ಪ್ರೀತಿಯನ್ನು ವ್ಯಕ್ತಪಡಿಸಲಿಕ್ಕೇಕೆ ದೊಣ್ಣೆ ನಾಯಕನ ಅಪ್ಪಣೆ?
ಫೆಬ್ರವರಿ ಹದಿನಾಲ್ಕು!
ಪ್ರೇಮಿಗಳ ಹೃದಯ ಬಡಿತ ಏರತೊಡಗುತ್ತೆ. ಕೆನ್ನೆ ಕೆಂಪಾಗಲಾರಂಭಿಸುತ್ತೆ. ತಮ್ಮ ಪ್ರೇಮಿಯ ನೆನಪು ಮನದಾಳದಲ್ಲಿ ಸುಳಿದಾಡತೊಡಗುತ್ತೆ. ತಮ್ಮ ಫಲಿಸಿದ ಪ್ರೇಮದ ಸಂತಸ ಅವರ ಮನಸ್ಸನ್ನಾವರಿಸಿಕೊಳ್ಳುತ್ತೆ. ತಮ್ಮ ಪ್ರೇಮವನ್ನು ನಿವೇದಿಸಬಯಸುವವರಿಗೆ ಅಪೂರ್ವ ಅವಕಾಶ ಸಿಕ್ಕಂತಾಗುತ್ತದೆ.
ಹೌದು, ಫೆ. ಹದಿನಾಲ್ಕು ಪ್ರೇಮಿಗಳ, ಪ್ರೀತಿಯನ್ನು ಆರಾಧಿಸುವವರ ದಿನ. ವರ್ಷವಿಡೀ ತಮ್ಮ ಮನದಾಳದಲ್ಲಿ ಗುಪ್ತಗಾಮಿನಿಯಾಗಿ ಹರಿಯಿತ್ತಿದ್ದ ಪ್ರೀತಿಯನ್ನು ವ್ಯಕ್ತ ಪಡಿಸುವ ನಲ್ಮೆಯ ದಿನ. ರಾಜನನ್ನು ಎದುರುಹಾಕಿಕೊಂಡು, ರಾಜಾಡಳಿತವನ್ನು ವಿರೋಧಿಸಿ, ಪ್ರೇಮಿಗಳನ್ನು ಒಂದು ಮಾಡಿ, ಪ್ರೀತಿಗಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಸಂತ ವ್ಯಾಲೆಂಟೀನ್ನನ್ನು ನೆನೆಸಿಕೊಳ್ಳುವ ದಿನ. ಪ್ರೀತಿಯನ್ನು, ಪ್ರೀತಿಸಿದವರನ್ನು ಸ್ಮರಿಸುವ ದಿನ.
ಮೊಸರಲ್ಲೂ ಕಲ್ಲು ಹುಡುಕುವ ಮಂದಿಗೆ ಪ್ರತಿಯೊದೂ ರಾಷ್ಟ್ರೀಯ ದುರಂತಗಳಂತೆ ಕಾಣುತ್ತವೆ. ಹೊಸ ವರ್ಷವನ್ನು ಆಚರಿಸಿದರೆ, ಪ್ರೇಮಿಗಳ ದಿನದಂದು ಸಂಭ್ರಮಿಸಿದರೆ ಅವರಿಗೆ ಕಣ್ಣಲ್ಲಿ ಕಡ್ಡಿ ಬಿದ್ದಂತಾಗುತ್ತದೆ. ಅದು ಪಾಶ್ಚಾತ್ಯರ ಸಂಸ್ಕೃತಿ, ಇದು ಅಂಧಾನುಕರಣೆ ಅಂತ ಬೊಬ್ಬೆ ಹೊಡೆಯುತ್ತಾರೆ. ಸ್ವಾಮಿ, ನೀವಿನ್ನೂ ಯಾವ ಕಾಲದಲ್ಲಿದ್ದೀರಿ? ಪ್ರಪಂಚವೇ ಈಗ ಒಂದು ಹಳ್ಳಿಯಂತಾಗಿದೆ. ಜಾಗತೀಕರಣದಿಂದಾಗಿ ಇದು ಅವರದು, ಇದು ನಮ್ಮದು ಎಂಬ ಬೇಧದ ಗೆರೆ ಮಾಯವಾಗಿದೆ. ಇಂದಿನದೇನಿದ್ದರೂ ವಿಶ್ವ ಮಾನವ ಸಂಸ್ಕೃತಿ. ಪ್ರೀತಿ, ಪ್ರೇಮ, ಆದರ್ಶ, ಭಾವನೆಗಳು ದೇಶ, ಭಾಷೆಯ ಗಡಿಯನ್ನು ದಾಟಿ ಸಾರ್ವತ್ರಿಕವಾಗಿವೆ. ಒಬ್ಬರ ನಾಡಿ ಮಿಡಿತಗಳು ಇನ್ನೊಬ್ಬರಿಗೆ ಅರ್ಥವಾಗುತ್ತಿವೆ, ಒಬ್ಬರ ಎದೆಯ ಬಡಿತಕ್ಕೆ ಮತ್ತೊಬ್ಬರು ಸ್ಪಂದಿಸುತ್ತಿದ್ದಾರೆ. ಇಡೀ ಜಗತ್ತೇ ಬೆರೆತು ಮುನ್ನಡೆಯುವ ಸಮಯವಿದು. ಇಂಥ ಸಂದರ್ಭದಲ್ಲಿ ನಾನು ಬೆರೆಯಲ್ಲ ಅಂತ ಬೇಲಿ ಜದಿದುಕೊಂಡು ಕುಳಿತರೆ, ಜಗತ್ತು ಮುಂದೆ ಹೋಗೇ ಹೋಗುತ್ತೆ, ಹಿಂದೆ ಉಳಿಯುವವರು ಮಾತ್ರ ನಾವೇ.
ನಾವು ಒಪ್ಪಲಿ ಬಿಡಲಿ, ಇಂದಿನ ಗಡಿಬಿಡಿಯ ಜೀವನದಲ್ಲಿ ಎಲ್ಲರೂ ದುಡ್ಡಿನ ಹಿಂದೆ ಹೋಗಬೇಕಾದ ಅನಿವಾರ್ಯತೆ ಇದ್ದೇ ಇದೆ. ಇದಕ್ಕೆ ಭಾರತವೇನೂ ಹೊರತಾಗಿಲ್ಲ. ಹೀಗೆ ಹೊಸ ಬಗೆಯ ಜೀವನ ಶೈಲಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುವಾಗ ನಮ್ಮ ಸೂಕ್ಷತೆಗಳು, ಸಂವೇದನೆಗಳು ಬದಲಾಗುತ್ತಾ ಹೋಗುತ್ತವೆ. ಒಂದಾನೊಂದು ಕಾಲದಲ್ಲಿ ನಮ್ಮ ಜೀವಾಳವಾಗಿದ್ದಂತಹ ಪ್ರೀತಿ, ಪ್ರೇಮ, ಆದರ್ಶಗಳು ದಿನನಿತ್ಯದ ಯಾಂತ್ರಿಕೆ ಬದುಕಿನಿಂದಾಗಿ ಮಸುಕಾಗುತ್ತಿವೆ. ಹಾಗಂತ ನಾವು ಇಂದಿನ ನಾಗಾಲೋಟದ ಬದುಕಿನ ರೇಸ್ನಿಂದ ಹೊರಗೆ ಸರಿತಲು ಸಾಧ್ಯವೂ ಇಲ್ಲ. ಇದೊಂದು ಅನಿವಾರ್ಯವಾದ ಬೆಳವಣಿಗೆ. ಇಂತಹ ಜೀವನ ವಿಧಾನದಲ್ಲಿ ನಮ್ಮ ಭಾವನೆಗಳು, ಮಾನವೀಯ ಸಂಬಂಧಗಳು ಸಂಪೂರ್ಣವಾಗಿ ಕೈತಪ್ಪಿ ಹೋಗುವ ಅಪಾಯವಿದೆ. ಇದನ್ನು ತಪ್ಪಿಸುವುದಕ್ಕಾಗಿಯೇ ರೂಪುಗೊಂಡವು ಈ ಸಂಭ್ರಮಾಚರಣೆಗಳು. ಶಿಕ್ಷಕರ ದಿನ, ಮಕ್ಕಳ ದಿನ, ತಂದೆಯರ ದಿನ, ತಾಯಿಯರ ದಿನ, ಪ್ರೇಮಿಗಳ ದಿನ ಎಂದು ವರ್ಷದಲ್ಲಿ ಒಂದು ದಿನವಾದರೂ ನಾವು ನಮ್ಮ ಯಾಂತ್ರಿಕ ಬದುಕಿನ ಜಂಜಡಗಳಿಂದ ಮುಕ್ತವಾಗಿ ಮಾನವೀಯ ಸಂಬಂಧಗಳನ್ನು ಸವಿಯುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಬೇಡವೇ? ಒಂದು ದಿನವಾದರೂ ನಾವು ನಮ್ಮವರನ್ನು, ನಮ್ಮ ಪ್ರೀತಿಯನ್ನು ಕುರಿತು ಆಲೋಚಿಸಬೇಡವೇ?
ನೆನಪಿರಲಿ, ಪ್ರೇಮಿಗಳ ದಿನ ಎಂಬುದು ಕೇವಲ ಯುವಕರ ಸಂಭ್ರಮದ ದಿನವಲ್ಲ. ಪ್ರೇಮಿಗಳು ಕೇವಲ ಯುವ ಜೋಡಿಗಳೇ ಆಗಿರಬೇಕಿಲ್ಲ. ಜೀವನದ ಏಣಿಯ ಯಾವ ಹಂತದಲ್ಲೇ ಇರುವ ಪ್ರೇಮಿಗಳು ಈ ದಿನವನ್ನು ಸಂಭ್ರಮಿಸುತ್ತಾರೆ. ಯುವ ಜೋಡಿಗಳು ತಮ್ಮ ಹಸಿ ಹಸಿ ಪ್ರೇಮವನ್ನು ಪೋಷಿಸುತ್ತಾ ಸಂತಸ ಪಟ್ಟರೆ, ಹಿರಿಯ ಜೋಡಿಗಳು ತಮ್ಮ ಫಲಿತ ಪ್ರೇಮವನ್ನು ನೆನೆದು ಹತ್ತಿರಾಗುತ್ತಾರೆ. ಹೀಗೆ ಭಾವನಾತ್ಮಕವಾಗಿ ಆಚರಿಸಲ್ಪಡುವ ಪ್ರೇಮಿಗಳ ದಿನಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಪಡೆಯಬೇಕು?
ಪ್ರೇಮಿಗಳ ದಿನದಲ್ಲಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ದುರಾಕ್ರಮಣ ನಡೆಯುತ್ತೆ ಎನ್ನುತ್ತಾರೆ ಇದರ ವಿರೋಧಿಗಳು. ಇದೊಳ್ಳೆ, ಮಂಗಳವಾರ ಮಾತ್ರ ಯಾಕೆ ಅಪಘಾತಗಳಾಗ್ತವೆ ಅಂತ ಕೇಳಿದ ಹಾಗಾಯ್ತು. ಅಪಘಾತಗಳು ಯಾವ ದಿನವಾದರೂ ನಡೆಯುತ್ತವೆ. ಬೇರೆಲ್ಲಾ ದಿನ ನಡೆದಂತೆಯೇ ಅಂದೂ ನಡೆಯುತ್ತವೆ. ಆದರೆ ಬೆಣ್ಣೆಯಲ್ಲೂ ಕಲ್ಲು ಹುಡುಕುವ ಮಂದಿಗೆ ಅಷ್ಟು ಸಾಕಾಗಿಬಿಡುತ್ತೆ. `ಪ್ರೇಮಿಗಳ ದಿನ'ವೊಂದರಲ್ಲೇ ಹೆಣ್ಣು ಮಕ್ಕಳ ಮೇಲೆ ಅನಾಚಾರ ನಡೆಯುವುದು ಎನ್ನುವುದು ಮೂರ್ಖತನ, ಅಂತಹ ಕೃತ್ಯಗಳು ವರ್ಷದ ಎಲ್ಲಾ ದಿನಗಳಲ್ಲೂ ನಡೆಯುತ್ತವೆ. ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ದುರಾಚಾರ ನಡೆಸಲು `ಪ್ರೇಮಿಗಳ ದಿನ'ವೇ ಬೇಕೆಂದಿಲ್ಲ, ಗಾಂಧಿ ಜಯಂತಿಯಾದರೂ ನಡೆದೀತು!
- `ಅಂತರ್ಮುಖಿ'

- Login or register to post comments
- 460 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: