ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೧)
( ನನ್ನ ’ಭಗವದ್ಗೀತೆಯ ಬೆಳಕಿನಲ್ಲಿ’ ಪುಸ್ತಕದ ಲೇಖನ)
ಪ್ರಾಚೀನ ಭಾರತದ ಸಾಮಾಜಿಕ ಪದ್ದತಿಗಳಲ್ಲಿನ ಅತ್ಯಂತ ವಿವಾದಾಸ್ಪದ ವಿಷಯಗಳಲ್ಲಿ , ಮೊದಲನೆಯದು ವರ್ಣಾಶ್ರಮವಾದರೆ , ಎರಡನೆಯದು, ಯಜ್ಞ ಯಾಗಾದಿಗಳು .ಎಲ್ಲಾ ಪ್ರಾಚೀನ ಸಾಹಿತ್ಯ ಪ್ರಾಕಾರಗಳಲ್ಲಿ , ಇದರ ಪರ ಮತ್ತು ವಿರುದ್ದವಾದ ದನಿಗಳು , ವರ್ತಮಾನ ಕಾಲದಲ್ಲಿನ ಪ್ರತಿಭಟನೆಗಳ ರೂಪದಲ್ಲಿಯೇ ಪ್ರಕಟಗೊಳ್ಳುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸಬಹುದು .
ಇಂತಹ ಆಚರಣೆಗಳು ಯಾವ ಕಾಲದಲ್ಲಿ ? ಯಾವ ಉದ್ದೇಶಗಳಿಗಾಗಿ ? ಯಾವ ಅನಿವಾರ್ಯತೆಗಳಿಂದ ಹುಟ್ಟಿಕೊಂಡವು? ಎಂಬುದು ಅಸ್ಪಷ್ಟ .
ಈ ವಾದ ವಿವಾದಗಳೇನೇ ಇರಲಿ ; ಈ ಆಚರಣೆಗಳು ತೊಡಗಿರುವ ಕಾರಣಗಳೇನೇ ಇರಲಿ , ಇದರಿಂದ ಮನುಷ್ಯ ಕುಲದ ಬಹು ದೊಡ್ಡ ಭಾಗವೊಂದು , ಅನೇಕ ಶತಮಾನಗಳ ಕಾಲ ನರಕ ಕುಂಡದಲ್ಲಿ ಬದುಕಿದುದು (ಬದುಕುತ್ತಿರುವುದು) ಮತ್ತು ಅಸಹನೀಯ ನೋವಿನಿಂದ ಮನುಷ್ಯ ಜನ್ಮವನ್ನೇ ಶಪಿಸುತ್ತಾ ಕಾಲ ತಳ್ಳಬೇಕಾಗಿ ಬಂದುದು ಮಾನವನ ಇತಿಹಾಸದ ಮಹಾ ದುರಂತಗಳಲ್ಲೊಂದು .
ಈ ಲೇಖನದಲ್ಲಿ ಯಜ್ಞಗಳ ಬಗ್ಗೆ ಭಗವದ್ಗೀತೆಯ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು .
ಈ ಯಜ್ಞ್ಗಗಳೆಂಬುವು ವರ್ಣಾಶ್ರಮಗಳನ್ನು ಘಟ್ಟಿಗೊಳಿಸುವ ಸಾಧನಗಳಾಗಿದ್ದವು . ಯಜ್ಞಗಳ ಪೌರೋಹಿತ್ಯವು ಬುದ್ದಿಜೀವಿ ವರ್ಗಗಳೆನಿಸಿಕೊಂಡವರ ಅಧಿಕಾರಕ್ಕೊಳಪಟ್ಟಿದ್ದರೆ , ಅವುಗಳ ರಕ್ಷಣೆ ಮತ್ತು ಆರ್ಥಿಕ ವ್ಯವಸ್ಥೆಯ ಜವಾಬ್ದಾರಿ ಆಳುವ ವರ್ಗದವರದಾಗಿತ್ತು . ಜನ ಸಾಮಾನ್ಯರು ಇಲ್ಲಿ ಕೇವಲ ಪ್ರೇಕ್ಷಕರು ಅಥವಾ ಅಲಕ್ಷಿತರು ಮಾತ್ರವಾಗಿದ್ದರು .ಅಷ್ಟೇ ಅಲ್ಲ ಯಜ್ಞಾಚರಣೆಯಿಂದ ಸಿಗುತ್ತವೆಂದು ನಂಬಿಸಲಾಗಿದ್ದ ಫಲಗಳು , ಪ್ರಶ್ನಾರ್ಹವಾಗಿದ್ದವು ಮತ್ತು ಕೆಲವು ಹಾಸ್ಯಾಸ್ಪದವೂ ಸಹ ಆಗಿದ್ದವು .
ಆದರೆ ಕ್ಷತ್ರಿಯರಿಗೆ ತಮ್ಮ ಬಲವನ್ನು ತೋರ್ಪಡಿಸಲು ; ತಮ್ಮ ಸಂಪತ್ತನ್ನು ಪ್ರದರ್ಶಿಸಲು ; ತಮ್ಮ ಪ್ರಭುತ್ವವನ್ನು ಇತರರ ಮೇಲೆ ಹೇರಲು ಈ ಯಜ್ಞಗಳು ಅನುಕೂಲಕರವಾಗಿದ್ದವು .
ಅಂದಿನ ಆಳುವ ವರ್ಗದವರಿಗೆ, ಬುದ್ದಿಜೀವಿ ವರ್ಗದವರು ಯಜ್ಞಗಳ ಆಚರಣೆಯಿಂದ , ಅಲೌಕಿಕ ಭೋಗ ಭಾಗ್ಯಗಳು , ಪದವಿಗಳು ದೊರೆಯುತ್ತವೆ ಎಂಬ ಆಮಿಶಗಳನ್ನಂತೂ ಒಡ್ಡಿದ್ದರು .ನೂರು ಅಶ್ವಮೇಧ ಯಾಗಗಳನ್ನು ಮಾಡಿದವರಿಗೆ , ಸ್ವರ್ಗದಲ್ಲಿ ದೇವೇಂದ್ರನ ಪಟ್ಟ ದೊರಕುತ್ತದೆ ಎಂಬುದು ಒಂದು ದೊಡ್ಡ ಆಮಿಷ .
ಯಾವನಾದರೂ ರಾಜ ಇಂಥ ಪ್ರಯತ್ನಗಳಿಗೆ ತೊಡಗಿದರೆ, ತನ್ನ ಸ್ಥಾನಕ್ಕೆ ಪೈಪೋಟಿ ಎದುರಾಗುತ್ತಿದ್ದುದನ್ನು ಕಂಡು, ಕಂಗೆಡುತ್ತಿದ್ದ ಹಾಲಿ ಇರುವ ದೇವೇಂದ್ರ್ತ ಈ ಯಾಗಗಳನ್ನು ಭಗ್ನ ಮಾಡಲು ಇನ್ನಿಲ್ಲದಷ್ಟು ಪ್ರಯತ್ನಪಡುತ್ತಿದ್ದ ಅನೇಕ ಕಥೆಗಳೇ ಇವೆ . ದೇವೇಂದ್ರನಾದರೇನು ? ಯಾವೇಂದ್ರನಾದರೇನು ?ಇರುವ ಪಟ್ಟ ಬಿಟ್ಟು ಕೊಡಲು ಯಾರಿಗೆ ತಾನೆ ಇಷ್ಟ ?
ಸ್ವರ್ಗವನ್ನು ಕುಮಾರ ವ್ಯಾಸ ತನ್ನ ಅನೇಕ ಪದ್ಯಗಳಲ್ಲಿ ,’ ನೂರು ಯಜ್ಞದ ಮೇಹು ನಾಡು’ ಎಂದೇ ಉದ್ಗರಿಸುತ್ತಾನೆ . ದುರ್ಬಲ ಮನಸ್ಕರೂ, ಭೋಗ ಜೀವಿಗಳೂ ಆದ ರಾಜರುಗಳು, ಅಲೌಕಿಕ ಲೋಕದ ಭೋಗ ಭಾಗ್ಯಗಳು ಮತ್ತು ಸುಂದರಿಯರಿಗಾಗಿ ಈ ಲೋಕದಲ್ಲಿ ಪಡುತ್ತಿದ್ದ ಶ್ರಮ, ಅದಕ್ಕಾಗಿ ಆಚರಿಸುತ್ತಿದ್ದ ಯಜ್ಞ ಯಾಗಾದಿಗಳು, ಪುರಾಣಗಳಲ್ಲಿ ಹೇರಳವಾಗಿ ಲಭ್ಯ .
ವೇದಗಳ ಕರ್ಮಕಾಂಡಗಳಲ್ಲಿ ಉಕ್ತವಾದ ಯಜ್ಞಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ಭಗವದ್ಗೀತೆ , ಯಜ್ಞ ಎಂಬ ಶಬ್ದಕ್ಕೆ ಅರ್ಥವನ್ನು ಬಹು ಆಯಾಮಗಳಿಗೆ ಒಳಪಡಿಸಿ, ಅತ್ಯಂತ ಉದಾತ್ತವಾದ ಮತ್ತು ವಿಶಾಲವಾದ ಭಾವ ವ್ಯಾಪ್ತಿಯನ್ನು ಈ ಪದಕ್ಕೆ ತಂದು ಕೊಟ್ಟುದಲ್ಲದೆ ,ಅದುವರೆಗೆ ನಂಬಿಕೊಂಡು ಬಂದಿದ್ದ , ಮೂಢನಂಬಿಕೆಗಳಿಗೆ ಬಲವಾದ ಪೆಟ್ಟನ್ನು ಕೊಟ್ಟಿತು .
ವೇದಗಳ ಕರ್ಮ ಕಾಂಡವನ್ನು ಖಚಿತ ಶಬ್ಧಗಳಲ್ಲಿ ತಿರಸ್ಕರಿಸುವ ಗೀತೆ :
ತ್ರೈಗುಣ್ಯ ವಿಷಯಾ ವೇದಾ / ನಿಸ್ತ್ರೈಗುಣ್ಯೋ ಭವಾರ್ಜುನ /
ನಿರ್ದ್ವಂದ್ವೋನಿತ್ಯ ಸತ್ವಸ್ತೋ / ನಿರ್ಯೋಗಕ್ಷೇಮ ಆತ್ಮವಾನ್ // ಅ ೨ ಶ್ಲೋ ೪೫
ವೇದಗಳು ಕೇವಲ ತ್ರಿಗುಣಾತ್ಮಕ ವಿಷಯವನ್ನು ಭೋಧಿಸುವಂತಹವು , ನೀನು ತ್ರಿಗುಣಾತೀತನೂ , ದ್ವಂದ್ವ ರಹಿತನೂ , ಯೋಗ ಕ್ಷೇಮ ರಹಿತನೂ, ( ಆಸೆಗಳನ್ನು ತೊರೆದವನು) ಸತ್ವ ಪ್ರಧಾನನೂ , ಆತ್ಮವಂತನೂ ಆಗು ಎಂದು ಹೇಳುವುದಲ್ಲದೆ
ಯಾವಾನರ್ಥ ಉದಪಾನೇ ಸರ್ವತಃ ಸಂಪ್ಲುತೋದಕೇ /
ತಾವಾನ್ ಸರ್ವೇಷು , ವೇದೇಷು , ಬ್ರಾಹ್ಮಾಣಸ್ಯ ವಿಜಾನತಃ // ಅ ೨ ಶ್ಲೋ ೪೬
ಎಲ್ಲ ಕಡೆಗಳಲ್ಲಿಯೂ ನೀರು ತುಂಬಿರುವಾಗ , ಒಂದು ಭಾವಿಯ ಪ್ರಯೋಜನವು ಎಷ್ಟೋ? ಅಷ್ಟೇ ಜ್ಞಾನಿಗೆ ವೇದಗಳ ಪ್ರಯೋಜನ , ಎಂದು ಸ್ಪಷ್ಟಪಡಿಸುತ್ತಾ ’ ಅವಿಪಶ್ಚಿತಃ’ ಎಂದರೆ , ಅವಿವೇಕಿಗಳು ಮಾತ್ರವೇ ಮರುಳು ಮಾಡುವ ಮಾತುಗಳಿಗೆ ಸೋತವರಾಗಿ , ಭೋಗೈಶ್ವರ್ಯಗಳ ಬೆನ್ನು ಬಿದ್ದು ,ನಿಶ್ಚಯ ಬುದ್ದಿಯನ್ನು ಕಳೆದುಕೊಳ್ಳುವರು ,ಎಂದು ತಪ್ಪು ಮಾರ್ಗಗಳ ವಿರುದ್ದ ಗೀತೆಯು ಎಚ್ಚರಿಸಿರುವುದು .
ಭಗವದ್ಗೀತೆಯ ಮುಂದಿನ ಶ್ಲೋಕಗಳನ್ನು ಗಮನಿಸಿ :
ಯಾಮಿಮಾಂ, ಪುಷ್ಪಿತಾಂವಾಚಂ ಪ್ರವದಂತ್ಯವಿಪಸ್ಛಿತಃ /
ವೇದವಾದರತಾಃ ಪಾರ್ಥನಾನ್ಯದಸ್ತೀತಿವಾದಿನಃ //
ಕಾಮಾತ್ಮಾನಃ ಸ್ವರ್ಗಪರಾ ಜನ್ಮ ಕರ್ಮ ಫಲಪ್ರದಾಂ /
ಕ್ರಿಯಾವಿಶೇಷ ಬಹುಲಾಂ ಭೋಗೈಶ್ಯರ್ಯ ಗತಿಂಪ್ರತಿ // ಅ ೨ ಶ್ಲೋ ೪೨,೪೩
( ಮುಂದುವರಿಯುವುದು)

- Login or register to post comments
- 216 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: