ಕನ್ನಡ ರಂಗಭೂಮಿಯ ಸುತ್ತ
ಹಿನ್ನೋಟ
ಬಾಲುಪ್ರಸಾದ್.ಆರ್.
ಕನ್ನಡ ರಂಗಭೂಮಿಯಲ್ಲಿ ಮುಖ್ಯವಾಗಿ ವೃತ್ತಿ ಮತ್ತು ಹವ್ಯಾಸಿ ಎಂಬ ಎರೆಡು ವಿಭಾಗಗಳು ಕಾಣಸಿಗುತ್ತವೆ.ವೃತ್ತಿ ರಂಗಭೂಮಿಯೆಂದರೆ ಹತ್ತೊಂಭತ್ತನೆಯ ಶತಮಾನದ ಆರಂಭದಿಂದ ೧೯೫೦ರವರೆಗೆ ಪ್ರಚಲಿತದಲ್ಲಿದ್ದ ರಂಗಭೂಮಿಯ ದುಡಿಮೆಯನ್ನು ವೃತ್ತಿಯೆಂದು ಸ್ವೀಕರಿಸಿ ಕೇವಲ ಮನೋರಂಜನೆ ಮತ್ತು ನೀತಿ ಬೋಧನೆಗಾಗಿ ಎಂದು ನಡೆಸಲಾಗುತ್ತಿತ್ತು. ಹವ್ಯಾಸಿ ರಂಗಭೂಮಿಗೆ ಆಧುನಿಕತೆಯ ಮೆರುಗು ನೀಡಿ ನವ ವಿಚಾರಧಾರೆಯನ್ನು ತುಂಬಿತು. ಸಂಸ್ಕೃತ ರಂಗಭೂಮಿ ಜಾನಪದದಿಂದ ಸಾಕಷ್ಟು ಬಳುವಳಿಗಳನ್ನು ಪಡೆದುಕೊಂಡೇ ಹುಟ್ಟಿ ಬಂದಿತು. ಒಂದೆಡೆ ಆಳರಸರ ಆಸ್ಥಾನಗಳಲ್ಲಿ `ಗಣ್ಯ' ರಂಗಭೂಮಿಯ ಬೆಳವಣಿಗೆಯಾದರೆ ಇನ್ನೊಂದೆಡೆ ಜನಪದ ರಂಗಭೂಮಿ ಜನರಿಂದ ಜನರಿಗಾಗಿಯೇ ಹುಟ್ಟಿ ಬಂದದ್ದು ರೋಚಕ ಸಂಗತಿ.
ಕನ್ನಡ ರಂಗಭೂಮಿಗೆ ನಿರ್ದಿಷ್ಟ ರೂಪ ಸಿಕ್ಕಿದ್ದು ಆಧುನಿಕತೆಯ ಸ್ಪರ್ಶವಾದ ಮೇಲೆಯೇ. ಪಾರ್ಸಿ ಕಂಪನಿಗಳ ಪ್ರಯೋಗ ಭಿನ್ನ ಸಾಮಾಜಿಕ, ರಾಜಕೀಯ ಬೆಳವಣಿಗೆಗಳು ರಂಗಭೂಮಿಯನ್ನು ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗಗಳೆಂದು ವಿಂಗಡಿಸಿದವು. ಉತ್ತರ ಕರ್ನಾಟಕದಲ್ಲಿ ಮರಾಠಿ ಪ್ರಭಾವವನ್ನು ಹಿಮ್ಮೆಟ್ಟಿಸಲು ಉಂಟಾದ ಪ್ರತಿಕ್ರಿಯೆಯಿಂದ, ಪ್ರತಿಭಟನೆಯ ನೆಲೆಯಿಂದ ಹುಟ್ಟಿದರೆ, ಮೈಸೂರು ಪ್ರಾಂತ್ಯದಲ್ಲಿ ರಾಜಾಶ್ರಯದಲ್ಲಿ ರಂಗಭೂಮಿ ಬೆಳಕು ಕಂಡಿತು. ಹೀಗಾಗಿ ಉತ್ತರದ ಬೆಳಗಾವಿ ಜಿಲ್ಲೆಯ ಹಲಸಿಯಲ್ಲಿ `ಸಂಗೀತ ನಾಟಕ ಮಂಡಳಿ' (೧೮೬೯) ಪ್ರಾರಂಭವಾದರೆ, ೧೮೮೨ರಲ್ಲಿ ಮೈಸೂರಿನಲ್ಲಿ `ಶ್ರೀ ಚಾಮುಂಡೇಶ್ವರಿ ನಾಟಕ ಸಭೆ' ಹುಟ್ಟಿಕೊಂಡಿತು.
ಹೀಗೆ ಮುಂದೆ ಉತ್ತರ ಭಾಗದಲ್ಲಿ ಕೃತಪುರ ನಾಟಕ ಮಂಡಳಿ ತಂತುಪುರಸ್ತ ಮಂಡಳಿ, ಹಿಂದು ಯೂನಿಯನ್ ಕ್ಲಬ್, ಭರತ ಕಲೋತ್ತೇಜಕ ಶಿರಹಟ್ಟಿ ಕಂಪೆನಿ, ಕಾಡಸಿದ್ದೇಶ್ವರ ನಾಟ್ಯ ಸಂಘ, ವಿಶ್ವ ಗುಣಾದರ್ಶ ಮಂಡಳಿ, ಹಲಗೇರಿ ಕಂಪನಿ, ಗರುಡರ ದತ್ತಾತ್ರೇಯ ನಾಟಕ ಕಂಪೆನಿ ಮುಂತಾದವು ತಮ್ಮ ವೈಭವವನ್ನು ಮೆರೆದವು.
ಅದೇ ತೆರನಾಗಿ ಹಳೇ ಮೈಸೂರಿನ ವಿಭಾಗದಲ್ಲಿ ರಾಜಧಾನಿ ನಾಟಕ ಮಂಡಳಿ, ಶಾಕುಂತಲಾ ಕರ್ನಾಟಕ ನಾಟಕ ಮಂಡಳಿ, ಶ್ರೀಕಂಠೇಶ್ವರ ಸಂಸ್ಥೆ, ಪೆರೆಶಾಮಯ್ಯಂಗಾರ್ ಕಂಪೆನಿ, ಗೊಲ್ಲರ ಕಂಪೆನಿ, ಸಿಟಿ ಅಪೇರೆ ಟ್ರೂಪ್, ಗುಬ್ಬಿ ಕಂಪೆನಿ, ರತ್ನವಳ್ಳಿ ಥಿಯೇಟರ್ಸ್, ಸಾವುಕಾರ ಬುಳ್ಳಪ್ಪನವರ ಕಂಪೆನಿ, ಚಂದ್ರಕಲಾ ನಾಟಕ ಮಂಡಳಿ, ಹಿರಣ್ಣಯ್ಯನವರ ಸಂಸ್ಥೆ ಮುಂತಾದವು ೧೯೪೦ಕ್ಕೂ ಮುಂಚೆ ಪ್ರಸಿದ್ಧವಾಗಿದ್ದವು. ಆಗಿನ ಕಾಲದ ಕರಾವಳಿ ಕರ್ನಾಟಕದಲ್ಲಿ ಶ್ರೀ ಅಂಬಾ ಪ್ರಸಾದಿತ ಕರ್ನಾಟಕ ನಾಟಕ ಮಂಡಳಿ (೧೯೩೬) ಕಾರ್ಯನಿರ್ವಹಿಸಿದರೆ, ಬಳ್ಳಾರಿ ಪ್ರಾಂತ್ಯದಲ್ಲಿ ತೆಲುಗು ನಾಟಕ ಮಂಡಳಿಗಳಿಗೆ ಪ್ರತಿಕ್ರಿಯೆಯಾಗಿ ಕೊಟ್ಟೂರಿನ ಸರಸ್ವತಿ ನಾಟಕ ಸಭೆ (೧೯೧೨), ನಂತರದಲ್ಲಿ ಬಸವೇಶ್ವರ ನಾಟ್ಯ ಸಂಸ್ಥೆ, ಪಾರ್ವತಿ ನಾಟಕ ಸಂಘಗಳು ಮುಂದಡಿಯಿಟ್ಟವು.
೧೯೪೦ರ ದಶಕ ಹಲವಾರು ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರ ಕಂಡ ಕಾಲವದು. ಒಂದೆಡೆ ಆಧುನಿಕ ಇಂಗ್ಲೀಷ್ ವಿದ್ಯಾಭ್ಯಾಸ, ಬ್ರಿಟೀಷ್ ಆಡಳಿತ ಇನ್ನೊಂದೆಡೆ ಸ್ವಾತಂತ್ರ್ಯ ಹೋರಾಟ. ಈ ಎಲ್ಲದರ ಪರಿಣಾಮವಾಗಿ ರಂಗಭೂಮಿಯಲ್ಲಿ ಹಲವಾರು ಪ್ರಯೋಗಗಳಾದವು. ಉತ್ತರದಲ್ಲಿ ಶ್ರೀರಂಗಂ ದಕ್ಷಿಣದಲ್ಲಿ ಟಿ.ಪಿ.ಕೈಲಾಸಂ ರಂಗಭೂಮಿಗೆ ತಮ್ಮ ವಿಚಾರಧಾರೆಯನ್ನು ಹರಿಬಿಟ್ಟರು. ಕೈಲಾಸಂ ವಿದೇಶದಲ್ಲಿನ ಇಂಗ್ಲೀಷ್ ಶಿಕ್ಷಣ ಪಡೆದು ಬಂದಿದ್ದರು. ಅಲ್ಲಿನ ರಂಗಭೂಮಿಗಳ ಪ್ರಭಾವ ಅವರನ್ನು ಇಲ್ಲಿನ ವೃತ್ತಿ ಪರ ರಂಗಭೂಮಿಗಳ ವಿರುದ್ಧ `ನಮ್ಮ ಕಂಪ್ನಿ', `ಪೋಲಿ ಕಿಟ್ಟಿ' ಯಂತಹ ನಾಟಕಗಳನ್ನು ಬರೆದರು. ಶ್ರೀರಂಗಂರವರೂ ಬಿಜಾಪುರ ಜಿಲ್ಲೆ ಅಗರಖೇಡದವರು. ಇವರು ಉನ್ನತ ಶಿಕ್ಷಣ ಪಡೆದುಕೊಂಡವರು. ಸಂಸ್ಕೃತ ರಂಗಭೂಮಿಯ ವಿಶೇಷ ಅಧ್ಯಯನ ಮಾಡಿದವರು. ಇವರು `ಭರತನ ನಾಟ್ಯ ಶಾಸ್ತ್ರ'ವನ್ನು ಕನ್ನಡಕ್ಕೆ ಅನುವಾದ ಮಾಡಿ ದಾಖಲೆ ಮಾಡಿದವರು. ಇವರ ನೂರಕ್ಕೂ ಹೆಚ್ಚು ನಾಟಕಗಳು ಸಾವಿರಾರು ಪ್ರದರ್ಶನಗಳನ್ನು ಕಂಡಿದೆ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇವರು ಪ್ರಯೋಗಿಸಿದ್ದ ನಾಟಕಗಳು ಇತಿಹಾಸವನ್ನೇ ನಿರ್ಮಿಸಿವೆ.
ಇಂಗ್ಲೀಷ್ ರಂಗಭೂಮಿ ನಾಟಕಗಳ ಪ್ರಭಾವ ಹೆಚ್ಚಿದಂತೆ ಹಲವು `ಇಸಂ'ಗಳು ಕಾಣತೊಡಗಿದವು. ೧೮೯೯ರಲ್ಲಿ `ಪ್ರಾಚ್ಯ ಕ್ರೀಡಾ ಸಂವರ್ಧನಾ ಮಂಡಳಿ' ಎಂಬ ಸಂಸ್ಥೆ ಸಾಹಿತ್ಯಿಕ ನಾಟಕಗಳನ್ನು ಆಡುವಲ್ಲಿ ಪ್ರಾರಂಭಗೊಂಡು ಹವ್ಯಾಸಿ ಚಟುವಟಿಕೆ ನಂತರ ಹಲವಾರು ಸ್ತರಗಳಲ್ಲಿ ಕವಲೊಡೆದು, ಆಧುನಿಕ ಹವ್ಯಾಸಿ ರಂಗಭೂಮಿ ಕೇವಲ ಮನೋರಂಜನೆ, ನೀತಿ ಬೋಧನೆಗಾಗಿ ಅಲ್ಲ, ನಮ್ಮ ಅರಿವಿನ ವಿಸ್ತಾರಕ್ಕೆ ಎಂಬುದನ್ನು ಸಾಬೀತು ಪಡಿಸಿದವು.
೧೯೫೦ ರವರೆಗೆ ಕನ್ನಡ ವೃತ್ತಿಪರ ರಂಗಭೂಮಿ ಉಚ್ಛ್ರಾಯ ಕಾಲ ಕಂಡಿತು. ಆ ಕಾಲದಲ್ಲಿ ಬಂದ ಕಣಬರ್ಗಿ ಮಠ, ವಾಮನ್ರಾವ್ ಮಾಸ್ತರ್, ಹಲಗೇರಿ ಜಟ್ಟೆಪ್ಪ, ಗುಳೇದಗುಡ್ಡ ಗಂಗೂಭಾಯಿ, ವೆಂಕೋಬರಾಯ, ಬಸವಪ್ಪ ಶಾಸ್ತ್ರಿಗಳು, ಗರುಡಸದಾಶಿವರಾಯ, ವರದಾಚಾರ್ಯ, ಕಂದಗಲ್ಲು ಹನುಮಂತರಾಯ, ಮಹಮ್ಮದ್ ಪೀರ್, ಮಳವಳ್ಳಿ ಸುಂದರಮ್ಮ, ಆರ್.ನಾಗೇಂದ್ರರಾಯ, ಸುಬ್ಬಯ್ಯ ನಾಯ್ಡು, ಗುಬ್ಬಿ ವೀರಣ್ಣ, ಬಿ.ಜಯಮ್ಮ, ಐಯ್ಯರ್, ಹಿರಣ್ಣಯ್ಯ, ಚಿಂದೋಡಿ ವೀರಪ್ಪ, ಏಣಗಿ ಬಾಳಪ್ಪ ಮುಂತಾದವರು ತಮ್ಮ ಪ್ರಯತ್ನಗಳನ್ನು ಹಸಿರಾಗಿಟ್ಟು ರಂಗಭೂಮಿಯನ್ನು ಜೀವಂತವಾಗಿಟ್ಟರು.
ಇಲ್ಲಿ ಗುಬ್ಬಿ ವೀರಣ್ಣನವರ ಕಾರ್ಯವನ್ನು ದಾಖಲಿಸಬೇಕು. ತಮ್ಮ ಗುಬ್ಬಿ ಚನ್ನ ಬಸವೇಶ್ವರ ಸಂಘದ ಮೂಲಕ ನಾಡೆಲ್ಲೆಡೆ ನೂರಾರು ನಾಟಕಗಳನ್ನು ಆಡಿಸಿ, ಹಲವು ಮೊದಲುಗಳಿಗೆ ನಾಂದಿ ಹಾಡಿದರು. ಇವರ ಗುಬ್ಬಿ ನಾಟಕ ಮಂಡಳಿ ಡಾ|| ರಾಜ್, ಹಾಸ್ಯ ಚಕ್ರವರ್ತಿ ನರಸಿಂಹರಾಜು, ಜಿ.ವಿ.ಅಯ್ಯರ್ರಂತಹ ಮೇರು ನಟರನ್ನು ಚಲನಚಿತ್ರರಂಗಕ್ಕೆ ನೀಡಿದ ಖ್ಯಾತಿ ಹೊಂದಿದೆ. ಏಣಗಿ ಬಾಳಪ್ಪ ಕೂಡ ಮರಾಠಿ ಪ್ರಯೋಗ, ಪ್ರಭಾವಗಳಿಂದ ಬೇಸತ್ತು ಮರಾಠಿ ನೆಲದಲ್ಲೇ ಕನ್ನಡ ನಾಟಕವನ್ನು ಆಡಿಸಿದರು.
೧೯೬೦ ರ ನಂತರ ಹವ್ಯಾಸಿ ರಂಗಭೂಮಿ ಅವ್ಯಾಹತವಾಗಿ ಬೆಳೆಯಿತು. ಇವುಗಳು ಪ್ರಮುಖವು: ಚಾಯಾ ಕಲಾವಿದರು, ವಾಸುದೇವ ವಿನೋದಿನಿ ನಾಟ್ಯ ಸಭೆ, ಸಮತೇಂತೋ, ಹೆಗ್ಗೋಡಿನ ನೀನಾಸಂ, ಗುಲಬರ್ಗಾದ ರಂಗ ಮಾಧ್ಯಮ, ಬೆಂಗಳೂರಿನ ಬೆನಕ, ಮಂಗಳೂರು ಉಡುಪಿ ರಂಗಭೂಮಿ, ರಥಬೀದಿ ಗೆಳೆಯರು, ಅಭಿವ್ಯಕ್ತ- ಮುಂತಾದವು. ವೃತ್ತಿ ರಂಗಭೂಮಿಯಲ್ಲಿ ಗುಬ್ಬಿ ವೀರಣ್ಣ ಹೇಗೋ ಹಾಗೆ ಆಧುನಿಕ ಕನ್ನಡ ರಂಗಭೂಮಿಯಲ್ಲಿ ಬಿ.ವಿ. ಕಾರಂತರು. ರಂಗಭೂಮಿಗೆ ಅವರ ಕೊಡುಗೆ ಅಪಾರ.
ಒಂದೆಡೆ ಹೀಗೆ ರಂಗ ಭೂಮಿ ಬೆಳೆಯುತ್ತಿದ್ದರೆ, ಕುವೆಂಪು, ಬೇಂದ್ರೆ, ಕಾರಂತರು, ಪುತಿನ, ಜಿ.ಬಿ.ಜೋಷಿ, ಗಿರೀಶ್ ಕರ್ನಾಡ್, ಚಂದ್ರಶೇಖರ್ ಕಂಬಾರ, ಪಿ.ಲಂಕೇಶ್, ಕೆ.ವಿ.ಸುಬ್ಬಣ್ಣ, ಯು.ಆರ್.ಅನಂತಮೂರ್ತಿ, ನಾ.ರತ್ನ, ಕೀರ್ತಿನಾಥ ಕುರ್ತಕೋಟಿ, ಸಿದ್ಧಲಿಂಗ ಪಟ್ಟಣಶೆಟ್ಟಿ, ಹಿರಟ್ಟಿ ಗೋವಿಂದರಾಜು, ಚಂಪಾ- ಮುಂತಾದವರು ನಾಟಕ ರಚನೆಯ ಮೂಲಕ ನೀರೆರೆದು ಪ್ರೋತ್ಸಾಹಿಸಿದರು.
ಇದರಲ್ಲಿ ಹೆಗ್ಗೋಡಿನ ನಿನಾಸಂ ಸಾಧನೆ ಅದ್ವಿತೀಯ, ನಾಟಕಕ್ಕೆ ವೃತ್ತಿ ಪರತೆಯನ್ನು ತಂದುಕೊಟ್ಟು ಒಂದು ಶಿಸ್ತನ್ನು ನೀಡಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗುತ್ತಿದೆ. ಯುವಕರಿಗೆ ರಂಗಭೂಮಿ ಡಿಪ್ಲೊಮೋ ಕೋರ್ಸ್ ಹಾಗೂ ತಿರುಗಾಟ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದ ಹಿರಿಮೆ ಕೂಡಾ ನೀನಾಸಂಗೆ ಸಲ್ಲುತ್ತದೆ. ಮೈಸೂರಿನ ರಂಗಾಯಣ ಸರ್ಕಾರದಿಂದ ನಡೆದರೂ ತನ್ನ ಸ್ವಂತಿಕೆಯಿಂದ ಹತ್ತು ಹಲವು ಪ್ರಯತ್ನಗಳನ್ನು ನಡೆಸುತ್ತಾ ಬಂದಿದೆ.
ಇದು ರಂಗಭೂಮಿಯ ಹಿನ್ನೆಲೆ. ಇಂದು ರಂಗಭೂಮಿಯೆಂದರೆ ಕೇವಲ ನಾಟಕ ಪ್ರದರ್ಶನವಲ್ಲದೆ ವಿಚಾರ ವಿಮರ್ಶೆಯ ವೇದಿಕೆಯಾಗಿದೆ. ಚಲನಚಿತ್ರದ ಪ್ರಭಾವ ರಂಗಭೂಮಿಯ ಬೆಳವಣಿಗೆಯನ್ನು ಕುಂಟಿತಗೊಳಿಸುತ್ತಿದ್ದರೂ ಹಲವಾರು ಮಂದಿ ಚಿಂತಕರು, ನಾಟಕಕಾರರ ಕೊಡುಗೆ ಮತ್ತು ಪರಿಶ್ರಮಗಳಿಂದ ಇಂದಿಗೂ ರಂಗಭೂಮಿ ರಂಗಿನಿಂದಿದೆ.

- Login or register to post comments
- 521 hits
- Email this page




RSS: