Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಬದುಕು ಮತ್ತು ಮನುಷ್ಯ ಸಂಬಂಧಗಳ ವಿಶ್ಲೇಷಣೆ

March 9, 2008 - 3:56pm — narendra

ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ.

ಪ್ರಮುಖವಾಗಿ ಇಲ್ಲಿನ ಎಲ್ಲ ಕಥೆಗಳಲ್ಲಿ ಭಾವನೆಗಳ ಸ್ತರದಲ್ಲಿ ಮನುಷ್ಯ ಸಂಬಂಧಗಳನ್ನು ವಿಶ್ಲೇಷಿಸುವ ಮತ್ತು ಆ ಮೂಲಕ ಬದುಕನ್ನು ಅರಿಯುವ ಪ್ರಯತ್ನವೊಂದು ನಡೆಯುತ್ತದೆ. ಮನುಷ್ಯ ಸಂಬಂಧಗಳ ವಿಚಾರ ಬಂದಾಗ ಹೆಚ್ಚಿನ ಸಂಬಂಧಗಳು ಸುತ್ತುವುದು ಗಂಡು ಹೆಣ್ಣು ಸಂಬಂಧದ ಸುತ್ತವೇ ಎಂಬುದು ನಿಜವಾದರೂ ರಾಮಚಂದ್ರರು ಇದರಾಚೆಗೂ ತಮ್ಮ ಹರಹು ಚಾಚಿರುವುದು ಗಮನಾರ್ಹ. ಗಂಡು-ಹೆಣ್ಣು ಸಂಬಂಧವಿರಲಿ, ಬದುಕಿನ ಅಸಹಾಯಕ ಘಳಿಗೆಗಳಿರಲಿ, ಮನಸ್ಸನ್ನು ಕಾಡುವ, ಚುಚ್ಚುವ ಇನ್ಯಾವುದೇ ಹಳೆಯ ಸಂಗತಿಯಿರಲಿ ಅವು ಇಲ್ಲಿನ ನಿರೂಪಕ ಅಥವಾ ನಾಯಕ ಪಾತ್ರವನ್ನು ತನ್ನ ಇಡೀ ಬದುಕಿನ ತುಲನೆಗೆ ಹಚ್ಚುವುದು ಮತ್ತು ಆ ಮೂಲಕ ಒಂದು ವಿಶ್ಲೇಷಣೆಗೆ ಕಾರಣವಾಗುವುದು ಇಲ್ಲಿನ ಹೆಚ್ಚಿನ ಕಥೆಗಳ ಸಾಮಾನ್ಯ ಅಂಶ. ಈ ರೀತಿ ಈ ಕಥೆಗಳು ವರ್ತಮಾನದಿಂದ ಭೂತದತ್ತ ಸಾಗುತ್ತ, ಭಾವನೆಗಳನ್ನು, ನೋವುಗಳನ್ನು ತೋಡಿಕೊಳ್ಳುತ್ತ, ಸಂಬಂಧಗಳ ಅನೇಕ ಗೋಜಲುಗಳನ್ನು ಬಿಡಿಸಿಡಲು ಪ್ರಯತ್ನಿಸುತ್ತವೆ.

ಸಂಗತ(ರಘು, ಅವನ ಹೆಂಡತಿ ಮತ್ತು ನಿರೂಪಕ), ನಾ ನಿನ್ನ ಧ್ಯಾನದೊಳಿರಲು...(ರಾಮಚಂದ್ರ, ನಳಿನಿ ಮತ್ತು ರಮೇಶ), ಯಾರು ಹಿತವರು (ಅವಿನಾಶ್, ಮಾನಸಿ ಮತ್ತು ಮನು) ಕಥೆಗಳು ಸಂಬಂಧದ ತ್ರಿಕೋನವನ್ನು ಮೂಲ ಆಧಾರವಾಗಿಸಿಕೊಂಡು ಭಾವನೆಗಳನ್ನು ತಡಕುತ್ತ ದಕ್ಕದೇ ಹೋಗುವ ಸಂಬಂಧದ ಸಾತತ್ಯದ ಕೊರಗನ್ನು ತೋಡಿಕೊಳ್ಳುವ ಕಥೆಗಳು. ಇಲ್ಲಿ ಬರುವ ನಳಿನಿ, ಮಾನಸಿ ಮತ್ತು ಆಸರೆ ಕಥೆಯ ಅನಾಥೆ ಮೂವರೂ ಒಂದೇ ಬಗೆಯ ವ್ಯಕ್ತಿತ್ವವನ್ನು ಹೊಂದಿದವರು ಎಂಬ ಅಂಶ ಕುತೂಹಲಕರ. ಇವರ ಮೂಲ ಆಕರ್ಷಣೆ ಇರುವುದೇ ಗಂಡು ಹೆಣ್ಣು ಸಂಬಂಧದ ಕುರಿತು ಈ ಹೆಣ್ಣುಗಳಲ್ಲಿರುವ ವಿಶಿಷ್ಟ ಮತ್ತು ಕೊಂಚ ಕ್ರಾಂತಿಕಾರಕ ಅನಿಸುವ ನಿಲುವಿನಲ್ಲಿ. ಈ ಅಸಹಜ ಧೈರ್ಯ ಮತ್ತು ಮುನ್ನುಗ್ಗುವ ಗುಣಗಳ ಎದುರು ರಾಮಚಂದ್ರರ ನಿರೂಪಕ/ನಾಯಕ ಪಾತ್ರಗಳೇ ಸೊರಗಿದಂತಿರುವುದು ಮತ್ತು ಈ ನಿರೂಪಕ/ನಾಯಕ ಪಾತ್ರಗಳಿಗೆ ಇಂಥ ಸ್ವತಂತ್ರ ಮನೋಧರ್ಮದ, ವಿಶಿಷ್ಟ ವ್ಯಕ್ತಿತ್ವದ ನಾಯಕಿಯರ ಸುಪ್ತ ಆಕರ್ಷಣೆ ಕೂಡ ಇರುವುದು ಇಲ್ಲಿನ ಭಾವುಕ ಸ್ತರದ ನೋವುಗಳ ಮೂಲ ಎಳೆ. ಅಸಹಾಯಕ ಸ್ಥಿತಿ, ಸಂದಿಗ್ಧಗಳು, ಸಂಬಂಧಗಳ ನಡುವಿನ ಬಿಟ್ಟಪದಗಳ ಗೊಂದಲ ಇಲ್ಲಿ ಪ್ರಧಾನವಾದ ಸಮಾನ ಅಂಶಗಳು.

ಇಲ್ಲಿ ಇನ್ನೊಂದು ಬಗೆಯ ಕಥೆಗಳಿವೆ. ಇವು ವೃದ್ಧಾಪ್ಯದಿಂದಲೋ, ಕಾಯಿಲೆಯಿಂದಲೋ, ಪಾರ್ಶ್ವವಾಯುವಿನಂಥ ಪೀಡೆಯಿಂದಲೋ, ಸಾವಿನಿಂದಲೋ ಅಸಹಾಯಕರಾದ ಜೀವಗಳನ್ನಿಟ್ಟುಕೊಂಡು ಸಂಬಂಧಗಳನ್ನು, ಭಾವನೆಗಳ ಲೋಕವನ್ನು ತಡಕುವ ಕಥೆಗಳು. ಮೊತ್ತ (ರಾಮರಾಯರ ಪಾರ್ಶ್ವವಾಯು), ಸಮಾಧಿಯ ಮೇಲೊಂದು ಹೂವು (ಡಾ.ವಿಲಾಸ್ ಅಗಡಿಯ ಸಾವು), ಯಾತ್ರೆ (ಲಲಿತಕ್ಕನ ಆಸ್ಪತ್ರೆ ಪ್ರಕರಣ) ಕಥೆಗಳಲ್ಲಿ ಮನುಷ್ಯ ಸಂಬಂಧಗಳು ಈ ಆಕಸ್ಮಿಕ ವಿದ್ಯಮಾನಗಳೊಂದಿಗೆ ಪಡೆದುಕೊಳ್ಳುವ ಪಲ್ಲಟಗಳನ್ನು ಗಮನಿಸುವ ಮೂಲಕ ಇವು ಭಾವನೆಗಳ ಸಾಚಾತನವನ್ನು ಒರೆಗೆ ಹಚ್ಚುತ್ತವೆ.

ನೆನಪುಗಳು ಮತ್ತು ಪ್ರಾಪ್ತಿ ಕಥೆಗಳಲ್ಲಿ ಸಾಕಿ ಸಲಹಿದವರನ್ನು ಮರೆತು ಬಿಡುವ ಹೊಸ ತಲೆಮಾರಿನ ಕುರಿತು ವಿಭಿನ್ನ ಬಗೆಯ ಎರಡು ನೋಟಗಳಿವೆ. ಪ್ರಾಪ್ತಿಯಲ್ಲಿ ದತ್ತು ಮಗ ದೂರಾದ ನೋವು ಇಡೀ ಬದುಕಿನ ತುಲನೆಗೆ ಕಾರಣವಾದರೆ ನೆನಪುಗಳು ಕಥೆಯಲ್ಲಿ ತಾನು ಮರೆತುಬಿಟ್ಟ ತನ್ನನ್ನು ಸಾಕಿ ಸಲಹಿದವರ ನೆನಪುಗಳು ನಿರೂಪಕನನ್ನು ಹಿಂಡುವ, ಆ ಮೂಲಕ ಬದುಕಿನ ಹಿನ್ನೋಟಕ್ಕೆ ಕಾರಣವಾಗುವ ಚಿತ್ರಣವಿದೆ.

ಈ ಎಲ್ಲ ಬಗೆಯ ಕಥೆಗಳ ಅಂತಃಸ್ಸತ್ವವನ್ನೂ ತನ್ನ ಒಡಲಿನಲ್ಲಿ ಸ್ವಲ್ಪಮಟ್ಟಿಗೆ ಹೊಂದಿರುವ ಕಥೆ ನಿಕ್ಷೇಪ. ಗಣಿಗಾರಿಕೆಯ ವೃತ್ತಿಯನ್ನು ಇಲ್ಲಿ ಒಂದು ಸಾರ್ಥಕ ರೂಪಕವನ್ನಾಗಿ ಬಳಸಿದಂತೆ ಕಂಡರೂ ಕಥೆಯನ್ನು ಹೇಳುವ ವಿಧಾನದಲ್ಲಿ ನುಸುಳಿದಂತಿರುವ ಯಾಂತ್ರಿಕತೆ, ವರದಿಯ ಧಾಟಿ, ಎಲ್ಲವನ್ನೂ ಸಣ್ಣಕಥೆಯ ಮಿತಿಯೊಳಗೆ ತಂದಿಡುವ ಧಾವಂತ ಈ ಕಥೆಯ ಸೌಂದರ್ಯವನ್ನು ಸ್ವಲ್ಪಮಟ್ಟಿಗಾದರೂ ಮುಕ್ಕಾಗಿಸಿದಂತೆ ಕಾಣುತ್ತದೆ. ರಾಮಚಂದ್ರರು ತಮ್ಮ ಕಥೆಯ ಪಾತ್ರಗಳ ವ್ಯಕ್ತಿತ್ವವನ್ನು ಕಟ್ಟಿಕೊಡುವ ವಿಧಾನ ಈ ಕಥೆಯಲ್ಲಿ ಸಾಕಷ್ಟು ಪೋಷಣೆ ಪಡೆಯದಿರಲು ಇಲ್ಲಿನ ಕಥಾನಕದ ಹರಹು ದೊಡ್ಡದಿರುವುದೇ ಕಾರಣವಿದ್ದೀತು.

ಪ್ರಾಪ್ತಿ ಕಥೆಯನ್ನು ಗಮನಿಸಿದರೆ ರಾಮಚಂದ್ರರು ಎಷ್ಟು ಚೆನ್ನಾಗಿ ತಮ್ಮ ಪಾತ್ರಗಳನ್ನು, ಸನ್ನಿವೇಶಗಳನ್ನು ವಿವರಗಳಲ್ಲಿ ಕಟ್ಟಬಲ್ಲರು ಎಂಬುದು ಅರ್ಥವಾಗುತ್ತದೆ. ಇಲ್ಲಿನ ಮುಖ್ಯ ಕಥಾನಕ ಮತ್ತು ವಸ್ತು ಸದ್ಯದ ಸನ್ನಿವೇಶಕ್ಕೆ ಮತ್ತು ಅಲ್ಲಿನ ಮನಸ್ಥಿತಿಗೆ ಸಂಬಂಧವೇ ಇಲ್ಲದಂಥ ಸಂದರ್ಭದಲ್ಲೂ ಎಲ್ಲ ಭಾವ ತೀವೃತೆಯೊಂದಿಗೆ ಹೇಳಬೇಕಿರುವುದನ್ನು ಹೇಳುವುದು ರಾಮಚಂದ್ರರಿಗೆ ಸಾಧ್ಯವಾಗಿದೆ.

ಸಮಾಧಿಯ ಮೇಲೊಂದು ಹೂವು ಕಥೆಯಲ್ಲಿ ಕಾಣುವ ಕಥೆ ಹೇಳುವ ವಿಧಾನವನ್ನು ರಾಮಚಂದ್ರರ ಅಸಂದಿಗ್ಧ, ನಿರುದ್ವೇಗದ ಬರವಣಿಗೆಯ ಉದಾಹರಣೆಯನ್ನಾಗಿ ಪರಿಗಣಿಸಬಹುದು, ಅಷ್ಟು ನಿರಾಳವಾಗಿ ಅವರು ಒಂದು ಹೆಣವನ್ನಿಟ್ಟುಕೊಂಡು ಕಥಾನಕವನ್ನು ಕಟ್ಟುತ್ತ ಹೋಗಿದ್ದಾರೆ. ಕೊನೆಯಲ್ಲಿ ಹಲವು ವ್ಯಕ್ತಿಗಳ ನಾಟಕೀಯ ವರ್ತನೆಯ ಹೊರತಾಗಿಯೂ ಈ ಕಥಾನಕದ `ಚಲನೆ' ಮನಸ್ಸಿನಲ್ಲಿ ನಿಲ್ಲುವಂತಿದೆ. ಹಾಗೆ ಇಲ್ಲಿ ವಿವರಗಳಲ್ಲಿ ಆ ಸಂದರ್ಭವನ್ನು ಅತ್ಯಂತ ಸಹಜವಾಗಿ ರಾಮಚಂದ್ರರು ಕಟ್ಟಿಕೊಡುತ್ತಾರೆ. ಆದರೆ ಮೊತ್ತ ಕಥೆಯ ಹಾಗೆಯೇ ಇಲ್ಲಿ ಕೂಡಾ ಕಥೆಯ ಮುಕ್ಕಾಲು ಭಾಗದ ಚಲನೆಗೆ ವ್ಯತಿರಿಕ್ತವಾಗಿ ಕೊನೆಯನ್ನು ಪೂರ್ವಯೋಜಿತ ದಿಕ್ಕಿಗೆ ಒಂದು ಬಗೆಯ ಉದ್ವೇಗಯುತ ಧಾವಂತದಲ್ಲಿ ಕೊಂಡೊಯ್ದ ಅನುಭವವಾಗುತ್ತದೆ. ಆದರೆ ಮೊತ್ತ ಕಥೆ ತೀರ ಸಾಧಾರಣವಾದ ಅಂತ್ಯದತ್ತ ಹೊರಳುವುದು ನಿರಾಸೆ ಹುಟ್ಟಿಸಿದರೆ ಈ ಮಿತಿಯನ್ನು ಮೀರುವಂತೆ ಸಮಾಧಿಯ ಮೇಲೊಂದು ಹೂವು ಕಥೆಯನ್ನು ಕಟ್ಟಿದ ವಿಧಾನ ಮನಸ್ಸಿನಲ್ಲಿ ಉಳಿಯುತ್ತದೆ.

ಸಂಗತ ಕಥೆ ಬಹಳಷ್ಟನ್ನು ಓದುಗರ ಊಹೆಗೆ ಬಿಟ್ಟುಕೊಟ್ಟೇ ತನ್ನ ಪರಿಣಾಮಕಾರತ್ವವನ್ನು ಪ್ರಯೋಗಕ್ಕೊಡ್ಡಿರುವಂತೆ ಕಾಣುತ್ತದೆ. ಈ ಪ್ರಯೋಗ ಯಶಸ್ವಿಯಾದರೂ ಒಟ್ಟಾರೆಯಾಗಿ ಈ ಪ್ರಯೋಗ ಯಾವ ಹೊಸ ಒಳನೋಟವನ್ನಾಗಲೀ, ಕಾಣ್ಕೆಯನ್ನಾಗಲೀ ದಕ್ಕಿಸುವುದಿಲ್ಲ.

ಯಾತ್ರೆ ಕಥೆ ಕೂಡ ಹಲವಾರು ಕಾರಣಗಳಿಗಾಗಿ ಮನಸೆಳೆಯುತ್ತದೆ. ಬಹಳಮಟ್ಟಿಗೆ ರಾಮಚಂದ್ರರು ಇಲ್ಲಿ ತಾವು ಸರಿದುನಿಂತು ಕಥೆಯನ್ನು ವಿವರಗಳಲ್ಲಿ ಹಿಡಿದಿಡುತ್ತಾ ಹೋಗುತ್ತಾರೆ. ಹಿತಮಿತವಾದ ವಿವರಗಳಲ್ಲಿ ಇಲ್ಲಿನ ಕಥೆ ಮೂಡಿಬಂದಿದೆ ಕೂಡ. ಹಾಗಾಗಿ ಈ ಕಥೆ ವಸ್ತು, ತಂತ್ರ, ಪರಿಣಾಮಕಾರತ್ವ ಎಲ್ಲ ವಿಚಾರದಲ್ಲೂ ಉತ್ತಮವಾಗಿ ಬಂದಿದೆ. ಆದರೂ "ನೊ, ನೊ, ವಿ ಡೋಂಟ್ ನೋ ಎನಿಥಿಂಗ್, ವಿ ಡೋಂಟ್ ಬಾದರ್ ಟೂ" ಎನ್ನುವಂಥ ಮಾತುಗಳಿಗೆ ತಮ್ಮ ಅರ್ಥ/ವಿವರಣೆಯನ್ನು ಸೇರಿಸುವ ಮೋಹಕ್ಕೆ ವಶವಾಗದ ಸಂಯಮವನ್ನು ರಾಮಚಂದ್ರರು ಇನ್ನೂ ಸಾಧಿಸಬೇಕಿದೆ ಅನಿಸುತ್ತದೆ. ಸೂಚ್ಯವಾಗಿ ಹೇಳಿರುವುದನ್ನೆ ಮತ್ತೆ ವಾಚ್ಯವಾಗಿಸುವುದು ಹಾಗಲ್ಲದೇ ಅದನ್ನು ಸಮರ್ಥವಾಗಿ ಸಂವಹನ ಮಾಡಿದಂತಾಗದೇನೋ ಎಂಬ ಅನುಮಾನ ರಾಮಚಂದ್ರರಲ್ಲಿರುವುದನ್ನು ಕಾಣಿಸುತ್ತದೆ.

ಸಹಜವಾಗಿಯೇ ಈ ಕಥೆಗಳು ಭಾವಲೋಕದ ಸೃಷ್ಟಿಯಾಗಿರುವುದರಿಂದ ಕೆಲವು ಕಲ್ಪನೆಗಳು, ಸನ್ನಿವೇಶದ ಪರಿಕಲ್ಪನೆಗಳು ಫ್ಯಾಂಟಸಿಯ ಲೇಪದಿಂದಲೂ, ಆತ್ಮರತಿಯ ಅತಿಯಿಂದಲೂ ಸೊರಗಿವೆ. ಇಲ್ಲಿನ ನಾಯಕಿಯರ ಪಾತ್ರ ಚಿತ್ರಣದಲ್ಲಿ ನುಸುಳಿರುವ ಸ್ವಲ್ಪಮಟ್ಟಿನ ನಾಟಕೀಯತೆ, ಅಸಹಜತೆ ಕಥೆಯ ಪ್ರಾಮಾಣಿಕತೆಯನ್ನು ಕುಗ್ಗಿಸುವಂತಿವೆ. ಕೆಲವು ಕಡೆ ವಿವರಗಳು ಭಾಷೆಯಲ್ಲಿ ಪರಿಪೂರ್ಣ ಬಿಂಬಗಳಾಗಿ ಮೈತಾಳುವ ಮೊದಲೇ ಇನ್ನೊಂದಕ್ಕೆ ಜಿಗಿಯುವುದರಿಂದ ಓದುಗರ ಮನಸ್ಸಿನಲ್ಲಿ ಅವು ಯಾವುದೇ ವಾತಾವರಣವನ್ನು ಸೃಜಿಸುವುದಾಗದೇ ಪರಿಣಾಮದಲ್ಲಿ ಯಶಸ್ವಿಯಾಗುವುದಿಲ್ಲ. ರಚನೆಯ ಹಂತದ ಈ ಸಣ್ಣಪುಟ್ಟ ದೋಷಗಳನ್ನು ಮೀರಬಲ್ಲ ಅರಿವು, ಸಾಮರ್ಥ್ಯ ಎರಡೂ ರಾಮಚಂದ್ರರಲ್ಲಿ ಇದೆ ಎನ್ನುವುದಕ್ಕೆ ಸಂಕಲನದಲ್ಲೇ ನಮಗೆ ಸಾಕ್ಷಿಗಳು ಸಿಗುತ್ತವೆ ಎನ್ನುವುದು ಕೂಡ ನಿಜ.

ಅನೇಕ ಉತ್ತಮ ಅಂಶಗಳು ಇಲ್ಲಿನ ಬೇರೆ ಬೇರೆ ಕಥೆಗಳಲ್ಲಿ ಕಂಡುಬಂದರೂ ಅವುಗಳೆಲ್ಲ ಒಂದು ಹದವಾದ ಪಾಕವಾಗಿ ಎಲ್ಲ ಕಥೆಗಳಲ್ಲೂ ಕಾಣಿಸಿಕೊಂಡಿದ್ದರೆ ಎಂಬ ಆಸೆ, ನಿರೀಕ್ಷೆಯನ್ನು ಹುಟ್ಟಿಸುವ ರಾಮಚಂದ್ರರ ಈ ಕಥೆಗಳು ಮುಂದೆ ಬರಬೇಕಿರುವ ಅವರ ಹೊಸ ಕಥೆಗಳ ಬಗ್ಗೆ ಹೆಚ್ಚಿನ ಒಂದು ನಿರೀಕ್ಷೆಯನ್ನು ಹುಟ್ಟಿಸುವಲ್ಲಿ ಸಫಲವಾಗಿವೆ ಎಂದು ಖಂಡಿತವಾಗಿ ಹೇಳಬಹುದಾಗಿದೆ.

ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ)

ಲೇಖಕರು: ಸಿ.ಎನ್.ರಾಮಚಂದ್ರ

ಪ್ರಕಾಶಕರು: ಸುಮುಖ ಪ್ರಕಾಶನ, 174ಇ/28,1ನೆಯ ಮಹಡಿ, 1ನೆಯ ಮುಖ್ಯ ರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್ಗೇಟ್ ಸರ್ಕಲ್, ಬೆಂಗಳೂರು-560 023. ಪುಟ ಸಂಖ್ಯೆ: 120 ಬೆಲೆ: ಅರವತ್ತು ರೂಪಾಯಿ.

(ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸ ಪತ್ರಿಕೆಯಲ್ಲಿ ಪ್ರಕಟಿತ)

  • ಪುಸ್ತಕ ವಿಮರ್ಶೆ
Ornamental seperator
  • Login or register to post comments
  • 208 hits
  • Email this page
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಲ್ಲಿಗೆಯ ಘಮಘಮ, ಬ್ಯಾಡಗಿ ಮೆಣಸಿನ ಘಾಟು!
  • ವಿವೇಕರ ಕಥಾಲೋಕ-3
  • ಮನದ ಮುಂದಣ ಮಾಯೆ
  • ವಿವೇಕರ ಕಥಾಲೋಕ
  • ವಿವೇಕರ ಕಥಾಲೋಕ-2
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator