ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸು
( ನನ್ನ ’ಭಗವದ್ಗೀತೆಯ ಬೆಳಕಿನಲ್ಲಿ” ಪುಸ್ತಕದಿಂದ )
ಭಾರತದ ಅತ್ಯಂತ ಪ್ರಾಚೀನ ಸಾಂಸ್ಕೃತಿಕ , ಸಾಹಿತ್ಯಕ , ದಾರ್ಶನಿಕ ಕೃತಿಗಳೆಂದರೆ ವೇದಗಳೇ . ಆದರೆ ಅವುಗಳಲ್ಲಿರುವ ವಿಷಯ
ವೈವಿಧ್ಯತೆಯಿಂದಾಗಿ , ಆಧ್ಯಾತ್ಮ ಜ್ಝಾನ ಅಥವಾ ತತ್ವ ಜ್ಝಾನ ಸಾರವನ್ನು ಹೆಕ್ಕಿ ತೆಗೆಯುವುದೆಂದರೆ , ಬಣವೆಯಲ್ಲಿ ಸೂಜಿಯನ್ನು ಹುಡುಕಿ ತೆಗೆಯುವಷ್ಟು ಕಠಿಣತಮವಾದ ಕೆಲಸ . ಇದರಿಂದಾಗಿ ವೇದ ಮೀಮಾಂಸೆ ಬರಿಯ ತೌಡು ಕುಟ್ಟುವ ಕೆಲಸ ಎಂಬ ಟೀಕೆಗೊಳಗಾಯಿತು .ಈ ಕೊರತೆಯನ್ನು ನಿವಾರಿಸಲು , ಉಪನಿಷತ್ತುಗಳು ರಚಿತವಾದವು .ವೇದದ ಸಾರವನ್ನು , ಜೊತೆಗೆ ಸ್ವತಂತ್ರ ಚಿಂತನೆಗಳನ್ನೊಳಗೊಂಡ ಈ ಉಪನಿಷತ್ತುಗಳು ,’ವೇದಾಂತ’ ಅಂದರೆ ವೇದದ ಕೊನೆಯ ಭಾಗ ಎಂದೇ ಪ್ರಸಿದ್ದವಾದವು . ಉಪನಿಷತ್ತಿನೊಳಗಣ ಚಿಂತನೆಗಳೂ ಸಹ, ಅವುಗಳಲ್ಲಿನ ವಿಷಯದ ಗಂಭೀರತೆಯಿಂದಾಗಿ, ಸಾಮಾನ್ಯರಿಗೆ ಕಬ್ಬಿಣದ ಕಡಲೆಗಳೇ ಆದವು . ಇದರಿಂದಾಗಿ ಗಹನ ವಿಷಯಗಳನ್ನು ಮತ್ತಷ್ಟು ಸರಳಗೊಳಿಸುವ ದೃಷ್ಟಿಯಿಂದ , ಕಥಾರೂಪದ ಮಹಾಭಾರತದಂತಹ ಕೃತಿಗಳ ರಚನೆಯಾಯಿತು . ಹೀಗಾಗಿ ಮಹಾಭಾರತ ’ಪಂಚಮವೇದ’ವೆಂಬ ಮನ್ನಣೆಯನ್ನು ಪಡೆಯಿತು .
ವ್ಯಕ್ತಿಯೊಬ್ಬನು ಅವನ ಜೀವನದಲ್ಲಿ ಎದುರಾಗುವ ಸನ್ನಿವೇಶಗಳಿಗೆ , ಸ್ಪಂದಿಸುವ ರೀತಿಯೇ ಅವನ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ . ವಿಭಿನ್ನ ವ್ಯಕ್ತಿಗಳು , ವಿಭಿನ್ನ ಪರಿಸ್ಥಿತಿಗಳಲ್ಲಿ , ತಮ್ಮ ಸಂಸ್ಕಾರಕ್ಕನುಗುಣವಾಗಿ ವ್ಯವಹರಿಸಿದ ರೀತಿ ನೀತಿಗಳಿಂದಲೇ ಸಾಮಾಜಿಕ ಅಲ್ಲೋಲ ಕಲ್ಲೋಲಗಳಿಗೆ ಪ್ರೇರಣೆಯಾದ ಅದ್ಭುತ ಕಥಾನಕವೇ ಮಹಾಭಾರತ .
ಪ್ರಧಾನವಾಗಿ ಮಹಾಭಾರತದಲ್ಲಿ ಭೀಷ್ಮ, ವಿದುರ, ಧರ್ಮನಂದನ ಮುಂತಾದ ಸತ್ವಗುಣ ಪ್ರಧಾನ ಪಾತ್ರಗಳು ; ಭೀಮ , ಅರ್ಜುನ, ದುರ್ಯೋಧನ , ಕರ್ಣ, ಅಭಿಮನ್ಯು, ದ್ರೌಪತಿ - ಮುಂತಾದ ರಾಜಸ ಗುಣ ಪ್ರಧಾನ ಪಾತ್ರಗಳು ; ಶಕುನಿ, ಶಿಶುಪಾಲ, ಜರಾಸಂಧ , ದುಶ್ಯಾಸನ - ಮುಂತಾದ ತಾಮಸಗುಣ ಪ್ರಧಾನ ಪಾತ್ರಗಳೂ ಮತ್ತು ಈ ಎಲ್ಲ ಗುಣಗಳ ತಾಕಲಾಟದಿಂದ ಉದ್ಭವಿಸುವ ವಿವಿಧ ರೀತಿಯ ಉತ್ಪಾತಗಳಿಂದ ಕಿಂಚಿತ್ತೂ ವಿಚಲಿತವಾಗದ , ಸ್ಥಿತಪ್ರಜ್ಝ ಪಾತ್ರವಾಗಿ ಕೃಷ್ಣನೂ ಸೇರಿ , ಮಹಾಭಾರತ ಭಾರತೀಯ ತತ್ವಜ್ಝಾನ ಮತ್ತು ಸಂಸ್ಕೃತಿಯ ಪ್ರತ್ಯಕ್ಷ ದರ್ಶನ ಮಾಡಿಸುವ ತನ್ನ ಕಾರ್ಯದಲ್ಲಿ ಯಶಸ್ವಿಯಾಗಿದೆ .
ಈ ಮಹಾಭಾರತಾಂತರ್ಗತವಾಗಿ ಸನಾತನ ತತ್ವಶಾಸ್ತ್ರದ ಸಾರಭೂತ ವಿವರಣೆಯಾಗಿ , ಭಗವದ್ಗೀತೆ ಮೈದಾಳಿದೆ .ವೇದ, ಉಪನಿಷತ್ತುಗಳ ಗಹನ ತತ್ವಗಳೇ ಇಲ್ಲಿ ಸರಳಗೊಂಡು ಸೂಕ್ತ ವಿವರಣೆಗಳೊಂದಿಗೆ ಲಭ್ಯವಾಗುತವೆ .ಅದರಿಂದಾಗಿಯೇ
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ , ಪಾರ್ಥೋವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಮ್ ಮಹತ್ . ಗೀತಾಧ್ಯಾನ ಶ್ಲೋಕ ೪
ಉಪನಿಷತ್ತುಗಳೆಂಬ ಹಸುಗಳಿಂದ , ಗೋಪಾಲ ನಂದನನಾದ ಕೃಷ್ಣನು , ಪಾರ್ಥನೆಂಬ ಕರುವಿನ ಮೂಲಕವಾಗಿ ಮಹತ್ತರವಾದ ಗೀತಾಮೃತವನ್ನು ಕರೆದನೆಂದು , ಗೀತೆಗೂ ಉಪನಿಷತ್ತುಗಳಿಗೂ ಇರುವ ಅವಿನಾಸಂಭಂಧವನ್ನು ಸೂಚಿಸಲಾಗಿದೆ .
ಸಹಸ್ರಾರು ವರ್ಷಗಳಿಂದ ತತ್ವಜ್ಝಾನಿಗಳ , ದಾರ್ಶನಿಕರ ಕೈದೀವಿಗೆಯಾಗಿ ,ಪ್ರಾಪಂಚಿಕರ ಆರಾಧನಾ ಗ್ರಂಥವಾಗಿ , ಸಾಗಿ ಬರುತ್ತಿರುವ ಭಗವದ್ಗೀತೆಯಲ್ಲಿ ಅದರ ಯಶಸ್ಸಿಗೆ ಕಾರಣವಾದ ಅನೇಕ ಅಂಶಗಳಿವೆ . ಈ ಲೇಖನದಲ್ಲಿ , ಅತ್ಯಂತ ಕುತೂಹಲಕರವೂ ; ವಿಚಿತ್ರವೂ ; ವಿಸ್ಮಯಜನಕವೂ ಆದ ಮನುಷ್ಯನ ಮನಸ್ಸನ್ನು ಕುರಿತು ಭಗವದ್ಗೀತೆ ನೀಡುವ ವಿವರಣೆಗಳನ್ನು ವಿವೇಚಿಸಲಾಗಿದೆ .
ಜಗತ್ತಿನ ದಂಗುಬಡಿಸುವ ವೈಜ್ಝಾನಿಕ ಸಾಧನೆಗಳು , ಮೊದಲು ಮೈದಾಳಿದ್ದು ಮನುಷ್ಯನ ಮನಸ್ಸಿನಲ್ಲಿ . ಅದ್ಭುತ ಕಲಾಕೃತಿಗಳೂ , ವಿಸ್ಮಯ ತರಿಸುವ ಭವ್ಯಮಂದಿರಗಳೂ, ರೂಹು ತಳೆದದ್ದು ಮನುಷ್ಯನ ಮನಸ್ಸಿನಲ್ಲಿ . ಮನುಷ್ಯಕೃತ ಸಮಸ್ತ ಸಾಧನೆಗಳ ಮೂಲ ನಕ್ಷೆ ಸಿದ್ದವಾಗಿದ್ದು, ಮಾನವನ ಕ್ರಿಯಾಶೀಲ ಮನಸ್ಸಿನಲ್ಲಿಯೇ ! ಮನಸ್ಸು ಬಹಿರ್ಮುಖವಾಗಿ ಹರಿದಾಗ ಭೌತಿಕ ಸಾಧನೆಗಳನ್ನೂ : ಅಂತರ್ಮುಖವಾಗಿ ಹರಿದಾಗ ಆಧ್ಯಾತ್ಮಿಕ ಸಾಧನೆಗಳನ್ನೂ ಸಾಧಿಸಬಲ್ಲ ವಿಚಿತ್ರ ಶಕ್ತಿ .
ಇದೇ ಶಕ್ತಿ , ಕೊಲೆ, ಅತ್ಯಾಚಾರ , ದುರಾಸೆ , ಅಸೂಯೆಗಳ ತವರು ಮನೆಯೂ ಆಗಿ , ಈ ಲೋಕದ ಪಾಪಕೃತ್ಯಗಳಿಗೆ , ಮತ್ತು ಇಲ್ಲಿನ ನೆಮ್ಮದಿಯ ನಾಶಕ್ಕೆ , ಕಾರಣೀಭೂತವಾಗಿರುವುದು ವಿಚಿತ್ರವಾದರೂ ಸತ್ಯ .ಹೀಗೆ ಪರಮಾವಧಿ ಅಧೋಗತಿಗೂ ಇಳಿಯಬಲ್ಲ ,ಹಾಗೆಯೇ ಮಾನವಾನುಕಂಪದಿಂದ , ಜೀವದಯಾಭಾವದಿಂದ ಊಹಿಸಲಾರದಷ್ಟು ಉತ್ತುಂಗದ ಶಿಖರಕ್ಕೂ ಏರಬಲ್ಲ ,ವಿಚಿತ್ರ ಸ್ವಭಾವದ ಮನಸ್ಸು
ಅಧ್ಯಯನ ಮಾಡಿದಷ್ಟೂ ನಿಗೂಢ .
ಈ ಮನಸ್ಸು ಎಂಬುದು ಒಂದು ಕಡಿವಾಣವಿಲ್ಲದ ಕುದುರೆಯಂತೆ . ಸವಾರನು ಎಷ್ಟೇ ಶಕ್ತಿಶಾಲಿಯಗಿದ್ದರೂ , ಕಡಿವಾಣವಿಲ್ಲದ ಕುದುರೆ ಅವನನ್ನು ಪ್ರಪಾತಕ್ಕೆ ಕೆಡವಿ , ಕಾಡುಪಾಲು ಮಾಡಿ ಓಡಿಹೋಗಬಲ್ಲದು . ಸರಿಯಾದ ಕಡಿವಾಣ ತೊಡಿಸಿದರೆ , ಸವಾರನನ್ನು ಅವನ ಗುರಿಗೆ ತಲುಪಿಸಲೂ ಬಲ್ಲದು. ಈ ರೀತಿಯ ಅದ್ಭುತ ಶಕ್ತಿಸಂಪನ್ನವಾದ ಮನಸ್ಸನ್ನು ,ಹದ ಮಾಡುವ , ಸಂಸ್ಕರಿಸುವ ,ತನ್ಮೂಲಕ ಉಪಯುಕ್ತಗೊಳಿಸಿ, ಲೋಕ ಕಲ್ಯಾಣದ ಕಡೆಗೆ ಅದನ್ನು ತಿರುಗಿಸುವ, ವಿವಿಧ ಉಪಾಯಗಳನ್ನು ಗೀತೆಯಲ್ಲಿ ಅತ್ಯಂತ ಉಚಿತವಾಗಿ ವಿವರಿಸಲಾಗಿದೆ .
ಮನಸ್ಸಿನ ಮೂಲಭೂತ ಸ್ವರೂಪಗಳನ್ನೂ , ಅದರ ದೌರ್ಬಲ್ಯ ; ಸಾಮರ್ಥ್ಯಗಳನ್ನೂ ಸಹ ಗೀತೆಯ ರಚನಕಾರರು ಸ್ಪಷ್ಟವಾಗಿ ಅರ್ಥಮಾಡೀಕೊಂಡು , ಮನೋವೈಜ್ಝಾನಿಕವಾಗಿ ವಿಶದೀಕರಿಸಲು ಸಮರ್ಥರಾಗಿದ್ದಾರೆ . ಈ ದೃಷ್ಟಿಯಿಂದಲೂ ಭಗವದ್ಗೀತೆ ಒಂದು ಪರಿಣಾಮಕಾರಿ ಮನಃಶಾಸ್ತ್ರೀಯ ಗ್ರಂಥವೂ ಆಗಿದೆ . ( ಮುಂದುವರಿಯುವುದು)

- Login or register to post comments
- 295 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: