ಅಳಿಯದೇವರಿಗೆ ಅನ್ಯಾಯ!
"ಅಗಣಿತ ತಾರಾಗಣಗಳ ನಡುವೆ ಚಂದ್ರಗೆ ಮೆರವಣಿಗೆ....
ಬಾನಲಿ ಚಂದ್ರಗೆ ಮೆರವಣಿಗೆ....."
ಶಬ್ದಗಾರುಡಿಗ ವರಕವಿ ಬೇಂದ್ರೆಯವರ ಕವನದ ಈ ಸಾಲುಗಳನ್ನು ಮೆಲುಕುಹಾಕುತ್ತಾ ಇರುಳಿನಾಗಸದಲ್ಲಿ ದಿಟ್ಟಿ ನೆಟ್ಟವನಿಗೆ 'ಹೌದಲ್ಲವೇ' ಎನಿಸದಿರದು. ಈ 'ಅಕ್ಷಿನಿಮೀಲನ ಮಾಡುವ ನಕ್ಷತ್ರಗಳು' ಅಗಣಿತವೆಂಬುದು ಎಲ್ಲರಿಗೂ ಗೊತ್ತು; ಆದರೆ ಕಣ್ಣೆವೆಯಿಕ್ಕದ ಚುಕ್ಕಿಗಳ ಅಂದರೆ ಗ್ರಹಗಳ ಸಂಖ್ಯೆ ಎಷ್ಟೆಂದು ಎಲ್ಲರಿಗೂ ತಿಳಿದಿದೆಯಲ್ಲವೇ. ಸೌರವ್ಯೂಹದ ಮಟ್ಟಿಗಂತೂ ಗ್ರಹಗಳು ಒಂಬತ್ತು ಎಂದು ಎಲ್ಲರಿಗೂ ತಿಳಿದಿದೆ ಎನ್ನುವಿರಾ? ಇಂದಿನಿಂದ ಸೆರೆಸ್, ಶಾರನ್, ಕ್ಸೇನ ಈ ಮೂರನ್ನು ಸೇರಿಸಿಕೊಳ್ಳಿ - ಒಟ್ಟು ಹನ್ನೆರಡು ಗ್ರಹಗಳು! ಅಯ್ಯಯ್ಯೋ ಎಂಥಾ ಕೆಲಸವಾಯಿತು ಸ್ವಾಮೀ, ಇನ್ನುಮುಂದೆ ಅಳಿಯನನ್ನು ಹತ್ತನೇ ಗ್ರಹವೆಂದು ಕರೆಯುವ ಭಾಗ್ಯ ಹೋಯಿತಲ್ಲಾ ಎಂದು ಹೆಣ್ಣುಹೆತ್ತವರು ಪೇಚಾಡಬೇಕೇನೋ! ಹೋಗಲಿ ಹದಿಮೂರನೆ ಗ್ರಹವೆನ್ನೋಣವೇ ಎಂದರೆ, ಊಹ್ಞೂಂ! ಸಾಧ್ಯವಿಲ್ಲ; ಈಗಾಗಲೇ ಮತ್ತೊಂದಿಷ್ಟು ಉಂಡೆಗಳು ಗ್ರಹಗಳಾಗಲು ಕಾಯುತ್ತಿವೆ!
ಯುರೇನಸ್, ನೆಪ್ಚೂನ್, ಪ್ಲೂಟೋಗಳನ್ನು ಗ್ರಹಗಳೆಂದಾಗ ಭಾರತೀಯರು ಯಥಾಪ್ರಕಾರ 'ತಮಗೆಲ್ಲಾ ಮೊದಲೇ ತಿಳಿದಿತ್ತೆಂಬ' ವಿಶ್ವವಿಖ್ಯಾತ ಮನೋಭಾವದಿಂದ, ಇಂದ್ರ-ನಿರ್ಋತಿ-ವರುಣ ಎಂದು ಅವಕ್ಕೆ ಹೆಸರಿಟ್ಟು ನಗೆಪಾಟಲಿಗೀಡಾದದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಮೂರಕ್ಕೆ ಏನು ಹೆಸರಿಡುತ್ತಾರೋ ನೋಡಬೇಕು! ಮೂರೇನು ಮೂವತ್ತಾಗಲಿ, ರವಿಯ ಸುತ್ತಲೂ ಚೆಲ್ಲಿಕೊಂಡು ಉಂಡೆಗಳಾಗಿ ದಿಕ್ಕಾಪಾಲಾದವಕ್ಕೆಲ್ಲಾ, ದಿಕ್ಪಾಲಕರ ಹೆಸರಿಟ್ಟು ಕೈಮುಗಿದರೆ ಆಯಿತು! ಇನ್ನು ಜೋಯಿಸರ ಪಾಡೇನು? ಹೊಟ್ಟೆಪಾಡಿಗೇನೂ ತೊಂದರೆಯಿಲ್ಲ ಬಿಡಿ; ಹೊಸ ಗ್ರಹಗಳ ದಶಾ-ಭುಕ್ತಿಗಳನ್ನು, ಗೋಚಾರಫಲಗಳನ್ನು ಸೃಷ್ಟಿಸಿ, ಏಳರಾಟ-ಎಂಟರಾಟ-ಸಣ್ಣಾಟ-ದೊಡ್ಡಾಟ ಎಲ್ಲ ಆಟಗಳನ್ನೂ ಆಡಿಸಿ, ತಕ್ಕ ಶಾಂತಿ ಮಾಡಿಸಿಬಿಡುತ್ತಾರೆ! ಅಂತೂ ಸೆರೆಸ್-ಶಾರನ್-ಕ್ಸೇನ ಗಳು ಸದ್ಯದಲ್ಲೇ ಸುರಸಾ-ಶಾರ್ಙ-ವಿಶ್ವಕ್ಸೇನ ಆಗುವುದರಲ್ಲಿ ಅನುಮಾನವೇ ಇಲ್ಲ ಎನಿಸುತ್ತಿದೆ! ಈ ಮಧ್ಯೆ 'ಒಫಿಯುಕಸ್' - 'ಉರಗಧರ' ಎಂಬ ಹದಿಮೂರನೇ ರಾಶಿಯನ್ನೂ ಸೇರಿಸಬೇಕೆಂದು ಒತ್ತಾಯಿಸುವವರು ಹೆಚ್ಚಬಹುದೇನೋ!
ಜ್ಯೋತಿಷ ತಿಳಿದವರಿಗೆ ಈ ಹಾಸ್ಯ ಮುದನೀಡುತ್ತದೆ:
ಸದಾ ವಕ್ರೀ ಸದಾ ಕ್ರೂರೀ ಸದಾ ಪೂಜಾಮಪೇಕ್ಷತೇ |
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮಗ್ರಹಃ ||
ಸದಾ ಹಿಮ್ಮುಖನಾಗಿ ಚಲಿಸುವ(ವಕ್ರ ನಡೆ-ನುಡಿಯ), ಸದಾ ಶಾಂತಿಪೂಜೆ(ಉಪಚಾರ)ಗಳನ್ನು ಬಯಸುವ
ಸದಾ ಕನ್ಯಾ ರಾಶಿ(ಹೆಂಡತಿಯ ಮನೆ)ಯಲ್ಲೇ ಇರುವ ಅಳಿಯನೇ ಹತ್ತನೆಯ ಗ್ರಹ!
ಇನ್ನು ಈ ಹಾಸ್ಯಕ್ಕೆ ಜಾಗವಿಲ್ಲವೇನೋ! ಅಳಿಯಂದಿರು ನಿಟ್ಟುಸಿರಿಡಬಹುದು! ಒಟ್ಟಿನಲ್ಲಿ, ಕೆಲವರಿಗೆ ಶುಕ್ರದಶೆಯಾದರೆ[ಏಳಿಗೆ], ಹಳೆಯ ಪಠ್ಯಗಳಿಗೆ ಅಷ್ಟಮಶನಿ[ಜೀವಭಯ]!
ಏನೇ ಆಗಲಿ, ಅಳಿಯದೇವರ 'ಗ್ರಹ' ಸ್ಥಿತಿ ಅಳಿದದ್ದು ಮಾತ್ರ ಅನ್ಯಾಯ!
ನಿಮ್ಮವ
ಬೆನಕ

- Login or register to post comments
- 1416 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಅಳಿಯದೇವರು:ತಿದ್ದುಪಡಿ
ಗೆಳೆಯರೇ,
ಮೇಲಿನ ಹಾಸ್ಯಕಾವ್ಯದ ತಾತ್ಪರ್ಯದಲ್ಲಿ, ಉದ್ದೇಶಪೂರ್ವಕವಾಗಿ ಅಲ್ಲವಾದರೂ,
'ಸದಾ ಕ್ರೂರೀ' = ಸದಾ ಕಷ್ಟನೀಡುವ(ಕಾಟಕೊಡುವ) ಎಂಬುದು ಬಿಟ್ಟುಹೋಗಿದೆ; ದಯವಿಟ್ಟು ಸೇರಿಸಿಕೊಳ್ಳಿ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಆ.ರಾ. ಮಿತ್ರರ ಬರಹವನ್ನು ಹೋಲುವ ಹಾಸ್ಯ ಬೆನಕರದು.
ಸವಿಯಾದ ಹಾಸ್ಯ.
ಅಹೋರಾತ್ರ
ಕತ್ತೆಮರಿ
ಅಹೋರಾತ್ರರೆ,
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು! ಎಲ್ಲಿ ಇತ್ತೀಚೆಗೆ ಹೆಚ್ಚಾಗಿ ನಿಮ್ಮ ಬರಹ ಕಾಣದಲ್ಲಾ? 'ಸ್ವಾತಂತ್ರ್ಯದ ಮಂತ್ರ' ಚೆನ್ನಾಗಿದೆ; ಹೀಗೆಯೇ ಬರೆಯುತ್ತಿರಿ.
ಅ.ರಾ.ಮಿತ್ರರೆಂದರೆ ನನಗೆ ನೆನಪಾಗುವುದು ಅವರು ಸದಾ ಹೇಳುವ ಈ ಹಾಸ್ಯ:
ಕತ್ತೆಮರಿ ಚಿಕ್ಕಂದಿನಲ್ಲಿ ಬಹಳ ಚೆನ್ನಿತ್ತು!
ದೊಡ್ಡದಾದ ಮೇಲೆ ಅದರಪ್ಪನಂತಾಗಿ ತಾನೂ ಹಾಳಾಯ್ತು!
ಬರಲೇ,
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಅಳಿಯಾಟ!
ಇದಪ್ಪಾ ವರಸೆ!
ಹತ್ತನೇ ಗ್ರಹದ ಆಗ್ರಹಕ್ಕೆ ಸಿಲುಕಿ, ನಿಲುಕದಷ್ಟು ದೂರದಲ್ಲಿ ಕಾಯುತ್ತಿದ್ದ ಉಂಡೆಗಳೆಲ್ಲಾ ಪೆಚ್ಚಾಗಿಹೋದವು! ಅವೆಲ್ಲಾ ಗ್ರಹಗಳಾಗುವುದಿರಲಿ, ಮೊನ್ನೆ ತಾನೆ ಗ್ರಹಪೀಠವನ್ನೇರಿದ್ದ ಸೆರೆಸ್, ಶಾರನ್, ಕ್ಸೇನ ಕೂಡ ತಮ್ಮ ಸಿಂಹಾಸನವನ್ನು ಕಳೆದುಕೊಂಡು ಹಿಗ್ಗೆಲ್ಲ ಶಿವಕಾಶಿಯ ಪಟಾಕಿಯಂತೆ ಥುಸ್ಸ್..... !!! ಸಾಲದ್ದಕ್ಕೆ ಮೃತ್ಯುದೇವತೆ ನಿರ್ಋತಿಯ ಹೆಸರಿಟ್ಟುಕೊಂಡ ಪ್ಲೂಟೋದ ಗ್ರಹತ್ವಕ್ಕೇ ಮೃತ್ಯು! ಏನೇನೋ ಬಡಬಡಿಸುತ್ತಿದ್ದೇನೆಯೇ? ಆಗಿದ್ದು ಇಷ್ಟೇ:
ಮೊನ್ನೆ ತಾನೆ ಮೂರು ಗ್ರಹಗಳನ್ನು ಸೌರವ್ಯೂಹಕ್ಕೆ ಸೇರಿಸಿದ ಖಗೋಳತಜ್ಞರು ಇಂದು ಆ ಮೂರಿರಲಿ, ಜೊತೆಗೆ ಪ್ಲೂಟೋವನ್ನೂ 'ಗ್ರಹ' ಎಂದು ಪರಿಗಣಿಸಬಾರದೆಂದು ಅಂತರ್ರಾಷ್ಟ್ರೀಯ ಖಗೋಳಶಾಸ್ತ್ರ ಸಹಕಾರ ಸಂಘದ ಅಧಿವೇಶನದಲ್ಲಿ ನಿರ್ಣಯಿಸಿದ್ದಾರೆ. ಆದ್ದರಿಂದ ಈಗ ಸೌರವ್ಯೂಹದ ಗ್ರಹಗಳ ಸಂಖ್ಯೆ ಎಂಟು! ಒಂದೆಡೆ ಪಠ್ಯಪುಸ್ತಕಗಳು ಬದಲಾಗುವ ಚಿಂತೆಯಾದರೆ, ಅಳಿಯದೇವರಿಗೆಲ್ಲಾ ಮತ್ತೆ ಗ್ರ-ಹಾ-ಸ್ಯದ ಕಿರಿಕಿರಿ! ಈ ಬಾರಿ ಹತ್ತರಿಂದ ಒಂಬತ್ತಕೇರಿದ ಸ್ಥಿತಿಯಿಂದ ಹಿಗ್ಗುವುದೇನೂ ಇಲ್ಲವೇನೋ! ಯಾವುದು ಗ್ರಹವೆಂಬ ಚಿಂತೆ ಖಗೋಳಶಾಸ್ತ್ರಿಗಳಿಗಾದರೆ, ಇತ್ತ ಜ್ಯೋತಿಷಶಾಸ್ತ್ರಿಗಳಿಗೆ ಗ್ರಹಗಳು ಹೆಚ್ಚದೆ ನಿಶ್ಚಿಂತೆ! ಜೋಯಿಸರೆನ್ನುತ್ತಾರೆ:
"ಅಲ್ಲಾ ಸ್ವಾಮೀ, ಶನಿಗ್ರಹದ ನಂತರ ಬರಿಗಣ್ಣಿಗೆ ಕಾಣದವು ಗ್ರಹಗಳೇ ಅಲ್ಲ! ರಾಹು-ಕೇತುಗಳು ನೆರಳಿನಂತಹ ಬಿಂದುಗಳು; ಇವೆರಡನ್ನೂ ಸೇರಿಸಿ ಒಟ್ಟು ಗ್ರಹಗಳು ಒಂಬತ್ತೇ!"
"ಮತ್ತೆ, ಇಂದ್ರ, ವರುಣ, ನಿರ್ಋತಿ?"
"ಅವುಗಳನ್ನು ಸೇರಿಸಿದ್ದು ಭಾರತೀಯ ಜ್ಯೋತಿಷವಲ್ಲ; ತಿಳಿಗೇಡಿ ಜೋಯಿಸರು!"
"ಉಳಿದ ಗ್ರಹಗಳ ಬಗ್ಗೆ ಏನೆನ್ನುತ್ತೀರಿ?"
"ಅವೆಲ್ಲವನ್ನೂ ಅಳಿಯನಲ್ಲಿ ಆವಾಹಿಸಿಬಿಟ್ಟಿದ್ದೇವಲ್ಲ! ಹೆಹ್ಹೆಹ್ಹೆ...." ಎನ್ನುತ್ತಾ ಹಲ್ಲುಕಿರಿದರು!
ಎಂಬಲ್ಲಿಗೆ, ಅಳಿಯನ ಗ್ರಹಸ್ಥಿತಿ ಎಂದೆಂದೂ ಅಳಿಯದೇ, ಪೆಣ್ಪೆತ್ತವರಿಗೆ ಹತ್ತನೆಯ(?) ಗ್ರಹದ ಗ್ರಹಣ ತಪ್ಪಿದ್ದಲ್ಲವೆಂದಾಯಿತು! ಒಂಬತ್ತನೇ ಗ್ರಹವೇ ಇಲ್ಲದಿರುವಾಗ ಹತ್ತನೆಯದೆಲ್ಲೆಂದು ಅಳಿಯನಿಲ್ಲದ ಖಗೋಳಜ್ಞರು ಫಕಫಕನೆ ನಕ್ಕಾರು! ಎಚ್ಚರಿಕೆ ಸ್ವಾಮೀ, ಅಳಿಯಾಟ ಶುರುವಾದೀತು!
ನಿಮ್ಮ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಮಾಜಿ ಒಂಬತ್ತನೇ ಗ್ರಹ!
ಗೆಳೆಯರೇ,
ಪ್ಲೂಟೊ ಎಂಬ ಮಾಜಿ ಒಂಬತ್ತನೇ ಗ್ರಹವನ್ನು ಮೊದಲು ಕಂಡುಹಿಡಿದವನು ಭಾರತೀಯನೆಂದು ಮೊನ್ನೆ ಕನ್ನಡಪ್ರಭದಲ್ಲಿ ಸುದ್ದಿ ನೋಡಿ ತಿಳಿಯಿತು. ಆತ ಬೇರಾರೂ ಅಲ್ಲ, ಹೆಸರಾಂತ ಖಗೋಲಶಾಸ್ತ್ರಜ್ಞ ಶ್ರೀ. ವೆಂಕಟೇಶ ಕೇತಕರ್. ಭಾರತೀಯ ಪಂಚಾಂಗ ಗಣನೆಗೆ ತಳಹದಿಯಾದ ನಿರಯಣ ರಾಶಿಚಕ್ರ ಅಥವಾ ಫಿಕ್ಸೆಡ್ ಜೋಡಿಯಾಕ್ ಅನ್ನು ಲೆಕ್ಕಹಾಕಲು ಬೇಕಾದ 'ಅಯನಾಂಶ'ವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನಿರ್ಧರಿಸುತ್ತಿದ್ದಾಗ, ಅಚ್ಚರಿಯುಂಟುಮಾಡುವಂತೆ ಕೇತಕರರು ನಿಖರವಾದ ತಮ್ಮ 'ಕೇತಕೀಯ ಧನಾಯನಾಂಶ'ವನ್ನು ಪ್ರಕಟಿಸಿದರು. ಇದು ಜ್ಯೋತಿಷವಲಯದಲ್ಲೇ ಬೊಬ್ಬೆ ಎಬ್ಬಿಸಿದ ಘಟನೆ! ಕೇತಕರರು ಯಾವುದನ್ನು 'ನಿಖರ'ವೆಂದು ಹೇಳಿದ್ದರೋ ಅದು ಕೇವಲ ಕಲ್ಪಿತವಾಗಿದ್ದು, ಕಾಕತಾಳೀಯವಾಗಿ ಅಯನಾಂಶ ಒಂದೆರಡು ವರ್ಷಗಳಿಗೆ ಹೊಂದುತ್ತಿತ್ತು ಅಷ್ಟೇ. ಇದನ್ನೆಲ್ಲ ಮನಗಂಡ ಭಾರತ ದಿನದರ್ಶಿ ಸಮಿತಿ, ಶ್ರೀ. ಎನ್.ಸಿ.ಲಹಿರಿ ಅವರ ಮುಂದಾಳುತನದಲ್ಲಿ ಚಿತ್ರಾಪಕ್ಷೀಯ ಅಯನಾಂಶವನ್ನು ಮಾನ್ಯಮಾಡಿ ವಿವಾದಕ್ಕೆ ತೆರೆ ಎಳೆಯಿತು. ಕೇತಕರ್ ತಮ್ಮ ಗಣಿತದಲ್ಲಿ ಪ್ಲೂಟೋ ವಿನ ಕಕ್ಷೆಯನ್ನು ಮೊದಲೇ ಲೆಕ್ಕಹಾಕಿದ್ದರಂತೆ; ಆದರೆ ಅಮೆರಿಕದ ವಿಜ್ಞಾನಿಯಿಂದ ಪ್ಲೂಟೋವಿನ ಆವಿಷ್ಕಾರವಾಗುವವರೆಗೂ ಯಾರೂ ಅವರನ್ನು ಆದರಿಸಲಿಲ್ಲ. ಏನಾಯಿತೋ ಏನೋ, ಅದೇ ವರ್ಷ ೧೯೩೭ ರಲ್ಲಿ ಕೇತಕರ್ ಪಾರ್ಶ್ವವಾಯು ಹಿಡಿದು, ನರಳಿ ಕೊನೆಯುಸಿರೆಳೆದರು! 'ಗ್ರಹಚಾರ'ವೆಂದರೆ ಇದೇ ಇರಬೇಕೇನೋ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಪ್ಲೂಟೊ ಓಕೆ, ಬೋಸ್ ಇಲ್ಲ ಯಾಕೆ?
ಅಂತಾರಾಷ್ಟ್ರೀಯ ಸಮುದಾಯದವರು ಪ್ಲೂಟೋವನ್ನು ನವಗ್ರಹಗಳ ಪಟ್ಟಿಯಿಂದ ಹೊರಹಾಕಿದ ಒಂದು ದಿನದಲ್ಲಿಯೇ ಎನ್ ಸಿ ಆರ್ ಟಿ ಯವರು ನಮ್ಮ ಪಠ್ಯಪುಸ್ತಕಗಳನ್ನು ತಿದ್ದುವುದಾಗಿ ಘೋಷಿಸಿದರು. ಆದರೆ ವೈರ್ಲೆಸ್ ಕಂಡುಹುಡುಕಿದವರು ಮಾರ್ಕೋನಿ ಅಲ್ಲ ನಮ್ಮವರೇ ಆದ ಜಗದೀಶಚಂದ್ರ ಬೋಸ್ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯದವರು ಒಪ್ಪಿಕೊಂಡು ಏಳು ವರ್ಷಗಳೇ ಕಳೆದರೂ ಇದೇ ಎನ್ ಸಿ ಆರ್ ಟಿ ಯವರಿಗೆ ಯಾಕೆ ಇನ್ನೂ ಎಚ್ಚರವಾಗಿಲ್ಲ? ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ - http://vishvakannada.com/node/285
ಸಿಗೋಣ,
ಪವನಜ
-----------
Vishva Kannada
Think globally, Act locally
ಕುಂಭಕರ್ಣನ ಪೀಳಿಗೆಯೋ...
ಪವನಜರೆ,
ಸರ್ ಜಗದೀಶಚಂದ್ರ ಬೋಸ್ ಇರಲಿ, ಮನೆಮನೆ ಮಾತಾಗಿದ್ದ ಸುಭಾಸ್ ಚಂದ್ರರನ್ನೂ ಸರ್ಕಾರ ಮೊನ್ನೆ ಮೊನ್ನೆ ನೆನಪಿಸಿಕೊಂಡು ರಾಜೀವ್ ಗಾಂಧಿಯವರ ಜೊತೆಗೆ ಭಾರತರತ್ನ ಪ್ರಕಟಿಸಿಲಿಲ್ಲವೇ! ಯಾರಿಗೆ ಯಾವಾಗ ಎಂತಹ ಮನ್ನಣೆ ಕೊಡಬೇಕೆಂದು ಸರ್ಕಾರೀ ಕೃಪಾಪೋಷಿತ ಸಂಸ್ಥೆಗಳಿಗೆ ಯಾರು ಹೇಳಿಕೊಡುವರೋ, ದೇವನೇ ಬಲ್ಲ! ಬಹುಶಃ ಎನ್.ಸಿ.ಇ.ಆರ್.ಟಿ ಯವರಿಗೆ ಹಿಡಿದಿದ್ದ ಗ್ರಹಣ, ಪ್ಲೂಟೋ ಜೊತೆಗೇ ಕಳೆದಾಯಿತು ಎಂದುಕೊಂಡು ಮುಂದಾದರೂ ಅದು ಎಚ್ಚೆತ್ತುಕೊಳ್ಳುವುದೇನೋ ನೋಡೋಣ! ಅಥವಾ ಕುಂಭಕರ್ಣನ ಪೀಳಿಗೆಯೋ.....
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಅಳಿಯದೇವರಿಗೆ ಅನ್ಯಾಯ!
ಇದೇ ಅರ್ಥವುಳ್ಳ ಸ್ವಲ್ಪ ಪಾಠಾಂತರವಿರುವ ಪದ್ಯ ಹೀಗಿದೆ.
ಸದಾ ವಕ್ರಃ ಸದಾ ರುಷ್ಟಃ ಸದಾ ಪೂಜಾಮಪೇಕ್ಷತೇ
ಕನ್ಯಾರಾಶಿಸ್ಥಿತೋ ನಿತ್ಯಂ ಜಾಮಾತಾ ದಶಮೋ ಗ್ರಹಃ||
ಬೆನಕರಿಗೆ ನನ್ನಿ.