ಸೋಮೇಶ್ವರ ಶತಕ ೧೧ - ೧೫
ಧರಣೀಶಂ ಧುರ ಧೀರನಾಗೆ ಧನಮುಳ್ಳಂ ತ್ಯಾಗಿಯಾಗಲ್ ಕವೀ |
ಶ್ವರ ಸಂಗೀತದಿ ಜಾಣನಾಗೆ ಸುಕಲಾಪ್ರೌಢಂಗಿರಲ್ ಫ್ರೌಢೆವೆಣ್ ||
ಬರೆವಂ ಧಾರ್ಮಿಕನಾಗೆ ಮಂತ್ರಿ ಚತುರೋಪಾಯಂಗಳಂ ಬಲ್ಲೊಡಂ |
ದೊರೆವೋಲ್ ಚಿನ್ನಕೆ ಸೌರಭಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೧||
ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ |
ಜನಕಂ ಸತ್ಫಲಕಂಜನಾದಿಯನುಲೇಪಂಗಳ್ಗೆ ಸಮ್ಮೋಹ ಸಂ ||
ಜನಕಾನಂದಕೆ ರಾಜಭೋಗಕೆ ಸುವಿದ್ಯಂಗಳ್ಗದಾರಾದೊಡಂ |
ಮನದೊಳ್ ಕಾಮಿಸದಿರ್ಪರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೨||
ಸವಿವಣ್ಣಲ್ಲಿನಿಮಾವು ಸರ್ವರಸದೊಳ್ ಶೃಂಗಾರ ಸಂಭಾರದೊಳ್ |
ಲವಣಂ ಕೇಳಲು ಬಾಲಭಾಷೆ ಸಿರಿಯಲ್ಲಾರೋಗ್ಯ ದೈವಂಗಳೊಳ್ ||
ಶಿವ ಬಿಲ್ಲಾಳ್ಗಳೊಳಂಗಜಂ ಜನಿಸುವಾ ಜನ್ಮಂಗಳೊಳ್ ಮಾನುಷಂ |
ಕವಿತಾವಿದ್ಯೆ ಸುವಿದ್ಯೆಯೊಳ್ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೩||
ಮಳೆಯೇ ಸರ್ವಜನಾಶ್ರಯಂ ಶಿವನೆ ದೇವರ್ಕಳ್ಗೆ ತಾನಾಶ್ರಯಂ |
ಬೆಳೆಯೇ ಸರ್ವರ ಜೀವನಂ ಬಡವನೇ ಸರ್ವರ್ಗೆ ಸಾಧಾರಣಂ ||
ಬಳೆಯೇ ಸರ್ವ ವಿಭೂಷಣಕೆ ಮೊದಲೈ ಪುತ್ರೋತ್ಸವಂ ಸೂತ್ಸವಂ |
ಕೆಳೆಯೇ ಸರ್ವರೊಳುತ್ತಮಂ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೪||
ನಿಕೃಷ್ಟತೆ
ಫಲವತ್ತಿಲ್ಲದ ರಾಜ್ಯದಲ್ಲಿ ಪ್ರಭು ದಂಡಕ್ಕಾಸೆಗೆಯ್ವಲ್ಲಿ ಬಲ್ |
ಪುಲಿಗಳ್ ಸಿಂಗಗಳಿಕ್ಕೆಯಲ್ಲಿ ಪೆರವಣ್ಣಿರ್ದಲ್ಲಿ ಕುಗ್ರಾಮದೊಳ್ ||
ಗೆಲವಂ ತೋರದೆ ದುಃಖಮಪ್ಪ ಕಡೆಯೊಳ್ ಭೂತಂಗಳಾವಾಸದೊಳ್ |
ಸಲೆ ಬಲ್ಲರ್ ನಿಲೆ ಸಲ್ಲದೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೫||
ಇಕ್ಕೆ - ವಾಸಸ್ಧಳ, ಸಲೆ - ಚೆನ್ನಾಗಿ.

- Login or register to post comments
- 421 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಸಂದೇಹ: ಸೋಮೇಶ್ವರ ಶತಕ ೧೧ - ೧೫
ಸುನಿಲ್,
೧೨ ನೇ ಪದ್ಯದ (ಧನಕಂ ಧಾನ್ಯಕೆ...) ಅರ್ಥ ಸ್ವಲ್ಪ ಬರೀತೀರಾ? ಇಲ್ಲಿ ನೋಡೋಣ ಅನ್ನೋಕೂ ಯಾವ ಪುಸ್ತಕ ಕೂಡ ಇಲ್ಲ.
- ಶ್ಯಾಮ್ ಕಿಶೋರ್
ಸೋಮೇಶ್ವರ ಶತಕದ ೧೨ನೇ ಪದ್ಯ - ಧನಕಂ ಧಾನ್ಯಕೆ
ಶ್ಯಾಮ್ ಕಿಶೋರ್,
ಈ ಪದ್ಯದಲ್ಲಿ ಚತುರ್ಥೀ ವಿಭಕ್ತಿಯ(ಗೆ, ಇಗೆ, ಅಕ್ಕೆ) ಪ್ರಯೋಗವೇ ಜಾಸ್ತಿ ಇರುವುದರಿಂದ, ಹೀಗಿರಬಹುದೆನಿಸಿತು.
ಧನಕಂ ಧಾನ್ಯಕೆ ಭೂಷಣಾಂಬರ ಸುಪುಷ್ಪಂಗಳ್ಗೆ ಮೃಷ್ಟಾನ್ನ ಭೋ |
ಜನಕಂ ಸತ್ಫಲಕಂಜನಾದಿಯನುಲೇಪಂಗಳ್ಗೆ ಸಮ್ಮೋಹ ಸಂ ||
ಜನಕಾನಂದಕೆ ರಾಜಭೋಗಕೆ ಸುವಿದ್ಯಂಗಳ್ಗದಾರಾದೊಡಂ |
ಮನದೊಳ್ ಕಾಮಿಸದಿರ್ಪರೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ ||೧೨||
ಧನಕಂ - ಸಂಪತ್ತಿಗೆ, ಭೋಜನಕಂ - ಸವಿಯೂಟಕ್ಕೆ.
ಧನಕ್ಕೆ, ಧಾನ್ಯಕ್ಕೆ, ಒಡವೆ-ವಸ್ತ್ರಗಳಿಗೆ(ಭೂಷಣಾಂಬರ), ಸುವಾಸನೆಯುಳ್ಳ ಹೂವಿಗೆ, ಸವಿಯೂಟಕ್ಕೆ, ಸತ್ಫಲಕಂಜನಾದಿಯನುಲೇಪಂಗಳ್ಗೆ( ಸತ್ಫಲಕ = ಢಾಲು, ಗುರಾಣಿ, ಬರೆಯುವ ಹಾಳಿ, ಅಂಗೈ, ತೊಡೆ, ಟೊಂಕದ ಹಿಂಭಾಗ; ಅಂಜನ = ಕಾಡಿಗೆ; ಅನುಲೇಪ = ಮೈಗೆ ಬಳಿದುಕೊಳ್ಳುವ ಸುಗಂಧದ್ರವ್ಯ), ಸಮ್ಮೋಹ ಸಂಜನಕ ಆನಂದಕ್ಕೆ(ಮನಸ್ಸನ್ನು ತನ್ನತ್ತ ಸೆಳೆದುಕೊಳ್ಳುವ ಆನಂದಕ್ಕೆ) , ರಾಜಭೋಗಕ್ಕೆ, ಒಳ್ಳೆಯ ವಿದ್ಯೆಗೆ, ಆಸೆಪಡದವರು ಯಾರೂ ಇಲ್ಲ ಎಂಬರ್ಥದಲ್ಲಿ ಕವಿ ಹೇಳಿರಬೇಕು.