ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡದ entrepreneur

ವಿಜಯ ಸಂಕೇಶ್ವರ

ಕರ್ನಾಟಕದಲ್ಲಿ ಉದ್ಯಮಶೀಲತೆ ಮೆರೆದ ಕನ್ನಡಿಗ ಯಾರು ಎಂದಾಗ ಸಾಮಾನ್ಯ ಕೇಳಿ ಬರುವ ಹೆಸರು ನಾರಾಯಣ ಮೂರ್ತಿ. ಆದರೆ ಕನ್ನಡ ನಾಡಿನಲ್ಲೇ ಬದಲಾವಣೆಗೆ ಕಾರಣವಾದ ಕನ್ನಡ ಉದ್ಯಮಿ ಯಾರು ಎಂಬುದಕ್ಕೆ ಬಹುಶಃ ವಿಜಯ ಸಂಕೇಶ್ವರರನ್ನು ಹೆಸರಿಸಬಹುದೇನೊ. ಇವರ ಉದ್ಯಮಗಳು NYSEವರೆಗೆ ಹೋಗದಿದ್ದರೂ ಕರ್ನಾಟಕದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಮಾಡಿತು ಎಂಬ ವಿಷಯವನ್ನು ಕರ್ನಾಟಕದಲ್ಲಿ ಈ ಬದಲಾವಣೆಗಳನ್ನು ಕಂಡವರು ಒಪ್ಪಿಕೊಳ್ಳದೆ ಇರುವುದಿಲ್ಲ.

ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಅತಿಥಿ ಸಂಪಾದಕ (guest editor) ಸಂಸ್ಥೆಯ ಸಂಸ್ಥಾಪಕರೇ ಆದ ವಿಜಯ ಸಂಕೇಶ್ವರರು ಎಂಬುದನ್ನ ಕೇಳಿ "ಅವರೇನು ಬರೆದಿರಬಹುದು?" ಎಂಬ ಕುತೂಹಲದಿಂದ ಬೆಳಗಿನ ಪೇಪರ್ ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಕೈಗೆತ್ತಿಕೊಂಡಿದ್ದೆ. ಮುಖಪುಟದಲ್ಲೇ ಅವರು ಬರೆದಿರುವ ಈ ನುಡಿಮುತ್ತು ಕಣ್ಣಿಗೆ ಬಿತ್ತು:

ಈ ಸ್ಥಿತಿ (ಸ್ಪರ್ಧಾಶೂನ್ಯ ಮನೋಭಾವ) ಬದಲಾಗಬೇಕೆಂದರೆ ನಾವು ಹಾಗೂ ನಮ್ಮ ವ್ಯವಸ್ಥೆ ಎರಡೂ ಬದಲಾಗಬೇಕು. ವಿಶ್ವದ ಎಲ್ಲೆಡೆಯಿಂದ ಎಲ್ಲ ಕ್ಷೇತ್ರಗಳ ದೊಡ್ಡ ದೊಡ್ಡ ಕಂಪೆನಿಗಳು, ಸಂಸ್ಥೆಗಳು ಭಾರತಕ್ಕೆ ದೊಡ್ಡದಾಗಿಯೇ ಕಾಲಿಟ್ಟಿವೆ, ಕಾಲಿಡುತ್ತಿವೆ. ಭಾರತ ಅತಿದೊಡ್ಡ ಮಾರುಕಟ್ಟೆ ಎಂಬುದು ಅವುಗಳಿಗೆ ಚೆನ್ನಾಗಿ ಗೊತ್ತು. ಆದರೆ ದುರದೃಷ್ಟವಶಾತ್ ನಾವೇನೆಂಬುದು ನಮಗೇ ಗೊತ್ತಿಲ್ಲ. ನಮ್ಮಲ್ಲಿ ಶಕ್ತಿ, ಸಾಮರ್ಥ್ಯ ಇದೆ. ಆದರೆ ಉದ್ಯಮಶೀಲತೆ, ಸಾಹಸ ಪ್ರವೃತ್ತಿ ಅಷ್ಟಾಗಿ ಇಲ್ಲ.

ಈ ಮಾತು ಕರ್ನಾಟಕ ಹಾಗೂ ಒಟ್ಟಾರೆ ಭಾರತದ ಸದ್ಯದ ಸ್ಥಿತಿಯನ್ನು ಕೆಲವೇ ವಾಕ್ಯಗಳಲ್ಲಿ ತಿಳಿಸಿದಂತಿದೆ.

ಅವಲೋಕಿಸಿ ನೋಡಿದರೆ ಉತ್ತರ ಭಾರತದಲ್ಲಿ ದಕ್ಷಿಣಕ್ಕಿಂತ ಉದ್ಯಮಶೀಲತೆ ಹೆಚ್ಚು - ಪಂಜಾಬ್, ಗುಜರಾತ್, ಯು ಪಿ ಮುಂತಾದ ರಾಜ್ಯಗಳಿಂದಲೇ ಭಾರತದ ಪ್ರಮುಖ ಉದ್ಯಮಗಳ ರೂವಾರಿಗಳು ಹೆಚ್ಚಾಗಿ ಬಂದದ್ದು ಕಾಣುತ್ತೇವೆ. ದಕ್ಷಿಣದಲ್ಲಿ ಹೆಚ್ಚಾಗಿ ಜೀವನದಲ್ಲಿ ರಿಸ್ಕ್ ಫ್ರೀ ಆಯ್ಕೆಯಾದ ಸಂಬಳದ ಕೆಲಸವನ್ನು ತೆಗೆದುಕೊಳ್ಳುವವರೇ ಹೆಚ್ಚು ಮಂದಿ. ಹೀಗಾಗಿ ಇಲ್ಲಿರುವ ಉದ್ಯಮಗಳ ರೂವಾರಿಗಳೂ ಹೆಚ್ಚು ಕಡಿಮೆ ಉತ್ತರದ ಮಂದಿಯೇ ಆಗಿರುವುದು ಹೆಚ್ಚು ಎಂಬುದು ಕಂಡುಬರುತ್ತದೆ. ಒಟ್ಟಾರೆ ಒಂದೊಮ್ಮೆ ಕಣ್ಣು ಹಾಯಿಸಿದರೆ ಕನ್ನಡಿಗರು ಉದ್ಯಮಗಳನ್ನು ಉಳಿದವರಿಗೆ ಬಿಟ್ಟುಕೊಟ್ಟು ಅವರಡಿ ಕೆಲಸ ಮಾಡುವಲ್ಲಿ ಹೆಚ್ಚು ನಿರತರು ಎಂದೂ ಅನ್ನಿಸದೇ ಇರುವುದಿಲ್ಲ. ಎಲ್ಲೋ ಎಂ ಟಿ ಆರ್ ನಂತಹ ಹೆಸರುಗಳು ಅಲ್ಲಿಲ್ಲಿ ಕೇಳಿಸುವುದ ಬಿಟ್ಟರೆ ಭಾರತದ ಸುಮಾರು ಪಾಲು ಉದ್ಯಮಗಳು ಪ್ರಾರಂಭವಾಗುವುದರಲ್ಲಿ ಇರುವ ಕನ್ನಡದವರ ಪಾಲು ಬಹಳ ಕಡಿಮೆ ಎಂಬುದು ಕಂಡುಬರುತ್ತದೆ.

ಇನ್ನು ವಿಜಯ ಸಂಕೇಶ್ವರರು ಮಾಡಿದ ಬದಲಾವಣೆ ನಾರಾಯಣಮೂರ್ತಿ ಎಂಡ್ ಕೋ ಮಾಡಿದ್ದಕ್ಕಿಂತ ತೂಕದಲ್ಲಿ ಹೆಚ್ಚು ಎಂಬ argument ಕೂಡ ನಾವು ಮುಂದಿಡಬಹುದು. ವಿ. ಸ. ನಡೆಸಿದ, ನಡೆಸಿರುವ ಉದ್ಯಮ ಕರ್ನಾಟಕದಲ್ಲಿ, ಕನ್ನಡದ ನಾಡಿನಲ್ಲಿ ನೇರ ಬದಲಾವಣೆಗಳನ್ನು ತಂದವು. ವಿಜಯ ಕರ್ನಾಟಕ ಪತ್ರಿಕೆಯೇ ಅದರಲ್ಲಿ ಒಂದು ಪ್ರಮುಖವಾದುದು. ಉದ್ಯಮಶೀಲತೆ ಕೊಡುವುದು ತೆಗೆದುಕೊಳ್ಳುವುದರ ಮಿಶ್ರ ಪೇಡ ಅಥವ ಕಹಿಯಾದ ಚೂಡಾ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರಲ್ಲಿ ಎಷ್ಟರಮಟ್ಟಿಗೆ ನೆಲೆಕೊಟ್ಟ ನೆಲದಲ್ಲಿ ಪಾಸಿಟಿವ್ ಬದಲಾವಣೆಗೆ ಕಾರಣರಾಗಿದ್ದಾರೆ ಎಂಬುದರ ಅಳತೆಯಲ್ಲಿ ಬಹುಶಃ ತೂಗಿಸಿ ನೋಡಬೇಕು ಎಂದು ಕೂಡ ಆರ್ಗ್ಯುಮೆಂಟ್ ಮುಂದಿಡಬಹುದು. ಕೊನೆಯಲ್ಲಿ ಹರಿದ ಹಣದಲ್ಲಿ ಏನೇನು ಬದಲಾವಣೆಗಳಾದುವು ಎಂಬುದು ಮುಖ್ಯ ಎಂದನ್ನಿಸದೇ ಇರುವುದಿಲ್ಲ.
ವಿಜಯ ಸಂಕೇಶ್ವರರು ನಾರಾಯಣಮೂರ್ತಿ, ನೀಲೇಕಣಿಗಳಂತವರ ಎದುರು "ದಿ ಕನ್ನಡ entrepreneur" ಎನ್ನಿಸದೇ ಇರುವುದಿಲ್ಲ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಸಂಗನಗೌಡ's picture

ವಿಜಯ್ ಸಂಕೇಸ್ವರರ ಬಗ್ಗೆ ನಿಮ್ಮ ಒಟ್ಟಾರೆ ಮಾತು, ಒಪ್ಪಬೇಕಾದ್ದೇ, ಆದರೆ ಬರೀ ಉದ್ದೆಮಶೀಲತೆಯನ್ನು ನೆದರಿನಲ್ಲಿಟ್ಟುಕೊಂಡು ಪೇಪರನ್ನು ಹೋಗಿ ಹೋಗಿ TOIಗೆ ಮಾರಿಕೊಂಡಿದ್ದು, ಅವರು ಮಾಡಿದ ದೊಡ್ಡ ತಪ್ಪು ಅಂತ ಅನ್ನಿಸದಿರದು.

ನಾರಾಯಣಮೂರ್ತಿಯವರಸ್ಟು professional ತೋರದಿದ್ದರೂ ರಿಸ್ಕ್ ತುಗೊಂಡು ಏನಾದರೊಂದು ಮಾಡಿ ತೋರಿಸುವ ಎದೆಗಾರಿಕೆ ಇದೆ ಅವರಿಗೆ.

mahesha's picture

ಸಂಗನ

ಕನ್ನಡದ ದೊಡ್ಡ ಕೈಗಾರಿಕೆಗಾರರಲ್ಲಿ

೧) ವಿಜಯ್ ಮಲ್ಯ
೨) ನಾರಾಯಣ ಮೂರ್ತಿ
೩) ಏರ್‍ ಡೆಕ್ಕನ್ ಗೋಪಿನಾಥ್
೪) Aruba Networksನ ಟಟಟ ಮೇಲುಕೋಟೆ
೫) ಇನ್ನು ಗೋಪಿನಾಥ್? ಸಾಫ್ಟವೇರ್‍ ಕಂಪೆನಿ ತೆಗೆದವನು

ಇವರಲ್ಲ ಹೊರದೇಸದ ವರಗೂ ಹೆಸರು ಮಾಡಿದ್ದಾರೆ.

ಅದರಲ್ಲೂ ವಿಜಯ ಮಲ್ಯ , ನಾರಾಯಣ ಮೂರ್ತಿಸಕ್ಕತ್!

gc's picture

@ನಾಡಿಗರೆ, ನೀವು ಹೇಳೋದು ಸರಿ. ನಾವು ಹೆಚ್ಚಿನ ರಿಸ್ಕ ತೆಗೊಳ್ಳವ್ರಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಅನೇಕ ಕಂಪನಿಗಳನ್ನು ನಮ್ಮ ರಾಜ್ಯದವರು ತಗೆದಿದ್ದಾರೆ ಆದರೆ ದೊಡ್ಡ ಗಾತ್ರದ ಕಂಪನಿಗಳು ನಮ್ಮವರಿಂದ ಬಂದದ್ದು ಕಡಿಮೆ. ಅದಕ್ಕೆ ಇರಬೇಕು ರಿಸ್ಕ್ ಕಡಿಮೆ ಇರೊ Engineering/Medical/Nursing/B.Ed ಕಾಲೇಜುಗಳನ್ನ cottage industry ತರ ನಾಡಿನ ತುಂಬಾ ನಡಸ್ತಾ ಇದೀವಿ :-)

@ಮಹೇಶರೆ, ತುಂಬಾ ಸಣ್ಣದಾಯ್ತಲ್ಲ ನಿಮ್ಮ ಪಟ್ಟಿ :-) ಕುಂದಾಪುರ ವಾಮನ ಕಾಮತ ಯಾವ ಬ್ಯಾಂಕನ್ನ ನಡಸ್ತಾ ಇದ್ದಾರೆ? ವಿಜಯಾ/ಕೆನರಾ/ಸಿಂಡಿಕೇಟ್/ಕಾರ್ಪೋರೇಷನ್/ಕರ್ನಾಟಕ ಬ್ಯಾಂಕಗಳೆಲ್ಲ ಶುರುವಾದದ್ದು ನಮ್ಮ ಕರಾವಳಿಯಲ್ಲಿ. ಹೋಟೆಲ್ ಉದ್ಯಮಕ್ಕೂ ಕರಾವಳಿ ಜನರ ಕೊಡುಗೆ ಅಪಾರ.

ಇನ್ನೂ ಹಲವಾರು ಹೆಸರುಗಳು ನನಗೆ ಗೊತ್ತಿರುವಂತೆ:

ನಂದನ ನಿಲೇಕಣಿ (Infosys Founding Member; ಶಿರಸಿ ಮೂಲದವರು)
ಬಿ.ವಿ. ಜಗದೀಶ (Exodus Communications, Netscaler)
ಗುರುರಾಜ ದೇಶಪಾಂಡೆ (Cascade, Sycomore Networks)
ಅನಂತ ಕೊಪ್ಪರ್ (Kshema, Mphasis)
ಕಿರಣ್ ಮಜುಮ್ದಾರ್-ಶಾ (ಬೆಂಗಳೂರಿನಲ್ಲೆ ಬೆಳೆದದ್ದು)
ಅಜಿತ ಪ್ರಭು/ಅರವಿಂದ ಮೆಳ್ಳಿಗೇರಿ (Quest Global)
R.N.ಶೆಟ್ಟಿ (ಮುರುಡೇಶ್ವರ ಸೆರಾಮಿಕ್ಸ್)
ಬೆಳಗಾವಿಯ ಶ್ರೀ ರೇಣುಕಾ ಶುಗರ್ಸ (ದೇಶದ ಅತಿದೊಡ್ದ ಸಕ್ಕರೆ ಕಾರ್ಖಾನೆಗಳಲ್ಲೊಂದು)
ಹರಿ ಖೋಡೆ (ಖೋಡೆ ಗ್ರೂಪ್)
ಮಣಿಪಾಲ ಗ್ರೂಪ್ (TMA Pai ಅವರಿಂದ ಸ್ಥಾಪಿತವಾದದ್ದು)
...

ನನ್ನ ಲಿಸ್ಟ್ ಕೂಡ ಸಣ್ಣದೆ ಅನ್ನಿಸುತ್ತೆ :-)

mahesha's picture

gc.

ನಂಗೆ ಗೊತ್ತಿರುವುದು ಅಸ್ಟೇ! ಏನು ಮಾಡೋದು :(

ನಂಗೆ ಒಂದು ದೊಡ್ಡ ಬೇನೆ ಅಂದ್ರೆ ಹೆಸರು ಮತ್ತು ಡೇಟುಗಳನ್ನು ಮರೆಯೋದು!!

ನನ್ ಕ್ಲಾಸ್ಮೇಟು ಒಬ್ಬ ಬಲು ನಾಳುಗಳಾದ ಮೇಲೆ ಸಿಕ್ಕ, ನಂಗೆ ಅವನ ಹೆಸರು ಏನು ಮಾಡಿದ್ರೂ ಹೊಳೆಯಲೇ ಇಲ್ಲ. "ನಾನು ಲೋ ನಿನ್ನ ಏನೋ ಕರೆತಾ ಇದ್ವಲ್ಲ ಏನ್ ಹೇಳು" ಅಂದೆ, ಅದಕ್ಕೆ ಅವನು "ಲೋ ಮಾಯ್ಸ, ನನ್ ನೀವೆಲ್ಲ ಬರೀ ರಾಕೇಸ ಅಂತಾನೆ ಕರಿತಿದ್ದುದ್ದು" ಅಂದ :)

veenadsouza's picture

ಯಾಕ್ರೀ ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ ಜೀ ಯನ್ನು ಮರೆತಂತಿದೆ.
veenadsouza

hpn's picture

ಅಝೀಮ್ ಪ್ರೇಮ್ಜಿ ಮೂಲತಃ ಕರ್ನಾಟಕದವರಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

anivaasi's picture

ನಾವು ದೊಡ್ಡ ದೊಡ್ಡ ಕಂಪನಿ ಕಾರ್ಪೊರೇಶನ್ ಯುಗದಲ್ಲಿ ಇದ್ದೇವೆ ಅಂತ ಅನಿಸಿದರೂ, ಅವರಿಗೆ ಸರ್ಕಾರಕ್ಕಿಂತಲೂ ಹೆಚ್ಚಿಗೆ ಹಣ, ಶಕ್ತಿ ಇರೋದಕ್ಕಿಂತ ಅವು ಸಣ್ಣ ಪುಟ್ಟದಾಗಿ ಇದ್ದು ಸಮಾಜಕ್ಕೆ ತಗ್ಗೀ ಬಗ್ಗಿ ನಡಿಯೋದೇ ಒಳ್ಳೇದು ಅಲ್ಲವೇ?
ಆಸ್ಟ್ರೇಲಿಯದಲ್ಲಿ ಇತ್ತೀಚಿನವರೆಗೂ ಪತ್ರಿಕೆ, ಟೀವೀ, ರೇಡಿಯೋ ಮೂರೂ ಒಂದೇ ಕಂಪನಿ ಕೈಯಲ್ಲಿ ಇಲ್ಲದಂತೆ ಕಾಯಿದೆ ಇತ್ತು.

hpn's picture

ಆಸ್ಟ್ರೇಲಿಯದಲ್ಲಿ ಇತ್ತೀಚಿನವರೆಗೂ ಪತ್ರಿಕೆ, ಟೀವೀ, ರೇಡಿಯೋ ಮೂರೂ ಒಂದೇ ಕಂಪನಿ ಕೈಯಲ್ಲಿ ಇಲ್ಲದಂತೆ ಕಾಯಿದೆ ಇತ್ತು.

ಮೇಲು ನೋಟಕ್ಕೆ ಒಳ್ಳೆಯ ಕಾಯ್ದೆಯಂತಿದೆ. ಆದರೆ ಇಂಟರ್ನೆಟ್ ಇರುವುದರಿಂದ ಇದು ಈಗಿನ ಜಗತ್ತಿನಲ್ಲಿ inappropriate ಕಾಯ್ದೆಯಂತೆ ಕಾಣತ್ತೆ.

ಕಂಪೆನಿಗಳು ಹುಟ್ಟಿದ ಮೇಲೆ ದೊಡ್ಡದಾಗೇ ಆಗುತ್ತವೆ. ಕಂಪೆನಿಗಳಿಗೆ ಅಳಿವಿಲ್ಲ - ಇದೇ ಅಲ್ಲವೆ ಕಂಪೆನಿಗಳನ್ನು ಸರಕಾರಕ್ಕಿಂತ ಪವರ್ಫುಲ್ ಎಂಟಿಟಿಯನ್ನಾಗಿಸಿದ್ದು? ಸರಕಾರದ ಶಕ್ತಿ ಏನಿದ್ದರೂ ಒಂದು ಜಿಯಾಗ್ರಫಿಕಲ್ ಬೌಂಡರಿಯೊಳಗೆ - ಕಂಪೆನಿಗೆ ಇಡಿಯ ವಿಶ್ವದ ವ್ಯಾಪ್ತಿ. ಹೀಗಾಗಿ ಕಂಪೆನಿ ಸಮಾಜಕ್ಕೆ ತಗ್ಗಿ ಬಗ್ಗಿ ನಡೆಯೋದು ಒಳ್ಳೆಯ scenario ಆದರೂ ಅದು ಸದ್ಯದ ಜಗತ್ತಿನಲ್ಲಿ ರಿಯಾಲಿಟಿಯಿಂದ ದೂರವಾದದ್ದು ಅನ್ಸತ್ತೆ.

ಜೊತೆಗೆ ಯಾವ ಸಮಾಜಕ್ಕೆ ತಗ್ಗಿ ಬಗ್ಗಿ ನಡೆಯಬೇಕು ಎಂಬ ಪ್ರಶ್ನೆ ಬೇರೆ ಉಧ್ಭವಿಸುತ್ತದೆ. ಪ್ರಾಫಿಟ್ ಮೋಟಿವ್ ಇರುವ ಯಾವುದೇ ಸಂಸ್ಥೆ ಯಾವ ಸಮಾಜದ ಜೊತೆಗೂ ತನ್ನನ್ನು ಗುರುತಿಸಿಕೊಳ್ಳುವುದಿಲ್ಲ ಎಂಬುದು ನಮಗೆ ಗೊತ್ತೇ ಇದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

anivaasi's picture

ಇಂಟರ್‌ನೆಟ್ ಇದ್ದರೂ ಅದು ಈವರೆಗೂ ದಕ್ಕಿರುವುದು ಇಂಡಿಯಾದ ಬರೆ 3.5% ಜನಕ್ಕೆ ಮಾತ್ರ. ಅದು ಸುದ್ದಿ ಮಾಧ್ಯಮವಾಗಿ ಪರಿಣಾಮ ಬೀರಲು ಇನ್ನೊಂದಷ್ಟು ವರ್ಷ ಬೇಕು.
ಪ್ರಾಜಾಪ್ರಭುತ್ವದಲ್ಲಿ ಜನರ ನಿಲುವಿನ ಮೇಲೆ ಪರಿಣಾಮ ಬೀರುವ ಶಕ್ತಿ ಇನ್ನೂ ಪಾರಂಪಾರಿಕ ಸುದ್ದಿ ಮಾಧ್ಯಮಗಳ ಕೈಯಲ್ಲೇ ಇದೆ ಅನಿಸುತ್ತೆ. ಸುಮಾರು 70% ಜನರಿಗೂ ಮಿಕ್ಕಿ ಇಂಟರ್‌ನೆಟ್ ದಕ್ಕಿರುವ ಆಸ್ಟ್ರೇಲಿಯದಲ್ಲೂ ಸಂಜೆ 6ಗಂಟೆಯ ಸುದ್ದಿ ಬಹಳ ಮುಖ್ಯ. ಸಿನೆಮಾದ ಜನಕ್ಕೆ, ರಾಜಕಾರಣಿಗಳಿಗೆ ಎಲ್ಲರಿಗೂ. ಅಲ್ಲಿ ಹೇಗಾದರೂ ಕಾಣಿಸಿಕೊಂಡು ಜನರನ್ನು ಮುಟ್ಟಲು ಒದ್ದಾಡುತ್ತಾರೆ. ಹನೀಫ್ ಪ್ರಕರಣದ ಸಮಯದಲ್ಲಿ ಸಂಜೆ ಸುದ್ದಿ ಮಾಧ್ಯಮಕ್ಕಿಂತ ತುಂಬಾ ಜಾಸ್ತಿ ವಿಷಯಗಳು ಇಂಟೇರ್ನೆಟ್ಟಿನಲ್ಲಿ ಸಿಕ್ಕುತ್ತಿದ್ದರೂ, ರೇಡಿಯೋ, ಟಿವಿಯೆ ಜನರ ನಿಲುವುಗಳನ್ನು ರೂಪಿಸಿದ್ದು ನನ್ನ ಅನುಭವಕ್ಕೆ ಬಂದಿತ್ತು.
ಇನ್ನು ಕಂಪನಿಗಳು ತಾನೇ ತಾನಾಗಿ ದೊಡ್ಡದಾಗುವುದಿಲ್ಲ. ಅವಕ್ಕೆ ಪೂರಕವಾದ ಕಾನೂನುಗಳು ಬೇಕಾಗುತ್ತವೆ. ಅದಕ್ಕೆ ಅವು ತಾವು ಕಾರ್ಯ ನಿರ್ವಹಿಸುತ್ತಿರುವ ಸಮಾಜಕ್ಕೆ ಮಣಿಯಬೇಕಾಗುತ್ತದೆ. ಅವು ಶಕ್ತಿವಂತವಾದಾಗ ಮಣಿಯುವುದು ಬಿಟ್ಟು ಸರ್ಕಾರದ, ತನ್ಮೂಲಕ ಸಮಾಜದ ಕೈ ತಿರುಚುತ್ತಾವೆ! :) ನಮ್ಮ ನಿಮ್ಮಂಥವರನ್ನು ಒಪ್ಪಿಸಲು ಗ್ಲೋಬಲೈಸೇಶನ್ ಎಂದು ಬೊಬ್ಬೆ ಹೊಡೆಯುತ್ತವೆ! ಏನೇ ಆದರೂ ಅವು ಕೆಲಸ ಮಾಡುವ ಸಮಾಜದಲ್ಲಿ ಅವಕ್ಕೆ ಜವಾಬ್ದಾರಿ ಇದ್ದೇ ಇದೆಯಲ್ಲವೇ?
ಸ್ಪಾರ್ಧಾತ್ಮಕ ವಾತಾವರಣದಲ್ಲಿ ಯಾವುದೇ ಕಂಪನಿಗೂ ಎದುರಾಳಿಯಿಂದಾಗಿಯೇ ಅದರ ಗಾತ್ರಕ್ಕೆ ಮಿತಿ ಬರುತ್ತದೆ ಅಲ್ಲವೇ?

girish.rajanal's picture

ಹೌದು ಇದು ಕನ್ನಡಿಗರು ಮಾಡಿದ ಸಾಧನೆಯೇ ಸರಿ.
ಆದರೆ ಐಟಿ ಉದ್ಯಮದಿಂದ ಯಾವ ದೇಶಾನ ಉದ್ಧಾರ ಮಾಡೋಕೆ ಹೊರಟಿದ್ದಾರೆ ಇವರು?
ಬೇರೆ ದೇಶದ ಉನ್ನತಿಗೋಸ್ಕರ ನಾವು ಹಗಲು ರಾತ್ರಿ ಕೆಲಸ ಮಾಡುವಂತಾಗಿದೆ.
ಈ ಹತ್ತು ವರ್ಷ ಗಮನಿಸಿದರೆ ದೇಶದಲ್ಲಿ ಆರೊಗ್ಯ ಸಮಸ್ಯೆ ಎಷ್ಟಾಗಿದೆಯೆಂದು ಗೊತ್ತಾಗುತ್ತೆ.
ಎಲ್ಲ ದೇಶದಿಲ್ಲಿ ನಿರ್ಬಂಧಿಸಲ್ಪಟ್ಟ ಔಷಧಿಗಳು ಇಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿವೆ. ಆ ದೇಶದಲ್ಲಿ ನಾಯಿಗೂ ಕೊಡಲ್ಲ ಅಂತಹ ಮಾತ್ರೆಗಳು ಇಲ್ಲ ಜಾಹೀರಾತಿನ ಮೂಲಕ ಪ್ರಚಾರವಾಗುತ್ತಿವೆ.
ಎಮ್.ಎನ್.ಸಿ ಕಂಪನಿಗಳಿಗೆ ಎಷ್ಟು ದುಡಿತೀವೋ ಅದರಲ್ಲಿ ಒಂದರಷ್ಟು ನಮ್ಮ ದೇಶಕ್ಕೆ ದುಡಿದರೆ ನಮ್ಮ ದೇಶ ಜಗತ್ತಿನಲ್ಲೇ ನಂ.೧ ಆಗುತ್ತೆ.

kul_guru1977's picture

ಎಲ್ಲಾ ಓಕೆ, ಇಂಗ್ಲೀಷ್ ಯಾಕೆ ?
ವಿಜಯ ಸಂಕೇಶ್ವರರ ಹಿರಿಮೆ ಇರುವುದು ಅವರ ಸಂಸ್ಥೆ ಗಳು ಅಶಿಕ್ಷಿತ/ಅರ್ಧಶಿಕ್ಷಿತ *ಕನ್ನಡಿಗ*ರಿಗೆ ಒದಗಿಸಿರುವ ಉದ್ಯೋಗಾವಕಾಶಗಳಿಂದ. ಬಿ.ಇ . ಮಾಡಿದವರಿಗೆ ಇನ್ಫೋಸಿಸ್ ಇಲ್ಲಾಂದ್ರೆ ಇನ್ನೋಂದಾದರೂ ಸಂಸ್ಥೆಯಲ್ಲಿ ಕೆಲಸ ಸಿಗುತ್ತದೆ. ಆದರೆ ಯಾವುದೋ ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ, ಅಷ್ಟೇನು ಜಾಣರಲ್ಲದ ಸಾವಿರಾರು ಜನರಿಗೆ ವಿ.ಆರ್.ಎಲ್ ಉದ್ಯೋಗಕೊಟ್ಟು ಬಾಳಿಗೆ ದಾರಿಯಾಗಿಸಿದೆ.

ಆದರೆ ಒಂದು ಪ್ರಶ್ನೆ : ವಿಆರೆಲ್ ಬಸ್ಸುಗಳು ಓಡುವುದು ಹೆಚ್ಚಾಗಿ ಕರ್ನಾಟಕದಲ್ಲಿ. ಅವುಗಳನ್ನು ಉಪಯೋಗಿಸುವವರು ಹೆಚ್ಚಾಗಿ ಕನ್ನಡಿಗರು. ಅದರ ಬುಕ್ಕಿಂಗ್ ಎಜಂಟುಗಳು ಹೆಚ್ಚಾಗಿ ಕನ್ನಡಿಗರು ಮತ್ತು ಅವರ ಇಂಗ್ಲೀಷ್ ಅಷ್ಟಕಷ್ಟೆ. ಅದರ ಮಾಲಿಕರು "ಕನ್ನಡನಾಡು"( ಪಕ್ಷದ ;-)) ಸ್ಥಾಪಕರು, "ಸಮಸ್ತ ಕನ್ನಡಿಗರ ಹೆಮ್ಮೆ " ( ವಿ.ಕ) ಯನ್ನು ಹುಟ್ಟು ಹಾಕಿದವರು. ಆದರೂ ವಿಆರೆಲ್ ಬಸ್ಸಿನ ಟಿಕಿಟುಗಳಿರುವುದು ಸಂಪೂರ್ಣ ಇಂಗ್ಲೀಷಿನಲ್ಲಿ, ಅವರ ವೆಬ್ ಸೈಟಿನಲ್ಲಿ (http://www.vrlgroup.in/) ಕನ್ನಡದ ಸುಳಿವೂ ಇಲ್ಲ . ಯಾಕೋ ??
-ಗುರ್