ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ?
ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ? ಈ ಬಗ್ಗೆ ಹಿಂದೊಂದು 'ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಸಣ್ಣ ಲೇಖನವನ್ನು ಬರೆದಿದ್ದೆ . ಮೊನ್ನೆ ಸಂಪದದಲ್ಲಿ ಬೇಂದ್ರೆಯವರ 'ಪರಾಗ' ಕವಿತೆಯ ಕುರಿತು ಒಂದು ಒಳ್ಳೆಯ ಲೇಖನ ನೋಡಿದೆ . ಇತ್ತೀಚೆಗೆ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದರಲ್ಲಿ ಈ ಕೆಳಗಿನ ಕವನ ನೋಡಿದೆ. ಕವನ ತುಂಬ ಸರಳವಾಗಿದೆ . ಅದರೆ ಅದು ಕಾವ್ಯವನ್ನು ಅರ್ಥೈಸಿಕೊಳ್ಳುವ ಕುರಿತಾಗಿರುವದರಿಂದ ಕಾವ್ಯಾಸಕ್ತರಿಗೆ ಅನುಕೂಲವಾಗಬಹುದೆಂದು ಇಲ್ಲಿ ಕೊ(ಕು)ಟ್ಟಿದ್ದೇನೆ. ಹಾಡು ಹಾಡು ಎಂದರೆ ಇನ್ನೂ ಜಾಡು ಮೂಡದ ಕಾಡು ! ಹಿಡಿದದ್ದೇ ಹಾದಿ , ಅದೇ ಆದಿ . ರೊಟ್ಟಿ ಮುರಿಯುವದಕ್ಕೆ ಒಂದು ಮುಖವೇ ? ಹಲ್ಲೊಂದಿದ್ದರೆ ಹೇಗೂ ಸುಖವೇ. ಈ ಹಾಡು ತನಗೆ ತಾನೇ ಮೂಡಿ ಇಂದು ಕಾಡು ಹೀಗೆ ಹೋಗುವದು , ಹಾಗೆ ಹೋಗುವದು ಎಂದು ಇಲ್ಲೇನಿಲ್ಲ ಕಟ್ಟುಪಾಡು ! ಹೇಡಿಗಳು ಇದ ಕಂಡು ಹೆದರಿ ಹಿಂದಕೋಡಿದರೆ ಮೊಂಡು ಜನ ಇದರಲ್ಲಿ ಕಂಡ ಕಡೆ ನುಗ್ಗಿ ಮೈ ನೆಗ್ಗಿ - ನುಗ್ಗಿ , ಕೈ ಕಾಲು ಮಂಡಿ ನೋಯಿಸಿಕೊಂಡರೆ ಸೋಗಲಾಡಿ ಕಿಲಾಡಿ ಜನ ದೂರದಿಂದಲೇ ಇದರ ಚೂರು ಫೋಟೋ ಹಿಡಿದು ಕಟ್ಟು ಗಾಜಿನ ಮಧ್ಯೆ ಇಟ್ಟು ಕೊಂಡಾಡಿದರೆ ಶಕ್ತ ನುಗ್ಗಿ , ನಿಶ್ಶಕ್ತ ನೆಗ್ಗಿ ಒಬ್ಬನಿಗೆ ಬರೀ ಕೋತಿ , ಕೋಳಿ , ಹಾವು , ಹಂದಿ ಒಬ್ಬನಿಗೆ ಗಿಳಿ, ನವಿಲು, ಬೆಳ್ಳಕ್ಕಿ , ಜಿಂಕೆ . ಯಾರೋ ಪುಣ್ಯಾತ್ಮನಿಗೆ , ಜಲಪಾತಗೀತ - ಇದ್ದಕ್ಕಿದ್ದಂತೆ , ಅಥವಾ ಬೆಳಕನು ಕಂಡ ಯಾವ ಮುನಿಯೋ ಲಭ್ಯವಿದ್ದಂತೆ ಕಾಡಿನಲಿ ಕಂಡರೆ - ತಾವು ಕಂಡುದೆ ಸತ್ಯ ಎಂದು ಅವರೆಂದರೆ ನಮಗೇನು ತೊಂದರೆ ? - ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದು - ಪುಸ್ತಕದಿಂದ

- Login or register to post comments
- 855 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: