ಆಯ್ದ ಒಳ್ಳೆಯ ಸಂಸ್ಕೃತ ಸುಭಾಷಿತಗಳು - ಕಡೆಯ ಕಂತು
೪೭. ಅಹಾರವನ್ನು ಪಚನವಾದ ಮೇಲೆ, ಹೆಂಡತಿಯನ್ನು ಯೌವನ ಕಳೆದ ಮೇಲೆ , ಶೂರನನ್ನು ರಣರಂಗದಿಂದ ಮರಳಿ ಬಂದ ಮೇಲೆ , ಬೆಳೆಯನ್ನು ಕೈಗೆ ಬಂದ ಮೇಲೆ ಹೊಗಳಬೇಕು.
ಜೀರ್ಣಮನ್ನಂ ಪ್ರಶಂಸೀಯಾತ್ ಭಾರ್ಯಾಂ ಚ ಗತಯೌವನಾಂ |
ರಣಾತ್ ಪ್ರತ್ಯಾಗತಂ ಶೂರಂ ಸಸ್ಯಂ ಚ ಗೃಹಮಾಗತಂ ||
೪೮. ಪುಸ್ತಕದಲ್ಲಿನ ವಿದ್ಯೆ , ಇನ್ನೊಬ್ಬರ ಕೈಗೆ ಹೋದ ಹಣ ಇವೆರಡೂ ಅಗತ್ಯ ಬಿದ್ದಾಗ ಲಭ್ಯವಾಗದಿದ್ದರೆ ಅವುಗಳಿಂದ ಏನು ಪ್ರಯೋಜನ?
ಪುಸ್ತಕಸ್ಥಾತು ಯಾ ವಿದ್ಯಾ ಪರಹಸ್ತಗತಂ ಧನಂ |
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ ||
೪೯. ಶಾಸ್ತ್ರವನ್ನು ಎಷ್ಟೇ ತಿಳಿದಿದ್ದರೂ ಅದರ ಕುರಿತು ಚಿಂತಿಸುತ್ತಿರಬೇಕು.
ರಾಜನನ್ನು ಎಷ್ಟೇ ಮೆಚ್ಚಿಸಿದ್ದರೂ ಓಲೈಸುತ್ತಲೇ ಇರಬೇಕು .
ಹೆಂಗಸನ್ನು ವಶಪಡಿಸಿಕೊಂಡಿದ್ದರೂ ರಕ್ಷಿಸುತ್ತಲೇ ಇರಬೇಕು .
ಶಾಸ್ತ್ರಜ್ಞಾನ , ರಾಜ , ಯುವತಿಯರ ವಿಷಯದಲ್ಲಿ ವಶವಾಗಿ ಹೋಗಿದ್ದಾರೆ ಎಂಬ ಮಾತೆಲ್ಲಿ?
ಶಾಸ್ತ್ರಂ ಸುಚಂತಮಥೋ ಪರಿಚಿಂತನೀಯಾ |
ಆರಾಧಿತೋಪಿ ನೃಪತಿ: ಪರಿಸೇವನೀಯ: ||
ಅಂಕೇ ಧೃತಾಪಿ ತರುಣೀ ಪರಿರಕ್ಷಣೀಯಾ |
ಶಾಸ್ತ್ರೇ ನೃಪೇ ಚ ಯುವತೌ ಚ ಕುತೋ ವಶಿತ್ವಂ? ||
೫೦. ಭೋಗಾ ನ ಭುಕ್ತಾ: ವಯಮೇವ ಭುಕ್ತಾಃ
ಕಾಲೋ ನ ಯಾತ: ವಯಮೆವ ಯಾತ:
ಅನ್ನಾ: ನ ಜೀರ್ಣಾ: ವಯಮೇವ ಜೀರ್ಣಾ:
( ನೆನಪಿನಿಂದ ಬರೆದಿದ್ದೇನೆ - ಕಡೆಯ ಸಾಲು ಗೊತ್ತಿಲ್ಲ - ಗೊತ್ತಾದಾಗ ತಿಳಿಸುವೆ.)
ನಾವು ಭೋಗಗಳನ್ನು ಅನುಭವಿಸಲಿಲ್ಲ ; ಅವು ನಮ್ಮನ್ನು ಅನುಭವಿಸಿದವು .
ನಾವು ಸಮಯವನ್ನು ಕಳೆಯಲಿಲ್ಲ ; ನಾವೇ ಕಳೆದುಕೊಂಡಿದ್ದೇವೆ.
ನಾವು ಭೋಜ್ಯಭಕ್ಷ್ಯಗಳನ್ನು ಜೀರ್ಣಿಸಲಿಲ್ಲ ; ನಾವೇ ಜೀರ್ಣವಾದೆವು .
'ಒಂದು, ಎರಡು , ಮೂರು, ನಾಲ್ಕು , ಆಮೇಲೆ ಏನು ? ನಂಗೇನ್ಗೊತ್ತು ? ನಮ್ಮಪ್ಪ ಕಲ್ಸಿರೋದು ಇಷ್ಟೇಯ!' ಅಂತ 'ಒಂದು ಮುತ್ತಿನ ಕಥೆ' ಚಿತ್ರದಲ್ಲಿನ ಹಾಡಿನ ಹಾಗೆ ... ಅಥವಾ ರಾ. ಕು. ಅವರ 'ಗಾಳಿಪಟ' ಲಲಿತ ಪ್ರಬಂಧಗಳ ಪುಸ್ತಕದಲ್ಲಿರೋ ಹಾಗೆ
ಮಗ್ಳೀಗ್ ಅಂತಾರ್ ಪುತ್ರಿ !
ಕೊಡೇಗ್ ಅಂತಾರ್ ಛತ್ರಿ !!
ಕತ್ರೀಗ್ ಅಂತಾರ್ ಕತ್ರಿ !!!
ಮುಂದೇನು ? ನನಗ ಇಷ್ಟS ಗೊತ್ರಿ !!!
೫೧. ಭಾಷೆಗಳಲ್ಲಿ ಮುಖ್ಯವಾದದ್ದು , ಮಧುರವಾದದ್ದು , ದಿವ್ಯವಾದದ್ದು , ಸಂಸ್ಕೃತ. ಅದರಲ್ಲಿ ಕಾವ್ಯವು ಹೆಚ್ಚು ಮಧುರವಾದದ್ದು ; ಅದರಲ್ಲಿಯೂ ಸುಭಾಷಿತವು ಬಲು ಮಧುರ. (ಗೀರ್ವಾಣ ಅಂದರೆ ಏನು ? ಯಾರಾದರೂ ಗೊತ್ತಿದ್ದರೆ ತಿಳಿಸಿ)
ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣ ಭಾರತೀ |
ತಸ್ಮಾದ್ಭಿ: ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಂ |
೫೨. ಮತ್ತು ಕಡೆಯದಾಗಿ ಮೊದಲನೇ ಸುಭಾಷಿತವನ್ನು ನಿಮ್ಮ ನೆನಪಿಗೆ ತಂದು ಕೊಡುತ್ತಿದ್ದೇನೆ .
ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ |
ಸುಭಾಷಿತ ರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ ||
ಸುಭಾಷಿತದ ಸ್ವಾರಸ್ಯವನ್ನು ನೋಡಿ ದ್ರಾಕ್ಷಿಯ ಮುಖ ಸಪ್ಪಗಾಯಿತು , ಸಕ್ಕರೆ ಕಲ್ಲಾಯಿತು , ಅಮೃತವು ಹೆದರಿ ಸ್ವರ್ಗಕ್ಕೆ ಓಡಿತು.

- Login or register to post comments
- 481 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಗೀರ್ವಾಣಿ
ಅಮರಕೋಶದ ವಾಗ್ವರ್ಗದ ಮೊದಲನೇ ಸಾಲಿನಂತೆ,
"ಬ್ರಾಹ್ಮೀ ತು ಭಾರತೀ ಭಾಷಾ ಗೀರ್ವಾಗ್ವಾಣೀ ಸರಸ್ವತೀ"
ಗಿರ್, ವಾಚ್ ಸೇರಿದಂತೆ ಮೇಲಿನ ಎಲ್ಲಾ ವಾಗ್ದೇವತೆಯ ಹೆಸರುಗಳು.
ಸುಭಾಷಿತದಲ್ಲಿ ವಾಣೀ ಎನ್ನುವುದನ್ನು ಭಾಷೆ ಎಂದು ತೆಗೆದುಕೊಂಡರೆ "ಗೀರ್ವಾಣೀ" ಎನ್ನುವುದು ಸರಸ್ವತಿಯ ಮಾತು ಎಂದುಕೊಳ್ಳುತ್ತೇನೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ