ಹಿಂದುಗಳಿಗೆ ಭಾವನೆಗಳೇ ಇಲ್ಲವಾ...
ತುಮಕೂರಿನಲ್ಲಿ ಮಧುಗಿರಿ ಎಂಬ ಊರಿದೆ. ಅಲ್ಲಿ ಊರ ಹಬ್ಬದದಿನಗಳಲ್ಲಿ ಒಂದು ವಿಶೇಷವಾದ ಘಟನೆ ಜರುಗುತ್ತದೆ. ದೇವಸ್ಥಾನದ ಎದುರು ಕೆಂಪಗೆ ಉರಿಯುವ ಕೆಂಡವನ್ನು ಮಾರುಗಟ್ಟಲೆ ಉದ್ದಕ್ಕೂ ರಸ್ತೆಯ ಮೇಲೆ ಹರಡಿರುತ್ತಾರೆ. ಕೊಂಚ ಬಟ್ಟೆ ತಾಗಿದರೂ ಸುಟ್ಟುಹೋಗುವಂತಹ ನಿಗಿ ನಿಗಿ ಕೆಂಡ ಅದು. ಒಮ್ಮೆಗೇ ದೇವರ ಹೆಸರನ್ನು ಉದ್ಘೋಷಿಸುತ್ತಾ, ಜಯಕಾರ ಹಾಕುತ್ತಾ ಗುಂಪು ಗುಂಪು ಜನ ಆ ಕೆಂಡದ ಮೇಲೆ ನಡೆದು ಹೋಗಿಬಿಡುತ್ತಾರೆ. ಕುಡಿಯುವ ಕಾಫಿಯ ಬಿಸಿ ಸ್ವಲ್ಪ ಹೆಚ್ಚಾಗಿದ್ದರೇನೇ ಸಹಿಸಲಾಗದ ಜನ ಆ ಸಮಯದಲ್ಲಿ ಉರಿಯುವ ಕೆಂಡದ ಮೇಲೆ ತಮ್ಮ ನಗ್ನ ಪಾದಗಳನ್ನು ಊರಿ ನಡೆದುಹೋಗಿಬಿಡುತ್ತಾರೆ. ಅನಂತರ ಅವರ ದೃಷ್ಟಿ, ಗಮನ ತಮ್ಮ ಉರಿದ ಪಾದಗಳ ಮೇಲಿರುವುದಿಲ್ಲ. ಅವರ ಮನಸ್ಸಿನ ತುಂಬ ಕೇವಲ ದೇವರ ವಿಚಾರ ತುಂಬಿರುತ್ತದೆ. ಬೆಂಕಿಕಡ್ಡಿ ಹಚ್ಚಿದಾಗ ಅದರ ಉರಿ ಬೆರಳನ್ನು ತಾಕಿದರೇನೇ ಚಡಪಡಿಸುತ್ತಾ ಘಂಟೆಗಳ ಕಾಲ ಅದರ ಬಗ್ಗೆ ಚಿಂತಿಸುವ ಜನರು ಕೆಂಡದ ಮೇಲೆ ನಡೆದುಹೋದರೂ ಏನೂ ಆಗದವರಂತೆ ವರ್ತಿಸುತ್ತಾರೆ. ಇದಕ್ಕೆ ಕಾರಣವೇನು?
ಅದೊಂದು ಬುಡಕಟ್ಟು ಜನಾಂಗ. ಅವರ ಮೂಲ ವೃತ್ತಿ ವಿವಿಧ ಬಗೆಯ ಹಾವುಗಳನ್ನು ಹಿಡಿದು ಅವುಗಳನ್ನು ಪಳಗಿಸಿ ಆಡಿಸುವುದು, ಹಾಗೆ ಮನರಂಜನೆ ನೀಡುವ ಮೂಲಕ ತಮ್ಮ ಅನ್ನವನ್ನು ಹುಟ್ಟಿಸಿಕೊಳ್ಳುವುದು. ತಮ್ಮ ವೃತ್ತಿಯಲ್ಲಿ ಬಗೆ-ಬಗೆಯ ವಿಷಪೂರಿತ ಹಾವುಗಳೊಂದಿಗೆ ಒಡನಾಡಬೇಕಾದ ಅಪಾಯದ ಅರಿವಿರುವ ಆ ಜನಾಂಗದವರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಅದಕ್ಕೆ ತಯಾರು ಮಾಡುತ್ತಾರೆ. ಹಾವಿನ ವಿಷವನ್ನು ಸಣ್ಣ ಪ್ರಮಾಣದಲ್ಲಿ ಅವರಿಗೆ ಉಣಿಸುತ್ತಾ ಅವರನ್ನು ಬೆಳೆಸುತ್ತಾರೆ. ಮಕ್ಕಳು ಬೆಳೆದು ವಯಸ್ಕರಾಗುವ ವೇಳೆಗೆ ಅವರ ದೇಹ ಹಾವಿನ ವಿಷವನ್ನು ಜೀರ್ಣಿಸಿಕೊಳ್ಳಬಲ್ಲ ಶಕ್ತಿಯನ್ನು ಪಡೆದಿರುತ್ತೆ. ಒಂದೊಮ್ಮೆ ಅವರಿಗೆ ವಿಷಪೂರಿತವಾದ ಹಾವು ಕಡಿದರೂ ಏನೂ ಆಗದಂತಿರುತ್ತಾರೆ. ಹೀಗಿರುವಾಗ ಆ ಬುಡಕಟ್ಟಿನ ಒಬ್ಬ ಯುವಕ ಸಿಟಿಗೆ ಹೋಗಿರುತ್ತಾನೆ. ಅಲ್ಲಿ ಒಂದು ದಿನ ಹಾವೊಂದು ಮಗುವಿಗೆ ಕಡಿದು ಹೋಗುವ, ಮಗು ಅದರಿಂದ ಭಯ ಭೀತವಾಗುವ, ಜನರು ಗಾಬರಿಯಿಂದ ವರ್ತಿಸುವ, ಕೊನೆಗೆ ಮಗು ಹಾವಿನ ವಿಷದಿಂದ ಸತ್ತು ಹೋಗುವ ಘಟನೆಯನ್ನು ಕಾಣುತ್ತಾನೆ. ಅದೇ ವಿಚಾರದಲ್ಲಿ ಮನಸ್ಸನ್ನು ಮುಳುಗಿಸಿದ್ದವನಿಗೆ ತನ್ನ ಬುಡಕಟ್ಟಿಗೆ ಹಿಂತಿರುಗಿದಾಗ ಒಂದು ದಿನ ಹಾವೊಂದು ಕಾಣಿಸಿಕೊಳ್ಳುತ್ತದೆ. ಆತನಿಗೆ ಸಿಟಿಯ ಮಗುವಿನ ಘಟನೆ ನೆನಪಾಗಿ ಎದೆ ಕಂಪಿಸುತ್ತದೆ. ನೋಡು ನೋಡುತ್ತಿದ್ದಂತೆ ಹಾವು ಅವನ ಕಾಲಿಗೆ ಕಚ್ಚಿದಂತೆ ಭಾಸವಾಗುತ್ತೆ. ಅವನು ಗಾಬರಿಯಿಂದ ತತ್ತರಿಸಿ ಸತ್ತೇ ಹೋಗುತ್ತಾನೆ. ತನ್ನ ದೇಹದಲ್ಲಿ ವಿಷವನ್ನು ಅರಗಿಸಿಕೊಳ್ಳುವ ಶಕ್ತಿಯಿದ್ದರೂ ಆತ ಸತ್ತು ಹೋಗುತ್ತಾನೆ. ಅನಂತರ ಪರಿಶೀಲಿಸಿ ನೋಡಿದಾಗ ಆ ಯುವಕ ನೋಡಿ ಸತ್ತ ಹಾವು ವಿಷಪೂರಿತವಾಗಿರುವುದೇ ಇಲ್ಲ! ಹೀಗಾಗಲು ಕಾರಣವೇನು?
ಈ ಎರಡೂ ಉದಾಹರಣೆಗಳು ಮನುಷ್ಯನ ನಂಬಿಕೆ, ವಿಶ್ವಾಸಗಳ ಮಹತ್ವವನ್ನು ವಿವರಿಸುತ್ತವೆ. ಕೆಂಡ ಕಾಲನ್ನು ಸುಡುತ್ತದೆ ಎಂಬ ಅರಿವು ಇದ್ದರೂ, ಹಾವಿನ ವಿಷವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದ್ದರೂ ಅವರ ನಂಬಿಕೆ, ಶ್ರದ್ಧೆಗಳು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ. ಹಾಗಾಗಿ ಮನುಷ್ಯನ ನಂಬಿಕೆ, ಶ್ರದ್ಧೆಯೇ ಆತನ ಜ್ಞಾನ, ತಿಳುವಳಿಕೆಗಿಂತ ಹೆಚ್ಚು ಶಕ್ತಿಯುತವಾದದ್ದು ಎಂಬುದು ವಿಧಿತವಾಗುತ್ತದೆ. ವೈಜ್ಞಾನಿಕ ಸಂಶೋಧನೆಗಾಗಿ ರಾಕೆಟ್ ಉಡಾಯಿಸುವಾಗ ವಿಜ್ಞಾನಿಗಳು ರಾಹುಕಾಲ ನೋಡುವುದು, ರಾಕೆಟ್ಟಿನ ಶಿಖರಕ್ಕೆ ಶಾಂಪೇನ್ ಬಾಟಲ್ ಒಡೆಯುವುದು - ಎಲ್ಲವೂ ಮನುಷ್ಯನಿಗೆ ತನ್ನ ಶ್ರದ್ಧೆಯ ಮೇಲಿರುವ ವಿಶ್ವಾಸವನ್ನು ತೋರ್ಪಡಿಸುತ್ತವೆ.
ಜಗತ್ತಿನ ಬೇರಾವ ದೇಶಗಳಿಗೆ ಹೋಲಿಸಿದರೂ ಭಾರತದ ಜನರಿಗೆ ಶ್ರದ್ಧೆ, ನಂಬಿಕೆಗಳಲ್ಲಿ ಒಲವು ಹೆಚ್ಚು. ನಮಗೆ ಭಾವುಕತೆ ಹೆಚ್ಚು. ನಾವು ಭಾರತ ಭೂಮಿಯನ್ನು ಕೇವಲ ಭೌತಿಕ ಪ್ರದೇಶವಾಗಿ ಕಾಣಲಿಲ್ಲ. ಅದನ್ನು ಕೇವಲ ಮಣ್ಣು ಅಂತ ಪರಿಗಣಿಸಲಿಲ್ಲ. ಬದಲಾಗಿ ನಾವು ದೇಶವನ್ನು ತಾಯಿ ಎಂದು ಕರೆದೆವು. ಭೌತಿಕ ಅಸ್ತಿತ್ವಕ್ಕೆ ನಮ್ಮ ಶ್ರದ್ಧೆ, ಭಾವನೆಗಳ ಪುಷ್ಟಿ ತುಂಬಿ ದೇಶವನ್ನು 'ಭಾರತ ಮಾತೆ' ಎಂದು ಪೂಜಿಸಿದೆವು. ಈ ದೃಷ್ಟಿ ಭಾವ ಜನ್ಯವಾದದ್ದು. ಹಾಗೆಯೇ ಭಾರತೀಯರಿಗೆ ಅಮೂರ್ತವಾದ ದೇವರ ವಿಚಾರವನ್ನು ಆಪ್ತಗೊಳಿಸಿಕೊಳ್ಳಲು, ತಮ್ಮ ಮನಸ್ಸಿನ ಆಕಾಂಕ್ಶೆಗಳಿಗೆ ತಕ್ಕಂತೆ ರೂಪಿಸಿಕೊಳ್ಳಲು ವಿಗ್ರಹಾರಾಧನೆ ನೆರವಾಯ್ತು. ನಮಗೆ ಶಾರದೆಯ ಚಿತ್ರ ಕೇವಲ ಕಾಗದದ ಮೇಲೆ ಬರೆದ ಒಬ್ಬ ಹೆಣ್ಣಿನ ಚಿತ್ರವಾಗಿ ಕಾಣಲು ಎಂದಿಗೂ ಸಾಧ್ಯವಿಲ್ಲ. ದೇವಾಲಯದಲ್ಲಿ ಎದೆಯುಬ್ಬಿಸಿ ನಿಂತ ವೀರ ಹನುಮನ ವಿಗ್ರಹ ಬರಿಯ ಕೋತಿಯ ಶಿಲ್ಪವೆಂಬಂತೆ ನೋಡಲು ನಮಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಇವೆಲ್ಲ ನಮ್ಮ ಧಾರ್ಮಿಕ ಭಾವನೆಗಳಿಗೆ, ಶ್ರದ್ದ್ಧೆಗೆ ಸಂಬಂಧಿಸಿದ ಸಂಗತಿಗಳು.
ಅದಕ್ಕಾಗಿಯೇ ನಾವು ಭಾರತೀಯರು ಎಂ.ಎಫ್.ಹುಸೇನ್ ಎಂಬ ಚಿತ್ರಕಾರನನ್ನು ಆ ಪರಿ ವಿರೋಧಿಸಿದ್ದು. ಅವನ ಚಿತ್ರಗಳನ್ನು ನಾಶಮಾಡುವ ಹಂತಕ್ಕೆ ಕೋಪಿಸಿಕೊಂಡಿದ್ದು. ಭಾರತೀಯರು ಪೂಜ್ಯ ಭಾವನೆಂಯಿಂದ ಕಾಣುವ ಭಾರತ ಮಾತೆಯನ್ನು ನಗ್ನವಾಗಿ ಚಿತ್ರಿಸಿದ, ನಮ್ಮ ಪ್ರಜ್ಞೆಯ ಭಾಗವಾಗಿರುವ ಹನುಮಂತನೊಂದಿಗೆ ಸೀತೆ ಭೋಗಿಸುತ್ತಿರುವ 'ಕಲಾಕೃತಿ'ಗಳನ್ನು ರಚಿಸಿದ ಹುಸೇನ್ನನ್ನು ದೇಶ ದ್ರೋಹಿ ಎನ್ನದೆ ಇನ್ನೇನನ್ನಲು ಸಾಧ್ಯ...?
ಡ್ಯಾನಿಶ್ ಪತ್ರಿಕೆಯೊಂದು ಮಹಮ್ಮದ್ ಪೈಗಂಬರ್ ಬಗ್ಗೆ ಬರೆದ ಕಾರ್ಟೂನ್ನನ್ನು ಪ್ರಕಟಿಸಿದ್ದಕ್ಕೇ ಇಡೀ ಇಸ್ಲಾಂ ಜಗತ್ತು ಮನೆಗೆ ಬೆಂಕಿ ಬಿದ್ದಂತೆ ವರ್ತಿಸಿತು. ವಿನಾಕಾರಣವಾಗಿ ದೊಂಬಿ ಎಬ್ಬಿಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿತು. ಇಸ್ಲಾಂ ಧರ್ಮದಲ್ಲಿನ ಆಕ್ಷೇಪಾರ್ಹ ಸಂಗತಿಗಳನ್ನು ಎತ್ತಿ ತೋರಿಸಿದ ಸಲ್ಮಾನ್ ರಶ್ದಿಯನ್ನು ದೇಶಭ್ರಷ್ಟನನ್ನಾಗಿಸಿ ಗಡೀ ಪಾರು ಮಾಡಲಾಯ್ತು. ಇಸ್ಲಾಂನ ಎದುರು ಮಾತನಾಡಿದ ತಸ್ಲೀಮಾ ಬಾಂಗ್ಲಾದೊಳಗೆ ಕಾಲಿಡದಂತೆ ಮಾಡಲಾಯ್ತು. ಈ ಮೂರೂ ಮಂದಿಯ ತಲೆಗೆ ಬಹುಮಾನ ಘೋಷಣೆಯಾಯ್ತು. ಅದೆಲ್ಲೋ ಇರುವ ಡ್ಯಾನಿಶ್ ವ್ಯಂಗ್ಯಚಿತ್ರಕಾರನ ತಲೆಗೆ ಹೈದರಾಬಾದಿನ ಮಸೀದಿಯಲ್ಲಿ ಕುಳಿತ ಮೌಲ್ವಿ ಬಹುಮಾನ ಘೋಷಿಸಿದ್ದ!
ಅದೇ ಹಿಂದುಗಳ ವಿಚಾರ ತೆಗೆದುಕೊಳ್ಳಿ. ಕಾನೂನಿನ ಬಲದಲ್ಲಿ ಅವರ ಅನೇಕ ಆಚರಣೆ, ಶ್ರದ್ಧೆಗಳನ್ನು ನಿಯಂತ್ರಿಸಲಾಯ್ತು ಆದರೆ ಯಾರೂ ಬೀದಿಗೆ ಬಿದ್ದು ದೊಂಬಿ ಮಾಡಲಿಲ್ಲ. ದೇವಾಲಯಗಳನ್ನು ನಾಶ ಮಾಡಿದಾಗ್ಯೂ ರಾಜ-ಮಹಾರಾಜರನ್ನು ವಿರೋಧಿಸಲಿಲ್ಲ. ಹಿಂದೂ ಧರ್ಮವನ್ನು ಇಂಚು ಇಂಚಾಗಿ ಲೇವಡಿ ಮಾಡಿ, ಧಾರ್ಮಿಕ ಆಚರಣೆಗಳನ್ನು ಎತ್ತಿ ಆಡಿಕೊಂಡರೂ ಯಾವ ಹಿಂದು ಮಠಾಧೀಶನೂ, ಅರ್ಚಕನೂ ಬೇರೊಬ್ಬನ ತಲೆಗೆ ಬಹುಮಾನ ಘೋಷಿಸಿ ಫತ್ವಾ ಹೊರಡಿಸಲಿಲ್ಲ.
ಹಿಂದುಗಳ ಈ ಸಹಿಷ್ಣುತೆಗೆ ಯಾವ ಬೆಲೆಯೂ ಇಲ್ಲವಾ?ಬಹು ಸಂಖ್ಯಾತರಾಗಿರುವ ಹಿಂದುಗಳಿಗೆ ಯಾವ ಭಾವನೆಗಳೂ ಇಲ್ಲವಾ ಅಥವಾ ಆ ಭಾವನೆಗಳಿಗಾಗುವ ಪೆಟ್ಟಿಗೆ ಯಾವ ಮನ್ನಣೆಯೂ ಇಲ್ಲವಾ? ಅಸಲಿಗೆ ತಮ್ಮದೇ ನೆಲದಲ್ಲಿ, ತಮ್ಮದೇ ದುಡಿಮೆ, ಬೆವರು, ಸಂಪಾದನೆಯ ಮೇಲೆ ನಡೆಯುತ್ತಿರುವ ದೇಶದಲ್ಲಿ ಹಿಂದೂಗಳೇಕೆ ಪರದೇಶಿಗಳಂತಿರಬೇಕು? ಈ ಪ್ರಶ್ನೆಗಳಿಗೆ ಹುಸೇನ್ನಂತಹ ಪ್ರಚಾರ ಪ್ರಿಯ, ಹಣದ ಹಿಂದೆ ಬಿದ್ದ ಕಲಾವಿದನನ್ನು ಬೆಂಬಲಿಸುವ ಬುದ್ಧಿ ಜೀವಿಗಳ್ಯಾರೂ ಉತ್ತರಿಸೋದೇ ಇಲ್ಲ. ತಮ್ಮ ನಂಬಿಕೆಗಳನ್ನು ಘಾಸಿಗೊಳಿಸಿದ ಹುಸೇನ್ನ ವಿರುದ್ಧ ಪ್ರತಿಭಟಿಸಲು ಎದ್ದು ನಿಂತ ಪ್ರತಿಯೊಬ್ಬ ಹಿಂದುವೂ ನಮ್ಮ ಬುದ್ಧಿಜೀವಿ, ಮಾಧ್ಯಮದವರ ಕಣ್ಣಿಗೆ ಮೂಲಭೂತವಾದಿಯಾಗಿ, ಕೋಮುವಾದಿಯಾಗಿ ಕಾಣುತ್ತಾನೆ. ಇಸ್ಲಾಂ ಉಗ್ರವಾದವನ್ನು ಮುಸ್ಲಿಂ ಬಾಂಧವರಲ್ಲಿರುವ ಅಭದ್ರತೆಯ ಫಲ ಎಂದು ವ್ಯಾಖ್ಯಾನಿಸಿ ಕೈತೊಳೆದುಕೊಳ್ಳುವ ಕ್ರಾಂತಿಕಾರಿಗಳಿಗೆ ಹಿಂದುವಿನ ಸ್ವಾಭಿಮಾನದ ಕೂಗು ಭಯೋತ್ಪಾದನೆಯ ಅಟ್ಟಹಾಸವಾಗಿ ಕಾಣುವುದು ವಿಪರ್ಯಾಸ.
ಹಿಂದುಗಳಿಂದಾಗಿ ಭಾರತದಲ್ಲಿನ ಅಲ್ಪ ಸಂಖ್ಯಾತರು ತೊಂದರೆ ಅನುಭವಿಸುತ್ತಿದ್ದಾರೆ, ಹಿಂಸೆಗೊಳಗಾಗುತ್ತಿದ್ದಾರೆ, ಅನ್ಯಾಯಕ್ಕೊಳಗಾಗುತ್ತಿದ್ದಾರೆ ಎನ್ನುವ ಸ್ವಯಂ ಘೋಷಿತ 'ಜಾತ್ಯಾತೀತ'ವಾದಿಗಳು ಗಮನಿಸಬೇಕಾದ ಅಂಶಗಳಿವು: ೧೯೪೭ರಲ್ಲಿ ಭಾರತದಿಂದ ವಿಭಜಿತವಾದ ಪಾಕಿಸ್ತಾನದಲ್ಲಿ ಆಗ ಇದ್ದ ಹಿಂದುಗಳ ಜನಸಂಖ್ಯೆ ಒಟ್ಟು ಜನಸಂಖ್ಯೆಯ ೨೪%. ಈಗ ಅದು ೧.೨%ಗೆ ಇಳಿದಿದೆ. ನೆರಯ ಬಾಂಗ್ಲಾದ ಉಗಮವಾದಾಗ ಅಲ್ಲಿ ಶೇ.೩೦ರಷ್ಟು ಹಿಂದುಗಳಿದ್ದರು. ಈಗ ಶೇ.೭ರಷ್ಟಾಗಿದ್ದಾರೆ. ಕಾಶ್ಮೀರದಲ್ಲಿ ನಡೆದ ಪಂಡಿತರ ಮೇಲಿನ ಹೇಯವಾದ ದೌರ್ಜನ್ಯ, ಜಗತ್ತನ್ನು ನಡುಗಿಸುತ್ತಿರುವ ಮುಸ್ಲಿಂ ಮೂಲಭೂತವಾದ ಇವೆಲ್ಲಾ ನಮ್ಮ ಜಾತ್ಯಾತೀತವಾದಿಗಳಿಗೆ ಕಾಣುವುದೇ ಇಲ್ಲ.
ಈ ಎಲ್ಲಾ ಆಗುಹೋಗುಗಳಿಗೆ ಬುದ್ಧಿಜೀವಿಗಳು ಅನುಸರಿಸುತ್ತಿರುವ 'ಹಿಟ್ ಅಂಡ್ ರನ್' ಮನೋಭಾವವೇ ಕಾರಣ. ಮುಸ್ಲಿಂರ ಬಗ್ಗೆ ಮಾತನಾಡುವುದು ರಿಸ್ಕಿನ ವಿಷಯ ಎಂದು ಅವರು ಭಾವಿಸಿರುವುದರಿಂದಲೇ ಅವರ ಮಾತುಗಳಲ್ಲಿ ಇಸ್ಲಾಂ ಮೂಲಭೂತವಾದ, ಮತಾಂಧತೆಯ ಪ್ರಸ್ತಾಪವಾಗುವುದಿಲ್ಲ. ಹಿಂದುಗಳಿಗೆ ಎಷ್ಟು ಬೈದರೂ, ಉಗಿದರೂ, ಅವಮಾನಿಸಿದರೂ, ಅವರ ಶ್ರದ್ಧೆಗೆ ಎಷ್ಟು ವಿನಾಶಕಾರಿಯಾಗಿ ಆಕ್ರಮಣ ಮಾಡಿದರೂ ಅವರಿಂದ ಅಪಾಯವಿಲ್ಲ, ವಿರೋಧ ಬರುವುದಿಲ್ಲ ಎಂಬ ಧೈರ್ಯದಿಂದಲೇ ಅವರು 'ಕ್ರಾಂತಿಕಾರಿ'ಗಳಾಗುವುದು. ಪ್ರಜ್ಞಾವಂತರು, ನಮ್ಮ ಧರ್ಮದ ಮೇಲೆ ಅಭಿಮಾನವಿರುವವರು ಇಂತಹ ಕ್ರಾಂತಿಕಾರಿಗಳ ಅವಕಾಶವಾದಿ ಜಾತ್ಯಾತೀತತೆಯನ್ನು ಹಿಡಿದು ಜಾಡಿಸದಿದ್ದರೆ, ಹಿಂದೂಗಳಲ್ಲೇ ಮತಾಂಧರಾದ ಸಂಘಟನೆಗಳು, ಗುಂಪುಗಳು ಅದನ್ನು ತಮಗೆ ತಿಳಿದ, ತಮ್ಮ ಸಂಸ್ಕಾರಕ್ಕೆ ಹೊಂದುವ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ನಾವು ಅಸಹಾಯಕರಾಗಿ ನೋಡುತ್ತಾ ಕೂರಬೇಕಾಗುತ್ತದೆ. ಮತ್ತು ಅದಕ್ಕಾಗಿ ಹೆಚ್ಚಿನ ಟೀಕೆಗೆ, ಅವಮಾನಕ್ಕೆ ಒಳಗಾಗಬೇಕಾಗುತ್ತದೆ.

- Login or register to post comments
- 582 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: