ಭಗವದ್ಗೀತೆಯಲ್ಲಿ ಯಜ್ಞ ಮತ್ತು ಅದರ ಅರ್ಥ (೨)
ಯಜ್ಞ್ದದ ಹೊರ ಮೂಢಾಚರಣೆಗಳನ್ನು ಈ ರೀತಿಯಾಗಿ ನಿರಾಕರಿಸಿದ ಗೀತೆ ,ಅದರ ಅಂತರಂಗದ ಅರ್ಥವನ್ನು ಸೊಗಸಾದ ಉಪಮೆಗಳ ಮೂಲಕ ಮನದಟ್ಟು ಮಾಡಿ ಕೊಡುವಲ್ಲಿ ಯಶಶ್ವಿಯಾಗಿದೆ .
ಯಜ್ಞವೆಂದರೆ ಸಾಮಾನ್ಯತೆಯಿಂದ ಅಸಾಮಾನ್ಯತೆಯೆಡೆಗೆ ನಡೆಯುವುದು ,ಸಾಮಾನ್ಯ ವಸ್ತುಗಳಿಂದ ಅಸಾಮಾನ್ಯ ಸೃಷ್ಟಿಯನ್ನು ವಿರಚಿಸುವುದು ,ಈ ದೃಷ್ಟಿಯಿಂದ ನೋಡಿದಾಗ ವಿಶ್ವದ ಸಕಲ ವ್ಯಾಪಾರಗಳೂ ಸಹ ಯಜ್ಞಮಯವಾಗಿ ಗೋಚರಿಸತೊಡಗುವವು ; ನಮ್ಮ ಸುತ್ತಣ ಪ್ರಕೃತಿಯಲ್ಲಿ ಎಡೆಬಿಡದೆ ಯಜ್ಞ ತತ್ವವು ಕ್ರಿಯಾ ಶೀಲವಾಗಿರುವುದನ್ನು ಗಮನಿಸಬಹುದು .
ಈ ಭೂಮಿಯ ಮೇಲಣ ಸಮಸ್ತ ಜೀವಿಗಳೂ ಸಹ ಆಹಾರವನ್ನು ಸೇವಿಸುತ್ತವೆ .ಅವುಗಳ ಜಠರದಲ್ಲಿರುವ ವೈಶ್ವಾನರ ಅಗ್ನಿಯು ,ಅನ್ನವನ್ನು ಪಚನ ಮಾಡಿ ,ಪ್ರಾಣವನ್ನಾಗಿ ಪರಿವರ್ತಿಸುತ್ತದೆ .ಪ್ರಾಣವು ದಹಿಸಿ ಮನಸ್ಸಾಗಿ ಪರಿವರ್ತಿತವಾಗುತ್ತದೆ .ಇದು ಸಕಲ ಪ್ರಾಣಿಗಳಲ್ಲಿ ನಿರಂತರವಾಗಿ ನಡೆಯುವ ಯಜ್ಞ ಕ್ರಿಯೆ .
ನಮಗೆ ಆಹಾರವನ್ನು ಒದಗಿಸುವ ಸಸ್ಯ ಸಂಕುಲವು ,ಮಣ್ಣು , ನೀರು, ಗೊಬ್ಬರ ಮತ್ತು ಗಾಳಿ ಇತ್ಯಾದಿಗಳನ್ನು ಸ್ವೀಕರಿಸಿ ಸೌರಾಗ್ನಿಯ ಸಹಾಯದಿಂದ ನಯನ ಮನೋಹರವಾದ , ಸೌಂದರ್ಯ ಭರಿತ ,ಪತ್ರ, ಪುಷ್ಪ ಸಮುದಾಯವನ್ನು : ರಸಭರಿತವಾದ ಫಲರಾಸಿಯನ್ನು , ಜೀವ ಸಂಕುಲದ ಉಳಿವಿಗೆ ಸಹಾಯಕವಾಗಿ ಕಾಳು ಕಡಿಗಳನ್ನು ತಯಾರಿಸುತ್ತವೆ .
ಈ ಭೂಮಂಡಲದ ಜೀವ ಪ್ರಪಂಚದ ಯಜ್ಞ್ಚ ಚಕ್ರವು ನಿರಂತರವಾಗಿ ಸುತ್ತಲು ಸಹಾಯಕವಾಗುವಂತೆ ಸೂರ್ಯನು ಸಮುದ್ರದ ನೀರನ್ನು ಸೇದಿ ಮೋಡಗಳಾಗಿಸಿ, ಮಳೆಯನ್ನು ಸುರಿಸುವನು .( ಅ ೯ ಶ್ಲೋ ೧೯) ಈ ರೀತಿಯಾಗಿ ಅಧಿಭೌತಿಕವಾಗಿ ನಡೆಯುವ ಯಜ್ಞಚಕ್ರವು ; ಮಾನಸಿಕ ವಾಗಿ ,ಆಧ್ಯಾತ್ಮಿಕವಾಗಿ ಜರುಗುವ ಪರಿಯನ್ನು ಗೀತೆ ಕಟ್ಟಿ ಕೊಡೂವುದು ಹೀಗೆ :
ಯಾರ ಕರ್ಮಗಳು ಸ್ವಾರ್ಥದಿಂದ ದೂರವಾಗಿ, ಜ್ಞಾನದ ಅಗ್ನಿಯಿಂದ ಸುಡಲ್ಪಟ್ಟಿರುವವೋ ಅವನೇ ಪಂಡಿತನು, ಸ್ವಹಿತಗಳಿಲ್ಲದೆ ನಿರಾಶ್ರಯನಾಗಿ ಸದಾ ತೃಪ್ತನಾಗಿರುವವನು ಕರ್ಮ ಮಾಡುತ್ತಿದ್ದರೂ ಬದ್ದನಲ್ಲ .ಆಸೆಯನ್ನು ತೊರೆದು , ವಿಷಯ ಪಾಶವನ್ನು ಹರಿದು ,ಕೇವಲ ಶರೀರ ರಕ್ಷಣೆಗಾಗಿ ಮಾಡುತ್ತಿರುವ ಕರ್ಮಗಳು ಅನಿಷ್ಟವನ್ನುಂಟುಮಾದುವುದಿಲ್ಲ .ತಾನಾಗಿ ಬಂದುದರಲ್ಲಿ ತೃಪ್ತಿ ,ಮಾತ್ಸರ್ಯವಿಲ್ಲದಿರುವುದು,ಸಿದ್ದಿ ಅಸಿದ್ದಿಗಳನ್ನು ಸಮವೆಂದು ಭಾವಿಸುವುದು ಇಂತಹ ಮನಃಸ್ಥಿತಿಯವನು ಕರ್ಮದಿಂದ ಬದ್ದನಲ್ಲ ( ಅ ೪ ಶ್ಲೋ ೧೯,೨೦,೨೧,೨೨)
ಗೀತೆ ಪ್ರತಿಪಾದಿಸುವ ನಾಲ್ಕು ಬಗೆಯ ಯಜ್ಞಗಳು ಇವು ೧) ದ್ರವ್ಯ ಯಜ್ಞ : ನ್ಯಾಯ ಮಾರ್ಗದಿಂದ ಗಳಿಸಿದ ಹಣವನ್ನು ಲೋಕ ಸಂಗ್ರಹಕ್ಕಾಗಿ ವ್ಯಯಿಸುವುದು ,ಅರ್ಹರಾದ ಆದರೆ ನಿರ್ಗತಿಕರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ನೆರವಾಗುವುದು ,ಅಶಕ್ತರಿಗೆ ನೆರವಾಗುವುದು ,ಸಮಾಜದ ಉನ್ನತಿಗಾಗಿ ಶ್ರಮಿಸುವ ಎಲ್ಲ ಕಾರ್ಯಗಳೂ ದ್ರವ್ಯ ಯಜ್ಞಗಳೇ .೨) ತಪೋಯಜ್ಞ : ಆತ್ಮ ಕಲ್ಯಾಣಾಕ್ಕಾಗಿ ಕೈಗೊಳ್ಳುವ ತಪಸ್ಸು ಮತ್ತು ಧ್ಯಾನಗಳು . ೩) ಯೋಗಯಜ್ಞ : ಚಿತ್ತ ವೃತ್ತಿ ನಿರೋಧಕ್ಕಾಗಿ ಮಾಡುವ ಪ್ರಯತ್ನಗಳು ೪) ಸ್ವಾಧ್ಯಾಯ ಯಜ್ಞ : ಅಧ್ಯಯನ ಮತ್ತು ಜ್ಞಾನ ಪ್ರಸಾರವೂ ಒಂದು ಯಜ್ಞ . ಧೃಢವ್ರತರಾದವರು ವಿಶ್ವದ ಈ ಯಜ್ಞ ಚಕ್ರದಲ್ಲಿ ಭಾಗಿಗಳಗುವರು .

- Login or register to post comments
- 296 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: