ಕಬ್ಬಿಗರ ಕಾವದ ಮೊದಲ ಪದ್ಯ
ನೆನ್ನೆಯ ದಿನ ರಾತ್ರಿ ೭:೦೦ ಗಂಟೆಗೆ ಪ್ರಾರಂಭಿಸಿ ಕ್ರೈಂ ಡೈರಿಯ ಚೋಟಾ ರಾಜನ್ ಪುರಾಣ ಬರುವವರೆಗೆ, ಕಬ್ಬಿಗರ ಕಾವದ ಮೊದಲ ಪದ್ಯವನ್ನು ಅದೆಷ್ಟು ಬಾರಿ ಓದಿದ್ದೇನೋ ತಿಳಿಯದು. ತುಂಬಾ ಅಂದರೆ ತುಂಬಾ ಇಷ್ಟವಾಯಿತು ಈ ಪದ್ಯದ ಆಶಯ. ನೆನ್ನೆ ನಾನು ಬರೆದಿಟ್ಟುಕೊಂಡು ಅನ್ವಯಾರ್ಥ ಮತ್ತು ಪೂರ್ಣ ವಿವರಗಳನ್ನು ಹಾಕುತ್ತಿದ್ದೇನೆ. ಓದಿ, ಆನಂದಿಸಿ.
ಆವನ ಗಾಡಿ ನೋಡಿದವರಂ ಸಲೆ ಸೋಲಿಸುತಿರ್ಪುದುರ್ಕಿನಿಂ |
ದಾವನ ಪೂವಿನಂಬದಟರಂ ತಲೆವಾಗಿಸುತಿರ್ಪುದೇೞ್ಗೆಯಿಂ ||
ದಾವನ ಪಜ್ಜಳಿಪ್ಪ ಜಸಮೆಣ್ದೆಸೆಯೊಳ್ ನೆಲಸಿರ್ಪುದಾತನೀ |
ಗಾವಗಮೆನ್ನ ಜಾಣ್ಣುಡಿಗೆ ಮೆಯ್ಸಿರಿಯಂ ನನೆವಿಲ್ಲಬಲ್ಲಹಂ || ೧ ||
ಅನ್ವಯಾರ್ಥ
ಆವನ ಸಲೆ ಗಾಡಿ ನೋಡಿದವರಂ ಸೋಲಿಸುತಿರ್ಪುದು, ಆವನ ಪೂವಿನ ಅಂಬು ಅದಟರಂ ಉರ್ಕಿನಿಂದ ತಲೆಬಾಗಿಸುತಿರ್ಪುದು, ಆವನ ಏೞ್ಗೆಯಿಂದ ಎಣ್ದೆಸೆಯೊಳ್ ಪಜ್ಜಳಿಪ್ಪ ಜಸಂ ನೆಲೆಸಿರ್ಪುದು, ಆತನು ನನೆವಿಲ್ಲಬಲ್ಲಹಂ, ಎನ್ನ ಜಾಣ್ಣುಡಿಗೆ ಆವಗಂ ಮೆಯ್ಸಿರಿಯಂ ಈಗೆ.
ಸಲೆ – ಅತಿಶಯವಾಗಿ, ಚೆನ್ನಾಗಿ, ಸರಿಯಾಗಿ; ಗಾಡಿ - ಸೌಂದರ್ಯ, ಮೋಹ, ಗಾಂಭೀರ್ಯ; ಪೂವಿನ – ಹೂವಿನ; ಅಂಬು – ಬಾಣ; ಅದಟರಂ – ಪರಾಕ್ರಮಿಗಳನ್ನು, ಶೂರರನ್ನು; ಉರ್ಕು - ಶೌರ್ಯ, ಉಕ್ಕು, ಹೆಮ್ಮೆ, ಸೊಕ್ಕಿಗೆ ಬರು, ಹೆಚ್ಚಾಗು, ದಿಟ್ಟತನ; ಏೞ್ಗೆ – ಏಳಿಗೆ; ಎಣ್ದೆಸೆಯೊಳ್ – ಎಣ್(ಎಂಟು) ದೆಸೆಯೊಳ್ – ಎಂಟು ದಿಕ್ಕುಗಳಲ್ಲಿ; ಪಜ್ಜಳಿಪ್ಪ – ಪ್ರಜ್ವಲಿಸುತ್ತಿರುವ; ಜಸಂ – ಯಶಸ್ಸು; ನನೆ – ಮೊಗ್ಗು; ನನೆವಿಲ್ಲ – ನನೆ + ಬಿಲ್ಲ = ನನೆಯಂಬ = ನನೆಗಣೆಯ, ನನೆ + ಕಣೆ(ಬಾಣ) – ಮೊಗ್ಗಿನ ಬಾಣಗಳು; ಬಲ್ಲಹಂ – ತಿಳಿದವನು; ನನೆವಿಲ್ಲಬಲ್ಲಹಂ – ಮೊಗ್ಗಿನ ಬಾಣಗಳನ್ನು ಪ್ರಯೋಗಿಸುವುದನ್ನು ತಿಳಿದವನು, ಮನ್ಮಥ; ಜಾಣ್ಣುಡಿಗೆ – ಕವಿಯ ಭಾಷೆಯಾದ ಕನ್ನಡಕ್ಕೆ; ಆವಗಂ – ಯಾವಾಗಲೂ, ಹೆಚ್ಚು ಮುಂದೆ ಮುಂದೆ, ಅಧಿಕ; ಮೆಯ್ಸಿರಿ – ಶ್ರೀಮಂತಿಕೆ, ಶೋಭೆ; ಈಗೆ – ನೀಡಲಿ, ಕೊಡಲಿ, ಕರುಣಿಸಲಿ;
ಯಾರ ಅತಿಶಯವಾದ ಸೌಂದರ್ಯವು ನೋಡಿದವರನ್ನು ಮೋಹಪರವಶರನ್ನಾಗಿಸುತ್ತಿರುವುದೋ, ಯಾರ ಹೂವಿನ ಬಾಣವು ವೀರರನ್ನು ಹೆಮ್ಮೆಯಿಂದಲೇ ತಲೆಬಾಗುವಂತೆ ಮಾಡುತಿಹುದೋ, ಯಾರ ಏಳಿಗೆಯಿಂದ ಎಂಟು ದೆಸೆಯಲ್ಲಿಯೂ ಪ್ರಜ್ವಲಿಸುತ್ತಿರುವ ಯಶಸ್ಸು ನೆಲೆಸಿರುವುದೋ, ಆತನು ಮನ್ಮಥನು. ಅವನು, ನನ್ನ ಜಾಣ್ಣುಡಿಗೆ ಅಂದರೆ ಕನ್ನಡ ನುಡಿಗೆ ಯಾವಾಗಲೂ ಹೆಚ್ಚು ಹೆಚ್ಚು ಸಂಪತ್ತನ್ನು ಕರುಣಿಸುತ್ತಿರಲಿ.
ವ್ಯಾಕರಣ ವಿಶೇಷಗಳು
ಇಲ್ಲಿ ಶ್ಲೇಷಾಲಂಕಾರವಿದೆ ಎನ್ನಬಹುದೇ ತಿಳಿಯದು, ಆದರೆ ಕೊನೆಯ ಸಾಲಿಗೆ ಎರಡರ್ಥವಿದೆ.
೧. ಆವಗಂ ಮೆಯ್ಸಿರಿಯಂ ಈಗೆ - ಯಾವಾಗಲೂ ಸಂಪತ್ತನ್ನು ನೀಡುತ್ತಾ ಇರಲಿ.
೨. ಆವಗಂ ಮೆಯ್ಸಿರಿಯಂ ಈಗೆ - ಅಧಿಕ ಶ್ರೀಮಂತಿಕೆಯನ್ನು ಕರುಣಿಸಲಿ.
ಎಲ್ಲಾ ಸಾಲಿನಲ್ಲಿಯೂ ಛಂದಸ್ಸು ನಿಯಮವನ್ನು ಕೂಡ ಪಾಲಿಸಲಾಗಿದೆ.

- Login or register to post comments
- 503 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
Re: ಕಬ್ಬಿಗರ ಕಾವದ ಮೊದಲ ಪದ್ಯ
ಸುನಿಲರವರೆ,
ನೀವು ಕನ್ನಡದ ಮೇಷ್ಟ್ರಾಗ ಬೇಕಿತ್ತು.. ಅಪ್ಪಿ ತಪ್ಪಿ ತಂತ್ರಾಂಶ ಲೋಕಕ್ಕೆ ಬಂದಿದ್ದೀರ..
ನಿಮ್ಮ ಹಳೆಗನ್ನಡದ ಆಸಕ್ತಿ ಮತ್ತು ಅರ್ಥೈಸುವಿಕೆ ಹಿಡಿಸಿತು...ನನಗೂ ಇಂತಹ ಪದ್ಯಗಳನ್ನು ಓದುವ ಆಸೆ ಮೂಡುತ್ತಿದೆ.
-ಜೈ ಕರ್ನಾಟಕ.
ಕಂದಾಚಾರಗಳನ್ನು ಮೀರಿ ನಿಲ್ಲೋಣ
ಅಯ್ಯೋ ಬಿಡಿ ವೈಭವರವರೇ, ಮೇಷ್ಟ್ರುಗಳು, ವಿದ್ಯಾರ್ಥಿಗಳು ಮಾತ್ರವೇ ಕನ್ನಡ ಕಾವ್ಯವನ್ನು ಓದಬೇಕು, ತಂತ್ರಜ್ಞರು ಮಾತ್ರವೇ ತಂತ್ರಜ್ಞಾನವನ್ನು ಬಳಸಬೇಕು ಎಂಬ ಸ್ವಯಂಘೋಷಿತ, ತಲೆಕೆಟ್ಟ ನಿಯಮಗಳನ್ನು ನಾವು, ನೀವು, ಎಲ್ಲರೂ ಮೀರಿ ನಿಲ್ಲೋಣ.
ಅಂದ ಹಾಗೆ, ನೀವೂ ಕಬ್ಬಿಗರ ಕಾವವನ್ನು ಓದಬೇಕೆಂದರೆ, ಇಲ್ಲಿ ಕ್ಲಿಕ್ ಮಾಡಿ,
Interface 1
Interface 2
ಆ ಸೈಟಿನಲ್ಲಿರುವ ಎಲ್ಲಾ ಪುಟಗಳು ಪುಸ್ತಕ ರೂಪದಲ್ಲಿ ಬೇಕಿದ್ದರೆ ಒಂದು ಮೇಯ್ಲ್ ಕಳುಹಿರಿ.
ನನೆವಿಲ್ಲಬಲ್ಲಹಂ ಅಂದರೆ ಏನು?
ನನೆವಿಲ್ಲಬಲ್ಲಹಂ ಅಂದರೆ ಏನು?
ನನೆ = ಮೊಗ್ಗು
ಪಿಲ್ಲ => ವಿಲ್ಲ = ಹುಡುಗಿ
ಬಲ್ಲಹಂ = ವಲ್ಲಭ
ಸರಿಯೇ?
ಶ್ಲೇಷಾಲಂಕಾರವಿದೆ?
ಇಲ್ಲಿ ಶ್ಲೇಷಾಲಂಕಾರವಿದೆ ಎನ್ನಬಹುದೇ ತಿಳಿಯದು, ಆದರೆ ಕೊನೆಯ ಸಾಲಿಗೆ ಎರಡರ್ಥವಿದೆ.
೧. ಆವಗಂ ಮೆಯ್ಸಿರಿಯಂ ಈಗೆ - ಯಾವಾಗಲೂ ಸಂಪತ್ತನ್ನು ನೀಡುತ್ತಾ ಇರಲಿ.
೨. ಆವಗಂ ಮೆಯ್ಸಿರಿಯಂ ಈಗೆ - ಅಧಿಕ ಶ್ರೀಮಂತಿಕೆಯನ್ನು ಕರುಣಿಸಲಿ.
ನನಗಿದು ಶ್ಲೇಷ ಅನ್ನಿಸುವುದಿಲ್ಲ. ಶ್ಲೇಷದಲ್ಲಿ ಒಂದೇ ಸಾಲು ಎಂದು ಸನ್ನಿವೇಶಗಳನ್ನು ಹೇಳುವುದು ಅಂತ ಓದಿದ ನೆನೆಪು.
ನಾನು ಹತ್ತನೇ ತರಗತಿಯಲ್ಲಿ ಓದಿದ ಒಂದು ಶ್ಲೇಷಾಲಂಕಾರ ಉದಾಹರಣೆ ನೆನೆಪಿದೆ.
"ಸುಯೋಧನನು ಸಾಯುತ್ತಾ ಇರುತ್ತಾನೆ, ಆಗ ನೇಸರನೂ ಮುಳುಗುತ್ತಿರುತ್ತಾನೆ"
ಈಯೆರಡು ಸಂಗತಿಗಳನ್ನು ರನ್ನನು ಒಂದೇ ಸಾಲಿನಲ್ಲಿ
"ಕುರುಕುಲಾರ್ಕನುಂ ಅರ್ಕನುಂ ಅಸ್ತಮೇಯ್ದಿದರ್" ಎಂದು ಹೇಳ್ತಾನೆ. ಅಂದರೆ
ಕುರುಕುಲದ ಸೂರ್ಯನಾದ ಸುಯೋಧನನು ಮತ್ತು ಸೂರ್ಯನೂ ಇಬ್ಬರೂ ಮುಳುಗಿದರು ಎಂದು.