ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫
ಭರತೇಶ ವೈಭವದಲ್ಲಿ "ಉತ್ತರ-ನಾಟಕ" ಎಂಬ ಒಂದು ಸಂಧಿ ಬರುತ್ತದೆ. ಕರ್ನಾಟಕ ಸಂಗೀತ, ನಾಟಕ, ಗಮಕ, ಕನ್ನಡ-ಸಂಸ್ಕೃತಿ ವಿಚಾರವಾಗಿ ಹೆಚ್ಚು ಮಾಹಿತಿ ತಿಳಿಯ ಬಯಸುವವರಿಗೆ ಈ ಕೆಲವೊಂದು ಸಂಧಿಗಳು ತುಂಬಾ ಮಾಹಿತಿಯನ್ನೊದಗಿಸುತ್ತವೆ. ಉದಾ: "ದಶಮಿ-ಪ್ರಸ್ಥಾನ" ಎಂಬ ಸಂಧಿಯಿಂದ ನಮಗೆ "ವಿಜಯದಶಮಿ" ಎಂಬ ಆಚರಣೆಯು ವಿಜಯನಗರದ ಕಾಲದಲ್ಲಿ ಇತ್ತೆಂಬುದಾಗಿಯೂ, ಅದು ಸಮಸ್ತ ಜನಸ್ತೋಮದ ಅಚ್ಚಳಿಯದ ಹೆಗ್ಗಳಿಕೆಯ ವಿಷಯವಾಗಿತ್ತು ಎಂಬುದನ್ನೂ ತಿಳಿಯಬಹುದು.
ಸರಿ, ಈಗ "ಉತ್ತರ-ನಾಟಕ" ಸಂಧಿಗೆ ಹಿಂದಿರುಗೋಣ. ಈ ಸಂಧಿಯ ವೈಶಿಷ್ಟ್ಯವೆಂದರೆ, ಇಲ್ಲಿ ಆಗಿನ ಕಾಲದ ನಾಟಕಗಳ ಕುರಿತಾಗಿ ಕೆಲವು ವಿಚಾರಗಳು ಸಿಗುತ್ತವೆ. ಆಗಿನ ಕಾಲದ ನಾಟಕಗಳಲ್ಲಿ, ಕರ್ಣಾಟಕ ಸಂಗೀತ ಹಾಸುಹೊಕ್ಕಾಗಿತ್ತು ಎಂಬುದನ್ನು ತಿಳಿದುಕೊಳ್ಳಬಹುದು. ಹೀಗೆ ಸಂಧಿ ಮುಂದುವರಿಯುತ್ತಿದ್ದಾಗ, ಕುತೂಹಲಕಾರಿಯಾದ ಒಂದು ಪದ್ಯ ನಮ್ಮನ್ನು ಆಕರ್ಷಿಸುತ್ತದೆ.
ಬೆಳಗಿನ ಬೊಂಬೆ ಬೆಳ್ದಿಂಗಳ ಬೊಂಬೆ ತಿಂ
ಗಳ ಬೊಂಬೆ ಜೊನ್ನದ ಬೊಂಬೆ
ತಿಳಿವಿನ ಬೊಂಬೆ ಬೋಧದ ಬೊಂಬೆಯೆಂದಾತ್ಮ
ಕಲೆಯ ಕನ್ನಡಿಸಿ ಹಾಡಿದರು || ೪೭ ||
ಬೆಳಗಿನ ಬೊಂಬೆ, ಬೆಳ್ದಿಂಗಳ ಬೊಂಬೆ, ತಿಂಗಳ ಬೊಂಬೆ, ಜೊನ್ನದ ಬೊಂಬೆ, ತಿಳಿವಿನ ಬೊಂಬೆ, ಭೋದದ ಬೊಂಬೆ ಎಂದು ಆತ್ಮಕಲೆಯ "ಕನ್ನಡಿಸಿ" ಹಾಡಿದರು.
ಭರತೇಶ ವೈಭವ ಒಂದು ಜೈನಕಾವ್ಯ, ಆದರೆ ಕವಿ ಇದ್ದದ್ದು ವಿಜಯನಗರ ಕಾಲದ ಕರ್ನಾಟಕದಲ್ಲಿ. ಹಾಗಾಗಿ, ರತ್ನಾಕರವರ್ಣಿ ಆಗಿನ ಕನ್ನಡ ನಾಡಿನ ರಾಜಕೀಯ ಹಾಗು ಸಾಂಸ್ಕೃತಿಕ ಚೌಕಟ್ಟಿನಲ್ಲಿಯೇ ಜೈನ ಪರಿಭಾಷೆಯ ವಿಷಯಗಳನ್ನು ಕನ್ನಡ ಕಾವ್ಯದ ಮೂಲಕ ಮುಂದಿಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.
ಕೆಲವೊಂದು ಅಂಶಗನ್ನು ಗಮನಿಸಿ.
೧. ಕರ್ನಾಟಕದ ಕೆಲವು ವೈಶಿಷ್ಟ್ಯಪೂರ್ಣ ಕಲಾಪ್ರಕಾರಗಳಲ್ಲಿ "ತೊಗಲು ಬೊಂಬೆ ಆಟ"ವೂ ಒಂದು. ಮೇಲಿನ ಪದ್ಯವನ್ನು " 'ಬೊಂಬೆ ಆಟ', ಕನ್ನಡದ ಒಂದು ಸಾಂಸ್ಕೃತಿಕ ಚೌಕಟ್ಟು. ಜೈನ ಪರಿಭಾಷೆಯ ಆತ್ಮಕಲೆಯನ್ನು ಕನ್ನಡದ ಈ 'ಬೊಂಬೆ ಆಟದ' ಮೂಲಕ ಭರತೇಶನ ಮುಂದೆ ಪ್ರಸ್ತುತಪಡಿಸಲಾಯಿತು" ಎಂಬುದಾಗಿ ಅರ್ಥೈಸಿಕೊಳ್ಳಬಹುದು.

೨. ನವರಾತ್ರಿಯ ಸಂದರ್ಭದಲ್ಲಿ ಕನ್ನಡಿಗರು ಆಚರಿಸುವ "ಬೊಂಬೆ ಹಬ್ಬ"ವನ್ನು ಗಮನಿಸಿ. ಇಂದಿಗೂ ಕೂಡ "ಬೊಂಬೆ ಹಬ್ಬ", ಕನ್ನಡಿಗರ ಒಂದು ಪ್ರತಿಷ್ಠೆಯ ಸಂಕೇತವಾಗಿ ವರ್ಷವರ್ಷಕ್ಕೂ ಬೆಳೆಯುತ್ತಲೇ ಇದೆ. ನಮ್ಮ ಚೆನ್ನಪಟ್ಟಣದ ಅತ್ಯಾಕರ್ಷಕ ಬೊಂಬೆಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.

ಟಿಪ್ಪಣಿಗಳು
೧. ಇಂದು, ಈ ಇಪ್ಪತ್ತೊಂದನೆಯ ಶತಮಾನದಲ್ಲಿ, ನಾವುಗಳು "ತೊಗಲು ಬೊಂಬೆ ಆಟದ" ಮುಂದುವರಿದ ಪ್ರಯೋಗಗಳಂತಿರುವ ಅನೇಕ ಕಲಾಪ್ರಕಾರಗಳು ಬೇರೆ ಬೇರೆ ದೇಶಗಳಲ್ಲಿ ಕಾಣಬಹುದು.
೨. ಈ ಬಾರಿಯ ನವರಾತ್ರಿ ಸಂದರ್ಭದಲ್ಲಿ, ಸಹೃದಯರೊಬ್ಬರ ಕುಟುಂಬವರ್ಗದಲ್ಲಿ ಇರಿಸಲಾಗಿದ್ದ ಬೊಂಬೆಗಳನ್ನು, ಅವರ "ಗೊಂಬೆ ಹಬ್ಬ" ಆಲ್ಬಮಿನಲ್ಲಿ ನೋಡಬಹುದು ![]()

- Login or register to post comments
- 369 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: