ಮನಸಿನ ಹೆಜ್ಜೆ ಹಿಡಿದು
ಮಂಜು ಮುಸುಕಿದ ಮುಂಜಾವಿನಲಿ ಪಟ ಪಟನೇ ಪುಟಿಯುತ್ತಿದ್ದ ಮಂಜಹನಿ.ಪಶ್ಚಿಮಘಟ್ಟಗಳ ಸೌಂದರ್ಯ ಆಗಸದಲ್ಲಿ ಮರೆಮಾಚಿದಂತಿತ್ತು. ಅದು ಸೌಂದರ್ಯದ ಮರೆಮಾಚುವಿಕೆಯಲ್ಲ ಅಸ್ಪಷ್ಟತೆಯಲ್ಲ ವಿಭಿನ್ನತೆ,ಸೌಂದರ್ಯದ ಸೊಬಗಿನ ಜೀವಲತೆ.
ಸೌಂದರ್ಯವೆಂದರೇನು? ಓ ಪ್ರಕೃತಿಯೆ ನೀನೇನಾ? ಜಂಭಪಡಬೇಡ,ಅದು ನೀನಾಗಿರಲಿಕ್ಕಿಲ್ಲ.ನನ್ನ ಕಂಗಳ ನಿರ್ಮಲ ನೋಟವಿರಬೇಕು.ಮನದಾಳದ ಆರಾಧನೆ ಇರಬೇಕು.ಕಾಲದ ಕವನಕ್ಕೆ ಭಾವ ತುಂಬುವವರು ನಾವು ,ಹುಟ್ಟಿದ ಮಾತುಗಳಲಿ ಅರ್ಥ ಹುಡುಕುವವರು ನಾವು.ಮತ್ತೆ ಪ್ರಶ್ನೆ, ಹಾಗದರೆ ಅಷ್ಟಕ್ಕೂ ಪ್ರಕೃತಿ ಎಂದರೇನು? ಹೆಣ್ಣೇ ಅಲ್ಲವೆ? ಹೆಣ್ತನ ವಲ್ಲವೆ? ಅದರೊಳಗಿನ ಮನಸಿದೆಯಲ್ಲ ಅದು ಪ್ರಕೃತಿ. ಸ್ವಭಾವ ನಿಸರ್ಗ ಈ ಎಲ್ಲದರೊಳಗೂ ಮೂಲ ಜೀವವೇ ಪ್ರಕೃತಿ.ಆಕೃತಿ ವಿಕೃತಿಗಳ ಒಳಗೆ ಜೀವಂತ ವಾಗಿರುವುದೂ ಇದೇ ಎಂದೆನಿಸುತ್ತದೆ.
ಆ ಆಗಸಕ್ಕೆ ಒರಗಿರುವ ಪರ್ವತಗಳ ಸಾಲು,ಒಂದರ ಬುಜಕ್ಕೊರಗಿದಂತೆ ಇನ್ನೊಂದು, ಅದಾವ ಬಾವ ಬೆರೆತಿರುವುದೋ!
ಒಂದರ ಎದೆಗೆ ಇನ್ನೊಂದು ಒರಗಿ ಹಸಿರ ಹಾಸಿನ ಚೆಲುವಲಿ ಸಾಂತ್ವನದ ಉಸಿರು ಹೊರಹೊಮ್ಮುವಂತೆನಿಸುತ್ತದೆ. ಏನೆನ್ನಲಿ ನಮ್ಮೊಳಗೆ ಮಾತುಗಳು ಸೇರಿಹೋಗಿದೆಯೆ, ಆ ರಾಶಿಯ ಚೆಲುವೆಲ್ಲ ಸೂರೆಯಾಗಿದೆಯೇ? ಒಮ್ಮೆ ಮನದಂಗಳದಲಿ ಇಣುಕಿನೋಡಿ, ಗುಡ್ಡ ಬೆಟ್ಟಗಳ ಮೋಹಕ ದೃಶ್ಯಗಳ.ಅದರ ತಪ್ಪಲಲಿ ನಿಂತು ತಬ್ಬಿಕೊಂಡರೂ ಸಾಕು ಸವಿಲತೆಯ ಚಿಗುರು ತನ್ನುಸಿರ ಸೋಕುತ್ತದೆ.ಹಸಿರ ಹಾದಿಯಲಿ ಹೆಜ್ಜೆ ಮೂಡುತ್ತದೆ.
ಒಂದೇ ಒಂದು ನೋಟಕ್ಕೆ ಆ ಬೆಟ್ಟಗುಡ್ಡಗಳಾಚೆ ಮನಸು ಓಡುತ್ತದೆ ಅಲ್ಲವೆ? ಹೋಗಲಿಬಿಡಿ ಅದು ಮನಬಂದಂತೆ ಸಾಗಲಿ.
ಯೋಚನೆ ಎಂಬುದು ಹರಿದಷ್ಟೂ ಕಂಗಳ ದೃಷ್ಟಿ ತೀಕ್ಷ್ಣ ವಾಗುತ್ತದೆ.ಮನಸು ತೆರೆದುಕೊಂಡಷ್ಟೂ ಮೆದುಳು ಕೆಲಸ ಮಾಡುತ್ತದೆ.ಬಾವನೆಗಳು ಬಲಿತಷ್ಟೂ ಹೊಸತನ ಹೊರಹೊಮ್ಮುತ್ತದೆ. ಕಂಗಳಿಗೆ ಸ್ಪರ್ಶಿಸಿದ ಒಂದು ಮಂಜಹನಿ ಕೂಡ ಮೊದಲ ಮಳೆಗೆ ಮೈಒಡ್ದಿದ ಅನುಭವ ನೀಡಬಹುದು.ಆ ತಂಗಾಳಿಯಲ್ಲಿ ಮಣ್ಣ ವಾಸನೆ ಘಮಘಮಿಸಬಹುದು.
ಮನಸೇ ನೀನು ಮನಬಂದಂತೇ ಹೋಗು,ಬೆಟ್ಟದ ತಪ್ಪಲಿಂದ ಹಿಡಿದು ಅಟ್ಟದ ಮೂಲೆಯವರೆಗೂ ಸಾಗು.ಮನೆಯಂಗಳದಿಂದ ಹಿಡಿದು ಹೊಂಗಿರಣದ ಆಳದವರೆಗೂ ನೋಡು.ನಿನ್ನ ಗೂಟಕ್ಕ್ಕೆ ಕಟ್ಟಿ ನಿಲ್ಲಿಸಿ ನನ್ನ ನಾ ಬಂಧಿಸಿಕೊಳ್ಳುವುದಿಲ್ಲ.ನಿನಗೆ ತಿಳಿದಿರಲಿ ನೀ ಬೇರೆಯಲ್ಲ ನಾ ಬೇರೆಯಲ್ಲ.
ಬದುಕ ಹಾದಿಯಲಿ ಮನದ ತೀರ್ಮಾನಕ್ಕೇ ಪೂರ್ತಿ ಬೆಲೆಕೊಟ್ಟು ನೋಡಿ,ಆಗ ಬುದ್ದಿ ಮನದೊಂದಿಗೆ ಮನವಾಗಿ ಕೆಲಸ ಮಾಡುತ್ತದೆ.ಆಗ ವಿಷಾದದ ಛಾಯೆಯಿಲ್ಲದ ಹೊಸ ಬಾವ ಮೂಡುತ್ತದೆ,ಸಂತಸದ ಹೊಸ ಲೋಕ ಕಾಣುತ್ತದೆ.

- Login or register to post comments
- 636 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಮನಸು ಹೆಣ್ಣೇ?
ಮನಸ್ಸನ್ನು ಇಷ್ಟ ಬಂದಂತೆ ಹೋಗಲು ಬಿಟ್ಟಿರಾ? ಮನಸ್ಸು ಗಂಡೇ ಅಥವಾ ಹೆಣ್ಣೇ? ಸಂಸ್ಕೃತದ ಒಂದು ಕಾವ್ಯದಲ್ಲಿ (ಬಹುಶ: ಮೇಘದೂತ ಇರ್ಬೇಕು), ಇದರ ಬಗ್ಗೆ ಕವಿ ಚರ್ಚಿಸಿದ್ದಾನೆ. ಇದರ ಬಗ್ಗೆ ಹೆಚ್ಚಿನ ಚರ್ಚೆಯನ್ನು ಸುನೀಲ್ ಜಯಪ್ರಕಾಶರು ಮತ್ತು ಮಹೇಶರು ಪ್ರಸ್ತುತಪಡಿಸಬೇಕು.
ಅಂದಹಾಗೆ ಕೆಲವು ಟೈಪೋ ತಪ್ಪುಗಳಿದ್ದವು. ಸರಿಪಡಿಸಿರುವೆ. ಇನ್ನೂ ಇದ್ದರೆ ಮಹೇಶ್ ಅವರು ತಿಳಿಸಬಹುದು. (ಅವರ ಕಣ್ಣು ಮತ್ತು ಮನಸ್ಸು ಬಲು ಚುರುಕು). ಜಂಬ ಸರಿಯೋ ಅಥವಾ ಜಂಭ ಸರಿಯೋ? ನನಗನ್ನಿಸಿದ ಹಾಗೆ ಅದು ಜಂಭ.
ಪ್ರಕೃತಿ ಬರೆಯಲು - prakRuti - ಎಂದು ಕೀಲಿಮಣೆಯಲ್ಲಿ ಕುಟ್ಟಬೇಕು (ಬರಹದ ರೀತ್ಯಾ).
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಪ್ರಕೃತಿ ಪುರುಷ
ನನಗೂ ಈ ಸಂದೇಹ ಬಹಳವಾಗಿ ಇತ್ತು....(ಇದೆ ಎಂದರೂ ತಪ್ಪಾಗಲಾರದು)....ಪ್ರಕೃತಿ ಸೌಂದರ್ಯದ ಗಣಿಯಾದರೆ ಪುರುಷ (ಮನುಕುಲ ಅಂದರೆ ಮಾನವರು) ಅದರ ಆರಾಧಕರು. ಈ ಲೋಕದಲ್ಲಿ ಸಹಜವಾಗಿ ಮತ್ತು ಸುಲಭವಾಗಿ(??) ಸೌಂದರ್ಯದ ಪೇಟೆಂಟನ್ನು (ಹಕ್ಕುಸ್ವಾಮ್ಯ) ಹೆಣ್ಣು ಪಡೆದಿರುವುದರಿಂದ, ಪ್ರಕೃತಿಯನ್ನು ಹೆಣ್ಣು ಎಂದು ಕರೆದಾಗ ಉತ್ಪ್ರೇಕ್ಷೆಯಲ್ಲವೇನೋ ಅನಿಸುತ್ತಿದೆ.
ಇಲ್ಲಿ ಒಂದು ಹಳೆಯ ಕನ್ನಡ ಹಾಡು ನೆನಪಿಗೆ ಬರುತ್ತಿದೆ. ತಪ್ಪಗಳಿದ್ದಲ್ಲಿ ಸರಿಪಡಿಸಬೇಕು.
ಹೂವೂ...ಚೆಲುವೆಲ್ಲಾ ತಂದೆಂದಿತೂ..
ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಿತೂ.....
ನಾವು ಅಂದರೆ ಗಂಡುಗಲಿಗಳು (ಹೌದ್ರಿ ಗಂಡುಗಲಿಗಳು...ಸಂಕೋಚಬೇಡಾ.) ಕಿವಿಯಲ್ಲಿ ಹೂವು ಮುಡಿದರೆ ಅದಕ್ಕೆ ಬೇರೆಯೇ ಅರ್ಥವಿದೆ.
ಅಂದಹಾಗೆ ಪ್ರಕೃತಿಯಲ್ಲಿ ಭೀಕರತೆಯೂ ಇರುತ್ತದೆಯಲ್ಲವೆ. ಇದನ್ನು ಪುಷ್ಟೀಕರಿಸಲು ಹಿಡಿಂಬೆ, ಅಂಥವರೂ ಇರುತ್ತಾರೆ.
ಮನಸ್ಸು
ಮನಪ್ರಚೋದಕವಾದ ಚಿಂತನೆ. ಮುಂದುವರೆಸಿ.. ಆದರೆ ಮನಸ್ಸು ಚಂಚಲ ಅಲ್ಲವೇ?? ಹಾಗೇ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳಬೇಕು ಎಂಬ ಮಾತೂ ಕೂಡ ನಿಜವಲ್ಲವೇ?
ಸುನೀಲರೇ, ವ್ಯಾಕರಣ ರೀತ್ಯಾ ಮನಃ ಎನ್ನುವುದು ಪುಲ್ಲಿಂಗ. ಅಧಿದೇವತೆ ಚಂದ್ರ.
ಕವಿಗಳ ಕೈಯಲ್ಲಿ ಸ್ತ್ರೀಲಿಂಗ ಆಗಿದೆ. ಪರ್ವಾಗಿಲ್ಲ ಬಿಡಿ. ಕೆಲವರಿಗೆ ಹಿಡಿಂಬೆಯೂ ಸುಂದರಿಯೇ. ಯಾಕೆ ನಮ್ಮ ಭೀಮ ಅವಳನ್ನೇ ಮದುವೆಯಾದದ್ದು ತಾನೆ??
ಸಿಂಚನಾ ಅವರೆ ನಿಮ್ಮ ಕೃತಿಯಲ್ಲಿ ಕೆಲವೆಡೆ "ಭಾವ" ಬದಲಿಗೆ "ಬಾವ" , "ಭುಜ" ಬದಲಿಗೆ "ಬುಜ", "ಭಾವನೆ" ಬದಲಿಗೆ "ಬಾವನೆ", "ಬುದ್ಧಿ" ಬದಲಿಗೆ "ಬುದ್ದಿ" ಎಂದಾಗಿದೆ. ಹೊಟ್ಟೆ ಸೀಳಬೇಕು ಕಣ್ರೀ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಅ: ಮನಸ್ಸಿನ ಹೆಜ್ಜೆಹಿಡಿದು
TVSರವರ ಸಲಹೆಯಂತೆ,
ನನ್ನ ಹಲವು ಅನಿಸಿಕೆಗಳು. ಎಂದಿನಂತೆ ಅದು ವ್ಯಾಕರಣಕ್ಕೆ ಸಂಬಂಧಿಸಿರುವುವು.
ನನ್ನ ಅನಿಸಿಕೆಯಲ್ಲಿ ತಪ್ಪಿದ್ದರೆ, ಅದನ್ನು ಯಾವ ಶಿಷ್ಟಾಚಾರವಿಲ್ಲದೆ ತಿಳಿಸಿ, ನಾನು ಬೇಸರಪಟ್ಟುಕೊಳ್ಳುವುದಿಲ್ಲ.
ನಾವೆಲ್ಲ ಒಂದು ಎಂದು ತಿಳಿಯೋಣ. ಒಬ್ಬನ್ನೊಬ್ಬರು ತಿದ್ದಿಕೊಳ್ಳೋಣ.
ಇಲ್ಲಿ ಬರೆದಿರುವುದು ಅನಿಸಿಕೆಗಳು, ತಪ್ಪುಗಳ ಪಟ್ಟಿಯಂತು ಅಲ್ಲವೇ ಅಲ್ಲ. ಸರಿಯಾದ ಪದಗಳಿಗೆ ಹೆಚ್ಚಾಗಿ ಅನಿಸಿಕೆಗಳಿರುವುವು.
೧) ಮುಂಜಾವಿನಲಿ = ಇದು ಸಾಮಾನ್ಯವಾಗಿ ಕವನದಲ್ಲಿ ಬಳಕೆಯಾಗುವ ಸ್ವರೂಪ. ಗದ್ಯದಲ್ಲಿ "ಮುಂಜಾವಿನಲ್ಲಿ" ಎಂದರೆ ಪದ್ಯಭಾಷೆಗೆ ಮತ್ತು ಗದ್ಯಭಾಷೆಗೆ ನಮ್ಮ ಕನ್ನಡದಲ್ಲಿ ಪಾರಂಪರಿಕವಾಗಿ ಕಾಪಾಡಿಕೊಂಡು ಬಂದ ವ್ಯತ್ಯಾಸಗಳನ್ನು ಉಳಿಸಿಕೊಂಡು ಹೋಗುವಲ್ಲಿ ಒಂದು ಸಾರ್ಥಕ ಪಯತ್ನವಾಗುವುದು.
ಮತ್ತೊಂದು ವಿಷಯ, "ಬೆಳಗಿನ ಜಾವದಲ್ಲಿ ಹಕ್ಕಿಗಳು ಚಿಲಿಪಿಲಿ ನಾದವನ್ನು ಮಾಡುವುವು", ಇಲ್ಲಿ ಜಾವದಲ್ಲಿ ಎಂದು ಇರುವ ಹಾಗೆ, ಮುಂಜಾವದಲ್ಲಿ ಎಂದು ಇರಬೇಕೆ? ಅಥವಾ ಮುಂಜಾನೆಯಲ್ಲಿ ಇರಬೇಕೆ?
೨)ಅಸ್ಪಷ್ಟತೆ = ಇದರ ಬಗ್ಗೆ ತಿಳಿಯಲು "ಅಪ ಪ್ರಯೋಗಗಳ" ಬಗ್ಗೆ ಚರ್ಚಯನ್ನು ನೋಡಿ.
೩)ವಿಭಿನ್ನತೆ = ೨ರ ಹಾಗೆ
೪)ನೀನೇನಾ? = ಇದು ಆಡುಭಾಷೆಯ ರೂಪ, ಗ್ರಾಂಥಿಕವಾಗಿ "ನೀನೇನು", "ನೀನೆ", "ನೀನೆ ಎನು" ಎಂದು ನನ್ನ ತಿಳಿವಳಿಕೆ.
೫)ನೀನಾಗಿರಲಿಕ್ಕಿಲ್ಲ = ಇದು ಕೂಡ (ಮಂಗಳೂರಿನ)ಆಡುಭಾಷೆಯ ರೂಪ. ಬರವಣಿಗೆಯಲ್ಲಿ "ನೀನಾಗಿರಲು ಸಾಧ್ಯವಿಲ್ಲ", "ನೀನಾಗಿರಲಾರೆ". ನೀನಾಗಿರಲು + ಇಕ್ಕಿಲ್ಲ, ಇಲ್ಲಿ ಇಕ್ಕಿಲ್ಲ ಎಂದರೆ?
೬)ಮಾತುಗಳಲಿ = ೧ರ ಹಾಗೆ
೭)ಅರ್ಥ ಹುಡುಕುವವರು = ಅರ್ಥವನ್ನು ಹುಡುಕುವವರು, ಇದು ಬಹಳ ಸಾಮಾನ್ಯವಾಗಿ ಎಲ್ಲರು (ನಾನು ಕೂಡ ) ಮಾಡುವ ಸಂಗಿತಿ. ದ್ವಿತೀಯ ವಿಭಕ್ತಿಯನ್ನು ಬಿಡುವುದು ಸಮಾನ್ಯ. ಬಿಡದಿದ್ದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ.
೮) ಹೆಣ್ತನ ವಲ್ಲವೆ? = ಹೆಣ್ತನವಲ್ಲವೆ. ವಲ್ಲವೆ ಬೇರೆ ಪದದಂತೆ ತೋರುವುದು.
೯) ಜೀವಂತ ವಾಗಿರುವುದೂ = ೮ರ ಹಾಗೆ
೧೦)ಇದೇ = ಇದೇ ಇದು ಆಡುಭಾಷೆಯ ರೂಪ. ಬರವಣಿಗೆಯ ರೂಪ "ಇದುವೆ".
೧೧) ಬುಜ = ಭುಜ
೧೨) ಬಾವ = ಭಾವ
೧೩) ಚೆಲುವಲಿ = ೧ರ ಹಾಗೆ
೧೪) ತನ್ನುಸಿರ = ತನ್ನುಸಿರಿನ, "ತನ್ನುಸಿರ" ಈ ರೀತಿಯ ಪ್ರಯೋಗಳು "ಚಿನ್ನಾರಿ ಮುತ್ತ" ಚಿತ್ರದ ಗೀತೆಗಳಲ್ಲಿ ಕೇಳಿದ ನೆನಪು
೧೫)ಹಸಿರ = ಹಸಿರಿನ, "ಹಸಿರಿನ ಗಿರಿಗಳ ಸಾಲೆ" ನೆನಪು.
೧೬)ಮನಸು = ಮನಸ್ಸು
೨೦)ಬಾವನೆಗಳು = ಭಾವನೆಗಳು
೨೨)ಮೈಒಡ್ದಿದ = ಮೈಯೊಡ್ಡಿದ
೨೩)ಬುದ್ದಿ = ಬುದ್ಧಿ, ಇಲ್ಲಿ "ಧ"ಒತ್ತು. ಸರಿಯಾಗಿ ಕಾಣುತ್ತಿಲ್ಲ, ತಂತ್ರಾಂಶದ ದೋಷವಿರಬೇಕು.
೨೪)ಬಾವ = ಭಾವ
ಧನ್ಯವಾದ...ಒಂದು ಅಪರೂಪದ ಭಾವನಾಭರಿತ ಲೇಖನಕ್ಕಾಗಿ!!!
Re: ಅ: ಮನಸ್ಸಿನ ಹೆಜ್ಜೆಹಿಡಿದು
ಹಾಗೆಂದರೆ, ಲೇಖನ ಅಪರೂಪವೆಂದೇ? ಭಾವನೆ ಅಪರೂಪವೆಂದೇ? ('ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ' ಎಂದು ಬರೆದಾಗ ಸ್ಪರ್ಧೆ ರಾಷ್ಟ್ರೀಯವೇ ಅಥವಾ ಭಾರ ರಾಷ್ಟ್ರೀಯವೇ? ಎಂಬ ಸಂಶಯ ಬಂದಂತೆ).
"ಒಂದು ಅಪರೂಪದ, ಭಾವನಾಭರಿತ ಲೇಖನ..." ಎಂದು ಅಲ್ಪವಿರಾಮವನ್ನು ಸೇರಿಸಿ ಬರೆದರೆ ಅರ್ಥಾಭಾಸವನ್ನು ತಪ್ಪಿಸಬಹುದು ಎಂದು ನನ್ನ ಭಾವನೆ (ಅಕ್ಕನೆ ಅಥವಾ ಅಪ್ಪನೆ(ಣೆ) ಅಲ್ಲ
)
- ಶ್ರೀವತ್ಸ ಜೋಶಿ
ಅ: ಮನಸ್ಸಿನ ಹೆಜ್ಜೆಹಿಡಿದು
- ಶ್ರೀವತ್ಸ ಜೋಶಿ
ಒಳ್ಳೆಯ ಪ್ರಶ್ನೆ ಮತ್ತು ಒಳ್ಳೆಯ ಸಲಹೆ ಕೂಡ. ಧನ್ಯವಾದಗಳು
ಇಲ್ಲಿ ಗಮನಿಸಿ
ನೀವು ಕೊಟ್ಟ ಉದಾಹರಣೆಯಲ್ಲಿ ಹೀಗೆ ಬರೆದಿದ್ದರೆ ಗೊಂದಲವಿರುತ್ತಿರಲಿಲ್ಲವೇನೊ,
"ರಾಷ್ಟ್ರೀಯ ಭಾರವೆತ್ತುವ ಸ್ಫರ್ಧೆ" ಎಂದು. ಏಕೆಂದರೆ "ರಾಷ್ಟ್ರೀಯ" ಎಂಬ ವಿಶೇಷಣವು "ಭಾರವೆತ್ತುವ" ಎಂಬ ಪದಕ್ಕೆ ಅನ್ವಯವಾಗುವುದು, ಕೇವಲ "ಭಾರ"ಕ್ಕಲ್ಲ.
ಈ ರೀತಿ "ಅಪರೂಪದ ಭಾವನಾಭರಿತ ಲೇಖನ" ಎಂದಾಗ "ಅಪರೂಪದ" ವಿಶೇಷಣವು "ಭಾವನಾಭರಿತ" ಅನ್ವಯವಾಗುವುದು, ಕೇವಲ "ಭಾವನಾ"ಗಲ್ಲ.
ನನಗೆ "ಅಪರೂಪದ" ಎಂದು ಬರೆಯುವ ಬದಲು "ಅಪರೂಪವಾದ" ಎಂದು ಬರೆದಿದ್ದರೆ ಇನ್ನು ಹೆಚ್ಚು ಸೂಕ್ತವಾಗಿರುತ್ತಿತ್ತೊ ಎಂದು ಅನ್ನಿಸುತ್ತಿದೆ.
ವಿಶೇಷಣಗಳಿಗೆ, ಷಷ್ಟಿ ವಿಭಕ್ತಿಯನ್ನು(ಉದಾ: ಅಪರೂಪದ) ಹಾಕುವ ಬದಲು "ಆದ"ವನ್ನು ಸೇರಿಸಿದರೆ (ಅಪರೂಪವಾದ)ಹೆಚ್ಚು ಸ್ಫಷ್ಟವಾಗಿರುವುದೆಂದು ಅನ್ನಿಸುತ್ತಿದೆ.
ಇದನ್ನೆ ನಾವು "ಬೇಡದ/ಬೇಡವಾದ" ಗೊಂದಲದಲ್ಲಿ ಚರ್ಚಿಸಿದ್ದೆ?
Re: 'ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆ'
ನಮ್ಮೂರಲ್ಲೂ ಇಂತದ್ದೇ ಒಂದು ಗಾಭರಿfying ಬೋರ್ಡಿದೆ. ಶಿವಮೊಗ್ಗದ ಕರ್ನಾಟಕ ಸಂಘದ ಬದೀಲಿ ಒಂದು ಶಾಲೆ ಬೋರ್ಡು "ಸರ್ಕಾರಿ ಬಾಲಕಿಯರ ಪಾಠಶಾಲೆ" ಅಂತ ಇದೆ. ಸಣ್ಣಕ್ಕಿದ್ದಾಗ ಪ್ರತಿ ಸಲ ಅದನ್ನ ನೋಡ್ದಾಗೆಲ್ಲ ನಂಗೊಂದು ತಿಕ್ಲು ಅನುಮಾನ ಬರ್ತಿತ್ತು ಮೀನು,ಕುರಿ,ಕೋಳಿ ಸಾಕೋ ಹಂಗೆ ಸರ್ಕಾರ್ದೋರು ಹುಡ್ಗೀರ ಸಾಕಾಣಿಕೆ ಶುರು ಮಾಡ್ದಿದ್ರಾ ಅಂತ....
Sandeep Aithal (aithalsandy@gmail.com)
91-98443-73894
ನನ್ನ
ನನ್ನ ತಪ್ಪುಗಳನ್ನು ತೋರಿಸಿ ತಿದ್ದಿಕೊಳ್ಳಲು ಸಹಕರಿಸಿರುವುದಕ್ಕೆ ಧನ್ಯವಾದಗಳು.ಸರಿತಪ್ಪುಗಳ ಜ್ಞಾನ ಸ್ವಲ್ಪಮಟ್ಟಿಗಿದ್ದರೂ, ಅರಿವಿಲ್ಲದೇ ತುಂಬಾ ತಪ್ಪುಗಳನ್ನು ಮಾಡುತ್ತಿದ್ದೇನೆ.ಹೀಗೇಕೆ? ಎಂಬುದು ಅರ್ಥವಾಗುತ್ತಿಲ್ಲ.
ತಪ್ಪಾದರೂ ಪರವಾಗಿಲ್ಲ
ಸಿಂಚನಾರವರೇ ತಪ್ಪಾಗುತ್ತಿದೆಯೆಂದು ಬೇಸರ ಬೇಡ. ನಿಮ್ಮ ಲೇಖನದಲ್ಲಿನ ಸಾರ ಮುಖ್ಯ. ಸಾರ ಮೊದಲು, ವ್ಯಾಕರಣ ಭಾಷಾಪ್ರಯೋಗಗಳು ನಂತರ ಬರುವುದು.
ಅದೂ ಅಲ್ಲದೇ ನೀವು ತಪ್ಪಾಗಿ ಬರೆಯದಿದ್ದಲ್ಲಿ ಇಷ್ಟುದ್ದ ಬಾಲಂಗೋಚಿ ಆಗ್ತಿತ್ತೇ? ಒಬ್ಬರನ್ನೊಬ್ಬರು ಅರಿಯಲು ಸಾಧ್ಯವಾಗುತ್ತಿತ್ತೇ?
ಬರೆಯುವುದು ನಿಮ್ಮ ಧರ್ಮ, ಅದರ ಬಗ್ಗೆ ಕೊರೆಯುವುದು ನಮ್ಮ ಧರ್ಮ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ತುಂಬಾ ತಪ್ಪುಗಳನ್ನು ಮಾಡುತ್ತಿದ್ದೇನೆ.ಹೀಗೇಕೆ? ಅರ್ಥವಾಗುತ್ತಿಲ್ಲ.
ಸಂಪದಕ್ಕೆ ಅಥವಾ ಎಲ್ಲಿಗೇ ಆಗಲಿ ಬರೆದುದನ್ನು ಕಳಿಸುವ ಮೊದಲು ಒಂದು ಅಥವಾ ಎರಡು ಸಲ ನೋಡಿ . ಕಡೆಯ ಪಕ್ಷ ನಿಮ್ಮ ಪ್ರಕಾರ ಸರಿ ಇದೆಯೋ ನೋಡಿ . ಉಳಿದವನ್ನು ಉಳಿದವರಿಗೆ ಬಿಡಿ.
( ಉದಾಹರಣೆಗೆ ಇಲ್ಲಿ ಮೇಲೆ ನಾನು ಸಂಪದಕ್ಕೆ / ಅಥವಾ ಎಲ್ಲೇ ಆಗಲಿ ) ಅಂತ ಬರೆದಿದ್ದೆ -ಪ್ರಿವ್ಯೂ ನಲ್ಲಿ ನೋಡಿ ಬದಲಾಯಿಸಿದೆ!.)