಿಟ್ಟುಕೊಳ್ಳುವುದಕ್ಕು ಎಲ್ಲಿಯ ಸಂಬಂಧ?
ನಿಮ್ಮ ಲೇಖನವೇನೊ ಸರಿ, ಅದು ನಿಮ್ಮ ಅನಿಸಿಕೆ. ನಿಮಗೆ ವ್ಯಾಕರಣ ಬೇಡವಾದರೆ ಬಿಡಿ, ಯಾವ ಬಲವಂತವು ಇಲ್ಲ.
ಹೀಗೆ ಒಬ್ಬೊಬ್ಬರೂ ಒಂದೊಂದು ಹೊಸ ಹೊಸ ಪ್ರಯೋಗಗಳನ್ನು ಸೃಷ್ಟಿಸಿದರೆ, ಹಳೆಯ ಪಾರಂಪರಿಕ ನಿಯಮಗಳನ್ನು ಬಿಟ್ಟರೆ, ಅನ್ಯ-ಭಾಷಾ ಪದಗಳನ್ನು, ನಮ್ಮ ಭಾಷೆಯಲ್ಲಿ ಅದಕ್ಕೆ ಸಮನಾದ ಪದವಿದ್ದರೂ ಬಳಸಿದರೆ, ನಮ್ಮ ಕನ್ನಡದ ಈಗಿನ ಸ್ಥಿತಿ ಉತ್ತಮಗಳ್ಳುವುದು ಎಂದರ್ಥವಾದರೆ, ಹಾಗೆ ಆಗಲಿ.
ಮುಂದೆ ನೋಡೋಣ.
ಶುದ್ಧತೆ?
ಶುದ್ಧವಾಗಿರುವ ಭಾಷೆ ಎಂಬ ಪರಿಕಲ್ಪನೆಯೇ ಅಸಂಗತ. ಈಗ ನೀವು ಬರೆದಿರುವ ಸಾಲುಗಳನ್ನೇ ನೋಡಿ. ಶುದ್ಧತೆ ಎಂಬುದು ಕನ್ನಡ ವೈಯಾಕರಣಿಗಳ ಪ್ರಕಾರ ಅಪ ಪ್ರಯೋಗ. ಭಾಷೆ ಶುದ್ಧವಾಗಿರಬೇಕು ಎಂದು ವಾದಿಸುವ ನೀವೇ ಇಂಥದ್ದೊಂದು ಅಪ ಪ್ರಯೋಗವನ್ನು ಸಲೀಸಾಗಿ ಮಾಡುತ್ತಾ ಇದ್ದೀರಿ. ಇದು ತಪ್ಪಲ್ಲ. ಭಾಷೆ ಬೆಳೆಯುವುದು ಹೀಗೆಯೇ.
ಉ: ಶುದ್ಧತೆ?
ವೈಚಾರಿಕನ ಭಾವ/ಗುಣ ವೈಚಾರಿಕತೆಯ ಹಾಗೆ ಶುದ್ಧದ ಭಾವ/ಗುಣ ಶುದ್ಧತೆ, ಆದುದರಿಂದ ನನಗೆ ಯಾವ ದೋಷವು ಕಾಣದು. ಇದು ಗುಣಸೂಚಕ.
ನೀವು "ಶುದ್ಧತೆ ಎಂಬುದು ಕನ್ನಡ ವೈಯಾಕರಣಿಗಳ ಪ್ರಕಾರ ಅಪ ಪ್ರಯೋಗ" ಎಂದು ಹೇಳಿ ಸುಮ್ಮನಾದಿರಿ,
ಅದು ಏಕೆ ಅಪ ಪ್ರಯೋಗವಾಗುವುದು? ಮತ್ತು
ಅಪ ಪ್ರಯೋಗವೆಂದರೇನು?
ಎಂದು ನಮಗೆ ತಿಳಿಸಿರಿ.
ಧನ್ಯಾವಾದ....
ಭಾಷಾ ಶುದ್ಧಿ
ಶುದ್ಧಿ ಅನ್ನೋದೇ misnomer. ಯಾವುದನ್ನ filter ಮಾಡ್ಬೇಕು, ಯಾವುದನ್ನ ಇಟ್ಕೋಬೇಕು ಇದು ಬಹುಶಃ ಅಂತ್ಯವಿಲ್ಲದ ಡಿಬೇಟು. ಇದಕ್ಕೆಲ್ಲ ಬಹುಶಃ ತಲೆಕೆಡಿಸಿಕೊಳ್ಳದೇ ಭಾಷೆಯನ್ನು ಅದರ ಪಾಡಿಗೆ ಬೆಳೆಯೋದಕ್ಕೆ ಬಿಟ್ಟರೇ ಚೆನ್ನಾಗಿರುತ್ತೆ ಅನ್ಸತ್ತೆ.
ಹಳೆಯ ಪದಗಳೂ ಬಳಕೆಯಲ್ಲಿರಬೇಕು, ನಿಜ... ಆದರೆ ಅದು ಬಳಸುವವರ ಸ್ವಾತಂತ್ರ್ಯಕ್ಕೆ ಬಿಟ್ಟದ್ದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಭಾಷಾ ಶುದ್ಧಿ
ನೀವು ಚರ್ಚೆಯ ಮಧ್ಯದಲ್ಲಿ ಬಂದಿರಿ...
ಈ ಚರ್ಚೆ ಶುರುವಾದದ್ದು "ಬೇಡದ" ಪದದಿಂದ...
ಬೇಡದ ಎಂದರೆ ಬೇಡದೆ ಇದ್ದ ಎಂದು ತಾನೆ?....ಅದನ್ನು ಯಾರೊಬ್ಬರು "ಬೇಡವಾದ" ಎಂಬ ಅರ್ಥದಲ್ಲಿ ಬಳಸಿದರು.
ನಿಮಗೆ "ಬೇಡದ", "ಬೇಡವಾದ" ಎರಡು ಪದಗಳು ಸಮಾನವಾದ ಅರ್ಥವನ್ನು ಕೊಡುವುವು ಎಂದೆನಿಸಿರೆ ನಮ್ಮ ಯಾವ ಅಭ್ಯಂತರವು ಇಲ್ಲ, ನಮ್ಮ( ನಾನು + ಶ್ರೀವತ್ಸ ಜೋಶಿ(ಇವರು ಸಮ್ಮತಿಸಿದರೆ)) ಮಾತುಗಳಿಗೆ ಯಾವ ಬಲೆಯು ಇಲ್ಲಿ ಇಲ್ಲ.
ಒಂದು ವೇಳೆ "ಬೇಡದ", "ಬೇಡವಾದ" ಇವೆರಡು ಪದಗಳು ಬೇರೆ ಬೇರೆ ಅರ್ಥಗಳನ್ನು ಕೊಡುವುದಾರೆ....ಇದು ಸರಿಯೊ, ತಪ್ಪೊ ನೀವೆ ನಿರ್ಧರಿಸಿರಿ.
ನನ್ನ ದೃಷ್ಟಿಯಲ್ಲಿ "ಭಾಷಾ ಶುದ್ಧತೆ"ಯಂದರೆ ಸರಿಯಾಗಿ ಭಾಷಾಪ್ರಯೋಗ.. ಮೇಲಿನ ವಿಷಯದಲ್ಲಿ ಅರ್ಥಾಭಾಸವಾಗಿತ್ತು, ಆದ್ದರಿಂದ ಅದು ತಪ್ಪಾದ ಭಾಷಾಪ್ರಯೋಗವೆಂದು ನಾವೆಂದೆವು....
ಮುಂದಿನದು..ನಿಮ್ಮ ಇಚ್ಛೆ.
Re: ಭಾಷಾ ಶುದ್ಧಿ
ಒಂದು ವೇಳೆ "ಬೇಡದ", "ಬೇಡವಾದ" ಇವೆರಡು ಪದಗಳು ಬೇರೆ ಬೇರೆ ಅರ್ಥಗಳನ್ನು ಕೊಡುವುದಾರೆ....ಇದು ಸರಿಯೊ, ತಪ್ಪೊ ನೀವೆ ನಿರ್ಧರಿಸಿರಿ.
ಹೌದು, ವಸ್ತುನಿಷ್ಠ ಚರ್ಚೆ ಮುಂದುವರೆದರೆ ಒಳ್ಳೆಯದೇ. ನಾನಂದದ್ದೇ ಸರಿ ಎಂದೇನೂ ಇಲ್ಲ. ಪ್ರತಿಯೊಂದೂ, ಪ್ರತಿಯೊಬ್ಬರಿಂದಲೂ ಸರಿಯಾಗಿಯೇ ಇರಬೇಕೆಂಬ ಮಡಿವಂತಿಕೆಯೂ ಅಲ್ಲ. 'ಚಲ್ತಾ ಹೈ...' ಧೋರಣೆ ಬಿಟ್ಟು ಸರಿಯಾದುದೇನು ಎಂದು