ಭಗವದ್ಗೀತೆಯ ದೃಷ್ಟಿಯಲ್ಲಿ ಮನಸ್ಸ್ಸು ( ಮತ್ತೂ ಮುಂದುವರಿದುದು)
ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೋ ಶುದ್ದ ತತ್ವ ಜ್ಝಾನ ಜಲಧಿಯಲಿ /
ಮನ ಮುಳುಗಿ ಮಗುಳೆದ್ದು ಶಿತಿಕಂ
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿಂತೆಂದ ನಸು ನಗುತ //
ಅರಸ ಕೇಳೈ ರಾಜಸಾಂತಃ
ಕರಣವದು ಕಾಮ್ಯೈಕ ಸಿದ್ದಿ
ಸ್ಫುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ /
ಹರ ಚರಣ ನಿಕ್ಷಿಪ್ತ ಚೇತಃ
ಸ್ಫುರಣೆ ತತ್ಪರಿಯಂತ ಉಕ್ಕಿತು
ಪರಮ ವಸ್ತು ನಿಜ ಸ್ವಭಾವಕೆ ಚಿತ್ರವೇನೆಂದ // ( ಕುಮಾರ ವ್ಯಾಸ ಮಹಾಭಾರತ , ಅರಣ್ಯ ಪರ್ವ , ಸಂಧಿ ೮ , ಪದ್ಯ ೮-೯ )
ಕೇವಲ ಪವನಾಹಾರದಿಂದ ,ನಿಷ್ಕಲಿತ ಶಿವಪದ ಭಕ್ತಿ ಸುಧೆಯಲಿ , ಪರಶಿವನನ್ನೇ ಮೆಚ್ಚಿಸಿದ ಪಾರ್ಥ , ಅವನಿಂದ ಬೇಡಿದ್ದು ಕೇವಲ ವಿನಾಶಕಾರಿಯಾದ ಪಾಶುಪತಾಸ್ತ್ರವನ್ನು ! ಇದು ವಿಚಿತ್ರವಲ್ಲವೇ? ಎಂಬುದು ಜನಮೇಜಯನ ಉದ್ಗಾರ ."ವಿಚಿತ್ರವೇನು ಬಂತು ? ಅವನದು ರಾಜಸಾಂತಃಕರಣ ; ತಪಸ್ಸಾದರೂ ’ಕಾಮ್ಯೈಕಸಿದ್ದಿಸ್ಪುರಣೆಗೋಸುಗ’ ನಿಜ ಸ್ವಭಾವಕ್ಕೆ ವಿಚಿತ್ರವೇನು ಬಂತು ?" ಎಂದು ಮುನಿ ಸಮಾಧಾನವನ್ನು ಹೇಳುತ್ತಾನೆ . ಅರ್ಜುನನ ಸ್ವಭಾವವೆಂತಹುದೆಂಬುದನ್ನು ಕವಿ ಅವನ ಬಾಯಲ್ಲೇ ಹೇಳಿಸುತ್ತಾನೆ -
ನಿಮಂತ್ರಣೋತ್ಸವೋ ವಿಪ್ರಾಃ
ಗಾವೋ ನವ ತೃಣೋತ್ಸವಃ
ಸುಭರ್ತಾರೋತ್ಸವಾ ನಾರ್ಯಾಃ
ಅಹಂ ಕೃಷ್ಣ ರಣೋತ್ಸವಃ ( ಕುಮಾರವ್ಯಾಸ ಮಹಾಭಾರತ , ಅರಣ್ಯ ಪರ್ವ,ಸಂಧಿ ೩ ,ಪದ್ಯ ೨೯ಕ್ಕೆ ಮೊದಲ ಶ್ಲೋಕ)
ಬೇರೆಯವರ ಮನೆಯ ಊಟಕ್ಕೆ ವಿಪ್ರರು ,ಹೊಸ ಹುಲ್ಲಿಗೆ ಪಶುಗಳು , ಪತಿವ್ರತೆಯರು ಗಂಡನ ಬರವಿಗೆ ಉತ್ಸಾಹಿಸುವ ಹಾಗೆ ಕೃಷ್ಣಾ ನನಗೆ ರಣರಂಗವೆಂದರೆ ಉತ್ಸವವಿದ್ದಂತೆ .ಹೀಗೆ ಪ್ರತಿಯೊಬ್ಬ ಮನುಷ್ಯನೂ, ಅವನ ಸ್ವಭಾವ ಏನೋ ಅವನು ಅದೇ ಆಗಿರುತ್ತಾನೆ .ಅದೇ ರೀತಿ ಧರ್ಮನಂದನನ ಸ್ವಭಾವವನ್ನು ಗಮನಿಸಿ :
ಮಾತೃವತ್ ಪರದಾರಾಣಿ
ಪರ ದ್ರವ್ಯಾಣೀ ಲೋಷ್ಟವತ್
ಆತ್ಮವತ್ ಸರ್ವ ಭೂತಾನಿ
ಯಃ ಪಶ್ಯತಿ ಸ ಪಶ್ಯತಿ (ಕುಮಾರವ್ಯಾಸ ಮಹಾಭಾರತ , ಅರಣ್ಯಪರ್ವ , ಸಂಧಿ೩ ಪದ್ಯ ೨೬ಕ್ಕೆ ಮೊದಲ ಶ್ಲೋಕ)
" ಪರರ ಸತಿ ನನ್ನ ತಾಯಿ , ಪರರ ಧನ ಮಣ್ಣಿನ ಸಮಾನ , ಪರರ ನೋವೇ ನನ್ನ ನೋವು ಈ ರೀತಿಯಾಗಿ ನೋಡೂತ್ತೇನೆ ಮತ್ತು ಭಾವಿಸುತ್ತೇನೆ ,, ಇದು ಧರ್ಮನಂದನನ ಸ್ವಭಾವ .
ಈ ವಿವಿಧ ರೀತಿಯ ಮನಃಸ್ಥಿತಿಗಳನ್ನು , ಭಗವದ್ಗೀತೆ ಮೂರು ಮುಖ್ಯ ವಿಭಾಗಗಳಾಗಿ ಗುರುತಿಸುತ್ತದೆ . ಅವು ಸತ್ವ, ರಜಸ್ಸು ಮತ್ತು ತಮಸ್ಸು ಎಂಬ ಗುಣಗಳು . ಈ ಮೂರು ಮುಖ್ಯ ಗುಣಗಳ ಬೇರೆ ಬೇರೆ ರೀತಿಯ ಮಿಶ್ರಣಗಳೇ , ಇಡೀ ಜಗತ್ತಿನ ಕೋಟಿಗಟ್ಟಲೆ ವಿವಿಧ ರೀತಿಯ ಮನಸ್ಸಿನ ವೈಖರಿಗಳು .ಭಗವದ್ಗೀತೆ ಇನ್ನೂ ಮುಂದುವರಿಯುತ್ತಾ , ಈ ತ್ರಿಗುಣಗಳೆಂಬುವು ಸಮಸ್ತ ವಿಶ್ವದ ಚೇತನಾಚೇತನಗಳೆಲ್ಲದರ ಕ್ರಿಯೆಗಳ , ಮೂಲವೆಂದು ಪ್ರತಿಪಾದಿಸುತ್ತದೆ . ಈ ಮೂರನ್ನು ಮೀರಿದ ವ್ಯಕ್ತಿ ಅಥವಾ ವಸ್ತು , ಈ ಇಡಿಯ ವಿಶ್ವದಲ್ಲೇ ಇಲ್ಲ . ಎಂಬುದೇ ಅದರ ಪ್ರತಿಪಾದನೆ . ಈ ಶರೀರದಲ್ಲಿ ಆತ್ಮನನ್ನು ಬಂಧಿಸುವ ಬಂಧಕ ಶಕ್ತಿಯೂ ಸಹ ಇವೇ ತ್ರಿಗುಣಗಳು .
ಸತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿ ಸಂಭವಾಃ /
ನಿಬಧ್ನಂತಿ ಮಹಾ ಬಾಹೋ ದೇಹೇ ದೇಹಿನಮವ್ಯವಯಂ // ( ಭಗವದ್ಗೀತೆ ಅ ೧೮ , ಶ್ಲೋ ೫ )
ಪ್ರಕೃತಿಯಲ್ಲಿ ಸಂಜನಿಸುವ ಸತ್ವ, ರಜಸ್ , ತಮಸ್ ಈ ಗುಣಗಳೇ ಅವ್ಯನೆನಿಸಿದ ಆತ್ಮನನ್ನು , ಈ ಶರೀರದಲ್ಲಿ ಬಂಧಿಸಿಡುವವು .
ತತ್ರ ಸತ್ವಂ ನಿರ್ಮಲತ್ವಾ ತ್ಪ್ರಕಾಶಕಮನಾಮಯಂ /
ಸುಖ ಸಂಗೇನ ಬಧ್ನಾತಿ ಜ್ಝಾನ ಸಂಗೇನಚಾನಘ // ( ಭಗವದ್ಗೀತೆ , ಅ ೧೪ , ಶ್ಲೋ ೬)
ಸತ್ವ ಗುಣವು ನಿರ್ಮಲವಾದುದರಿಂದ , ಪ್ರಕಾಶಪೂರ್ಣವೂ , ನಿರುಪದ್ರವವೂ ಆಗಿದೆ ; ಅದು ಸುಖ ಮತ್ತು ಜ್ಝಾನಗಳಿಂದ , ಶರೀರದಲ್ಲಿ ಆತ್ಮನನ್ನು ಬಂಧಿಸುತ್ತದೆ .
ರಜೋ ರಾಗಾತ್ಮಕಮ್ ವಿದ್ದಿ ತೃಷ್ಣಾ ಸಂಗ ಸಮುದ್ಬವಂ /
ತನ್ನಿಬಧ್ನಾತಿ ಕೌಂತೇಯ ಕರ್ಮ ಸಂಗೇನ ದೇಹಿನಮ್ //
ರಜವು ರಾಗಾತ್ಮಕವದುದು , ಅದು ತೃಷ್ಣೆ ಮತ್ತು ಸಂಗ ಇವುಗಳನ್ನುಂಟುಮಾಡುತ್ತಾ , ಕರ್ಮ ಸಂಗದಿಂದ ಆತ್ಮನನ್ನು ಶರೀರದಲ್ಲಿ ಬಂಧಿಸುತ್ತದೆ .
ತಮಸ್ತ್ವಜ್ಝಾನಜಂವಿದ್ದಿ ಮೋಹನಂ ಸರ್ವ ದೇಹಿನಾಂ /
ಪ್ರಮಾದಾಲಸ್ಯ ನಿದ್ರಾಭಿಸ್ತನ್ನಿಬಧ್ನಾತಿ ಭಾರತ // (ಭಗವದ್ಗೀತೆ ಅ ೧೪ ಶ್ಲೋ ೮)
ಅಜ್ಝಾನ ಮೂಲದಿಂದ ಹುಟ್ಟುವ ತಮವು , ಸಕಲ ಆತ್ಮರನ್ನು ಮೋಹದಿಂದ, ತಪ್ಪು, ಸೋಮಾರಿತನ ಹಾಗೂ ನಿದ್ರೆಗಳಿಂದ ದೇಹದಲ್ಲಿ ಬಂಧಿಸುವುದು .
ಈ ಮೂರು ರೀತಿಯ ಮೂಲ ಸ್ವಭಾವಗಳಿಂದಲೇ ಜಗತ್ತಿನ ಎಲ್ಲ ರೀತಿಯ ವಿವಿಧ ಸ್ವಭಾವಗಳು ಹೇಗೆ ಪ್ರಕಟವಾಗುವುವೆಂಬುದನ್ನು , ಅವುಗಳ ಗುಣ , ಕರ್ಮ , ಲಾಭ, ನಷ್ಟ ಮುಂತಾದ ಸಮಸ್ತ ಪರಿಣಾಮಗಳನ್ನು ಭಗವದ್ಗೀತೆಯ ೧೪,೧೬ ಮತ್ತು ೧೭ನೇ ಅಧ್ಯಾಯಗಳಲ್ಲಿ ವಿವರವಾಗಿ ಚರ್ಚಿಸಲಾಗಿದೆ . (ಮುಂದುವರಿಯುವುದು )

- Login or register to post comments
- 223 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: