ಕರ್ನಾಟಕ ಕ್ರಿಕೆಟ್ - ೧
ನಿನ್ನೆ ಕರ್ನಾಟಕ - ತಮಿಳುನಾಡು ತಂಡಗಳ ನಡುವಿನ ಪಂದ್ಯದ ಬಗ್ಗೆ ಸಂಪದದಲ್ಲಿ ಪ್ರತಿಕ್ರಿಯೆ ಇತ್ತು. ಸಂಪದದಲ್ಲಿ 'ಕರ್ನಾಟಕ ಕ್ರಿಕೆಟ್' ಬಗ್ಗೆ ಓದಿ ಬಹಳ ಆನಂದವಾಯಿತು. ಸಣ್ಣಂದಿನಿಂದಲೂ ರಣಜಿ ಪಂದ್ಯಗಳನ್ನು ಬಹಳ ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ರಣಜಿ ಟ್ರೋಫಿ, ಕರ್ನಾಟಕ ಕ್ರಿಕೆಟ್ ಮತ್ತು ಕೆಲವು ಆಟಗಾರರ ಬಗ್ಗೆ ಸಂಪದದಲ್ಲಿ ನನಗೆ ತಿಳಿದಷ್ಟು ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ.
ವೀಕ್ಷಕ ವಿವರಣೆ - ಆಗ ಬೆಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆ ಕನ್ನಡದಲ್ಲಿ ಇರುತ್ತಿತ್ತು. ನನಗೆ ಸಮೀಪವಿದ್ದ ಮಂಗಳೂರು ಆಕಾಶವಾಣಿ ಕೆಲವೊಂದು ಆಯ್ದ ಪಂದ್ಯಗಳ ವೀಕ್ಷಕ ವಿವರಣೆಯನ್ನು ಮಾತ್ರ ಪ್ರಸಾರ ಮಾಡುತ್ತಿತ್ತು. ಕಷ್ಟದಿಂದ ಬೆಂಗಳೂರು ಅಥವಾ ಧಾರವಾಡ ಕೇಂದ್ರಗಳ ಸಿಗ್ನಲ್ ಸಿಗುತ್ತಿತ್ತು. ಆದರೂ ಬಿಡದೆ ವೀಕ್ಷಕ ವಿವರಣೆ ಕೇಳುವ ಗೀಳು ಹತ್ತಿತ್ತು. "ಮತ್ತೊಮ್ಮೆ ರಘುರಾಮ್ ಭಟ್, ಈ ಬಾರಿ ಕ್ರೀಸ್ ಹಿಂದಿನಿಂದ ಎಸೆದ ಎಸೆತ, ಆಫ್ ಸ್ಟ್ಂಪಿನ ಹೊರಗೆ ಪುಟಿದು ಮತ್ತಷ್ಟು ಹೊರಕ್ಕೆ ತೆರಳುತ್ತಿದ್ದ ಚೆಂಡನ್ನು ಹರಿಹರನ್ ಆಡದೆ ಹಾಗೆ ಬಿಟ್ಟಿದ್ದಾರೆ. ಚೆಂಡು ನೇರವಾಗಿ ಸದಾನಂದ್ ವಿಶ್ವನಾಥ್ ಕೈಗೆ..." ಹೀಗಿರುತ್ತಿತ್ತು ಕನ್ನಡ ವೀಕ್ಷಕ ವಿವರಣೆ. ಇನ್ನೆಲ್ಲಿ ಅದನ್ನು ಕೇಳುವ ಭಾಗ್ಯ?
ಪ್ರದೇಶ ಸಮಾಚಾರ - ಕರ್ನಾಟಕದಿಂದ ಹೊರಗೆ ನಡೆಯುತ್ತಿದ್ದ ಕರ್ನಾಟಕ ಆಡುತ್ತಿದ್ದ ಪಂದ್ಯಗಳ ಬಗ್ಗೆ ವಿವರವನ್ನು ಸಂಜೆ ೦೬.೪೦ ರ ಪ್ರದೇಶ ಸಮಾಚಾರವನ್ನು ತಪ್ಪದೆ ಕೇಳಿ ಪಡೆದುಕೊಳ್ಳುತ್ತಿದ್ದೆ. ಪ್ರದೇಶ ಸಮಾಚಾರ ಓದುವವರಲ್ಲಿ ಒಬ್ಬರಿದ್ದರು. ಅವರ ಹೆಸರು ಈಗ ನೆನಪಿಲ್ಲ. ಇವರೆಲ್ಲಾದರೂ ಮಧ್ಯಾಹ್ನದ ೨.೨೫ಕ್ಕೆ ಪ್ರಸಾರವಾಗುವ ಪ್ರದೇಶ ಸಮಾಚಾರ ಓದುವವರಾಗಿದ್ದಲ್ಲಿ ಕರ್ನಾಟಕದ ಹೊರಗೆ ನಡೆಯುತ್ತಿದ್ದ ರಣಜಿ ಪಂದ್ಯದ ಭೋಜನ ವಿರಾಮದ ತನಕದ ಸ್ಕೋರ್-ನ್ನು ತಪ್ಪದೆ ತಿಳಿಸುತ್ತಿದ್ದರು. ಇವರನ್ನು ಬಿಟ್ಟು ಬೇರೆ ಯಾರಾದರು ಓದಲು ಬಂದಲ್ಲಿ ಮಧ್ಯಾಹ್ನದ ಪ್ರದೇಶ ಸಮಾಚಾರ ಕೇಳುವುದೇ 'ವೇಸ್ಟ್' ಎಂದೆನಿಸುತ್ತಿತ್ತು.
ದಿನಪತ್ರಿಕೆಗಳು - ಉದಯವಾಣಿಗೆ ಮೊದಲಿಂದಲೂ ರಣಜಿ ಪಂದ್ಯಗಳೆಂದರೆ ನಂಬಲಾಗದಷ್ಟು ನಿರ್ಲಕ್ಷ್ಯ, ಈಗಲೂ ಅಷ್ಟೆ. ಕರ್ನಾಟಕ ಆಡುವ ರಣಜಿ ಪಂದ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್ ನಷ್ಟು ಚೆನ್ನಾಗಿ ಬೇರೆ ಯಾವ ದಿನಪತ್ರಿಕೆಯೂ ವಿವರಿಸುವುದಿಲ್ಲ. ಆದರೆ ಇಲ್ಲಿ 'ದ ಹಿಂದೂ' ಪತ್ರಿಕೆಯನ್ನು ಮೆಚ್ಚಲೇಬೇಕು. ದಕ್ಷಿಣ ವಲಯದ ಯಾವುದೇ ರಣಜಿ ಪಂದ್ಯವಿರಲಿ, ಯಾವುದೇ ತಂಡಗಳ ನಡುವೆ ಇರಲಿ, ಪ್ರತಿಯೊಂದು ಪಂದ್ಯಕ್ಕೆ ವರದಿಗಾರರನ್ನು ಕಳಿಸಿ ಪ್ರತಿಯೊಂದು ಪಂದ್ಯದ ಸಂಪೂರ್ಣ ವಿವರವನ್ನು ಸ್ಕೋರ್ ಪಟ್ಟಿಯ ಸಹಿತ ಪಂದ್ಯದ ಎಲ್ಲಾ ದಿನಗಳಲ್ಲೂ 'ದ ಹಿಂದೂ' ನೀಡುತ್ತದೆ. ಇದಕ್ಕೆ ಕಾರಣ 'ದ ಹಿಂದೂ' ಸಂಪಾದಕ ಎನ್.ರಾಮ್ ಓರ್ವ ಮಾಜಿ ತಮಿಳುನಾಡು ರಣಜಿ ಆಟಗಾರ (ವಿಕೆಟ್ ಕೀಪರ್ ಬ್ಯಾಟ್ಸ್-ಮನ್).
ರಂಜಿತ್ ಕನ್ವಿಲ್ಕರ್ - ಗುಂಗುರು ಕೂದಲಿನ, ೬.೫ ಅಡಿ ಎತ್ತರದ ಆಕರ್ಷಕ ವ್ಯಕ್ತಿತ್ವದ ಕನ್ವಿಲ್ಕರ್, ಸವ್ಯಸಾಚಿಯ ರೂಪದಲ್ಲಿ ಕರ್ನಾಟಕ ತಂಡದ ಮಧ್ಯ ಕ್ರಮಾಂಕದಲ್ಲಿ ಆಡುತ್ತಿದ್ದರು. ರೋಜರ್ ಬಿನ್ನಿ, ಶರದ್ ರಾವ್ ಇವರೊಂದಿಗೆ ಜೊತೆಯಾಗಿ ಆರಂಭಿಕ ಬೌಲರ್ ಆಗಿ ಯಶಸ್ಸನ್ನು ಕಂಡಿದ್ದ ಆಟಗಾರ. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಮತ್ತು ವಿಕೆಟ್ ಟೇಕರ್ ಬೌಲರ್ ಆಗಿದ್ದ ಕನ್ವಿಲ್ಕರ್ ೧೯೮೨ರಿಂದ ೧೯೮೭ರವರೆಗೆ ಕರ್ನಾಟಕ ತಂಡದ ಪ್ರಮುಖ ಸದಸ್ಯರಾಗಿದ್ದರು. ನಾನು ಕನ್ವಿಲ್ಕರ್ ಅಭಿಮಾನಿಯಾಗಿದ್ದೆ. ಇಟ್ ವಾಸ್ ೧೯೮೮ ಜುಲೈ. ನಾನಾಗ ೧೦ನೇ ತರಗತಿಯಲ್ಲಿದ್ದೆ. ಆ ಋತುವಿನ ರಣಜಿ ಪಂದ್ಯಗಳು ಶುರುವಾಗಲು ಇನ್ನೂ ೪ ತಿಂಗಳಿದ್ದವು. ೧೯೮೮ರ ಜುಲೈ ತಿಂಗಳ ೯ನೇ ತಾರೀಕು. ಆ ದಿನ ಎಲ್ಲಾ ದಿನಪತ್ರಿಕೆಗಳಲ್ಲಿ ಬೆಂಗಳೂರು - ಕನ್ಯಾಕುಮಾರಿ ಐಲ್ಯಾಂಡ್ ಎಕ್ಸ್-ಪ್ರೆಸ್ ರೈಲು ಕೋಯಿಕ್ಕೋಡ್ ಸಮೀಪವಿರುವ ಅಷ್ಟಮುಡಿ ಕೆರೆಯ ಸೇತುವೆಯಿಂದ ಹಳಿ ತಪ್ಪಿ ಹಲವಾರು ಬೋಗಿಗಳು ಕೆರೆಗೆ ಉರುಳಿ ಸುಮಾರು ೧೦೦ ಪ್ರಯಾಣಿಕರು ಮೃತಪಟ್ಟ ಸುದ್ದಿ. ಅದೇ ರೈಲಿನಲ್ಲಿ ಕನ್ವಿಲ್ಕರ್ ಪ್ರಯಾಣಿಸುತ್ತಿದ್ದು ಅಪಘಾತದಲ್ಲಿ ಅವರು ಮೃತಪಟ್ಟಿರುವ ಸುದ್ದಿ ಮರುದಿನ ಮತ್ತೆ ಎಲ್ಲಾ ದಿನಪತ್ರಿಕೆಗಳಲ್ಲಿ. ರಂಜಿತ್ ಕನ್ವಿಲ್ಕರ್ ವಾಸ್ ಒನ್ಲೀ ೨೮. ಆ ದಿನಗಳಲ್ಲಿ ನಾನು ಬಹಳ ನೊಂದುಕೊಂಡಿದ್ದೆ. ಕನ್ವಿಲ್ಕರ್ ಮೃತರಾಗಿ ಇದೀಗ ಎರಡು ದಶಕಗಳೇ ಕಳೆದಿವೆ. ಆದರೂ ಕರ್ನಾಟಕಕ್ಕೆ ಇನ್ನೂ ಒಬ್ಬ ಸಮರ್ಥ ಸವ್ಯಸಾಚಿ ಆಟಗಾರ ಸಿಕ್ಕಿಲ್ಲ. ಜೆ ಅಭಿರಾಮ್ ಉತ್ತಮ್ ಬ್ಯಾಟಿಂಗ್ ಮಾಡುತ್ತಿದ್ದರು ಆದರೆ ಅವರ ಮಧ್ಯಮ ವೇಗದ ಬೌಲಿಂಗ್ ಅತಿ ಸಾಧಾರಣವಾಗಿತ್ತು. ಕಾರ್ತಿಕ್ ಜಸ್ವಂತ್ ಧೀರ ಹಾಗೂ ಉನ್ನತ ದರ್ಜೆಯ ಬ್ಯಾಟ್ಸ್-ಮನ್ ಆಗಿದ್ದರು ಆದರೆ ಅವರ ಸ್ಪಿನ್ ಬೌಲಿಂಗ್ ಕನ್ವಿಲ್ಕರ್-ರ್ ವೇಗದ ಬೌಲಿಂಗ್-ನಷ್ಟು ವಿಕೆಟ್ ಗಳಿಸುತ್ತಿರಲಿಲ್ಲ. ಈಗಿರುವ ಬಾಲಚಂದರ್ ಅಖಿಲ್ ಹೆಚ್ಚು ಕಡಿಮೆ ಅಭಿರಾಮ್ ಹಾಗೇನೇ. ಕನ್ವಿಲ್ಕರ್ ಅಕಾಲಿಕ ಮರಣ ಆಗಿನ ದಿನಗಳಲ್ಲಿ ಕರ್ನಾಟಕ ಕ್ರಿಕೆಟ್-ಗೆ ದೊಡ್ಡ ನಷ್ಟವಾಗಿತ್ತು.

- Login or register to post comments
- 517 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಕರ್ನಾಟಕ ಕ್ರಿಕೆಟ್ - ೧
ನಾನೂ ಸಹ ಚಿಕ್ಕವನಿದ್ದಾಗ ಕೆಲವು ಬಾರಿ ಕನ್ನಡ ವೀಕ್ಷಕ ವಿವರಣೆ ಕೇಳಿದ್ದೇನೆ.ಅವರು ಬ್ಯಾಟ್ಸ್ಮೆನ್ಗೆ ' ದಾಂಡಿಗ' ಎಂತಲೂ ವಿಕೆಟ್ಗೆ ' ಹುದ್ದರಿ' ಎಂತಲೂ ಹೇಳುವುದು ಕೇಳಲು ಬಹಳ ಮಜವಿರುತ್ತಿತ್ತು.
ಆದರೆ ಈಗಿನ ಕನ್ನಡ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ,ಉಪಗ್ರಹ ವಾಹಿನಿಗಳಲ್ಲಿ ಕ್ರಿಕೆಟ್ ಬಗೆಗಿನ ಸುದ್ದಿ ಇದ್ದರೆ , ಬ್ಯಾಟ್ಸ್ಮೆನ್ ಹಾಗು ವಿಕೆಟ್ ಎಂದೇ ಬಳಸುತ್ತಾರೆ.ದಾಂಡಿಗ ಎಂಬ ಬದ ಹೋಗಲಿ,ಹುದ್ದರಿ ಎಂದಾದರು ಬಳಸಬಹುದಲ್ಲವೆ?
'ಈ ಟಿವಿ' ವಾಹಿನಿಯಲ್ಲಿ ಎಷ್ಟೋ ಸಲ 'ಕ್ರೀಡಾಂಗಣ' ಎನ್ನುವ ಬದಲು ಸ್ಟೇಡಿಯಮ್ ಎಂದೇ ಬಳಸುವುದನ್ನು ಗಮನಿಸಿದ್ದೇನೆ.
Re: ಕರ್ನಾಟಕ ಕ್ರಿಕೆಟ್ - ೧
ಚೆನ್ನಾಗಿ ಹೇಳಿದ್ದೀರ. ಇದಕ್ಕೆ ಸಂಬಂಧಿಸಿದಂತೆ ನನ್ನ ಚೊಚ್ಚಲ `ಬೊಗಳೆ'ಯನ್ನು ನೋಡಿ. http://sampada.net/blog/prabhu_murthy/10/01/2007/2804
ತಮ್ಮವ,
ಪ್ರಭು ಮೂರ್ತಿ
Re: ಕರ್ನಾಟಕ ಕ್ರಿಕೆಟ್ - ೧
ವೀಕ್ಷಕವಿವರಣೆ ಕನ್ನಡದಲ್ಲಿದ್ದಾಗ ಹೆಚ್ಚಾಗಿ ಕೇಳಿಬರುತ್ತಿದ್ದ ಇನ್ನೊಂದು ಪದ (ಅಥವಾ ಪದಪುಂಜ)ವೆಂದರೆ "ಕರಾರುವಾಕ್ಕಾದ ಎಸೆತ" (good line and length?). ಉದಾ: "ರಘುರಾಮ್ ಭಟ್ ಅವರ ಕರಾರುವಾಕ್ ಎಸೆತಗಳಿಂದಾಗಿ ಎದುರಾಳಿ ಪಡೆಯು ಓಟಗಳನ್ನು ಗಳಿಸಲು ಹೆಣಗುತ್ತಿದೆ..."
ಮಧ್ಯಾಹ್ನ 2:25ರ ಪ್ರದೇಶಸಮಾಚಾರ ವಾಚಕ ಕೃಷ್ಣಕಾಂತ್? ಆರ್.ಕೆ.ದಿವಾಕರ? ಎಸ್.ಪರಶಿವಮೂರ್ತಿ? ಬಸಪ್ಪ ಮಾದರ್?
Re: ಕರ್ನಾಟಕ ಕ್ರಿಕೆಟ್ - ೧
ಶ್ರೀವತ್ಸ ಜೋಶಿಯವರಿಗೆ ಧನ್ಯವಾದಗಳು. ನಿಮ್ಮ ಟಿಪ್ಪಣಿ ಓದಿದ ನಂತರ ತಪ್ಪದೆ ಕ್ರಿಕೆಟ್ ಸ್ಕೋರ್ ತಿಳಿಸುತ್ತಿದ್ದ ಪ್ರದೇಶ ಸಮಾಚಾರ ವಾಚಕರ ಹೆಸರು ನೆನಪಾಯಿತು. "ಆಕಾಶವಾಣಿ ಬೆಂಗಳೂರು. ಪ್ರದೇಶ ಸಮಾಚಾರ. ಓದುತ್ತಿರುವವರು ಕೃಷ್ಣಕಾಂತ್" ಎಂದಾದರೆ ಮಾತ್ರ ನಾನು ಮುಂದಕ್ಕೆ ಕೇಳುತ್ತಿದ್ದೆ. ಹೆಸರು ನೆನಪಿಸಿದ್ದಕ್ಕೆ ಧನ್ಯವಾದಗಳು ಮತ್ತೊಮ್ಮೆ.
ಅಂದ ಹಾಗೆ ಇನ್ನು ಕೆಲವು 'ಎಕ್ಸ್ ಕ್ಲೂಸಿವ್' ಕನ್ನಡ ವೀಕ್ಷಕ ವಿವರಣೆಯ ಕನ್ನಡ ಪದಗಳು - ಗೂಟ ರಕ್ಷಕ (ವಿಕೆಟ್ ಕೀಪರ್), ಎಸೆಗಾರ (ಬೌಲರ್), ದಾಂಡು (ಬ್ಯಾಟ್), ತೀರ್ಪುಗಾರ (ಅಂಪಾಯರ್), ಸೀಮಾ ರೇಖೆ (ಬೌಂಡರಿ ಲೈನ್), ಇತ್ಯಾದಿ.
ಬೇಲ್ಸ್ ಗೆ ಏನೆನ್ನುತ್ತಿದ್ದರು ಎಂಬುದು ನೆನಪಿಲ್ಲ. ಸಿಕ್ಸರ್ ಹೊಡೆತಕ್ಕೆ ಹಿಂದಿಯಲ್ಲಿ 'ಛಕ್ಕಾ' ಎನ್ನುವಂತೆ ಕನ್ನಡ ವೀಕ್ಷಕ ವಿವರಣೆಗಾರರು ಅದೇನೊ ಶಬ್ದವನ್ನು ಬಳಸುತ್ತಿದ್ದರು. ಅದೂ ನೆನಪು ಬರುತ್ತಿಲ್ಲ.
ವಲಯ ತಂಡದಲ್ಲಿ ರಾಜ್ಯದ ಐವರು
ದೇವಧರ್ ಟ್ರೋಫಿಗಾಗಿ ನಡೆಯುತ್ತಿರುವ ಏಕದಿನದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ದಕ್ಷಿಣ ವಲಯ ತಂಡದಲ್ಲಿ ರಾಜ್ಯದ ಐವರು ಸ್ಥಾನ ಪಡೆದಿದ್ದಾರೆ - ಬಾಲಚಂದ್ರ ಅಖಿಲ್, ರೋಲಂಡ್ ಬ್ಯಾರಿಂಗ್ಟನ್, ವಿನಯ್ ಕುಮಾರ್, ಚಂದ್ರಶೇಖರ್ ರಘು ಮತ್ತು ತಿಲಕ್ ನಾಯ್ಡು. ಅಂತಿಮ ಹನ್ನೊಂದರಲ್ಲಿ ಯಾರು ಆಡುತ್ತಾರೆ ಎಂಬುದು ನಾಯಕ ವಿ.ವಿ.ಎಸ್.ಲಕ್ಷ್ಮಣ್ ನಿರ್ಧಾರ. ದಕ್ಷಿಣ ವಲಯದ ಮೊದಲ ಪಂದ್ಯ ಇಂದು ಪೂರ್ವ ವಲಯದ ವಿರುದ್ಧ ಅಹಮದಾಬಾದ್ ನಲ್ಲಿ.
Re: ವಲಯ ತಂಡದಲ್ಲಿ ರಾಜ್ಯದ ಐವರು
ದೇವಧರ್ ಟ್ರೋಫಿ ಪಂದ್ಯಾಟ ಮುಗಿದಿದೆ. ಪಶ್ಚಿಮ ವಲಯ ತನ್ನೆಲ್ಲಾ ಪಂದ್ಯಗಳನ್ನು ಗೆದ್ದು ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ದಕ್ಷಿಣ ವಲಯ, ಆಡಿದ ೪ ಪಂದ್ಯಗಳಲ್ಲಿ ೩ನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿ ಮುಖಕ್ಕೆ ಮಸಿ ಬಳಿದುಕೊಳ್ಳುವಂತಹ ಸಾಧನೆ ಮಾಡಿ ಹಿಂತಿರುಗಿದೆ. ನಾಯಕನಾಗಿದ್ದ ವಿ.ವಿ.ಎಸ್.ಲಕ್ಷ್ಮಣ್ ಪೂರ್ತಿ ಮನಸನ್ನು ವೆಸ್ಟ್ ಇಂಡೀಸ್ ನಲ್ಲಿರಿಸಿ, ಹೆಸರು ಕೆಡಿಸಿಕೊಳ್ಳಬಾರದೆಂಬ ಏಕೈಕ ಕಾರಣದಿಂದ ಕಾಟಾಚಾರದ ಸಲುವಾಗಿ ಆಡಿದರೆ ಬೇರೇನನ್ನು ತಾನೇ ನಿರೀಕ್ಷಿಸಬಹುದು?
ರಾಜ್ಯದ ಆಟಗಾರರಲ್ಲಿ ಬೌಲಿಂಗ್ ವಿಭಾಗದಲ್ಲಿ ಅಖಿಲ್ ಉತ್ತಮ ಪ್ರದರ್ಶನ ನೀಡಿದರೆ ಬ್ಯಾಟಿಂಗ್ ವಿಭಾಗದಲ್ಲಿ ತಿಲಕ್ ನಾಯ್ಡು ಸಾಧಾರಣ ಪ್ರದರ್ಶನ ನೀಡಿದರು. ಬ್ಯಾರಿಂಗ್ಟನ್ ಮತ್ತು ವಿನಯ್ ಕುಮಾರ್ ಕಳಪೆ ಪ್ರದರ್ಶನ ನೀಡಿದರು. ರಘುಗೆ ಒಂದೇ ಪಂದ್ಯದಲ್ಲಿ ಆಡಿಸಿ, ವಿ.ವಿ.ಎಸ್.ಲಕ್ಷ್ಮಣ್ ಅನ್ಯಾಯ ಮಾಡಿದರು. ರಾಜ್ಯದ ಐವರು ಆಟಗಾರರ ಸಾಧನೆ ಹೀಗಿತ್ತು:
ರೋಲಂಡ್ ಬ್ಯಾರಿಂಗ್ಟನ್: ೪ ಪಂದ್ಯಗಳಲ್ಲಿ ೨೪.೨೫ ಸರಾಸರಿಯಲ್ಲಿ ೯೭ ಓಟಗಳು.
ತಿಲಕ್ ನಾಯ್ಡು: ೪ ಪಂದ್ಯಗಳಲ್ಲಿ ೩೬.೦೦ ಸರಾಸರಿಯಲ್ಲಿ ೧೦೮ ಓಟಗಳು.
ಚಂದ್ರಶೇಖರ್ ರಘು: ೧ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮತ್ತು ೫ ಓವರ್ ಎಸೆದು ೧೬ ಓಟಗಳಿಗೆ ಯಾವುದೇ ಹುದ್ದರಿಯಿಲ್ಲ.
ಬಾಲಚಂದ್ರ ಅಖಿಲ್: ೩ ಪಂದ್ಯಗಳಲ್ಲಿ ೧೬.೩೩ ಸರಾಸರಿಯಲ್ಲಿ ೪೯ ಓಟಗಳು ಮತ್ತು ೨೮ ಓವರ್ ಎಸೆದು ೨೫.೧೬ ಸರಾಸರಿಯಲ್ಲಿ ೬ ಹುದ್ದರಿಗಳು.
ವಿನಯ್ ಕುಮಾರ್: ೩ ಪಂದ್ಯಗಳಲ್ಲಿ ೦೨.೦೦ ಸರಾಸರಿಯಲ್ಲಿ ೪ ಓಟಗಳು ಮತ್ತು ೨೯ ಓವರ್ ಎಸೆದು ೩೪.೦೦ ಸರಾಸರಿಯಲ್ಲಿ ೪ ಹುದ್ದರಿಗಳು.