'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!?

'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು'
ಅಂತ 'ಹುಯಿಲಗೋಳ ನಾರಾಯಣರಾಯ'ರು ಏಕೀಕರಣಕ್ಕೆ ಮೊದಲು ಬರೆದಿದ್ದರು.

'ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ'
ಅಂತ ಏಕೀಕರಣದ ನಂತರ ಬರೆದವರು 'ಸಿದ್ದಯ್ಯ ಪುರಾಣಿಕ್'.

ಇವೆರಡು ಹಾಡುಗಳನ್ನ ವರ್ಷಕ್ಕೊಮ್ಮೆ ರಾಜ್ಯೋತ್ಸವದ ದಿನಗಳಲ್ಲಿ(ದಿನಗಳಲ್ಲಾದರೂ!) ನಾವು ಹಾಗೂ ನಮ್ಮ ರಾಜಕಾರಣಿಗಳು ನೆನಪಿಸಿಕೊಳ್ಳುತ್ತೇವೆ. ಆದರೆ ಇಲ್ಲಿ ಕೆಳಗೆ ಇನ್ನೊಂದು ನತದೃಷ್ಟ ಹಾಡಿದೆ ನೋಡಿ.ಬಹಳಷ್ಟು ಜನ ಇದನ್ನ ಮರೆತಿದ್ದಾರೆ, ಹಲವರಿಗೆ ನೆನಪಿಸಿಕೊಳ್ಳುವುದು ಬೇಕಾಗಿಲ್ಲ,ಇನ್ನುಳಿದವರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!

'ಬೆಂಕಿ ಬಿದ್ದಿದೆ ನಮ್ಮ ಮನೆಗೆ
ಓ ಬೇಗ ಬನ್ನಿ
ಕನ್ನಡ ಗಡಿಯ ಕಾಯೋಣ ಬನ್ನಿ
ಕನ್ನಡ ನುಡಿಯ ಕಾಯೋಣ ಬನ್ನಿ'

ಅಂತ ಬರೆದ 'ಕಯ್ಯಾರ ಕಿಞಞಣ್ಣ ರೈ' ಇಡಿ ಕಾಸರಗೋಡಿನ ಜನತೆಯ ನೋವನ್ನ ಈ ಸಾಲುಗಳಲ್ಲಿ ಅಭಿವ್ಯಕ್ತ ಪಡಿಸಿದ್ದರು.

ಮೊದಲ ಹಾಡು ಕನ್ನಡಿಗರ ಒಗ್ಗೂಡುವಿಕೆಯ ತುಡಿತವನ್ನ ಬಿಂಬಿಸಿದರೆ ,ಎರಡನೆಯದು 'ಕರ್ನಾಟಕ ಏಕೀಕರಣದ ವಿಜಯದ (ಭಾಗಶಃ) ಸಂಕೇತ ಮತ್ತು ಮೂರನೆಯದು 'ಕರ್ನಾಟಕದ ಕಾಸರೋಗೋಡಿನ (?) ಜನರ ನೋವಿನ' ಸಂಕೇತ.

೨ ತಿಂಗಳ ಹಿಂದೆ ಭರ್ಜರಿಯಾಗಿ ನಮ್ಮ ೫೪ನೆ ವರ್ಷದ ರಾಜ್ಯೋತ್ಸವವನ್ನ ಆಚರಿಸಿದೆವು.ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ರಾಜ್ಯೋತ್ಸವ ಆಚರಣೆ ನಡೆಯಿತು ಮತ್ತದು ಮುಂದಿನ ನವೆಂಬರ್ವರೆಗೆ ನಡೆಯುತ್ತಲೇ ಇರುತ್ತದೆ.ರಾಜ್ಯದ ಹಲವೆಡೆ ನಡೆಯುವ ಆಚರಣೆಗಳು ಪತ್ರಿಕೆ,ಟೀ.ವಿ ಗಳಲ್ಲಿ ವರದಿಯಾಗುತ್ತದೆ.ಅದೇ ದಿನ ಬೆಳಗಾವಿ ಕಡೆ ಕೆಲವರು ಭಗವಾಧ್ವಜ ಹಾರಿಸುತ್ತಾರೆ ಅದೂ ಸುದ್ದಿಯಾಗುತ್ತದೆ.ಕೊಡಗು,ಹೈದರಾಬಾದ್ ಕರ್ನಾಟಕದಲ್ಲಿ ಕರಾಳ ದಿನ ಅಂತಾರೆ ಅದೂ ಸಣ್ಣದಾಗಿಯಾದರೂ ಸುದ್ದಿಯಾಗುತ್ತದೆ.ಆದರೆ ಅಲ್ಲೊಂದು 'ಕಾಸರಗೋಡು' ಅಂತ ಇದೆ ನೋಡಿ.ಆ ಜನರ ಕೂಗು ಪತ್ರಿಕೆ, ಟೀ.ವಿ ಯವರಿಗೆ ಬಿಡಿ, ಕಡೆಗೆ ಅವರ ಪಕ್ಕದಲ್ಲೇ ಇರುವ 'ದಕ್ಷಿಣ ಕನ್ನಡ'ದ ಜನರಿಗೆ,ರಾಜಕಾರಣಿಗಳಿಗೆ, ನಮ್ಮ ಮಹಾನ್ ಕರ್ನಾಟಕದ ಸರ್ಕಾರಕ್ಕೆ,ಕನ್ನಡಪರ ಹೋರಾಟಗಾರರಿಗೆ,ಸಂಘಟನೆಗಳಿಗೆ ಯಾರಂದ್ರೆ ಯಾರಿಗೂ ಕಾಣುವುದೇ ಇಲ್ಲ. ತೀರ ಕೆಲ ತಿಂಗಳುಗಳ ಹಿಂದೆ 'ಕಾಸರಗೋಡು ಹೋರಾಟವನ್ನ ಬೆಂಗಳೂರಿಗೆ ತರುತ್ತೇವೆ' ಅನ್ನುವ ಹೇಳಿಕೆಗಳು ಬಂದಿದ್ದವಾದರು ಅವು ಹೇಳಿಕೆಗಳಾಗೆ ಉಳಿದಿವೆ.ನವೆಂಬರ್ನಲ್ಲೊಂದು ಆರ್ಕೆಸ್ಟ್ರಾ ಮಾಡಿ 'ರಾಜ್ಯೋತ್ಸವ' ಆಚರಿಸಿ ಬಿಟ್ರೆ ಸಾಕಾ? ಗಡಿಯ ಅಂಚಿನಲ್ಲಿ ಅದೆಷ್ಟು ಕನ್ನಡ ಶಾಲೆಗಳಿವೆ?ಅಲ್ಲಿನ ಸ್ಥಿತಿ-ಗತಿಗಳೇನು?ನಾವು ತಲೆ ಕೆಡಿಸಿಕೊಳ್ಳೋದಿಲ್ಲ, ಇನ್ನ ಸರ್ಕಾರದವರನ್ನ ಕೇಳಲೇಬೇಡಿ ಬಿಡಿ ಪಾಪ ಅವರದು 'ಕುರ್ಚಿ'ಗಾಗಿ ನಿರಂತರ ಹೋರಾಟ!.ರಾಷ್ಟ್ರ ಕವಿ ಕುವೆಂಪು ಅವರ ಭಾವ ಚಿತ್ರವನ್ನ ಹಾಕಿಕೊಂಡು ಹೋರಾಟ ಮಾಡುವ ನಾವು,ಮತ್ತೊಬ್ಬ ರಾಷ್ಟ್ರ ಕವಿ 'ಗೋವಿಂದ ಪೈ' ಅವರನ್ನು, ಅವರ ಊರನ್ನು ಮರೆತೇ ಬಿಟ್ಟಿದೇವೆಯೇ? 

ಮಲಯಾಳಿ 'ಪಣಿಕ್ಕರ್' ಅವರು ಮಾಡಿದ ದ್ರೋಹಕ್ಕೆ ಬಲಿಯಾಗಿ 'ಕಾಸರಗೋಡು' ಕೇರಳಕ್ಕೆ ಸೇರಿತು. ನಮ್ಮನ್ನು ಸೇರಿಸಿಕೊಳ್ಳಿ ಅಂತ ಅವರು ಹೇಳುತ್ತಲೇ ಬಂದರೂ ನಾವು ಕೇಳುತ್ತ ಕೇಳುತ್ತ ಕೇಳಿಸದಂತಾಗಿ ಬಿಟ್ಟೆವು.ಈಗ ಹೇಳಿ ಹೇಳಿ ಅವರಿಗೂ ಸಾಕಗಿದೆಯೋ ಏನೋ? ಕಿಞಞಣ್ಣ ರೈ ಯವರು ಅಂದು ನೋವಿನಲ್ಲಿ ಬರೆದ ಆ ಸಾಲುಗಳನ್ನ ಅಂದಿಗೆ ಓದಿ ಒಂದೆರಡು ಹನಿ ಕಣ್ಣೀರು ಸುರಿಸಿ ಸುಮ್ಮನಾದವರಿಗೆ , ಇಲ್ಲೊಂದು  comfort zone  ಅಂತ  create  ಆದ ಮೇಲೆ 'ಕಾಸರಗೋಡು' ಹೋರಾಟದಲ್ಲಿ ಕೈ ಜೋಡಿಸಲು ಟೈಮು,ಮನಸ್ಸು ಎರಡು ಇರಲಿಲ್ಲ ಅನ್ನಿಸುತ್ತೆ. ಏಕೀಕರಣದ ನಂತರ ಭುಗಿಲೆದ್ದ ಅಸಮಾಧಾನಕ್ಕೆ ನೆಹರು ಪ್ರತಿಕ್ರಿಯಿಸಿ '೪ ಗ್ರಾಮಗಳು ಆ ಕಡೆ ಹೋಗಬಹುದು,೪ ಗ್ರಾಮಗಳು ಈ ಕಡೆ ಬರಬಹುದು.ಯಾರನ್ನೂ ನಾವೇನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತಿಲ್ಲವಲ್ಲ' ಅಂದಿದ್ದರು. ಬೆಂಕಿ ತಾಗಿದವ್ರಿಗೆ ಮಾತ್ರ ಬಿಸಿಯ ಅರಿವಾಗುವುದು. ಪಾಪ, ಅವರಿಗೆ ಇದೆಲ್ಲ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ,ಸಮಯ ಎರಡು ಇರಲಿಲ್ಲ ಬಿಡಿ.ಅವರಿಗಾದರೂ ನೋಡಲು ಇಡಿ ಭಾರತದ ಸಮಸ್ಯೆಗಳಿದ್ದವು!. ಆದರೆ ಕರ್ನಾಟಕದ ನಾಯಕರು ಏನು ನೋಡ್ತಾ ಇದ್ದಿರಬಹುದು!?

'ಕಾಸರಗೋಡು' ಕೇರಳಕ್ಕೆ ಸೇರಿದೆ ಅನ್ನುವುದು ಗೊತ್ತಾದಾಗ ಕಡೆ ಪಕ್ಷ ದಕ್ಷಿಣ ಕನ್ನಡ ಭಾಗದ ಜನ ಪ್ರತಿನಿಧಿಗಳು ತಮ್ಮ ಅಧಿಕಾರದಾಸೆ ಬಿಟ್ಟು ರಾಜಿನಾಮೆ ನೀಡಿ ಅಂದು ಅಖಾಡಕ್ಕೆ ಇಳಿಯುವ ಮನಸ್ಸು ಮಾಡಲಿಲ್ಲ.ಈಗ 'ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ' ಅನ್ನುವ ಭಾಷಣಗಳು ಅಪರೂಪಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾದಾಗ ಬರುತ್ತಿವೆ ಅಷ್ಟೇ! ಗಡಿ ಸಮಸ್ಯೆಗಳನ್ನ ಆಯಾ ರಾಜ್ಯ ಸರ್ಕಾರಗಳೇ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಅಂತ ಕೇಂದ್ರ ಸರ್ಕಾರ ಹೇಳಿ ಕೈ ತೊಳೆದುಕೊಂಡಿತು. ಮಾತಾಡಬೇಕಾದವರು ಸದಾ ಕಾಲ ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಎಲ್ಲ ಮರೆತು ಬಿಟ್ಟರು.  

ನಮ್ಮ ರಾಜ್ಯದ ಜನ ಸೇವಕ(ನಾಯಕರಲ್ಲ!)ರನ್ನ ದೂರುವ ಮೊದಲು ನಾವುಗಳು (ಕನ್ನಡಿಗ ಮಹಾಪ್ರಭುಗಳು!) ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಬೇಡವೇ? ಇತ್ತ 'ಕಾವೇರಿ'ದಾಗ ಅತ್ತ ಕರಾವಳಿ ಸೇರಿದಂತೆ ಹಲವೆಡೆ ಎಲ್ಲ 'ತಣ್ಣ'ಗಿರುತ್ತದೆ.ನಾವ್ಯಾರು ಒಬ್ಬರಿಗೊಬ್ಬರು ಅಂತ ನಿಲ್ಲುವುದೇ ಇಲ್ಲ.ಅವರು ಕರೆದಾಗ ಇವರು ಹೋಗಲ್ಲ, ಇವ್ರು ಕರ್ದಾಗ ಅವ್ರು ಹೋಗಲ್ಲ ಅನ್ನೋ ತರ ಇದೆ ನಮ್ಮ ಸ್ಥಿತಿ. ನೆಲ-ಜಲದ ವಿಷಯಕ್ಕೆ  'ಕರ್ನಾಟಕ ಬಂದ್' ಕರೆ ಕೊಟ್ರೆ ಹೆಚ್ಚೆಂದರೆ ೪-೫ ಜಿಲ್ಲೆಗಳು 'ಬಂದ್'! .ಉಳಿದವರದು 'ಹೇಯ್,ಬಿಡ್ರಿ ನಾವ್ ಯಾಕ್ ಮಾಡ್ಬೇಕು,ಅವ್ರಿಗೆ ಮಾಡೋಕೆನ್ ಕೆಲ್ಸ ಇಲ್ಲ' ಅನ್ನೋ ಧೋರಣೆ!, ಬೆಂಬಲ ಕೊಡದೆ ಸುಮ್ನೆ ಇದ್ದ ನಾವ್ ಮಹಾನ್ ಬುದ್ದಿವಂತರು ಅನ್ನೋ ಮನೋಭಾವ.ತಮ್ಮ ಕಲೆಕ್ಷನ್ ಕಡಿಮೆಯಾದಾಗ ಬೀದಿಗಿಳಿಯುವ ಚಿತ್ರರಂಗಕ್ಕೆ ಆಗ ಅಸ್ತ್ರಗಳಾಗಿ ಸಿಗುವುದು 'ಮಹಾಜನ್ ವರದಿ,ಸರೋಜಿನಿ ಮಹೀಷಿ ವರದಿ'ಗಳು.ಅವರ ಸಮಸ್ಯೆ ಮುಗಿತು ಅಂದ್ರೆ ಅಲ್ಲಿಗೆ ಮತ್ತೆ ಎಲ್ಲ ಶಾಂತಿ ಶಾಂತಿ!.

ನಮ್ಮ ರಾಜ್ಯದಲ್ಲಿರೋ ಕೊಡಗು,ಹೈದರಾಬಾದ್ ಕರ್ನಾಟಕದ ಕೆಲವರೇ ಪ್ರತ್ಯೇಕ ರಾಜ್ಯದ ಬೇಡಿಕೆಯಿಡುತಿದ್ದಾರೆ, ಮತ್ತಿನ್ಯಾಕೆ ಬೇರೆಯವರ ಹತ್ರ ಇರೋ ಭಾಗ ಕೇಳೋದು ಅಂತಾನು ನಮಗೆ ಅನ್ನಿಸಬಹುದು.ಹಾಸನದಿಂದ ಕೊಡಗಿನ ಕಡೆ ಹೊರಟರೆ ಹಾಸನ ಮುಗಿಯುವವರೆಗೆ ರಸ್ತೆ ಚೆನ್ನಾಗಿದೆ. ಕೊಡಗು ಪ್ರವೇಶಿಸುತ್ತಿದ್ದಂತೆ ಅಲ್ಲೊಂದು ಫಲಕವಿದೆ 'ಕೊಡಗಿನ ಗಡಿ ಪ್ರಾರಂಭ' ಅಂತ. ಆ ದಾರಿಯಲಿ ಹೋಗಿ ಬಂದ ಯಾರೋ ಪುಣ್ಯಾತ್ಮ ಅದನ್ನ 'ಕೊಡಗಿನ 'ಗುಂಡಿ' ಪ್ರಾರಂಭ' ಅಂತ ಬದಲಾಯಿಸಿದ್ದಾನೆ!.ಕಳೆದ ವರ್ಷ ಕೊಡಗಿಗೆ ಹೋದಾಗ ಇದನ್ನ ನೋಡಿದ್ದೇ, ಅದಕ್ಕಿಂತ ಮೊದಲು ಹೋಗಿದ್ದಾಗಲು  ನೋಡಿದ್ದೇ.ಈಗ ಆ 'ಗುಂಡಿ-ಗಡಿ'ಯಾಗಿ ಪರಿವರ್ತನೆಯಾಗಿದೆಯೋ ಇಲ್ವೋ ಗೊತ್ತಿಲ್ಲ! ಬಹುಷಃ ಈಗಲೂ ಅದು ಗುಂಡಿಯೇ ಆಗಿದ್ದರೆ ಅವರು ಪ್ರತ್ಯೇಕ 'ಗಡಿ' ಕೇಳದೆ ಇನ್ನೇನು ತಾನೇ ಮಾಡಿಯಾರು ಹೇಳಿ?

ಮಹಾಜನ್ ಆಯೋಗ ಮಾಡುವಂತೆ ಪಟ್ಟು ಹಿಡಿದ ಮಹಾರಾಷ್ಟ್ರದವರು ವರದಿ ವ್ಯತಿರಿಕ್ತವಾಗಿ ಬಂದಿದ್ದರಿಂದ ಅದನ್ನ ಒಪ್ಪಲಿಲ್ಲ. ಒಂದು ವೇಳೆ ವರದಿಯೇನಾದರು 'ಬೆಳಗಾವಿ' ಅವರಿಗೆ ಸೇರಬೇಕು ಅಂದಿದ್ದಾರೆ ಸುಮ್ಮನಿರುತಿದ್ದರಾ? ಅವರು ಸುಮ್ಮನಾಗಿದ್ದರೂ ನಾವಾಗೆ ಮೈ ಮೇಲೆ ಬಿದ್ದು ತಗೊಂಡ್ ಹೋಗ್ರಪ್ಪ ಬೆಳಗಾವಿನ ಅಂತ ಕೊಡ್ತಿದ್ವೋ ಏನೋ?.ಬೆಳಗಾವಿ ಅವರಿಗೆ ಸೇರಿದ್ದಲ್ಲ ಅಂತ ಗೊತ್ತಿದ್ದರೂ,ಅದೇ ವಿಷಯವನ್ನ ಸಾಧ್ಯವಾದಗಾಲೆಲ್ಲ ಕೆದಕುವ ಮಹಾರಾಷ್ಟ್ರದ ರಾಜಕಾರಣಿಗಳಂತೆ ನಮ್ಮವರು atleast ಕಾಸರಗೋಡಿನ ವಿಷಯವನ್ನ ಜೀವಂತವಾಗಿಡಲು ಪ್ರಯತ್ನಿಸುತ್ತಿಲ್ಲ.ಬದಲಾಗಿ 'ಸೀಮಾ ಪರಿಷತ್' ನಂತಹ ಶಾಂತಿ ಕದಡುವ ಕಾರ್ಯಕ್ರಮಗಳಿಗೆ ಅನುಮತಿ ಕೊಡುತ್ತಾರೆ.ಹೆಚ್ಚೆಂದರೆ ನನ್ನಂತವರು ಕುಳಿತು ಅದರ ಬಗ್ಗೆ ಬರೆಯುತ್ತೇವೆ ಅಷ್ಟೇ, ಆದರೆ ಮೊನ್ನೆ ಅಲ್ಲಿ ಕ.ರ.ವೇ ಮಾಡಿದ ಹೋರಾಟಕ್ಕೆ ಅಭಿನಂದನೆ ಹೇಳಲೇಬೇಕು.ಇಂತ ಕೆಲವು ಕನ್ನಡ ಪರ ಸಂಘಟನೆಗಳಿರುವುದರಿಂದಲೇ ಬೆಳಗಾವಿಯಲ್ಲಿ ಎಂ.ಇ.ಎಸ್ ಆಟ ನಡೆಯುತ್ತಿಲ್ಲ.ಸರ್ಕಾರವನ್ನೇ ನಂಬಿ ಕೂತಿದ್ದರೆ ಬೆಳಗಾವಿಯು ಕೈ ಬಿಟ್ಟು ಹೋಗುತಿತ್ತೋ ಏನೋ? ಇದೆ ಹೋರಾಟದ ಸ್ಪೂರ್ತಿಯನ್ನ ಕಾಸರಗೋಡಿನ ವಿಲೀನದ ವಿಷಯದಲ್ಲೂ ತೋರಿಸಬಹುದಲ್ವಾ?

ಮಹಾಜನ್ ವರದಿಯನ್ನ ಜಾರಿಗೆ ತರಲು ಸಾಧ್ಯವಿಲ್ಲ ಅನ್ನೋದು  ಮಹಾರಾಷ್ಟ್ರ ಹಾಗು ಕೇರಳ ಸರ್ಕಾಗಳ ವಾದ.ಜಾರಿಯಾಗಲಿ ಅನ್ನೋದು ಕರ್ನಾಟಕದ ವಾದ.ಇದು ಮುಗಿಯದ ಕತೆ.ಅದರ ಬದಲು ಕೇಂದ್ರ ಸರ್ಕಾರವೇಕೆ ಬೇರೆ ಸೂತ್ರ ಹುಡುಕುತ್ತಿಲ್ಲ? ಅಂತಿಮವಾಗಿ ಎಲ್ಲಿಗೆ ಸೇರಬೇಕು ಅಂತ ನಿರ್ಧರಿಸಿಬೇಕಾದವ್ರು ಅಲ್ಲಿ ಜೀವನ ನಡೆಸುತ್ತಿರುವ ಜನಗಳು.ಸಮಸ್ಯೆ ಪರಿಹರಿಸ ಬೇಕಿರುವ ಸರ್ಕಾರಗಳು ಈ ಬಗ್ಗೆ ಚಿಂತಿಸಬೇಕಿದೆ.ಬಹುಷಃ ಜನಾಭಿಪ್ರಾಯಕ್ಕೆ ಮನ್ನಣೆ ಕೊಡಬೇಕಿದೆ. ಇದು ಸಾಧ್ಯವಿಲ್ಲ ವರದಿಯೇ ಅಂತಿಮ ಅಂತ ಕುಳಿತರೆ ಸಮಸ್ಯೆ ಬಗೆಹರಿಯುವುದೇ? ಬಗೆ ಹರಿದರೆ ಸಂತೋಷ ಇಲ್ಲದಿದ್ದರೆ,ಸ್ವಲ್ಪ ದಿನಗಳ ನಂತರ ಎಲ್ಲರ ನೆನಪಿನಿಂದ ಈ ವಿಷಯ ಮಾಸಿಯೂ ಹೋಗಬಹುದು (ಈಗಾಗಲೇ ಹೋಗಿಬಿಟ್ಟಿದೆ ಬಿಡಿ). 'ಸ್ವಂತ ಮನೆ'ಯಿದ್ದುಕೊಂಡು 'ಬಾಡಿಗೆ ಮನೆ'ಯಲ್ಲಿರುವ ನೋವು ಅವರಿಗೆ ಶಾಶ್ವತ!!

ಆಮೇಲೆ,

'ಉದಯವಾಯಿತು ಚೆಲುವ ಕನ್ನಡ ನಾಡು' ಅಂತ ಹಾಡಿಕೊಂಡು ಕಾಲ ತಳ್ಳೋಣ...

Your rating: None Average: 5 (4 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
anil.ramesh's picture

ರಾಕೇಶ,
>>ಉಯಿಲಗೋಳ ನಾರಾಯಣರಾಯರು
ಹುಯಿಲಗೋಳ ನಾರಾಯಣರಾಯರು ಎಂದು ಬದಲಾಯಿಸಬೇಕು.

-ಅನಿಲ್

Rakesh Shetty's picture

ಹೌದು ಅನಿಲ್! ಈಗ ಬದಲಾಯಿಸೆದ್ದೇನೆ. ನನ್ನೀ :)

malleshgowda's picture

ನಿಮ್ಮ ಮಾತು ನಿಜ ರಾಕೇಶ್ ನಾವು ಕಾಸರಗೋಡಿನ ವಿಷಯದಲ್ಲಿ ನಿರ್ಲಕ್ಷದಿ೦ದಿರುವುದು ಬೇಸರದ ವಿಷಯ. ಇದಕ್ಕೆ ಬೆ೦ಬಲದ ಮತ್ತು ಕಾನೂನಿನಲ್ಲಿ ಹಿಡಿತವಿರುವ ಕನ್ನಡಿಗರು ಹೋರಾಟ ಮಾಡಬೇಕು. ಗಡಿಭಾಗದ ಜನರ ಬೆ೦ಬಲ ಅತಿ ಮುಖ್ಯವಾಗುತ್ತದೆ. ಕರ್ನಾಟಕ, ಕನ್ನಡಪರ ಕಾಳಜಿ ಇರುವ ಸ೦ಘಟನೆಗಳ ಹೋರಾಟ ಮು೦ದುವರೆಯಬೇಕಿದೆ ಮತ್ತು ನಾವೂ ಕೂಡ ಧ್ವನಿಗೂಡಿಸೋಣ..

Rakesh Shetty's picture

ಹೌದು ಮಲ್ಲೇಶ್,ಅತಿ ಮುಖ್ಯವಾಗಿ ಸರ್ಕಾರಕ್ಕೆ ಇಚ್ಚಾ ಶಕ್ತಿ ಬೇಕಿದೆ.ಗಡಿ ಭಾಗದ ಜನರಿಗಂತೂ ಹೇಳಿ ಹೇಳಿ ಸಾಕಾಗಿದೆ ಅವರು ಸೂಕ್ತ ಬೆಂಬಲದ ನೀರಿಕ್ಷೆಯಲ್ಲೇ ಇದ್ದಾರೆ.

kamalap09's picture

ರಾಕೇಶ್,

ನಿಮ್ಮ ಆಲೋಚನೆ ಸೂಪರ್ . ಹಿಡಿಸಿತು ಈ ಸತ್ಯದ ಲೇಖನ.

ಕಮಲ

Rakesh Shetty's picture

ಧನ್ಯವಾದಗಳು ಕಮಲ :)

vijendra's picture

ನನ್ನ ಅಂದಾಜು ಕೇರಳದ ಇತರ ಭಾಗಗಳಿಂದ ವಲಸೆಯಿಂದಾಗಿ ಈಗ ಕಾಸರಗೋಡಿನಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣಿಸಿದೆ.

Rakesh Shetty's picture

ಹೌದು ವಿಜೇಂದ್ರ, ಜನಾಭಿಪ್ರಾಯಕ್ಕೆ ದೊಡ್ಡ ತೊಡಕಾಗುವುದು ಇದೆ ಸಂಖ್ಯಾ ಬಲದಿಂದ!

thesalimath's picture

ಇಲ್ಲಿ ಇನ್ನೊಂದು ಆಯಾಮ ಇದೆ.
ಗಡಿನಾಡಿನಲ್ಲಿರುವ ಕಾರಣ ಕೇರಳ ಸರ್ಕಾರ ಅವರಿಗೆ ಅನೇಕ ಮೀಸಲಾತಿಯೂ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ. ಜೊತೆಗೆ ಕಾಸರಗೋಡಿನವರ್‍ನು ಕನ್ನಡಿಗರು ಎಂದೇ ಕರ್ನಾಟಕದವರು ಒಪ್ಪುವುದರಿಂದ ಕರ್ನಾಕದಲ್ಲೂ ಅವರಿಗೆ ಸವಲತ್ತುಗಳಿವೆ. ಹಾಗಾಗಿ ಎರಡೂ ಕಡೆಯಿಂದ ಸಿಗುವ ಅನುಕೂಲತೆಗಳಿಂದಾಗಿ statusco ಕಾಯ್ದುಕೊಳ್ಳಲು ಅಲ್ಲಿನ ಬಹುತೇಕ ಕನ್ನಡಿಗರು ಬಯಸುತ್ತಾರೆ. ಇದು ನಾನು ಅನೇಕರನ್ನು ಮಾತನಾಡಿಸಿ ಕಂಡುಕೊಂಡ ಸತ್ಯ! ಇದರಿಂದಾಗಿ ಕಾಸರಗೋಡಿನ ಹೋರಾಟಕ್ಕೆ ಜನಬೆಂಬಲ ಸಿಗುತ್ತಿಲ್ಲ.
ಬೆಳಗಾವಿಯಲ್ಲೂ ಹೆಚ್ಚುಕಡಿಮೆ ಇದೇ ಸ್ಥಿತಿ ಇದೆ. ಬೆಳಗಾವಿಯ ಕೆಲ ಕನ್ನಡಿಗ ಹುಡುಗರನ್ನು ಮಾತನಾಡಿಸಿದಾಗಲೂ ನನಗೆ ನಿರಾಶೆಯೇ ಕಂಡುಬಂತು. ಇಲ್ಲಿರುವ ಆಯಾಮ ಎಂದರೆ ಹೇಗಿದ್ದರೂ ಕರ್ನಾಟಕ ಸರ್ಕಾರ ಸವಲತ್ತು ಕೊಡುತ್ತಿಲ್ಲ. ಹಾಗಿದ್ದ ಮೇಲೆ ಮಹಾರಾಷ್ಟ್ರವಾದರೇನು ಕರುನಾಡಾದರೇನು ಎಂಬ ಅಸಡ್ಡೆ.

Rakesh Shetty's picture

ಮೀಸಲಾತಿ ಇನ್ನಿತರೇ ಸೌಲಭ್ಯದ ರುಚಿ ನೋಡಿದವರಿಗೆ 'ಮರಳಿ ಗೂಡಿ'ಗೆ ಬರುವ ತವಕ ಕಡಿಮೆಯಾಗಿದ್ದರೂ ಅವರನ್ನು ದೂರುವಂತಿಲ್ಲ ಹರ್ಷ.ಬರ್ತೀವಿ ಬರ್ತೀವಿ ಅಂದಾಗ ಕರ್ಕೋಬೇಕಾದವ್ರು ಗಟ್ಟಿಯಾಗಿ ಕರಿಲಿಲ್ಲ. ಈಗ ಇವೆಲ್ಲ ಕಗ್ಗಂಟಾಗಿ ಬಿಟ್ಟಿದೆ.

asuhegde's picture

ಗಡಿಗಳನ್ನು ವಿವಾದಾಸ್ಪದವಾಗಿಯೇ ಉಳಿಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರು ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಹಾಗಾಗಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಷ್ಟ ಸಾಧ್ಯ. ಕೇಂದ್ರ ಸರ್ಕಾರ ಏನಾದರೂ ದಿಟ್ಟ ನಿರ್ಧಾರ ತೆಗೆದುಕೊಂಡು ಮುಂದುವರಿದರೆ ಸಾಧ್ಯವೇನೋ...

ಆಂಧ್ರದ ಗಡಿಯಲ್ಲಿ ತೆಲುಗು ಭಾಷಿಗರ, ತಮಿಳ್ನಾಡು ಗಡಿಯಲ್ಲಿ ತಮಿಳು ಭಾಷಿಗರ ಸಂಖ್ಯೆಯೊ ಸಾಕಷ್ಟಿವೆ. ಆದರೆ ಅಲ್ಲಿನ ಜನತೆ ಒಗ್ಗಿಕೊಂಡಿದ್ದಾರೆ, ಕನ್ನಡಿಗರು ಯಾರು ತಮಿಳು/ತೆಲುಗು ಭಾಷಿಗರು ಯಾರು ಅನ್ನೋದೇ ಗೊತ್ತಾಗದಷ್ಟು, ಅಷ್ಟೇ.

Rakesh Shetty's picture

ಸಮಸ್ಯೆ ಬಗೆ ಹರಿಸುವ ಇಚ್ಚಾ ಶಕ್ತಿಯಿರುವಂತ ಪಕ್ಷದ ಅವಶ್ಯಕತೆ ಕರ್ನಾಟಕದಲ್ಲಿದೆ. ಈಗಿರುವ ಎಲ್ಲಾ ಪಕ್ಷಗಳು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದು ಬೆಲೆ ಬೇಯಿಸಿಕೊಳ್ಳುವವರೇ ಆಗಿದ್ದಾರೆ. ಕೇಂದ್ರ ಸರ್ಕಾರ ಯೋಚಿಸುವುದಿಲ್ಲ, ಯೋಚಿಸುವಂತೆ ಮಾಡಬೇಕಾದವರು ರಾಜ್ಯ ಸರ್ಕಾರದವರು ಆದರೆ ಅದೇ ಆಗುತ್ತಿಲ್ಲ.

asuhegde's picture

ರಾಜಕೀಯಕ್ಕೆ ಇಳಿದ ನಂತರ ಎಲ್ಲ ಹೋರಾಟಗಾರರೂ ಒಂದೇ
ತಮ್ಮ ಬೇಳೆ ಬೇಯದೇ ಉಳಿಯಬಾರದೆಂಬ ಇಚ್ಛೆಯೊಂದೇ!!!

Rakesh Shetty's picture

ಹಾಂ! ನಿನ್ನೆ ಗೆಳೆಯನೊಂದಿಗೆ ಉದಯವಾಗಲಿರುವ ಪ್ರಾದೇಶಿಕ ಪಕ್ಷವೊಂದರ ಬಗ್ಗೆ ಮಾತಾಡುವಾಗ ನನ್ನ ಮನದಲ್ಲೂ ಇದೆ ಪ್ರಶ್ನೆ ಕೊರೆಯುತ್ತಿತ್ತು.ರಾಜಕೀಯಕ್ಕೆ ಇಳಿದ ಮೇಲೆ ಎಲ್ಲರು ಒಂದೇ ಅನ್ನೋ ಮಾತನ್ನ ಇವರಾದರು ಸುಳ್ಳು ಮಾಡ್ತಾರಾ ಅಂತ,