ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಸಿ ಸೋಮಶೇಖರಯ್ಯ
ಪರಿಚಯ
ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ಕೆಲವು ಪುಸ್ತಕಗಳು ಪ್ರಕಟವಾಗಿವೆ.
ಅನನ್ಯ ಅಲ್ಲಮ ೬ (೧)
ಉಜ್ಜಯಿನಿಯ ಗುಹೆಯಲ್ಲಿ ಕಾಳಿಚರಣನನ್ನು , ಸಂಕಲೆಯನ್ನು ಅನುಗ್ರಹಿಸಿದ ಅಲ್ಲಮನು , ತ್ರಿಯಂಬಕೇಶ್ವರಕ್ಕೆ ಬಂದನು . ಅಲ್ಲಿ ಗೋದಾವರಿ ನದಿ ಮೂಲದ ಬ್ರಹ್ಮಗಿರಿಯ ಗುಹೆಗಳಲ್ಲಿ ಅನೇಕ ತಪಸ್ವಿಗಳಿದ್ದರು , ಅವರ ಒಡನಾಟದಲ್ಲಿ , ಅಲ್ಲಿಯ ರಮಣೀಯತೆಗೆ ಮನಸೋತು ಕೆಲ ಕಾಲ ಅಲ್ಲಿ ನಿಂತನು . ಆದರೆ ಅವನಿಗೆ ಅರಿವಿತ್ತು ; ತನ್ನ ಕಲ್ಯಾಣದ ವಾಸ್ತವ್ಯದ ದಿನಗಳು ಹತ್ತಿರವಾಗುತ್ತಿವೆಯೆಂದು . ಒಂದು ದಿನ ಇಳಿ ಸಂಜೆಯ ಸಮಯದಲ್ಲಿ ಬ್ರಹ್ಮಗಿರಿಯ ತಪ್ಪಲಿನ ಬೃಹತ್ ಕಪ್ಪು ಶಿಲಾಖಂಡದ ಮೇಲೆ ಕುಳಿತ ಅಲ್ಲಮನಿಗೆ , ಮುಂದೆ ಹಾಸಿ ಹರಡಿ ನಿಂತ ದಟ್ಟ ಹಸಿರು ಕಾನನ ಪಂಕ್ತಿಯು ಕಣ್ಣು ಹರಿದತ್ತೆಲ್ಲಾ ಪಸರಿಸಿದ ಮನೋಹರ ದೃಶ್ಯ ಚಿತ್ತವನ್ನು ಸೆರೆ ಹಿಡಿದಿತ್ತು . ಬಂಡೆಯ ಬುಡದಲ್ಲಿ ಬೆಳೆದಿದ್ದ ಹುಲ್ಲಿನ ನಡುವೆ ಗೂಡು ಕಟ್ಟಿಕೊಂಡಿದ್ದ ಮೊಲಗಳು , ಆ ಸಂಜೆಯ ಸೊಬಗಿನಲ್ಲಿ ಗೂಡುಗಳಿಂದ ಹೊರ ಬಂದು ಚಿನ್ನಾಟದಲ್ಲಿ ತೊಡಗಿದ್ದವು . ಅದು ಅಲ್ಲಮನಿಗೆ ಹೊಸದೇನಾಗಿರಲಿಲ್ಲ , ನಿತ್ಯ ಸಂಜೆ ಅಲಿಗೆ ಬರುತ್ತಿದ್ದ ಅಲ್ಲಮನಿಗೆ ಮೊಲಗಳ ಆಟ ಮನಕ್ಕೆ ಮುದ ನೀಡುವ ಮೋಜಿನ ವಿಷಯವಾಗಿತ್ತು . ಇಂದೂ ಸಹ ಮೊಲಗಳು ಅವಿತುಕೊಳ್ಳುವುದು , ಅವಿತುಕೊಂಡವನ್ನು ಇತರ ಮೊಲಗಳು ಹುಡುಕಾಟ ನಡೆಸುವುದು , ಮರಿ ಮೊಲಗಳನ್ನು ತಾಯಿ ಮೊಲಗಳು ಎಚ್ಚರದಿಂದ ಆಟಕ್ಕೆ ಬಿಡುವುದು ಮುಂತಾದ ಆಟಗಳಲ್ಲಿ ತಲ್ಲೀನವಾಗಿದ್ದವು . ಆ ಪುಟ್ಟ ಜೀವಿಗಳ ಭಾವ ಪ್ರಪಂಚದೊಡನೆ ಒಂದಾಗುತ್ತಾ , ಮುಗುಳ್ನಗುತ್ತಾ ಅಲ್ಲಮನು ಕುಳಿತಿದ್ದನು . ಇಂತಹ ಮೋಜಿನ ಸಂತೆಯ ನಡುವೆ ನಡೆದ ಒಂದು ಘಟನೆ ಇಡೀ ಮೊಲಗಳ ಸಮುದಾಯ ಬೆಚ್ಚು ಬಡಿದು ಮಂಕು ಹಿಡಿದು ಕ್ಷಣಾರ್ಧದಲ್ಲಿ ಓಡಿ ಮರೆಯಾಗಿ ತಮ್ಮ ಬಿಲಗಳಲ್ಲಿ ಅವಿತುಕೊಳ್ಳುವಂತೆ ಮಾಡಿತು . ಅದೆಲ್ಲಿತ್ತೋ ಒಂದು ಘಟ ಸರ್ಪ, ಮಿಂಚಿನಂತೆ ಎರಗಿ , ಮೊಲಗಳ ಗುಂಪೊಂದರ ಸಲಗ ಮೊಲವನ್ನು ಹಿಡಿಯಿತು . ಸರ್ಪದ ಬಾಯಿಗೆ ಸಿಕ್ಕ ಮೊಲ ವಿಲ ವಿಲನೆ ಒದ್ದಾಡುತ್ತಾ ಬಿಡಿಸಿಕೊಳ್ಳುವ ವ್ಯರ್ಥ ಪ್ರಯತ್ನದೊಡನೆ ಸೆಣಸುತ್ತಿತ್ತು . ರೋಷದಿಂದ ಸರ್ಪ ಹೆಡೆ ಆಡಿಸುತ್ತಾ ತನ್ನ ಕೆಂಗಣ್ಣಿನಿಂದ ಬಾಯಲ್ಲಿದ್ದ ಮೊಲವನ್ನು ದುರುಗುಟ್ಟಿ ನೋಡುತ್ತಾ ಅದನ್ನು ಸ್ಥಂಭೀಭೂತಗೊಳಿಸುತ್ತಿತ್ತು .
ಸರ್ಪದ ಈ ನಡೆ ಅಲ್ಲಮನನ್ನು ಚಕಿತಗೊಳಿಸಿತು , ಮೊಲಗಳು ಉತ್ಸಾಹದಿಂದ ತಮ್ಮ ಕ್ರಿಯೆಗಳಲ್ಲಿ ತೊಡಗಿದ್ದಾಗ ಅಲ್ಲಿ ಮೃತ್ಯು ಒಂದು ಅಡಗಿರುವುದರ ಸದ್ದೇ ಇರಲಿಲ್ಲ . ಅಷ್ಟು ಜಾಗರೂಕತೆಯಿಂದ ತನ್ನ ಇರವನ್ನು ತೋರಗೊಡದೆ , ಆ ಅಮಾಯಕ ಮೊಲಗಳ ನಾಯಕನನ್ನು ಗುರಿ ಹಿಡಿದು ಎರಗಿ ಕಬಳಿಸಿದ ಸರ್ಪ ಅಲ್ಲಮನ ವಿಚಾರಶಕ್ತಿಯನ್ನು ಜಾಗೃತಗೊಳಿಸಿತು . ಕಲ್ಯಾಣದಲ್ಲಿ ಬಸವಣ್ಣನವರು ಬೆಳ್ಳಗಿರುವುದೆಲ್ಲವೂ ಹಾಲೆಂದು ಬಗೆದಿದ್ದಾರೆ . ತಾವು ಮಾಡುತ್ತಿರುವ ಕಾರ್ಯಗಳಿಗೆ ಸಕಲರ ಬೆಂಬಲವನ್ನೂ ಆಶಿಸುತ್ತಿದ್ದಾರೆ . ಆ ಸರಳ ಮನಸ್ಸು ಅರಿಯದು ಸನಿಹವೇ ಮೈಮರೆತಂತೆ ನಟಿಸುತ್ತಾ ಮಲಗಿರುವ ಅನಾದಿ ಕಾಲದ ಘಟ ಸರ್ಪ , ತನ್ನ ಬಲಿಗಾಗಿ ಎಚ್ಚರದಿಂದ ಕಾಯುತ್ತ , ಅಮಾಯಕತೆ ನಟಿಸುತ್ತ , ನಿದ್ರೆಯ ನಟನೆಯಲ್ಲಿದೆ ಎಂಬುದನ್ನು . ಅಲ್ಲಮನ ಒಳಗಣ್ಣಿನ ಮುಂದೆ ಸುಳಿದ ಈ ಭಯಂಕರ ದೌರ್ಭಾಗ್ಯದ ಒಳ ಸುಳಿಯ ಬಗ್ಗೆ ಚಿಂತಿತರಾಗಿದ್ದಾಗಲೇ ,
" ಏನು ಯೋಚಿಸುತ್ತಿರುವೆ ಅಲ್ಲಮ ?,,
ಅಲ್ಲಮನು ತಲೆ ಎತ್ತಿ ನೋಡಿದನು ಗಳಿತ ಶರೀರದ , ಕೆನ್ನೆಯ ತೆರೆಗಳ , ಕವಡೆಯ ಸರಗಳ , ನೊಸಲ ಅಗಲ ಕುಂಕುಮದ , ಕೋಲೂರಿದ ಮುದುಕಿ ಬೊಚ್ಚು ಬಾಯಲ್ಲಿ ನಗುತ್ತಾ ನಿಂತಿದ್ದಳು " ಓ , ನೀನೇ ,, ಎಂದು ಅಲ್ಲಮನು ಅನ್ಯ ಮನಸ್ಕನಾದನು .
" ಈ ಸಮಯದಲ್ಲಿ ನಾನು ಬಂದುದು ನಿನಗೆ ಹಿಡಿಸಲಿಲ್ಲವೇ ? ,,
" ಬರುವುದೂ ಬಿಡುವುದು ನಿನ್ನ ಇಷ್ಟ , ಅದನ್ನು ಪ್ರಶ್ನಿಸಲು ನಾನಾರು ? , ಆದರೆ ಈಗೇಕೆ ಈ ಭೈರವಿಯ ವೇಷ ? ,,
" ಭೈರವದ ಮುನ್ನುಡಿಗೆ ಭೈರವಿಯ ವೇಷ ,,
ಆಗ ಅಲ್ಲಮನು , " ವೇಷ ಭೈರವವಾದರೂ ಅಷ್ಟೇ , ಕುಸುಮ ಮೋಹಿನಿಯಾದರೂ ಅಷ್ಟೇ , ಪರಿಣಾಮಗಳಲ್ಲಿ ವ್ಯತ್ಯಾಸಗಳಿಲ್ಲ ,,
ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ
ಗಂಡ ಗಂಡರನರಸಿ ತೊಳಲಿ ಬಳಲುತ್ತೈದಾರೆ
ಖಂಡ ಮಂಡಲದೊಳಗೆ ಕಂಡೆನೊಂದು ಚೋದ್ಯವ .
ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು
.ದಿವಾರಾತ್ರಿ ಉದಯದ ಬೆಳಗನು ಕತ್ತಲೆ ನುಂಗಿತ್ತು
ಗುಹೇಶ್ವರನಲ್ಲಿಯೇ ನಿರ್ವಯಲಾಯಿತ್ತು
ಈ ಮಾತುಗಳನ್ನು ಕೇಳಿದ ಭೈರವಿ ಕಂಪಿಸಿದಳು ,
" ಹಾಗಾದರೆ ಸರ್ವನಾಶವನ್ನು ತಡೆಗಟ್ಟಬಲ್ಲೆಯಾ ? ,,
" ಅದು ನನ್ನ ಕೆಲಸವಲ್ಲ ,ನಾನು ಸ್ಥಿತಿ ಕರ್ತನಲ್ಲ , ಸಂಹಾರಕರ್ತನು ಮೊದಲೇ ಅಲ್ಲ ,,
" ಹಾಗಾದರೆ ಬರಿಯ ಮೂಕ ಪ್ರೇಕ್ಷಕನೇನು ? ,,
’ ಏಕೆ ಕೆಣಕುವೆ ಭೈರವಿಯ ವೇಷಧಾರಿ ? , ಈ ಜಗತ್ತಿನ ಸೃಷ್ಟಿ ಸ್ಥಿತಿಗಳು ನನ್ನವಲ್ಲ , ಅದಕ್ಕೆ ಬೇರೆ ಶಕ್ತಿಗಳಿವೆ . ಆದರೆ ಸರ್ವನಾಶದ ಸಮಯದಲ್ಲಿ ಏನನ್ನು ಉಳಿಸಿಕೊಳ್ಳಬೇಕು , ಏನನ್ನು ಉಳಿಸಿಕೊಳ್ಳಬಹುದು, ಎಂಬ ಚಿಂತನೆಯಲ್ಲಿದ್ದೇನೆ ,,
" ಏನನ್ನು ಉಳಿಸಿಕೊಳ್ಳಲು ಬಯಸುವೆ ? ,,
" ಈ ನಿನ್ನ ಈ ಪ್ರಶ್ನೆಗೆ ನಿನಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ ಎಂದುಕೊಂಡಿದ್ದೇನೆ ,,
" ಏಕೆ , ಅಡ್ಡಿಯಾದೇನೆಂಬ ಭಯವೇ ? ,,
" ನನ್ನ ಭಯದ ಅಗತ್ಯಗಳು ಕಳೆದು ಬಹಳ ದಿನಗಳಾದುವೆಂದು ನೀನು ಚನ್ನಾಗಿ ಬಲ್ಲೆ ,,
" ಏಕೆ ಅಲ್ಲಮ ನನ್ನ ಕರ್ತವ್ಯಗಳನ್ನು ನಾನು ನಿರ್ವಹಿಸಬಾರದೆ ? ,,
" ನಿನ್ನ ಕರ್ತವ್ಯಗಳನ್ನು ನೀನು ನಿರ್ವಹಿಸಬಹುದು , ಆದರೆ ನನಗೂ ಇರುವ ಕರ್ತವ್ಯಗಳನ್ನು ನಾನೂ ನಿರ್ವಹಿಸಲೇಬೇಕು . ನಿನ್ನ ಕರ್ತವ್ಯಗಳಿಗೆ ನೀನು ಹೇಗೆ ಬಾಧ್ಯಳೋ ಹಾಗೆ ನಾನೂ ಸಹ , ಆ ಸತ್ಯವನ್ನು ಒಪ್ಪಿಕೊಳ್ಳಲು ನೀನೇ ಸಿದ್ದಳಿಲ್ಲ ,,
" ಅಂದರೆ ನನ್ನ ನಿನ್ನ ಸಂಘರ್ಷಗಳಿಗೆ ಕೊನೆ ಇಲ್ಲ ,,
ಸಶಬ್ದವಾಗಿ ನಗುತ್ತಾ ಕೈಯಲ್ಲಿದ್ದ ಕೋಲಿಗೆ ಕಟ್ಟಿದ್ದ ಗೆಜ್ಜೆಗಳ ಸದ್ದುಗೈಯುತ್ತಾ " ನೋಡೋಣ ಮುಂದಿನ ನಾಟಕದ ರಂಗಭೂಮಿ ಕಲ್ಯಾಣ , ಅಲ್ಲಿಯೇ ಸಂಧಿಸುತ್ತೇನೆ ,,
ಎನ್ನುತ್ತಾ ಮುದುಕಿ ಅಲ್ಲಿಂದ ಸರಿದಳು .
ಅಲ್ಲಮನ ಮುಖದಲ್ಲಿ ಪರಿಹಾಸದ ನಗೆ ಮೂಡಿತು . ’ ಇದು ವರೆಗೆ ಕಲ್ಯಾಣಕ್ಕೆ ನಾನು ಕಳುಹಿಸಿದುದು , ಕಾರ್ಯಕರ್ತರು ಮತ್ತು ಅನುಯಾಯಿಗಳ ಪಡೆಯನ್ನು , ಆದರೆ ಈಗ ನಿಚ್ಚಳವಾಗುತ್ತಿದೆ , ಅಲ್ಲಿ ನಾಯಕತ್ವ ವಹಿಸುವವರು ಬೇಕು . ಸದ್ಯದಲ್ಲೇ ಅಪಾಯವೇನೂ ಕಂಡು ಬರುತ್ತಿಲ್ಲ , ಆದರೆ ದೂರ ಭವಿಷ್ಯದಲ್ಲಿ ಅಡಗಿ ಕುಳಿತಿರುವ ಅಪಾಯದ ಕಾಲ ಸರ್ಪದ ಕರಿ ನೆರಳು ಇಣುಕಿ ಕಾಣುತ್ತಿದೆ . ಈಗ ಅಲ್ಲಿರುವ ಮಾಚಿದೇವರು , ಮೋಳಿಗೆ ಮಾರಯ್ಯಗಳು, ಅಂಬಿಗರ ಚೌಡಯ್ಯ ಇವರೆಲ್ಲ ಸಮಯ ಒದಗಿದರೆ ವೀರ ಯೋಧರಾಗಬಲ್ಲರು ; ಸೂತ್ರಧಾರಿಗಳಾಗಲಾರರು . ಬಾಲಕನಾದರೂ ಚನ್ನಬಸವಣ್ಣ ಸೂತ್ರ ಹಿಡಿಯ ಬಲ್ಲ ಸಮರ್ಥ . ಆದರೆ ಇದು ಒಬ್ಬ ನಾಯಕನಿಂದ ಬಗೆ ಹರಿಯುವ ಸಮಸ್ಯೆಯಾಗಲಾರದು ಅನೇಕಮುಖಿ ನಾಯಕತ್ವ ಬೇಕು . ಅನೇಕ ದಿಕ್ಕಿನ ರಕ್ಷಣೆ ಬೇಕು ; ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಸಹ . ’ ಯಾರು ಸಮರ್ಥರು ? ಎನ್ನುವ ಆಲೋಚನೆಯೊಂದಿಗೆ ಅಲ್ಲಮನು ಅಂದಿನ ಇರುಳನ್ನು ಕಳೆದನು .
ಮರುದಿನ ಸಂಜೆಯ ವೇಳೆಗೆ ಪುನಃ ಅದೇ ಬಂಡೆಯಮೇಲಕ್ಕೆ ತೆರಳಿ ನಿಸರ್ಗ ನಿರೀಕ್ಷಣೆಯಲ್ಲಿ ಕುಳಿತ ಅಲ್ಲಮನ ಮನೋಪ್ರಪಂಚದಲ್ಲಿ ಧೀರ ಬಾಲಕನೊಬ್ಬನ ಸೂಕ್ಷ್ಮ ಚಿತ್ರ , ಮಸುಕು ಮಸುಕಾಗಿ ಮೂಡತೊಡಗಿತು . ಅಲ್ಲಮನ ಬಗೆಗಣ್ಣಿನ ಮುಂದೆ ಕಂಡುಬರುತ್ತಿದ್ದ , ಉನ್ನತ ಪರ್ವತಾವಳಿಯ ಕೋಡುಗಲ್ಲ ಮೇಲೆ ಕೈ ಚಾಚಿ ನಿಂತ ; ಮನದಲ್ಲಿ ಮೂಡಿದ ಸಾತ್ವಿಕ ಬಯಕೆಗಳನ್ನು ಈಡೇರಿಸಿಕೊಂಡೇ ತೀರುವೆನೆಂಬ ಛಲದ ಮುಖ ಮುದ್ರೆಯ ಈ ಬಾಲಕ ಯಾರು ? ’ ಓ ! ಇವನೇ , ನಮ್ಮವನು , ಚಿಂತೆಯಿಲ್ಲ ಇವನು ! ಎಂದುಕೊಂಡ ಅಲ್ಲಮನ ಮನಸ್ಸಿನಲ್ಲಿ ಬಾಲಕನ ಜೀವನ ಚಿತ್ರ ಸುಳಿದಾಡತೊಡಗಿತು .
ಸೊನ್ನಲಿಗೆಯ ಕುಡು ಒಕ್ಕಲಿಗರ ನಾಯಕ ಮೋರ್ಡಿ ಮುದ್ದಯ್ಯ ಸುಗ್ಗಲಾದೇವಿಯವರ ಪ್ರೇಮದ ಕುವರ ಇವನು , ಮುದ್ದಯ್ಯ ಸುಗ್ಗಲಾದೇವಿ ದಂಪತಿಗಳಿಗೆ ತಾರುಣ್ಯ ಕಳೆದು ವಾರ್ಧಕ್ಯದ ಚಿನ್ಹೆಗಳು ಮೂಡತೊಡಗಿದರೂ ಮಕ್ಕಳ ಭಾಗ್ಯ ಮಾತ್ರ ದೊರಕಿರದ ಅಭಾಗ್ಯರು . ಇದರಿಂದ ಚಿಂತಿತರಾಗಿದ್ದ ದಂಪತಿಗಳ ಮನೆಗೆ ಒಮ್ಮೆ ಆಗಮಿಸಿದ್ದ ಗುರು ರೇವಣಸಿದ್ದರೊಡನೆ ಸುಗ್ಗಲಾದೇವಿಯ ಪ್ರಾಣ ಮಿತ್ರಳು ಮತ್ತು ಆ ನಾಡಿನ ಅರಸಿಯೂ ಆಗಿದ್ದ ಚಾಮಲದೇವಿಯು ತನ್ನ ಗೆಳತಿಯ ಬಾಳು , ಮಕ್ಕಳಿಲ್ಲದ ಬರಡು ಬಾಳಾಗಿರುವ ,ಅದರಿಂದ ನಿತ್ಯ ಚಿಂತಿತಳಾಗಿರುವ ಗೆಳತಿಯ ನೋವನ್ನು ಪರಿಹರಿಸುವಂತೆ ಬೇಡಿದಳು , ಆಗ ರೇವಣಸಿದ್ದರು , ಮನಸ್ಸಿನಲ್ಲಿ , ಇಂತಹ ಯಾತನೆಯನ್ನು ತುಂಬಿಕೊಂಡೂ , ಶಾಂತಳಾಗಿರುವ , ತನಗೆ ಇಂಥದು ಬೇಕು ಎಂದೂ ಸಹ ಬೇಡದ , ಸುಗ್ಗಲಾದೇವಿಯ ಮನಃಸ್ಥಿತಿಗೆ ಮೆಚ್ಚುತ್ತ , " ತಾಯೆ ಚಿಂತೆ ಬಿಡು , ನಿನ್ನ ಬಸಿರಿನಲ್ಲಿ ಕಾರಣಪುರುಷನೋರ್ವನು ಜನಿಸುವನು, ಅವನನ್ನು ’ ಸಿದ್ದರಾಮನೆಂಬ ಹೆಸರಿನಿಂದ ಕರೆಯಿರಿ , ಎಂದು ಆಶೀರ್ವದಿಸಿದರು . ಬಹು ಕಾಲದಿಂದಲೂ ಮಕ್ಕಳಿಗಾಗಿ ಹಂಬಲಿಸಿ ತಮಗೆ ಆ ಪುಣ್ಯವೇ ಇಲ್ಲವೆಂದುಕೊಂಡಿದ್ದ ದಂಪತಿಗಳಿಗೆ , ಇಳಿವಯಸ್ಸಿನಲ್ಲಿ ಮುದ್ದಿನ ಕಂದನೊಬ್ಬನು ಜನಿಸಿದನು . ಇದರಿಂದ ಮುದಗೊಂಡ ಮುದ್ದಯ್ಯ ತನ್ನ ಕುಲದೇವರಾದ ಧೂಳಿ ಮಾಂಕಾಳನ ಹೆಸರನ್ನೇ ಶಿಶುವಿಗೆ ಇಟ್ಟನು . ಮಗು ಬೆಳೆಯತೊಡಗುತ್ತಿದ್ದಂತೆಯೇ ಧೂಳಿಮಾಂಕಾಳನೆಂದು ಕರೆದರೆ ಲಕ್ಷಿಸುತ್ತಲೇ ಇರಲಿಲ್ಲ , ಸಿದ್ದಾರಾಮನೆಂದು ಕರೆದರೆ ಮಾತ್ರ ಪ್ರತಿಕ್ರಿಯಿಸಿ ಲಕ್ಷ್ಯ ಕೊಡುತ್ತಿತ್ತು . ಹೀಗಾಗಿ ಆ ಮಗು ಸಿದ್ದರಾಮನೆಂದೇ ಕರೆಸಿಕೊಳ್ಳತೊಡಗಿತು .
ಬಾಲ್ಯದಲ್ಲಿ ಮೊದ್ದು ಕಂದನಂತಿದ್ದ , ಸದಾ ಅನ್ಯಮನಸ್ಕನಾಗಿರುತ್ತಿದ್ದ ಸಿದ್ದರಾಮನು , ಲೋಕದ ದೃಷ್ಟಿಯಲ್ಲಿ ಮೊದ್ದು ಬಾಲಕನೆಂಬ ತಾತ್ಸಾರಕ್ಕೇ ಒಳಗಾದನು . ಇಂತಹ ಬಾಲಕನಿಗೆ ಒಮ್ಮೆ ಮಾಗಿದ ನವಣೆಯ ಹೊಲವನ್ನು ಕಾವಲು ಕಾಯುತ್ತಿದ್ದಾಗ , ಆಗಮಿಸಿದ ಜಂಗಮನೋರ್ವನು ತನಗೆ ಹಸಿವಾಗಿದೆ ಎಂದನು . ಬಂದ ಜಂಗಮನನ್ನು ಕಂಡ ಮೊದ್ದು ಸಿದ್ದರಾಮನಿಗೆ ಅವನು ವಿಶೇಷ ವ್ಯಕ್ತಿಯಂತೆ ಕಂಡು ಬಂದನು , ಅವನು ಜನ್ಮ ಜನ್ಮಾಂತರಗಳಲ್ಲಿಯೂ ತನ್ನ ಬಂಧುವೆಂಬ ಭಾವನೆ ಮನಸ್ಸಿನಲ್ಲಿ ಮೊಳೆತು , ತನ್ನಯ್ಯ , ತನ್ನೊಡೆಯ ಎಂಬ ಕಕ್ಕುಲತೆಯಿಂದ ಜಂಗಮನನ್ನು ಆದರಿಸಲು ಉದ್ಯುಕ್ತನಾದ ಬಾಲಕನು , ತಕ್ಷಣ ಹೊಲದ ನವಣೆಯನ್ನು ಬೆಳಸೆ ಮಾಡಿ ಬಂದ ಜಂಗಮನಿಗೆ ತಿನ್ನಲು ಕೊಟ್ಟನು ,
" ಇವನ್ನು ತಿನ್ನುತ್ತೇನೆ , ಆದರೆ ಅಷ್ಟಕ್ಕೆ ನನ್ನ ಹಸಿವು ತೀರದು , ಮನೆಗೆ ಹೋಗಿ ನವಣೆಯ ಓಗರವನ್ನು ಮಾಡಿಸಿ , ಮೊಸರು ಕಲೆಸಿ ತೆಗೆದುಕೊಂಡು ಬಾ ,, ಎಂದು ಆಜ್ಞಾಪಿಸಿದರು .
" ಓ , ಈಗಲೇ ತರುತ್ತೇನೆ , ಆದರೆ ನಾನು ಬರುವವರೆಗೆ ನೀವು ಎಲ್ಲೂ ಹೋಗಕೂಡದು , ಎಂದು ಹೊರಡಲನುವಾಗಿ , ತಿರುಗಿ ಜಂಗಮನನ್ನು ನೋಡಿ ,
" ನಿಮ್ಮ ಹೆಸರೇನೆಂದಿರಿ ? ನೀವು ಎಲ್ಲಿಯವರು ? , ಎಂದು ಪ್ರಶ್ನಿಸಿದನು . ಆಗ ನಗುತ್ತಾ ಜಂಗಮನು
" ನನ್ನ ಹೆಸರು ಮಲ್ಲಯ್ಯ , ನಾನು ಶ್ರೀಶೈಲಪರ್ವತ ಪ್ರಾಂತ್ಯದ ನಿವಾಸಿ ,, ಎಂದು ಉತ್ತರ ನೀಡಿದನು .
ಓಡುತ್ತಾ ಮನೆಗೆ ತಲುಪಿದ ಸಿದ್ದರಾಮನು, ತಾಯಿಯ ಹತ್ತಿರ ಮೊಸರನ್ನವನ್ನು ಬೇಡಿದನು . ಸುಗ್ಗಲಾದೇವಿಗೆ ಐಶ್ವರ್ಯವೇ ಇಳಿದಂತಾಯಿತು . ಎಂದೂ ಇಂಥದು ಬೇಕು ಎಂದು ಕೇಳದ ಮಗ , ಹೀಗೆ ಮುಂದೆ ನಿಂತು ಮೊಸರನ್ನವನ್ನು ಬೇಡಿದರೆ , ತಾಯಿಯ ಹೃದಯ ಎಷ್ಟು ಹಿಗ್ಗಬೇಡ ! . ಮರು ಮಾತಾಡದೆ ಮಗನಿಗೆ , ಅವನು ಬೇಡಿದ ಬಿಸಿ ಓಗರವನ್ನು ಮಾಡಿ ಮೊಸರು ಬೆರೆಸಿ ಹದವಾಗಿ ಕಲೆಸಿ , ಬುತ್ತಿಯ ಕಲ್ಲಿಯಲ್ಲಿ ಕಟ್ಟಿ ಕೊಟ್ಟಳು .
- Login or register to post comments
- 118 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಚೆನ್ನಾಗಿದೆ. ಮುಂದುವರೆಸಿರಿ.
ಪ್ರತಿಕ್ರಿಯೆಗೆ ಧನ್ಯವಾದಗಳು ಆತ್ಮೀಯ ಕವಿನಾಗರಾಜ್ ಅವರೆ