ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
"ತುಂಗಾ ಮೂಲ ಚಳುವಳಿ"ಯ ಕೆಲವು ಸಂಗತಿಗಳು:
" ತುಂಗಾ ಮೂಲ ಚಳುವಳಿ" ಕುರಿತಾಗಿ ದಿನಾಂಕ ೧/೭/೨೦೦೭ ರ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬಹಳ ಲಘುವಾಗಿ ಬರೆದಿದ್ದಾರೆ. ಅದು ಶ್ರೀ. ಅನಂತಮೂರ್ತಿಯವರನ್ನು ಲೇವಡಿ ಮಾಡಲು ಬರೆದದ್ದು. ಇದು ಅತ್ಯಂತ ಬೇಜವಾಬ್ದಾರಿ ನಡುವಳಿಕೆಯಾಗಿದ್ದು ಇದನ್ನು ನಾವು ಖಂಡಿಸುತ್ತಿದ್ದೇವೆ. 'ತುಂಗಾ ಮೂಲ ಉಳಿಸಿ ಹೋರಾಟ' ಈ ನಾಡಿನ ಕೋಟ್ಯಾಂತರ ಜನರ, ರೈತರ ಬದುಕಿನಮೇಲೆ ನೇರವಾಗಿ ಪರಿಣಾಮ ಬೀರುವ ತುಂಗಾ- ಭದ್ರಾ ನದಿಗಳ ಉಳಿವಿನ ಹೋರಾಟವದು. ಈ ಅಹಿಂಸಾತ್ಮಕ ಆಂದೋಳನಕ್ಕೆ ಜನಕೋಟಿಯ ಮನಸ್ಸು- ಹೃದಯದ ಬೆಂಬಲ ದೊರಕುವಂತೆ ಮಾಡಿ ಸರ್ಕಾರವನ್ನು ಮಣಿಸಿದ್ದು ಅನಂತಮೂರ್ತಿಯವರ ನಾಯಕತ್ವ. ನಮ್ಮ ಕಾಲದ ಈ ಮಹತ್ವದ ಘಟನೆಯ ಹಿಂದಿನ ಸಂಗತಿಗಳನ್ನು ತಿಳಿಸದೇ ಹೋದರೆ ಹೀನ ಮನಸ್ಸಿನ ಜನ ಸತ್ಯವನ್ನೇ ತಿರುಚಿಬಿಡುತ್ತಾರೆಂದು ಈ ಕೆಳಗಿನ ಮಾಹಿತಿಗಳನ್ನು ನಾವು ನೀಡಬೇಕಾಗಿದೆ.
ಯಾವುದೇ ಚಳುವಳಿಗಳಿರಲಿ ಅದೊಂದು ರೀತಿಯಲ್ಲಿ ರಿಲೇ ಓಟದಂತೆ. ಕೊನೆಯ ಹಂತದ 'ಲ್ಯಾಪಿ'ನಲ್ಲಿ ಗುರಿಮುಟ್ಟುವವನು ಹಿಂದಿನವರ ಎಲ್ಲಾ ಸರಿ-ತಪ್ಪುಗಳನ್ನೂ ಹೆಗಲಮೇಲೆ ಹೊತ್ತು-ಬಳಸಿಕೊಂಡು ಗೆಲುವನ್ನು ಸಾಧಿಸಬೇಕು. ನಮ್ಮ ದೇಶದ ಸ್ವಾತಂತ್ರ ಹೋರಾಟವನ್ನೂ ಹೀಗೇ ನೋಡಿದರೆ ಗಾಂಧೀಜಿಯವರ ನಾಯಕತ್ವ ಕೊನೆಯಲ್ಲಿ ನಮಗೆ ಬಿಡುಗಡೆಯನ್ನು ನೀಡಿತು. ಈ ಕೊನೆಯ ಹಂತವೇ ಬಹಳ ಸೂಕ್ಷ್ಮ ಮತ್ತು ಆತಂಕಭರಿತವಾದದ್ದು. ಏಕೆಂದರೆ ನಿಜಕ್ಕೂ ನಮಗೆ ಯಶಸ್ಸು ಸಿಗಬಹುದೆಂಬ ಸಂಪೂರ್ಣ ನಂಬಿಕೆ ಹೋರಾಟಗಾರರಲ್ಲಿ ಇರುವುದಿಲ್ಲ. ಇಲ್ಲಿ ಸಿನಿಕತನ, ಅನುಮಾನಗಳೆಲ್ಲಾ ಇದ್ದೇ ಇರುತ್ತವೆ. ನಾವೇನು ನೂರಕ್ಕೆ ನೂರು ದೇವರನ್ನು ನಂಬುವವರೇ? ಈ ರೀತಿಯ ಅಂತಿಮ ಗಳಿಗೆಯ ಮನಸ್ಸಿನ ಸ್ಥಿತಿ ಹೋರಾಟವನ್ನು ಹಿಂಸಾ ಮಾರ್ಗದತ್ತ ತಳ್ಳುವುದನ್ನು ನಾವು ನೋಡುತ್ತಲೇ ಇರುತ್ತೇವೆ. ನಿಜಕ್ಕೂ ಅಹಿಂಸಾ ಮಾರ್ಗದಿಂದಲೇ ಕೊನೆಯ ಹಂತದ ಜಯವನ್ನು ಸಾಧಿಸಬೇಕೆಂದರೆ ನಾಯಕತ್ವದಲ್ಲಿ ಅಸೀಮ ಜಾಣತನ, ಚಾಲೂಕುತನ,ಯಾರನ್ನೂ ದ್ವೇಶಿಸದೇ ಎಲ್ಲರ ಮನಸ್ಸನ್ನು ತಟ್ಟುವ ಪ್ರಾಮಾಣಿಕತೆ- ಇವೆಲ್ಲವೂ ಮೇಳೈಸಿರಬೇಕಾಗುತ್ತದೆ. ಗಾಂಧೀಜಿ ಇದರಲ್ಲಿ ನಿಪುಣರಾಗಿದ್ದರಿಂದಲೇ ರಕ್ತಪಾತವಿಲ್ಲದೇ ಸ್ವಾತಂತ್ರ ದೊರಕಿತು.
ಇದನ್ನು ನಮ್ಮ ' ತುಂಗಾ ಮೂಲ ಉಳಿಸಿ' ಹೋರಾಟಕ್ಕೂ ಅನ್ವಯಿಸಬಹುದು. ಅನೇಕ ವರ್ಷಗಳಿಂದ ನಡೆಯುತ್ತಿದ್ದ ಚಳುವಳಿಯಿದು. ಶ್ರೀ. ಕಲ್ಕುಳಿ ವಿಟ್ಟಲ್ ಹೆಗಡೆ, ಸುಂದರ್ ಮುಂತಾದವರು ಕುದುರೇಮುಖ ಗಣಿಗಾರಿಕೆಯ ವಿಚಾರವಾಗಿ ಸಂಗತಿಗಳನ್ನು ಮನಗಂಡು ಚಳುವಳಿ ಕಟ್ಟಿದರು. ಕೆಳಹಂತದಲ್ಲಿ ಜನರನ್ನು ಸಂಘಟಿಸಿದರು. ಜನರನ್ನು ಜಾಗೃತಿಗೊಳಿಸಲು ನಾಡಿನಾದ್ಯಂತ ಓಡಾಡಿದರು. ನಂತರದಲ್ಲಿ ಈ ಚಳುವಳಿಗೆ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಹೆಗ್ಗೋಡಿನ ಸುಬ್ಬಣ್ಣ ನಾಯಕತ್ವ ನೀಡಿದರು. ಇನ್ನೂ ಹೆಚ್ಚಿನ ಜನ ಸಮುದಾಯ ಹೀಗೆ ಈ ಚಳುವಳಿಗೆ ಆಕರ್ಷಿತವಾಯಿತು. ಇನ್ನೋಂದೆಡೆ ಈ ನದೀ ಮೂಲ ಪ್ರದೇಶವನ್ನು ಅರಣ್ಯ ಕಾನೂನಿನ ಮೂಲಕವೇ ಗಣಿಗಾರಿಕೆಯಿಂದ ಮುಗ್ತವಾಗಿಸುವ ನಿಟ್ಟೀನಲ್ಲಿ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ ನಿರ್ಣಾಯಕ ಹಂತದಲ್ಲಿ ಹೇಗೆ ಯಾರಿಂದ ಜಯ ಲಭಿಸಬಹುದು ಎಂಬುದು ಮಾತ್ರ ಯಕ್ಷಪ್ರಶ್ಣೆಯಾಗಿ ನಮಗೆಲ್ಲ ಕಾಡಿತ್ತು. ಕೊನೆಯ ಹಂತದಲ್ಲಿ ಅಂದರೆ ಇನ್ನೇನು ಸರ್ಕಾರ ಗಣೀಕರಣದ ಪರವಾನಗೆಯನ್ನು ನವೀಕರಿಸಿಬಿಡುತ್ತದೆ ಎಂಬ ಅನುಮಾನ ನಮಗೆ ದಟ್ಟವಾದಾಗ ನಿಜಕ್ಕೂ ಅದು ಚಳುವಳಿಯ ಸ್ಪೋಟಕ ಸ್ಥಿತಿ. ಈ ಪರಿಸ್ಥಿತಿಯಲ್ಲಿ ನಾವು ಹಿಂಸಾ ಮಾರ್ಗವನ್ನು ಹಿಡಿಯುವುದು ನ್ಯಾಯವೆಂದು ಅನ್ನಿಸುವಂಥ ಗಳಿಗೆ ಅದು. ಇಷ್ಟು ವರ್ಷಗಳ ನಮ್ಮ ಹೋರಾಟ ನಿಜವಾದ ಜನಬೆಂಬಲವಿಲ್ಲದೇ ಸೋಲುತ್ತದೆ ಎಂಬ ಹತಾಶೆ. ಈ ಗಳಿಗೆಯಲ್ಲಿಯೇ ಡಾ. ಯು.ಆರ್. ಅನಂತಮೂರ್ತಿಯವರ ಪ್ರವೇಶ ನಮ್ಮ ಚಳುವಳಿಗೆ ಆಗಿದ್ದು.
ಶ್ರೀ ಅನಂತಮೂರ್ತಿಯವರಿಗೆ ನಮ್ಮ ಈ ಚಳುವಳಿಯ ಕುರಿತಾಗಿ ಹಿಂದಿನಿಂದಲೇ ಆಸಕ್ತಿ ಇತ್ತು. ಅಲ್ಲದೇ ಅವರ ಮಿತ್ರರಾದ ಸುಬ್ಬಣ್ಣ ನವರೇ ಈ ಚಳುವಳಿಯಲ್ಲಿ ಮುಖ್ಯರಾಗಿ ನಮ್ಮೊಂದಿಗಿದ್ದ ಕಾರಣ ಅನೇಕಬಾರಿ ಈ ಚಳುವಳಿಯ ಕುರಿತು ಚರ್ಚಿಸುತ್ತಲೂ ಇದ್ದೆವು. ನಾವೇ ಅವರನ್ನು ನೇರವಾಗಿ ಇಲ್ಲಿಗೆ ಬಂದು ಪಾಲ್ಗೊಳ್ಳಲು ಒತ್ತಾಯಿಸಿರಲಿಲ್ಲ. ಸುಬ್ಬಣ್ಣನವರು ತಮ್ಮ ಅನಾರೊಗ್ಯದ ಕಾರಣದಿಂದ ಕೊನೆಯಲ್ಲಿ ಚಳುವಳಿಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಲು ಸಾಧ್ಯವಾಗದ ಕಾರಣದಿಂದ ನಮ್ಮ ಆತ್ಮಬಲ ಕ್ಷೀಣಿಸುವ ಹೊತ್ತಿನಲ್ಲಿ ನಮಗೆ ಬಲ-ಬೆಂಬಲ ಕೊಟ್ಟವರು ಅನಂತಮೂರ್ತಿ.
ಆಗತಾನೆ ಅವರು ತಮ್ಮ "ದಿವ್ಯ" ಕಾದಂಬರಿಯನ್ನು ಮುಗಿಸಿದ್ದರು. ಆ ಕಾದಂಬರಿಯಲ್ಲಿ ಅವರು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಜೋಯಿಸರ ವಿಚಾರವಾಗಿ ಆಲೋಚಿಸಿದ್ದರೆಂದು ಕಾಣುತ್ತದೆ. ಎಂದಿನಂತೆ ತಮ್ಮೂರೇ ಆಗಿರುವ ತೀರ್ಥಹಳ್ಳಿಗೆ ಬಂದವರು ಹೊರನಾಡಿಗೆ ಹೋಗಿಬರುವ ಆಸಕ್ತಿಯನ್ನು ತೋರಿದರು. ನಮಗೆ ಇದು ಸಹಕಾರಿ ಆಯಿತು. ಅವರೊಂದಿಗೆ ನಾವು ಕಳಸ-ಹೊರನಾಡಗೆ ಹೊರಟು ದಾರಿಯಲ್ಲಿ ಸಿಗುವ ಕುದುರೇಮುಖ ಗಣಿಗಾರಿಕೆಯ ಅವಾಂತರಗಳನ್ನು ಪ್ರತ್ಯಕ್ಷವಾಗಿ ತೋರಿಸಿದೆವು. ಆ ನಂತರ ಅವರಿಗೆ ನಾವು ಏನನ್ನೂ ಹೇಳಬೇಕಾಗಿ ಬರಲಿಲ್ಲ. ಈ ಕೆಲಸವನ್ನು ತಡೆಯಬೇಕೆಂಬ ಸಂಕಲ್ಪ ಅವರಲ್ಲಿ ಗಟ್ಟಿಯಾಗಿ ಬೇರೂರಿತು.
ನಾವು ಚಳುವಳಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ನೇರ ಭಾಗವಹಿಸುವಿಕೆಗೆ ಈವರೆಗೂ ಆಸ್ಪದ ನೀಡಿರಲಿಲ್ಲ. ಅಂತೆಯೇ ಯಾವುದೇ ರಾಜಕೀಯ ಮುಖಂಡರನ್ನೂ ಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ಅನಂತಮೂರ್ತಿಯವರು ತೀರ್ಥಹಳ್ಳಿಗೆ ವಾಪಾಸ್ಸಾಗುತ್ತಿದ್ದಂತೆ ಕೂಡಲೆ ಅವರು ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರ ಹಾಗೂ ಸಾಮಾಜಿಕ ಕಳಕಳಿಯ ಗಣ್ಯರ, ಪರಿಸರಾಸಕ್ತರ ಸಭೆಯನ್ನು ಕರೆಯಲು ಸೂಚಿಸಿದರು. ಶಾಸಕರನ್ನು ಖುದ್ದಾಗಿ ಸಂಪರ್ಕಿಸಿ ಮಾತನಾಡಿದರು. ಕುದುರೇಮುಖ ಗಣಿಗಾರಿಕೆಯನ್ನು ನಿಲ್ಲಿಸಲು ತೀರ್ಥಹಳ್ಳಿಯಲ್ಲಿ ಮಹತ್ವದ ಸರ್ವಪಕ್ಷಗಳ ಸಮಾವೇಶ ನಡೆಸಲು ಪೂರ್ವಭಾವಿ ಸಭೆ ನಿರ್ಣಯಿಸಿತು.೯-೭-೨೦೦೧ ರಂದು ನಡೆದ ಸಭೆ ನಿಜಕ್ಕೂ ಐತಿಹಾಸಿಕವಾದದ್ದು. ನಮ್ಮ ಅಷ್ಟೂ ವರ್ಷಗಳ ಚಳುವಳಿಯ ಸದಾಭಿಪ್ರಾಯ ಅಂದು ಕಣ್ಣಿಗೆ ಕಾಣುವಂತಾಯಿತು. ನಿಜಕ್ಕೂ ನಮಗೆ ಆನೇಬಲವೇ ಬಂದಿತ್ತು. ಸಮಾವೇಶದ ನಂತರ ಅಂದಿನ ಸಾಯಂಕಾಲವೇ ಅಂದಿನ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರಿಗೆ ಇ ಮೈಲ್ ಮೂಲಕ ಸಭೆಯ ಅಭಿಪ್ರಾಯವನ್ನು ಅನಂತಮೂರ್ತಿಯವರು ಕಳುಹಿಸಿದರು. "ನಾನು ಮಲೆನಾಡಿನ ಮಗ. ನೀವು ಮಲೆನಾಡಿನ ಅಳಿಯ. ಈಗ ನಾವು ಅಭಿವೃದ್ದಿಯ ಭ್ರಮೆಯಿಂದ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಲು ಸಕಾಲ. ನೀವು ಗಣಿಗಾರಿಕೆಗೆ ಪುನಹ ಅವಕಾಶ ಕೊಡಬಾರದು" ಎಂದು ಬರೆದಿದ್ದಕ್ಕೆ ಅಂದಿನ ರಾತ್ರಿಯೇ ಮು.ಮಂ ಗಳಿಂದ ಸಕಾರಾತ್ಮಕ ಉತ್ತರದ ಜೊತೆಯಲ್ಲಿ ಬೆಂಗಳೂರಿಗೆ ಬಂದು ಕಾಣುವಂತೆ ಚಳುವಳಿಗಾರರಿಗೆ ಆಹ್ವಾನ ಕೂಡ ಬಂದಿತು. ಈ ಸಂದರ್ಭದಲ್ಲಿ ಅನಂತಮೂರ್ತಿಯವರು ತೇಜಸ್ವಿ ಮುಂತಾದವರ ಜೊತೆ ಸತತ ಸಂಪರ್ಕದಲ್ಲಿದ್ದರು. ತೇಜಸ್ವಿಯವರು ನೇರವಾಗಿ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಅದೇ ಸಮಯದಲ್ಲಿ ಉಲ್ಲಾಸ್ ಕಾರಂತ್ ಹಾಗೂ ವೈಲ್ಡ್ ಲೈಫ಼್ ಗಿಲ್ದ್ ಅವರೊಂದಿಗೆ ನ್ಯಾಷನಲ್ ಪಾರ್ಕಿನ ವ್ಯಾಪ್ತಿಯ ಪ್ರದೇಶವಾದ ಕಾರಣದಿಂದ ಕುದುರೇಮುಖದಲ್ಲಿ ಗಣಿಗಾರಿಕೆ ನಡೆಸುವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು. ಹೀಗೆ ನಮ್ಮ ಕನ್ನಡದ ಮತ್ತೊಬ್ಬ ಮುಖ್ಯ ಲೇಖಕರಾದ ಫೂರ್ಣಚಂದ್ರ ತೇಜಸ್ವಿಯವರು ಕೂಡ ಗಣಿಗಾರಿಕೆಯನ್ನು ನಿಲ್ಲಿಸಲು ಮಹತ್ವದ ಪ್ರಯತ್ನವನ್ನು ಪಟ್ಟಿರುವುದನ್ನು ನಾವೆಲ್ಲರೂ ಧನ್ಯತೆಯಿಂದ ನೆನಪಿಸಿಕೊಳ್ಳಲೇ ಬೇಕು. ದಕ್ಷಿಣ ಕನ್ನಡದ ನಾಗರ್ಈಕ ಸೇವಾ ಟ್ರಸ್ಟ್ ಹಾಗೂ ದಿ. ಮುರಾರಿ ಬಲ್ಲಾಳ್ ಕೂಡ ಅಲ್ಲಿ ಜನಜಾಗೃತಿಯನ್ನು ಮೂಡಿಸಿ ಸರ್ಕಾರದ ಮೇಲೆ ಒತ್ತಡವನ್ನು ತಂದರು.
ತೀರ್ಥಹಳ್ಳಿಯ ಸಮಾವೇಶದ ನಂತರ ನಿಜಕ್ಕೂ ನಾವು ಇಡೀ ದೇಶಕ್ಕೆ ಈ ಗಣಿಗಾರಿಕೆ ಬೇಡ ಎನ್ನುವ ಕೂಗನ್ನು ಕೇಳಿಸಬೇಕೆಂದು ನಿರ್ಧರಿಸಿ ಇಡೀ ಶಿವಮೊಗ್ಗ ಬಂದ್ ಗಾಗಿ ಕರೆಕೊಡಲಾಯಿತು. ಇದಕ್ಕಾಗಿ ಬಂದ್ ಅನ್ನು ಯಶಸ್ವಿಗೊಳಿಸಬೇಕೆಂದು ಕೋರಿ ಅನಂತಮೂರ್ತಿಯವರ ನೇತ್ರತ್ವದಲ್ಲಿ ಚಳುವಳಿಯಲ್ಲಿ ಭಾಗಿಯಾಗಿದ್ದ ವಿವಿಧ ಪ್ರಗತಿಪರ ಸಂಘಟನೆಗಳೆಲ್ಲರ ಸಂಗಡ ಪಾದಯಾತ್ರೆ ಕೈಗೊಂಡು ಎಲ್ಲಾ ವರ್ಗಗಳ ಜನರನ್ನು ಕೋರಲಾಯಿತು. ಜ್ಞಾನಪೀಠ ಪುರಸ್ಕೃತ ಸಾಹಿತಿಯೇ ಹೀಗೆ ಜನರೊಡನೆ ಸಂವಾದ ನಡೆಸುತ್ತಾ ಗಣಿಗಾರಿಕೆಯನ್ನು ನಿಲ್ಲಿಸುವ ಹೋರಾಟಕ್ಕೆ ಬೆಂಬಲವನ್ನು ಕೋರುತ್ತಿದ್ದರೆ ಏಲ್ಲರ ನಿರೀಕ್ಷೇಗೂ ಮೀರಿ ಜನರಿಂದ ಸ್ಪಂದನೆ ವ್ಯಕ್ತವಾಯಿತು. ಹೀಗೆ ೨೪/೭/೨೦೦೧ ರಂದು ಇಡೀ ಜಿಲ್ಲೆಯಲ್ಲಿ ಯಶಸ್ವಿ ಬಂದ್ ಕಾರ್ಯಕ್ರಮ ಏರ್ಪಟ್ಟಿತು. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳೂ ಗಣಿಗಾರಿಕೆಯನ್ನು ನಿಲ್ಲಿಸಲು ನಿರ್ಣಯ ಕೈಗೊಂಡು ಸರ್ಕಾರಕ್ಕೆ ಒತ್ತಾಯಿಸಿದವು. ಈ ನಂತರ ತುಂಗ ಭದ್ರ ನದಿಗಳ ತಟಗಳ ಇತರ ಜಿಲ್ಲೆಗಳಲ್ಲೂ ಈ ಆಂದೋಳನ ಸ್ಪೂರ್ತಿಯನ್ನು ಪಡೆದು ಸರ್ಕಾರವನ್ನು ಒತ್ತಾಯಿಸಿದವು. ಅನಂತಮೂರ್ತಿಯವರು ಹೊಸಪೇಟೆ, ಹಗರಿಬೊಮ್ಮನಹಳ್ಳಿ ಮುಂತಾದೆಡೆ ಹೋಗಿ ಅಲ್ಲಿನ ಜನರನ್ನು ಉದ್ದೇಶಿಸಿ ಈ ಗಣಿಗಾರಿಕೆಯನ್ನು ನಿಲ್ಲಿಸಲು ಸರ್ಕಾರವನ್ನು ಒತ್ತಾಯಿಸುವಂತೆ ಸಭೆಗಳಲ್ಲಿ ಮಾತನಾಡಿದರು. ಆಗ ಅಧಿಕಾರದಲ್ಲಿ ಇರದ ಎಂಪಿ. ಪ್ರಕಾಶ್ ಕೂಡ ಒಂದು ಸಭೆಯನ್ನು ಈ ಕಾರಣಕ್ಕಾಗಿಯೇ ಏರ್ಪಡಿಸಿದ್ದರು. ಚಳುವಳಿಗೆ ಬೆಂಬಲವನ್ನು ಕೋರ್ಇದ್ದರು. ಮಹಿಮಾ ಪಟೇಲ್ ಮುಂತಾದವರು ನಮ್ಮ ಚಳುವಳಿಯಲ್ಲಿ ಭಾಗಿಯಾಗಿದ್ದೂ ಇದೇ ಸಂದರ್ಭದಲ್ಲಿ.
ಅನಂತಮೂರ್ತಿಯವರ ಅಧ್ಯಕ್ಷತೆಯಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಚಳುವಳಿಗಾರರ ಜತೆಗೂಡಿ ಮು.ಮಂ.ಯವರನ್ನು ಭೇಟಿಯಾಗಿ ಅವರಿಗೆ ಮನದಟ್ಟುಮಾಡಿದ್ದಾಯಿತು. ನಂತರ ಶಾಸನ ಸಭೆಯಲ್ಲಿ ಮಾನ್ಯ ಮು.ಮಂ.ಯವರು ಈ ಕುರಿತು ಗಣಿಗಾರಿಕೆಯ ಮುಂದುವರಿಕೆಗೆ ಅವಕಾಶ ನೀಡುವುದಿಲ್ಲ ಏಂದು ಘೋಷಿಸಿದ್ದೂ ಆಯಿತು. ಈ ಕುರಿತು ಸುಪ್ರೀಂ ಕೋರ್ಟಿಗೆ ಅಫ಼ಿಡವಿಟ್ಟನ್ನು ಸಲ್ಲಿಸುವುದಾಗಿಯೂ ಮು.ಮಂ.ಯವರು ತಿಳಿಸಿದರು. ಹೀಗೆ ಶ್ರೀ.ಎಸ್,ಎಂ. ಕೃಷ್ಣ ಅವರೂ ಮುಖ್ಯಮಂತ್ರಿಯಾಗಿ ನಿಜಕ್ಕೂ ಈ ಚಳುವಳಿಗೆ ಸ್ಪಂದಿಸಿ ಜನಾಭಿಪ್ರಾಯಕ್ಕೆ ಮನ್ನಣೆಕೊಟ್ಟು ಮೆಚ್ಚುಗೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ನಾವು ಎಲ್ಲಾ ಶಾಸಕರನ್ನು ಕೂಡ ಅಭಿನಂದಿಸುತ್ತೇವೆ. ನಮಗೆ ಜನತಂತ್ರ ಉಳಿಯುತ್ತದೆ ಎಂಬ ಭರವಸೆ ಮೂಡಿಸಿದ ಈ ಘಟನಾವಳಿಗಳು ಐತಿಹಾಸಿಕವೆಂದೇ ಹೇಳಬೇಕು.
ಮುಂದಿನ ಘಟನಾವಳಿಗಳು ನ್ಯಾಯಾಲಯದಲ್ಲಿ ನಡೆದಿವೆ. ಕರ್ನಾಟಕ ಸರ್ಕಾರ ಸ್ಪಷ್ಟವಾಗಿ ಗಣಿಗಾರಿಕೆಯನ್ನು ಮುಂದುವರೆಸದಂತೆ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯವೂ ಕೂಡ ದಿಟ್ಟ ನಿರ್ಧಾರವನ್ನು ತೆಗೆದುಕೊಂಡು ಗಣಿಗಾರಿಕೆಯನ್ನು ನಿಲ್ಲಿಸುವ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿದೆ. ಹೀಗೆ ಈ ನಾಡಿನ ಕೋಟ್ಯಾಂತರ ಜನರ ಬದುಕಿಗೆ ಆಸರೆಯಾದ ತುಂಗಾ - ಭದ್ರಾ ನದಿಗಳ ಉಳಿವಿನ ಹೋರಾಟ ಯಶಸ್ಸನ್ನು ಪಡೆದಿದೆ. ಇದು ನಿಜಕ್ಕೂ ಅಹಿಂಸಾತ್ಮಕವಾದ ಜನತೆಯ ಹೋರಾಟದ ಜಯ. ಈ ಹೋರಾಟಕ್ಕೆ ಜನಸಾಗರದ ಬೆಂಬಲ ಸಿಗುವಂತೆ ಮಾಡಿದ ಅನಂತಮೂರ್ತಿಯವರ ನಾಯಕತ್ವ ಮತ್ತು ಅವರ ಮಾರ್ಗದರ್ಶನವನ್ನು ನಾವು ನೆನಪಿಸಿಕೊಳ್ಳಲೇ ಬೇಕು. ಬಹಳ ಆಶ್ಚರ್ಯಕರವಾಗಿ ನ್ಯಾಯಾಂಗದ ಮೂಲಕವಾಗಿ ಮತ್ತು ಜನರ ನಡುವಿನಿಂದ ಮೂಡಿಬಂದ ಎರಡೂ ಬಗೆಯ ಹೋರಾಟಗಳು ಅಂತಿಮವಾಗಿ ಪರಸ್ಪರ ಪೂರಕವಾಗಿ ಗಣಿಗಾರಿಕೆಯನ್ನು ನಿಲ್ಲಿಸಲು ಸಾರ್ಥಕವಾದವು.
ವಿ.ಕ. ದಲ್ಲಿ ಬಲ್ಲವ ಎಂಬ ನಾಮಾಂಕಿತದಿಂದ ಬರೆದವರು ಅನಂತಮೂರ್ತಿ ನೋಬೆಲ್ ಪ್ರ್ಐಜ಼್ ಗಾಗಿ ಇಲ್ಲಿ ಮುಖ ತೋರಿಸಿ ವಿದೇಶಕ್ಕೆ ಹಾರಿದರು ಎಂದು ಬರೆದಿದ್ದಾರೆ. ನಿಜಕ್ಕೂ ಅವರು ಚಳುವಳಿ ಮಧ್ಯದಲ್ಲಿ ಬೇರೆಲ್ಲೂ ಹೋಗಿರಲಿಲ್ಲ. ನಿಜವಾಗಿ ಅವರಿಗೆ ಈ ಸಮಯದಲ್ಲಿಯೇ ಬೈಪಾಸ್ ಸರ್ಜರಿಗೆ ಅವರು ಒಳಗಾದರು. ಚಿಕಿತ್ಸೆಯ ನಂತರ ನಾವು ಪುನಃ ಸೇರಿಕೊಂಡು ಕೆಒಸಿಎಲ್ ಕಂಪನಿಯ ಕಾರ್ಮಿಕರ ಬಗೆಗೆ ಮತ್ತು ಈಗ ಅಲ್ಲಿ ಹಾಳಾಗಿರುವ ಪರಿಸರವನ್ನು ಹೇಗೆ ಪುನರ್ ರೂಪಿಸಬಹುದೆಂಬ ಕುರಿತು ಚಿಂತಿಸಿದ್ದೇವೆ. ಅಲ್ಲದೇ ಕುದುರೇಮುಖ ರಾಷ್ಟ್ರ್ಈಯ ಉದ್ಯಾನ ಯೋಜನೆಯಿಂದ ನೆಲೆ ಕಳೆದುಕೊಳ್ಳುತ್ತಿದ್ದ ಗಿರಿಜನರನ್ನು ಅಲ್ಲಿಗೇ ಹೋಗಿ ಅವರೊಡನೆ ಅಭಿಪ್ರಾಯವನ್ನು ಹಂಚಿಕೊಂಡು ಬಂದಿದ್ದಾರೆ. ನಂತರ ಬೆಂಗಳೂರಿನಲ್ಲಿ ಅಂದಿನ ಸಮಾಜಕಲ್ಯಾಣ ಸಚಿವ ಕಾಗೋಡು ತಿಮಪ್ಪ ಅವರೊಂದಿಗೆ ಗಿರಿಜನರು ಅಲ್ಲಿಯೇ ಇರಲು ಸಾದ್ಯವಾಗುವಹಾಗೆ ಮಾರ್ಗೋಪಾಯಗಳ ಕುರಿತು ಚರ್ಚಿಸಿದ್ದಾರೆ. ಜನತಾಂತ್ರಿಕ ವಿಧಾನದಿಂದ ಈ ಎಲ್ಲಾ ಸಮಸ್ಯೆಗಳು ಪರಿಹಾರವಾಗುವ ಕುರಿತಾಗಿ ಆಸಕ್ತಿ ವಹಿಸಿದ್ದಾರೆ. ನಮ್ಮ ಜನತಂತ್ರ ಮಾನವೀಯ ಮುಖವನ್ನು ಇಟ್ಟುಕೊಂಡಿದೆ ಎಂದು ನಂಬಿ ಆ ಭರವಸೆಯಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲು ತಮ್ಮೆಲ್ಲಾ ಸಂಪರ್ಕಗಳನ್ನು ಬಳಸಿಕೊಂಡಿದ್ದಾರೆ. ಇದನ್ನೆಲ್ಲಾ ನಾನು ಅವರನ್ನು ಕೇವಲ ಹೊಗಳಲು ಹೇಳುತ್ತಿಲ್ಲ. ಅವರೊಂದಿಗೆ ಈ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗಿದ್ದುಕೊಂಡು ಇದನ್ನು ದಾಖಲಿಸುತ್ತಿದ್ದೇನೆ.
ಬಾಯಿಗೆ ಬಂದಂತೆ, ಮನಸ್ಸಿಗೆ ತೋಚಿದಂತೆ ಮಾತನಾಡುವ ಜನ ತಾವು ಈ ಹೋರಾಟಗಳಲ್ಲಿ ಭಾಗವಹಿಸದಿದ್ದರೂ ಹೋರಾಟದ ವಿಚಾರಗಳನ್ನು ತಿಳಿದುಕೊಳ್ಳುವ ಮನಸ್ಸು ಮಾಡಲಿ ಎಂದು ಈ ವಿವರಣೆಗಳಿಂದ ಆಶಿಸುತ್ತೇವೆ.
ಕೆ.ಜಿ.ಶ್ರೀಧರ್,ವಾಸ್ತುಶಿಲ್ಪಿ.
kgsdhar@gmail.com
ತುಂಗಾ ಮೂಲ ಉಳಿಸಿ ಹೋರಾಟ ಸಮಿತಿಯ ಪರವಾಗಿ.
ತೀರ್ಥಹಳ್ಳಿ.

- Login or register to post comments
- 783 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
ಪ್ರೀತಿಯ ಶ್ರೀಧರ್,
ಕೊನೆಗೂ ತು೦ಗೆಯನ್ನ ಉಳಿಸಿದ ನಿಮಗೂ, ತುಂಗಾ ಮೂಲ ಉಳಿಸಿ ಹೋರಾಟ ಸಮಿತಿಯ ಎಲ್ಲ ಹೋರಾಟಗಾರರಿಗೂ ಮತ್ತು ಶ್ರೀಯುತ ಅನ೦ತಮೂರ್ತಿಯವರಿಗೂ ಅನ೦ತಾನ೦ತ ನಮಸ್ಕಾರಗಳು ಮತ್ತು ಈ ಹೋರಾಟದಲ್ಲಿ ಜಯಶೀಲರಾಗಿದ್ದಕ್ಕೆ ಶುಭಾಶಯಗಳು.
. ಏನೇ ಹಾಗಲಿ ಅನ೦ತಮೂರ್ತಿಯವರು ಇ೦ತಹ ಮಹತ್ಕಾರ್ಯದಲ್ಲಿ ತೊಡಗಿಸಿಕೊ೦ಡಿದ್ದು ಶ್ಲಾಘನೀಯ. ನೀವು ತಿಳಿಸಿದ ಹಾಗೆ ಅದಿಕಾರಸ್ತರ ಜೊತೆಗಿನ ಅವರ ಒಡನಾಟ ಮತ್ತು ಅವರ ವರ್ಚಸ್ಸಿನಿ೦ದ ಇ೦ದು ತು೦ಗೆ ಮತ್ತು ಭದ್ರೆ ಉಳಿದಿವೆ.
ನಿಮ್ಮ ಹೋರಾಟ ಕಥೆ ನಿಜಕ್ಕೂ ಅನುಕರಣೀಯ. ಇ೦ದು ಕುದುರೇಮುಖ ಗಣಿಗಾರಿಕೆಯ೦ತಹ ಪಿಡುಗಿನಿ೦ದಲೇ ನಾವು ಜಾಗತಿಕ ತಾಪಮಾನದ ಹೇರಿಕೆ ಮತ್ತು ಹವಾಮಾನ ವೈಪರಿತ್ಯ ಸಮಸ್ಯೆಗಳನ್ನ ಎದುರಿಸುತ್ತಿರುವುದು. ಇತ್ತೀಚೆಗೆ ನೇತ್ರಾವತಿ ತಿರುವು ಯೋಜನೆ ಕಾರ್ಯಗತಗೊಳಿಸಲು ಸರ್ಕಾರ ಚಿ೦ತನೆ ನಡೆಸಿದ್ದಾರೆ, ಇದು ಕುದುರೇಮುಖ ಗಣಿಯಷ್ಟು ಹಾನಿ ಮಾಡದಿದ್ದರೂ, ಈ ಯೋಜನೆಯಿ೦ದ ಸಾಕಷ್ಟು ಪರಿಸರ ಹಾನಿಯಾಗುವುದರಲ್ಲಿ ಸ೦ಶಯವಿಲ್ಲ. ಇ೦ದು ತುಂಗಾ ಮೂಲ ಉಳಿಸಿ ಹೋರಾಟ ಸಮಿತಿಯ ಹಾಗೆ ನೇತ್ರಾವತಿ ಉಳಿಸಲು ಒ೦ದು ಸಮಿತಿಯ ಅಗತ್ಯವಿದೆ.
ಇನ್ನು ಅನ೦ತಮೂರ್ತಿಯವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯ ಮಾಡುವುದಿಲ್ಲ!. ಈ ಹೋರಾಟದ ಹಿ೦ದೆ ಅವರ ನೀರಿಕ್ಷೆ ಏನಿತ್ತು ಎ೦ಬುದು ನಿಮಗೂ ತಿಳಿಯಲಿಕ್ಕಿಲ್ಲ ಬಿಡಿ
ಈ ಕುದುರೇಮುಖ ಗಣಿಗಾರಿಕೆ ನಿಲ್ಲಿಸದೇ ಬಿಟ್ಟಿದ್ದರೆ ಕೇವಲ ತು೦ಗೆ/ಭದ್ರೆಯಷ್ಟೇ ಅಲ್ಲ, ಚಿಕ್ಕ ಪುಟ್ಟ ನದಿಗಳು ಸೇರಿ ಸುಮಾರು ೭ ನದಿಯ ಉಗಮ ಸ್ಥಾನವಾದ "ಗ೦ಗಾಮೂಲ" ದ ಬುಡವನ್ನೇ ಅಗೆದು ಬಿಡುತ್ತಿದ್ದರು ನಮ್ಮ ಜನ!. hats off to u and to ur organization, i dont have words to express my gratitude to u all. we expect more like this from u people.
ಆದರೆ ನನ್ನದೊ೦ದು ಕೋರಿಕೆ, ತುಂಗಾ ಮೂಲ ಉಳಿಸಿ ಹೋರಾಟ ಸಮಿತಿಯ ಕೆಲವರು ನಕ್ಸಲಿಗರ ಮೇಲೆ ಕನಿಕರವಿಟ್ಟುಕೊ೦ಡಿದ್ದಾರೆ. ತಾವು ಮತ್ತು ತಮ್ಮ೦ತಹ ಜನ ಯವತ್ತೂ ಸಾಮಾನ್ಯ ಜನರ ಜೀವನದಲ್ಲಿ ಅಶಾ೦ತಿ ತರುವ೦ತಹ ಕೆಲಸ ಮಾಡಬೇಡಿ. ನಮ್ಮ ದೇಶದಲ್ಲಿ ಸರಿಯಾದ ಮಾರ್ಗದಲ್ಲಿ ಹೋರಾಟ ಮಾಡಿದರೆ ಜಯ ಸಿಗುವುದು ಖ೦ಡಿತ. ಇದಕ್ಕೆ ನಿಮ್ಮ ಹೋರಾಟವೇ ನಿದರ್ಶನ!. ಹಿ೦ಸೆ, ಬಡಿದಾಟಗಳಿ೦ದ ಕೇವಲ ಹಾನಿಯಾಗುತ್ತೇ ಹೊರತು ನೆಮ್ಮದಿ ಸಿಗುವುದಿಲ್ಲ. ಅಚ್ಚ ಹಸಿರಿನ ಪಶ್ಚಿಮ ಘಟ್ಟವನ್ನ ದಯವಿಟ್ಟು ಕೆ೦ಪಾಗಿಸಬೇಡಿ.
ದನ್ಯವಾದಗಳು.
ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
ಕನ್ನಡದ ಮಾಧ್ಯಮಗಳ ಒಂದು ಗುಂಪಿಗೆ ಅನಂತಮೂರ್ತಿಯವರ ಮೇಲೆ ಅದ್ಯಾವ ಸಿಟ್ಟೋ ಗೊತ್ತಿಲ್ಲ. ನಿರಂತರವಾಗಿ ಅವರ ಮೇಲೆ ದಾಳಿ ನಡೆಸುತ್ತಿವೆ. ಕನಿಷ್ಠ ನೀವಾದರೂ ವಾಸ್ತವವನ್ನು ಬರೆದಿದ್ದೀರಿ. ಸಂತೋಷವಾಯಿತು. ಸತ್ಯ ಇಲ್ಲಾದರೂ ಬೆಳಕು ಕಂಡಿತಲ್ಲಾ...ಮಲೆನಾಡಿನಲ್ಲಿ ನಕ್ಸಲೀಯರಿದ್ದಾರೆ ಎಂಬುದು ಸುದ್ದಿಯಾದಷ್ಟು ಮಲೆನಾಡಿನ ಸಮಸ್ಯೆಗಳು ಸುದ್ದಿಯಾಗಲಿಲ್ಲ. ಪಶ್ಚಿಮ ಘಟ್ಟದಲ್ಲಿ ಗುಂಡುಗಳು ಹಾರುವವರೆಗೂ ನಮ್ಮ ಮುಖ್ಯವಾಹಿನಿಯ ಮಾಧ್ಯಮಗಳು ಪಶ್ಚಿಮ ಘಟ್ಟದ ಅಳಿವಿನ ಹಾದಿಯ ಕುರಿತು ಚರ್ಚಿಸಲಿಲ್ಲ. ಈಗಲೂ ಚರ್ಚೆಯ ಕೇಂದ್ರ ಬಿಂದು ನಕ್ಸಲೀಯರೇ ಹೊರತು ಅಲ್ಲಿನ ಸಮಸ್ಯೆಗಳಲ್ಲ.
ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net
ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
ಸಮಸ್ಯೆ ಇರೋದು ಮಲೆನಾಡಿನಲ್ಲಿ ಮಾತ್ರಾನ? ಸಮಸ್ಯೆ ಸುದ್ದಿ ಮಾಡಬೇಕಾದವರು ಮತ್ತು ಅದಕ್ಕೆ ಪರಿಹಾರ ಕೊಡೊರು ಯಾರು? ಯವುದೊ ಸತ್ಯದ ಬಗ್ಗೆ ಮಾತಾಡಿ ನೆಕ್ಸಲ್ ಸಮಸ್ಯೆಯನ್ನು ಇಸ್ಟೊಂದು ಚಿಕ್ಕ ಮಾಡಿಬಿಟ್ರಲ್ಲ.
ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
ನಾನೂ ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ಅನಂತಮೂರ್ತಿ ಅವರು ಬರುವವರೆಗಿನ, ನಂತರದ ಹೋರಾಟವನ್ನು ಹತ್ತಿರದಿಂದ ಕಂಡಿದ್ದೇನೆ. ಅನಂತಮೂರ್ತಿ ಅವರು ಹೋರಾಟಕ್ಕೆ ಧುಮುಕಿದ ನಂತರ ಹೋರಾಟದಲ್ಲಿ ಆದ ದೊಡ್ಡ ಬದಲಾವಣೆಯನ್ನೂ ಗಮನಿಸಿದ್ದೇನೆ. ಶ್ರೀಧರ್ ಅವರು ಎಲ್ಲವನ್ನೂ ವಿವರವಾಗಿ ಬರೆದಿದ್ದಾರೆ.
ತುಂಗಾ ಮೂಲ ಉಳಿಸಿ ಹೋರಾಟ ಒಕ್ಕೂಟ, ನಂತರದ ದಿನಗಳಲ್ಲಿ ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ ನೀಡಿದ ನೇತೃತ್ವ ಜನರನ್ನು ಈ ದಿಸೆಯಲ್ಲಿ ಜಾಗೃತಿಗೊಳಿಸಿತು. ಜನರ ಒತ್ತಾಸೆಗೆ ಹಾಗೂ ಪ್ರಕೃತಿಯ ಮೇಲಿನ ದೌರ್ಜನ್ಯಕ್ಕೆ ಕೋರ್ಟ್ ಸ್ಪಂದಿಸಿ ಗಣಿಗಾರಿಕೆಗೆ ಕೊನೆ ಹಾಡಿತು.
ಈ ಹೋರಾಟದ ಮುಖ್ಯ ಲಕ್ಷಣ ನಾನು ಗಮನಿಸಿದಂತೆ... ಹೋರಾಟ ಒಕ್ಕೂಟದ ನೇತೃತ್ವದಲ್ಲೇ ಆದರೂ ಕೊನೆಗೆ ಅದು ಜನರ ಹೋರಾಟವಾಯಿತು. ಶಿವಮೊಗ್ಗ ಬಂದ್ ಕರೆಗೆ ಎಲ್ಲರೂ ಓಗೊಟ್ಟರು. ನದಿ ಉಳಿವಿಗಾಗಿ ಅಲ್ಲಿ ಎಡ-ಬಲಗಳ ಪ್ರಶ್ನೆ ಬರಲಿಲ್ಲ. ಶಿವಮೊಗ್ಗ ಬಂದ್ಗಿಂತಲೂ ಮುನ್ನ ದಾವಣಗೆರೆಯಲ್ಲಿ ಕುದುರೆಮುಖ ಗಣಿಗಾರಿಕೆ ವಿರೋಧಿ ಒಕ್ಕೂಟ ಏರ್ಪಡಿಸಿದ್ದ ನದಿ ತೀರದ ಜನರ ಸಮಾವೇಶಕ್ಕೆ ಬಯಲುಸೀಮೆಯ ಜನ ತೀವ್ರವಾಗಿ ಸ್ಪಂದಿಸಿದ್ದರು.
ಆದರೆ ಇವತ್ತು ಪರಿಸ್ಥಿತಿ ಬದಲಾಗಿದೆ. ಒಂದೆಡೆ ಕ್ರಾಂತಿಯಾಗಿಬಿಡುತ್ತದೆ, ಎಲ್ಲ ಬದಲಾಗಿಬಿಡುತ್ತದೆ ಎನ್ನುವ ಎಡಬಿಡಂಗಿ ಎಡಪಂಥೀಯರು, ಎಲ್ಲವನ್ನೂ ಬಹುಸೂಕ್ಷ್ಮವಾದ ಧರ್ಮದ ಪ್ರಶ್ನೆಯನ್ನಾಗಿ ಮಾಡಿಬಿಡುವ ಬಾಜಾಬಜಂತ್ರಿ ಬಲಪಂಥೀಯರು ಸಾಮಾಜಿಕ ಪರಿಸ್ಥಿತಿಯನ್ನೇ ಕಲುಷಿತಗೊಳಿಸಿದ್ದಾರೆ. ಎಡ-ಬಲ ನಡುವಿನ ಗೆರೆಯನ್ನು ಅತಿ ತೆಳುವಾಗಿ ಮಾಡಿದ್ದು, ಎರಡನ್ನೂ ಎಚ್ಚರದಿಂದ ಗಮನಿಸುವವರಿಗೆ ಬೆಲೆಯೇ ಇಲ್ಲವಾಗಿದೆ. ನೀನು ಎಡಪಂಥೀಯನಾಗು.. ಇಲ್ಲವೇ ಬಲಪಂಥೀಯನಾಗು ಎನ್ನುವ ಒತ್ತಡ ಎಲ್ಲಡೆ ಸೃಷ್ಟಿಯಾಗುತ್ತಿದೆ. ಮಾನವೀಯತೆಯ ಅಂಶಗಳು ಮರೆಮಾಚುತ್ತಿವೆ.
ಯಾರನ್ನೇ ಆಗಲಿ ಎಡಪಂಥೀಯನನ್ನಾಗಿ ಬ್ರಾಂಡ್ ಮಾಡಿದರೆ ಅವರಿಗೆ ಬೈಯಲು ಸುಲಭ. ಬಲಪಂಥೀಯನೆಂದರೆ ಇವರಿಗೆ ಟೀಕಿಸಲು ಸಲೀಸು. ಯಾರಾದರೂ ಮಾತಾಡುವುದನ್ನೇ ಗಮನಿಸುತ್ತಾ ಈತ ಬಳಸಿದ ಯಾವ ಪದದಿಂದ ಇವನನ್ನು ಬ್ರಾಂಡ್ ಮಾಡಬಹುದು ಎಂದು ಕಾಯುವ ವಿಘ್ನಸಂತೋಷಿಗಳೇ ಅಧಿಕವಾಗಿದ್ದಾರೆ.
ಆದರೆ ವಿಶ್ವದ ಇತಿಹಾಸವನ್ನು ಗಮನಿಸಿದರೆ ಎಲ್ಲಿಯೂ ಸಹ ಕ್ರಾಂತಿಯಿಂದಾಗಲಿ.... ರಕ್ತಪಾತದಿಂದಾಗಲಿ.... ಕುರುಡು ಆರಾಧನೆಯಿಂದಾಗಲಿ.... ಸುಖಿ ಸಮಾಜ ಸೃಷ್ಟಿಯಾಗಿದ್ದು ಕಾಣಿಸದು. ಅದು ವಿಕಾಸದಿಂದ ಮಾತ್ರ ಸಾಧ್ಯವಾಗಿದೆ.
ಮನುಷ್ಯನಂತ ಜೀವಿ ಸಹಜೀವಿಗಳ ಪ್ರಾಮಾಣಿಕತೆಯನ್ನು, ವಿಶ್ವಾಸವನ್ನು, ಪ್ರೀತಿಯನ್ನು ನಂಬುವುದೇ ಮಾನವೀಯತೆ. ತಪ್ಪಾದಾಗ ತಿದ್ದಲು ಹಲವು ಮಾರ್ಗಗಳಿವೆ. ‘ಇದೊಂದೇ ದಾರಿ’ ಎಂದು ಹೊರಟಾಗಲೆಲ್ಲಾ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ.
ಆದರೂ ಎಡಬಿಡಂಗಿ ಎಡಪಂಥೀಯ ಕ್ರಾಂತಿಯ ಹುಚ್ಚು, ಬಾಜಾಬಜಂತ್ರಿ ಬಲಪಂಥೀಯ ಭ್ರಾಂತಿಯ ಹುಚ್ಚುಗಳು ಯಾಕೆ ಉಳಿದಿವೆ?
ಹೊನ್ನಾಳಿ ಚಂದ್ರಶೇಖರ್
ಉ: ಅನಂತ ಮೂರ್ತಿ ಅವರ ಬಗೆಗಿನ ಅಪ ಪ್ರಚಾರಗಳು - ತುಂಗಾ ಮೂಲ ಉಳಿಸಿ ಹೋರಾಟದ ಕಥೆ
ಅತ್ಯಂತ ಮಾರ್ಮಿಕವಾಗಿ ಹೇಳಿದ್ದೀರಿ ಚಂದ್ರಶೇಖರ್,
ಇಂದು ಪರಿಸ್ಥಿತಿಯ ಒತ್ತಡದಿಂದ ಜನ either ಎಡ or ಬಲ ಅಂತ ಗುರುತಿಸಿಕೊಳ್ಳುತ್ತಿದ್ದಾರೆಯೋ ಅಥವಾ ಅದಕ್ಕೂ ಮಿಗಿಲಾದ ಕಾರಣಗಳಿವೆಯೆ?ನಮ್ಮ ಅನೇಕ ಹಿರಿಯರು, ಓದಿ ತಿಳಿದುಕೊಂಡವರು, ವಿದ್ವಾಂಸರು, ಬುದ್ಧಿಜೀವಿಗಳೆನಿಸಿಕೊಂದವರು ಕೂಡ ಈ ರೀತಿಯಲ್ಲಿ ಎಡ-ಬಲಕ್ಕೆ ಬ್ರಾಂಡ್ ಆಗುತ್ತಿರುವದನ್ನ ನೋಡಿದರೆ, ಅವರಿಗೂ ಇಂತಹ ಸಾಮಾನ್ಯ ಒತ್ತಡವನ್ನ ತಡೆದುಕೊಳ್ಳಲು ಆಗುತ್ತಿಲ್ಲವೇ?
ನಿಮ್ಮ ಕೊನೆಯ ಪ್ರಶ್ನೆಗೆ ಉತ್ತರ ಸರಳವಿಲ್ಲ "ಆದರೂ ಎಡಬಿಡಂಗಿ ಎಡಪಂಥೀಯ ಕ್ರಾಂತಿಯ ಹುಚ್ಚು, ಬಾಜಾಬಜಂತ್ರಿ ಬಲಪಂಥೀಯ ಭ್ರಾಂತಿಯ ಹುಚ್ಚುಗಳು ಯಾಕೆ ಉಳಿದಿವೆ?" ಯಾಕೆ ಅಂತ ಹೇಳಬಹುದು..?
ಎಡಪಂಥವಿದೆ ಅಂತ ಬಲಪಂಥ ಹುಟ್ಟಿಕೊಂಡಿತೋ ಅಥವಾ ..ಇದೊಂದು ಬೀಜವೃಕ್ಷ ನ್ಯಾಯ!