ಕಾರಂತರ ಜೀವಂತ ಪಾತ್ರಗಳು
(ಸಂಕಲನ ೩೫ನೇ ಸಂಚಿಕೆಯಿಂದ ಪ್ರಕಟವಾಗುತ್ತಿರುವ ಕಾರಂತರ ಕಾದಂಬರಿಗಳ ಪರಿಚಯ ಮಾಲಿಕೆಯಲ್ಲಿನ ಮೊದಲ ಲೇಖನ)
ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಬಳಕೆಗೆ ಬಂದ ಕಾಲದಿಂದಲೂ, ಈ ನಾಡಿನಲ್ಲಿ ಸಂದು ಹೋದ ಕನ್ನಡಿಗರ ಸಂಖ್ಯೆ ಅಸಂಖ್ಹ್ಯ. ಅನೇಕ ಕೋಟಿ;ಆದರೆ ಕೇವಲ ಬೆರಳೆಣಿಕೆಯೊಷ್ಟು ಜನರ ಸಾಂಸ್ಕೃತಿಕ ಕೃಷಿಗಳಾದ ಸಂಗೀತ, ನೃತ್ಯ, ಶಿಲ್ಪ ಇತ್ಯಾದಿ ಲಲಿತಕಲೆಗಳು ಮತ್ತು ಸಾಹಿತ್ಯಕ ಕಾರ್ಯಗಳು, ಇಡೀ ನಾಡೀನ ಜನ ಸಮುದಾಯಕ್ಕೆಒಂದು ಸಂಸ್ಕೃತಿಯನ್ನು ; ಒಂದು ಗಾಂಭೀರ್ಯವನ್ನು , ವಿಚಾರಶೀಲತೆಯನ್ನು ತಂದು ಕೊಟ್ಟುದು ಈಗ ಇತಿಹಾಸ. ಅದಲ್ಲೂ ಕನ್ನಡದಲ್ಲಿ ಹೊರ ಹೊಮ್ಮಿದ ಸಾಹಿತ್ಯ ಕನ್ನಡ ಭಾಷೆಗೆ ವಿಶ್ವದಲ್ಲಿ ಒಂದು ಸ್ಠಾನವನ್ನು ಮತ್ತು ಕನ್ನಡ ಜನತೆಗೆ ಸಾಂಸ್ಕೃತಿಕ ಜಾಗೃತಿಯನ್ನು ತಂದು ಕೊಟ್ಟುದು ನಿಜ . ಈ ಬೆರಳೆಣಿಕೆಯೊಷ್ಟು ಮಹಾನುಭಾವರು ಕನ್ನಡ ನೆಲದಲ್ಲಿ ಜನ್ಮ ತಳೆಯದಿದ್ದರೆ ಕನ್ನಡ ಅತ್ಯಂತ ಬರಡಾದ ಒಂದು ಸಾಮಾನ್ಯ ಭಾಷೆಯಾಗಿರುತ್ತಿತ್ತು.
ಪಂಪ, ರನ್ನರು ಕನ್ನಡದ ಕಾವ್ಯ ಲೋಕಕ್ಕೆ ಆಸ್ತಿವಾರ ಹಾಕಿದರೆ, ಅಕ್ಕ, ಅಲ್ಲಮ, ಮುಂತಾದ ಶಿವ ಶರಣರು; ಹರಿಹರ, ರಾಘವಾಂಕ, ಕುಮಾರವ್ಯಾಸ, ಚಾಮರಸ , ಲಕ್ಷ್ಮೀಶ ಇಂತಹ ರಸಋಷಿಗಳಿಂದ ಅವರು ಜನ್ಮ ತಳೆದ ಶತಮಾನಗಳು ಸಾರ್ಥಕವಾಗಿ , ಕನ್ನಡ ಸಾಹಿತ್ಯದ ಇತಿಹಾಸದಲ್ಲಿ , ಶಾಶ್ವತ ಸ್ಥಾನವನ್ನು ಪಡೆದುಕೊಂಡವು . ಈ ಶತಮಾನಗಳಲ್ಲಿ ವರ್ಧಿಸಿದ ಕನ್ನಡ ಪುನಃ ಸರ್ವತೋಮುಖ ಅಂತಃಸತ್ವವನ್ನು ಹೊರಗೆಡಹಿದುದು ಇಪ್ಪತ್ತನೆಯ ಶತಮಾನದಲ್ಲಿ . ಕನ್ನಡ ಭಾಷಾಚರಿತ್ರೆಯಲ್ಲಿ ಈ ಇಪ್ಪತ್ತನೆಯ ಶತಮಾನ , ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸುವಲ್ಲಿ ಎಣೆ ಇಲ್ಲದೆ ಯಶಶ್ವಿಯಾಗಿದೆ . ಇಪ್ಪತ್ತನೆಯ ಶತಮಾನವು , ಕನ್ನಡ ವಾಗ್ದೇವಿಯು ತನ್ನ ವೈಭವವನ್ನು ಅನೇಕ ಮುಖಿಯಾಗಿ ವಿಸ್ತರಿಸಿ ಮೆರೆದ ಪರ್ವ ಕಾಲ.ಇಪ್ಪತ್ತನೆಯ ಶತಮಾನದ ಕನ್ನಡ , ಅಂದಿನವರೆಗೆ ಮನುಷ್ಯಕುಲ ಪಡೆದ ಬಹುಮುಖೀ ಅನುಭವಗಳನ್ನು ಅಂತರ್ಗತ ಮಾಡಿಕೊಂಡು, ಹೊಸ ಹೊಸ ರೀತಿಯ ಸಾಹಿತ್ಯ ಮಾರ್ಗಗಳನ್ನು , ಅನಾವರಣಗೊಳಿಸುವಲ್ಲಿ ಅದ್ಭುತ ಯಶ ಸಾಧಿಸಿತು. ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆಯವರಂತಹ ಹೆಮ್ಮರಗಳ ಜೊತೆಯಲ್ಲಿ ಸಮೃದ್ದವಾಗಿ ಬೆಳೆದ ಸಾಹಿತ್ಯ ಸಿರಿಗೆ ಕೊನೆ,ಮೊದಲಿಲ್ಲವೆಂಬಂತೆ , ಹೊಸ ತಲೆಮಾರಿನ ಬರಹಗಾರರ , ಹೊಸ ಹೊಸ ರೀತಿಯ ಪ್ರಯೋಗಗಳಿಗೆ ಒಳಗಾಗಿ ಕನ್ನಡ ಸಾಹಿತ್ಯ ಲೋಕ ಅಪರಿಮಿತ ವಿಸ್ತಾರವನ್ನು ಪಡೆಯಿತು.
ಮಾನವ ಕುಲದ ಇತಿಹಾಸದಲ್ಲಿ ಇಪ್ಪತ್ತನೆಯ ಶತಮಾನ, ಒಂದು ಪ್ರಧಾನ ಸಂಕ್ರಮಣದ ಸನ್ನಿವೇಶವನ್ನು ಸೃಷ್ಟಿಸಿತು.ಅನೇಕ ಶತಮಾನಗಳ ಹಿಂದೆಯೇ ಕಾಣಿಸಿಕೊಂಡಿದ್ದ ಬದಲಾವಣೆಯ ಸಂಚಲನ , ಅಪರಿಮಿತ ವೇಗದ ಭರವನ್ನು ಕಂಡುಕೊಂಡುದು ಇಪ್ಪತ್ತನೆಯ ಶತಮಾನದ ವೈಶಿಷ್ಟ್ಯ. ಸಾವಿರಾರು ವರ್ಷಗಳಿಂದ ಜನಜೀವನದ ರೀತಿ ನೀತಿಗಳಲ್ಲಿ ಅಂಥ ಮಾರ್ಪಾಡುಗಳಾಗದೆ, ಯಾವುದೋ ಪುರಾತನ ಕಾಲಗರ್ಭದ ನಿದ್ದೆಯಲ್ಲಿದ್ದ ಜಗತ್ತು , ಒಮ್ಮೆಲೇ ಮೈಕೊಡವ್ಬಿಕೊಂಡೆದ್ದು ಹೊಸ ಅಪರಿಚಿತ ಜಗತ್ತಿನೆಡೆಗೆ ಕ್ಷಿಪ್ರವಾಗಿ ಪ್ರವೇಶ ಮಾಡಿದ ವಿಚಿತ್ರ ಕಾಲ ಘಟ್ಟವೇ ಇಪ್ಪತ್ತನೆಯ ಶತಮಾನ .
ಇಂಥ ಒಂದು ಕಾಲ ಘಟ್ಟದಲ್ಲಿ , ಶತಮಾನವಿಡೀ ಬಾಳಿ, ತಮ್ಮ ಕಾಲದ ಸಮಗ್ರ ಚಿತ್ರಗಳನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟ ಎರಡು ಮಹಾ ಚೇತನಗಳೆಂದರೆ , ಕುವೆಂಪು ಮತ್ತು ಕಾರಂತರು. ಕುವೆಂಪು ತಮ್ಮ ಕಾಲದ ಸಹ್ಯಾದ್ರಿಯ ಅರಣ್ಯಕ ಜನಜೀವನವನ್ನು , ಅಲ್ಲಿನ ರುದ್ರರಮಣೀಯತೆಯನ್ನು , ಮಾನವ ಬಾಳಿನ ದುರಂತ ಮತ್ತು ಕ್ರೌರ್ಯವನ್ನು , ಅಜ್ಝಾನ ಮತ್ತು ಮೂಢನಂಬಿಕೆಗಳನ್ನು, ಮುಗ್ಢತೆ ಮತ್ತು ಕುತಂತ್ರಗಳನ್ನು ಪರಿಪರಿಯಾಗಿ ಹರವಿಟ್ಟರು . ಅದೇ ಕಾಲದಲ್ಲಿ, ಘಟ್ಟದ ಕೆಳಗಣ ಕರಾವಳೀ ಕರ್ನಾಟಕದ ಮತ್ತು ಸಹ್ಯಾದ್ರಿಪರ್ವತದ ಪಶ್ಚಿಮ ತಪ್ಪಲಿನ ನಿಬಿಡ ಕಾನನದ ಬದುಕನ್ನು ಸಮೃದ್ದವಾಗಿ ಮತ್ತು ಜೀವಂತವಾಗಿ ಹರವಿದ ಗಾರುಡೀಗರು ಕಾರಂತರು.ಈ ಎರಡು ಚೇತನಗಳ ಚಿಂತನಶೀಲ, ಸೂಕ್ಷ್ಮಗ್ರಾಹಿ,ಸಂವೇದನಾಪೂರ್ಣ ಮನಸ್ಸುಗಳ, ಸೃಜನಶೀಲ ಶಕ್ತಿಯ ಪರಿಣಾಮವಾಗಿ, ಕನ್ನಡ ನಾಡಿನ ಅವರ ಕಾಲದ , ಅವರ ಪ್ರದೇಶದ,ಜನಜೀವನ ಮತ್ತ್ತು ಪರಿಸರದಮೇಲೆ , ಕಾಲ ಗತಿಯಲ್ಲಿ ಆಗುತ್ತಿದ್ದ ಬದಲಾವಣೆಗಳು, ಅದರಿಂದ ವ್ಯಕ್ತಿಗತವಾಗಿ, ಸಾಮಾಜಿಕವಾಗಿ ಸಂಘಟಿಸುತ್ತಿದ್ದ ತುಮುಲಗಳು, ಈ ಎಲ್ಲದರ ಸಮಗ್ರ ಚಿತ್ರ , ಒಂದು ಚೌಕಟ್ಟಿನಲ್ಲಿ ರೂಪಿಸಿದ ಕಲಾವಿದನ ಕಾಣ್ಕೆಯಂತೆ ; ಕಾಲವೊಂದನ್ನು ಬಂಧಿಸಿಟ್ಟ ಮಹಾನ್ ಕಲಾಕೃತಿಯಂತೆ ಇಂದು ನಮಗೆ ಲಭ್ಯವಾಗಿದೆ .
ಬಹುಶಃ ಕನ್ನಡ ನಾಡಿಗೇ ಒಂದು ರೀತಿಯ ವರದಾನವಾಗಿರುವ , ಈ ಪ್ರಾಕೃತಿಕ ವೈದೃಶ್ಯಗಳು ಸದಾ ಇಲ್ಲಿನ ಚೇತನಗಳನ್ನು ಕೆಣಕುತ್ತಲೇ ಇರಬಹುದು ! ಆದುದರಿಂದಲೇ ಇಲ್ಲಿ ಈ ರೀತಿಯ ಸಾಹಿತ್ಯಕ ಮೇರುಗಳ ಸೃಷ್ಟಿಯಾಗುತ್ತಿರಬಹುದು !
ಸದ್ಯಕ್ಕೆ ಕಾರಂತ ಪ್ರತಿಭೆಯ ಬಗ್ಗೆ ಈ ಲೇಖನ ಮಾಲೆ ಉದ್ದೇಶಿಸಿರುವುದರಿಂದ , ಆ ವ್ಯಕ್ತಿತ್ವದ ಸೂಕ್ಷ್ಮ ಒಳ ನೋಟಗಳ ಜಾಡುಗಳನ್ನು ಅನುಸರಿಸಲು ಪ್ರಯತ್ನಿಸಬಹುದು . ಕಾರಂತರು ತಮ್ಮ ಕಾಲದ ಸಂಕ್ರಮಣ ಶೀಲ ನಡುಗೆಯ ಬಗ್ಗೆ ಸದಾ ಜಾಗೃತರಾಗಿದ್ದವರು . ಮಾನವನ ಮಾನಸಿಕ ಸ್ಠಿತಿಗತಿಗಳ ಬಗ್ಗೆ , ಅದರಿಂದ ಒಟ್ಟೂ ಸಮಾಜದ ಮೇಲಾಗುವ ಪರಿಣಾಮಗಳ ಬಗ್ಗೆ , ಇದೀ ಸಮಾಜದ ಮೌಲ್ಯಗಳು ತಾರುಮಾರಗುತ್ತಿದ್ದ ಒಂದು ವಿಚಿತ್ರ ಸನ್ನಿವೇಶವನ್ನು ತಮ್ಮ ಸದಾ ಜಾಗೃತ ಸ್ಠಿತಿಯ ಮನಸ್ಸಿನಲ್ಲಿ ಪರಿಭಾವಿಸಿ ,ಅಲ್ಲಿನ ಸಮಸ್ಯೆಗಳಿಗೆ ತಮ್ಮ ಚಿಂತನಶೀಲ ಮನಸ್ಸು ಸೂಚಿಸುತ್ತಿದ್ದ ಪರಿಹಾರಗಳನ್ನು , ನಿರ್ವಿಕಾರ ಮನಸ್ಸಿನಿಂದ ಅಭಿವ್ಯಕ್ತಿಸುವ ಶಕ್ತಿ ಅವರಲ್ಲಿ ಸಹಜವಾಗಿತ್ತು . ಆದುದರಿಂದ ಕಾರಂತ ಅಭಿವ್ಯಕ್ತಿಯೆಂಬುದು ಒಂದು ಚಿಂತನಶೀಲ ಕಾರಂಜಿಯಂತೆ ಸಹಜವಾಗಿ ಮತ್ತು ಎಡೆಬಿಡದೆ ಇದೀ ಒಂದು ಶತಮಾನ ಕಾಲ , ಚಿಮ್ಮುತ್ತಲೇ ಇದ್ದುದ್ದು . ಕಾರಂತ ಕೃಷಿ ಎಂಬುದು ಕನ್ನಡ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ; ಮತ್ತು ವಿಚಾರಶೀಲ ಮನಸ್ಸುಗಳನ್ನು ರೂಪಿಸುವ ದೃಷ್ಟಿಯಿಂದ , ಅತ್ಯಂತ ಪರಿಣಾಮಕಾರಿಯಾದ ಪ್ರಕ್ರಿಯೆಯಾಗಿತ್ತು .
ವ್ಯಕ್ತಿಗಳ ನಡವಳಿಕೆಗಳೀಂದಾಗಿ ಗರಿಗಟ್ಟುತ್ತಿದ್ದ ಸಮಾಜದ ಸ್ಠಿತ್ಯಂತರಗಳನ್ನು ಗ್ರಹಿಸುತ್ತಿದ್ದ, ಸೃಜನಶೀಲ ಮನಸ್ಸೊಂದು ಆ ಎಲ್ಲ ಜನ ಜೀವನದ ನಡವಳಿಕೆಗಳನ್ನು ಸಾಹಿತ್ಯೀಕರಿಸುತ್ತಾ ಒಂದು ಕಾಲವನ್ನು ಸಮಗ್ರವಾಗಿ ಒಂದು ಚೌಕಟ್ಟಿನಲ್ಲಿ ಹಿಡಿದಿಡುತ್ತಿತ್ತು . ಕಾರಂತರಿಗೆ ವಿಷಯಕ್ಕೆ ಬರಗಾಲವೆಂಬುದೇ ಇರಲಿಲ್ಲ ! ಈ ಜನ , ಅವರ ವೈವಿಧ್ಯಮಯ ಜೀವನ,ಇದೆಲ್ಲ ಇರುವವರೆಗೆ ನನ್ನ ಕಾದಂಬರಿಗಳಿಗೆ ವಿಷಯದ ಕೊರತೆ ಎಲ್ಲಿಯದು ? - ಎಂದು ಅವರೇ ಪ್ರಶ್ನಿಶಿದ್ದಾರೆ . ಪ್ರತಿ ದಿನ ನಡೆಯುತ್ತಿದ್ದ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದ್ದ ಕಾರಂತ ಮನಸ್ಸು , ಗ್ರಹಿಸುತ್ತಿದ್ದ ಅಸಂಖ್ಹ್ಯಾತ ವಿಷಯಗಳು , ಎದುರಾಗುತ್ತಿದ್ದ ಅಸಂಖ್ಹ್ಯಾತ ಮನಸ್ಸುಗಳು, ಘಟಿಸುತ್ತಿದ್ದ ಅಸಂಖ್ಹ್ಯಾತ ಘಟನೆಗಳು , ಸೃಜನಶೀಲ ಮನಸ್ಸೊಂದರ ಪಟಲದ ಮೇಲೆ ಮೂಡಿಸುತ್ತಿದ್ದ ಚಿತ್ರಗಳು ಪ್ರತಿಬಿಂಬಿಸಿ , ವಿಚಾರದ ಮೂಸೆಯಲ್ಲಿ ಆಕೃತಿಗಳಾಗಿ ಎರಕಗೊಂಡು , ಕನ್ನಡ ಜನ ಸಮೂಹಕ್ಕೆ, ವಿಚಾರ ಪ್ರಚೋದಕವಾಗಿ, ಸಾಹಿತ್ಯಮಾರ್ಗದಲ್ಲಿ ಬಿತ್ತರಿಸಲ್ಪಡುತ್ತಿದ್ದವು . ಕಾರಂತರ ಮನಃಪಟಲದ ಮೇಲೆ ಮೂಡಿ ನಿಂತ ವ್ಯಕ್ತಿ, ಸಮಾಜ, ಘಟನೆ, ವಿಷಯ ಇವೆಲ್ಲವೂ ಇಡೀ ನಾಡಿನ ಸ್ವತ್ತಾಗುತ್ತಿದ್ದವು. ಅವು ಅನೇಕ ವಿಚಾರಶೀಲ ಮನಸ್ಸುಗಳಲ್ಲಿ ಸದಾ ಜೀವಂತವಾಗಿರುತ್ತ , ಮನಸ್ಸಿನ ಅನುಭವದ ಭಾಗವಾಗಿರುತ್ತ , ಅಂತಃಸತ್ವವಾಗಿರುತ್ತಾ , ಮನುಷ್ಯಚೇತನವನ್ನು ಎಚ್ಚರದ ಸ್ಠಿತಿಯಲ್ಲಿಡಲು ಪ್ರೇರಕವಾಗಿರುತ್ತಿದ್ದವು.
ಕಾರಂತರು ರೂಪಿಸಿರುವ ವ್ಯಕ್ತಿ ಚಿತ್ರಗಳು ಅಸಂಖ್ಯಾತ .ವಿಶ್ವಸಾಹಿತ್ಯದಲ್ಲಿಯೇ ಇಂಠ ಪ್ರಯತ್ನಗಳು ತೀರಾ ಅಪರೂಪ .ಕರಾವಳಿಯ ಸಮುದ್ರ ತೀರದಿಂದ , ಪಶ್ಚಿಮ ಘಟ್ಟಗಳ ನಿಬಿಡ ಕಾನನಗಳ ಮಧ್ಯೆ ಹಬ್ಬಿದ ಜನ ಜೀವನದ ವಿವಿಧ ಮುಖಗಳು ಸಹಜವಾಗಿ, ಜೀವಂತವಾಗಿ ಓದುಗನ ಮನಃಪಟಲದ ಮೇಲೆ ನೇರವಾಗಿ ಮುದ್ರಿತವಾಗುವುದು ಕಾರಂತ ಸೈಲಿ . ಬ್ರಹ್ಮನೆಂಬ ಮಹಾನುಭಾವನು ಎಷ್ಟೆಲ್ಲಾ ವೈವಿಧ್ಯಮಯ ಜೀವನವನ್ನು ರೂಪಿಸಿದ್ದಾನೋ ? ನಾವರಿಯೆವು ! ಆದರೆ ಕಾರಂತರು ರೂಪಿಸಿದ ಜೀವನ ಓದುಗನ ಮನಸ್ಸಿನಲ್ಲಿ ಮರೆಯಾಗದೆ ಅದೇ ಮನಸ್ಸುಗಳನ್ನು ಸಂಸ್ಕರಿಸುವ ಮತ್ತು ಮನಸ್ಸಿನ ಭಾಗವಾಗುವ ತಾರ್ಕಿಕ ಪ್ರಕ್ರಿಯೆಯಲ್ಲಿ ಅತ್ಯಂತ ಸಹಜವಾಗಿ ಮಿಳಿತವಾಗುವ ಪರಿಯಂತೂ ಅಸದೃಶವಾದುದು. ಅವರು ರೂಪಿಸಿದ ಒಂದೊಂದು ಪಾತ್ರವೂ,ಒಂದೊಂದು ಘಟನೆಯೂ ಓದುಗನ ಮನಃಪಟಲದ ಮೇಲೆ ಚಿರಪರಿಚಿತವಾಗಿ , ನಿಜ ಜೀವನದಲ್ಲಿ ಕಂಡ ಜೀವಂತ ವ್ಯಕ್ತಿಗಳಂತೆ ; ನಡೆದ ನೈಜ ಘಟನೆಗಳಂತೆ , ಅಚ್ಚೊತ್ತಿ ನಿಲ್ಲುವ ಬೆರಗಿನ ವಿದ್ಯಮಾನವಂತೂ ಆಶ್ಚರ್ಯಕರವಾದುದು . ( ಮುಂದುವರಿಯುವುದು)

- Login or register to post comments
- 414 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕಾರಂತರ ಜೀವಂತ ಪಾತ್ರಗಳು
ಸ೦ಪದದಲ್ಲಿ "ಗ೦ಭೀರವಾದ ಬರಹಗಳು ಬರಬೇಕು" ಅನ್ನೋ ಆಸೆ ನಿಮ್ಮ ಬರಹ ಪೂರೈಸಿತು.
ನಿಮ್ಮ ಬರಹ ನಮ್ಮೆಲರಿಗೂ ಮೈಲಿಗಲ್ಲಾಗಲಿ.
ನಿಜವಾಗಲೂ ಇದು ಕಾರ೦ತರ ಬರವಣಿಗೆಯನ್ನು ಓದಲು ಪ್ರಚೋದನೆ ನೀಡುತ್ತದೆ.
ನೀವು ಕಾರ೦ತರ ಒ೦ದೊ೦ದು ಕಾದ೦ಬರಿಯನ್ನು ವಿಮರ್ಶೆ ಮಾಡಿ ಕೆಲವು ಬರಹಗಳನ್ನು ಹ೦ಚಿಕೊಳ್ಳಿ.
ಆಗ ನಿಜಕ್ಕೂ ಕಾರ೦ತರ ಬರವಣಿಗೆಗೆ ಜೀವ ತು೦ಬಿದ೦ತಾಗುವುದು.
ನಿಮ್ಮ ಈ ಬರವಣಿಗೆ ಹೀಗೆ ಮು೦ದುವರೆಯಲಿ...
ಮುರಳಿ,
ಉ: ಕಾರಂತರ ಜೀವಂತ ಪಾತ್ರಗಳು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,ಕಾರಂತರ ಸಾಹಿತ್ಯವನ್ನು ಓದುವ ಪ್ರಚೋದನೆ ಈ ಲೇಖನದಿಂದ ದೊರಕಿದರೆ ನನಗೆ ಸಂತೋಷ.