ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಕಾಳಿದಾಸನ ಒಂದು ಪದ್ಯವಿದೆ. ಶತಾವಧಾನಿ ಡಾ||ಆರ್.ಗಣೇಶರ ಒಂದು ಉಪನ್ಯಾಸದಲ್ಲಿ ಇದನ್ನು ನಾನು ಕೇಳಿದ್ದಿದೆ.
ರಾಜ್ಯಾಭಿಷೇಕೆ ಮದವಿಹ್ವಲಾಯಾಃ ಹಸ್ತಚ್ಯುತೆ ಹೇಮಘಟಸ್ತರುಣ್ಯಾಃ |
ಸೋಪಾನಮಾಸಾಧ್ಯ ಚಕಾರ ಶಬ್ದಂ ಟಟಣ್ಟಟಣ್ಟಣ್ಟಟಟಣ್ಟಟಣ್ಟಣ್ ||
(ಹಂಸಾನಂದಿಯವರು ಇದರ ನುಡಿಪಲ್ಲಟವಾಗಿಸುವಲ್ಲಿ ನೆರನ್ನೀಯಬಹುದೇ ?)
ಕಾಳಿದಾಸ ಬಿಡಿ, ಅವನೊಬ್ಬ ಭಾರತದ ಅಪ್ರತಿಮ ಪ್ರಜ್ವಲತೇಜ. ಸದ್ಯಕ್ಕೆ ಮೇಲಿನ ಪದ್ಯವನ್ನು ಮಾತ್ರವೇ ತೆಗೆದುಕೊಳ್ಳುವುದಾದರೆ, ಇಲ್ಲಿ ಅತಿಮುಖ್ಯವಾಗಿ ನಾವು ಗಮನಿಸಬೇಕಾಗಿರುವುದು ಕಾಳಿದಾಸನಲ್ಲಿದ್ದ ಶಬ್ದಗ್ರಹಣಸಾಮರ್ಥ್ಯವನ್ನು (ಮೇಲಿನ ಪದ್ಯದ ಕೊನೆಯ ಸಾಲಿನ ಕೊನೆಯ ಪದವನ್ನು ಮತ್ತೊಮ್ಮೆ ನೋಡಿ). ಬರೀ ವ್ಯಾಕರಣ, ಛಂದಸ್ಸು ಇಷ್ಟರಲ್ಲಿಯೇ ಕಾಳಿದಾಸ ತೃಪ್ತಿಪಟ್ಟಿದ್ದಿದ್ದರೆ ಅವನಿಗೆ ಇಷ್ಟು ವರ್ಷಗಳಾದರೂ ಅಚ್ಚಳಿಯದೇ ಉಳಿದಿರುವ ಮರ್ಯಾದೆ ಸಿಗದೇ ಹೋಗುತ್ತಿತ್ತೇನೋ.
ಭರತೇಶ ವೈಭವದ ಕರ್ತೃ ರತ್ನಾಕರವರ್ಣಿಯೂ ಅನೇಕ ಸಂಧಿಗಳಲ್ಲಿ ಹೀಗೆ ತನ್ನ ಶಬ್ದಗ್ರಹಣಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದಾನೆ. ರತ್ನಾಕರವರ್ಣಿಯ ವಿಸ್ತಾರವಾದ ಪ್ರಾಯೋಗಿಕ ಜಗತ್ತನ್ನು ಭರತೇಶ ವೈಭವದ ಉದ್ದಗಲಕ್ಕೂ ಕಾಣಬಹುದು. ಆತನೇ ಹೇಳುವಂತೆ ಭರತೇಶ ವೈಭವದಲ್ಲಿ, ಬರೀ ರಳ, ಕುಳ, ಸಮಾಸಗಳಿಗಷ್ಟಲ್ಲದೆ ಅವುಗಳನ್ನು ಮೀರಿದ ಪ್ರಯೋಗಗಳಿಗೂ ಜಾಗ ಇದೆ. ಉದಾ:- ಗಮನಿಸಿ.
ಠೀವಿಠೀವಿಳಿಜೆಜೆಜೆಂಜೆಝಿಂಝಿಂಮಿರುಕು | (ಇಲ್ಲಿ ಗಮನಿಸಿ ಇದು ಕೇವಲ ಸಿಲಬಲ್ಲುಗಳ ಅಕ್ಷರ ರೂಪ)
ಚಾವುಚಾವುಲು ಜುಂಜುಮ್ಮೆಂದು||
ಆವುಜಕಾರ ಕೇಳಿಸಿದನು ಪಾತ್ರದ
ಭಾವಕಿಯರ ಪಜ್ಜೆ ನಲಿಯೆ ||
ರಿಂಚಿಯ ಚಿನುಚಂಪೆ ಕಕ್ಕುರು ತುಡುಮು ಪಾ |
ವುಂಚಿ ಕಿಂಕಿಣಿಗಳನೆತ್ತಿ ||
ಜೆಂಜೆಕುತಕದಿಕತೋದಿಗಿದಿಮಿಕೆಂದು || (ಇದು ನಾಟ್ಯದಲ್ಲಿ ಬಳಕೆಯಾಗತ್ತೆ ಅನ್ನಿಸುತ್ತೆ. ಮೃದಂಗ ಅಥವಾ ತಾಳದ ವ್ಯಾಪ್ತಿ ಬಲ್ಲವರು ತಿಳಿಸಬೇಕು)
ರಂಜಗೆ ಮಿಗೆ ಕೇಳಿಸಿದರು ||
ಈ ರೀತಿ, ಕೇವಲ ಸಿಲಬಲ್ಲುಗಳ ಅಕ್ಷರರೂಪಗಳನ್ನು ಹೊತ್ತಿರುವ ಅನೇಕ ಪದ್ಯಗಳು ಭರತೇಶ ವೈಭವದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಹಿಂದೆ ಒಂದು ಬಳಕೆಯನ್ನು ಈಗಾಗಲೇ ಸಂಪದಿಗರಿಗೆ ಪರಿಚಯ ಮಾಡಿಸಿದ್ದೆ - ಬೆಂಕಿ ಕಾಳುಕಡ್ಡಿಗಳನ್ನು ಸುಡುವಾಗ ಬರುವ ಶಬ್ದದ ಸಿಲಬಲ್ಲುಗಳು.

- Login or register to post comments
- 508 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಸುನಿಲ್,
ತುಂಬ ಚನ್ನಾಗಿವೆ ಎರಡೂ ಪದ್ಯಗಳು. ಓದ್ಲಿಕ್ಕೆ ಮಜಾ ಬಂತು! ಇವೆರಡಕ್ಕೆ ಹೋಲಿಸಿದರೆ timeline ನಲ್ಲಿ ಇತ್ತೀಚಿನದಾದ ದಾಸ ಸಾಹಿತ್ಯದಲ್ಲಿನ ಒಂದು ಪ್ರಯೋಗ ನೋಡಿ,
ಲಟ ಲಟಾ ಲಟ ಲಟಾ ಲಟಕಟಿಸಿ ವನಜಜಾಂಡ|
ಕಟಹ ಪಟ ಪಟ ಪುಟುತ್ಕಟದಿ ಬಿಚ್ಚುತಲಿರಲು|
ಪುಟ ಪುಟಾ ಪುಟ ನೆಗೆದು ಚೀರಿ ಹಾರುತ್ತ ಪ-
ಲ್ಕಟ ಕಟಾ ಕಟ ಕಡಿದು ರೋಷದಿಂದ|
ಮಿಟ ಮಿಟ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ|
ತಟಿತ್ಕೋಟಿ ಊರ್ಭಟಗೆ ಆರ್ಭಟವಾಗಿರಲು|
ಕುಟಿಲ ರಹಿತ ವ್ಯಕ್ತ ವಿಜಯವಿಠ್ಠಲ ಶಕ್ತ
ದಿಟ ನಿಟಲನೇತ್ರ ಸುರಕಟಕ ಪರಿಪಾಲ
(ನರಸಿಂಹಾವತಾರದ ಬಗೆಗಿನ ವಿಜಯದಾಸರ ಸುಳಾದಿಯಿಂದ)
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಇದರ ಪೂರ್ಣ ಪಾಠ, ಎಲ್ಲಿಯಾದರೂ ಲಭ್ಯವಿದೆಯೇ ?
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಇದರ ಪೂರ್ಣ ಪಾಠ, ಎಲ್ಲಿಯಾದರೂ ಲಭ್ಯವಿದೆಯೇ ?
_ ಇಲ್ಲಿದೆ. http://www.dasasahitya.org/DetailedKirPoem.asp?id=3506&TableName=Keertha...
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ನನ್ನಿ, ಶ್ರೀತ್ರೀ ಅವರೇ.
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಲಟಲಟಾಲಟಲಟಾಲಟಕಟಿಸಿ ಪ್ರಯೋಗ ಬಲು ಚಾಂಗಾಂಗಿದೆ
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
"ಕಾಳಿದಾಸ ಬಿಡಿ, ಅವನೊಬ್ಬ ಭಾರತದ ಅಪ್ರತಿಮ ಪ್ರಜ್ವಲತೇಜ"
ಇಲ್ಲಿ ಅಪ್ರತಿಮ ಅನ್ನೋದು ತುಂಬಾ ಉತ್ಪ್ರೇಕ್ಷೇ!
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಸುನಿಲರು ಕೇಳಿದರು - ನಾನು ಮಾಡಿದ್ದೇನೆ
ನನ್ನ ಹೊಸ ಬ್ಲಾಗ್ ಬರಹ, "ಬಿಂದಿಗೆಯ ಸದ್ದು" ಇದನ್ನು ನೋಡಿ.
ಅದು ಇಲ್ಲಿದೆ: http://www.sampada.net/blog/hamsanandi/04/02/2008/7323
-ಹಂಸಾನಂದಿ
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಸುನಿಲರೆ,
ಈ ಕೃತಿ ನೋಡಿ ನನಗೆ ತಕ್ಷಣ ನೆನಪಾದದ್ದು ಈ ಶ್ಲೋಕಗಳು:
೧.
ಅಕುಂಠಿತ ರಣೋಪಕಂಠ ದಶಕಂಠ ದನುಜ ಕಂಠೀರವ
ಕಂಠಲುಂಠನಾಯಮಾನ ಜಯಾವಹಂ ಶ್ರೀನಾರಸಿಂಹಂ ||
(ಭದ್ರಾಚಲ ರಾಮಭದ್ರನ ಚತುರ್ವಿಂಶತಿನಾಮ ಸ್ತೋತ್ರ)
೨.
ಜಟಾಕಟಾಹ ಸಂಭ್ರಮ ಭ್ರಮನ್ನಿಲಿಂಪನಿರ್ಝರೀ
ವಿಲೋಲವೀಚಿವಲ್ಲರೀ ವಿರಾಜಮಾನಮೂರ್ಧನಿ|
ಧಗದ್ಧಗದ್ಧಗಜ್ಜ್ವಲಲ್ಲಲಾಟಪಟ್ಟಪಾವಕೇ
ಕಿಶೋರಚಂದ್ರಶೇಖರೇ ರತಿಃಪ್ರತಿಕ್ಷಣಂ ಮಮ||
(ರಾವಣನ ಶಿವತಾಂಡವ ಸ್ತೋತ್ರ)
೩.
ನಿತಾಂತಕಾಂತದಂತಕಾಂತಿಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಂ|
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಂ||
(ಶಂಕರಾಚಾರ್ಯರ ಗಣೇಶಪಂಚರತ್ನ)
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಬೆನಕರೆ, ಶಂಕರಾಚಾರ್ಯರ ಗಣೇಶಪಂಚರತ್ನದ ಈ ಸ್ತೋತ್ರವನ್ನು ರಾಗವಾಗಿ ಹಾಡುವದನ್ನು ಅನೇಕ ಕಡೆ ಕೇಳಿದ್ದೇನೆ. ಇಲ್ಲಿ, "ಅಂತರಾಯಕೃಂತನಂ" ಎಂದರೇನು ?
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಸುನಿಲರೇ,
ಕೃತ್/ಕೃಂತ್ -> ಸಕ್ಕದದ ಧಾತುವಿಗೆ "ಕತ್ತರಿಸು", "ಒಡೆದು ಪುಡಿಮಾಡು", "ನಾಶಮಾಡು" ಎಂದೆಲ್ಲ ಅರ್ಥಗಳಿವೆ.
ಕೃಂತನ => ಕತ್ತರಿಸುವವನು, ನಾಶಮಾಡುವವನು, ಧೂಳೀಪಟಗೈವವನು ಎಂದೆಲ್ಲ ಅರ್ಥ ಬರುತ್ತದೆ.
ಅಂತರಾಯ = ಅಡ್ಡಿ, ಅಡೆತಡೆ, ಅಡಚಣೆ, ವಿಘ್ನ
ಆದ್ದರಿಂದ, ಅಂತರಾಯಕೃಂತನ => ವಿಘ್ನನಾಶಕ
ಅಂದರೆ ಅಚ್ಚಕನ್ನಡದಲ್ಲಿ "ತಡೆಯೊಡಕ", ಬೆನಕ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
ಕೃತ್-ಕೃಂತ್ ಧಾತು ತುಂಬಾ ವಿಶಿಷ್ಟವಾಗಿದೆ. ಕನ್ನಡದಲ್ಲಿಯೂ ಈ ಅನುನಾಸಿಕ ನಿಯಮ ಕನ್ನಡದಲ್ಲಿಯೂ ತುಂಬಾ ಬಳಕೆಯಲ್ಲಿದೆಯಲ್ಲವೇ.
ಉದಾ: ಮಡಂಗು -> ಮಡಗು, ಬರ್ದುಂಕು -> ಬದುಕು, ದಾಂಟು -> ದಾಟು, ಮೀಂಟು -> ಮೀಟು.
ಸುತ (ಸುಮ್ಮನೆ ತಮಾಶೆಗೆ) : ಬೆನಕರೇ, ನಿಮ್ಮ ಕಾಮೆಂಟ್ ಸ್ವಗತವಾಗಿಬಿಟ್ಟಿತು. ಅಂದರೆ ಗಣೇಶ ನಮ್ಮ "ಬೆಂಗಳೂರು ನಗರದ ಯುವಕನೇ" ಆದ ಹಾಗಾಯಿತು.
ಉ: ಭರತೇಶ ವೈಭವ ಕಲ್ಪು ೧೨ - ಕಾಳಿದಾಸನ ನೆನಪು
’ಅಯಿಗಿರಿನಂದಿನಿ’ ಹಾಡುತುಂಬ ಇದೆ..
ಸಿತರಜನೀರಜನೀರಜನೀಕರವಕ್ತ್ರವೃತೇ
ಅಯಿಸುಮನಸ್ಸುಮನ್ಸುಮನ್ಸುಮನೋಹರ
ಇರು ಶಂಕರರ ನೆಗೞ್ಚು ಅಲ್ವ!