24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸತ್ಯನಾರಾಯಣರ ಕಾಲಜಿಂಕೆ ಕಾದಂಬರಿ

August 6, 2006 - 8:23pm
vijayaraghavan
ಗೆಳೆಯ ಸತ್ಯನಾರಾಯಣರ ಹೊಸ ಕಾದಬರಿ ಕಾಲಜಿಂಕೆ ಪ್ರಕಟವಾಗಿದೆ. ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ. ಸತ್ಯನಾರಾಯಣ ತುಂಬ ಕಡಿಮೆ ಆದರೆ ತುಂಬಾ ಅಚ್ಚುಕಟ್ಟಾಗಿ ಬರೆಯುತ್ತಾರೆ. ಅವರ ಬರೆಹ ನಂಬುವುದು ಬರೆಹದಲ್ಲಿನ ಶಕ್ತಿಯನ್ನು ಮಾತ್ರ. ಅವರ ಪ್ರಬಂಧಗಳನ್ನ ಓದಿದ್ದರೆ, ಕಥೆಗಳನ್ನ ಓದಿದ್ದರೆ ನಿಮಗೆ ಇದು ಮನಸ್ಸಿಗೆ ಬರುತ್ತದೆ.ಆದ್ದರಿಂದಲೆ ಒಂದು ತರಹೆ ಅನ್‌ ಕಾಂಪ್ರಮೈಸಿಂಗ್ ಬರಹಗಾರ ಇವರು ಅಂತ ನನಗೆ ಅನ್ನಿಸಿದೆ. ಈ ಕಾದಂಬರಿಯಲ್ಲಿ ನಿಜ ಹೇಳಬೇಕೆಂದರೆ ಅನ್ನೋ ಒಂದು ಸಾಲುಒಂದು ಭಾಗವಾಗಿದೆ. ಇದು ಕಥೆಯ protagonist ರಂಗನಾಥನ ಸಮಸ್ಯೆಯಾ? ಈ ರಂಗನಾಥ ನಾವೋ, ನೀವೋ, ಅಥವಾ ಸತ್ಯನಾರಾಯಣರಾ ಅಂತ ಕೇಳಿಕೊಂಡು ಕಾದಂಬರಿನ ಓದೋಕೆ ಶುರು ಮಾಡಿದಿರೋ ಪ್ರಾಬ್ಲಂ ಶುರುವಾಗುತ್ತೆ. ಅದಕ್ಕೇನೆ ನಿರಾಳವಾಗಿ ಓದಿ. ಇದರಲ್ಲಿ ತುಂಬಾ ಎಳೆಗಳಿದ್ದಾವೆ. ರಂಗನಾಥ ಮೊದಲು ಪ್ರವೇಶ ಮಾಡ್ತಾನೆ. ಆದ್ದರಿಂದ ಕಥೆಯ protagonist ಅವನು ಅಂದೆ. ಆದರೆ ಪ್ರಾರ್ಥನಾ, ಸುಧಾ, ಸ್ವಾಮಿನಾಥ, ಅವನ ತಂದೆ ನಾರಾಯಣ ಮೂರ್ತಿ ಇವರೆಲ್ಲ ಈ ಫ್ಯಾಬ್ರಿಕ್ಕಿನಲ್ಲಿ ವಾರ್ಫ್ ಮತ್ತು ವೆಫ್ಟ್ ಅಂತಾರಲ್ಲ ಹಾಗೆ ಕೂಡಿಕೊಂಡಿದ್ದಾರೆ. ಆದರೆ ಅವರು ಆ ಕ್ಷಣಕ್ಕೆ ಸಂತೆಗೆ ಬಂದವರ ಹಾಗೆ ಇದ್ದಾರೆ. ಪ್ರತಿಯೊಂದು ಎಳೆಯಲ್ಲು ಅವರವರು protagonist ಆಗಿದ್ದಾರೆ. ಹೀಗೆ ಬಿಡಿಬಿಡಿಯಾದರೂ ಅವೆಲ್ಲವೂ ಒಂದು ಆರ್ಗ್ಯಾನಿಕ್ ಆಗಿ ಕೂಡಿಕೊಳ್ಳುವುದು ಕಾದಂಬರಿಯನ್ನು ಓದಿ ಮುಗಿಸಿದ ಮೇಲೆಯೇ. ಸತ್ಯನಾರಾಯಣ ಬರೆಯುವ ಬಹಳ ಕಥೆಗಳು ಹೀಗೆ ಒಳಗೆ ಸೇರಿಕೊಳ್ಳುವ ಆಮೇಲೆ ದೊಡ್ಡದಾಗಿ ಬೆಳೆದು ಹೊಟ್ಟೆ ಸೀಳಿಕೊಂಡು ಹೊರಬರುವ ಹನುಮಂತನ ಗುಣವನ್ನ ಪಡೆದುಕೊಂಡಿರುತ್ತವೆ. ಸಾಮಾನ್ಯವಾಗಿ ಕವಿತೆ ಬೇಡುತ್ತಲ್ಲ ಓದಿನ ನಂತರ ಮೌನ ತಾಳಿ ನಮ್ಮೊಂದಿಗೆ ನಾವೇ ಅನುಸಂಧಾನದಲ್ಲಿ ತೊಡಗುವುದನ್ನು, ಅಂತಹ ಮನಸ್ಥಿತಿಯನ್ನು ಡಿಮ್ಯಾಂಡ್ ಮಾಡುತ್ತವೆ. ಅನುಭವಕ್ಕೆ ಬರದ್ದನ್ನು ಬರೆಯಬಾರದು ಎಂದು ಹಠ ತೊಟ್ಟಂತೆ ಬರೆಯುವ ಸತ್ಯನಾರಾಯಣ ಅಪ್ಪರ್(?) ಮಧ್ಯಮವರ್ಗದ ಮನೋಧಾರ್ಮಿಕ ಸಂಕಟಗಳನ್ನು ತಮ್ಮ ಬರವಣಿಗೆಯ ಮೂಲ ಕನ್ಸರ್ನ್ ಮಾಡಿಕೊಂಡಿದ್ದಾರೆ ಅನ್ನಿಸುತ್ತೆ.
ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by shreekant.mishrikoti on
ಮೊದಲು ಇಂಗ್ಲೀಷ್ ಆಡುಮಾತಿನಲ್ಲಿ ಪ್ರವೇಶ ಮಾಡಿತು . ನಿನ್ನೆ ಮೊನ್ನೆ ನಾವು ನಮ್ಮ ತಂದೆ ಅಜ್ಜರು ಉಪಯೋಗಿಸಿದ ಕನ್ನಡ ಶಬ್ದ ಕೈಬಿಟ್ಟು ಇಂಗ್ಲೀಷ್ ಅನ್ನು ಆಡು ಮಾತಿನಲ್ಲಿ ಉಪಯೋಗಿಸಿದೆವು . (ಬೆಳಿಗ್ಗೆ , ಮುಂಜಾನೆ ಇತ್ಯಾದಿಗಳು ಮಾರ್ನಿಂಗುಗಳಾದವು ಗೆಳೆಯರು ಸ್ನೇಹಿತರು ಫ್ರೆಂಡ್ಸಾದರು ಇ..) ಟೀವಿಯಲ್ಲಿ ಸಂಭಾಷಣೆ , ಧಾರಾವಾಹಿಯ ಭಾಷೆ ಗಮನಿಸಿ. ವಾರಪತ್ರಿಕೆಯೊಂದರಲ್ಲಿ ಒಂದು ಕನ್ನಡ ಕಥೆಯಲ್ಲಿ ಅರ್ಧದಷ್ಟು ಇಂಗ್ಲೀಷನ್ನು ನೋಡಿದೆ. ಈಗ ಈ ಲೇಖನ. ಶಿಷ್ಟ ( ಗ್ರಂಥಸ್ಥ ) ಕನ್ನಡವೂ ಕಂಗ್ಲೀಷ್ ಆಗುತ್ತಿದೆಯೇ ? ಗ್ರಾಂಥಿಕ ಕನ್ನಡವೂ ಇಂಗ್ಲೀಷಿನತ್ತ ಹೊರಳುತ್ತಿದೆಯೇ ? ಸಾಹಿತಿ , ವಿಮರ್ಶಕರೂ ಕನ್ನಡ ಮರೆಯುತ್ತಿದ್ದಾರೆಯೇ ? ಈ ಲೇಖನದಲ್ಲಿ ಅನ್‌ ಕಾಂಪ್ರಮೈಸಿಂಗ್ ಬರಹಗಾರ - ರಾಜಿಮಾಡಿಕೊಳ್ಳದ ಬರಹಗಾರ ಎನ್ನಬಹುದಿತ್ತಲ್ಲವೇ ? ಹಾಗೆಯೇ ಪ್ರಾಬ್ಲಂ ಶುರುವಾಗುತ್ತೆ. - ಸಮಸ್ಯೆ ಶುರುವಾಗುತ್ತೆ. ಡಿಮ್ಯಾಂಡ್ ಮಾಡುತ್ತವೆ. - ಬೇಡುತ್ತವೆ ಬರವಣಿಗೆಯ ಮೂಲ ಕನ್ಸರ್ನ್ - ಬರವಣಿಗೆಯ ಮೂಲ ಕಾಳಜಿ ಎಂದಿದ್ದರೆ ಬರುತ್ತಿದ್ದಿಲ್ಲವೇ ? "protagonist" , "ಈ ಫ್ಯಾಬ್ರಿಕ್ಕಿನಲ್ಲಿ ವಾರ್ಫ್ ಮತ್ತು ವೆಫ್ಟ್ ಅಂತಾರಲ್ಲ ಹಾಗೆ " , "ಆರ್ಗ್ಯಾನಿಕ್ ಆಗಿ " ಇವುಗಳ ಅರ್ಥವನ್ನು ತಿಳಿಯಲು ನಾನು ಏನು ಮಾಡಲಿ ? ಯಾರ ಕೇಳಲಿ ? ಇಂಥದನ್ನು ಓದುವ ಬದಲು ಓಡಿ ಹೋದೇನು. ಇನ್ನು ಕನ್ನ್ಡಡದ ಗತಿ ಏನೋ ? ಕನ್ನಡ ಮತ್ರ ಬರುವ , ಬಳಸುವ ನಮ್ಮ ಬಹುಪಾಲು ಕರ್ನಾಟಕದ ಜನತೆಯ ಗತಿ ಏನೋ ? ಒಂದೇ ದಾರಿ . ಇಂಗ್ಲೀಷೇ . * ಇನ್ನು ಮನೆಗಳಲ್ಲಿ ಕನ್ನಡ ಶಬ್ದಕೋಶ ಬೇಕಿಲ್ಲ - ಇಂಗ್ಲೀಷ್ ಡಿಕ್ಷನರಿ ಇಸ್ ಏ ಮಸ್ಟ್ ಕಣ್ರೀ. * ಒಂದನೇ ವರ್ಗದಿಂದ ಏಕೆ ಕನ್ನಡ ? - ಗರ್ಭಸ್ಥ ಶಿಶುವಿಗೇ ಅಭಿಮನ್ಯುವಿನ ಹಾಗೆ ಇಂಗ್ಲೀಷ್ ದೀಕ್ಷೆ ಯಾಗುತ್ತದೆ . * ಅಳಿದುಳಿದ ಸದ್ಯದ ಪೀಳಿಗೆಗಾಗಿ ( ಪೀಳಿಗೆ ಅಂದರೆ ಅರ್ಥ ಹೇಳಬೇಕೇನೋ - ಜನರೇಶನ್ ಕಣ್ರೀ) ಇಂಗ್ಲೀಷ್ ಅನ್ನಾದರೂ ಕಲಿಸಿ ಇಲ್ಲ ಇಂಗ್ಲೀಷ ಪದಗಳ ಕನ್ನಡ ಲಿಪಿಯಲ್ಲಿ ಒಂದು ಡಿಕ್ಷನರಿ ಮಾಡಿ . **** ಸಾಯುತಿದೆ ನಿಮ್ಮ ನುಡಿ , ಕನ್ನಡ ಕಂದರಿರಾ , ಏನು ಮಾಡುತ್ತಿದ್ದೀರಿ ? ಅಳಿದುಳಿದ ಕನ್ನಡ ಬಾಷೆಯನ್ನು ಶುದ್ಧತೆಯ ಚರ್ಚೆಯಿಂದ ಆಡುಭಾಷೆ ,ತಪ್ಪು ಪದ , ಸಂಸ್ಕೃತಕ್ಕೆ ಕನ್ನಡ ಪದ ಎಂದೆಲ್ಲ ಕೊಲ್ಲುತ್ತಿದ್ದೀರಿ . ಕನ್ನಡಮ್ಮನೇ , ನಿನ್ನ ಕಥೆ ಮುಗಿಯಿತು. ನಿನ್ನ ಮಕ್ಕಳೇ ನಿನ್ನ ಕತ್ತು ಹಿಚುಕುತ್ತಿದ್ದಾರೆ ? ಇನ್ನು ಯಾರು ನಿನ್ನನ್ನು ಉಳಿಸಿಕೊಳ್ಳಬೇಕು ? "ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

Submitted by ಸಂಗನಗೌಡ on

ಬಂಗಾಲಿ ಆಡು ಭಾಷೆ ಮತ್ತು ಸಾಹಿತ್ಯಕ ಭಾಷೆಗಳಲ್ಲಿ ತುಂಬಾ ವ್ಯತ್ಯಾಸವಿದೆ, ಹಾಗೆ ಕನ್ನಡದಲ್ಲೂ ಸಾಹಿತ್ಯದಲ್ಲಿಯಾದರೂ ಶುದ್ಧ ಕನ್ನಡ ಬಳಸಬೇಕು, ಹಾಗೆ ಸಾಧ್ಯವಾಗದಿದ್ದಲ್ಲಿ, ದಯವಿಟ್ಟು ಬರೆಯಲೇ ಬೇಡಿ.

ಬನ್ನಿ ಹೊಸ ನಾಡ ಕಟ್ಟೋಣ

Submitted by ಮಹೇಶ ಭೋಗಾದಿ on
೧."ಸಾಹಿತ್ಯಕ | ಸಾಹಿತ್ಯಿಕ " ಇವೆರಡರಲ್ಲಿ ಯಾವುದು ಸರಿ? "ಸಾಹಿತ್ಯಕ/ಸಾಹಿತ್ಯಿಕ ಭಾಷೆ" ಅಂದರೆ ಸಾಹಿತ್ಯದ ಭಾಷೆಯಂದೆ? ೨. "ನಾಡ ಕಟ್ಟೋಣ" "ನಾಡ ಭಾಷೆ"ಯಂದರೆ ನಾಡಿನ ಭಾಷೆಯೆಂದೆ? ಅಥವಾ ನಾಡನ್ನು ಭಾಷೆಯೆಂದೆ? ಹಾಗೆ "ನಾಡ ಕಟ್ಟೋಣ"ವಂದರೆ ನಾಡಿನ ಕಟ್ಟೋಣ? ಅಥವಾ ನಾಡನ್ನು ಕಟ್ಟೋಣವೆಂದೆ? ಇಲ್ಲವೆ ಅದು "ನಾಡು ಕಟ್ಟೋಣ"ವೆ? ೩. "ತುಂಬ/ತುಂಬಾ" ಯಾವುದು ಸರಿ? ೪. "ಬಂಗಾಲಿ ಆಡು ಭಾಷೆ ಮತ್ತು ಸಾಹಿತ್ಯಕ ಭಾಷೆಗಳಲ್ಲಿ ತುಂಬಾ ವ್ಯತ್ಯಾಸವಿದೆ" -ಇಲ್ಲಿ "ತುಂಬ" ಎಂದರೆ ಒಂದಕ್ಕಿಂತ ಹೆಚ್ಚು ಎಂದೆ? -ಅದು ಹೌದಾದರೆ "ತುಂಬ ವ್ಯತ್ಯಾಸಗಳಿವೆ" ಎನ್ನುವುದು ಸರಿಯಲ್ಲವೆ? ೫. "ಕನ್ನಡದಲ್ಲೂ" ಎಂದರೆ "ಕನ್ನಡದಲ್ಲಿಯು ಸಹ" ಎಂದೆ? ೬. "ಸಾಧ್ಯವಾಗದಿದ್ದಲ್ಲಿ" ಅಂದರೆ "ಸಾಧ್ಯವಾಗದಿದ್ದರೆ"? ನನಗೀ ಕನ್ನಡದ ಪ್ರಯೋಗಗಳು ಸರಿಯಾಗಿ ಅರ್ಥವಾಗುತ್ತಿಲ್ದ. ದಯವಿಟ್ಟು ಸರಿಯಾದ ಕನ್ನಡದ ಪ್ರಯೋಗವನ್ನು ತಿಳಿಸಿರಿ. ಪೂರ್ವಧನ್ಯವಾದಗಳು, ಉತ್ತರಗಳಿಗಾಗಿ.

Submitted by muralihr on

ಚರ್ಚೆ ಬೇರೆ ದಿಕ್ಕಿನತ್ತಾ ಸೆಳೆಯ ಬೇಡಿ.

ಇಲ್ಲಿ ಒ೦ದು ಮುಖ್ಯವಾದ ಅ೦ಶವನ್ನು ಅವರು ಒತ್ತಿ ಒತ್ತಿ ತೋರಿಸುತ್ತಿರುವಾಗ,

ನೀವು ಅವರ ಪ್ರಯೋಗದಲ್ಲಿಯೇ ಯಾವುದು ಸರಿ ಎ೦ದು ಕೇಳುತ್ತಿರುವಿರಿ.

ಅದಕ್ಕಾಗಿ ನೀವು ಮತ್ತೊ೦ದು ಚರ್ಚೆಯನ್ನು ಪ್ರಾರ೦ಭಿಸಿ.

ಇಲ್ಲಿ ಯಾವ ಮಟ್ಟಿಗೆ ನಾವು ಇ೦ಗ್ಲೀಷ್ ನಮ್ಮ ಭಾಷೆಯಲ್ಲ್ಲಿ ತರುವುದು.

ಅದಕ್ಕೆ ಯವುದಾದರು ಮಿತಿಯು೦ಟೇ..... ?? ನಿರ್ಬ೦ಧಗಳು೦ಟೇ.... ??

ಇದರ ಲಕ್ಷ್ಮಣ ರೇಖೆಯನ್ನು ನಾವು ದಾಟಿದ್ದೇವೆ ಎ೦ಬುದು ತಿಳಿದು ಬರುತ್ತದೆ.

ಹಾಗೂ ಇ೦ಗ್ಲೀಷ್ ರಾವಣನ ಕೈಯಲ್ಲಿ ಕನ್ನಡ ತಾಯಿ

ಸಿಕ್ಕಿ ತನ್ನ ಮಾನವನ್ನು ಮತ್ತು ಅಭಿಮಾನವನ್ನು ಕಾಪಾಡಿಕೊಳ್ಳೂವಳೇ ?? ಎ೦ಬುದೇ ಏಕಮಾತ್ರ ಪ್ರಶ್ನೆ .

ಕ್ಷಮಿಸಿ,

ಮುರಳಿ

ನನ್ನ ಮಿತ್ರನೊಬ್ಬ ಅಮೇರಿಕೆ ಯಿ೦ದ ದೂರವಾಣಿ ಕರೆವನ್ನು ಮಾಡಿದ್ದು ನೆನೆಪಿದೆ.

ನಾನು : ಯಾವಾಗ ಬರೋ Planu ??

ಅವನು : spring ನಲ್ಲಿ.

 

ನಾನು : ಯಾವಾಗ ವಾಪಸ್ಸ್ ಹೋಗುವ Planu ??

ಅವನು : fall ನಲ್ಲಿ .

 

"ಈ ಕಾಲದ" ಮಾತಿನಲ್ಲಿ , ನಮ್ಮ ಭಾಷೆ fall ಆಗಿದ್ದನ್ನು ಕ೦ಡೆ.

 

 

Submitted by ಮಹೇಶ ಭೋಗಾದಿ on
ನೋಡಿ! ನಮಗೆಲ್ಲ ಆಂಗ್ಲ ಪದಗಳನ್ನು ಬಳಸಿದರೆ ಹೇಗೆ ಮುನಿಸು ಬರುವುದು. ಹಾಗೆಯೆ ಸುಮ್ಮಸುಮ್ಮನೆ ಸಂಸ್ಕೃತ, ಮರಾಠಿ ಮುಂತಾದ ಪದಗಳನ್ನು ತುರುಕುವುದರಿಂದ ನಮಗೆ ಮುನಿಸಾಗುವುದು. ಭರಾಟೆ = ಅಬ್ಬರ. ವರ್ಷಧಾರೆ = ಮಳೆ ಸುರಿತ. ಮಾಜಿ = ಹಿಂದಿನ ಹಾಲಿ = ಈಗಿನ "ಒಂಬತ್ತು" ಅನ್ನು "ಒಂಭತ್ತು" ಮಾಡುವುದು "ನಾಲ್ಕು ಸಾಲಿನ ದಾರಿ" ಯನ್ನು "ಚತುಷ್ಪಥ ಬೀದಿ" ಮಾಡುವುದು. ಇಂದು ಕನ್ನಡದ ಒಂದು ಸಾಲಿನಲ್ಲಿ(ವಾಕ್ಯದಲ್ಲಿ) ನೂರಕ್ಕೆ ೬೦-೯೦ರಷ್ಟು ಕನ್ನಡದ್ದಲ್ಲದ ಪದಗಳೆ ಬಳಕೆಯಾಗುತ್ತಿರುವುದು. ನನ್ನ ಗುರಿ(ಉದ್ದೇಶ), "ಚರ್ಚೆ ಬೇರೆ ದಿಕ್ಕಿನತ್ತ ಸೆಳೆಯ"ವುದಲ್ಲ. ಸುಮ್ಮನೆಯಾಗಿ ನಮ್ಮ ಕನ್ನಡಕ್ಕೆ ಬೇರೆ ನುಡಿಯ ಪದಗಳನ್ನು ಸೇರಿಸಿ, ಮಾಮೂಲಿ(ಸಾಮಾನ್ಯ) ಕನ್ನಡಿಗನಿಗೆ ಅರ್ಥವಾಗದ ಹಾಗೆ ಸುದ್ದಿಗಳನ್ನು(ವಾರ್ತೆಗಳನ್ನು), ಓದುವ ಹೊತ್ತಿಗೆಗಳನ್ನು(ಪಠ್ಯ ಪುಸ್ತಕಗಳನ್ನು), ಬರೆಯುವುದು. ಹೀಗೆ ಬರೆದು ಕನ್ನಡವನ್ನು ಕಬ್ಬಿಣದ ಕಡಲೆಯನ್ನಾಗಿ ಮಾಡುವುದು. ಇದರ ಜೊತೆಗೆ ಬೇರೆ ನುಡಿಯ ವ್ಯಾಕರಣವನ್ನು ಬಳೆಸುವುದು. ಸಾಹಿತ್ಯಕ್ಕೆ ಸಂಬಂಧಿಸಿದ್ದು, ಸಾಹಿತ್ಯಿಕ ವಾದರೆ, ಬರಹಕ್ಕೆ ಸಂಬಂಧಿಸಿದ್ದು, "ಬಾರಹಿಕ"ವೇಕೆ ಆಗದು? ಹೀಗೆ ಬರೆದರೆ ನೀವು ಒಪ್ಪುವಿರೆ? ಕನ್ನಡದಲ್ಲಿ ಪದವಿಲ್ಲ, ಪದವಿಲ್ಲ ಎನ್ನುತ್ತಾ, ಸುಮ್ಮನೆ ಮಾಮೂಲಿ ಕನ್ನಡಿಗನಿಗ ಗಂಟಾದ(ಜಟಿಲ) ಪದಗಳನ್ನು ಒಂದೇ ಸಮನೆ ಸೇರಿಸುವುದು. ಇವುಗಳ ಅರ್ಥಗಳು ಎಷ್ಟು ಮಂದಿಗೆ ಸರಿಯಾಗಿ ಗೊತ್ತು? ಇವೆಲ್ಲವನ್ನು ನಾನು ಕೇಳಿದ್ದೇವೆ. "ಪಶುಸಂಗೋಪನ ಇಲಾಖೆ", "ಕುಕ್ಕುಟ ಪಾಲನೆ"(ಕೋಳಿ ಸಾಕಣೆ), "ಪ್ರಾಧಿಕಾರ", "ನ್ಯಾಯಾಂಗ ದಂಡನೆ", "ವಿತ್ತ ಸಚಿವ", "ಆಯವ್ಯಯ ಪತ್ರ", "ಇತ್ಯಾತ್ಮಕ", "ನೇತ್ಯಾತ್ಮಕ", "ಮಹಿಳಾ ಸಬಲೀಕರಣ", "ಮಧ್ಯಂತರ ಚುಣಾವಣೆ", "ಮುಖ್ಯಮಂತ್ರಿ", "ಲೋಕಾಯುಕ್ತರು", "ಕನ್ನಡ ಸಾಹಿತ್ಯ ಪರಿಷತ್ತು", "ಕನ್ನಡಾಭಿವೃದ್ಧಿ ಪ್ರಾಧಿಕಾರ", "ವರ್ತುಲ ರಸ್ತೆ" ಹೀಗೆ ಮುಂತಾದವು. ಇವುಗಳಲ್ಲಿ ಕನ್ನಡ ಎಂಬ ಕನ್ನಡಪದವೊಂದನ್ನು ಬಿಟ್ಟು ಬೇರೆ ಯಾವುದಾದರು ಕನ್ನಡಪದವಿದಯೆ? ಇಲ್ಲವೆ, "ಕರ್ಣಾಟ ಸಾಹಿತ್ಯ ಪರಿಷತ್", "ಕರ್ಣಾಟಾಭಿವೃದ್ಧಿ ಪಾಧಿಕಾರ" ಎಂದು ಮಾಡಿದ್ದರೆ ಪೂರ್ತಿ ಸಂಸ್ಕೃತವಾದರೂ ಆಗುತ್ತಿತ್ತು! ಈ ಬೇರೆ ನುಡಿಯ ಪದಗಳನ್ನು ಆಡಿದರೆ ಏನೋ ದೊಡ್ಡಸ್ತಿಕೆ ಎನ್ನುವ ನಮ್ಮ "ಬುದ್ಧಿವಂತರ", "ವಿದ್ಯಾವಂತರ" ಭಾವನೆ ಇಂದಿನದ್ದಲ್ಲ. ಹಿಂದೆ "ನಾಗರೀ ಲಿಪಿ"ಯನ್ನು ಕಲಿತು "ನಾಗರಿಕ"ರಾದವರು, "ಬಿರ್‍ರನೆ ಬಾ", "ಸರಸರನೆ ಬಾ" ಎಂದರೆ ಅದಕ್ಕೆ ನಕ್ಕು ಆಡಿಕೊಂಡು "ಬೇಗನೆ ಬಾ", "ತ್ವರೆ ಮಾಡು" ಮಾಡಿದರೋ, ಹಾಗೆ ಇಂದಿನ "ಬುದ್ಧಿವಂತರು", "ವಿದ್ಯಾವಂತರು" ಇಂಗ್ಲೀಷನ್ನು ಕಲಿತು" ಅದನ್ನು "ಪಾಸ್ಟಾಗಿ ಬಾ" ಎಂದು ಮಾಡುತ್ತಿದ್ದಾರೆ" ಅಷ್ಟೆ. ೧.ಅವಶ್ಯಕತೆಗಾಗಿ(ಬೇಕಾಗಿರುವುದರಿಂದ) ಬಳಸುವದುಕ್ಕು, (ಕನ್ನಡವನ್ನು ಸರಳ ಮಾಡಲು, ಇಲ್ಲದ ಪದ ತುಂಬಲು) ೨.ಅಲಂಕಾರಿಕವಾಗಿ, ಶೋಕಿಗಾಗಿ, ದೊಡ್ಡಸ್ತಿಕೆಗಾಗಿ, ತಮ್ಮ "ನಾಗರಿಕ"ತನವನ್ನು ತೋರಿಸುದಕ್ಕಾಗಿ ಬಳಸುವುದಕ್ಕು ವ್ಯತ್ಯಾಸವಿದೆ.(ಕನ್ನಡವನ್ನು ಕ್ಲಿಷ್ಟ ಮಾಡಲು, ಸಾಮಾನ್ಯ ಮಂದಿಗೆ ಅರ್ಥವಾಗದಂತೆ ಮಾಡಿ, ಬರಿ ವಿದ್ಯಾವಂತರನ್ನು ಹಣವಂತರನ್ನು "ನಗರ"ದವರನ್ನು ಸೆಳಯಲು) ನಮ್ಮಲ್ಲಿರುವ ಹೆಚ್ಚಿನ ಮಂದಿ, ಹೆಚ್ಚಿನ ಸರತಿ "೨"ನೆಯದಕ್ಕಾಗಿ ಸಂಸ್ಕೃತವಾಗಲಿ, ಆಂಗ್ಲವಾಗಲಿ ಮುಂತಾದ ಬೇರೆ ನುಡಿಯ ಪದಗಳನ್ನು ಬಳಸುವುದು. ಇದು ಕೂಡ ತಪ್ಪಲ್ಲವೆ? ಹೆಚ್ಚು ಮಂದಿ ಕನ್ನಡವನ್ನು ಮಾತಾಡುತ್ತಾ ಹೋಗಬೇಕಿದ್ದರೆ, ನಾವು ಆದಷ್ಟು ಜನರಿಗೆ ಹತ್ತಿರವಾದ ಭಾಷೆಯನ್ನು, ಪದ-ಪ್ರಯೋಗಗಳನ್ನು ಮಾಡಬೇಕು. ಅದನ್ನು ಬಿಟ್ಡು ಇನ್ನು ಹೆಚ್ಚು ಕಗ್ಗಂಟು ಮಾಡುವುದಲ್ಲ.

Submitted by ಸಂಗನಗೌಡ on

ಮಹೇಶ್, ಸಾಹಿತ್ಯಿಕ ಸರಿ, ತಿಳಿಸಿದ್ದಕ್ಕೆ ವಂದನೆಗಳು. ಬರಹ ಅಂತ ಬಳಸಿದರೆ ಇನ್ನೂ ಉತ್ತಮ. ಆದರೆ ತಮ್ಮ ಮುಂಚಿನ ಪ್ರತಿಕ್ರೀಯೆಯಲ್ಲಿ ನಿಮ್ಮ ಅನುಮಾನ ಪರಿಹರಿಸ ಬಯಸಿದಿರೋ ಅಥವಾ ತಪ್ಪನ್ನು ತೋರಿಸ ಬಯಸಿದಿರೋ ಒಂದೂ ತಿಳಿಯುವದಿಲ್ಲ, ಹಾಗೆ ಮಾಡದೆ, ತಪ್ಪಿದ್ದಲ್ಲಿ ನೇರವಾಗಿ ತಿಳಿಸಿ, ತಿದ್ದಿಕೊಳ್ಳುವೆ. ಕನ್ನಡಕ್ಕೆ ಹೆಚ್ಚು ಹತ್ತಿರವಾದ ಪದ ಬಳಕೆಯೇ ನನ್ನ ಉದ್ದೇಶ ಸಹಿತ.

Submitted by ಮಹೇಶ ಭೋಗಾದಿ on
ನೇರನಡೆಯಿಂದಲೆ ಹಾಗೆ ಹೇಳಿದ್ದು. ಅದರ ತಲೆಯಂತಹ(ಮುಖ್ಯ) ಗುರಿ, ಸಂಸ್ಕೃತವನ್ನು ಸರಿಯಾಗಿ ತಿಳಿಯದೆ(ನನಗೆ ಕೂಡ ಸರಿಯಾಗಿ ಬರುವುದಿಲ್ಲ, ನನಗಿರುವ ಕೊಂಚ ಅರಿವಿನಿಂದ) ಸಂಸ್ಕೃತದ ಪ್ರತ್ಯಯಗಳನ್ನು, ವ್ಯಾಕರಣ ರೂಪಗಳನ್ನು ಹೇಗೆ ಮಂದಿ ತಪ್ಪು ತಪ್ಪಾಗಿ ಬಳಸುತ್ತಾರೆ ಎನ್ನುವುದರ ಒಂದು ತೋರಿಕೆಯದು(ನಿ-ದರ್ಶನ). ಕನ್ನಡವು ಕನ್ನಡವಾಗಿ, ನಮ್ಮ ಚಾಮರಾಜನಗರದ, ಜಮಖಂಡಿಯ, ಕೋಲಾರದ, ಹಗರಿಯ, ರಾಯಚೂರಿನ ordinary/ಸಾಮಾನ್ಯ/ಮಾಮೂಲಿ ಕನ್ನಡಿಗನಿಗೆ ತಲುಪಬೇಕಾದರೆ, ಇಂತಹ ಬಳಕೆಗಳು ಕಡಮೆಯಾಗಬೇಕು. ನಿಮ್ಮ ಮೇಲೆ ನನಗೆ ಯಾವ ಹಗೆ. ಒಟ್ಟಿನಲ್ಲಿ ಇಷ್ಟೆ ಹೇಗೆ ಕನ್ನಡದಲ್ಲಿ ಇರುವ ಪದಗಳಿಗೆ ಆಂಗ್ಲಪದಗಳ ಬಳಕೆಯನ್ನು ತಾಳಲಾಗುವುದಿಲ್ಲವೊ, ಹಾಗೆ ಕನ್ನಡದಲ್ಲಿ ಮೊದಲಿಂದಲೇ ಇರುವ ಪದಗಳಿಗೆ ಸಂಸ್ಕೃತ, ಮರಾಠಿ ಮತ್ತಿನ್ನು ಯಾವುದೇ ಬೇರೆ ನುಡಿಯ ಪದಗಳ ಬಳಕೆ ತಾಳಲಾಗಬಾರದು. ಕನ್ನಡದ ಹೆಂಗಸು, ಮಹಿಳೆಯಾಗಲಿ, ಸ್ತ್ರೀಯಾಗಲಿ, ಲೇಡಿಯಾಗಲಿ ಆಗಬಾರದು. ಕನ್ನಡದ ಹುಡುಗ, ಬಾಲಕನಾಗಲಿ, ಬಾಯಾಗಲಿ, ಆಗಬಾರದು ಕನ್ನಡದ ಮಳೆ, ವರ್ಷಧಾರೆಯಾಗಲಿ, ರೈನಾಗಲಿ ಆಗಬಾರದು. ಕನ್ನಡದ ಸೆರೆಮನೆ, "ಬಂಧೀಖಾನೆ"ಯಾಗಲಿ, ಕಾರಗೃಹವಾಗಲಿ, ಜೈಲಾಗಲಿ ಆಗಬಾರದು. ಕನ್ನಡವು ಕರ್ಣಾಟವಾಗಲಿ, carnese, ಕನ್ನಡ್, ಕನಡಿ, ಆಗಲಿ ಆಗಬಾರದು. ಇಷ್ಟೆ.

Submitted by ಸಂಗನಗೌಡ on

ವಿಜಯ ಕರ್ನಾಟಕದಲ್ಲಿ ಬರೆಯುವ ವಿಶ್ವೇಶ್ವರ್ ಭಟ್ಟರ ಇಂದಿನ ಲೇಖನ ಓದಿದೆ, ಅನವಶ್ಯಕ(ಮಹೇಶ್ ಕನ್ನಡ ಪದ?) ಇಂಗ್ಲಿಶ್ ಎದ್ದು ಕಾಣುತ್ತದೆ.ರವಿ ಬೆಳಗೆರೆ ಮತ್ತೊಂದು ಹೆಸರು. ಮಿಶ್ರಿಕೋಟಿಯವರು ಇಂಥ ಬೆಳವಣಿಗೆಯನ್ನು ಗಮನಕ್ಕೆ ತಂದದ್ದು ಒಳ್ಳೆಯದು.

 ಹೊಸ ನಾಡ ಕಟ್ಟೋಣ

Submitted by ಮಹೇಶ ಭೋಗಾದಿ on
ನಾನು ಕಲಿತ ಒಂದು ಬಗೆಯ ಕನ್ನಡದಲ್ಲಿ ಸಂಸ್ಕೃತದ "ಅನವಶ್ಯಕ" ಪದಕ್ಕೆ, ಆ ಕನ್ನಡದಲ್ಲಿ "ಬೇಡವಾದ", "ಬೇಕಾಗಿಲ್ಲದ" ಎಂದು ಹೇಳಬಹುದು. ಹಾಗೆ "ಗಮನ"(ಸಂಸ್ಕೃತ). "ಗಮನಕ್ಕೆ ತರು" ಕನ್ನಡದಲ್ಲಿ "ಅರಿವು ಮಾಡು", "ತಿಳಿಸು", "ಗೊತ್ತುಪಡಿಸು", "ನೋಟ ಹಾಯಿಸು", "ನೋಡಿಸಿ", "ತೋರಿಸು", "ಕಣ್ಣಿನ ಮುಂದೆ ತರು" ಎಂದು ಹೇಳಬಹುದೇನೋ. ಲೇಖನ = ಬರಹ, ಬರೆವಣಿಕೆ. ವಿಜಯ = ಗೆಲುವು ರವಿ = ನೇಸರ ಈಶ್ವರ = ಒಡೆಯ ವಿಶ್ವ = ? (ಹುಡುಕ ಬೇಕು) ಉಳಿದ ಕನ್ನಡಗಳ ಬಗ್ಗೆ ನನಗೆ ಅರಿವಿಲ್ಲ. ಮನ್ನಸಿರಿ.

Submitted by ಮಹೇಶ ಭೋಗಾದಿ on
ಅಯ್ಯೊ ಒಂದು ಕನ್ನಡದಲ್ಲಿ ಅದು "ಮನ್ನಸಿರಿ"ಯಲ್ಲ "ಮನ್ನಿಸಿರಿ", ಹಾಗೆ ಲೇಖನ = ಬರಹ, "ಬರೆವಣಿಕೆ" ಅಲ್ಲ "ಬರೆವಣಿಗೆ". ನನ್ನ ತಪ್ಪುಗಳು. ಬೇರೆ ಕನ್ನಡಗಳಲ್ಲಿ ಗೊತ್ತಿಲ್ಲ. ತುಸು ಗಡಿಬಿಡಿಯಲ್ಲಿದ್ದೆನು. ಇವನ್ನು "ಕನ್ನಡಂಗಳ್" ಪಟ್ಟಿಯಲ್ಲಿ ಒಂದೆಂದು ಸೇರಿಸಬಹುದಲ್ಲವೆ? ಕನ್ನಡಗಳಲ್ಲಿ ಸರಿ ತಪ್ಪು ಎಂಬುದಿಲ್ಲವಂತೆ. ಮನ್ನಿಸಿರಿ. ಸವಿಯೊದಗು.

Submitted by vijayaraghavan on

ಪ್ರಿಯ ಶ್ರೀಕಾಂತ್

ನಿಮ್ಮ ಅಭಿಪ್ರಾಯವನ್ನ ಓದಿದ್ದೆ.  ಆದರೆ ನೀವು ಅದರ  ಫಾಲೋ ಅಪ್   ಮಾಡಬಹುದು ಅಂತ ಅಂದುಕೊಂಡಿರಲಿಲ್ಲ. ನೀವು ಮಾತಾಡಲು ಹೊರಟಿದ್ದು, ಸಂತೋಷವಾಯಿತು ಅದನ್ನಿಲ್ಲಿ ಓದಿ. ನಿಮ್ಮ ಮಾತಿಗೆ ಕೆಲವು ಮಾತುಗಳನ್ನ ಸೇರಿಸಬಹುದು ಅನ್ನಿಸುತ್ತೆ. ಸತ್ಯನಾರಾಯಣರ ಪುಸ್ತಕಕ್ಕೆ ಅನಂತಮೂರ್ತಿಯವರು ಬರೆದಿರುವುದು ಬೆನ್ನುಡಿ, ನಾನು ಬರೆದಂತೆ ಮುನ್ನುಡಿಯಲ್ಲ. ಸಂಪದದ ಓದುಗರಲ್ಲಿ ಕ್ಷಮೆ ಯಾಚಿಸುತ್ತೇನೆ, ಫಾಕ್ಚುವಲ್ ಎನ್ನಬಹುದಾದ ತಪ್ಪಿಗಾಗಿ. ನಾನು ಒಂದು ಕಾಲದಲ್ಲಿ ರಾ. ವಿಜಯರಾಘವ ಅಂತ ಹೆಸರಿಟ್ಟುಕೊಂಡಿದ್ದೆ.  ಕಥೆ ಬರೆಯಲು ಶುರುಮಾಡಿದಾಗ. ಆ ಮೇಲೆಈಗಿನ ರೂಪಕ್ಕೆ ಬದಲಿಸಿಕೊಂಡೆ. ಇದು ನಿಜ ನಾಮಧೇಯ ಕೂಡ. 28 ವರ್ಷಗಳ ಹಿಂದೆ ಕೆ.ಜಿ.ಎಫ್ ನಲ್ಲಿ ಕೆಲಸಕ್ಕೆ ಸೇರಿದ ಕೆಲ ದಿನಗಳು ಆದಮೇಲೆ.  ಅಲ್ಲಿನ ತಮಿಳು, ಇಂಗ್ಲಿಶ್, ತೆಲುಗು, ಕನ್ನಡ ಭಾಷೆಗಳ ನಡುವೆ ಕನ್ನಡ ತಾನೂ ಬೆಳೆದುಕೊಂಡು ಈಗ ಎಲ್ಲವೂ ಸಹಬಾಳ್ವೆಯಲ್ಲಿ ಇವೆ. ಗಣಿ ಮುಚ್ಚಿಹೋಗಿ ಬದುಕು ದುಸ್ತರವಾದ ಮೇಲೆ ಅಂಬೇಡ್ಕರ್ ರಸ್ತೆಯಲ್ಲಿದ್ದ ತಮಿಳ್ ಮನ್ರಂ ಕಚೇರಿಗೆ ಹಾಕಿದ ಬಾಗಿಲು ತೆರೆದದ್ದನ್ನ ನಾನು ನೋಡಲೇ ಇಲ್ಲ. ಮೊನ್ನೆ ನಾನು ಬ್ರಾಂಚ್‌ ಮೇನೇಜರಾಗಿ ಅಲ್ಲಿದ್ದಾಗ ಅಲ್ಲಿನ ಲೈನುವಾಸಿಗಳು ತಮಿಳುಚೂರು ಕನ್ನಡ ಚೂರು ಬೆರೆಸಿ ಮಾತಾಡೋರು. ನಾನು ಅಷ್ಟು ಕನ್ನಡ ಇಷ್ಟು ತಮಿಳು ಮಾತಾಡುತ್ತಿದ್ದೆ. ಆ ಜನರನ್ನ ನಾನು, ನನ್ನನ್ನ ಆ ಜನರು ಪರಸ್ಪರ ಪ್ರೀತಿಸುತ್ತ ಇದ್ದೆವು. ಇರಲಿ ಶ್ರೀಕಾಂತ್. ಸತ್ಯನಾರಾಯಣರ ಪುಸ್ತಕ ವಿಸ್ತಾರವಾದ ವಿಮರ್ಶೆಗೆ ಅವಕಾಶ ಮಾಡಿಕೊಡುತ್ತದೆ. ಅದನ್ನು ಓದುವುದು, ಅದರ ಬಗ್ಗೆ ಮಾತಾಡೋದು ಕೂಡ ಕನ್ನಡದ, ಕನ್ನಡ ಜನರ ಕೆಲಸ ಅಲ್ಲವಾ. ಅಂದಹಾಗೆ ನನ್ನದೊಂದು ಇಂಗ್ಲಿಶ್ ಕಾದಂಬರಿ ಪ್ರಕಟವಾಗಿದೆ- ಅನ್ ಈವನ್ ಎಡ್ಜಸ್ ಅಂತ. ಕ್ಯಾಲಿಕಟ್‌ನ ಯೇತಿ ಬುಕ್ಸ್ ಪ್ರಕಟಿಸಿದ್ದಾರೆ.ಪ್ರೀತಿ ಇರಲಿವಿಜಯರಾಘವನ್‌