ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾರಂತರ ಜೀವಂತ ಪಾತ್ರಗಳು ೨೦ (೪)

ದಿನವೆಲ್ಲ ತನ್ನ ಕಣ್ನು ತಪ್ಪಿಸಿಯೇ ಓಡಾಡಿದ ವಿಮಲೆಯನ್ನು ವ್ಯಾಸ ಅವಳು ಶಾಲೆಗೆ ಹೋಗುತ್ತಿದ್ದ ದಾರಿಯಲ್ಲಿಯೇ ಸಂಧಿಸಿದ . " ಏಕೆ ವಿಮಲೆ ನನ್ನನ್ನು ಕಾಣಲೂ ಸಹ ಜಿಗುಪ್ಸೆಯೇ ? ನಾನೇನು ಮಾಡಲು ಸಾಧ್ಯವಿತ್ತು ? ವಿಧಿ ಯಾರು ಯಾರ ಬಾಳಿನಲ್ಲಿ ಯಾವ ಯಾವ ಆಟವನ್ನು ಆಡಬೇಕೆಂದಿದೆಯೋ ಯಾರು ಊಹಿಸಲು ಸಾಧ್ಯ ? ,, ಎಂದು ನೋವಿನಿಂದ ಮಾತಾಡಿದ , ಇದಕ್ಕೆ ಉತ್ತರವಾಗಿ ಕಣ್ಣೀರಲ್ಲದೆ ವಿಮಲೆಯಿಂದ ಬೇರೆ ಮಾತೇ ಬರಲಿಲ್ಲ . ಪುನಃ ವ್ಯಾಸನೇ " ವಿಮಲೆ ಆದದ್ದೆಲ್ಲಾ ಆಯಿತು , ಬಂದ ಬವಣೆಗಳಿಗೆ ಕೊರಗುವುದರಲ್ಲಿ ಅರ್ಥವಿಲ್ಲ . ಬಾಳನ್ನು ಎದುರಿಸುವ ಎದೆಗಾರಿಕೆಯನ್ನು ನಾವು ಬೆಳೆಸಿಕೊಳ್ಳಬೇಕಷ್ಟೆ . ಈಗಲು ನೀನು ಧೈರ್ಯ ವಹಿಸಿದರೆ ಪುನಃ ಬಾಳಿನಲ್ಲಿ ನವ ಉಷೆಯನ್ನು ಕಾಣಬಹುದು . ನಿನಗಾಗಿ ನಿನ್ನ ವ್ಯಾಸ ಇನ್ನೂ ಕಾದಿದ್ದಾನೆ . ನಿರ್ಧಾರ ನಿನ್ನದು ,, ಎಂದು ಧೃಢವಾಗಿ ತಿಳಿಸಿ ಬೊಂಬಾಯಿಗೆ ಮರಳಿದ .

ಬೊಂಬಾಯಿಗೆ ಮರಳಿದ ವ್ಯಾಸ ಅಲ್ಲಿ ನಾಟ್ಯಶಾಲೆಯನ್ನು ತೆರೆದು ನರ್ತನದ ಗುರುವಾದ . ನಾಟ್ಯಶಾಲೆಗೆ ಪ್ರೇರಣೆ ನೀಡಿದ ಟ್ಯೂಬ ಮಾತ್ರ ಫ್ರಾನ್ಸಗೆ ಹಿಂತಿರುಗಿ ಹೋಗಿದ್ದಳು . ಅವಳ ಯಾವ ನಿರೀಕ್ಷೆಗಳು ಅವಳಲ್ಲಿ ನಿರಾಸೆಯನ್ನುಂಟುಮಾಡಿದ್ದವೋ ಅವನ್ನು ಅವಳು ಮಾತ್ರ ಬಲ್ಲಳು . ವ್ಯಾಸನ ನರ್ತನ ಶಾಲೆಗೆ ದೊರಕಿದ ಒಬ್ಬ ಅಪೂರ್ವ ಪ್ರತಿಭಾವಂತ ವಿದ್ಯಾರ್ಥಿನಿ ಕೀರ್ತಿ ಎಂಬ ಹುಡುಗಿ ತನ್ನ ಪ್ರತಿಭೆಯಿಂದ ವ್ಯಾಸನ ಮನಸ್ಸನ್ನು ಗೆದ್ದಳು .

ವಿಮಲೆ ತನ್ನ ತಾಯಿ ಮತ್ತು ಅಣ್ಣ ಕೃಷ್ಣನ ಸಹಕಾರದಿಂದ ಬೊಂಬಾಯಿಗೆ ಬಂದು ವ್ಯಾಸನನ್ನು ಮದುವೆಯಾದಳು . ಇದರಿಂದ ಕೋಪಿಸಿಕೊಂಡವರೆಂದರೆ ವಿಮಲೆಯ ತಂದೆ ಶ್ರೀನಿವಾಸರಾಯರು ಮತ್ತು ಅವಳ ಚಿಕ್ಕಪ್ಪ ರಾಮರಾಯರು . ರಾಮರಾಯರಂತೂ ಕೆಂಡಾಮಂಡಲವಾಗಿ ತಮ್ಮ ವಂಶಕ್ಕೇ ಅಗೌರವ ತಂದ ವ್ಯಾಸನನ್ನು ಸಾಕಾಗುವಷ್ಟು ಹಳಿದರು .

ಬೊಂಬಾಯಿಯ ಯಾಂತ್ರಿಕ ಜೀವನ ವ್ಯಾಸನಿಗೆ ಬೇಸರ ತರಿಸಿತ್ತು . ಅದುವರೆಗೆ ತಾಯಿ ತಂಗಿಯರಿಂದ ದೂರವಿದ್ದು ಅಲ್ಲಿಂದಲೇ ಅವರಿಗೆ ಹಣಕಾಸಿನ ನೆರವು ನೀಡುತ್ತಿದ್ದ ವ್ಯಾಸ, ಈಗ ಅವರ ಜೊತೆಗೇನೇ ಇರುವಾಸೆಯಿಂದ ಉಡುಪಿಗೇ ಹಿಂದಿರುಗಲು ನಿರ್ಧರಿಸಿದ . ಆ ವೇಳೆಗೆ ತಂಗಿ ಯಮುನೆಯ ಮದುವೆಯನ್ನೂ ಯೋಗ್ಯ ವರ ರಾಜಗೋಪಾಲರೊಂದಿಗೆ ನಡೆಸಿದುದರಿಂದ ತಂಗಿಯ ಕುಟುಂಬಕ್ಕೂ ಹತ್ತಿರವಿರುವ ಆಸೆ, ರಾಜಗೋಪಾಲರ ಪ್ರೀತಿಯ ಆಮಂತ್ರಣದಿಂದಾಗಿ ಅವನಲ್ಲಿ ಅಂಕುರಿಸಿತ್ತು . ವಿರೋಧ ವ್ಯಕ್ತಪಡಿಸುವ ರಾಮರಾಯರಂತಹವರ ನಾಲಿಗೆಗೆ ಅವನು ಸೊಪ್ಪು ಹಾಕಬೇಕಾಗಿರಲಿಲ್ಲ .

ಉಡುಪಿಯಲ್ಲಿ ವ್ಯಾಸ ನಾಟ್ಯ ಶಾಲೆಯನ್ನು ತೆರೆದ. ಅಲ್ಲಿಯೇ ನಮ್ಮ ’ಮರಳಿ ಮಣ್ಣಿಗೆ’ಯ ರಾಮರಾಯರ ಪರಿಚಯದ ಲಾಭ ಅವನಿಗೆ ದೊರಕಿದುದು . ಅವರ ಹಳ್ಳಿಗೂ ಹೋದ ವ್ಯಾಸ , ಅವರ ತಾಯಿ ನಾಗವೇಣಿ ಅಮ್ಮನವರನ್ನೂ ಕಂಡ . ಅಲ್ಲಿ ಉಕ್ಕಿದ ಸಮುದ್ರದೆದುರಿನಲ್ಲಿ ’ಸಮುದ್ರ ಪ್ರತೀಕಾರ’ ಎಂಬ ರೂಪಕದ ರಾಮರಾಯರ ವಯೋಲಿನ್ ವಾದನದ ಜೀವ ಚೈತನ್ಯವನ್ನು ಆಲಿಸಿ , ಅವರ ಸಹಜ ಕಲೆಯ ಕೃಷಿಗೆ ಬೆರಗಾಗಿ ಹೋದ . ನಂತರ ಅವರ ಜೊತೆಗೆ ಸೇರಿಯೇ ತನ್ನ ಕಲಾತಂಡದ ಪ್ರದರ್ಶನಗಳನ್ನು ಉಡುಪಿಯಲ್ಲಿ ನೀಡಿ ನಾಟ್ಯದ ಹೊಸ ಮಾರ್ಗಗಳನ್ನು ಆವಿಷ್ಕರಿಸಿದ .

ಈ ನಡುವೆ ಅವನ ನೆಚ್ಚಿನ ಶಿಷ್ಯೆ ಕೀರ್ತಿ , ಚಲನಚಿತ್ರಗಳಲ್ಲಿ ನಟಿಸಿ ಕೀರ್ತಿ ಪ್ರತಿಷ್ಟೆಗಳನ್ನು ಗಳಿಸಿದಳು .ಇದರಿಂದ ತೀರಾ ನೊಂದವನೆಂದರೆ ವ್ಯಾಸ .ಅವನ ನೋವು ಅವಳ ಕೀರ್ತಿಯನ್ನು ಕುರಿತಲ್ಲ ; ಅವಳ ಅಧೋಗತಿಯನ್ನು ಕಂಡು . ಚಲನಚಿತ್ರಗಳಲ್ಲಿ ಅವಳು ನಟಿಸುತ್ತಿದ್ದ ಕೀಳು ಅಭಿರುಚಿಯ ಪಾತ್ರಗಳನ್ನು ಕಂಡು ಅವನ ಮನಸ್ಸು ತೀರಾ ನೊಂದಿತು . ದುಡ್ಡಿಗಾಗಿ ನಮ್ಮ ಸೀತೆ ದ್ರೌಪತಿಯರನ್ನು ಬೇಕಾದರೂ , ಬೀದಿಯ ಬೆಲೆವೆಣ್ಣಿನಂತೆ ವೇಷ ಹಾಕಿ ಚಿತ್ರಿಸಬಲ್ಲ , ಸಿನಿಮಾದವರ ನಡವಳಿಕೆ ಅವನಿಗೆ ವಾಕರಿಕೆ ಬರುವಂತಿತ್ತು . ಇದನ್ನೆಲ್ಲಾ ತೀರಾ ನೋವಿನಿಂದ ಹೆಂಡತಿ ವಿಮಲೆಯೊಡನೆ ಹಂಚಿಕೊಳ್ಳುತ್ತಿದ್ದ ವ್ಯಾಸನಿಗೆ , ವಿಮಲೆ ಸಾಂತ್ವನದ ಮಾತಾಡುತ್ತಿದ್ದಳು . ಹೀಗಿರುವಾಗಲೇ ಕೀರ್ತಿಯಿಂದ ವ್ಯಾಸನಿಗೆ ತಕ್ಷಣಕ್ಕೆ ಬಂದು ಕಾಣಬೇಕೆಂದೂ ಇಲ್ಲವಾದರೆ ತಾನು ಉಳಿಯುವಂತಿಲ್ಲವೆಂದೂ ತಂತಿ ಬಂದಿತು . ಇದರಿಂದ ಕೋಪಗೊಂಡ ವ್ಯಾಸ ಅದನ್ನು ಹರಿದು ಹಾಕಿದ . ಮುಂದಿನೆರಡು ದಿನಗಳಲ್ಲಿ ಕೀರ್ತಿಯ ತಾಯಿಯಿಂದ ಪುನಃ ಟೆಲಿಗ್ರಾಂ ಬರುತ್ತದೆ . ತಕ್ಷಣ ಬರಲೇಬೇಕೆಂದು ಕೀರ್ತಿಯ ಪ್ರಾಣ ಆಪತ್ತಿನಲ್ಲಿದೆಯೆಂದೂ ಅದರಲ್ಲಿರುತ್ತದೆ . ಈ ಬಾರಿ ವಿಮಲೆ ಅವರು ಯಾವ ಆಪತ್ತಿನಲ್ಲಿದ್ದಾರೆಯೋ ಹೋಗಿ ನೋಡಲೇಬೇಕೆಂದು ಬೇಡುತ್ತಾಳೆ .

ಬೊಂಬಾಯಿಯಲ್ಲಿ ಆಸ್ಪತ್ರೆಯಲ್ಲಿ ಜೀವನ ಮರಣದೊಡನೆ ಹೋರಾಡುತ್ತಿದ್ದ ಕೀರ್ತಿಯನ್ನು ತಿಂಗಳಾನುಗಟ್ಟಲೆ ಸುಶ್ರೂಷೆಯಿಂದ ಉಳಿಸಿಕೊಳ್ಳುವ ಪ್ರಮೇಯ ವ್ಯಾಸನಿಗೆ ಒದಗುತ್ತದೆ . ವೈದ್ಯರು ’ ನಮ್ಮ ಪ್ರಯತ್ನಕ್ಕಿಂತ ನೀವು ಬಂದುದು ಅವಳಿಗೆ ಪುನರ್ಜನ್ಮವಾಯಿತು ’ ಎನ್ನುತ್ತಾರೆ . ವ್ಯಾಸನೆದುರು ತನ್ನ ಕೀರ್ತಿ, ಪ್ರತಿಷ್ಟೆಯ ಆಸೆಯಿಂದ ತಾನು ತುಳಿದ ತಪ್ಪುದಾರಿ ಹೇಗೆ ತನಗೆ ಮುಳುವಾಯಿತೆಂಬುದನ್ನು ಪ್ರಾಂಜಲವಾಗಿ ಒಪ್ಪಿಕೊಂಡ ಕೀರ್ತಿ ’ಇನ್ನು ಬೊಂಬಾಯಿಯಲ್ಲಿ ನಾನಿರುವುದಿಲ್ಲ ’ ಎಂದು ನಿರ್ಧರಿಸಿ " ಇನ್ನು ಮುಂದೆ ಸದಾ ಕಾಲವೂ ನಾನು ನಿಮ್ಮ ಶಿಷ್ಯೆ , ನೀವು ತೋರಿಸಿದ್ದೇ ನನಗೆ ದಾರಿ ,, ಎಂದು ವ್ಯಾಸನೊಡನೆ ಉಡುಪಿಗೇ ಬಂದುಬಿಡುತ್ತಾಳೆ .

ಈಗ ವ್ಯಾಸನಿಗೆ ಸಿದ್ದಾರ್ಥನ ತ್ಯಾಗವನ್ನು ಒಂದು ವಿಶೇಷ ನಾಟ್ಯ ಪ್ರಯೋಗ ಮಾಡಲು ಸಾಧ್ಯವೆನ್ನಿಸುತ್ತಿದೆ . ಯಶೋಧರೆಯ ಪಾತ್ರ ವಹಿಸಲು ನೊಂದು ಮಾಗಿದ ಕೀರ್ತಿ ಇದ್ದಾಳೆ .

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
Santhu's picture

ನಿಮ್ಮ ಬರಹಗಳನ್ನು ವಿಮರ್ಶಿವಷ್ಟು ನನಗೆ ಸಾಹಿತ್ಯ ತಿಳಿದಿಲ್ಲ ಸರ್. ಆದ್ರೆ ಕಾರಂತರ ಕಾದಂಬರಿಗಳಲ್ಲಿ (ನಾನು ಅವರ ಎಲ್ಲಾ ಕಾದಂಬರಿಗಳನ್ನು ಓದಿಲ್ಲ) ನಾನ್ ಗಮನಿಸಿದ ಅಂಶ ಅಂದ್ರೆ ಹೀರೊ ತುಂಬಾ ಕಷ್ಟ ಅನುಭವಿಸುತ್ತಾನೆ. ಮುಂದೆ ಆ ಪರಿಸ್ಥಿತಿಗಳು ಅವನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪಾತ್ರ ವಹಿಸಿದರೂ, ಒಬ್ಬ ಮನುಷ್ಯ ಒಳ್ಳೆಯವನಾಗಬೇಕೆಂದ್ರೆ (ಇದು ರಿಲೆಟಿವ್ ಪದ) ಅಷ್ಟೆಲ್ಲಾ ಪಾಡು ಪಡಬೇಕೆಂದು ನನಗನ್ನಿಸೋಲ್ಲ. ಇನ್ನು ಕೆಲವು ಸಲ ೧೯೨೦-೪೦ ರ ಸುಮಾರಿಗೆ ಕರಾವಳಿಯಲ್ಲಿ ಬದುಕೆ ಅಷ್ಟು ಕಷ್ಟಕರವಾಗಿತ್ತೆ? ಎಂದು ಅನ್ನಿಸಿದ್ದೂ ಇದೆ.

csomsekraiah's picture

ನಲ್ಮೆಯ ಸಂತೋಷ್
ಕಥಾನಾಯಕರು ಕಷ್ಟಗಳನ್ನು ಅನುಭವಿಸುವುದು ಅಥವಾ ಇನ್ನಾವುದಾದರೂ ಸಿದ್ದ ಮಾದರಿಗಳು ಕಾರಂತರ ಪಾತ್ರಗಳಲ್ಲ . ಸಾಮಾನ್ಯವಾಗಿ ಜೀವನದಲ್ಲಿ ಎದುರಾಗುವ ಪ್ರಸಕ್ತಿಗಳಿಗೆ ಪ್ರತಿಕ್ರಿಯಿಸುವ ಮಾನವ ಸ್ವಭಾವವೇ ಅವನ ವ್ಯಕ್ತಿತ್ವವಾಗಿ ವಿಕಸಿಸುವ ರೀತಿಯನ್ನು ಅನಾವರಣಗೊಳಿಸುತ್ತಾ ಹೋಗುವುದೇ ಕಾರಂತ ಮಾದರಿ . ೧೯೨೦ - ೩೦ ರ ದಶಕದ ಜೀವನ ಕಷ್ಟಕರವಾಗಿತ್ತೇ ? ಎನ್ನುವ ಪ್ರಶ್ನೆಯನ್ನು ಮುಂದಿಡುತ್ತೀರಿ , ಅದಕ್ಕೆ ಉತ್ತರ ಖಂಡಿತ ಕಷ್ಟಕರವಾಗಿತ್ತು . ಆದರೆ ಅಂದಿನ ಜನ ಅದನ್ನು ಕಷ್ಟ ಎಂದುಕೊಳ್ಳುವುದಕ್ಕಿಂತ ಅದು ತಮ್ಮ ಪ್ರಾರಾಬ್ಧ ಎಂದುಕೊಂಡದ್ದೇ ಹೆಚ್ಚು . ಏಕೆಂದರೆ ನನ್ನದೇ ಬಾಲ್ಯದ ಸಮಯದ ಮಾನವ ಶ್ರಮವನ್ನು ನೆನೆದರೆ ಇಂದಿನ ಜೀವನ ಸಾಕಷ್ಟು ಸುಲಭವಾದುದು . ಕಾರಂತರ ಸಾಹಿತ್ಯದಲ್ಲಿ ಊಹಾತ್ಮಕ ಅಂಶಗಳು ಕಡಿಮೆ . ಎಲ್ಲ ಸಹಜ , ನೇರ ಮತ್ತು ಸರಳ . ಕಾರಂತ ಸಾಹಿತ್ಯದ ಬಗೆಗಿನ ನಿಮ್ಮ ಆಸಕ್ತಿಗೆ ಅಭಿನಂದನೆಗಳು .