ದೇವರು ನಕ್ಕುಬಿಟ್ಟ
ಇದು ಓಷೋ ಹೇಳಿದ ಕಥೆ.
ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ ಬರಬಹುದಿತ್ತು. ಆದರೆ ನಾನು ನಿಮಗೆ ಹೇಳಲು ಮರೆತಿದ್ದೆ. ಅದು ಸಿರಿವಂತರ ಗುಡಿಯಾಗಿತ್ತು. ಬಡವರಿಗೆ ಅಲ್ಲಿ ಪ್ರವೇಶ ನಿಷಿದ್ಧವಿತ್ತು. ನಮ್ಮ ದೇಶದ ಗುಡಿಗಳ ಜಾಯಮಾನವೇ ಹಾಗೆ. ಗುಡಿಗಳ ನಿರ್ಮಾಣಕ್ಕೆ ಹಣ ಒದಗಿಸುವವರು ಸಿರಿವಂತರು. ದುಡಿಮೆ ಬಡವರದು. ಭಕ್ತಿಭಾವದಿಂದ ತನ್ಮಯತೆಯಿಂದ ಬಡವರು ಗುಡಿಕಟ್ಟಿ ಅದರ ಅಂದ ಹೆಚ್ಚಿಸುತ್ತಾರೆ. ಗುಡಿ ಪೂರ್ಣಗೊಂಡ ನಂತರ ಸಿರಿವಂತರು ಅದರಲ್ಲಿ ತುಂಬಿ ಬಡವರಿಗೆ ಪ್ರವೇಶ ನಿರಾಕರಿಸುತ್ತಾರೆ.
ಬಡವರು ತಮ್ಮದೇ ಆದ ಗುಡಿ ಕಟ್ಟಿಕೊಳ್ಳಲಿ ಎಂದು ನೀವು ವಾದಿಸಬಹುದು. ಆದರೆ ಕೇಳಿ, ಅವರು ತಮ್ಮ ಜೀವನ ನಡೆಸುವುದೇ ಕಷ್ಟವಿರುವಾಗ ಗುಡಿಯನ್ನೆಂತು ಕಟ್ಟಬಲ್ಲರು? ಅವರಿಗೆ ಹೊಟ್ಟೆಯೇ ದೇವರು, ಸಿರಿವಂತರು ಮಾತ್ರ ಅನೇಕ ಗುಡಿಗಳನ್ನು ಕಟ್ಟಬಲ್ಲರು. ಅದರಲ್ಲೂ ಅತಿ ದೊಡ್ಡ ಅತಿ ಎತ್ತರದ ಅತಿ ವಿಸ್ತಾರದ ಗುಡಿಗಳು. ಅವರಿಗೆ ದೇವರಿಗಿಂತಲೂ ದೇವಾಲಯದ ಗಾತ್ರ ಮುಖ್ಯ. ಅವರ ಹಣದ ತೂಕದಷ್ಟೇ ಗುಡಿಯ ಗಾತ್ರವು ಇರುತ್ತದೆ. ಇನ್ನೊಂದು ವಿಷಯ ಗಮನಿಸಿದ್ದೀರಾ? ಇಂದು ದೇವರು ಸಹ ಮಾರುಕಟ್ಟೆಯಲ್ಲಿ ಕೊಳ್ಳುವ ವಸ್ತುವಾಗಿದ್ದಾನೆ. ಸಿರಿವಂತರ ದೇವರು ದೊಡ್ಡದಾಗಿದ್ದರೆ ಬಡವರ ದೇವರು ಚಿಕ್ಕದಾಗಿರುತ್ತಾನೆ.
ಇರಲಿ ಇನ್ನು ನಮ್ಮ ಬಡವನ ವಿಷಯಕ್ಕೆ ಬರೋಣ. ಆತ ಬಹುಶಃ ರಾತ್ರಿ ಹೊತ್ತಿನಲ್ಲಿ ಯಾರೂ ಇಲ್ಲದಿದ್ದಾಗ ಪೂಜಾರಿ ದಯೆತೋರಿ ಗುಡಿಯ ಬಾಗಿಲು ತೆರೆಯಬಹುದೆಂದು ಭಾವಿಸಿದ್ದ. ತನ್ನ ವಿನಂತಿಯನ್ನು ಕೇಳಿ ಅಥವಾ ತನ್ನ ದಯಾರ್ದ್ರ ಗೋಳಿಗೆ ಪೂಜಾರಿಯ ಮನ ಕರಗಬಹುದೆಂದು ಅವ ಭಾವಿಸಿದ್ದ. ಗುಡಿಯೊಳಗಿನ ದೇವರು ಕಲ್ಲಾಗಿದ್ದ ನಿಜ, ಆದರೆ ಅದಕ್ಕಿಂತ ಕಠಿಣತಮ ಮನಸ್ಸು ಪೂಜಾರಿಯದಾಗಿತ್ತು. ಆ ಪೂಜಾರಿ ಕತ್ತಲೆಯಲ್ಲೂ ಮನುಷ್ಯರ ಚರ್ಮದ ಬಣ್ಣವನ್ನು ತಿಳಿಯಬಲ್ಲ ಚಾಣಾಕ್ಷನೂ ಆಗಿದ್ದ. ಬಂದಿದ್ದವನು ಬಡವನೆಂದು ಅವನಿಗೆ ತಿಳಿದುಹೋಯಿತು. ಬಡವ ನಿಧಾನವಾಗಿ ವಿನಂತಿ ಮಾಡಿದ 'ಸ್ವಾಮಿ ಗುಡಿಯ ಬಾಗಿಲು ತೆರೆಯಿರಿ, ನಾನು ದೇವರನ್ನು ನೋಡಲು ಬಂದಿದ್ದೇನೆ.'
ಹಿಂದಿನ ಕಾಲವಾಗಿದ್ದರೆ ಆ ಪೂಜಾರಿ 'ಎಲೈ ದುಷ್ಟನೇ! ತೊಲಗಿಲ್ಲಿಂದ, ಈ ಗುಡಿ ಪರಮಪಾವನಾತ್ಮನದು, ನಿನ್ನ ಅಪವಿತ್ರ ಗಾಳಿ ಇಲ್ಲಿ ಸುಳಿಯಬಾರದು, ನಡಿಯಾಚೆ' ಎನ್ನುತ್ತಿದ್ದನೇನೋ? ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗೆ ಹೊರಗಟ್ಟುವುದು ನಾಗರೀಕ ಲಕ್ಷಣವಲ್ಲ. ಆತ ಸುರಕ್ಷಿತ ಮಾರ್ಗ ಅನುಸರಿಸಿದ. ನಾನು ಮೊದಲೇ ಹೇಳಿದಂತೆ ಪೂಜಾರಿ ಪುರೋಹಿತರೆಲ್ಲರೂ ಬಲು ಚಾಣಾಕ್ಷ ಮಂದಿ, ಮಿಕ್ಕವರು ಅಕ್ಕಿ ಬೇಳೆ ಮಾರಿದರೆ ಇವರು ದೇವರನ್ನೇ ಮಾರುವವರು.
ಆ ಕಿಲಾಡಿ ಪೂಜಾರಿ ಹೇಳಿದ 'ಸೋದರನೇ, ಗುಡಿಯೊಳಕ್ಕೆ ನೀನು ಬರುವುದರಿಂದ ಆಗುವ ಪ್ರಯೋಜನವಾದರೂ ಏನು? ಎಲ್ಲಿಯ ತನಕ ನಿನ್ನ ಮನಸ್ಸು ಶುದ್ಧವಾಗುವುದಿಲ್ಲವೋ, ಎಲ್ಲಿಯ ತನಕ ನಿನ್ನ ಮನಸ್ಸು ಶಾಂತವಾಗುವುದಿಲ್ಲವೋ ಅಲ್ಲಿಯ ತನಕ ಮಂದಿರದೊಳಗೆ ಪ್ರವೇಶಿಸಿ ಏನೂ ಲಾಭವಿಲ್ಲ, ದೇವರ ದರ್ಶನವೂ ಆಗುವುದಿಲ್ಲ.'
ತನ್ನ ಮನಸ್ಸು ಶಾಂತವಾಗಿಲ್ಲ ಎಂಬುದು ಆಗ ಬಡವನಿಗೆ ಅರಿವಾಯಿತು. ತನ್ನ ಮನದ ತಳಮಳ, ದುಃಖ ದುಗುಡ ಆತಂಕ ಅತಂತ್ರಸ್ಥಿತಿಗೆ ಪರಿಹಾರ ಅದನ್ನು ಶಾಂತವಾಗಿಸುವುದು ಎಂಬ ಸತ್ಯವನ್ನು ಕೇವಲ ಒಂದೇ ಮಾತಿನಲ್ಲಿ ಪೂಜಾರಿ ತಿಳಿಸಿಕೊಟ್ಟದ್ದು, ಅವನಿಗೆ ಪೂಜಾರಿಯ ಬಗ್ಗೆ ಅಪಾರ ಗೌರವ ತಳೆಯುವಂತೆ ಮಾಡಿತು. ಮನಸ್ಸನ್ನು ಶಾಂತವಾಗಿಸಿಕೊಂಡು ಮರಳಿ ಬರುವೆ ಎಂದುಕೊಂಡ. ಆದರೆ ಪೂಜಾರಿಯ ಮುಖದಲ್ಲಿ ಕಿರುನಗೆ ಸುಳಿದುಹೋದದ್ದು ಅವನಿಗೆ ಗೊತ್ತಾಗಲೇ ಇಲ್ಲ.
ಮೂರು ತಿಂಗಳಾಯಿತು, ಆರು ತಿಂಗಳಾಯಿತು, ಬಡವ ಮರಳಿ ಬರಲಿಲ್ಲ. ಒಂದು ದಿನ ಪೂಜಾರಿ ಅವನನ್ನು ರಸ್ತೆಯಲ್ಲಿ ಕಂಡ. ಆ ಬಡವನ ಮುಖದಲ್ಲಿ ಅನಿರ್ವಚನೀಯ ತೇಜಸ್ಸಿತ್ತು. ಅವನ ಕಣ್ಣುಗಳಲ್ಲಿ ಅನುಪಮ ಕಾಂತಿಯಿತ್ತು. ಆತ ಮತ್ಯಾರೋ ಹೊಸ ವ್ಯಕ್ತಿಯಾದಂತೆ ತೊರುತ್ತಿತ್ತು. ಪುಜಾರಿ ಅವನನ್ನು ತಡೆದು ಕೇಳಿದ 'ಗೆಳೆಯನೇ, ನೀನು ಮತ್ತೆ ಬರಲೇ ಇಲ್ಲವಲ್ಲ?'
ಬಡವ ಉತ್ತರಿಸಿದ 'ಸ್ವಾಮೀ, ನಾ ಹೇಗೆ ತಾನೇ ಬರಲಿ, ಮನಸ್ಸನ್ನು ಶಾಂತಗೊಳಿಸುವ ಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನನಗೆ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿಗಳಲ್ಲಿ ಕಣ್ಣೀರಿಡುತ್ತಾ ದೇವಪ್ರಾರ್ಥನೆಯಲ್ಲಿ ಕಳೆಯುತ್ತಿದ್ದೆ. ಒಂದು ರಾತ್ರಿ ಕನಸಿನಲ್ಲಿ ದೇವರು ಬಂದು 'ಏಕೆ ಅಳುತ್ತಿರುವೆ?' ಎಂದು ಕೇಳಿದ. ಅದಕ್ಕೆ ನಾನು 'ದೇವರೇ, ಆ ಗುಡಿಯೊಳಕ್ಕೆ ನಾನು ಹೋಗಬೇಕು, ಅಲ್ಲಿ ನಿನ್ನನ್ನು ಕಾಣಬೇಕು' ಎಂದೆ. ಅದಕ್ಕೆ ದೇವರು ನಕ್ಕುಬಿಟ್ಟ. ನಗುತ್ತಾ ಆತ ಹೇಳಿದ 'ನಿಜಕ್ಕೂ ನೀನೊಬ್ಬ ಹುಚ್ಚ, ಆ ಗುಡಿಯೊಳಕ್ಕೆ ನೀನು ಹೋಗಲಾರೆ, ಸ್ವತಃ ನಾನೇ ಹತ್ತಾರು ವರ್ಷಗಳಿಂದ ಅದರೊಳಕ್ಕೆ ಹೋಗಲು ಪ್ರಯತ್ನಿಸಿ ಸೋತಿದ್ದೇನೆ. ನಾನೇ ಸೋತಿದ್ದೇನೆ ಎಂದ ಮೇಲೆ ನೀನು ಹೇಗೆ ತಾನೇ ಹೋಗಬಲ್ಲೆ, ನಾನು ಬೇಕಾದರೆ ನಿನ್ನ ಹೃದಯ ಮಂದಿರದಲ್ಲಿ ನಿಲ್ಲಬಹುದು, ಆದರೆ ಆ ಗುಡಿಯೊಳಗೆ ಹೋಗುವುದು ಬಲು ಕಷ್ಟ.'
ನಿಜ ಹೇಳಬೇಕೆಂದರೆ ಹತ್ತಾರು ವರ್ಷಗಳಿಂದ ಅಲ್ಲ, ನೂರಾರು ವರ್ಷಗಳಿಂದ ದೇವರಿಗೆ ಮಾನವರು ಕಟ್ಟಿದ ಗುಡಿಗಳೊಳಗೆ ಹೋಗಲಾಗಿಲ್ಲ, ಗುಡಿಗಳು ದಿವ್ಯ ಭವ್ಯ ವಿರಾಟ್ ಸ್ವರೂಪಿಯದಾಗಿದ್ದರೂ ದೇವರಿಗೆ ಅವು ಚಿಕ್ಕವು, ಆದರೆ ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ.

- Login or register to post comments
- 1203 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ದೇವರು ನಕ್ಕುಬಿಟ್ಟ
ಬಲು ಸೊಗಸಾಗಿದೆ.
ಬಸವಣ್ಣನವರ "ಎನ್ನ ಕಾಲೆ ಕಂಬ ದೇಹವೇ ದೇಗುಲ.." ವಚನವನ್ನು ನೆನಪಿಸಿತು.
ಉ: ದೇವರು ನಕ್ಕುಬಿಟ್ಟ
ಚೆನ್ಣಾಗಿದೆ!
ಪುತಿನ ಅವರ ಮಾತಿನಲ್ಲಿ:
ದೇವಗೆದೆಯ ಗುಡಿಲೆ ಸಾಕು ನಲಿದು ನೆಲೆಸಲು!
-ಹಂಸಾನಂದಿ
ಉ: ದೇವರು ನಕ್ಕುಬಿಟ್ಟ
ಜಿ. ಎಸ. ಎಸ್ ರವರ "ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ..."
ಇದನ್ನೆ ಅಲ್ಲವೆ ಹೇಳೋದು..
ಉ: ದೇವರು ನಕ್ಕುಬಿಟ್ಟ
ಎಷ್ಟು ಸೊಗಸಾಗಿದೆ! ನಾನು ರಾಘವೇಂದ್ರಮಠದ ಬಹುದೊಡ್ಡ ಶಾಖೆಯ ಅಂದರೆ ಉತ್ತರಭಾರತದಲ್ಲಿರುವ ಮಠಗಳ ಆಡಳಿತವನ್ನು ನೋಡಿಕೊಳ್ಳುವ ವ್ಯವಸ್ಥಾಪಕ. ಮಠಕ್ಕೆ ಬರುವ ಹೋಗುವ ಭಕ್ತರುಗಳ ಜೇಬಿನ ಭಾರವನ್ನು ಮುಂಚೆಯೇ ಅಳತೆ ಮಾಡಿ ಸತ್ಕಾರದ ಮಟ್ಟವನ್ನು ನಿರ್ಧರಿಸುವ ಚಾಣಾಕ್ಷರು ನಮ್ಮಲ್ಲಿದ್ದಾರೆ. ಇದನ್ನು ಓದಿದಾಗ ತಕ್ಷಣ ಅವರುಗಳ ನೆನಪೇ ಬಂತು!
ರಘುನಂದನ
ಎನಗಿಂತ ಕಿರಿಯರಿಲ್ಲ
ಉ: ದೇವರು ನಕ್ಕುಬಿಟ್ಟ
ದೂರದ ತಿರುಪತಿಗೆ ಕಷ್ಟಪಟ್ಟುಕೊಂಡು ಹೋಗಿ ಅಲ್ಲಿ ಗಂಟೆಗಟ್ಟಲೆ ಕಾದು ಒಂದೆರಡು ನಿಮಿಷವೂ ನೋಡಲಾಗದ್ದಕ್ಕೆ ಹೋಗಿ ಬರುವ ನೆಂಟರ ಕಥೆ (ವ್ಯಥೆ) ನೆನಪಾಗುತ್ತದೆ. ಅಷ್ಟಲ್ಲದೆ ಸಿರಿವಂತರು ಹೋಗಿ ಬಂಗಾರವನ್ನು ಸುರಿದು ಬರುತ್ತಾರೆ ತಿರುಪತಿಯ ಹುಂಡಿಯಲ್ಲಿ. ಎಲ್ಲೆಡೆ ಕಲ್ಲಿನ ಮೂರುತಿಗೆ ವಜ್ರದ ಕಿರೀಟಗಳನ್ನೂ ಮಾಡಿಸುತ್ತಾರೆ. ಇವೆಲ್ಲದಕ್ಕೂ ಅರ್ಥವಿದೆಯೆ? ಕೇಳಿ ನಕ್ಕು ಸುಮ್ಮನಾಗುವುದಷ್ಟೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೇವರು ನಕ್ಕುಬಿಟ್ಟ
" ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ." -
ಎಲ್ಲಾ ಓ.ಕೆ ಆದರೆ ಈ ಮಾತು ದೇವರು ಹೇಳಿದರೆ ಚೆನ್ನಾ . ನೀವ್ಯಾಕ್ಕೆ ದೇವರ ಪರವಾಗಿ ಮಾತಾಡ್ತೀರೋ ??
ಈ ದೇಚರು ಯಾವ ಭಕ್ತನ ಮನೆಯಲ್ಲಿ , ಯಾವ ಸ೦ತನ ("ದರಿದ್ರ")ಮನದಲಿ ಪ್ರವೇಶ ಮಾಡ್ತಾನೋ ಯಾರಿಗೆ ಬೇಕು ?
ಈಗೇನಿದ್ದರೂ ಅವನ ಹೆ೦ಡತಿ "ಲಕ್ಷ್ಮಿ " ಬ೦ದರೆ ಸಾಕು.
ಅದಿರಲಿ ಬಡತನಕ್ಕೂ ದೇವರಿಗೂ ನ೦ಟು ಹೆಚ್ಚೇ ?? ಕಾರಣ ನಮ್ಮ ಸ೦ತರೆಲ್ಲಾ ಬಡತನವನ್ನು ಸ್ವೀಕರಿಸಿ ಸಿರಿತನವನ್ನು
ನಿರಾಕರಿಸಿದ್ದಾರೆ. ಈ ದಾರಿಯಲ್ಲಿ ನಡೆಯುವುದಕ್ಕೆ ಪದ್ಯಗಳನ್ನು ರಚಿಸಿದ್ದಾರೆ.
ಅದ್ಯಾಕ್ಕೋ ಗೊತ್ತಿಲ್ಲಾ ? ನ೦ಗ೦ತೂ ದಾರಿದ್ರ್ಯದಲ್ಲಿ ಆಕರ್ಷಕವಾದದ್ದು ಏನು ಕ೦ಡು ಬರಲಿಲ್ಲಾ.
ಬರೀ ದು:ಖ ಮತ್ತು ಅಜ್ಞಾನ.
ನೀವು ಹೇಳಿದ ಮಾತನೇ ವೋಲ್ಟೇರ್ ಚರ್ಚಿನ ಕುರಿತಾಗಿ ಬರೆದಿದ್ದಾನೆ.
ಜೀನ್ ಮಿಸ್ಲರ್ ಒ೦ದು ಚರ್ಚಿನ ಪಾದ್ರಿ . ಆತ ಸಾಯುವ ಮು೦ಚೆ ಈ ಪೂಜಾರಿಗಳ ಬ೦ಡವಾಳದ ಬಗ್ಗೆ
ಸಾಕಷ್ಟು ಬರೆದು ಸತ್ತ.
http://en.wikipedia.org/wiki/Jean_Meslier
ಆ ಪುಸ್ತಕದ ಹೆಸರು "Superstition In All Ages"
http://www.gutenberg.org/files/17607/17607.txt
According to the principles of Christianity, poverty itself is a virtue,
and it is this virtue which the sovereigns and the priests make their
slaves observe the most. According to these ideas, a great number of
pious Christians have renounced with good-will the perishable riches of
the earth; have distributed their patrimony to the poor, and have
retired into a desert to live a life of voluntary indigence.
Poverty of spirit was that of which religion made
always the greatest use. The fundamental virtue of all religion, that is
to say, the most useful one to its ministers, is faith. It consists in
an unlimited credulity, which causes men to believe, without
examination, all that which the interpreters of the Deity wish them to
believe. With the aid of this wonderful virtue, the priests became the
arbiters of justice and of injustice; of good and of evil; they found it
easy to commit crimes when crimes became necessary to their interests.
Implicit faith has been the source of the greatest outrages which have
been committed upon the earth.
ಉ: ದೇವರು ನಕ್ಕುಬಿಟ್ಟ
ಅಯ್ಯೋ ಇದು ನಾನು ಹೇಳಿದ್ದಲ್ಲ ಮಹಾಸ್ವಾಮಿಗಳೇ. ಓಷೋ ಹೇಳಿದ್ದು. ಅವರು ಪುರೋಹಿತನನ್ನು ಬ್ರಾಹ್ಮಣನೆಂದೂ ಬಡವನನ್ನು ಹೊಲೆಮಾದಿಗನೆಂದೂ ಕರೆದಿದ್ದರೇನೋ ನನಗೆ ಗೊತ್ತಿಲ್ಲ. ಬಹುಶಃ ಅದು ನಿಮಗೆ ಆಕರ್ಷಣೀಯವಾಗಿರುತ್ತಿತ್ತೇನೋ? ಒಟ್ಟಿನಲ್ಲಿ ನೀವು ತುಂಬಾ ತಮಾಷೆಯಾಗಿ ಬರೆಯುತ್ತೀರಿ. ನಾನಂತೂ ದೇವರನ್ನು ನೋಡಿದ್ದೇನೆ. ಆದ್ದರಿಂದ ಓಷೋ ಹೇಳಿದ ಮಾತನ್ನು ಅನುಮೋದಿಸುತ್ತೇನೆ.