ಭಾಷೆಯಲ್ಲಿ ಸರಿ ಮತ್ತು ತಪ್ಪು
ಕೆಲವು ದಿನಗಳಿಂದ ಇಸ್ಮಾಯಿಲ್ ಅವರ ಬರಹಕ್ಕೆ ಪ್ರತಿಕ್ರಿಯೆಯಾಗಿ ಕುತೂಹಲಕರ ಚರ್ಚೆ ಬೆಳೆದಿರುವುದು ಗಮನಿಸಿದ್ದೇನೆ. ತುಳು ಮತ್ತು ಕನ್ನಡ ಸಂಬಂಧ ಕುರಿತು, ಲ ಳಗಳ ಬಳಕೆ ಕುರಿತು, ಅ ಹ ಗಳನ್ನು ಕುರಿತು, ಮತ್ತು ಕೆಲವು ರೂಪಗಳು ಬೇಡಾದ ಇತ್ಯಾದಿ ರೂಪುಗೊಂದಿರುವ ಕುರಿತು ಚರ್ಚೆ ನಡೆದಿದೆ. ನಾವೆಲ್ಲ ಗಮನಿಸಬೇಕಾದ ಕೆಲವು ಮೂಲ ಸಂಗತಿಗಳನ್ನು ಗಮನಿಸಬೇಕು ಅನ್ನಿಸಿದೆ. ೧. ಕನ್ನಡ ಒಂದೇ ಅಲ್ಲ ಅಸಂಖ್ಯಾತ ಕನ್ನಡಗಳಿವೆ: ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಒಂದು ಮಾತಿದೆ. ಅಲ್ಲಿ ಕೃತಿಕಾರ "ಕನ್ನಡಂಗಳ್" ಕನ್ನಡಗಳು ಎಂದು ಬಹುವಚನವನ್ನು ಬಳಸಿದ್ದಾನೆ. ಭಾಷೆ ಅಸ್ತಿತ್ವಕ್ಕೆ ಬರುವುದು ಯಾರಾದರೂ ಅದನ್ನು ಬಳಸಿದಾಗ ಮಾತ್ರವೇ. ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶದ ಜನರ ಮಾತಿನಲ್ಲಿ ಭಿನ್ನತೆಗಳು ಕಾಣುತ್ತವೆ. ಉಚ್ಚಾರದಲ್ಲಿ ಸ್ವರಗಳ ವ್ಯತ್ಯಾಸವೇ ಎದ್ದು ಕಾಣುವುದು. ನಂತರ ಆಸ್ಪಿರೇಟೆಡ್ ಧ್ವನಿಗಳದು: ಲ-ಳ, ಇತ್ಯಾದಿ. ವ್ಯಂಜನಗಳ ಉಚ್ಚಾರದಲ್ಲಿ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇಂಥ ವ್ಯತ್ಯಾಸಗಳು ಸರಿಯೂ ಅಲ್ಲ, ತಪ್ಪೂ ಅಲ್ಲ. ಹಾಗೆ ಒಂದು ಪ್ರದೇಶದ ಎಲ್ಲ ಜನರೂ ಬಿಡಿ ಎಲ್ಲ ವ್ಯಕ್ತಿಗಳೂ ಒಂದೇ ಥರ ಉಚ್ಚರಿಸುವುದೂ ಸಾಧ್ಯವೇ ಇಲ್ಲ. ಉಚ್ಚಾರದ ಮೂಲಕ ಗಮನಕ್ಕೆ ಬರುವ ವ್ಯತ್ಯಾಸಗಳನ್ನೆಲ್ಲ ಪಟ್ಟಿ ಮಾಡಿ ವಿವರಿಸುವುದೆಂದರೆ ಸಾವಿರ ನಾಲಗೆಯ ಆದಿಶೇಷನಿಗೂ ಅಸಾಧ್ಯವಾದ ಬೇಸರ ಹುಟ್ಟಿಸುವ ಕೆಲಸ ಅನ್ನುತ್ತದೆ ಕವಿರಾಜಮಾರ್ಗ. ಇಂಥ ಉಚ್ಚಾರ ವ್ಯತ್ಯಾಸ ಎಲ್ಲ, ಅಂದರೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದ್ದದ್ದೇ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವ ಪ್ರಶ್ನೆಯೇ ತಪ್ಪು. ಪರಿಸರ ವೈವಿಧ್ಯ ಹೇಗೆ ಅಗತ್ಯವೋ ಹಾಗೆಯೇ ಭಾಷೆಯೊಂದು ಜೀವಂತ ಉಳಿದು ಬೆಳೆಯಲು ಒಂದೇ ಭಾಷೆಯೊಳಗಿನ ವೈವಿಧ್ಯವೂ ಹಾಗೆಯೇ ಅಗತ್ಯ.
ಶಿಷ್ಟಭಾಷೆ: ಇಡೀ ಭಾಷಿಕ ಸಮುದಾಯವು ಒಂದು ಬಗೆಯ ಭಾಷಾಬಳಕೆಯನ್ನು ಶಿಷ್ಟವೆಂದು ಗ್ರಹಿಸುತ್ತದೆ. ಹಾಗೆಯೇ ಅದನ್ನು ವ್ಯಾಪಕವಾಗಿ ಬಳಸತೊಡಗುತ್ತದೆ. ಭಾಷೆಯೊಂದರ ಒಂದು ಪ್ರಭೇದ ಶಿಷ್ಟವೆಂದು ಎಣಿಕೆಗೊಳ್ಳಲು ಚಾರಿತ್ರಿಕ ಮತ್ತು ರಾಜಕೀಯ ಕಾರಣಗಳಿರುತ್ತವೆ. ಶಿಷ್ಟ ಭಾಷೆ ವ್ಯಾಪಕವಾಗಿ ಬಳಕೆಗೆ ಬಂದು ಅಂಗೀಕೃತವಾಗುವುದಕ್ಕೆ ಶಿಕ್ಷಣದ ವ್ಯಾಪ್ತಿಯೂ ಕಾರಣವಾಗುತ್ತದೆ. ಮೈಸೂರು ಸಂಸ್ಥಾನದ (ಅದೇ ಹಳೇ ಮೈಸೂರು) ಕನ್ನಡ ಶಿಷ್ಟವೆಂದು ಎಣಿಕೆಗೊಳ್ಳಲು ಆ ಭಾಗದ ಆರ್ಥಿಕ ಸಮೃದ್ಧಿ, ರಾಜಕೀಯ ಶಕ್ತಿ, ಶಿಕ್ಷಣದ ವ್ಯಾಪ್ತಿ ಇವೇ ಕಾರಣ. ಶಿಷ್ಟ ಭಾಷೆ ರೂಪುಗೊಳ್ಳುತ್ತ ನಡೆದಂತೆ ಪ್ರಾದೇಶಿಕ ವೈಶಿಷಟ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತವೆ. ಕನ್ನಡ ಪಠ್ಯ ಪುಸ್ತಕಗಳಲ್ಲಿ ಕನ್ನಡದ ಭಾಷಾ ಪ್ರಭೈದಗಳು ಎಲ್ಲಿಯಾದರೂ ತಪ್ಪಿಯೂ ಕಾಣುವುದಿಲ್ಲ. ಶಿಷ್ಟಭಾಷೆ ಸುಶಿಕ್ಷಿತರ ನುಡಿಯಾಗಿ ಉಳಿದ ರೂಪಗಳೆಲ್ಲ ಹಾಸ್ಯಕ್ಕೆ ಎಡೆ ಮಾಡುತ್ತವೆ. ಉತ್ತಮ ಉದಾಹರಣೆಯೆಂದರೆ ನಮ್ಮ ಕನ್ನಡ ಸಿನಿಮಗಳಲ್ಲಿ ಪ್ರಾದೇಶಿಕ ಭಾಷೆ ೯೫% ಹಾಸ್ಯಕ್ಕಾಗಿಯೇ ಬಳಕೆಯಾಗುತ್ತದೆ. ಆಡುನುಡಿಯ ವೈವಿಧ್ಯ (ಅಪ) ಹಾಸ್ಯ ಕೀಳರಿಮೆಗಳಿಂದ ಕೊನೆಯುಸಿರು ಎಳೆಯುತ್ತದೆ. ಕನ್ನಡವು ಹಿಂದೆ ಸಂಸ್ಕೃತದ ಇಂಗ್ಲಿಷಿನ ಯಜಮಾನಿಕೆಗೆ ಒಳಗಾಗಿದ್ದಂತೆಯೇ ಕನ್ನಡದ ಶಿಷ್ಟ ರೂಪವು ಕೊಡಗ, ತುಲು, ಎರವ, ಕೊಂಕಣಿ, ಬದಗ ಇತ್ಯಾದಿ ಭಾಷೆಗಳ ಮೇಲೂ ಯಜಮಾನಿಕೆ ತೋರಿದೆ. ಅದರಲ್ಲಿ ಸಂಶಯವೇ ಬೇಡ. ಶಕ್ತರು ಮಾತ್ರ ಬದುಕಿ ಉಳಿಯವರೆಂಬ ಡಾರ್ವಿನ್ ವಾದದ ಇನ್ನೊಂದು ನಿದರ್ಶನ ಶಕ್ತರು ಬಳಸುವ ಭಾಷೆ ಬದುಕಿ ಉಳಿಯುತ್ತದೆ ಅನ್ನುವುದು. ರಾಜಕೀಯ ಆರ್ಥಿಕ ಶಕ್ತಿಗಳು ಭಾಷೆಗೆ ಶಕ್ತಿ ತುಂಬುತ್ತವೆ. ಇಂಗ್ಲಿಷು ಜಗತ್ತಿನಲ್ಲಿ ವ್ಯಾಪಿಸಿದ್ದು ಇಂಗ್ಲಿಷು ಭಾಷೆಯ ಜನರ ಆರ್ಥಿಕ ರಾಜಕೀಯ ಶಕ್ತಿಗಳ ಕಾರಣದಿಂದಲೇ ಅಲ್ಲವೇ? ದುರಂತವೆಂದರೆ ಕನ್ನಡದ ರಾಜಕೀಯ ಮತ್ತು ಆರ್ಥಿಕತೆ ಕನ್ನಡವನ್ನು ಬಿಟ್ಟುಕೊಡುವ ಮೂಲಕ ಶಕ್ತಿಪಡೆಯಲು ಹವಣಿಸುತ್ತಿರುವುದು.
ಕನ್ನಡ ದಪದಗಳ ರೂಪ ನಿಷ್ಪತ್ತಿಯನ್ನು ಕುರಿತು:
ಕನ್ನಡದ ವ್ಯಾಕರಣ ಹಾಗೆ ಕನ್ನಡದ ಎಲ್ಲ ಪದಗಳ, ಎಲ್ಲ ರೂಪಗಳ ವಿವರಣೆಯನ್ನು ನೀಡುವಷ್ಟು ಶಕ್ತವಾಗಿ ಬೆಳೆದೇ ಇಲ್ಲ. ಆಗಬೇಕಾದ ಕೆಲಸ ಬೇಕಾದಷ್ಟಿದೆ. ಗಮನಿಸಬೇಕಾದ ಮಾತೆಂದರೆ ಕನ್ನಡವನ್ನು ಆಡುಮಾತಾಗಿ ಉಳ್ಳ ಜನ ವ್ಯಾಕರಣವನ್ನು ಕಲಿಯದೆಯೂ ತಪ್ಪಿಲ್ಲದೆ ಭಾಷೆ ಬಳಸಬಲ್ಲರು. ವ್ಯಾಕರಣವೆಂದರೆ ಅರ್ಥವಂತಿಕೆಯ ನಿಯಮಗಳು. ಬುದ್ಧಿ ತಿಳಿಯುವ ಮುನ್ನವೇ ಅಪ್ರಜ್ಞಾಪೂರ್ವಕವಾಗಿ ಕನ್ನಡದ ವಾಕ್ಯರಚನೆಯ ನಿಯಮಗಳನ್ನು ನಾವೆಲ್ಲ ಕಲಿತುಬಿಡುತ್ತೇವೆ. ನಾನು ಕಲ್ಲು ಕುಡಿದೆ, ನಾಳೆ ಬಂದೆ ಎಂದು ಯಾರೂ ಹೇಳುವುದಿಲ್ಲವಷ್ಟೆ. ಕನ್ನಡ ವ್ಯಾಕರಣವೆಂದರೆ ಕನ್ನಡದ ಮೂಲಕ ನಾವು ಹೇಗೆ ಅರ್ಥಪೂರ್ಣವಾಗಿ ಮಾತಾಡಬಹುದು ಎಂಬ ನಿಯಮಗಳ ಮೊತ್ತ ಅಷ್ಟೆ. ಶಾಲೆಯಲ್ಲಿ ಕಲಿಯುವ, ವಿದ್ವಾಂಸರು ಬರೆಯುವ ವ್ಯಾಕರಣಗಳೆಲ್ಲ ಈ ಅಪ್ರಜ್ಞಾಪೂರ್ವಕ ನಿಯಮಗಳನ್ನು ತರ್ಕಬದ್ಧವಾಗಿ ನಿರೂಪಿಸುವುದಷ್ಟೆ. ಪ್ರಾದೇಶಿಕ ವೈವಿಧ್ಯ ಶಬ್ದಗಳಲ್ಲಿ, ನಾಮ ಪದಗಳಲ್ಲಿ, ಉಚ್ಚಾರಣೆಗಳಲ್ಲಿ ಕಂಡರೂ ವಾಕ್ಯ ರಚನೆಯ ನಿಯಮಗಳು ಮಾತ್ರ ಎಲ್ಲ ಅಸಂಖ್ಯ ಕನ್ನಡಗಳಿಗೂ ಸಮಾನವಾಗಿಯೇ ಇರುತ್ತವೆ. ಅದರಿಂದಲೇ ಒಂದು ಪ್ರದೇಶದವರ ಕನ್ನಡ ಇನ್ನೊಂದು ಪ್ರದೇಶದವರಿಗೆ ತಿಳಿಯುತ್ತದೆ.
ವ್ಯಾಕರಣಾಸಕ್ತರಿಗೆ ಒಂದು ಸ್ವಾರಸ್ಯದ ಪ್ರಶ್ನೆ. ನಿನ್ನೆಯ ದಿನ ಧಾರವಾಡದಲ್ಲಿ ಗೆಳೆಯ ಕೆವಿ ನಾರಾಯಣರೊಡನೆ ಮಾತನಾಡುವಾಗ ಈ ಪ್ರಶ್ನೆ ಹುಟ್ಟಿತು. "ಕಳಿಸು" ಎಂಬುದು ತೀರ ಸಾಮಾನ್ಯವಾಗಿ ನಾವು ಬಳಸುವ ಪದ. ಅದು ಹೇಗೆ ರೂಪುಗೊಂಡಿರಬಹುದು. "ಮಾಡು" ಎಂಬ ಮೂಲ ರೂಪಕ್ಕೆ "ಇಸು" ಸೇರಿಸಿ, "ತಿನ್ನು" ಗೆ "ಇಸು" ಸೇರಿಸಿ, ಹೀಗೆಲ್ಲ ಮಾಡಿಸು, ತಿನ್ನಿಸು ಅನ್ನುವ ರೂಪ ಹುಟ್ಟಿಸಿಕೊಂಡಿದ್ದೇವೆ. ಕಳಿಸು ಅನ್ನುವುದರಲ್ಲೂ ಇಸು ಇದೆ. ಹಾಗಾದರೆ ಅದರ ಮೂಲ ರೂಪ ಏನಿರಬಹುದು? ಬಾಲಂಗೋಚಿ: ಇಂಗ್ಲಿಷಿನಜನ ಇರುವ ಪ್ರದೇಶದ ದಕ್ಷಿಣ ಭಾಗದ ನುಡಿ ವೈವಿಧ್ಯ ಕಿಂಗ್ಸ್ ಇಂಗ್ಲಿಷ್ ಆಗಿ ಶಿಷ್ಟ ಇಂಗ್ಲಿಷ್ ಎಂದು ಕರೆಸಿಕೊಂಡಿತು. ಈಗ ಜಗತ್ತಿನ ಅತಿ ಶಕ್ತ ಅಮೆರಿಕದ ಇಂಗ್ಲಿಷ್ ಶಿಷ್ಟ ಇಂಗ್ಲಿಷ್ ಅನ್ನಿಸಿಕೊಳ್ಳುತ್ತಿದೆ. ಕನ್ನಡದಂತೆಯೇ ಇಂಗ್ಲೆಂಡಿನ ಬೇರೆ ಬೇರೆ ಪ್ರದೇಶಗಳ ಜನರ ಇಂಗ್ಲಿಷೂ ವೈವಿಧ್ಯಮಯ. ಅವೂ ಕನ್ನಡದ ಪ್ರಾದೇಶಿಕ ಭೇದಗಳಂತೆಯೇ ಹಾಸ್ಯಕ್ಕೂ ಗುರಿಯಾಗುತ್ತವೆ. ಅಮೆರಿಕದ ಬೇರೆ ಬೇರೆ ಪ್ರದೇಶಗಳ ಇಂಗ್ಲಿಶೂ ಅಷ್ಟೆ. ಭಾಷೆಗಳ ಲೋಕದ ವೈವಿಧ್ಯಕ್ಕೆ ಕೊನೆಯೇ ಇಲ್ಲ.
(Update - 9th August, 2006)
ಓದಿ:
ಕನ್ನಡಂಗಳ್: ಪದ್ಯ ಹೀಗಿದೆ
Sampada admin team.

- Login or register to post comments
- 3024 hits
- Email this page




ಪ್ರತಿಕ್ರಿಯೆಗಳು
ಕಳಿಸು
ಇದು ಸ್ವಾರಸ್ಯದ ಸಂಗತಿ ನಿಜ. ಕಳುಹು+ಇಸು ಕಳುಹಿಸು -> ಕಳಿಸು ಎನ್ನುವುದಾದರೆ ಎರಡರ ಅರ್ಥವೂ ಒಂದೆ! ಇಲ್ಲಿ 'ಇಸು' ಪ್ರೇರಣಾರ್ಥಕವಾಗಿ ಬಂದಿಲ್ಲ.
ವೆಂ.
ಕಳುಹು.
ನನಗೆ ಅಷ್ಟು ಕನ್ನಡ ಸರಿಯಾಗಿ ಬರುವುದಿಲ್ಲ.
ಆದರೆ ಇದೊಂದು "ಟ್ರೈ".
"ಕಳುಹು" ಎಂಬ ಕ್ರಿಯಾಪದ,
ಕಳುಹು + ಇಸು = "ಕಳುಹಿಸು"
ಕಳುಹು = send, ಭೇಜ(ಹಿಂದಿ)
ಕಳುಹಿಸು = make someone to send, ಭೀಜವಾಯ(ಹಿಂದಿ).
ಕಳುಹಿದನು = he sent, "ಭೇಜ ಹೈ".
ಕಳುಹಿಸಿದನು = he made someone to send, "ಭಿಜವಾಯ ಹೈ".
ಮಾತಿನಲ್ಲಿ "ಕಳುಹಿಸು", "ಹ"ವನ್ನು ಬಿಟ್ಟು, "ಕಳಿಸು" ಆಗಿದೆ ಆದರೆ ಇದು ಆಡುಮಾತಿನ ರೂಪವಷ್ಟೆ.
ನೋಡೋಣ!
ಕನ್ನಡಂಗಳ್
ಅಲ್ಲಿ "ಕನ್ನಡಂಗಳ್" ಎಂದರೆ ಕನ್ನಡಿಗರೆಂದು ಹೊರತು ಹಲವು, ಕನ್ನಡ ನುಡಿಗಳೆಂದಲ್ಲವೆನಿಸುತ್ತದೆ.
ಏಕೆಂದರೆ "ಕನ್ನಡ" ಪದವನ್ನು ನೆಲ, ಜನ, ಮತ್ತು ನುಡಿ ಈ ಮೂರನ್ನು ಹೆಸರಿಸಲು ಬಳಸುತ್ತಿದ್ದರು.
ಅದರಲ್ಲಿ "ಕಾವೇರಿಯಿಂದ ಗೋದಾವರಿಯವರಗೆ ಇರುವ ಕನ್ನಡ ನಾಡು"ಇನ(ನಾನು ಆ ಪದ್ಯವನ್ನು ಓದಿದ್ದೇನೆ) ಬಗ್ಗೆ ಹೇಳುವಾಗ ಅಲ್ಲಿ ಬರಿ "ಕನ್ನಡ" ಎಂದು ಪದವಿರುವುದು, "ಕನ್ನಡ ನಾಡು" ಇಲ್ಲವೆ "ಕನ್ನಡಂಗಳ್" ಎಂದು ಇಲ್ಲ, ಅಲ್ಲವೆ?
ಇರುವುದು ಒಂದೆ ಕನ್ನಡವು, ಆದರೆ ಅದನ್ನು ಬಗೆ ಬಗೆಯಾಗಿ ಆಡುವೆವು.
ಬರೆಯಲಾದರೆ "ಕನ್ನಡಂಗಳ್" ಬಳಕೆಯಾಗಿರುವ ಪದ್ಯವನ್ನಿಲ್ಲಿ ಬರೆಯಿರಿ, ಒಂದು ಸಾರಿ ನಾವೆಲ್ಲರು ಓದೋಣ.
ಸವಿಯೊದಗು!
ಕನ್ನಡಂಗಳು ಬಗೆ ಬಗೆಯ ದೇಸಿಗಳು
...ದೊಷಮಿನಿತೆಂದು ಬಗೆದು
ದುದ್ಭಾಷಿಸಿ ತಱಿಸೆಂದುಕನ್ನಡಂಗಳೊಳೆಂದು*
ವಾಸುಗಿಯುಮಱಿಯಲಾಱದೆ
ಬೇಸಱುಗುಂ ದೇಶಿ ಬೇಱೆವೇಱಪ್ಪುದರಿಂದ
ಕವಿರಾಜ ಮಾರ್ಗಕಾರ ಕನ್ನಂಡಂಗಳು ಎನ್ನುವುದು ಕನ್ನಡ ವಿವಿಧ ಪ್ರಬೇಧಗಳ ಬಗೆಗೇ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ದೋಷಾದೋಷ ನಿರ್ಣಯದಲ್ಲಿ ಕವಿರಾಜ ಮಾರ್ಗಕಾರ ಹೇಳಿರುವುದರ ಅರ್ಥ ಇಷ್ಟೇ. ದೇಸಿ ಬೇರೆ ಬೇರೆಯಾಗಿರುವುದರಿಂದ ಈ ಹಲವು (ಕನ್ನಡಗಳಲ್ಲಿ) ದೋಷಗಳು ಎಷ್ಟಿದೆ ಎನ್ನುವುದನ್ನು ನಿಶ್ಚಯಿಸಿ ಕಾಣಿಸಿ ಹೇಳಲು ಹಲವು ನಾಲಗೆಗಳುಳ್ಳ ವಾಸುಕಿಯೂ ಬೇಸರಿಸಿಯಾನು.
ಕವಿರಾಜ ಮಾರ್ಗಕಾರನು ಭಾಷೆಯಲ್ಲಿರುವ ದೋಷಗಳನ್ನು ಪಟ್ಟಿ ಮಾಡುವಾಗಲೂ ಅದಕ್ಕೆ ಮೂರು ಕಾರಣಗಳನ್ನು ಕೊಟ್ಟಿದ್ದಾರೆ. ಮೊದಲ ಮುಖ್ಯ ಕಾರಣ ಅಸಂಖ್ಯಾತ ದೇಶಿ ಅಂದರೆ ಕನ್ನಡದ ಭಿನ್ನ ಪ್ರಬೇಧಗಳು, ಎರಡನೆಯದ್ದು ಹಳೆಗನ್ನಡದ ಬಳಕೆ (ಇದು ಕನ್ನಡ ಕವಿರಾಜ ಮಾರ್ಗಕಾರನಿಗೂ ಹಿಂದೆಯೂ ಇತ್ತೆಂಬುದಕ್ಕೆ ಸಾಕ್ಷಿ) ಮೂರನೆಯದ್ದು ಸಂಸ್ಕೃತದ ಸಹಯೋಗ. ಮುಂದೆ ಆತ ಈ ತೊಂದರೆಗಳನ್ನು ಮೀರುವ ಬಗೆಗಳನ್ನು ಹೇಳುತ್ತಾನೆ.
ಕವಿರಾಜ ಮಾರ್ಗಕಾರ ಕನ್ನಡ ಎಂಬುದನ್ನು ನೆಲ, ಜನ, ನುಡಿಗಳನ್ನು ಸೂಚಿಸಲು ಬಳಸಿದ್ದಾನೆ ಎಂಬುದು ಸರಿ. ಆದರೆ ಎರಡು ಸಂದರ್ಭದಲ್ಲಿ ಮಾತ್ರ ಕನ್ನಡಂಗಳು ಎಂಬುದನ್ನು ಭಾಷೆಯ ಒಳ ಪ್ರಬೇಧಗಳನ್ನು ಸೂಚಿಸುವುದಕ್ಕಾಗಿಯೇ ಬಳಸಿದ್ದಾನೆ. ಇನ್ನೊಂದು ಸಂದರ್ಭ ನನಗೆ ನೆನಪಿಲ್ಲ. ಕವಿರಾಜ ಮಾರ್ಗ ಪಠ್ಯವಿರುವರು ಈ ವಿಷಯದಲ್ಲಿ ಸಹಕರಿಸಬೇಕು.
ಇಸ್ಮಾಯಿಲ್
* ಕನ್ನಡಂಗಳ್ ಎಂಬುದು ತಪ್ಪಾಗಿ ಕನ್ನಂಡಂಗಳ್ ಆಗಿತ್ತು. ಅದನ್ನು ಈಗ ತಿದ್ದಲಾಗಿದೆ.
ಕನ್ನಂಡಂಗಳೊ ಅಂದರೆ?
"ಕವಿರಾಜ ಮಾರ್ಗಕಾರ ಕನ್ನಂಡಂಗಳು", "ಎರಡನೆಯದ್ದು", "ಮೂರನೆಯದ್ದು", ಇವೆಲ್ಲ ಸರಿಗಳೆ?
"ಕನ್ನಡಂಗಳ್" ಮತ್ತು "ಕನ್ನಂಡಂಗಳ್" ಎರಡು ಒಂದೆಯೆ?
ನನಗೆ ನಿಜವಾಗಲು ಗೊತ್ತಿಲ್ಲ.
ಸರಿ ಮುಂದೆ ಇನ್ನೇನು ಹೇಳುವುದು "ಕವಿರಾಜ ಮಾರ್ಗ"? ಇನ್ನು ಹೊಸ ಹೊಸ ಕನ್ನಡಗಳನ್ನು ಹೇಗೆ ಹುಟ್ಟಿಸುವುದು, ಎಂದು ಹೇಳಿರಬಹುದೆ?
ಹಾಗೆ ಏನು, ಹೇಗೆ, ಬರೆದರೂ "ಕನ್ನಡಂಗಳ್" ಎನ್ನುವ ಕಾರಣವನ್ನು ನೀಡಿ, ಎಲ್ಲವು ಸರಿ ಎನ್ನಬಹುದು.
ಒಟ್ಟಿನಲ್ಲಿ, ಕನ್ನಡನುಡಿಗೆ ಯಾವುದೆ ಒಂದು ನಿರ್ದಿಷ್ಟವಾದ ಸ್ವರೂಪವಿಲ್ಲ, ಇದ್ದರೂ ಅದನ್ನು ಮೀರಬಹುದು. ಕನ್ನಡದಲ್ಲಿ "ಸರಿಯಾದ ಪ್ರಯೋಗಗಳು" ಎನ್ನವುದೇ ಇಲ್ಲ, ಯಾವುದೆ ವಿಚಿತ್ರವಾದ ಪ್ರಯೋಗವೂ ಒಂದು ಹೊಸ "ಕನ್ನಡಂ".
ಈ ವಾದವನ್ನು ಅನುಸರಿಸಿದರೆ "ಕನ್ನಡಂಗಳ್"ಗೆ ನಮ್ಮ ಸಿನಿಮಾದವರು, ಆಂಗ್ಲ ಪದಗಳನ್ನು ತುರುಕುವವರು, ಮುಂತಾದ ಮಹನೀಯರು ಒಂದೊಂದು ಹೊಸ ಹೊಸ ಕನ್ನಡಗಳನ್ನು ಮಾಡುತ್ತಿದ್ದಾರೆ. ಅವೆಲ್ಲವೂ ಸರಿಯಾದ ಕರಕ್ಟ್ ಕನ್ನಡ.
"ಇನ್ ಯ್ಯೇನ್ ಮಾತಾಡ್ಕೆ ವುಳ್ದೈತೆ, ಎಲ್ವು ಕನ್ನಡಗೊಳೆ ಅಂತೆ".
ನಿಮ್ಮ "ಅನುಕೂಲ-ಸಿಂಧು-ವಾದ"ದ ಇನ್ನು ಏನಾದರು ತುಣುಕುಗಳು ಉಳಿದು ಹೋಗಿದ್ದರೆ, ಅವನ್ನು ಇಲ್ಲಿ ಉದುರಿಸಿಬಿಡಿ, ಅವನ್ನು ನೋಡಿ(ಓದಲು, ಆ ಕನ್ನಡವು ನಮಗೆ ಬರುವುದೋ ಇಲ್ಲವೊ, ನಾವು "ಕನ್ನಡಂಗಳ್"ಅಲ್ಲಿ, ಬರಿ ಒಂದು ಕನ್ನಡವನ್ನು ತಿಳಿದವರು) ಪಾವನರಾಗೋಣ.
ಥ್ಯಾಂಕ್ಯು. ಬಹಳ ಹೆಲ್ಪಾಯಿತು. ಸಾರಿ ಸಾರ್ಗಳೆ!
ಯಾರ ಕನ್ನಡ, ಕನ್ನಡ?
ನಾಗಭೂಷಣಸ್ವಾಮಿಯವರೆ,
ನಿಮ್ಮ ಈ ಬರಹಕ್ಕಾಗಿ ಧನ್ಯವಾದಗಳು. ಸಂಪದದಲ್ಲಿ ಕನ್ನಡದ ಬಗ್ಗೆ ಬರೆಯಲ್ಪಡುತ್ತಿರುವ ಕೆಲವು ಬರಹಗಳನ್ನು ಓದಿ ಹೆದರಿಕೆ ಆಗತೊಡಗಿತ್ತು. ಭಾಷಾ ಪ್ರೀತಿಯ ಭೋರ್ಗರೆತ ಕಿವಿಗಡಚಿಕ್ಕುವಂತಾಗಿತ್ತು. ನಮ್ಮ ಸಂಪದಿಗರ ಮುಂದೆ ಕನ್ನಡ ಗಂಡುಗಲಿಗಳು, ಹೋರಾಟಗಾರರೂ ಕೂಡ ನಾಚಿಕೊಳ್ಳಬೇಕು ಅಂತಹ ಜೋರು.
ಯಾರೂ ಕೂಡ ಇದು ಯಾಕೆ ಹೀಗೇ ಇರಬೇಕು, ಯಾಕೆ ಹಾಗೂ ಇರಬಾರದು ಎಂದಾಗಲೀ, ಹಾಗೂ ಇದ್ದೀತು, ಹೀಗೂ ಇದೆ ಎಂದಾಗಲೀ ಹೇಳಹೊರಡುವುದಿಲ್ಲ. ಏನಿದ್ದರೂ, 'ಇದು ಹೀಗೇ ಇರಬೇಕು' ಎನ್ನುವ ಸೊಲ್ಲು. ಏನು ಬರೆಯಲೂ ಹೆದರಿಕೊಂಡಿದ್ದೆ, ಯಾರಾದರೂ ಹೇಳಿಯಾರು, 'ನಿನಗೆ ಕನ್ನಡ ಬರುವುದಿಲ್ಲ, ತೆಪ್ಪಗಿರು' ಎಂದು ಅಂತ.
ಭಾಷೆ ಎಂದರೆ ಪೀನಲ್ ಕೋಡ್ ನ ಒಂದು ಭಾಗವೇನೋ ಅನ್ನಿಸತೋಡಗಿತ್ತು. ನಿಮ್ಮ ಬರಹದಲ್ಲಿನ ಜಾಣ ನುಡಿಗಳು ಕೊಂಚ ಸಮತೋಲನ ತರಲಿ ಎಲ್ಲರಲ್ಲೂ ಎಂದು ಆ ಕನ್ನಡ ಮಾತೆಯನ್ನು ಪ್ರಾರ್ಥಿಸುತ್ತೇನೆ.
ನೀವು ಸ್ವಲ್ಪ ಕ್ಲಿಷ್ಟವೇ ಅನ್ನಬಹುದಾದ ವಿಷಯವನ್ನು ಚೆನ್ನಾಗಿ ವಿವರಿಸಿದ್ದೀರಿ. ಮತ್ತೆ ಧನ್ಯವಾದಗಳು.
ಕಮಲಾಕರ್
ಭಾಷಾಭಿಮಾನ
ಭಾಷಾಭಿಮಾನದ ಭೋರ್ಗರೆತಕ್ಕೆ ಸಂಬಂಧಿಸಿದ ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವೂ ಇದೆ.
ಧನ್ಯವಾದಗಳು ಮತ್ತು 'ಮೈ ಫೇರ್ ಲೇಡಿ'
ಓ ಎಲ್ ಎನ್ ಸರ್ ರವರಿಗೆ ತುಂಬ ಧನ್ಯವಾದಗಳು. ಇತ್ತೀಚೆಗೆಗಂತೂ ತಮ್ಮ ಸಂಪದದಲ್ಲಿ ತಮ್ಮ ಬರವಣಿಗೆ ಬಹಳ ಕಡಿಮೆಯೇ ಆಗಿದೆ. ದಯವಿಟ್ಟು ಸಮಯ ಮಾಡಿಕೊಂಡು ಆಗಾಗ ಬರೆಯುತ್ತಿರಿ.
ಇನ್ನು ತಾವು ಹೇಳಿದ ಇಂಗ್ಲೀಷಿನ ಪ್ರಭೇದಗಳ ಬಗ್ಗೆ ಸಂಪದ ಗೆಳೆಯರೊಟ್ಟಿಗೆ ನನಗೆ ತಿಳಿದಿರುವ ಸಣ್ಣ ಮಾಹಿತಿಯೊಂದನ್ನು ಹಂಚಿಕೊಳ್ಳುತ್ತೇನೆ. ಜಾರ್ಜ್ ಬರ್ನಾರ್ಡ್ ಶಾ ರವರು ಕಳೆದ ಶತಮಾನದ ಆರಂಭದಲ್ಲಿ ಇಂಗ್ಲೆಂಡಿನಲ್ಲಿದ್ದ ಇಂಗ್ಲೀಷ್ ಭಾಷಾಶುದ್ಧಿಯ ಬಗೆಗಿನ ಪಂಡಿತರ ಮೋಹವನ್ನು ಲೇವಡಿ ಮಾಡುತ್ತ 'ಪಿಗ್ಮಾಲಿಯನ್' ಎಂಬ ಹೆಸರಿನ ನಾಟಕ ರಚಿಸಿದ್ದರು. ಅದು ಬಹಳ ಜನಪ್ರಿಯವಾದ ಸಂಗೀತರೂಪಕವಾಗಿ ಪ್ರದರ್ಶಿಸಲ್ಪಡುತ್ತಿತ್ತು. ೧೯೬೦ರ ದಶಕದಲ್ಲಿ ಆಡ್ರೇ ಹೆಪ್ ಬರ್ನ್ಳ ಅಭಿನಯದಲ್ಲಿ 'ಮೈ ಫೇರ್ ಲೇಡಿ' ಎಂಬ ಹೆಸರಿನಲ್ಲಿ ಚಲನಚಿತ್ರವಾಯಿತು.
ಈ ಚಿತ್ರದಲ್ಲಿ ಇಂಗ್ಲೀಷಿನ ಪ್ರೊಫೆಸರನೊಬ್ಬ ಇಂಗ್ಲೆಂಡಿನ ಗ್ರಾಮೀಣ ಭಾಗದಿಂದ ಬಂದು ಲಂಡನ್ನಿನಲ್ಲಿ ಹೂಮಾರುವ ವೃತ್ತಿಯಲ್ಲಿರುವವಳೊಬ್ಬಳ ಗ್ರಾಮ್ಯ ಉಚ್ಛಾರವನ್ನು ಕಂಡು ಆಕೆಯ ಭಾಷೆಯನ್ನು ಶಿಷ್ಟಗೊಳಿಸುವ ಪಣತೊಡುತ್ತಾನೆ. ಕಡೆಗೆ ಆ ರೀತಿಯ ಪ್ರಯತ್ನದ ವ್ಯರ್ಥತೆಯನ್ನು ಮನಗಾಣುತ್ತಾನೆ. ಒಂದು ಒಳ್ಳೆಯ ಚಿತ್ರ.
ಇಂಗ್ಲೀಷಿನ ಪ್ರಭೇದಗಳ ಬಗ್ಗೆ ಮಾತು ಬಂದಾಗ ಈ ಚಿತ್ರ ನೆನಪಾಯಿತು. ಅವಕಾಶ ಸಿಕ್ಕಾಗ ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಿ. 'ಪಿಗ್ಮಾಲಿಯನ್' ನಾಟಕವು 'ಸೇವಂತಿ ಪ್ರಸಂಗ' ಎಂಬ ಹೆಸರಿನಲ್ಲಿ ಜಯಂತ ಕಾಯ್ಕಿಣಿಯವರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟಿದೆ. 'ಹೂ ಹುಡುಗಿ' ಎಂಬ ಹೆಸರಿನಲ್ಲಿ ರಂಗಕ್ಕೂ ಬಂದಿದೆ.
ಸೇವಂತಿ ಪ್ರಸಂಗ ಮತ್ತು ಭಾಷೆ
ಭಾಷೆಯ ವ್ಯಾಕರಣ ಮತ್ತು ಜನರ ಬಳಕೆಯ ಭಾಷೆ ಕುರಿತು ವಿಚಾರ ಮಾಡುವವರು 'ಸೇವಂತಿ ಪ್ರಸಂಗ'ವನ್ನು ತಪ್ಪದೇ ಓದಬೇಕು . ಶ್ರೀ ಜಯಂತ್ ಕಾಯ್ಕಿಣಿಯವರು ತುಂಬ ಚೆನ್ನಾಗಿ ಅನುವಾದಿಸಿದ್ದಾರೆ.
ನೆನಪಿನಿಂದ ಬರೆಯುತ್ತಿರುವೆ .
ಸೇವಂತಿ ಕೊಳಚೆಪ್ರದೇಶದ ನಿವಾಸಿ . ಅವಳು 'ಹೃದಯ'ವನ್ನು ರುದಯಾ ಅಂತ ಉಚ್ಚರಿಸುತ್ತಾಳೆ . ಆಗ ಭಾಷಾಷಾಸ್ತ್ರಿ ಅವಳನ್ನು ತಿದ್ದಲು ಪ್ರಯತ್ನಿಸಿ 'ಈಗ ಹೃದಯ ಅನ್ನು ,- ಹೃ ..ದ.. ಯ.. ' ಅಂತಾನೆ.
ಸೇವಂತಿ ' ಅದು ನಿನಗಿದ್ರೆ ತಾನೆ?' ಅಂತ ಕಟಕಿಯಾಡಿ ' ಮಳೆ ಗಾಳೀಲಿ ಎಲ್ಲಿ ಸೂರು ಹಾರಿ ಹೋಗುತ್ತೋ ಅಂತ ಚಿಂತೆಯಿಂದ ಡಬಾ ಡಬಾ ಅಂತ ಬಡಕೊಳ್ಳತೈತೆಲ್ಲ ಅದು ರುದಯಾ....... ಅದು ನಿಂಗೆಲ್ಲೈತೆ? ' ಅನ್ನುತ್ತಾಳೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಹೃದಯವೇಕೆ, ಎದೆ/ಗುಂಡಿಗೆಯಿಲ್ಲವೆ?
ಇಲ್ಲಿ ನೋಡಿ(ಗಮನಿಸಿ)..
ಅಚ್ಚ ಕನ್ನಡಿಗರ ನಾಲಗೆಯಲ್ಲಿ ಹೊರಳದ ಉಚ್ಚಾರಣೆಯನ್ನು ಅವರಿಂದ ಹೇಳಿಸಿದರೆ ಅದು ಹೀಗೆ ಆಗುವುದು.
ಅಚ್ಚ ಕನ್ನಡದಲ್ಲಿ "ಋ" ಕಾರವಿಲ್ಲ, ಮಹಾಪ್ರಾಣಗಳು ಕಡಮೆ, "ಶ", "ಷ" ಕಾರಗಳಿಲ್ಲ. ಹಳೆಗನ್ನಡದಲ್ಲಿ "ಹ"ಕಾರವಿರಲಿಲ್ಲವೆಂದು ಯಾರೊ ಹೇಳಿದ ನೆನಪಿದೆ.
ಆದರೂ ಎಷ್ಟೋ ಬಡಕಣ ಭಾರತದವರು ಹೇಳಲಾಗದ "ಳ"ಕಾರವನ್ನು ನಮ್ಮ ಹಳ್ಳಿ ಕನ್ನಡಿಗರು ಎನಿತು ಸಲೀಸಾಗಿ ಹೇಳುವರು, ಅವರೆಂದು "ಹಳ್ಳಿ"ಯನ್ನು "ಹಲ್ಲಿ" ಎನ್ನುವುದಿಲ್ಲ.
ಪಾಪ, ಒಬ್ಬ ಹಳ್ಳಿಯವನು "ಕನ್ನಡ ರಾಜ್ಯೋಸವ" ಎಂದರೆ ನಾವು ನಗುತ್ತೇವೆ, ಅವನ್ನು ಆಡಿಕೊಳ್ಳುತ್ತೇವೆ(ಅಪಹಾಸ್ಯ), ಆದರೆ ನಿಜವಾಗಿ ಅವನ ತಾಯಿನುಡಿಯಾದ ಕನ್ನಡದಲ್ಲಿ ಆ ಪದವೇ ಇಲ್ಲ. ಅದನ್ನು ನಾವು "ಕನ್ನಡ ನಾಡ ಹಬ್ಬ" ಎಂದರೆ ಅವನ್ನು ಸರಿಯಾಗೆ ಹೇಳನೆ?
ಅದು ಹೋಗಲಿ, ಹೃದಯವನ್ನು ತೆಲುಗಿನವರು "ರಿದಯ"(ಯಾರೊ ನನಗೆ ಹೀಗೆ ಹೇಳಿದರು) ಮಾಡಿದಂತೆ ತದ್ಭವಗಳನ್ನಾದರು ಮಾಡುವರೆ, ಅದೂ ಇಲ್ಲ. ಇವರಿಗೆ ಶುದ್ಧ ಸಕ್ಕದದ ಉಚ್ಚಾರಣೆಯೇ ಆಗಬೇಕು.
ಕನ್ನಡದವರಿಗೆ ಕನ್ನಡದ ಉಚ್ಚಾರಗಳು ಸರಿಯಾಗಿ ಬಂದೇ ಬರುವುದು, ಅವರ ಮೇಲೆ ಬೇರೆ ನುಡಿಯ ಉಚ್ಚಾರಗಳನ್ನು ತುರುಕಿದರೆ, ಅದುಮಿದರೆ, ಪಾಪ ಅವರೇನು ಮಾಡಿಯಾರು, ಹಾಗೆ ತಪ್ಪು ತಪ್ಪು ಉಚ್ಚಾರವನ್ನು ಮಾಡವುದನ್ನು ಹೊರತು ಪಡಿಸಿ.
facts:
ಮಹಾಪ್ರಾಣಗಳು ಕಡಿಮೆ ಅಲ್ಲ, ಇರಲೇ ಇಲ್ಲ.
"ಹ್"-ಕಾರವೂ ಇರಲಿಲ್ಲ, "ಪ್"-ಕಾರ ಬಳಸಲಾಗುತ್ತಿತ್ತು.
ಕನ್ನಡ ಬಳಸಲು ಹೆದರಿಕೆಯೇಕೆ?
ಗೆಳೆಯರೇ,
ಭಾಷೆಯಲ್ಲಿನ ವೈವಿಧ್ಯತೆಯನ್ನು ತಪ್ಪಿಸಲು ಸಾಧ್ಯವಿಲ್ಲ; ಎಲ್ಲ 'ಕನ್ನಡಂಗಳಿಗೂ' ಅವುಗಳದ್ದೇ ಆದ ಸೊಗಡುಗಳಿವೆಯಾದ್ದರಿಂದ ಅವೆಲ್ಲವೂ ಕನ್ನಡವೇ ಎನ್ನುವುದರಲ್ಲಿ ತಪ್ಪಿಲ್ಲ. ಪರಭಾಷೆಯ ಹಾವಳಿಯನ್ನು ತಪ್ಪಿಸಲು ಕನ್ನಡಮೂಲದ ಪದಗಳನ್ನು ಬಳಸಲೇಬೇಕು ದಿಟ; ಆದರೆ ವಿಪರೀತವಾಗಿ ಯತ್ನಿಸುವುದು ಅನರ್ಥಕ್ಕೆಡೆಮಾಡುತ್ತದೆ. ಕನ್ನಡವನ್ನು ಕೇವಲ ಭಾಷೆಯನ್ನಾಗಿಸದೆ, 'ಕಸ್ತೂರಿ'ಯನ್ನಾಗಿಸುವಲ್ಲಿ ತಾಯ್ನುಡಿ ಸಂಸ್ಕೃತದ ಕೊಡುಗೆ ಅಪಾರ, ಅಗಾಧ! ಆದ್ದರಿಂದ ಸಕ್ಕದಪದಗಳನ್ನು ಬಳಸುವುದು ಕನ್ನಡದ ಸಾಹಿತ್ಯದೃಷ್ಟಿಯಿಂದ ಹಿತಕರವೇ ಹೊರತು ಅಡ್ಡಿಯಲ್ಲ. ಆದರೆ ದಿನನಿತ್ಯದ ಮಾತುಕತೆಯಲ್ಲಿ ಸಂಸ್ಕ್ರೃತವನ್ನು ಅತಿಯಾಗಿ ಯಾರೂ ಬಳಸುವುದಿಲ್ಲ; ಏಕೆಂದರೆ ಅಲ್ಲಿ ಸೇರುವುದು ನೆರೆರಾಜ್ಯದ, ನೆರೆಯ ಪ್ರದೇಶದ ಪದಗಳು. ಸಾಧ್ಯವಾದಲ್ಲಿ ಇದನ್ನು ತಪ್ಪಿಸಿದರೆ ಉತ್ತಮ ಎನ್ನಬಹುದಾದರೂ ಕೆಲವು ವೇಳೆ ಅಸಾಧ್ಯವೂ ಹೌದು. ಆದರೆ ಮೂಲ ಕನ್ನಡದ ಪದವಿರುವಾಗ ಬಳಸದಿರುವುದನ್ನು ಮಾತ್ರ ಅಕ್ಷಮ್ಯ ಅಪರಾಧ ಎನ್ನಬಹುದು. ಹೊರದೇಶದ ಪದಗಳು ಬಂದು ಸೇರಿದ್ದರೂ, ಅದಕ್ಕೆ ಕನ್ನಡದ ಪದವನ್ನು ಹುಡುಕಿ ಸರಿಪಡಿಸಿ, ಸಂಸ್ಕರಿಸುವವರೆಗೂ ಹೊರಭಾಷೆಯ ಪದವನ್ನೇ ಉಪಯೋಗಿಸಿದರೂ ಚಿಂತೆಯಿಲ್ಲ; ಕೆಲವೊಮ್ಮೆ ಹೊಸಪದವನ್ನು ಸೃಷ್ಟಿಸುವ ಅಗತ್ಯವೂ ಇರುವುದಿಲ್ಲ. ನಾವು ನಮ್ಮ ನಾಡು-ನುಡಿಯ ಬಗ್ಗೆ ಹೆಮ್ಮೆ ಪಡೋಣ; ಆದರೆ ಬಾವಿಯ ಕಪ್ಪೆಗಳಾಗುವುದು ಬೇಡ. ಉದಾಹರಣೆಗೆ:
೧. ಇವತ್ತು ನಮ್ಮನೇಲಿ ಟೊಮೆಟೊ ರಸಂ.
ಇವತ್ತು ನಮ್ಮನೇಲಿ ಟೊಮೆಟೊ 'ಸಾರು' ಎನ್ನಿ. ತಮಿಳಿನ 'ರಸಂ' ಏಕೆ? ಶುದ್ಧ ಕನ್ನಡನಾಡಿನ 'ಎಂಟಿಆರ್'ನ ಉತ್ಪನ್ನವಾದ ಸಾರಿನಪುಡಿಗೆ ಹೆಸರು 'ರಸಂ ಪೌಡರ್' ಏಕೆ? 'ಸಾರು ಪೌಡರ್' ಏಕಲ್ಲ? ನಾವು ನೀವು ಇಲ್ಲಿ ಪ್ರತಿಭಟಿಸಬೇಕಾದ್ದು 'ಪೌಡರ್' ಅನ್ನು 'ಪುಡಿ' ಮಾಡುವುದರ ಬಗ್ಗೆ ಅಲ್ಲ; ಏಕೆಂದರೆ ಉತ್ಪನ್ನದ ಹೆಸರು ಆಂಗ್ಲದಲ್ಲಿದೆ, ಇರಲಿ; ಆದರೆ ಸಾರನ್ನು ರಸಂ ಮಾಡುವುದಕ್ಕೆ ನಮ್ಮೆಲ್ಲರ ವಿರೋಧ ಇರಬೇಕಲ್ಲವೇ?
೨. ಪಗಾರ ಇಲ್ದಿದ್ರ ರೋಟಿಗೇನ್ ಮಾಡ್ತೀಯಪಾ ತಮ್ಮಾ...
ತಪ್ಪಲ್ಲವೇ? ರೋಟಿ 'ರೊಟ್ಟಿ'ಯಲ್ಲದಿದ್ದರೆ ಹೋಗಲಿ, 'ಸಂಬಳ' ಎಂಬ ಅಚ್ಚಕನ್ನಡದ ಪದವಿದ್ದರೂ ಮರಾಠಿ, ಹಿಂದಿಯ 'ಪಗಾರ' ಏಕೆ?
೩. ಆಂಗ್ಲದ ಹಾವಳಿ ನಾನು ಹೇಳದಿರುವುದೇ ಉತ್ತಮ
೪. ಇತರ ಭಾಷೆಯ ಪದಗಳು
"ಗೋಪು! ಎಲ್ಲಿ ನನ್ ಸೋಪು?" -> ತಪ್ಪಿಲ್ಲ; ಸೋಪ್ ಗೆ ಕನ್ನಡಪದವಿಲ್ಲ; ಸಾಬೂನು ಕೂಡ 'ಶಾಬೊನ್' ಎಂಬ ಅರಬ್ಬೀ ಪದ. ಇದನ್ನು
"ಗೋಪು! ಎಲ್ಲಿ ನನ್ನ ಫೇನಕ?" ಎಂದಾಗಲೀ
"ಗೋಪು! ಎಲ್ಲಿ ನನ್ನ ನೊರೆತೊಳೆಕ?" ಎಂದಾಗಲೀ
"ಗೋಪು! ಎಲ್ಲಿ ನನ್ನ ತೊಳೆವುಂಡೆ?" ಎಂದಾಗಲೀ ಹೇಳುವ ಅವಶ್ಯಕತೆಯಿಲ್ಲ.
ಆದರೆ "ಗೋಪು! ಎಲ್ಲಿ ನನ್ನ ಅಂಟುವಾಳ?" ಎಂದರೆ ಕನ್ನಡದ ಸೊಗಡು ಇರಬಹುದಾದರೂ 'ಬಟ್ಟೆ ಸೋಪು' ಎಂದುಕೊಂಡರೆ ಕಷ್ಟ!
ನಾನು ಹೇಳಿದ ಮಾತ್ರಕ್ಕೆ ಎಲ್ಲಾ ತಿದ್ದಿಕೊಳ್ಳುವರೆಂಬ ಭ್ರಮೆ ನನಗಿಲ್ಲವಾದರೂ, ಕನ್ನಡಕ್ಕೆ ನಮ್ಮಿಂದ ಇಷ್ಟೂ ಮಾಡಲಾಗುತ್ತಿಲ್ಲವಲ್ಲ! ಎಂಬ ಬೇಸರ ಅಷ್ಟೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಒಂದು ರಸಂ ಮೀಮಾಂಸೆ
ರಸಂಗೆ ಸಂಬಂಧಿಸಿದಂತೆ ಒಂದು ಸ್ಪಷ್ಟೀಕರಣ. ಟೊಮಾಟೋ ಸಾರು ಮತ್ತು ರಸಂ ಎರಡೂ ಒಂದೇ ಅಲ್ಲ. ರಸಂ ಮತ್ತು ಸಾರುಗಳನ್ನು ತಯಾರಿಸುವ ವಿಧಾನ ಮತ್ತು ರುಚಿಗಳೆರಡೂ ಬೇರೆಯೇ ಆಗಿರುವುದರಿಂದ ಸಾರು ಮತ್ತು ರಸಂಗಳನ್ನು ಬೇರೆ ಬೇರೆಯಾಗಿಯೇ ಅರ್ಥೈಸಿಕೊಳ್ಳುವುದು ಮತ್ತು ಆಸ್ವಾದಿಸುವುದು ಉತ್ತಮ ಎಂಬುದು ನನ್ನ ಭಾವನೆ.
ಬರೆಹದ ಕನ್ನಡದಲ್ಲಿ ಮಾಂಸಾಹಾರಕ್ಕೆ ಸಂಬಂಧಿಸಿದ ಪದಕೋಶವೊಂದು ಇಲ್ಲವೇ ಇಲ್ಲ ಎಂಬ ಸ್ಥಿತಿಯೂ ಇದೆ. ಇದು ಕಾಲಕ್ರಮೇಣ ಸುಧಾರಿಸೀತು. ಅಥವಾ ಈಗ ಈ ಕೊರತೆಯನ್ನು ತುಂಬುತ್ತಿರುವ ಅನ್ಯದೇಶ್ಯ ಪದಗಳೇ ಮುಂದೆ ಕನ್ನಡ ಪದಗಳಾದಾವು ಎನಿಸುತ್ತದೆ.
ಮೞೆ ಬೇಳುತ್ತಿದೆ... :P
ಗೆಳೆಯರೇ,
ಭಾಷೆಯಲ್ಲಿನ ವೈವಿಧ್ಯತೆಯನ್ನು ತಪ್ಪಿಸಲು ಸಾಧ್ಯವಿಲ್ಲ;
ನಿಜವಾಗ್ಲೂ? ಎನಿತ್ತು ನುಡಿಗಳನ್ನು ಕಣ್ಡಿದ್ದೀರಾ ತಾವು?
ಎಲ್ಲ 'ಕನ್ನಡಂಗಳಿಗೂ' ಅವುಗಳದ್ದೇ ಆದ ಸೊಗಡುಗಳಿವೆಯಾದ್ದರಿಂದ ಅವೆಲ್ಲವೂ ಕನ್ನಡವೇ ಎನ್ನುವುದರಲ್ಲಿ ತಪ್ಪಿಲ್ಲ.
ಅಹುದು ಅಹುದು, ಅಕ್ಕಿಯಲ್ಲಿ ಎನಿತ್ತೇ ಕಲ್ಲಿದ್ದರೂ ಅಕ್ಕಿಯೇ ತಾನೆ
ಪರಭಾಷೆಯ ಹಾವಳಿಯನ್ನು ತಪ್ಪಿಸಲು ಕನ್ನಡಮೂಲದ ಪದಗಳನ್ನು ಬಳಸಲೇಬೇಕು ದಿಟ; ಆದರೆ ವಿಪರೀತವಾಗಿ ಯತ್ನಿಸುವುದು ಅನರ್ಥಕ್ಕೆಡೆಮಾಡುತ್ತದೆ.
rephrasing using your sentence to impart my ideas: "ಆದರೆ 'ವಿಪರೇತ'ವಾಗಿ 'ಪರಭಾಷೆ'ಯ 'ಪದ'ಗಳನ್ನು ಬಳಸುವುದು 'ಅನರ್ಥ'ಕ್ಕೆಡೆಮಾಡುತ್ತದೆ"
ಕನ್ನಡವನ್ನು ಕೇವಲ ಭಾಷೆಯನ್ನಾಗಿಸದೆ, 'ಕಸ್ತೂರಿ'ಯನ್ನಾಗಿಸುವಲ್ಲಿ ತಾಯ್ನುಡಿ ಸಂಸ್ಕೃತದ ಕೊಡುಗೆ ಅಪಾರ, ಅಗಾಧ!
ಅಹುದು ಅಹುದು, ಆ ಕೊಡುಗೆ ಅನಿತ್ತು 'ಅಪಾರ', 'ಅಗಾಧ'ವೆನ್ದರೆ, ಎದೆ ಚೂರು ಚೂರಾಗ್|ಹೋಗುತ್ತೆ.
ಆದ್ದರಿಂದ ಸಕ್ಕದಪದಗಳನ್ನು ಬಳಸುವುದು ಕನ್ನಡದ ಸಾಹಿತ್ಯದೃಷ್ಟಿಯಿಂದ ಹಿತಕರವೇ ಹೊರತು ಅಡ್ಡಿಯಲ್ಲ.
ಮುತ್ತಿನನ್ತಹ ಮಾತು :P
ಆದರೆ ದಿನನಿತ್ಯದ ಮಾತುಕತೆಯಲ್ಲಿ ಸಂಸ್ಕ್ರೃತವನ್ನು ಅತಿಯಾಗಿ ಯಾರೂ ಬಳಸುವುದಿಲ್ಲ; ಏಕೆಂದರೆ ಅಲ್ಲಿ ಸೇರುವುದು ನೆರೆರಾಜ್ಯದ, ನೆರೆಯ ಪ್ರದೇಶದ ಪದಗಳು. ಸಾಧ್ಯವಾದಲ್ಲಿ ಇದನ್ನು ತಪ್ಪಿಸಿದರೆ ಉತ್ತಮ ಎನ್ನಬಹುದಾದರೂ ಕೆಲವು ವೇಳೆ ಅಸಾಧ್ಯವೂ ಹೌದು.
ನಿಮಗೆ ಎಹಗೆ explainಮಾಡೋದೊthinkಮಾಡಕ್|ಆಗ್ತಾಯಿಲ್ಲ... ಇರಲಿ, ನೋಡೋಣ
ಬೇರೆನಾಡುಗಳ ನುಡಿಯನ್ನು ಬಳಸುವುದನ್ನು ತಪ್ಪಿಸಿದರೆ ಒಳ್ಳೆಯದೇ? afterall, ನಮ್ಮ ಬದಿಯಿರುವ ನಾಡುಗಳು ಕನ್ನಡನಾಡಿನನ್ತೆ Dravidian-language-familyಗೆ ಸೇರಿದ ನುಡಿಯನ್ನು ಬಳಸುತ್ತಾರೆ(maharashtra ಮತ್ತು goa ಹೊರತು). ಒನ್ದೇ familyಯಲ್ಲಿ ಕೊಞ್ಚ sharingಆದ್ರೆ ತಪ್ಪೇನಿಲ್ಲ --ಎಹಗಿದ್ದರೂನು ಬಹಳ ಕಡಿಮೆ variationಇರುತ್ತೆ ಈ ಪದಗಳ ನಡುವೆ(ತಮಗೆ sanskrt ಮತ್ತು 'sanskrt'ised kannada ಬಿಟ್ಟು ಬೇರೆ ನುಡಿಗಳು ಗೊತ್ತಿದ್ದಲ್ಲಿ...)
ಸರಿಯಾಗ್|ಹೇೞಿದ್ರಿ... ಆದರೆ ನಿಮ್ sentence ನೋಡಿ ನಗು ಬರುತ್ತೆ
, "ಅಕ್ಷಮ್ಯ ಅಪರಾಧ"!
ಹೊರದೇಶದ ಪದಗಳು ಬಂದು ಸೇರಿದ್ದರೂ, ಅದಕ್ಕೆ ಕನ್ನಡದ ಪದವನ್ನು ಹುಡುಕಿ ಸರಿಪಡಿಸಿ, ಸಂಸ್ಕರಿಸುವವರೆಗೂ ಹೊರಭಾಷೆಯ ಪದವನ್ನೇ ಉಪಯೋಗಿಸಿದರೂ ಚಿಂತೆಯಿಲ್ಲ; ಕೆಲವೊಮ್ಮೆ ಹೊಸಪದವನ್ನು ಸೃಷ್ಟಿಸುವ ಅಗತ್ಯವೂ ಇರುವುದಿಲ್ಲ. ನಾವು ನಮ್ಮ ನಾಡು-ನುಡಿಯ ಬಗ್ಗೆ ಹೆಮ್ಮೆ ಪಡೋಣ; ಆದರೆ ಬಾವಿಯ ಕಪ್ಪೆಗಳಾಗುವುದು ಬೇಡ. ಉದಾಹರಣೆಗೆ:
೧. ಇವತ್ತು ನಮ್ಮನೇಲಿ ಟೊಮೆಟೊ ರಸಂ.
ಇವತ್ತು ನಮ್ಮನೇಲಿ ಟೊಮೆಟೊ 'ಸಾರು' ಎನ್ನಿ. ತಮಿಳಿನ 'ರಸಂ' ಏಕೆ? ಶುದ್ಧ ಕನ್ನಡನಾಡಿನ 'ಎಂಟಿಆರ್'ನ ಉತ್ಪನ್ನವಾದ ಸಾರಿನಪುಡಿಗೆ ಹೆಸರು 'ರಸಂ ಪೌಡರ್' ಏಕೆ? 'ಸಾರು ಪೌಡರ್' ಏಕಲ್ಲ? ನಾವು ನೀವು ಇಲ್ಲಿ ಪ್ರತಿಭಟಿಸಬೇಕಾದ್ದು 'ಪೌಡರ್' ಅನ್ನು 'ಪುಡಿ' ಮಾಡುವುದರ ಬಗ್ಗೆ ಅಲ್ಲ; ಏಕೆಂದರೆ ಉತ್ಪನ್ನದ ಹೆಸರು ಆಂಗ್ಲದಲ್ಲಿದೆ, ಇರಲಿ; ಆದರೆ ಸಾರನ್ನು ರಸಂ ಮಾಡುವುದಕ್ಕೆ ನಮ್ಮೆಲ್ಲರ ವಿರೋಧ ಇರಬೇಕಲ್ಲವೇ?
ನನ್ನ doubtಗಳು confirmಆಗ್|ತಾ ಇವೆ...
ಕನ್ನಡದಲ್ಲಿ, 'ರಸ'ವೆಮ್ಬ ಪದವಿದೆ... ರಸಮ್ ಎಹಗೆ ಅನ್ದು explanationಬೇಕೇ?
== ರಸಮ್|ಎಮ್ಬ, <-- ಹಳಗನ್ನಡ formation, so 'ರಸಮೆಮ್ಬ'
== ಹಳಗನ್ನಡ to ಆಧುನಿಕ-ಕನ್ನಡ: -ಮ್ to -ವ್, ಪ್ to ಹ್, ಬ್ to ವ್, ೞ್ to ಳ್, etc. etc.
i think ತಾವು innocentಕನ್ನಡಿಗರನ್ನು ತಮಿೞರ ಮೇಲೆ ಎತ್|ಕಟ್ತಾಯಿದ್ದೀರ... ಅದೇ ಆಟ... ಇನ್ನೂ ಎನಿತ್ತು 'ದಿನ'ಗಳವರೆಗೆ ಆಡ್ತೀರ?
೨. ಪಗಾರ ಇಲ್ದಿದ್ರ ರೋಟಿಗೇನ್ ಮಾಡ್ತೀಯಪಾ ತಮ್ಮಾ...
ತಪ್ಪಲ್ಲವೇ? ರೋಟಿ 'ರೊಟ್ಟಿ'ಯಲ್ಲದಿದ್ದರೆ ಹೋಗಲಿ, 'ಸಂಬಳ' ಎಂಬ ಅಚ್ಚಕನ್ನಡದ ಪದವಿದ್ದರೂ ಮರಾಠಿ, ಹಿಂದಿಯ 'ಪಗಾರ' ಏಕೆ?
೩. ಆಂಗ್ಲದ ಹಾವಳಿ ನಾನು ಹೇಳದಿರುವುದೇ ಉತ್ತಮ
ಅಹಗೆಯೆ, sanskrtಅದ ಹಾವಳಿ ನಾನು ಹೆಳದೇಇರುವುದು ಒಳ್ಳೇದು...
afterall, sanskrt and english are both proud members of the Indo-Aryan linguistic family.
೪. ಇತರ ಭಾಷೆಯ ಪದಗಳು
"ಗೋಪು! ಎಲ್ಲಿ ನನ್ ಸೋಪು?" -> ತಪ್ಪಿಲ್ಲ; ಸೋಪ್ ಗೆ ಕನ್ನಡಪದವಿಲ್ಲ; ಸಾಬೂನು ಕೂಡ 'ಶಾಬೊನ್' ಎಂಬ ಅರಬ್ಬೀ ಪದ. ಇದನ್ನು
"ಗೋಪು! ಎಲ್ಲಿ ನನ್ನ ಫೇನಕ?" ಎಂದಾಗಲೀ
"ಗೋಪು! ಎಲ್ಲಿ ನನ್ನ ನೊರೆತೊಳೆಕ?" ಎಂದಾಗಲೀ
"ಗೋಪು! ಎಲ್ಲಿ ನನ್ನ ತೊಳೆವುಂಡೆ?" ಎಂದಾಗಲೀ ಹೇಳುವ ಅವಶ್ಯಕತೆಯಿಲ್ಲ.
ಆದರೆ "ಗೋಪು! ಎಲ್ಲಿ ನನ್ನ ಅಂಟುವಾಳ?" ಎಂದರೆ ಕನ್ನಡದ ಸೊಗಡು ಇರಬಹುದಾದರೂ 'ಬಟ್ಟೆ ಸೋಪು' ಎಂದುಕೊಂಡರೆ ಕಷ್ಟ!
ನಾನು ಹೇಳಿದ ಮಾತ್ರಕ್ಕೆ ಎಲ್ಲಾ ತಿದ್ದಿಕೊಳ್ಳುವರೆಂಬ ಭ್ರಮೆ ನನಗಿಲ್ಲವಾದರೂ, ಕನ್ನಡಕ್ಕೆ ನಮ್ಮಿಂದ ಇಷ್ಟೂ ಮಾಡಲಾಗುತ್ತಿಲ್ಲವಲ್ಲ! ಎಂಬ ಬೇಸರ ಅಷ್ಟೆ.
ನಿಮ್ಮವ
ಬೆನಕ
-ನರೇಶ.
ಟ್ರಾಯ್ ಮಾಡೋಣ
"ಟ್ರಾಯ್ ಮಾಡು", ಇದರ ಕನ್ನಡ ರೂಪ ಯಾವುದು? 'ಪ್ರಯತ್ನಿಸು'? 'ಬಾಳ ಟ್ರಾಯ್ ಮಾಡಿದ್ನಪಾ, ಆಗ್ಲೇ ಇಲ್ಲ' ಅನ್ನುವದಕ್ಕಿಂತ 'ಬಾಳ ಗುದ್ದಾಡಿದೆ, ಆಗ್ಲಿಲ್ಲ' 'ಪ್ರಯತ್ನ' ಅನ್ನೋದು ತುರುಕಿರೋದು ಅಂತ ತಿಳು ಆಗುತ್ತೆ.
ಹೊಸ ನಾಡ ಕಟ್ಟೋಣ
ತಿಳಿ/ಅರಿ
"ತಿಳು" ಅಲ್ಲ "ತಿಳಿ",
ತಿಳಿವು/ತಿಳಿವಳಿಕೆ.
"ತಿಳು ಆಗುತ್ತೆ" ಅಲ್ಲ "ತಿಳಿವಾಗುತ್ತೆ"("ಅರಿವಾಗುತ್ತೆ"/"ಗೊತ್ತಾಗುತ್ತೆ").
ತಿಳಿಸಿ
ತಿಳಿಯಾಗುತ್ತದೆ, ತಿಳು=ತೆಳುವಾದ, ಅರ್ಥವಾಗುತ್ತದೆ, ಇರಲಿ 'ಪ್ರಯತ್ನ' ದ ಕನ್ನಡ ಪದ ಅಥವ ಆ ಪದದ ಕನ್ನಡ ರೂಪ, ತಿಳಿದವರು ತಿಳಿಸಿ. ಇನ್ನೊಂದು ಪ್ರಶ್ನೆ, ಈ ಆಗುತ್ತದೆ, ಹೋಗುತ್ತದೆ, ಬರಹದ ಭಾಷೆಯಲ್ಲೇನೋ ಇದೆ ಆದರೆ, ಆಡು ಭಾಷೆಯಲಿ ಆಗ್ತೈತೆ, ಅಕ್ಕೈತಿ ಆಗಿದೆ, ಯಾಕೆ?
ಸಂಸ್ಕೃತದಿಂದಾಗಿ ಕನ್ನದ ಕಸ್ತೂರಿಯಾಗಿದೆ
ಈ ಮಾತು ಒಪ್ಪತಕ್ಕುದಲ್ಲ, ಕನ್ನಡಕ್ಕೆ ಅದರದೇ ಆದ ಒಂದು ಲಯ, ತಾಳವಿದೆ. ಸಂಸೃತದ ಎಷ್ಟೋ ಪದಗಳು ಈ ಲಯಕ್ಕೆ ಹೊಂದುವದಿಲ್ಲ. ಆ ಪದಗಳ, ತದ್ಭವ ರೂಪಗಳ ಹೆಚ್ಚು ಬಳಕೆಯಾಗಬೇಕು.
ಹೊಸ ನಾಡ ಕಟ್ಟೋಣ
ಪ್ರಯತ್ನ
ಈ ಪದಕ್ಕೆ ಸಮನಾದ ಕನ್ನಡಪದ(ಅಚ್ಚ ಕನ್ನಡಪದ)ವನ್ನು ನಾನು ಹುಡುಕಿತ್ತಿದ್ದೇನೆ. ಆದರೆ ಇನ್ನು ಸಿಕ್ಕಿಲ್ಲ.
ಆದರೆ "ಯತ್ನ" ಸಕ್ಕದ ಪದದ ತದ್ಭವ "ಜತುನ" ಎಂದು ಮಾಡಿದ್ದಾರೆ ಇಲ್ಲವೆ(ಅಥವಾ) ನಾವೆ ಮಾಡಿಕೊಳ್ಳಬಹುದು.
"ಜತುನ ಮಾಡು" ಅಂದರೆ "ಪ್ರಯತ್ನ ಮಾಡು" ಎಂದು ಆಗಬಹುದು.
ಈ ಮಾತನ್ನೆ, ಸಕ್ಕದದ "ಲಯ", "ತಾಳ"ಗಳನ್ನು ಬಿಟ್ಟು ಹೀಗೆ ಹೇಳಬಹುದೆ?
"ಕನ್ನಡಕ್ಕೆ ತನ್ನದೇ ಆದ ಹದವಿದೆ, ಆ ಹದವನ್ನು ಸಕ್ಕದದ ಎನಿತೋ(ಎಷ್ಟೋ) ಪದಗಳನ್ನು ತುರುಕಿ, ಹದಗೆಡಿಸಲಾಗಿದೆ"(ಹದ + ಕೆಡಿಸು)
ರಸಂ:ಸರಸಂ-ವಿರಸಂ!
ಹೌದು ಇಸ್ಮಾಯಿಲರೇ, ತಿಳಿದಿದೆ.
ಕನ್ನಡದ 'ಸಾರು' ಹೇಗೆ ಮನೆಯಿಂದ ಮನೆಗೆ ಭಿನ್ನವೋ, ಹಾಗೆಯೇ ತಮಿಳಿನ 'ರಸಂ' ಕೂಡ ವೈವಿಧ್ಯಪೂರ್ಣ. ವಸ್ತುವಿನ ಬಳಕೆ ಹಾಗೂ ತಯಾರಿಕೆಯಲ್ಲಿ ೧೦೦% ಸಾರು = ರಸಂ ಅಲ್ಲದಿದ್ದರೂ, ತಮಿಳಿನ 'ರಸಂ' ಎಂಬ ಅಡುಗೆಯ ವಿಧ, ಕನ್ನಡದ ಸಾರಿಗೆ ಸಮವಾದದ್ದೇ. 'ರಸಂ'ಪುಡಿ ಹೊರತಂದ ಅಚ್ಚ ಕನ್ನಡದ ಸಂಸ್ಥೆ 'ಸಾರಿನ ಪುಡಿ' ಹೊರತಾರದಿರುವುದು ಅ(ವ)ನುಮಾನಕ್ಕೆಡೆಮಾಡುವುದಿಲ್ಲವೇ! ಇರಲಿ, ಎಂಟಿಆರ್ ಉತ್ಪನ್ನದ ಆ ಪುಡಿಯಿಂದ ಆಗುವುದು ಕನ್ನಡದಲ್ಲಿ 'ಸಾರು' ಹಾಗೂ ತಮಿಳಿನಲ್ಲಿ 'ರಸಂ' ಎನ್ನುವುದರಲ್ಲಿ ತಿಂದವರಿಗೆ, ಕುಡಿದವರಿಗೆ ಅನುಮಾನವಿಲ್ಲ! ಹೋಗಲಿ ಬಿಡಿ, ಎಸರ ಹೆಸರು ಅವರ ವ್ಯಾಪಾರದ ಗುಟ್ಟಿರಬಹುದು.
ಆದರೆ, ಕನ್ನಡತಿ ಮಾಡಿದ ಟೊಮೆಟೊ ಸಾರನ್ನು "ನಮ್ಮ ಮನೆಯಲ್ಲಿಂದು ರಸಂ" ಎನ್ನುವುದಕ್ಕೆ ಮಾತ್ರ ನನ್ನ ವಿರೋಧ! ವಿಚಿತ್ರವೆಂದರೆ, ಕನ್ನಡಿಗರು ತಮ್ಮ ಉತ್ತರಭಾರತದ ಅರ್ಥಾತ್ 'ನಾರ್ಥಿ' ಗೆಳೆಯರಿಗೆ ತಮ್ಮ ಮನೆಯ ಸಾರನ್ನು 'ರಸಂ' ಎಂದು ಪರಿಚಯಿಸುವುದು! ನನ್ನ ವಿರೋಧ ಈ ಧೋರಣೆಗೆ ಮಾತ್ರ! ಹಾಗೇನಿಲ್ಲ ಎನ್ನುವವರು ಎಲ್ಲಿ ಎದೆ ತಟ್ಟಿ ಹೇಳಿ ನೋಡೋಣ ನೀವೆಷ್ಟು ಬಾರಿ ಕನ್ನಡಿಗನಲ್ಲದವನಿಗೆ "ಆಜ್ ಮಾ ನೇ ಸಾರು ಬನಾಯೀ ಹೈ" ಅಥವಾ "ಟು ಡೇ ಮೈ ಮದರ್ ಹ್ಯಾಸ್ ಪ್ರಿಪೇರ್ಡ್ ಸಾರು" ಎಂದು ಪರಿಚಯಿಸಿದ್ದೀರಿ? ಕರಿ, ಸಾಂಬಾರ್ ಅಥವಾ ರಸಂ ಎಂದಿರುವುದೇ ಹೆಚ್ಚಲ್ಲವೇ? ಯೋಚಿಸಿ ನೋಡಿ!
ಈ ರಸಂನ ಸರಸಂ ಎಲ್ಲಿಯವರೆಗೆ ಹೋಗಿದೆಯೆಂದರೆ, ಸಾರಿಗೂ ರಸಂ ಗೂ ಆಗಾಗ್ಗೆ ವಿರಸಂ! ಅದಕ್ಕೇ ಇರಬಹುದು ಬೇಂದ್ರೆ ಹೇಳಿದ್ದು:
ರಸವೇ ಜನನ
ವಿರಸ ಮರಣ
ಸಮರಸವೇ ಜೀವನ!
ಸಂಗನಗೌಡರೇ,
ನಾನೆಂದದ್ದು:
ಕನ್ನಡವನ್ನು ಕೇವಲ ಭಾಷೆಯನ್ನಾಗಿಸದೆ, 'ಕಸ್ತೂರಿ'ಯನ್ನಾಗಿಸುವಲ್ಲಿ ತಾಯ್ನುಡಿ ಸಂಸ್ಕೃತದ ಕೊಡುಗೆ ಅಪಾರ, ಅಗಾಧ!
ನೀವೆಂದಿದ್ದು:
ಸಂಸ್ಕೃತದಿಂದಾಗಿ ಕನ್ನದ ಕಸ್ತೂರಿಯಾಗಿದೆ
ನಾನು ಬರೆದದ್ದಕ್ಕೂ, ನೀವು ಉದ್ಧರಿಸಿರುವುದಕ್ಕೂ ಬಹಳ ವ್ಯತ್ಯಾಸವಿದೆ. ನಿಮ್ಮ ಊಹೆಗಳಿಗೆ ನೀವೇ ಹೊಣೆ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಅಯ್ಯೊ ಒಂದು ಕನ್ನಡದಲ್ಲಿ ಸಾರಿಗೆ ರಸಂ ಎನ್ನುವರೇನೋ!
ನಮಗೆ ಗೊತ್ತಿರುವುದು ಒಂದು ಕನ್ನಡವು.
ಆದರೆ ಬಹಳ ಕನ್ನಡಗಳನ್ನು ಅರಿತಿರುವ ಕನ್ನಡಗಳ ಚದುರರು ಹೇಳುವುದರಲ್ಲಿ ತಪ್ಪುಂಟೆ, ಇರಲು ಸಾಧ್ಯವೆ!
ಹೊಸತೊಂದು(ನಮಗೆ ಹೊಸತು) ಕನ್ನಡದಲ್ಲಿ.
ಬಿಳಿಯನ್ನ/ಬರಿಯನ್ನ(ಅನ್ನ = ಒಗರು) = ಪ್ಲೈನ್ ರಾಸೈ
ಪಲ್ಯ/ಗೊಜ್ಜು = ಕರ್ರಿ.
ಮಜ್ಜಿಗೆ = ಬಟ್ಟರ ಮಿಲ್ಕು
ಮೊಸರು = ಕರ್ಡುಸು
ಮೊಸರನ್ನ = ಕರಡು ರೈಸು
ಹುಳಿತೊವ್ವೆ = ಸಾಂಬಾರು ( ಸಾಂಬಾರು, ಹುಳಿ ತೊವ್ವೆ, ಕೂಟು ಎಲ್ಲ ಸಾಂಬಾರೆ)
ತೊವ್ವೆ = ದಾಲ್
ಪುಳಿಯೊಗರೆ = ಪುಳಿಯೋಗರ(MTR ad ನೋಡಿ)
ಹೀಗೆ ಪಟ್ಟಿ ಮಾಡಿದರೆ ಒಂದು "ಈ ಕನ್ನಡದಿಂದ" "ಆ ಕನ್ನಡಕ್ಕೆ" ಎಂಬ ನಿಘಂಟು-ಬರೆಯಬಹುದು.
ಬೆಂಗಳೂರಿನ ಹೋಟೆಲುಗಳಲ್ಲಿ ಯಾರಿಗೆ ಕೂಡ "ಮಾವಿನ ಪಾನಕ", "ಉಪ್ಪಿಟ್ಟು", "ಕಿತ್ತಳೆ ಪಾನಕ", "ಮೊಸರನ್ನ" ಗೊತ್ತೇ ಇಲ್ಲ. ಅವರ ಕನ್ನಡದಲ್ಲಿ ಅದೇನಿದ್ದರು "ಮ್ಯಾಂಗೋ ಜ್ಯೂಸ್", "ಕಾರ ಬಾತ್", "ಆರೇಂಜ್ ಜ್ಯೂಸ್", "ಕರಡು ರೈಸು".
ಇನ್ನು ಮಿಕ್ಕ ತಿಂಡಿ ತಿನಿಸುಗಳ ಹೆಸರುಗಳು ಕೂಡ ಕಕ್ಕಬಿಕ್ಕಿ(ಅಲ್ಲ, ಯಾವುದೋ ಬೇರೆ ಕನ್ನಡದ್ದು).
ನಮ್ಮಂತಹ ಒಂದೇ ಒಂದು ಕನ್ನಡವನ್ನು ಕಲಿತಿರುವ ದಡ್ಡರಿಗೆ ಅದು ಎಲ್ಲಿಂದ ಅರ್ಥವಾಗಬೇಕು.
ರಸಾಭಾಸ
ಟೋಮಾಟೋ ಸಾರನ್ನು ರಸಂ ಎಂದವರು ಇತ್ತ ರಸಂಗೂ ಅತ್ತ ಟೊಮಾಟೋ ಸಾರಿಗೂ ಅವಮಾನ ಮಾಡುವವರು. ಅವರ ಭಾಷೆಯ ಬಗೆಗಿನ ಅಜ್ಞಾನವನ್ನು ಕ್ಷಮಿಸಿದೂ ಅವರು ರಸಂ ಸಂಬಂಧಿಸಿದಂತೆ ಮಾಡಿದ ರಸಾಭಾಸವನ್ನು ಕ್ಷಮಿಸಲಾರೆ.
ನನ್ನ ತಾಯ್ನುಡಿ ಕನ್ನಡ
ಬೆನಕರೇ,
ಕನ್ನಡವನ್ನು ಕೇವಲ ಭಾಷೆಯನ್ನಾಗಿಸದೆ, 'ಕಸ್ತೂರಿ'ಯನ್ನಾಗಿಸುವಲ್ಲಿ ತಾಯ್ನುಡಿ ಸಂಸ್ಕೃತದ ಕೊಡುಗೆ ಅಪಾರ, ಅಗಾಧ!
ಮನ್ನಿಸಿ, ನನ್ನ ತಾಯ್ನುಡಿ ಕನ್ನಡವೆಂಬುದು ನನ್ನ ಅನಿಸಿಕೆ. ಅದೇ ಸಾಲುಗಳನ್ನು ನಾನು ಹಾಕದಿದ್ದರೂ ಎರಡರ ತಿಲುವಳಿಕೆಯೂ ಒಂದೇ.ತುಂಬಾ ಕನ್ನಡಿಗರು ಕನ್ನಡವೂ ಸಕ್ಕದದ ಮಗು ಎಂದೇ ತಿಳಿದಿದ್ದಾರೆ,ಕನ್ನಡ ತಾಯಿಯ ಹೆತ್ತವ್ವ ದ್ರಾವಿಡ ನುಡಿ,ಇದುವೇ 'ತಮಿಳು' ಎಂಬುದು ತಮಿಳರ ಹೆಮ್ಮೆ, ಅದು ಅಲ್ಲ ಎಂದು ನುಡಿ ಪರಿಣಿತರು ಹೇಳಿದ್ದಾರೆ.ಈಗಿನ 'ಸಂದರ್ಭ' ದಲ್ಲಿ(ಮನ್ನಿಸಿ, ಕನ್ನಡ ಪದ ಕಳೆದಿದೆ),ಯಾಕೆ ಕನ್ನಡದಲ್ಲಿ ಪರಂಗಿ ಪದಗಳ ಕುಣಿತ ನಡೆದಿದೆ? ಅನ್ನುವ ಪ್ರಶ್ನೆಗೆ ಉತ್ತರ, ಕನ್ನಡ ತಾಯಿಯ ದೇಹದಲ್ಲಿ 'ಸಂಸ್ಕೃತ' ಎಂಬ ದೆವ್ವ ಎಂದೋ ಹೊಕ್ಕಾಗಿದೆ, ಅದನ್ನೀಗ ಪರಂಗಿ ನುಡಿ ಬದಲಾಯಿಸುತ್ತಿದೆ ಅಷ್ಟೇ. ಈ ಎರಡೂ ದೆವ್ವಗಳನ್ನು ಒಟ್ಟಿಗೆ ತೊಲಗಿಸಬೇಕು. ತೀರಾ, ಹ,ಳ ತೆಗೆಯುವಟ್ಟು ಮಟ್ಟಿಗೆ ಹೋಗಬೇಕೆಂದು ನಾ ಹೇಳುವದಿಲ್ಲ, ಆದರೆ ಕನ್ನಡದ ಹದ(ಮಹೇಶ್, ಲಯ ಹದಗೆಡಿಸದು) ಕೆಡದಂತೆ ಇರಬೇಕು.
ಡಿ.ಎನ್.ಶಂಕರ ಭಟ್ಟರು 'ಕನ್ನಡ ಬರಹವನ್ನು ಸರಿಪಡಿಸೋಣ' ಎಂಬ ಹೊತ್ತಿಗೆ ಬರೆದಿದ್ದಾರೆ ಎಂದು ತಿಳಪಟ್ಟೆ, ಸಿಕ್ಕರೆ ಎಲ್ಲಿ ಎಂಬುದ ತಿಳಿಸಿ.ಈ ಕನ್ನಡ ಪೂಜಾರಿಯ ಬಾಲಗ (ಬ್ಲಾಗಿಗೊಂದು ಪದ,'ಬಾಲಗ', ಹೇಗಿದೆ?)ನೋಡಿ. ಇವರು ಪರಂಗಿ ನುಡಿ ಬಳಸುತ್ತಾರೆ.
ಹೊಸ ನಾಡ ಕಟ್ಟೋಣ
ದೆವ್ವ ತೊಲಗಲಿ
ತಿಲುವಳಿಕೆ = ತಿಳಿವಳಿಕೆ
ಸಕ್ಕದ - ಕನ್ನಡ
ಪರಿಣಿತರು(ಪರಿ + ನಿತ , ಇರಬಹುದು) = ಪಳಗಿದವರು, ಬಲ್ಲವರು, ಅರಿತವರು, ತಿಳಿದವರು, ಗೊತ್ತಿರುವವರು.
ದೇಹ = ಮೈ
ತೀರ = ದಡ, ಅಂಚು, ದಂಡೆ
ಪೂಜಾರಿ = (ಹುಡುಕಬೇಕು)
ಸಂದರ್ಭ = ಸಂದಬ್ಬ, ಸಂದರುಬ( ಅಂತ ಮಾಡಿಬಹುದೇನೊ?) (ಓರ್ವ = ಒಬ್ಬ, ಮೂರ್ಖ = ಮುಕ್ಕ, ವರ್ಷ = ವರುಸ, ಹರ್ಷ = ಹರುಸ, ಭಕ್ತ = ಬಕುತ ಆದ ಹಾಗೆ )
ಸಾರು,
ಸಾರು, ಅವರ್|ಹೇಳ್ತಾಯಿರೋದು ಸರೀನೆ... ಅವರ ತಾಯ್ನುಡಿ sanskrtಅ ನಮ್ಮದಲ್ಲ.
ದೆವ್ವವನ್ನು ಬೇಗ ಬಿಡಿಸಿಕೊಳ್ಳಿ
ಸ್ವಾಮಿ ಗೌಡರೆ,
ಅದಕ್ಕೇ ನಾನು ಹೇಳಿದ್ದು 'ಅತಿಯಾಗಿ ಊಹಿಸಿಕೊಳ್ಳಬೇಡಿ' ಎಂದು. ನನ್ನ ತಾಯ್ನುಡಿಯೂ ಕನ್ನಡವೇ, 'ನಮ್ಮೆಲ್ಲರ ತಾಯ್ನುಡಿಯ ತಾಯಿಗೆ ಸಮಾನವಾದದ್ದು' ಸಕ್ಕದ. ತಾಯಿಯ ನೆತ್ತರು ಹರಿವ ಮಗುವಿಗೆ 'ತಾಯಿಯ ದೆವ್ವ ಮೆಟ್ಟಿದೆ; ಅದನ್ನು ಬಿಡಿಸಬೇಕು' ಎನ್ನುವಿರಲ್ಲಾ! ನೀವು ಏನು ಬರೆಯುತ್ತಿರುವಿರೆಂದು ಕೊಂಚ ಯೋಚಿಸಿನೋಡಿ. ದೆವ್ವ ಮೆಟ್ಟಿರುವುದು ಕನ್ನಡಕ್ಕಲ್ಲ; ಕನ್ನಡವೇ ಮೈಮೇಲೆ ಬಂದಂತೆ ಆಡುವ ಬೆರ್ಚಪ್ಪಗಳಿಗೆ!
ನಿಮ್ಮ ಪಾಲಿಗೆ ಸಕ್ಕದ ದೆವ್ವವೋ? ತಮಿಳು - ಅದನ್ನೇಕೆ ಬಿಟ್ಟಿರಿ? ತಮಿಳು ಭೂತವೋ? ಕನ್ನಡದ ಹುಟ್ಟಿಗೆ ಕಾರಣವಾದ ಇವುಗಳನ್ನು ಹೀಗೆನ್ನುವುದೂ, ಸ್ವಂತ ಅಜ್ಜ-ಅಜ್ಜಿಯನ್ನು ಹಳಿಯುವುದೂ ಒಂದೇ. ಯಾವುದೇ ಭಾಷೆಯಾದರೂ ಅದು ಶಾರದೆ; ಅದನ್ನು ಹಳಿಯುವುದು ಅಪರಾಧ; ಅಭಿಮಾನ ಅತಿಯಾಗಿ ಅಪಾಯವಾಗುವ ಮಟ್ಟಕ್ಕೆ ಹೋಗದಿರಲಿ. ಇನ್ನಾದರೂ ಬರೆಯುವ ಮುನ್ನ ಎಚ್ಚರಿಕೆ ವಹಿಸಿ!
ಇತ್ತೀಚೆಗೆ 'ಕೇಳಿಪಟ್ಟೆ' ಇತ್ಯಾದಿ ಕನ್ನಡದ್ದಲ್ಲದ (ಇದು ಅಚ್ಚ ತಮಿಳು ಪ್ರಯೋಗ) ಬಳಕೆ ಹೆಚ್ಚಾಗಿಹೋಗಿದೆ. ಅಂದಹಾಗೆ ನಿಮ್ಮ 'ತಿಳಪಟ್ಟೆ' ಎಂಬ ಕನ್ನಡದ್ದಲ್ಲದ ದೆವ್ವವನ್ನು ಬೇಗ ಬಿಡಿಸಿಕೊಳ್ಳಿ.
ಸಕ್ಕದದೊಳಿನಿತಕ್ಕರೆಯಿರಲ್
ಸಕ್ಕರೆಯದು ಕನ್ನಡದ ಪಾಲ್ಗೆ
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
-
-
ತಪ್ಪು ಮಾಹಿತಿ
ನೋಡಿಯಲ್ಲಿ.
ಕನ್ನಡ ಮತ್ತು ತಮಿೞುಗಳ ತಾಯಿ ನುಡಿಯು ಒಂದೇ ಆಗಿದ್ದು, ಕನ್ನಡ ಮತ್ತು ತಮಿೞು ಆ ತಾಯಿನುಡಿಯಿಂದ ಹುಟ್ಟಿವೆ. ಆದುದರಿಂದ ಕನ್ನಡ ಮತ್ತು ತಮಿಳು ಒಡಹುಟ್ಟಿದ ನುಡಿಗಳು, ಹೊರತು ಯಾವುದು ಯಾವುದರ ತಾಯಿ/ತಂದೆಯಲ್ಲ.
ಭೂತ ಅಂದುಕೊಳ್ಳಿ
ಮಹೇಶ್,
ಮನ್ನಿಸಿ, ನಾನು ಅನುಮಾನದಲ್ಲಿದ್ದೇನೆ. ಸಕ್ಕದ-ಕನ್ನಡ? ಸಂಸ್ಕೃತದ ತದ್ಭವ ಸಕ್ಕದ ಅಲ್ಲವೇ? 'ತೀರಾ', ಇಲ್ಲಿ ಬಳಸಿರುವದು ದಂಡೆ ಅರ್ಥದಲ್ಲಲ್ಲ. ಅತೀ ಎಂಬ ಅರ್ಥದಲ್ಲಿ.
ಬೆನಕರೆ,
ನಾನು 'ದೆವ್ವ' ಅನ್ನದೇ 'ಭೂತ' ಅಂದಿದ್ದರೆ, ಬಹುಶ ನಿಮಗೆ ಇಟ್ಟೊಂದು ಸಿಟ್ಟು ಬರುತಿರಲಿಲ್ಲವೇನೋ, ಯಾಕಂದ್ರೆ ದೆವ್ವ ಅಂದ್ರೆ ಸ್ವಲುಪ ಒರಟಾಗುತ್ತದೆ. ನನ್ನ ಮಾತಿನ ಅರ್ಥ ಸಕ್ಕದವನ್ನು ಹಳಿಯುವುದಲ್ಲ, ದೆವ್ವ ಸೇರಿಕೊಳ್ಳೋದು ಅಂದರೆ ಏನು? ನಮ್ಮ ಮೈಯೊಳಗೆ ಬೇರೊಂದು ಆತ್ಮದ ಸೇರ್ಪಡೆ. ನನಗೆ ತಮಿಳು ಒಂದು ನುಡಿ ಅನ್ನುವದನ್ನು ಬಿಟ್ಟರೆ, ಬೇರೇನೂ ತಿಳಿದಿಲ್ಲ, ಕನ್ನಡ ಬಿಟ್ಟು ನನಗೆ ತಿಳಿದವು, ಪರಂಗಿ ನುಡಿ ಮತ್ತು ಹಿಂದಿ. ತಮಿಳು ನಮ್ಮ ತಾಯ್ನುಡಿಯ ಸೋದರಿ, ಅದರಂತೆ ಇದು, ಇದರಂತೆ ಅದು ಇರುವುದು ಸಹಜ. ಆದರೆ ಸಕ್ಕದದ ನೇರ ತತ್ಸಮ ಪದಗಳ ಬದಲು, ತದ್ಭವಗಳ ಬಳಕೆಯಾಗಲಿ.
'ತಾಂತ್ರಿಕ ಮಹಾವಿದ್ಯಾಲಯ',ಸಂಘ, ಮಿತ್ರ, ತಾತ್ವಿಕ, ಇನ್ನೂ ಅನೇಕ. ಇಂಥವು ರೂಪ ಬದಲಾಯಿಸಲಿ ಎಂದೆ. ಸಕ್ಕದ ಕನ್ನಡದ ತಾಯ್ ಅಲ್ಲ. ಪರಂಗಿ ಮಾರಿಯನ್ನು ಓಡಿಸಲು, ಸಕ್ಕದ ಪದಗಳನ್ನು ತಿದ್ದಬೇಕು. ಆಗ ಎರಡೂ ಮಾರಿಗಳು ಕಾಲು ಮುರಕೊಂಡು ಕೈ ಕೀಳುತ್ತಾರೆ.
ಸಂಸ್ಕೃತದ ತದ್ಭವ ಸಕ್ಕದ
ಹೌದು.
"ಅತಿ" ಇದು ಸಕ್ಕದ, ಸಿಕ್ಕಾಬಟ್ಟೆ, ತುಂಬ, ಹೆಚ್ಚು.
ಅರ್ಥ = (ಹುಡುಕ ಬೇಕು)
ಅನುಮಾನ = (ಹುಡುಕ ಬೇಕು)
ಭೂತ = ದೆವ್ವ, ಬೂದ (ಬೂದನೂರು)
ಬಹುಶಃ = (ಹುಡುಕ ಬೇಕು)
ಸ್ವಲ್ಪ = ತುಸು, ಒಸಿ, ಕೊಂಚ
ಆತ್ಮ = (ಹುಡುಕ ಬೇಕು)
ಸಹೋದರಿ(ಸಹ + ಉದರಿ)(ಸೋದರಿ) = ಒಡಹುಟ್ಟಿದವಳು, ಅಕ್ಕತಂಗಿ
ಸಹಜ = (ಹುಡುಕ ಬೇಕು)
ರೂಪ = ರೂಪು, ರೂಹು
ನೋಡಿ, ನಮಗೆ ಎನಿತು(ಎಷ್ಟು) ಪದಗಳಿಗೆ ಕನ್ನಡಪದಗಳೇ ಗೊತ್ತಿಲ್ಲ. ಬರಿ ಬೇರೆ ನುಡಿಯ ಪದಗಳನ್ನೆ ಬಳಸಿಕೊಂಡು ಬಂದಿದ್ದೇವೆ.
ಒರಟು
ಏನು ನಿಮ್ಮ ಮಾತಿನರ್ಥ. ಕನ್ನಡದ "ದೆವ್ವ" ಪದವು, ಸಕ್ಕದದ "ಭೂತ"ಕ್ಕಿಂತ ಹೇಗೆ ಒರಟು? ಅಚ್ಚಕನ್ನಡದ ಎಲ್ಲ ಪದಗಳು ಬಹಳ ಬಹಳ ಸಲೀಸು, ಒಂದು ಚೂರು ನಾಲಗೆಯು ತೊಡರದು.
"ಗೊಂಚಲು" - "ಗುಚ್ಛ"
"ಬಾಲ" - "ಪೃಚ್ಛ"
"ಕುಂಬಳ ಕಾಯಿ" - "ಕೂಷ್ಮಾಂಡ"
"ಹುಲಿ" - "ವ್ಯಾಘ್ರ"
ಎದೆ/ಗುಂಡಿಗೆ - ಹೃದಯ
ಕಣ್ಣು - ನೇತ್ರ
ಮತ್ತನೆ - ಮೃದು
ಈ ಬಗೆಯ ಸಾವಿರ ಸಾವಿರ ಪದಗಳು. ಸಕ್ಕದದ 'ಉಚ್ಚರಣೆ'ಯು ಅನಿತು ಸಲೀಸಲ್ಲ, ನಾಲಗೆಯು ಹೊರಳಿ, ಹೊರಳಿ, ಸುತ್ತುಕೊಂಡು ಗೋಜಲಾಗುವುದು.
ಸಂಸ್ಕೃತದ 'ಉಚ್ಚಾರವು 'ಸುಲಭ'ವಿಲ್ಲದಿದ್ದರು ಕೂಡ, ಅದು ಒಂದು 'ಉತ್ತಮ'ವಾದ 'ಭಾಷೆಯೆ'. 'ಅಪಾರ'ವಾದ 'ಸಾಹಿತ್ಯಸಂಪತ್ತನ್ನು' ಹೊಂದಿದೆ. ಅದರ 'ವ್ಯಾಕರಣ' ಅಚ್ಚಕನ್ನಡ 'ವ್ಯಾಕರಣ'ಕ್ಕಿಂತ ಸಾವಿರಪಟ್ಟು 'ಕ್ಲಿಷ್ಡ'ವಾಗಿದ್ದರು ಕೂಡ, ಒಂದು 'ನಿರ್ದಿಷ್ಟ'ವಾದ 'ವ್ಯಾಕರಣ ಸೂತ್ರ'ಗಳನ್ನು 'ಅನುಸರಿಸುತ್ತದೆ'.
ಸಂಸ್ಕೃತದಂತೆ ಗ್ರೀಕ್, ತಮಿಳು, ಪಾರಸಿ, ಜೀನಿ, ಕನ್ನಡ, ಲಾಟಿನ್, ತೆಲುಗು ಮುಂತಾದ ನುಡಿಗಳು ತುಂಬ ಹಳೆಯದಾದ ಮತ್ತು ಮೇಲ್ಮಟ್ಟದ ನುಡಿಗಳು. ಇಂಗ್ಲೀಷು ಇಂದು ಇಡೀ 'ಜಗತ್ತ'ನ್ನೇ ಹರಡಿಕೊಂಡಿದೆ, ಅದು ಒಂದು ದೊಡ್ಡ ನುಡಿಯೆ. ಹಾಗೆಂದು ಕನ್ನಡದಲ್ಲಿ ಸಂಸ್ಕೃತ,ಗ್ರೀಕ್, ತಮಿಳು, ಪಾರಸಿ, ಜೀನಿ, ಕನ್ನಡ, ಲಾಟಿನ್, ತೆಲುಗು, ಇಂಗ್ಲೀಷು ಮುಂತಾದ ನುಡಿಗಳನ್ನು ಒಂದೊಂದು 'ಕಾರಣ'ವನ್ನು ಹೇಳಿ ಬರೆಸುತ್ತಾ ಹೋದರೆ, ಕನ್ನಡವು ತನ್ನತನ(ಸ್ವಂತಿಕೆ)ಯನ್ನು ಕೆಳೆದುಕೊಳ್ಳುವುದಿಲ್ಲವೆ?
ಒಂದು ಹೊಸ 'ಪ್ರಯೋಗ' "ಕಲಿಕಾ ಕೇಂದ್ರ", ಇದನ್ನು ಈ ಟಿವಿ ಸುದ್ದಿಯಲ್ಲಿ ಕೇಳಿದ್ದು.
ಕನ್ನಡದ ಪದ "ಕಲಿಕೆ", "ಕಲಿಕಾ" ಅಂತ ಇಲ್ಲ, ಇದು 'ಸಂಸ್ಕೃತ'ದ 'ವ್ಯಾಕರಣ'ದ 'ಪಾಲನೆ'ಯಲ್ಲವೆ?
ರಸಂನೂ ಬೇಡ,ಸಾರೂ ಬೇಡ
ಅಯ್ಯೋ ಮಲ್ಲೇಶ್ವರ, ರಸ, ಸಾರು ಇವೆರಡರ ಮಾಡುವ ಬಗೆ ಬೇರೆ, ಬೇರೆ. ರುಚಿನೂ ಬೇರೆ, ಬೇರೆ. ಅದಕ್ಕೆ 'ರಸಂ ಪೌಡರ್', 'ರಸಕ್ ಹಾಕೋ ಪುಡಿ' ಆದರೆ ಸಾಕು.
ಹೊಸ ನಾಡ ಕಟ್ಟೋಣ
ಏನ್ ಮಾಡೋದು
ಏನ್ ಮಾಡೋದು ಸಾರ್, ಅವರು ಹುಳಿಯನ್ನ ಮೊಸರನ್ನ ಬಿಟ್ಟು ಬೇರೇನನ್ನು ನೋಡಿಲ್ಲ ಅನ್ತ ಕಾಣುತ್ತೆ
ಇರಲಿ,
ನನ್ನನ್ನು ಸೇರಿಸಿಕೊಳ್ಳಿ 'ಹೊಸ ನಾಡ ಕಟ್ಟಲು'
ರಸಂನೇ ರಸ ಮಾಡಿ
೧) ಮುಂಚಿನ ಮರುಮಾತಿನಲ್ಲಿ(ಪ್ರತಿಕ್ರೀಯೆ ಅಲ್ಲ
) 'ಕಾಲು ಮುರಕೊಂಡ್ ಕೈ' ಅನ್ನುವದನ್ನು 'ಕೈ ಮುರಕೊಂಡ್ ಕಾಲು' ಅಂತ ತಿದ್ದಿಕೊಳ್ಲಿ.
೨) ಮಾಡುವ ಬಗೆ(ವಿಧಾನ ಅಲ್ಲ
), ಟೊಮೆಟೋ ಸಾರು, ಅದೆಲ್ಲ ಏನೇ ಇರಲಿ, ನಿಮ್ಮ 'ರಸಂ' 'ರಸ' ಆಗಲಿ ಅಂದೆ ಅಟ್ಟೆ.
ಕನ್ನಡಂಗಳ್
ಮಹೇಶ್,
'ಮನೆ', 'ಮನಿ' ಯಾಕಾಯ್ತು? ಇದಕ್ಕೆ ಉತ್ತರ ನಿಮಗೆ ಸಿಕ್ಕಿರಬೇಕು. ಆಡೋ ಬಗೆ ಬೇರೆ, ನುಡಿಯೊಂದೇ. ಜೀವವೊಂದೇ, ಮೈಗಳು ಬೇರೆ. ಬೇರೆ ನುಡಿಯ ಮೈಗಾಗದ ಪದಗಳನ್ನು ಸೇರಿಸಿಕೊಂಡು, ಅವೂ ಕನ್ನಡಗಳೇ, ಅನ್ನುವದು ಯಾರ್ಯಾರೂ ಮನ್ನಿಸಲಾಗದ ತಪ್ಪು. ಕನ್ನಡ ಜೀವ(ಆತ್ಮ)ದ ಮರುಹುಟ್ಟು, ಅಪ್ಪಟ ಕನ್ನಡ ಪದಗಳನ್ನು ಮುಟ್ಟಿ, ಬರಹದೊಳಗೆ ಕಟ್ಟಿ, ಹೊರ ಪದಗಳ ತಟ್ಟಿ ನಮ್ಮವಾಗಿಸಿ, ಬಳಸುವದರೊಂದಿಗೆ ಆಗಬೇಕಿದೆ.
ಭೂತ ಚೇಷ್ಟೆ
ಓಹೋ! ಭೂತಸಂಚಾರ ಚೆನ್ನಾಗಿಯೇ ಆದಂತಿದೆ!
ಭೂತ ಚೇಷ್ಟೆಯಂತೂ ಮಿತಿಮೀರಿದೆ!
ನಡೆಯಲಿ ನವ ಭೂತ ನರ್ತನ!
ಮೆಟ್ಟಿರುವುದನ್ನು ಅಟ್ಟಿದ ಮೇಲೆ ಮಾತನಾಡೋಣ....
ಅಲ್ಲಿಯವರೆಗೆ ಸಕಲ ಭೂತಗಣಗಳಿಗೆ ಅಧಿಪತಿಯಾದ ಪರಮೇಶ್ವರನಲ್ಲಿ ಹೀಗೆ ಪ್ರಾರ್ಥಿಸುತ್ತೇನೆ:
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ!
ಸತ್ತಂತಿಹರನು ಬಡಿದೆಚ್ಚರಿಸು!
ಕಚ್ಚಾಡುವರನು ಕೂಡಿಸಿ ಒಲಿಸು!
ಹೊಟ್ಟೆಕಿಚ್ಚಿಗೆ ತಣ್ಣೀರ್ ಹರಿಸು!
ಒಟ್ಟಿಗೆ ಬಾಳುವ ತೆರದಲಿ ಹರಸು!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್