ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು!
ನಿನ್ನೆ ರಾತ್ರಿ ನನ್ನ ತಂಗಿ ಫೋನು ಮಾಡಿದ್ದಳು. ಅವಳ ಮಗಳಿಗೆ, ಆರನೆಯ ಕ್ಲಾಸು ಓದುತ್ತಿರುವವಳು, ಮರುದಿನ
ಕನ್ನಡ ಟೆಸ್ಟು ಇತ್ತಂತೆ. ಅದರಲ್ಲಿ ಒಂದು ಪ್ರಶ್ನೆಗೆ ಉತ್ತರ ಹೊಳೆಯದೆ ಫೋನು ಮಾಡಿದ್ದಳು. ಪ್ರಶ್ನೆ ಇದು: "ದೀನ'
ಎಂಬುದಕ್ಕೆ ವಿರುದ್ಧಾರ್ಥ ಪದ ಬರೆಯಿರಿ. ದೀನ ಎಂಬ ಪದಕ್ಕೆ ವಿರುದ್ಧಾರ್ಥ ಪದ ಇಲ್ಲಮ್ಮ ಎಂದು ಹೇಳಿದರೆ
ಪುಸ್ತಕದಲ್ಲಿ ಕೇಳಿದ್ದಾರಲ್ಲ ಅನ್ನುವ ಪ್ರಶ್ನೆ ಅವಳಿಂದ ಬಂದಿತು.
ಪುಸ್ತಕದಲ್ಲಿ, ಅದರಲ್ಲೂ ಪಠ್ಯ ಪುಸ್ತಕದಲ್ಲಿ ಇರುವುದೆಲ್ಲ ಸತ್ಯ ಎಂಬ ಭ್ರಮೆ ನಮಗೆ ಹೋಗಿಲ್ಲ. ಭಾಷೆಯ ಸೂಕ್ಷ್ಮಗಳ
ಬಗ್ಗೆ ಎಚ್ಚರ ಮೂಡಿಲ್ಲ ಅನ್ನುವುದಕ್ಕೆ ವಿರುದ್ಧಾರ್ಥ ಪದಗಳದ್ದು ಒಂದು ಜ್ವಲಂತ ಉದಾಹರಣೆ.
ಸ್ವಲ್ಪ ಆಲೋಚಿಸಿ, ಈ ಸಂಗತಿ ಮಕ್ಕಳಿಗೆ ಎಷ್ಟು ಕಕ್ಕಾಬಿಕ್ಕಿ ಮಾಡಬಹುದು. ಅಪ್ಪ-ಅಮ್ಮ, ಗಂಡ-ಹೆಂಡತಿ,
ಒಳ್ಳೆಯದು-ಕೆಟ್ಟದ್ದು, ರೂಪ-ಕುರೂಪ, ಸಜ್ಜನ-ದುರ್ಜನ ಇವೆಲ್ಲ ಒಂದೇ ರೀತಿಯ ವಿರುದ್ಧಾರ್ಥ ಪದಗಳೇ?
ಖಂಡಿತ ಅಲ್ಲ. ಕೆಲವು ನಿರ್ದಿಷ್ಟ ಅಕ್ಷರಗಳನ್ನು ಸೇರಿಸುವ ಮೂಲಕ ವಿರುದ್ಧ ಅರ್ಥ ಮೂಡಿಸುವ ರೂಪನಿಷ್ಠ
ವಿರುದ್ಧಾರ್ಥಗಳಿವೆ: ಸು ಎಂದರೆ ಒಳ್ಳೆಯ, ದುರ್ ಎಂದರೆ ಅದಕ್ಕೆ ವಿರುದ್ಧವಾದ ಎಂಬ ರೂಪ ನಿಷ್ಠ ನಿಯಮ ಮಾಡಿ
ಆ ಮೂಲಕ ಸುಜನ-ದುರ್ಜನ, ಸುಷಮ-ದುಷ್ಷಮ ಇತ್ಯಾದಿ ಪದಗಳನ್ನು ವಿವರಿಸಬಹುದು. ಆದರೆ ಇಂಥ
ಗುಂಪಿನ ಪದಗಳ ಸಂಖ್ಯೆ ಕಡಮೆ.
ಇನ್ನೊಂದು ಬಗೆಯ ವಿರುದ್ಧಾರ್ಥಕಗಳು ಕೇವಲ ಅರ್ಥ ನಿಷ್ಠವಾದವು. ಅಂದರೆ ನಮ್ಮ ಮನಸ್ಸಿನಲ್ಲಿ ಇವು
ವಿರುದ್ಧ ಎಂಬ ಕಲ್ಪನೆ ಮೂಡಿಸಿಕೊಂಡದ್ದರಿಂದ ಬಂದವು. ಸುಖ ಎಂಬುದಕ್ಕೆ ಅಸುಖ ವಿರುದ್ಧಪದವೋ, ದುಃಖವೋ?
ರೂಪದ ಮಟ್ಟಿಗೆ ಹೇಳುವುದಾದರೆ ಅಸುಖ, ಅರ್ಥದ ಮಟ್ಟಿಗೆ ಹೇಳುವುದಾದರೆ ದುಃಖ. ಹಗಲು ಎಂಬುದಕ್ಕೆ ಇರುಳು ವಿರುದ್ಧ ಪದವೋ
ರಾತ್ರಿ ಎಂಬುದೋ? ಉದ್ದ ಎಂಬುದಕ್ಕೆ ಗಿಡ್ಡ ವಿರುದ್ಧವೋ, ಅಗಲ ವಿರುದ್ಧವೋ?
ಇದರೊಟ್ಟಿಗೆ ಕನ್ನಡ ಮತ್ತು ಸಂಸಕೃತದ ವ್ಯಾಕರಣ ನಿಯಮಗಳ ಗೊಂದಲ ಬೇರೆ.
ವ್ಯಾಕರಣವೆನ್ನುವುದು ಕೇವಲ ಭಾಷೆಯ ರೂಪ ಲಕ್ಷಣಗಳನ್ನು ವಿವರಿಸುವ ವಿಜ್ಞಾನವಾದರೆ ಆಗ ಅ, ನಿರ್, ದುರ್, ಇತ್ಯಾದಿ
ಪ್ರತ್ಯಯಗಳಿಂದ ರೂಪಗೊಳ್ಳುವ ವಿರುದ್ಧಾರ್ಥಕಗಳನ್ನು ನಿಯಮ ಸಹಿತವಾಗಿ ಹೇಳಿಕೊಡಬೇಕು. ಅರ್ಥ ಆಧಾರಿತ ವಿರುದ್ಧಪದಗಳ
ತಂಟೆಗೆ ಹೋದರೆ ಮೇಷ್ಟರಿಗೂ ವಿದ್ಯಾರ್ಥಿಗಳಿಗೂ ಪೋಷಕರಿಗೂ ಕಷ್ಟ ತಪ್ಪಿದ್ದಲ್ಲ.
ಇಷ್ಟಾಗಿ ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು? ಅದೀನವೋ? ದಾನಿಯೋ? ಏನು? ಎಲ್ಲ ಪದಗಳಿಗೂ ವಿರುದ್ಧ ಪದಗಳನ್ನು
ಹುಡುಕಬೇಕು ಎಂಬ ಹಟ ನಮ್ಮ ಕನ್ನಡ ಬೋಧನೆಯಲ್ಲಿ

- Login or register to post comments
- 1250 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re: ದೀನ ಎಂಬುದಕ್ಕೆ ವಿರುದ್ಧ ಪದ ಯಾವುದು!
ಮಹಾಸ್ವಾಮಿಗಳು ತಪ್ಪಿದ್ದಲ್ಲಿ ಕ್ಷಮಿಸಬೇಕು. ಅರ್ಥದ ದೃಷ್ಟಿಯಲ್ಲಿ. ದೀನನಿಗೆ ವಿರುದ್ಧವಾಗಿ, ಧನ್ಯನು ನಿಲ್ಲತ್ತಾನಲ್ಲವೇ
ವಿಶೇಷ ಸೂಚನೆ
ನನ್ನ ಯಂತ್ರದಲ್ಲಿ ದೊಡ್ಡ ಟ ಕುಟ್ಟಲಾಗುತ್ತಿಲ್ಲ. ಆದ್ದರಿಂದ ದೃಷ್ಟಯಲ್ಲಿ ಅಂತ ಹಾಕಿದ್ದೇನೆ.
ಟ್ ಜೊತೆಗೆ ಹ್
ಸುನೀಲ್ ಅವರೇ ನಿಮಗೆ ದೃಷ್ಠಿ ಎಂದು ಕುಟ್ಟಬೇಕಿತ್ತೇ? ಟ್ ಜೊತೆಗೆ ಹ್ ಕುಟ್ಟಿದರೆ ಮಹಾಪ್ರಾಣ ಲಭ್ಯವಾಗುತ್ತದೆ. ಆದರೆ ನನಗೇನೋ ದೃಷ್ಟಿ ಸರಿ ಅನ್ನಿಸುತ್ತದೆ.
ಇನ್ನು ದೀನ ಎಂದರೆ ತಗ್ಗಿ ಬಗ್ಗಿ ನಡೆಯುವವನು ಎಂಬರ್ಥ ಅಲ್ಲವೇ? ಅದಕ್ಕೆ ಒರಟ ಎಂಬ ಪದ ವಿರುದ್ಧ ಆಗತ್ತಾ?
ಅಥವಾ ಕಟುಕ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ತಿದ್ದಿಕೊಂಡಿದ್ದೇನೆ
ದೃಷ್ಟಿಯೇ ಸರಿಯಾದ ಪದ.
ಮತ್ತೆ ಇನ್ನೊಂದು ವಿಷಯ, ನಾನು, Kannada Script Layout (ಕೀಲಿಮಣೆಯ ಪದ ವಿನ್ಯಾಸ ಎನ್ನಬಹುದೇ)ಉಪಯೋಗಿಸುತ್ತಿದ್ದೇನೆ. ಆದ್ದರಿಂದ ಬರಹದ ಪದ ವಿನ್ಯಾಸ ನೆರವಿಗೆ ಬರುವುದಿಲ್ಲ.
ದೀನ ಪದಕ್ಕೆ ವಿರುದ್ಧಪದ
ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ
ಹೀನ ನಾನು ಮಹಾಮಹಿಮಕೈವಲ್ಯ ಪತಿ ನೀನು
ಏನ ಬಲ್ಲೆನು ನಾನು ನಡೆಸು
ಜ್ಞಾನ ಮೂರುತಿ ನೀನು ನಿನ್ನ ಸ
ಮಾನರುಂಟೇ ದೇವ ರಕ್ಷಿಸು ನಮ್ಮನನವರ ||
ಕನಕದಾಸರು ಬರೆದಿರುವ 'ಗಿಳಿಯ ಮರಿಯನು ತಂದು ಪಂಜರದೊಳಗೆ ಪೋಷಿಸಿ...' ಪದ್ಯದಲ್ಲಿನ ಈ ಸಾಲುಗಳನ್ನು ಕೋಟಿಸುವುದಾದರೆ ದೀನ ಪದಕ್ಕೆ ವಿರುದ್ಧಪದ 'ದಾನಿ' ಆಗಬಹುದೇನೊ ಅಂತನಿಸುತ್ತದೆ.
ಇತಿ,
ಶ್ರೀವತ್ಸ ಜೋಶಿ
ಹರಿಭಕ್ತಿಸಾರ
ಜೋಶಿಯವರೇ,
'ದೀನ ನಾನು' ಎಂದು ನೀವು ಉದ್ಧರಿಸಿದ (ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ ಕೋಟಿಸಿದ) ಪದ್ಯ ಕನಕದಾಸರದ್ದು ಹೌದು. ಆದರೆ ಅದು ಅವರ ಕೀರ್ತನೆಯಲ್ಲ. ಅವರ ಹರಿಭಕ್ತಿಸಾರದಿಂದ ಆಯ್ದ ಪದ್ಯ ಇದು. ಈ ಮಾಹಿತಿ ನೀಡಿದವರು ಪ್ರೊ. ಜಿ.ವಿ. ಅವರು. ನನ್ನಲ್ಲಿ ಹಂಪಿ ವಿಶ್ವ ವಿದ್ಯಾಲಯದವರು ಪ್ರಕಟಿಸಿದ ಸಾವಿರ ಕೀರ್ತನೆಗಳು ಪುಸ್ತಕವಿದೆ. ಅದರಲ್ಲಿ ಈ ಪದ್ಯ ಸಿಗಲಿಲ್ಲ. ಹಾಗಾಗಿ ಜಿ.ವಿ. ಅವರಿಗೆ ಫೋನಾಯಿಸಿ ಮಾಹಿತಿ ಪಡೆದುಕೊಂಡೆ.
ಅಂದ ಹಾಗೆ ನಿಮ್ಮ ಲೇಟೆಸ್ಟ್ ವಿಚಿತ್ರಾನ್ನದ ಫೈ ತುಂಬ ಚೆನ್ನಾಗಿತ್ತು.
ಸಿಗೋಣ,
ಪವನಜ
-----------
Vishva Kannada
Think globally, Act locally
ಕನಕದಾಸ - ಕೀರ್ತನೆ
ಡಾ|ಪವನಜ,
ನಾನು ಅದು 'ಕನಕದಾಸರ ಕೀರ್ತನೆ' ಎಂದಿಲ್ಲವಲ್ಲ? ಪದ್ಯ ಎಂದಷ್ಟೇ ಹೇಳಿದ್ದೆ, 'ಹರಿಭಕ್ತಿಸಾರ'ದಿಂದಾಯ್ದ ಪದ್ಯ ಎನ್ನುವ ಪೂರಕ ಮಾಹಿತಿಯನ್ನು ನೀವು ಕೊಟ್ಟದ್ದಕ್ಕೆ ಥ್ಯಾಂಕ್ಸ್!
===
ಉಲ್ಲೇಖಿಸಿದ್ದ ಪದ್ಯದ ಕೊನೆಯ ಸಾಲಿನ ಕೊನೆಯ ಪದ 'ನಮ್ಮನನವರತ' ಆಗಬೇಕಿತ್ತು; ತಪ್ಪಿದ್ದಕ್ಕೆ ಕ್ಷಮಿಸಿ.
===
'ಫೈ' ಲೇಖನ ಮೆಚ್ಚುಗೆಗಾಗಿ ಧನ್ಯವಾದಗಳು.
===
ಇತಿ,
-ಶ್ರೀವತ್ಸ ಜೋಶಿ
ದಿಗಂತ ದ ವಿರೋಧ
ನನಗೂ ಒಮ್ಮೆ ಇಂತಹ ಸಮಸ್ಯೆ ಬಂದಿತ್ತು. ಸಾಮಾನ್ಯವಾಗಿ ನಮಗೆ ಸಮಸ್ಯೆ ಬಂದರೆ ನಾವು ಶಾಲೆಯ ಅಧ್ಯಾಪಕರನ್ನು ಕೇಳುತ್ತಿದ್ದೆವು. ಆದರೆ ಇಲ್ಲಿ ಉಲ್ಟ. ನನ್ನ ಮಗಳು ಕಲಿಯುತ್ತಿರುವ ಶಾಲೆಯ ಕನ್ನಡ ಅಧ್ಯಾಪಕರೊಮ್ಮೆ ಫೋನು ಮಾಡಿ ಕೇಳಿದರು "ದಿಗಂತ ಪದದ ವಿರೋಧ ಪದ ಯಾವುದು?". ನಾನೂ ಸ್ವಲ್ಪ ತಲೆ ಕೆಡಿಸಿಕೊಂಡೆ. ಆಗ ಕುವೆಂಪು ಅವರ "ಓ ನನ್ನ ಚೇತನ ಆಗು ನೀ ಅನಿಕೇತನ" ಹಾಡು ನೆನಪಾಯಿತು. ಅದರಲ್ಲಿ "ನಿರ್ದಿಗಂತವಾಗಿ ಏರಿ" ಎಂಬುದಾಗಿ ಬಳಸಿದ್ದಾರೆ. ನಾನು ಅದನ್ನೇ ಅಧ್ಯಾಪಕರಿಗೆ ತಿಳಿಸಿದೆ. ಅವರೂ ಹಾಗೆಯೇ ಅಂದುಕೊಂಡಿದ್ದರಂತೆ. ಆದರೆ ಒಮ್ಮೆ ನನ್ನಲ್ಲಿ ಕೇಳೋಣ ಎಂದು ಕೇಳಿದ್ದರು. ನಾನು ಯಾವ ಸೀಮೆ ಕನ್ನಡ ಪಂಡಿತ? ನಾನು ಕಲಿತದ್ದು ರಸಾಯನಶಾಸ್ತ್ರ. ಇರಲಿ. ಈ ದಿಗಂತ ಪದವನ್ನೇ ಗಮನಿಸೋಣ. "ದಿಕ್ + ಅಂತ = ದಿಗಂತ" ಆಗಿದೆ. ಅಂದರೆ ದಿಕ್ಕಿನ ಕೊನೆ ಎಂದು ಅರ್ಥ. ಇದನ್ನೇ ಹೀಗೂ ಅರ್ಥೈಸಬಹುದು. ದಿಗಂತ ಎನ್ನುವುದು ದಿಕ್ಕು ಎನ್ನುವುದರ ವಿರೋಧ ಪದ. ಹಾಗಿದ್ದ ಮೇಲೆ ದಿಗಂತದ ವಿರೋಧ ಪದ ದಿಕ್ಕು ಆಗಬೇಕಲ್ಲವೆ? ಇದು ತಲೆಹರಟೆ ಎನ್ನಿಸುತ್ತದೆಯೇ ಎನ್ನುವುದನ್ನು ಪಂಡಿತರು ವಿವರಿಸಬೇಕು.
ಸಿಗೋಣ,
ಪವನಜ
-----------
Vishva Kannada
Think globally, Act locally
'ದಿಗಂತ'ಕ್ಕೆ ವಿರುದ್ಧ ಪದ...
'ದಿಗಂತ'ವೆಂದರೆ ದಿಕ್+ಅಂತ ಹಾಗಾದರೆ ದಿಕ್+ಆದಿ = ದಿಗಾದಿ ಅನ್ನುವ ಪದವೇ 'ದಿಗಂತ'ದ ವಿರುದ್ಧಪದವೆಂದುಕೊಳ್ಳೋಣವೇ?
ಅಂದಹಾಗೆ "ಹೊಸ ದಿಗಂತ"ದವರನ್ನು ಕೇಳಿನೋಡಿ, ಅವರು 'ಉದಯವಾಣಿ' ವಿರುದ್ಧಪದ ಎನ್ನಬಹುದು!
- ಶ್ರೀವತ್ಸ ಜೋಶಿ
ಲಾಜಿಕ್ ಚೆನ್ನಾಗಿದೆ
ಹೊಸ ದಿಗಂತದ ವಿರುದ್ಧ ಉದಯವಾಣಿ ಇರಬಹುದು. ಆದರೆ ದಿಗಂತದ ವಿರುದ್ಧ ? ತಲೆಹರಟೆಯನ್ನೇ ಮುಂದುವರಿಸೋಣ.
ಹೊಸ != ಉದಯ
ದಿಗಂತ !=ವಾಣಿ
ಸಿಗೋಣ,
ಪವನಜ
-----------
Vishva Kannada
Think globally, Act locally
ವಿರುದ್ಧಪದ
ತಲೆಹರಟೆಯಂತೆ, ಹೊಸದಿಗಂತಕ್ಕೆ ವಿರುದ್ಧ ಪದವಾಗಿ ಹೊಸದಿವಂಗತ ಅಂತ ಕರೆದರೆ ಹೇಗಿರತ್ತೆ ಸಾರ್!
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಹೊಸದಿವಂಗತ ಅಲ್ಲ ಹಳೆಯದಿವಂಗತ
ವಿಡಂಬನಾತ್ಮಕವಾಗಿ, ಹೊಸದಿಗಂತಕ್ಕೆ ವಿಡಂಬ ವಿರುದ್ಧವಾಗಿ ಹಳೆಯದಿವಂಗತ ಅಂತ ಕರೆಯಬಹುದು.
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ ಜೀವನ.
ದಿವಂಗತ ವಿರುದ್ಧ ಪದ ಭೂಗತ ಅಥವಾ ತಮೋಗತ!!
ತಲೆಹರಟೆ ಮುಂದುವರೆಸುವ ಆಸೆ, ಅದಕ್ಕೇ ಈ ಕಾಮೆಂಟು: ದಿವ ಎಂಬುದಕ್ಕೆ ಬೆಳಕು ಮತ್ತು ಆಕಾಶ ಎಂಬ ಎರಡೂ ಅರ್ಥ ಸಾಧ್ಯ. ಆದ್ದರಿಂದ ದಿವಂಗತ ಅನ್ನುವುದಕ್ಕೆ ಭೂ-ಗತ ವಿರುದ್ಧ ಪದವಾದೀತು. ಅಥವಾ ತಮಸ್ಸು ಎಂದರೆ ಕತ್ತಲು ಎಂಬ ಅರ್ಥ ಇರುವುದರಿಂದ ಕತ್ತಲಿಗೆ ಹೋದವರು ಎಂಬಂತೆ ತಮೋಗತರು ಅನ್ನೋಣವೋ!
ನಾನು ಹೇಳಲು ಬಯಸಿದ್ದು ಇದೇ-ವಿರುದ್ಧಾರ್ಥ ಪದದ ರೂಪಣೆ ಅನ್ನುವುದು ಮನಸ್ಸಿನ ಆಟ.
ಹ್ಯಾಂಗಾದಾತು ಮೇಷ್ಟ್ರೆ?
ದಿವಂಗತರಾದವರು ಹೆಚ್ಚಾಗಿ ಭೂಗತರೂ ಆಗುತ್ತಾರೆ, ಅಲ್ಲಿ ಕತ್ತಲಾಗಿಯೂ ಇರುತ್ತೆ, ಆದ್ದರಿಂದ ಇವು ಸಮಾನಾರ್ಥಕ ಪದಗಳಾಗಬೇಕು ಅಲ್ಲವೆ?
ವೆಂ.
ಹೋಗಲಿ ಭೂ ಬದ್ಧ, ಭೂ ಮಿತ ಅಂದುಕೊಳ್ಳೋಣ ಬಿಡಿ!
ಸಾರ್, ಹೋಗಲಿ ಬಿಡಿ. ದಿವ=ದಿಕ್ಕುಗಳಿಗೆ ಗತ=ಹೋದವನು ಅನ್ನುವುದಕ್ಕೆ ವಿರುದ್ಧವಾಗಿ ಭೂ-ಮಿತ, ಭೂಮಿಗೇ ಮಿತನಾದವನು ಅಥವ ಭೂ-ಬದ್ಧ ಭೂಮಿಗೇ ಗಂಟುಬಿದ್ದವನು ಅನ್ನೋಣ. ವಿರುದ್ಧ ಪದ ನಮ್ಮ ಭಾವದ ಇಚ್ಛೆ!ನಿಮ್ಮ ವಾದ ನನ್ನ ವಾದವನ್ನೇ ಬೆಂಬಲಿಸುತ್ತೆ, ಥ್ಯಾಂಕ್ಸ್. ಇದೇ ಸಂಪದದಲ್ಲಿ ಇನ್ನೊಂದು ಬರಹ ಇದೆ ನೋಡಿ
ಕತ್ತಲೆ?
(ಸುಮ್ನೆ ತಮಾಷೆಗೆ)
ದಿವಂಗತರಾದವರು ಭೂಗತರಾಗ್ತಾರಾ? ಅಲ್ಲಿ ಕತ್ತಲೆ ಇದ್ಯಾ? ಯಾರು ಹೇಳಿದ್ರು. ನಾನೆಲ್ಲೋ ಓದಿದ ನೆನಪು - ಈ ಜೀವನ ಒಂದು ಕನಸು ಇದ್ದ ಹಾಗೆ. ಕನಸಿನಿಂದ ಆಚೆಗೆ ಬರುವವರೆವಿಗೆ ಕನಸೆಂದು ತಿಳಿಯದು, ಅಂತ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಚೇಷ್ಚೆ ಮುಂದುವರಿಸುತ್ತಾ
ಚೇಷ್ಚೆ ಮುಂದುವರಿಸುತ್ತಾ, ದಿವಂಗತರಾದಮೇಲೆ ಮುಕ್ತಿಪಡೆದು ಬೆಳಕಿನೆಡೆಗೆ ಸಾಗುತ್ತಾರಲ್ಲವೇ
ಕತ್ತಲೆ, ಬೆಳಕು, ಮುಕ್ತಿ!
ಅಯ್ಯೋ, ಒಂದು ಪದದ ಬಗ್ಗೆ ಬಂದ ಅನುಮಾನ ಎಷ್ಟು ತರಲೆಗೆ ಚರ್ಚೆಗೆ ಗ್ರಾಸವಾಗಿದೆಯಲ್ಲ! ಸರಿ.
ಈ ಚೇಷ್ಟೆ ಹೇಗೆ: ಮುಕ್ತಿ ಅಂದರೆ ಪರ-ವಿರೋಧಗಳು ಇರದ ಸ್ಥಿತಿ ಅಲ್ಲವೇ! ಮುಕ್ತಿ ಬೆಳಕು ಆದರೆ ಕತ್ತಲೆ ಕೂಡ ಅಲ್ಲೇ ಎಲ್ಲೋ ಕಾದಿರಲೇಬೇಕು! ದಿವಂಗತರಾದಮೇಲೆ ಕತ್ತಲೆ ಬೆಳಕು ಎರಡೂ ಇರದ ಸ್ಥಿತಿಗೆ ಹೋಗುತ್ತೇವೋ ಏನೋ! ಇಲ್ಲದಿದ್ದರೆ, ದಿವಂಗತರಾದಮೇಲೂ ಕತ್ತಲೆ ಬೆಳಕಿನ ಆಟದ ಕಾಯಿಗಳಾಗುವುದಾದರೆ ಅಂಥ ಮುಕ್ತಿ ಯಾಕೋ! ಬೆಳಕು ಮಾತ್ರವೇ ಇರುವ ಮುಕ್ತಿ ಎಂದಿದ್ದರೆ ಅಷ್ಟು ಕಣ್ಣು ಚುಚ್ಚುವ, ಬೇಸರ ಬರಿಸುವ, ನಾವು ಮತ್ತೆ ಬೆಳಕಿಗೆ ತಕ್ಕ ಪಾತ್ರವಹಿಸುವ ಜಂಜಾಟಗಳೆಲ್ಲ ಧಾರಾವಾಹಿಯಂತೆ ಮುಂದುವರೆಯುವುದಾದರೆ ಏನು ಗತಿ ಜಯ-ಪ್ರಕಾಶರೇ?
ದಯವಿಟ್ಟು ತಪ್ಪು ತಿಳೀಬೇಡಿ. ಜಯ ಪ್ರಕಾಶ-ಬೆಳಕನ್ನು ಗೆದ್ದವರು ಏನನ್ನು ಪಡೆಯುತ್ತಾರೆ? ಅಥವಾ ಅದು ಬೆಳಕಿನ ಜಯ ಎಂಬರ್ಥವೋ! ಕತ್ತಲೆಯೇ ಇರದಿದ್ದಾಗ ಬೆಳಕು ತಾನೇ ಯಾಕೆ ಬೇಕು, ಅದಕ್ಕೆ ಅರ್ಥವೇ ಇರದು!ಪದಾರ್ಥದ ಬೇಟೆ ಎಂಥ ಉತ್ಸಾಹ ಹುಟ್ಟಿಸುತ್ತದಲ್ಲವೆ!
ಹೆಸರಿನ ವ್ಯಾಮೋಹ
ನಾನು ಹಿಂದೆ ಬೆಳಕಿನೆಡೆಗೆ ಎಂದು ಬರೆದಿದ್ದೆ, ಅದಕ್ಕೆ ಸ್ಪಷ್ಟತೆ ಸಿಗಲಿಲ್ಲ. ಈಗ ಬರೆಯುತ್ತಿದ್ದೇನೆ, ಮುಕ್ತಿಯೆಂದರೆ ಬೆಳಕಿನೆಡೆಗೆ ಸಾಗುವುದಲ್ಲ. ಬೆಳಕಿನಲ್ಲಿ ಲೀನವಾಗುವುದು(ದಿವ್ಯ ತೇಜಸ್ಸು). ನಾವೇ ಬೆಳಕಾದ ಮೇಲೆ ಕತ್ತಲೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಕತ್ತಲೆ ನಮ್ಮನ್ನಾವರಿಸುತ್ತದೆ ಎಂಬ ಭಯ ಬೇಡ.
ಇನ್ನು ಜಯಪ್ರಕಾಶ ಎಂಬುದನ್ನ ಈ ರೀತಿ ಬಿಡಿಸಬಹುದೇ
ಯಃ ಜಯಂ ಪ್ರಕಾಶಯತಿ ಸಃ ಜಯಪ್ರಕಾಶಃ
ಯಾವನು ಜಯವನ್ನು ಪ್ರಕಾಶಿಸುತ್ತಾನೋ (ತೋರುತ್ತಾನೋ) ಅವನು.
ಜಯಪ್ರಕಾಶ = ಜಯವನ್ನು ತೋರುವವನು = ಜಯದ ಪ್ರತೀಕ
ನಾನೇ ಬ್ರಹ್ಮನಾದ ಮೇಲೆ ನಾನೇ ಬೆಳಕು ಕೂಡ

ಆಹಾ, ಹೆಸರಿನ ಬಗ್ಗೆ ಇಷ್ಟು ವ್ಯಾಮೋಹ ನನಗೆಂದೂ ಆಗಿರಲಿಲ್ಲ.
ಅಂದ ಹಾಗೆ, ನನ್ನ ಹೆಸರಿನಲ್ಲಿ ನೀಲಿಯೂ ಸೇರಿದೆ. ಇದು ದಿಗಂತವನ್ನ ಸೂಚಿಸುತ್ತಿದೆಯೇನೋ ಎಂದನಿಸುತ್ತಿದೆ.
ಅಹಂ ಬ್ರಹ್ಮಾಸ್ಮಿ
ಸುನೀಲರೇ ನಿಮ್ಮ ಮಾತುಗಳು ಅಕ್ಷರಶ: ಸರಿ. ಎಲ್ಲ ಜೀವ ಜಂತುಗಳೂ ಬ್ರಹ್ಮಾಂಡದ ಅಂಶಗಳು. ಸದ್ಯಕ್ಕೆ ಕಣ್ಣಿಗೆ ಗೋಚರಿಸುತ್ತಿರುವುದು ಒಂದು ಅಣುವಷ್ಟೇ. (ಇದನ್ನು ನಾನೆಲ್ಲೋ ಓದಿದ್ದು). ನಮ್ಮಲ್ಲಿರುವ ಆತ್ಮವನ್ನು (ಚೇತನ ಎಂದು ಹೇಳಬಹುದೇ?) ಆ ಬ್ರಹ್ಮಾಂಡವೆಂಬ ಪರಮಾತ್ಮನ ಅಂಶವೆಂದು ತಿಳಿಯುವುದೇ ಅಧ್ಯಾತ್ಮ ಚಿಂತನೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಹೊಸ ದಿಗಂತ
ಹೊಸ ದಿಗಂತ ಪತ್ರಿಕೆ ಇನ್ನು ಪ್ರಕಟವಾಗುತ್ತಾ ಇದೆಯಾ?
ಹೊಸದಿಗಂತ ಇದೆ
ಖಂಡಿತವಾಗಿಯೂ ಹೊಸ ದಿಗಂತ ಪತ್ರಿಕೆ ಈಗಲೂ ಇದೆ. ಇದನ್ನು ಮತ್ತು ಇದನ್ನು ಓದಿ. ನಾನೂ ಆ ಪತ್ರಿಕೆಗೆ ೫೦ ವಾರಗಳ ಕಾಲ "ಜಾಲಜಗತ್ತು" ಹೆಸರಿನಲ್ಲಿ ಅಂಕಣ ಬರೆದಿದ್ದೇನೆ.
ಸಿಗೋಣ,
ಪವನಜ
-----------
Vishva Kannada
Think globally, Act locally
ದೀನದ ವಿರುದ್ಧ ದರ್ಪ
ಈಗಷ್ಟೆ ಪ್ರೊ. ಜಿ. ವೆಂಕಟಸುಬ್ಬಯ್ಯನವರೊಡನೆ ಮಾತನಾಡಿ ಅವರು ಹೇಳಿದ್ದನ್ನೇ ಇಲ್ಲಿ ಬರೆಯುತ್ತಿದ್ದೇನೆ. ದೀನ ಪದದ ವಿರುದ್ಧ ಪದ ದರ್ಪ. ಈ ನೆವದಲ್ಲಿ ಅವರೊಡನೆ ಮತ್ತೊಮ್ಮೆ ಮಾತನಾಡುವಂತೆ ಮಾಡಿದ್ದಕ್ಕೆ ಧನ್ಯವಾದಗಳು.
ಸಿಗೋಣ,
ಪವನಜ
-----------
Vishva Kannada
Think globally, Act locally
ದೀನ ನಾಮಪದವೋ ಅಥವಾ ಕ್ರಿಯಾಪದವೋ
ಗುರುಗಳೇ ಹೇಳಿದ ಮೇಲೆ, ಎರಡು ಮಾತಿಲ್ಲ.
ನನಲ್ಲಿ ಇನ್ನೊಂದು ಸಂದೇಹವಿದೆ, ದೀನ ನಾಮಪದವೋ ಅಥವಾ ಕ್ರಿಯಾಪದವೋ
ನನಗನ್ನಿಸುವ ಪ್ರಕಾರ,
ದೀನ ನಾಮಪದವೋ, ದೀನನಲ್ಲಿರುವ ಗುಣ ದೈನ್ಯತೆ.
ಹೌದಲ್ವೇ
ನೀವು ಹಾಕಿರೋ ಪಾಯಿಂಟ್ ಸರಿಯಿದೆ ಅನ್ಸುತ್ತೆ. ದೀನನ ಗುಣ ಧೈನ್ಯತೆ... ಜಿವಿಯವರ ವಿವರಣೆಯನ್ನು ಇಲ್ಲಿ ಹಾಕಿದ್ರೆ ಚೆನ್ನಾಗಿರೋದು. ಅನಾವಶ್ಯಕ ಗೊಂದಲ ನಿವಾರಣೆಯಾಗಿರೋದು.
ದೀನ-ದರ್ಪ?
ಪ್ರಿಯ ಪವನಜ,
ಜಿವಿಯವರು ಹೇಳಿದ್ದು ಒಂದರ್ಥದಲ್ಲಿ ಸರಿ. ಆದರೆ ದಾನಿ ಕೂಡ ದೀನದ ವಿರುದ್ಧ ಆದೀತಲ್ಲವೆ? ಅದೀನ ಕೂಡ, ನಿರ್ ದೀನ ಇತ್ಯಾದಿ ಬೆಳೆಸುತ್ತ ಹೋಗಬಹುದು. ನನ್ನ ವಾದ ಇಷ್ಟೆ. ವಿರುದ್ಧಾರ್ಥ ಅನ್ನುವುದು ಭಾಷೆಯ formal ಅಂದರೆ ರೂಪನಿಷ್ಠ ಲಕ್ಷಣವಲ್ಲ, semantic ಅರ್ಥ ಆಧಾರಿತ ಪರಿಕಲ್ಪನೆ. ಅಂದರೆ ವ್ಯಕ್ತಿಯ ಭಾವ ಮತ್ತು ತಿಳಿವಳಿಕೆಯ ಮಟ್ಟಕ್ಕೆ ಅನುಗುಣವಾಗಿ ಒಂದು ಪದಕ್ಕೆ ಹಲವು ಪದಗಳು ವಿರುದ್ಧಾರ್ಥಕವಾಗಿ ಕಾಣುವುದು ಸಾಧ್ಯ. ಹಾಗಿರುವಾಗ ಮಕ್ಕಳಿಗೆ ಒಂದು ಪದಕ್ಕೆ ಇನ್ನೊಂದು ಮಾತ್ರ ವಿರುದ್ಧಾರ್ಥ ಅಂತ ಕಲಿಸುವುದು ಎಷ್ಟು ಸರಿ? ಈ ಬಗ್ಗೆ ನನ್ನ ಅನುಮಾನಗಳನ್ನು ಪ್ರತ್ಯೇಕವಾಗಿ ಬರೆದು ಪೋಸ್ಟ್ ಮಾಡಿದ್ದೇನೆ, ದಯವಿಟ್ಟು ಪ್ರತಿಕ್ರಿಯೆ ತೋರಿ.