ಅನಿಮಿಷ ಯೋಗಿಯ ಆತ್ಮಸಂವಾದದ ನಂತರ ಅಲ್ಲಮನ ತರಂಗಿತ ಮನಸ್ಸು ನಿಶ್ಚಲವಾಗತೊಡಗಿತು . ಆದರೆ ಅದಷ್ಟೇ ಸಂಪೂರ್ಣ ಸತ್ಯವಾಗಿರಲಿಲ್ಲ ; ಸತ್ಯದ ಅಗಾಧ ಸಾಧ್ಯತೆಗಳ ಬಗ್ಗೆ ಅನ್ವೇಷಣೆ ಆಗತಾನೆ ಆರಂಭವಾಗಿತ್ತು . ಅದಕ್ಕಾಗಿ ಕಾಲೆಳೆದತ್ತ ಅವನ ಪಯಣ , ದೇಶ, ದೇಶಾಂತರಗಳಲ್ಲಿ , ಜನ ಜಂಗುಳಿಗಳ ನಡುವೆ ಅಲ್ಲಮನೆಂಬ ವ್ಯಕ್ತಿತ್ವವೇ ಕರಗಿ ಹೋಗುವಷ್ಟು ,ಜನ ಮಾನಸದೊಡನೆ ಲೀನವಾದ ಸ್ಥಿತಿಯಲ್ಲಿ ಸಮಷ್ಟಿ ಸ್ವರೂಪದ ಸತ್ಯದ ಅನ್ವೇಷಣೆ ; ಇಲ್ಲ ಅಲ್ಲೆಲ್ಲಿಯೂ ಸಮಗ್ರ ಸತ್ಯದ ಹೊಳಹು ಕಂಡು ಬರಲಿಲ್ಲ .
ತನ್ನ ಅಂತರಂಗದೊಳಗಲ್ಲಿಯೇ ಅನ್ವೇಷಣೆಗೆ ತೊಡಗಲು, ನಿಬಿಡ ಕಾನನಾಂತರಗಳಲ್ಲಿ ನಿಡುಗಾಲದ ಏಕಾಂತ . ತಾನು ಬಾಲ್ಯದಲ್ಲಿಯೇ ಕಲಿತಿದ್ದ ಪ್ರಾಥಮಿಕ ಯೌಗಿಕ ಕ್ರಿಯೆಗಳ ಪ್ರಯೋಗಕ್ಕಾಗಿ ನಿತಾಂತ ಮೌನದ ಗುಹೆಗಳಲ್ಲಿ ವಾಸ . ಎಷ್ಟು ದಿನ ? ಎಷ್ಟು ಕಾಲ ? ಹನ್ನೆರಡು ವರ್ಷವೋ ? ಹದಿನಾಲ್ಕೋ ? ಯಾರು ಬಲ್ಲರು ? ಈ ದೀರ್ಘ ಕಾಲದ ಅವಧಿಯಲ್ಲಿ ಅವನು ಉಂಡನೋ ? ಎಷ್ಟು ಉಪವಾಸವಿದ್ದನೋ ? ಶರೀರ ಧರ್ಮಗಳನ್ನು ಮರೆತನೋ ; ಸಹಿಸಿದನೋ? ಅವನು ಮಾತ್ರವೇ ಬಲ್ಲನು .
ಉಂಡನೆಂದಡೆ ಹಸಿವಿಲ್ಲ , ಕಂಡಹನೆಂದರೆ ಪ್ರತಿಯಿಲ್ಲ
ನೋಡಿರೇ ನೋಡಿರೇ ಉದಕದೊಳಗಣ ಜ್ಯೋತಿಯಂದವ
ಗುಹೇಶ್ವರ ನಿಮ್ಮ ನಾಮವ ಹಿಡಿದು ಬಿಟ್ಟಡೆ ಭಂಗವಯ್ಯ
ಹಸಿವಿಲ್ಲದೆ ಉಣಬಲ್ಲಡೆಉಪಾಧಿ ಇಲ್ಲದೆ ಬೇಡಬಲ್ಲಡೆ
ಅದು ಮರ್ಮ ಅದು ಸಂಬಂಧ ಅವರ ನಡೆ ಪಾವನ , ಅವರ ನುಡಿ ತತ್ವ
ಅವರು ಜಗದಾರಾಧ್ಯರೆಂಬೆ ಗುಹೇಶ್ವರ
ಯೌಗಿಕ ಅನುಸಂಧಾನದಲ್ಲಿ ಹಗಲಿರುಳುಗಳು ಅರಿವೇ ಇಲ್ಲದಂತೆ ಉರುಳಿ ಹೋದವು , ಅಂತರಂಗದ ಅನ್ವೇಷಣೆಗಳಿಗಾಗಿ ಬಾಹ್ಯ ಶರೀರ ನಿತ್ಯ ಪ್ರಯೋಗ ಭೂಮಿಯಾಯಿತು . ಸ್ಥೂಲ , ಸೂಕ್ಷ್ಮ ಗುರು , ಲಘುಗಳ ಹಂಗಿಲ್ಲದ ಆತ್ಮದ ಆವೇಗಕ್ಕೆ ಭೌತಿಕ ನಿಯತಿಗಳ ಜಡ ಸಮೂಹವಾದ ಶರೀರ ಸಮಷ್ಟಿಯೂ ತತ್ತರಿಸಿ ಹೋಯಿತು .ಎಲ್ಲ ಜಂಜಡ, ತತ್ತರ, ಬಿತ್ತರಗಳ ನಡುವೆ ಮೌನದಲ್ಲಿ ; ಮುಗ್ಧತೆಯಲ್ಲಿ ಮೂಲಾತಿಮೂಲದ ಪ್ರಶಾಂತಿಯನ್ನು ಸ್ಪರ್ಶಿಸಲು ಅವಿರತ ಪ್ರಯತ್ನ ಸಾಗಿತು .
ಹಿಂದಣ ಅನಂತವನು, ಮುಂದಣ ಅನಂತವನು
ಒಂದು ದಿನ ಒಳಕೊಂಡಿತ್ತು ನೋಡಾ !
ಒಂದು ದಿನವನೊಳಕೊಂಡು ಮಾತಾಡುವ ಮಹಂತನ ಕಂಡು ಬಲ್ಲವರಾರಯ್ಯ ?
ಆದ್ಯರು ವೇದ್ಯರು ಅನಂತ ಹಿರಿಯರು
ಲಿಂಗದಂತುವನರಿಯದೆ ಅಂತೆ ಹೋದರು ಗುಹೇಶ್ವರ
ಅಲ್ಲಮನ ಜೀವಮಾನದಲ್ಲಿ ಬಹಿರಂಗದಲ್ಲಿ ಅವನು ಕಂಡುದಕ್ಕಿಂತಾ ಯಾರಿಗೂ ಕಾಣದೆ ಎಲ್ಲಿಯೋ ತನ್ನೊಳಗೇ ತಾನು ಸಮರಸ ಭಾವದಲ್ಲಿದ್ದ ಅವಧಿಯೇ ಹೆಚ್ಚು . ಅದರಿಂದಾಗಿಯೇ ಬಾಹ್ಯ ಪ್ರಪಂಚಕ್ಕೆ ಅವನು ನಿಗೂಢ ; ಮೋಡಗಳ ಮರೆಯಲ್ಲಾಡುವ ಸೂರ್ಯನಂತೆ ವಿಸ್ಮಯ ಸ್ವರೂಪ .ಹೊರ ಕಾಣಿಸಿದಾಗ ಕಣ್ಣು ನೆಟ್ಟು ನೋಡಲಸದಳವಾದ ತೇಜಸ್ಸು .ಮಾನವ ಮಾತ್ರರನ್ನು ಮುಗ್ಧಗೊಳಿಸುವ , ಮನಕ್ಕೆ ಸಾಂತ್ವನ , ಮುದಗಳನ್ನು ನೀಡುವ ಅಪೂರ್ವ ಶಕ್ತಿಯುತ ಬಿಂಬ ಅಲ್ಲಮನದು .
ಇಪ್ಪತ್ತೈದು ತತ್ವದ ಹತ್ತೆಂಬ ದ್ವಾರದಲ್ಲಿ ಬಳಲುವ
ವ್ಯರ್ಥಗೇಡಿ ಮನವ ನಾನೇನೆಂಬೆನಯ್ಯ
ತನ್ನ ತಾ ತಿಳಿಯಲು ತನಗೆ ತಾನನ್ಯವಿಲ್ಲ ಮರುಳೆ !
ಮುತ್ತಯ್ಯನ ಬೆಣ್ಣೆಯ ಶಿಶು ನುಂಗಿತ್ತು
ಮತ್ತೆ ಶಿಶುವಿವ ಸುಖವನೇನೆಂಬೆ ಗುಹೇಶ್ವರ
ಕಾನನಾಂತರದ ನಿಗೂಢ ಗುಹೆಗಳಲ್ಲಿ ನಡೆಸಿದ ಅಷ್ಟಾಂಗಯೋಗದ ಅನುಸಂಧಾನಗಳು , ಮನ, ವಚನ , ಕಾಯಗಳನ್ನು ಸಮಸ್ಥಿತಿಯಲ್ಲಿರಿಸಿ , ಹಸಿವು, ನಿದ್ರೆ, ನೀರಡಿಕೆಗಳನ್ನು ಐಚ್ಚಿಕಗೊಳಿಸಿ, ಅಸ್ಥಿರ ಮನಸ್ಸಿನ ಹೊಯ್ದಾಟವನ್ನು , ನಿವಾತ ಸ್ಥಳದ ದೀಪದಂತೆ ಸ್ಥಿರಗೊಳಿಸಿದ ಪರಿಣಾಮವಾಗಿ ಆತ್ಮವು ಶಾಶ್ವತ ಸತ್ಯದೊಡನೆ ಸಮಾಹಿತವಾಗಿ ದಿವ್ಯ ಪ್ರಭೆಯಾಯಿತು .
ಸ್ಥೂಲ, ಸೂಕ್ಷ್ಮದೊಳಗೆ ಬೆಳಗುವ ಮಹಾಬೆಳಗಾಗಿ
ಹೊಳೆವ ಜ್ಞಾನಜ್ಯೋತಿ ದಳಗಳನೆಲ್ಲವ ಮೀರಿ
ನೆಳಲ ನುಂಗಿದ ಬಿಸಿಲಿನೊಳಗೆ ಚಂದ್ರಮನುದಯ
ಜಲಧಿವಲಯದ ಬೆಳಸ ಹೇಳಲಸದಳವಲ್ಲ !
ಆಳು ಆಳ್ವನ ನುಂಗಿ ಈರೇಳು ಭುವನಂಗಳ ದಾಂಟಿ
ಗುಹೇಶ್ವರ ನಿಂದ ನಿಲವು ಹೊರಗು ಒಳಗನೆ ನುಂಗಿತ್ತು
ಅಲ್ಲಮನ ಇರವಿನ ಜೊತೆಗೆ ಪ್ರಚ್ಛನ್ನ ಶಾಂತಿಯು ನೆಲೆಗೊಂಡು ಕಾಂತಾರದ ಕ್ರೂರ ಪ್ರಾಣಿಗಳೂ ಸಹ ಅಸೀಮ ಶಾಂತಿಯ ಸಾನ್ನಿಧ್ಯದಲ್ಲಿ ಶಿರಬಾಗಿ ನಿಂತವು . ಪ್ರಕೃತಿಯೆಲ್ಲವೂ ಅಲ್ಲಮನೊಳಗಣ ಮೂಲಪ್ರಕೃತಿಯೊಡನೆ ಸಮಾಹಿತವಾಗಿ , ಸಮೇಳವಾಯಿತು . ಶರಣ ಲಿಂಗಾರ್ಚನೆಯ ಮಾಡಲೆಂದು ಪುಷ್ಪಕ್ಕೆ ಕರವ ನೀಡಿದರೆ ಆ ಪುಷ್ಪ ನೋಡ ನೋಡ ಕರದೊಳಗಿತ್ತಲ್ಲಾ ! ಅದು ಓಗರದ ಗೊಬ್ಬರವನುಣದು ಕಾಮದ ಗಣ್ಣಿಯರಿಯದು ನಿದ್ರೆಯ ಕಪ್ಪೊತ್ತದು ಅರುಣ ಚಂದ್ರರ ತೆರೆಯಲ್ಲಿ ಬೆಳೆಯದು ಲಿಂಗವೇದಿಯಾಗಿ ಬೆಳೆದ ಪುಷ್ಪವನು ಗುಹೇಶ್ವರ ನಿಮ್ಮ ಶರಣ ಪ್ರಾಣ ಲಿಂಗಕ್ಕೆ ಪೂಜೆಯ ಮಾಡಿದನು ನಿರ್ವಚನ : ಎಲೆ ಮನವೆ , ನೀ ನಿನ್ನ ನಿಜವ ತಿಳಿವಡೆ ಆ ನಿನ್ನ ನಿಜವ ಹೇಳುವೆ ಕೇಳು : ಅದು ಕೇವಲ ಜ್ಯೋತಿ , ಅದು ವರ್ಣಾತೀತ ನೀನದನರಸುವಾಗ ನಿನಗಾವಲ್ಲಿ ನಿಶ್ಚಯ ತೋರಿತ್ತು - ಅದೀಗ ನಿನ್ನ ಪರಿಪೂರ್ಣತ್ವದ ನೆಲೆ . ಆ ನಿನ್ನ ನಿಜವ ನಿಶ್ಚಯಿಸಿ ನಿರ್ಗಮನಿಯಾದಲ್ಲಿ ಅದೇ ನಿನ್ನ ಸಮ್ಯಜ್ಞಾನದ ತೋರಿಕೆ ಆ ತೋರಿಕೆಯ ಅಖಂಡ ಬೆಳಗಿನ ಹೊಳಹಿನೊಳಗೆ ನೀ ನಮ್ಮ ಗುಹೇಶ್ವರ ಲಿಂಗದ ಶ್ರೀಚರಣವನರಸಿಕೊಂಡು ನಿಶ್ಚಿಂತನಾಗೆಲೆ ಮನವೇ .









ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ - ೩ (೧)
ಉ: ಅನನ್ಯ ಅಲ್ಲಮ - ೩ (೧)
ಉ: ಅನನ್ಯ ಅಲ್ಲಮ - ೩ (೧)
ಉ: ಅನನ್ಯ ಅಲ್ಲಮ - ೩ (೧)
ಉ: ಅನನ್ಯ ಅಲ್ಲಮ - ೩ (೧)
ಉ: ಅನನ್ಯ ಅಲ್ಲಮ - ೩ (೧)
ಉ: ಅನನ್ಯ ಅಲ್ಲಮ - ೩ (೧)
ಓ ಎಲ್ ನಾಗಭೂಷಣಸ್ವಾಮಿಯವರ 'ಲೋಕಾಂತ ಏಕಾಂತ' ಪುಸ್ತಕ ನನ್ನಲ್ಲಿ ಅಲ್ಲಮನ ಬಗೆಗೆ ಕುತೂಹಲ ಮೂಡಿಸಿತ್ತು . ನಿಮ್ಮ ಸರಣಿ ಈ ವರೆಗೆ ಓದಲಾಗಿರಲಿಲ್ಲ . ಈಗ ಪುರುಸೊತ್ತಾಗಿ ಮೊದಲಿನಿಂದ ಓದುತ್ತ ಕೂತಿದ್ದೇನೆ. ಅಲ್ಲಮನನ್ನು ತಿಳಿಯಲು ನಿಮ್ಮ ಬರಹಗಳು ನೆರವಾಗಲಿವೆ. ನಿಮ್ಮ ಸರಣಿಯ ಕ್ರಮಿಸುವ ದಾರಿಯಲ್ಲಿ ನಾನೂ ಇದ್ದೇನೆ.
ಈ ಸರಣಿಗಾಗಿ ತುಂಬಾ ತುಂಬಾ ಧನ್ಯವಾದಗಳು.