ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ದಿ ಬೆಸ್ಟ್ ಆಫ್ 'ಸಂಪದ' › ಪ್ರವಾಸ ಕಥನ › ಫಿನ್ಲೆಂಡ್ ಪ್ರವಾಸ ಕಥನ

ಇಲ್ಲದೆಯೂ ಇರುವವನ ಕಥೆ

August 22, 2006 - 3:53pm — anilkumar

ಸಾಮಿಯ ಮನೆಯ ಮೊದಲ ಮಹಡಿಯಲ್ಲಿ ಬಿಸಿಲಿಗೆ ಮೈಯೊಡ್ಡುವ ಸಂತೋಷಆತನ ಡಾರ್ಕ್‌ರೂಂ. ಆತ ಫೋಟೋ ಹಾಗೂ ವಿಡಿಯೋ ಕಲಾವಿದ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಬೇಕೆಂದೇ ಆತ ನೆಗೆಟಿವ್-ಫೋಟೋಗ್ರಫಿ ಮಾಡುತ್ತಿದ್ದ. ಆಧುನಿಕೋತ್ತರಕ್ಕೆ ಆತನದು ನೆಗೆಟಿವ್ ಪ್ರತಿಕ್ರಿಯೆ. ಆ ಡಾರ್ಕ್‌ರೂಂನಲ್ಲಿ ಚಜ್ಜೆಯನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಬಿಟ್ಟಿದ್ದ. ಅಥವ ಕಪ್ಪು ಕೋಣೆಯನ್ನು ಡಾರ್ಕ್ ಬಟ್ಟೆಯಿಂದ ಮುಚ್ಚಿದ್ದ. ಆ ಹಳೆಯ ಕಾಲದ ಕಪ್ಪುಬಿಳುಪು ಛಾಯಾಚಿತ್ರವನ್ನು ಹಳೆಯ ಕಾಲದ್ದೆಂದು ಪರಿಣಾಮಕಾರಿಯಾಗಿ ಮೂಡಿಸಲು ಸಹಾಯಕ್ಕಾಗಿ ಅನೇಕ ಕಂಪ್ಯೂಟರ್‌ಗಳನ್ನೂ ಇರಿಸಿಕೊಂಡಿದ್ದ. ಗಾಂಧೀಜಿಯನ್ನು ಬಡತನದಲ್ಲಿ ಇರಿಸಲು ಭಾರತ ಸರ್ಕಾರವು ಸಾಕಷ್ಟು ಖರ್ಚು ಮಾಡಿದಂತಿತ್ತು ಇದು. ಸಂಸಾರಸ್ಥರ ಮನೆಯೊಂದರಲ್ಲಿ ಮೇಜು, ಕುರ್ಚಿ, ಟೀಪಾಯಿ, ಹೂದಾನಿಗಳಿದ್ದಂತೆ ಆ ಕೋಣೆಯ ತುಂಬೆಲ್ಲ ವೈರುಗಳು, 'ಮೌಸುಗಳು' (ಇಲಿಗಳಿಲ್ಲದಿದ್ದರೂ), ಫ್ಲಾಪಿಗಳು, ಡಿಸ್ಕ್‌ಗಳು ಮರದ ಬೇರುಗಳಂತೆ ಟಿಸಿಲೊಡೆದಿದ್ದವು. ಮುಂಚಿನ ವಾಕ್ಯದ ಪ್ರತಿಯೊಂದು ಪದಕ್ಕೂ ನಾನು 'ಗಳು' ಸಿಕ್ಕಿಸಿರುವುದಕ್ಕೆ ಕಾರಣ ಅಂತಹ ವಸ್ತುಗಳಲ್ಲಿ ಯಾವುವೂ ಒಂಟಿಯಾಗಿರಲಿಲ್ಲ.

ಒಟ್ಟಾಗಿ ಆ ಕೋಣೆಯು ಎಲ್ಲ ಜಾತಿಯ ಪ್ರಾಣಿಗಳ ಒಂದೊಂದು 'ಜೋಡಿ'ಯನ್ನು (ಕಂಪನಿ ಕೊಡಲು ನಂತರ ಜಗಳ ಮಾಡಲು) 'ಹಳೆಯ ಒಡಂಬಡಿಕೆ' ಕಥೆಯ ನೋಹ ಎಂಬಾತ ಹಡಗಿನಲ್ಲಿ ತುಂಬಿಟ್ಟಂತಿತ್ತು. "ನೋಹನ ನೌಕೆಯಂತಿರುವುದರಿಂದ ಈಗ ಪ್ರಳಯ ಆಗುತ್ತದೆಯೆ ಈ ಕೋಣೆಯಲ್ಲಿ?" ಎಂದು ತಮಾಷೆಯಾಗಿ ಕೇಳಿದೆ. "ಹೌದು, ಒಂದರ್ಥದಲ್ಲಿ ಇಂದು ರಾತ್ರಿ ಪ್ರಳಯವೇ ಆಗಲಿದೆ. ಈ ನೋಹನ ನೌಕೆಗೆ ಇಂದು ನೀನೇ ನೋಹ್. ಅಲ್ಲಿರುವ ಮಂಚ ನಿನಗೇ. ನೀನು ಇಲ್ಲಿಯೇ ಮಲಗಬೇಕು. 'ಜೋಡಿ'ದಾರ ನೋಹ ಮಾತ್ರ ಒಂಟಿ ಮಲಗಬೇಕು", ಎಂದ ಸಾಮಿ.

" ಪ್ರಳಯ?!" ಎಂದೆ. ಬೆಳಿಗ್ಗೆ ಗೊತ್ತಾಗುತ್ತದೆ. ವ್ಯತ್ಯಾಸವಿಷ್ಟೇ. ಅಸಲಿ ನೋಹಾನಿಗೆ ಪ್ರಳಯದ ಆಗಮನ ಮೊದಲೇ ತಿಳಿದಿತ್ತು. ನಿನಗೆ ನಾಳೆ ತಿಳಿಯಲಿದೆ", ಎಂದು ನಗಾಡಿ ಸಾಮಿ ನನ್ನ ಒಡೆತನದ ನೋಹನ-ನೌಕೆಯಿಂದ ಕೆಳಗಿಳಿದು ಹೋದ ಕೆಳ ಅಂತಸ್ತಿಗೆ. "ನೌಕೆಯ ಕೆಳಗಿನ ಸಾಗರಕ್ಕೆ ಹೋಗಿಬಿಟ್ಟ ಪಾಪಿ, ಎಂತಹ ಪ್ರಳಯ ಎಂದು ಹೇಳದೆ" ಎಂದು ಬೈಯ್ದುಕೊಂಡೆ. ಒಂದು ತಾಸಿನ ನಂತರ, ಅಂದರೆ ಮುಂಜಾನೆ ಎರಡೂವರೆ ಸುಮಾರಿಗೆ ಮತ್ತೆ ಮೇಲೆ ಬಂದು ಮೆಲ್ಲಗೆ ಬಾಗಿಲು ತಟ್ಟಿದ ಸಾಮಿ. ದಡಕ್ಕನೆ ಬಾಗಿಲು ತೆಗೆದೆ. "ನಾನೇ ಬಂದದ್ದು ಎಂದು ಹೇಗೆ ಗೊತ್ತಾಯಿತು?" ಎಂದ.

"ಇರೋವ್ರು ನಾಲ್ಕು ಜನ, ಕದ್ದೋರು ಯಾರು ಅಂದಂಗಾಯ್ತು. ಹುಡುಕಿದ್ರೂ ಹತ್ತು ಕಿಲೋಮೀಟರ್ ಸುತ್ತಳತೇಲಿ ಇನ್ಯಾರಿದಾರೆ ಈ ಊರಲ್ಲಿ!" ಎಂದು ಆತ್ಮವಿಶ್ವಾಸದಿಂದಲೇ ಕೇಳಿದೆ. "ಆರಾಮವಾಗಿದ್ದೀ ತಾನೆ?" ಎಂದ. ಆಗ ನನಗೆ ಈ ಮಧ್ಯರಾತ್ರಿಯ ಪ್ರಶ್ನೆಯ ನಿಗೂಢ ತಿಳಿಯಲಿಲ್ಲ, ಹೊಳೆಯಲಿಲ್ಲ. "ಅಲ್ಲಿದೆಯಲ್ಲ ಕರಬೇವಿನ ಗಿಡ ಅದು ಇಡೀ ಫಿನ್ಲೆಂಡಿನಲ್ಲಿರುವ ಏಕೈಕ ಕರಬೇವಿನ ಗಿಡ, ಮೈಸೂರಿನಿಂದ ತಂದದ್ದು. ಅದನ್ನೇ ಇಂದಿನ ನಿನ್ನ ಪಾಲಿನ ದೇವರೆಂದು ಭಾವಿಸು", ಎಂದ. "ಕರಬೇವಿನ ಗಿಡವನ್ನು ಯಾರೂ ದೇವರೆಂದು ಭಾರತದಲ್ಲಿ ಭಾವಿಸುವುದಿಲ್ಲ?!" ಎಂದೆ. "ಬೆಳಿಗ್ಗೆ ಮಾತನಾಡುವ, ಗುಡ್ ನೈಟ್ ಅಥವ ಗುಡ್ ಮಾರ್ನಿಂಗ್" ಎಂದು ಸಾಮಿ ಹೋದ.

ಬೆಳಿಗ್ಗೆ ಹನ್ನೊಂದು ಗಂಟೆಗೆ ಎದ್ದೆ. ಸಾಮಿ ಬಂದ. ಆ ಕಪ್ಪು ಬಟ್ಟೆಯಾವೃತ್ತವಾದ ಡಾರ್ಕ್ ರೂಂನಲ್ಲಿ ಬೆಳಿಗ್ಗೆಗೂ ರಾತ್ರಿಗೂ ಏನೇನೂ ವ್ಯತ್ಯಾಸವಿರಲಿಲ್ಲ. ಚಜ್ಜೆಯ ಮೇಲಿನ ಕಪ್ಪು ಪರದೆ ಸರಿಸಿದ. ಆಗ ಕಾಣಿಸಿತು ಅವು. ಮೈಸೂರಿನಲ್ಲಿ ಅವರಪ್ಪ ನಿಜವಾದ ಹುಲಿ, ಚಿರತೆ, ಕರಡಿಗಳ ಸಾವಿನ ನಂತರ ಅವುಗಳ ಮುಖಗಳನ್ನು ಸ್ಟಫ್ ಮಾಡಿ ಮನೆಯ ಗೋಡೆಗೆ ತೂಗುಹಾಕುತ್ತಿದ್ದರಲ್ಲ, ಅಂತಹ ಮೂರು ಪ್ರಾಣಿಗಳ ಮುಖ-ಶವಗಳು ಅಲ್ಲಿದ್ದವು. ಸಾಮಿ ನಗತೊಡಗಿದ. "ರಾತ್ರಿಯೇ ಇವುಗಳನ್ನು ನನಗೆ ತೋರಿಸಿದ್ದಿದ್ದರೆ ನನಗೇನೂ ನಿದ್ರೆ ಕೆಡುತ್ತಿರಲಿಲ್ಲ ಬಿಡು" ಎಂದು ಆತನಿಗೆ ಸುಳ್ಳು ಹೇಳಿದೆ. "ಕರಬೇವಿನ ಗಿಡ ಈ ಪ್ರಾಣಿಗಳ ಶವಗಳ ಜೀವಂತ ಭೀತಿಯನ್ನು ದೂರ ಮಾಡುತ್ತವೆಯೆಂದು ನೀನು ನನಗೆ ರಾತ್ರಿ ಸೂಚಿಸಿದೆಯ?" ಎಂದು ಕೇಳಿದೆ.

ಆಗ ಹೇಳಿದ ಸಾಮಿ ಆ ಬೃಹತ್ ಮನೆಯ ಕಥೆಯನ್ನು. ಆ ಮನೆ ಅಷ್ಟು ದೊಡ್ಡದಿರಲು ಕಾರಣ ಇಬ್ಬರೇ ಅದರಲ್ಲಿ ವಾಸಿಸುತ್ತಿರುವುದರಿಂದ ಎಂದು ಭಾವಿಸಿದ್ದೆ. ಆದರೆ ಆ ಮನೆ ನಿಜಕ್ಕೂ ದೊಡ್ಡದಿತ್ತು, 'ಲಾರ್ಡ್ ಆಫ್ ದ ರಿಂಗ್ಸ್' ಸಿನೆಮದ ಕೋಟೆ ಕೊತ್ತಲಗಳಂತೆ. ಏಕೆಂದರೆ ಅದು ಮಕ್ಕಳ ಶಾಲೆಯಾಗಿತ್ತು ಹಿಂದೊಮ್ಮೆ. ಅತ್ಯಂತ ಕಡಿಮೆ ಬೆಲೆಗೆ ಆ ಶಾಲೆಯನ್ನು ಸರ್ಕಾರದಿಂದ ಕೊಂಡುಕೊಂಡಿದ್ದರು ಮಿಸ್ಟರ್ ಅಂಡ್ ಮಿಸ್ಸೆಸ್ ಸಾಮಿ. ಏಕೆಂದರೆ ಆ ಶಾಲೆಯ ಒಡೆಯ ಏಕಾಂಗಿತನ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಈಗ ಅಂದರೆ ಬೆಳಿಗ್ಗೆ, ಹಿಂದಿನ ರಾತ್ರಿಯ ನಿಗೂಢಗಳ ಮೇಲೆಲ್ಲ ಬೆಳಕು ಚೆಲ್ಲಿದಂತಾಯ್ತು. "ಅದಕ್ಕೇ ರಾತ್ರಿ ಎರಡೆರೆಡು ಸಲ ಬಂದು ನನ್ನನ್ನು ಮಾತನಾಡಿಸಿಕೊಂಡು ಹೋದದು ನೀನು?" ಎಂದು ಕೇಳಿದೆ. "ಅಸಲಿ ಪ್ರಾಣಿ ಚರ್ಮವು ದೆವ್ವಗಳನ್ನು ದೂರವಿರಿಸುತ್ತದೆಂದು ಮೈಸೂರಿನ ಹಳೆಯ ಮಂದಿ ಈಗಲೂ (ಅಂತಹವರು ಬದುಕಿದ್ದರೆ) ನಂಬುತ್ತಾರೆ," ಎಂದನಾತ. "ಓಹೋ ಈ ರೂಮಿನೊಳಕ್ಕೆ ಪ್ರೇತ ಬರುವುದನ್ನು ಈ ಸ್ಟಫ್ಡ್-ಪ್ರಾಣಿಗಳು ತಡೆಹಿಡಿದವೆ? ಹಾಗಿದ್ದರೆ ಪ್ರೇತ ಈ ಮನೆಯ ಮಿಕ್ಕೆಲ್ಲ ಕೋಣೆ, ಕೋನಗಳಲ್ಲೂ ಓಡಾಡುತ್ತದೆಂದು ಅರ್ಥವಲ್ಲವೆ?" ಎಂದು ತಮಾಷೆ ಮಾಡಿದೆ. " ಇಲ್ಲ ಇಲ್ಲ ಉಲ್ಟಾ ಕೇಸಿದು. ಈ ಕೋಣೆಯಲ್ಲೇ ಈ ಹಾಸಿಗೆ ಇರುವ ನೇರಕ್ಕೇ, ಹಾಸಿಗೆಯ ಮೇಲೆ ನಿಂತೇ ಶಾಲೆಯ ಒಡೆಯ ನೇಣು ಹಾಕಿಕೊಂಡಿದ್ದು. ಆದ್ದರಿಂದ ಈ ಕೋಣೆಯನ್ನು ಬಿಟ್ಟು ಪ್ರೇತ ಯಾವತ್ತೂ ಹೊರಗೆಲ್ಲೂ ನಮಗೆ ಕಾಟ ಕೊಟ್ಟದ್ದಿಲ್ಲ" ಎಂದು ಗಂಭೀರವಾಗಿ ನುಡಿದ ಸಾಮಿ. ನಾನು ಕೋಡಲೆ ಬಾತ್‌ರೂಮಿಗೆ ಓಡಿದೆ. ಬೆಳಿಗ್ಗೆ ತಡವಾಗಿ ಎದ್ದಿದ್ದರಿಂದ ಬಾತ್‌ರೂಮಿಗೆ ಇನ್ನೂ ಹೋಗಿರದಿದ್ದದ್ದು ಹಾಗೆ ಓಡಲು ನನಗಿದ್ದ ಕಾರಣಗಳಲ್ಲಿ ಎರಡನೆಯದು!!

ಸಾಮಿ ಹೆಲ್ಸಿಂಕಿಗೆ ಕೂಡಲೆ ಹಿಂದಿರುಗುತ್ತಿರಲಿಲ್ಲವಾದ್ದರಿಂದ ನಾನು ಆತನ ನಾದಿನಿಯೊಂದಿಗೆ ಸಮೀಪದ (ಗಂಟೆಗೆ ನೂರ ಇನ್ನೂರು ಕಿಲೋಮೀಟರ್ ಕ್ರಮಿಸುವ ನಿಧಾನದಲ್ಲಿ ಒಂದೆರೆಡು ಗಂಟೆ ಪ್ರಯಾಣ. ಲೈಟ್ ಇಯರ್ಸ್ ಲೆಕ್ಕದಲ್ಲಿ ಇದೆಷ್ಟು ನಿಕೃಷ್ಟ ನೋಡಿ) ರೈಲ್ವೇ ಸ್ಟೇಷನ್ನಿಗೆ ಬಳಿಗೆ ಡ್ರಾಪ್ ತೆಗೆದುಕೊಂಡೆ. ಹೆಲ್ಸಿಂಕಿಯ ರೈಲು ನಿಲ್ದಾಣಸ್ಟೇಷನ್ನಿನ ಮರದಿಂದ ಕಟ್ಟಲಾಗಿದ್ದ ವಿಕ್ಟೋರಿಯನ್ ಶೈಲಿಯ ಸ್ಟೇಷನ್. ಅದೇ "ಇಂಗ್ಲೀಷ್ ಬರುವಂತಿದ್ದರೆ ನಾನ್ಯಾಕೆ ಈ ದೇಶದಲ್ಲಿರುತ್ತಿದ್ದೆ" ಎಂಬ ಭಾವ ಒಂದಿಬ್ಬರ ಮುಖದ ಮೇಲೆ. ಏಕೆಂದರೆ ಅಲ್ಲಿದ್ದವರು ಒಂದಿಬ್ಬರು ಮಾತ್ರ, ನಮ್ಮಿಬ್ಬರನ್ನು ಹೊರತುಪಡಿಸಿ. ವಿಶಾಲ ಸ್ಥಳ. ಅಲ್ಲಿ ನಿಂತಿದ್ದ ಒಂದೇ ಒಂದು ರೈಲೀಗೆ ಮೂರು ಬೋಗಿ! ಒಂದಿಬ್ಬರು ಪ್ರಯಾಣಿಕರಿಗಾಗಿ ಮೂರು ಬೋಗಿ, ಭಗವಾನ್! ರೈಲು ಹೊರಡಲು ಇನ್ನೂ ಮೂರು ತಾಸು ಇತ್ತು. ಅಷ್ಟರಲ್ಲಿ ನಾಲ್ವರು, "ಇಂಗ್ಲೀಷ್" ಎಂಬ ಪದವನ್ನೂ ಇಂಗ್ಲೀಷಿನಲ್ಲಿ ಸ್ಪಷ್ಟವಾಗಿ ಹೇಳಲಾಗದವರೊಂದಿಗೆ, ತಲಾ ಅರ್ಧ ತಾಸು ಮಾತನಾಡಿದೆ. "ಫಿನ್ನಿಶ್" ಎಂಬ ಒಂದೇ ಒಂದು ಫಿನ್ನಿಶ್ ಪದ ಗೊತ್ತಿತ್ತು ಆಗ ನನಗೆ. ಈಗಲೂ ಅಷ್ಟೇ.

ಭಾಷೆಯ ಸಹಾಯವಿಲ್ಲದೆ ಹಲವರೊಂದಿಗೆ ಮಾತನಾಡಿದ ನಂತರ ಊರು ನೋಡಲು ಹೊರಟೆ, ಲಗೇಜನ್ನು ಲಾಕರಿನಲ್ಲಿರಿಸಿ. ಅಲ್ಲಿ ಲಗೇಜ್ ಇರಿಸಿಕೊಂಡು, ಅಮೇರಿಕನ್ ಆಕ್ಸೆಂಟಿನಲ್ಲಿ ಇಂಡಿಯನ್ ಇಂಗ್ಲೀಷ್ ಮಾತನಾಡಿ, ನೀವುಗಳು ಮನಸ್ಸಿನಲ್ಲೇ ಮೈಯೆಲ್ಲ ಪರಿಚಿಕೊಳುವಂತೆ ಮಾಡಬಲ್ಲ ತಾಕತ್ತಿನ (ಭಾರತದ ಏರ್‌ಪೋರ್ಟ್‌ಗಳಲ್ಲಿರುವಂತಹ) ಸ್ಮಿತಾ ರಾವ್, ಶ್ಯಾಮಲ ಕುಂಡು ಅಂತಹವರು ಇರಲಿಲ್ಲ. ಈ ಮಹಿಳಾಮಣಿಗಳು ಕಾಲ್ಪನಿಕ ಎಂದು ಹೇಳಬೇಕಿಲ್ಲವಷ್ಟೇ.

ಊರು ಊರೇ. ಊರ ಮಧ್ಯದ ನದಿ ನೆಲದ ಮಟ್ಟದಲ್ಲಿ. ಬೇಸಿಗೆಯಾದ್ದರಿಂದ ಬಿಸಿಲು ಹೋಗುವವರೆಗೂ ಯಾರೂ ತಮ್ಮ ತಮ್ಮ ಮನೆಗಳ ಒಳಕ್ಕೆ ಹೋಗುತ್ತಿದ್ದುದು ಕತ್ತಲಾದ ಮೇಲೆಯೇ. ಬೇರೆಯವರ ಮನೆಗಳಿಗೆ ಹೋಗುತ್ತಿದ್ದುದೂ ಕತ್ತಲಾದ ಮೇಲೆಯೇ. ಆದರೆ ಕತ್ತಲೇ ಆಗುತ್ತಿರಲಿಲ್ಲವಾದ್ದರಿಂದ ಮನೆಗಳಿಗೆ ಹೋಗುತ್ತಿದ್ದುದು ಕೇವಲ ಊಟ ಸ್ವೀಕರಿಸಲು ಮತ್ತು ವಿಸರ್ಜಿಸಲು. ಸ್ನಾನ ಮಾಡುವ ಗ್ಯಾರಂಟಿ ಇರುತ್ತಿರಲಿಲ್ಲ. ಬೆವರು ಬಂದರಲ್ಲವೆ ಸ್ನಾನ ಮಾಡುವುದು. ಇಡೀ ಯುರೋಪಿನಲ್ಲಿ ಅತಿ ಕೆಟ್ಟ ಉಡುಪಿನ ಶೈಲಿ ಇವರದ್ದೇ. ಆದರೂ ಬಿಸಿಲು ಬಂದಂತೆಲ್ಲ ಊರುಗಳಲ್ಲಿ ಏನೋ ಕಲರವ. ಕಿವಿಗೆ ಕೇಳಿಸುವಷ್ಟು ಕಲರವ. ಫಿನ್ಲೆಂಡಿನ ಬೇಸಿಗೆಯಲ್ಲಿ ಆತ್ಮಹತ್ಯೆಗಳು ಕಡಿಮೆ!

ಅದೇ ಅಭ್ಯಾಸದಿಂದ ಕಡಿಮೆ ದರ್ಜೆಯ ಹೋಟೆಲು ಹುಡುಕಿಕೊಂಡು ಹೋಗಿ, ಹುಡುಕಿ, ಕಾಫಿ ಕುಡಿದೆವು ನಾನು ಮತ್ತು ನನ್ನ ಬೆಂಗಳೂರಿನ ಸ್ನೇಹಿತ ಪ್ರಕಾಶ್ ಬಾಬುವಿನ ಮೂಲಕ ಪರಿಚಿತನಾದ ಅರ್ಧ ಫಿನ್ನಿಶ್ ಅರ್ಧ ಭಾರತೀಯ ಗೆಳೆಯ ಸಾಮಿ ವ್ಯಾನಿಂಗನ ನಾದಿನಿಯ ಜೊತೆ. ಈಗಲ್ಲ ಆಗಲೂ ಆಕೆಯ ಹೆಸರು ನನಗೆ ತಿಳಿದಿರಲಿಲ್ಲ. ಕಾಫಿ ಹೌಸಿನಲ್ಲಿ ನಾಯಿಗಳನ್ನು ಬಿಡಿತ್ತಿರಲಿಲ್ಲವಾದ್ದರಿಂದ ತನ್ನ ಪುಟ್ಟ ನಾಯಿ ಮರಿಯನ್ನು ತನ್ನ ಪುಟ್ಟದಲ್ಲದ ಬ್ಯಾಗಿನ ಒಳಗಿಟ್ಟುಕೊಂಡೇ ಕಾಫಿ ಕುಡಿದಳು. ಇಡೀ ನಗರವು ಜಿಮ್ ಕ್ಯಾರಿಯ "ಟ್ರೂಮನ್ ಶೋ" ಸಿನೆಮದ ಸೆಟ್ಟಿಂಗಿನಂತಿತ್ತು. ಆ ಸಿನೆಮದಲ್ಲಿ ಸೆಟ್ಟಿಂಗನ್ನು ಸೆಟ್ಟಿಂಗಿನಂತೆಯೇ ತೋರಿಸಿದ್ದಾರೆಂಬುದು ನೆನಪಿರಲಿ! ಕಾಫಿ ಕುಡಿದ ನಂತರ "ಓಲೆ ಹೂವ" (ಕನ್ನಡವಲ್ಲ, ಕನ್ನಡದಲ್ಲಿ "ಹಾಯ್" ಎನ್ನುತ್ತೇವಲ್ಲ ಹಾಗೆ) ಹೇಳಿ ಆಕೆ ಹೊರಟಳು. ಇನ್ನು ಆಕೆಯನ್ನು ಮತ್ತೆ ನೋಡುವುದಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು. ಹೆಚ್ಚು ವಿದೇಶ ಪ್ರವಾಸ ಮಾಡಿದಷ್ಟೂ ಹೆಚ್ಚು ಹೆಚ್ಚು ಮಂದಿಯನ್ನು "ಮತ್ತೆಂದೂ ನೋಡುವುದಿಲ್ಲ" ಎಂಬುದು ಹೆಚ್ಚು ಸ್ಪಷ್ಟವಾಗಿ ತಿಳಿಯುತ್ತದೆ. ನನ್ನ ತಾತ ಅಜ್ಜಿಯರಿಗಿಲ್ಲದ ಒಂದು ಸೌಕರ್ಯವಿದು. ದೇಶವನ್ನೇ ಬಿಟ್ಟು, ಗುಳೇ ಹೊರಟು ಪರದೇಶಿಯಾದರಂತೂ ಇಡೀ ದೇಶದ ಜನರನ್ನೇ ಮತ್ತೆಂದೂ ನಿಜವಾಗಿ ನೋಡುತ್ತೇವೆಂಬ ಗ್ಯಾರಂಟಿ ಇರುವುದಿಲ್ಲವಲ್ಲ. ಹಾಗೆ ಎದೆಯ ಮೇಲೆ ಹೆಚ್ಚು ಭಾರ ಹೊತ್ತು ಪರದೇಶಿಯಾಗುವವರು ಭಾರತೀಯರೇ. ಏಕೆಂದರ ಭಾರತದ ಪರದೇಶಿಯೊಬ್ಬ ನೂರು ಕೋಟಿ ಜನರನ್ನು ಒಮ್ಮೆಲೆ ಕಳೆದುಕೊಂಡುಬಿಡುತ್ತಾನಲ್ಲ--ನನ್ನದೇನು ಮಹಾ ಬಿಡಿ. ನಾಲ್ಕಾರು ತಿಂಗಳಾದ ನಂತರ ಪ್ರಕಾಶನ ಗೆಳೆಯ ಸಾಮಿಯ ನಾದಿನಿ ಎದುರಾದರೆ ಖಂಡಿತ ಆಕೆಯನ್ನು ಗುರ್ತಿಸಲಾರೆ!

ಮತ್ತೆ ಸ್ಟೇಷನ್ನಿಗೆ ವಾಪಸ್ಸಾದೆ. ಆಶ್ಚರ್ಯ. ಹದಿನೈದರಷ್ಟು ಅತಿ ಹೆಚ್ಚಿನ ಜನರಿದ್ದರು ಅಲ್ಲಿ, ಟ್ರೈನಿಗಾಗಿ ಕಾಯುತ್ತ. ನಾಲ್ಕು ಗಂಟೆ ಹೆಲ್ಸಿಂಕಿವರೆಗಿನ ರೈಲು ಪ್ರಯಾಣಕ್ಕೆ ಐವತ್ತು ಯೂರೊ (ಎರಡೂವರೆ ಸಾವಿರ ರೂಪಾಯಿ) ತೆತ್ತು, ತತ್ತೇರಿಕ್ಕೆ ಎಂದುಕೊಂಡೆ. ಹೆಲ್ಸಿಂಕಿಗೆ ಬಂದಾಗ ಚದರ ಮೈಲಿಗೆ ಹದಿನಾರು ಜನರನ್ನು ಕಂಡು ಖುಷಿಯಾದೆ. ಫಿನ್ಲೆಂಡಿನಲ್ಲಿ ಅತ್ಯಂತ ಜನನಿಭಿಡ ರಾಜಧಾನಿಯೆಂಬ ಶೇಕಡಾ ಎರಡರಷ್ಟು ಭೂಪ್ರದೇಶದಲ್ಲಿ ಇಡೀ ದೇಶದ ಶೇಕಡ ಎಂಬತ್ತು ಮಂದಿ ವಾಸಿಸಿತ್ತಿದ್ದಾರೆಂದು ಮೊದಲೇ ಹೇಳಿದ್ದೇನೆ. ಹೇಳಿರದಿದ್ದಲ್ಲಿ ಇದನ್ನೇ ಅದು ಎಂದು ಭಾವಿಸಬೇಕಾಗಿ ವಿನಂತಿ.

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ

 

‹ ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆಮೇಲಿನ ಪುಟಕ್ಕೆಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! ›
  • ಫಿನ್ಲೆಂಡ್ ಪ್ರವಾಸ ಕಥನ
~.~
  • Printer-friendly version
  • Login or register to post comments
  • 1140 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 24, 2006 - 2:33am — anilkumar

ಇಲ್ಲದವನ ಇರುವಿಕೆಗಿ೦ತ ಗ್ಸೆನೋಫೋಬಿಯ ಹೆಚ್ಚಿನ ಬಾಧೆ!

anilkumar's picture

ಪರದೇಶದಲ್ಲಿ ಮೊದಲು ನಮಗಾಗುವುದು ಭಯ. ಯಾವುದರ ಬಗ್ಗೆ ಭಯ ಎ೦ದು ತಿಳಿಯಲಾಗದುದರ ಬಗೆಗಿನ ಭಯ. ಉದಾಹರಣೆಗೆ ಯಾವಾಗ ಪಾಸ್‍ಪೋರ್ಟ್‍‍ಅನ್ನು ಕಳೆದುಕೊ೦ಡುಬಿಡುತ್ತೇವೆ ಎ೦ಬುದರ ಬಗ್ಗೆ ಭಯ. ಅದು ಕಳೆದುಹೋದರೆ ಅಮೇಲೇನೆ೦ಬ ಭಯ. ನೀವು ಇರಬೇಕಾದಷ್ಟು ದಿನ ಅಲ್ಲಿರುತ್ತೀರಿ ಸರಿ. ಆಮೇಲೆ ಊರಿಗೆ ವಾಪಸ್ ಹೋಗುವುದು ವಿಮಾನದಲ್ಲಿ ತಾನೆ? ಬಸ್‍ಗೇನಾದರೂ ಆದರೆ ರಸ್ತೆಗೆ ಧುಮುಕಬಹುದು. ಹಡಗಿಗೇನಾದರೂ ಆದರೆ ಈಜಬಹುದು. ಆದರೆ ವಿಮಾನಕ್ಕೇನಾದರೂ ಆದರೆ? ಓಡಿ, ಈಜಲಾದರೂ ಈ ದೇಹದಲ್ಲಿ ಜೀವವೆ೦ಬುದಿರಬೇಕಲ್ಲವೆ ಅಷ್ಟು ಮೇಲಿನಿ೦ದ ಬಿದ್ದರೆ?

"ಗ೦ಟೆಗೆ ಸುಮಾರು ೯೦೦ಕಿಲೋಮೀಟರ್ ಈ ವಿಮಾನ ಓಡುತ್ತಿದೆ" ಎ೦ದು ವಿಮಾನದಲ್ಲಿ ನಮ್ಮ ಸೀಟಿನೆದಿರು, ಆದರೆ ಮು೦ದಿನವನ ಸೀಟಿನ ಬೆನ್ನಿಗೆ ಅ೦ಟಿಸಿರುವ ಪುಟ್ಟ ಟಿವಿಯಲ್ಲಿ ಭಿತ್ತರಿಸುತ್ತಿರುತ್ತಾರೆ. ಜೊತೆಗೆ ಯಾವ ದೇಶದ ಮೇಲೆ ಹಾಯ್ಧುಹೋಗುತ್ತಿದ್ದೇವೆ ಎ೦ಬ ಮ್ಯಾಪ್ ಬೇರೆ! ಬಿದ್ದರೆ, ಬಿದ್ದು ಬದುಕಿದರೆ, ಊರಿಗೆ ಹಿ೦ದಿರುಗುವ ರಸ್ತೆ ಗೊತ್ತಿರಲಿ ಎ೦ದು!

ಸಾಮಿಯೊ೦ದಿಗೆ, ಆತನ ಮನೆಯ ಸಮೀಪದ ಅದ್ಯಾವುದೋ ಊರಿಗೆ (ಹಮೆನ್‍ಲಿನ) ಹೋಗಿದ್ದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದರು! ಅಲ್ಯಾರೂ ಕರಿಯರಿರಲಿಲ್ಲ!

"ಜಗತ್ತಿನಲ್ಲೇ ಅತ್ಯ೦ತ ದೊಡ್ಡದಾದ ಮರದ ಚರ್ಚ್ ಇದು" ಎ೦ದೊ೦ದು ಚರ್ಚಿಗೆ ಕರೆದೊಯ್ಧಿದ್ದ ನನ್ನನ್ನು.
ಅಲ್ಲಿನ ಫುಡ್‍ವರ್ಲ್ಡಿನಲ್ಲಿ ತಿ೦ಡಿ, ತೀರ್ಥ ಕೊಳ್ಳುತ್ತಿದ್ದರೆ ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ! ಇದನ್ನೇ ಗ್ಸೆನೊಫೋಬಿಯ ಎನ್ನುವುದು. ಪರದೇಶೀಯತೆಯ ಬಗ್ಗೆ ಭಯ! ಬಿಲ್ ಕೊಡುವಾಗ ಬಿಲ್ ತೆಗೆದುಕೊಳ್ಳುವಾಕೆ ನನ್ನನ್ನು ತೋರಿಸುತ್ತ ಸಾಮಿಗೆ ಏನನ್ನೋ ಹೇಳುತ್ತ ನಗುತ್ತಿದ್ಧಳು. ನಗುತ್ತ ಏನೋ ಹೇಳುತ್ತಿದ್ದಳು. ಅಬ್ಬ! ಅ೦ತೂ ಪರದೇಶದಲ್ಲಾದರೂ ನಾಟ್ ವಾ೦ಟೆಡ್‍ನಿ೦ದ ನೋಟೆಡ್ ಆದೆನಲ್ಲ!

"ಏನು ಹೇಳುತ್ತಿದ್ದಳು ಆಕೆ?"ಕೇಳಿದೆ. ಸಾಮಿ ನಗತೊಡಗಿದ.

"ನನ್ನ ಬಗ್ಗೆಯೇ ಅಲ್ಲವೆ?"

"ಅದನ್ನು ಪತ್ತೆ ಮಾಡಲು ನೀನು ಜೀನಿಯಸ್ ಏನಾಗಿರಬೇಕಿಲ್ಲ ಬಿಡು"

"ನಮ್ಮ ಹಳ್ಳಿಗಳಲ್ಲಿ ನಿಮ್ಮ೦ತ ಬಿಳಿಯರು ಬ೦ದರೆ ಹೀಗೇ ಮುಟ್ಟಿ ಮುಟ್ಟಿ ನೋಡುತ್ತಾರೆ"

"ಆಕೆ ಕರಿಯರನ್ನು ನೋಡಿದ್ದಾಳೆ. ಸ್ವತ: ಬಿಳಿಯಳು. ಆದರೆ ನಿನ್ನ೦ತಹ ಸ್ಕಿನ್ ಟೋನ್‍ನವನನ್ನು ನೋಡಿಯೇ ಇಲ್ಲವ೦ತೆ!"

"ಅಷ್ಟು ಆದ್ಭುತವೇ ನನ್ನ ಚರ್ಮದ ವರ್ಣ?"

"ಷಟಪ್. ನಿನ್ನ೦ತಹವನು ಭಾರತದ ತು೦ಬ ಇದ್ದಾರೆ. ಆದರೆ ಆಕೆ ನೋಡಿಲ್ಲವಲ್ಲ!"

"ಅ೦ದರೆ ಆಕೆ ಭಾರತೀಯರನ್ನು ನೋಡಿಯೇ ಇಲ್ಲವೆ?"

"'ಭಾರತವೆ೦ಬುದೆಲ್ಲಿದೆ?' ಎ೦ದು ಕೇಳುತ್ತಿದ್ದಳು"

"ಒ೦ದು ಪ್ರಶ್ನೆ ಸಾಮಿ"

"ಕೇಳು"

"ಅಕಸ್ಮಾತ್ ನೀನು ನನ್ನೊಡನೆ ಇಲ್ಲದಿದ್ಧಲ್ಲಿ ನಾನೊಬ್ಬನೇ ಇಲ್ಲಿ ಸರಾಗವಾಗಿ ಓಡಾಡಲು ಸಾಧ್ಯವಾಗುತ್ತಿತ್ತೇ?"

"ಇಲ್ಲಿ ರೇಸಿಸ೦ ಇಲ್ಲ. ಇದು ಇ೦ಗ್ಲೆ೦ಡೂ ಅಲ್ಲ ಜರ್ಮನಿಯೊ ಅಲ್ಲ. ಆದರೆ ನೀನೊಬ್ಬನೇ ಬ೦ದಿದ್ದಲ್ಲಿ ಒ೦ದು ಮ್ಯೊಸಿಯ೦ನಲ್ಲಿಟ್ಟಿರುತ್ತಿದ್ದರು ನಿನ್ನ!"

"ನಿಜ ಹೇಳು. ಫಿನ್ನಿಶ್ ಜನ ಹಿಟ್ಲರನಿಗೆ ಜ್ಯೂ ಜನರನ್ನು ಹಿಡಿದುಕೊಟ್ಟರೋ ಇಲ್ಲವೋ?"

"ಅದೊ೦ದು ನಾಚಿಕೆಗೇಡಿನ ವಿಷಯ. ಎಲ್ಲರೂ ತಿಳಿಯುವುದು ನಾವು ಸ್ವಿಸ್ ಜನರ೦ತೆ--ಎರಡು ಪ್ರಪ೦ಚ ಯುದ್ಢಗಳ ಕಾಲದಲ್ಲಿ ತಟಸ್ಥರಾಗಿದ್ದವರೆ೦ದು. ಆದರೆ ನಾವು ಜ್ಯೂ ಜನರನ್ನು ಹಿಟ್ಲರನಿಗೆ ಹಿಡಿದುಕೊಟ್ಟದ್ದು ನಿಜ!"

ಮಾತು ವಿಪರೀತಕ್ಕೆ ಹೋದ೦ತೆನಿಸಿತ್ತು. ಸ್ವಲ್ಪ ವಾತಾವರಣವನ್ನು ಲಘುಗೊಳಿಸಬೇಕೆನಿಸಿತು.

"ಅ೦ದ ಹಾಗೆ ಹಿಟ್ಲರನ ಫೇವರಿಟ್ ಪಾನೀಯ ಏನು ಹೇಳು?"

"ಇಲ್ಲ. ನಾವು ಫಿನ್ನಿಶ್ ಜನ ಆತನಿಗೆ ಅಷ್ಟು ಹತ್ತಿರವಿರಲಿಲ್ಲ" ಎ೦ದ.

"ಜ್ಯೂಸ್!!" ಎ೦ದ.

"ನಗಬೇಕೆನಿಸಿದರೂ ನಗಲಾಗದ ಜೋಕ್ ಇದು" ಎ೦ದ ಸಾಮಿ.

ಅಲ್ಲಿನ ಭಯ ಅ೦ತಹದ್ದು. ಭಾರತೀಯರಿಗಾದರೆ ಆರೋಗ್ಯದ ಭಯ. ಅಷ್ಟು ಚಳಿಯಲ್ಲಿ ಒಮ್ಮೆ ನನ್ನ ಬೆನ್ನು ಹಿಡಿದುಕೊ೦ಡಿತು. ಅ೦ದರೆ ಬೆನ್ನನ್ನು ಬೆನ್ನೇ ಹಿಡಿದುಕೊ೦ಡಿತು. ನಾನು ಬಳಸಿದ ಔಷದಿ ಏನು ಗೊತ್ತೆ? ಅದೇ ಬಹುಪಾಲು ಭಾರತೀಯರು ಮಾಡುವ೦ತಹದ್ದು--ಉದಾಸೀನತೆ! ಡಾಕ್ಟರನನ್ನು ಪತ್ತೆ ಮಾಡುವುದು, ಔಷದ ಪಡೆವುದು, ಅವೆರಡೂ ಸಿಗುವ ಸ್ಥಳ ಹುಡುಕುವುದು, ಅದ ಹುಡುಕಲು ಆರೋಗ್ಯಕರ ಸ್ನೇಹಿತರನ್ನು ಹುಡುಕುವುದು--ಇ೦ತಹ ತಲಾಶ್ ಮಾಡುವ ಭಯ!

ನನ್ನ ಬೆನ್ನನ್ನು ನನ್ನ ಬೆನ್ನೇ ಹಿಡಿದ ಆ ಮೋರೂವರೆ ದಿನ ಫಿನ್ನಿಶ್ ಲೇಖಕ ಮಿಕ ವಾಲ್ಟರಿ ಬರೆಧ "ಸಿನುವೆ-ದ ಇಜಿಪ್ಶಯನ್" (Sinuhe, the Egyptian by Finnish writer Mika Waltari) ಓದುತ್ತ ಬೆನ್ನು ನೋವನ್ನು ಮರೆಯಲು ಪ್ರಯತ್ನಿಸಿದೆ. ಆರುನೂರು ಪುಟಗಳ ಫಿನ್ನಿಶ್ ಭಾಷೆಯ ಆ ಕಥನವು ಇಜಿಪ್ಟ್‍ನ ಪಿರಮಿಡ್ ಕಾಲದ ವೈದ್ಯನೊಬ್ಬನನ್ನು ಕುರಿತ ಪುಸ್ತಕವದು. ಮಲಗಿ ಓದುತ್ತಿದ್ದುದ್ದರಿ೦ದ ಬೆನ್ನು ನೋವು ಹೆಚ್ಚೂಕಡಿಮೆ ಜಾಸ್ತಿಯಾಗಿ ಕಡಿಮೆಯಾಯಿತು. ಆದರೆ ಕಣ್ಣುರಿ ಹೆಚ್ಚಾಯಿತು!

ಮಿಕ ವಾಲ್ತರಿ ೧೯೫೦ರ ಸುಮಾರಿಗೆ ಬರೆದ ಪುಸ್ತಕವಿದು. ಅದು ಇಜಿಪ್ಶಿಯನ್ ಭಾಷೆಗೆ ತರ್ಜುಮೆಯಾಗಿ ಅಲ್ಲಿನ ಶಾಲೆಗಳಲ್ಲಿ ಪಠ್ಯಪುಸ್ತಕವಾಯಿತು. ಅಲ್ಲಿನ ಪ್ರಧಾನಿ ವಾಲ್ತರಿಗೆ ಇಜಿಪ್ಟ್ ದೇಶಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ. ವಾಲ್ತರಿ ಭಯದಿ೦ದ ಹೋಗಲಿಲ್ಲವ೦ತೆ.

"ಹೇಗೆ ಬರೆದೆ ಇಜಿಪ್ಟಿನ ಬಗ್ಗೆ ಇಷ್ಟೊ೦ದು ವಿವರ, ಅದೂ ಅಲ್ಲಿಗೆ ಹೋಗದೆ?" ಎ೦ದು ಆತನನ್ನು ಕೇಳಲಾಯಿತು.

"ಸ್ವತ: ಸಿನುವೆ ಎ೦ಬ ವೈದ್ಯನೇ ನನ್ನ ಮೇಜಿನ ಬಳಿ ಬ೦ದು ಎಲ್ಲ ಹೇಳಿ ಹೋದ" ಬ೦ದಿತು ಉತ್ತರ. ಆರುನೂರು ಪುಟಗಳು ಮೊದಲ ಮಿದುಳು ವೈದ್ಯನೊಬ್ಬನ ಬಗ್ಗೆ ಓದುತ್ತಿದ್ದೆ, ಅದೇ ನನ್ನ ಬೆನ್ನಿಗೆ ಸರಿಯಾದ ವೈದ್ಯಕೀಯ ಟ್ರೀಟ್‍ಮೆ೦ಟ್ ಎ೦ದು!

ಗ್ಸೆನೊಫೋಬಿಯದ ಭಯದಿ೦ದ ವಾಲ್ತರಿ ಸಾಯುವರೆಗೂ ಇಜಿಪ್ಟಿಗೆ ಹೋಗಲಿಲ್ಲ. ಸತ್ತ ಮೇಲೆ ಹೋಗಿರಬಹುದೆ೦ಬುದಕ್ಕೆ ತಾರ್ಕಿಕ ಜಗತ್ತಿನಲ್ಲಿ ಉತ್ತರವಿಲ್ಲ!

ಬದುಕಿರುವವರೆಗೂ ಮನುಷ್ಯನಿಗೆ ಭಯ ತಪ್ಪಿದ್ಧಲ್ಲದಿದ್ದರೂ ಪರದೇಶದಲ್ಲಿರುವಾಗಿನ ಭಯದ ಕಥೆಯೇ ಬೇರೆ. ಅಲ್ಲಿನ ಅವ್ಯಕ್ತ ಭಯ ವಾಪಸ್ ಇಲ್ಲಿ ಬರುವವರೆಗಷ್ಟೇ. ಆದರೆ ಅಲ್ಲೇ ನೆಲೆಸಿದ ಭಾರತೀಯರ ಚಿರ೦ತನ ಭಯದ ಕಥೆ? ಮತ್ತು ಇದನ್ನು 'ಡಯಸ್ಪೊರಿಕ್ ನಾಸ್ಟಾಲ್ಜಿಯ' ಎನ್ನುತ್ತೇವೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊಬೈಲ್ ಮೌನಿಗಳು
  • 'ಸಾನ' ಮಾಡಿದರೆ ಫಿನ್ನಿಶ್
  • ಸಾಮಿ ಎಂಬ ಕಂಪನಿ ಕೊಡುವ ವಾನ್ ಇಂಜನ್
  • ಝೆನ ಕಥೆ ೩೬: ಛತ್ರ
  • ನಾಳೆ ನೀವೂ ಮಾಯ.............
Syndicate content

ಲೇಖಕರು

anilkumar's picture

ಪರಿಚಯ

I write about VISUAL CULTURE in English & Kannada. "Nota Pallata" (1998-Kannada, Abhinava Prakashana), "K.T.Shiva Prasad" (2000-Karnataka Lalitkala Academy), "Haruko-Swiss artist" (2006-English)"Svetoslav & Nicholas Roerich"(1999-English,Chitrakala Parishath)are some of the books I have written.

I had been to Finland, Sweden & Russia (2001,2004)on Unesco-Aschberg scholarship to 'watch' their visual culture. I was in London (2004-5) to do the same thing at Royal College of Arts on a British Council scholarship. Earlier I studied Art History M.F.A at Santiniketan and B.F.A (degree in Painting) at College of Fine Arts, Chitrakala Parishath, Bangalore. Right now I teach visual culture, art history, visual philosophy and art criticism at the same college.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
  • ಮರಳಿ ಬರಲಿ ಬಾಲ್ಯ

ಇತ್ತೀಚಿನ ಪ್ರತಿಕ್ರಿಯೆಗಳು

  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 7, 2008 - 9:45am
  • mahesha
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:45am
  • srinivasps
    ಉ: ಬುದ್ದಿಜೀವಿಗಳಿಗೆ ಇಪ್ಪತ್ತೈದು ಪ್ರಶ್ನೆಗಳು
    October 7, 2008 - 9:16am
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 8:48am
  • mahesha
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:45am
  • savithasr
    ಉ: ಗಾಂಧೀಸ್ಮರಣೆ
    October 7, 2008 - 8:28am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 8:01am
  • shylaswamy
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
    October 7, 2008 - 7:58am
  • Sunil Jayaprakash
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
    October 7, 2008 - 7:57am
  • Sunil Jayaprakash
    ಉ: ಸ್ವಲ್ಪನಗಿ
    October 7, 2008 - 7:42am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 66 ಅತಿಥಿಗಳು ಆನ್ಲೈನ್ ಇರುವರು.


ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕಿಂತ ಉಚ್ಚ ಆದರ್ಶವನ್ನಿರಿಸಿಕೊಂಡು ಅಸಫಲಗೊಳ್ಳುವುದೇ ಮನುಷ್ಯನಿಗೆ ಶೋಭದಾಯಕ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator