ಆಯುಧಪೂಜೆ ಮತ್ತು ಹಸಿವು...
ಇಂದು ಮಹಾನವಮಿ ಆಯುಧಪೂಜೆಯ ಪ್ರಯುಕ್ತ ಕಛೇರಿಗೆ ರಜೆಯಾದ ಕಾರಣ ಬೆಳಿಗ್ಗೆ ತಡವಾಗಿ ಅಂದರೆ ೭.೪೫ಕ್ಕೆ ಎದ್ದು ಸಂಪದ ಸಮುದಾಯದಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ನೀಡಿ, ನಂತರ ಕಾರನ್ನು, ಬೈಕನ್ನು ತೊಳೆಯಲು ಕೋಣೆಯಿಂದ ಹೊರಡಲನುವಾಗುತ್ತಿದ್ದೆ. ಅಷ್ಟರಲ್ಲಿ ನನ್ನ ಚಿಕ್ಕಮ್ಮನ ಮಗ ಫೋನ್ ಮಾಡಿದ. ಏನು ವಿಷಯ ಅಂತ ಕೇಳಲು ಅವನು "ನಮ್ಮ ಮನೆಗೇ ಬಾ. ಇಲ್ಲೆ ಕಾರನ್ನು ತೊಳೆಯೋಣ. ಇಬ್ಬರ ಕಾರುಗಳನ್ನು ತೊಳೆಯಲು ಪರಸ್ಪರ ಸಹಾಯ ಮಾಡಿದಂತಾಗುತ್ತದೆ" ಅಂತ ಹೇಳಿದ. ನಾನು "ಸರಿ ಬರ್ತೀನಿ" ಅಂತ ಹೇಳಿ ಫೋನ್ ಕಟ್ ಮಾಡಿ ಅಮ್ಮ ಕೊಟ್ಟ ಹಾರ್ಲಿಕ್ಸ್ ಅನ್ನು ಕುಡಿದು ಕಾರನ್ನು ಓಡಿಸಿಕೊಂಡು ಪಕ್ಕದ ರಸ್ತೆಯಲ್ಲಿರುವ ಅವನ ಮನೆಗೆ ಹೋದೆ. ಆಗ ಸಮಯ ಹತ್ತು ಘಂಟೆ.
ಇಂದು ರಜೆಯಾದ ಕಾರಣ ತಿಂಡಿಯೂ ತಡ. ಅಲ್ಲಿ ಹೋದ ತಕ್ಷಣ ನನ್ನ ಚಿಕ್ಕಮ್ಮ ಕಾಫಿ ಕುಡೀತೀಯೇನೋ ಅಂತ ಕೇಳಲು ಇನ್ನೊಂದು ಸ್ವಲ್ಪ ಹೊತ್ತು ಆಗಲಿ ಅಂತ ಹೇಳಿ ಕಾರನ್ನು ತೊಳೆಯಲು ನಾನು ಮತ್ತು ನನ್ನ ಚಿಕ್ಕಮ್ಮನ ಮಗ ಅಣಿಯಾದೆವು.
ಅಷ್ಟರಲ್ಲಿ ನನ್ನ ಸ್ನೇಹಿತರೊಬ್ಬರು ಎಸ್. ಎಮ್. ಎಸ್. ಮೂಲಕ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ಅಂತ ಸಂದೇಶ ಕಳುಹಿಸಿದ್ದರು. ಅವರಿಗೆ ಫೋನ್ ಮಾಡಿ ದಸರಾ ಹಬ್ಬದ ಶುಭಾಶಯಗಳನ್ನು ಹೇಳಿ , ಹಾಗೇ ಅವರ ಯೋಗಕ್ಷೇಮವನ್ನು ವಿಚಾರಿಸಿ ಮಾತನ್ನು ಮುಗಿಸುವಷ್ಟರಲ್ಲಿ ೧೫ ನಿಮಿಷಗಳು ಆಗಿದ್ದವು. ನಂತರ ವಿಮೆ ಏಜೆಂಟ್ ಫೋನ್ ಮಾಡಿ "ನಿಮ್ಮ ಕಾರಿನ ವಿಮೆ ಬರುವ ಭಾನುವಾರದಂದು ಕೊನೆಗೊಳ್ಳುತ್ತದೆ, ಆದ್ದರಿಂದ ನೀವು ಶುಕ್ರವಾರವೇ ನಮ್ಮ ಕಛೇರಿಗೆ ಬಂದು ವಿಮೆಯನ್ನು ಕಟ್ಟಬೇಕು" ಎಂದು ಹೇಳಿದರು. ಕೊನೆಯಲ್ಲಿ ವಿಮೆಗೆ ಕಟ್ಟಬೇಕಾದ ಒಟ್ಟು ಮೊತ್ತವನ್ನು ಹೇಳಿ ಫೋನ್ ಕಟ್ ಮಾಡಿದರು. ಸರಿ ಹೊತ್ತಾಗುತ್ತದೆ ಅಂತ ನನ್ನ ಮೊಬೈಲ್ ಫೋನನ್ನು ಸೈಲೆನ್ಟ್ ಮೋಡ್ ಗೆ ಸೆಟ್ ಮಾಡಿ ಕಾರನ್ನು ತೊಳೆಯಲು ಶುರುಮಾಡಿದಾಗ ವೇಳೆ ಹತ್ತು ಘಂಟೆ ಮೂವತ್ತು ನಿಮಿಷವಾಗಿತ್ತು.
ಬೆಳಿಗ್ಗೆ ಒಂದು ಲೋಟ ಹಾರ್ಲಿಕ್ಸ್ ಬೆರೆಸಿದ ಹಾಲನ್ನು ಕುಡಿದಿದ್ದರಿಂದ ಹೊಟ್ಟೆ ತುಂಬಾ ಹಸಿದಿತ್ತು. ಕಾರುಗಳನ್ನು ತೊಳೆಯುದೇ ಸ್ನಾನ ಇಲ್ಲ, ಸ್ನಾನ ಮಾಡದೇ ತಿಂಡಿಯೂ ಇಲ್ಲ, ತೀರ್ಥವೂ ಇಲ್ಲ.
ಮೊದಲು ನನ್ನ ಚಿಕ್ಕಮ್ಮನ ಮಗನ ಮಾರುತಿ ವ್ಯಾನನ್ನು ತೊಳೆಯಲು ಶುರುಮಾಡಿದೆವು. ಸುಮಾರು ಹನ್ನೆರಡು ಘಂಟೆಯ ಹೊತ್ತಿಗೆ ಅವನ ಕಾರನ್ನು ತೊಳೆದು ಒರೆಸಿ ಆಚೆ ನಿಲ್ಲಿಸಿ ನಂತರ ನನ್ನ ಕಾರನ್ನು ತೊಳೆಯಲು ಶುರುಮಾಡಿದೆವು. ನನ್ನ ಕಾರನ್ನು ಇತ್ತೀಚೆಗಷ್ಟೇ ಸರ್ವೀಸ್ ಮಾಡಿಸಿದ್ದರಿಂದ ಜಾಸ್ತಿ ಕೊಳೆಯಿರಲಿಲ್ಲ. ಕಾರುಗಳನ್ನು ತೊಳೆದು ಒರೆಸುವ ಹೊತ್ತಿಗೆ ಗಡಿಯಾರದಲ್ಲಿ ಹನ್ನೆರಡು ಘಂಟೆ ಮೂವತ್ತು ನಿಮಿಷವಾಗಿತ್ತು. ಅಷ್ಟರಲ್ಲಿ ನನ್ನ ಹಸಿವೇ ಇಂಗಿ ಹೋಗಿತ್ತು...
ಬೆಳಗ್ಗಿನಿಂದ ಏನೂ ತಿನ್ನದೇ ಹೊಟ್ಟೆ ಹಸಿದಿದ್ದ ಕಾರಣ, ಮನೆಗೆ ಬಂದು ಬೇಗ ಬೇಗ ಬೈಕನ್ನು ತೊಳೆದು ಸ್ನಾನ ಮಾಡಿ, ದಿನವೂ ಮಾಡುವ ಸಂಧ್ಯಾವಂದನೆಯನ್ನು ಇಂದು ಮಾಡದೆ
, ರಾಹುಕಾಲ ಮುಗಿಯುವವರೆಗೂ ಕಾದು ೧.೩೦ ರ ನಂತರ ಕಾರು ಮತ್ತು ಬೈಕುಗಳ ಪೂಜೆಯನ್ನು ಮಾಡಿದೆವು. ಬೈಕ್ ಹಾಗೂ ಕಾರಿನ ಚಕ್ರಗಳಿಗೆ ನಿಂಬೇಹಣ್ಣುಗಳನ್ನು ಇಟ್ಟು, ಗಾಡಿಗಳಲ್ಲಿ ಒಂದು ಸುತ್ತು ಹೊಡೆದು ಮನೆಗೆ ಬಂದು ಅಮ್ಮ ಮಾಡಿದ್ದ ತರಕಾರಿ ಪಲಾವ್, ಆಂಬೊಡೆಗಳನ್ನು ಗಡತ್ತಾಗಿ ತಿಂದು, ಗಸಗಸೆ ಪಾಯಸವನ್ನು ಕುಡಿಯುವ ಹೊತ್ತಿಗೆ ಸಮಯ ಎರಡು ಘಂಟೆ ಮೂವತ್ತು ನಿಮಿಷವಾಗಿತ್ತು.
ನಾಳೆ ವಿಜಯದಶಮಿಯ ಪ್ರಯುಕ್ತ ರಜೆ.


- Login or register to post comments
- 470 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಆಯುಧಪೂಜೆ ಮತ್ತು ಹಸಿವು...
ಕೊನೆಗೆ ದಕ್ಕಿದ ಭೋಜನ ವೈಭವ ನೋಡಿದರೆ, ನೀವು ಉಪವಾಸ ಮಾಡಿದ್ದಕ್ಕೂ ಸಾರ್ಥಕವಾಯ್ತು ಬಿಡಿ. ಅದೇ ರೀತಿ ಹಬ್ಬದ ದೆಸೆಯಿಂದಲಾದರೂ ನಿಮ್ಮ ವಾಹನಗಳಿಗೆ ಸ್ನಾನ ಪ್ರಾಪ್ತಿಯಾಯ್ತು
- ಚಾಮರಾಜ ಸವಡಿ
http://chamarajsavadi.blogspot.com
ಉ: ಆಯುಧಪೂಜೆ ಮತ್ತು ಹಸಿವು...
ಮಧ್ಯಾಹ್ನ ಸಂಧ್ಯಾವಂದನೆ ಮಾಡಬಹುದೋ? ಒಂದು ವೇಳೆ ಮಾಡಿದರೂ ಅದಕ್ಕೆ ಸಂಧ್ಯಾವಂದನೆ ಅನ್ನಬಹುದೋ ?
ಸುಮ್ಮನೇ ಕುತೂಹಲಕ್ಕೆ...........
ಉ: ಆಯುಧಪೂಜೆ ಮತ್ತು ಹಸಿವು...
ಮಧ್ಯಾಹ್ನದ ಸಂಧ್ಯಾವಂದನೆಗೆ ಮಾಧ್ಯಾಹ್ನಿಕ ಎಂದು ಕರೆಯುತ್ತಾರೆ...
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ಧನ್ಯವಾದಗಳು........
ನಾನು ಕೇಳಿರಲಿಲ್ಲ.
ಉ: ಆಯುಧಪೂಜೆ ಮತ್ತು ಹಸಿವು...
ಮಾಧ್ಯಾನಿಕಕ್ಕೂ ಸಂಧ್ಯಾವಂದನೆ ಅನ್ನೋದು ವಾಡಿಕೆ..
ಉ: ಆಯುಧಪೂಜೆ ಮತ್ತು ಹಸಿವು...
ಹೌದು ಚಾಮರಾಜ್,
ಹಸಿವನ್ನು ತಡೆಯಲು ನನ್ನಿಂದಂತೂ ಸಾಧ್ಯವಿಲ್ಲ...
ನಮ್ಮ ದೇಶದಲ್ಲಿ ಅದೆಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೋ?
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ನಿಮ್ ಮನೇಲಿ ಮಾರನೋಮಿ ಸ್ಪೆಶಲ್ ಏನು?
ಉ: ಆಯುಧಪೂಜೆ ಮತ್ತು ಹಸಿವು...
ಈರುಳ್ಳಿ ರಹಿತ, ತರಕಾರಿ ಪಲಾವ್, ಆಂಬೊಡೆ, ಗಸಗಸೆ ಪಾಯಸ...
ನಿಮ್ಮನೇಲಿ ಏನು ಸ್ಪೆಷಲ್? ಮದುವೆಯ ನಂತರ ಮೊದಲ ದಸರ ಅಲ್ವೇ?
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ನಂಗೆ ನಾಳೆ ರಜೆಯಿಲ್ಲ..
ಉ: ಆಯುಧಪೂಜೆ ಮತ್ತು ಹಸಿವು...
ದೈನಂದಿನ ಪೂಜೆ ತಪ್ಪಿಸಿ "ಆಯುಧಪೂಜೆ" ,ಚೆನ್ನಾಗಿದೆ
*ಅಶೋಕ್
ಉ: ಆಯುಧಪೂಜೆ ಮತ್ತು ಹಸಿವು...
ನನ್ನಿ ಅಶೋಕ್,
ಕಛೇರಿಗೆ ಇಂದು ಬಿಡುವಾದ್ದರಿಂದ ಎದ್ದದ್ದು ತಡವಾಯಿತು, ವಾಹನಗಳನ್ನು ತೊಳೆಯಬೇಕಾದ್ದರಿಂದ ಸ್ನಾನ ತಡವಾಯಿತು.
ಹಾಗಾಗಿ ದೈನಂದಿನ ಪೂಜೆ ಇಂದು ರದ್ದಾಯಿತು...
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ಈರುಳ್ಳಿ ಹಾಕ್ದಿದ್ರೆ ಅದನ್ನ ಪಲಾವ್ ಅನ್ನಬಾರ್ದು ಅನಿಲ್, ಅದು ತರಕಾರಿ ಭಾತ್. ಆಹಾ ಕೇಳಿ ನ೦ಗೆ ಮತ್ತೆ ಹಸಿವಾಗ್ತಿದೆ..
ಉ: ಆಯುಧಪೂಜೆ ಮತ್ತು ಹಸಿವು...
ಆದರೆ, ಅಮ್ಮ ಪಲಾವ್ ಮಾಡೋ ಹಾಗೇ ಮಾಡೀದ್ರು? ರುಚಿಯೂ ಹಾಗೇ ಇತ್ತು? ಬಣ್ಣವೂ ಸಹ ಬದಲಾಗಿರಲಿಲ್ಲ...
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ಬಣ್ಣ...ರುಚಿ....ಶಕ್ತಿ.......
ಚೆನ್ನಾಗಿದೆ....ಚೆನ್ನಾಗಿದೆ
ಉ: ಆಯುಧಪೂಜೆ ಮತ್ತು ಹಸಿವು...
ವಿಜಯ ದಶಮಿಯ ಶುಭಾಶಯಗಳು. ಪ್ರತಿದಿನ ಸಂಧ್ಯಾವಂದನೆ ಈಗಲೂ ಮಾಡುವವರು ಇದ್ದಾರೆಂದು ಎಂದು ಕೇಳಿ ಸಂತೋಷವಾಯ್ತು. ಮೊನ್ನೆ ಒಬ್ಬ ಆಂಟಿಯೊಂದಿಗೆ ಮಾತನಾಡುತ್ತಿದ್ದಾಗ ಅವರು ಹೆಮ್ಮೆಯಿಂದ ನನ್ನ ಅಳಿಯನಿಗೆ ಜನಿವಾರ ಯಾವ ಕಡೆ ಹಾಕಿಕೊಳ್ಳಬೇಕು ಅಂತಾನೇ ಗೊತ್ತಿಲ್ಲ ಅಂತ. ಅದನ್ನು ಕೇಳಿ ತುಂಬಾ ಬೇಜಾರಾಯ್ತು.
ಉ: ಆಯುಧಪೂಜೆ ಮತ್ತು ಹಸಿವು...
ರಾಜೇಶ್ವರಿ ಅವರೇ,
ನಿಮಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು...
ನಿಮಗೆ ಸಂತೋಷವಾದದ್ದನ್ನು ತಿಳಿದು ನನಗೂ ಖುಷಿ ಆಯ್ತು.
ಆದರೆ, ಅನಿವಾರ್ಯ ಕಾರಣಗಳಿಂದ ಇಂದು ನನಗೆ ಸಂಧ್ಯಾವಂದನೆಯನ್ನು ಮಾಡಲಾಗಲಿಲ್ಲ...
>>ಮೊನ್ನೆ ಒಬ್ಬ ಆಂಟಿಯೊಂದಿಗೆ ಮಾತನಾಡುತ್ತಿದ್ದಾಗ ಅವರು ಹೆಮ್ಮೆಯಿಂದ ನನ್ನ ಅಳಿಯನಿಗೆ ಜನಿವಾರ ಯಾವ ಕಡೆ ಹಾಕಿಕೊಳ್ಳಬೇಕು ಅಂತಾನೇ ಗೊತ್ತಿಲ್ಲ ಅಂತ. ಅದನ್ನು ಕೇಳಿ ತುಂಬಾ ಬೇಜಾರಾಯ್ತು.
ನನಗೂ ಬಹಳ ಬೇಸರವಾಯಿತು...
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ಒಂದು ಕಾರು ತೊಳೆಯೋಕೆ ಒಂದೂವರೆ ಗಂಟೆ - ಒಂದೋ ನಿಮಗೆ ತಾಳ್ಮೆ ಹೆಚ್ಚಿದೆ. ಅಥವಾ ನೀವು ನಿಮ್ಮ ಕಾರನ್ನ ಬಹಳ ಪ್ರೀತಿಸ್ತೀರ
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಆಯುಧಪೂಜೆ ಮತ್ತು ಹಸಿವು...
ಹಂಸಾನಂದಿಯವರೇ,
ನನಗೆ ತಾಳ್ಮೆಯಂತೂ ಇಲ್ಲ... ಮನೆಯಲ್ಲಿ ಇದೇ ವಿಷಯಕ್ಕೆ ಚರ್ಚೆ ಆಗ್ತಿರುತ್ತೆ...
ಮಾರುತಿ ವ್ಯಾನನ್ನು ತೊಳೆದು ಬಹಳ ದಿನಗಳಾಗಿದ್ದವು... ಆದ್ದರಿಂದ ಸಮಯ ಜಾಸ್ತಿ ತೆಗೆದುಕೊಂಡೆವು...
>>ಅಥವಾ ನೀವು ನಿಮ್ಮ ಕಾರನ್ನ ಬಹಳ ಪ್ರೀತಿಸ್ತೀರ
ಇದಂತೂ ನಿಜ...
ಒಟ್ಟಾರೆ ಎರಡು ಕಾರುಗಳನ್ನು ತೊಳೆಯಲು ತೆಗೆದುಕೊಂಡ ಸಮಯ: ಎರಡು ಘಂಟೆಗಳು (೧೦.೩೦ ರಿಂದ ೧೨.೩೦)
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ನೀವು ನಡೆಸಿದ ’ಆಯುಧ ಪೂಜಾ ವಿಧಾನ’ ದ ಬಗ್ಗೆ ಚೆನ್ಣಾಗಿ ನಿರೂಪಿಸಿದ್ದೀರಿ ಅನಿಲ್.
ಉ: ಆಯುಧಪೂಜೆ ಮತ್ತು ಹಸಿವು...
ಮಾಧವ,
ನನ್ನಿ...
ಅನಿಲ್ ರಮೇಶ್.
ಉ: ಆಯುಧಪೂಜೆ ಮತ್ತು ಹಸಿವು...
ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ನನ್ನಿ
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.