ರೈತ ಮತ್ತು ಅವನ ಸಮಸ್ಯೆಗಳು
ರೈತಾಪಿ ಜೀವನ ’ಬಂಗಾರದ ಮನುಷ್ಯ ’ ಸಿನಿಮಾ ತರಹ ಅದ್ದೂರಿ ವರ್ಣ ಚಿತ್ರವಲ್ಲ, ಹೆಜ್ಜೆ ಹೆಜ್ಜೆಗೆ ಸಂಕಷ್ಟಗಳ ಸರಮಾಲೆ . ಹಗಲು ರಾತ್ರಿಗಳೆನ್ನದೆ ,ಕಾಡು ಪ್ರಾಣಿಗಳು , ಹರಿದಾಡುವ ಹಾವುಗಳ ನಡುವೆ ಹೋರಾಡುತ್ತಲೇ ಬದುಕಬೇಕಾದ ಬವಣೆ .ರೈತನಿಗೆ ಹಿಂದಿನಿಂದಲೂ ಕಾಡುತ್ತಿರುವ ಅಗ್ನಿ ಪರೀಕ್ಷೆಗಳಲ್ಲಿ ಮುಖ್ಯವಾದುವು ಮೂರು . ಮೊದಲನೆಯದು ಹವಾಮಾನದ ವೈಪರೀತ್ಯದೊಡನೆ ಹೋರಾಟ , ಇದು ಬೀಜ ಬಿತ್ತಿದ ದಿನದಿಂದ , ಅದು ಮೊಳೆತು ,ಬೆಳೆದು, ತೆನೆಗಟ್ಟಿ , ಕಾಳು ಬೇರ್ಪಡುವವರೆಗೆ ದಿನ ದಿನವೂ ಅವನನ್ನು ತುದಿಗಾಲ ಮೇಲೆ ನಿಲ್ಲಿಸುವ ಸಂಕಟ.
ಎರಡನೆಯದು ಹವಾಮಾನದ ವೈಪರೀತ್ಯದ ಕಾರಣವೂ ಸೇರಿದಂತೆ ; ಇನ್ನಿತರ ಕಾರಣಗಳಿಗಾಗಿ ಬೆಳೆಗೆ ಸಂಭವಿಸುವ ರೋಗ ಬಾಧೆ ಮತ್ತು ಬೆಳೆ ಹಾನಿ . ಈ ಕಾರಣದಿಂದ ಅನೇಕ ಬಾರಿ ಅವನು ಅಂದಾಜಿಸಿದ ಇಳುವರಿ ಅವನ ಕೈಗೆ ನಿಲುಕದೆ , ಅವನು ಕಂಗಾಲಾಗುತ್ತಾನೆ .
ಈ ಎರಡೂ ಪರೀಕ್ಷೆಗಳನ್ನು ಗೆದ್ದು ಛಲ ಬಿಡದ ತ್ರಿವಿಕ್ರಮನಂತೆ ಅವನು ಒಳ್ಳೆಯ ಬೆಳೆ ಬೆಳೆದರೆ ,ಮೂರನೆಯ ಭೂತ ಅವನ ಪ್ರಾಣ ತೆಗೆಯಲು ಕಾದು ಕೂತಿರುತ್ತದೆ . ಅದೇ ಮಾರುಕಟ್ಟೆಯ ಮಾಯಾಜಾಲ .ಅದು ಯಾವ ಗ್ಯಾರಂಟಿಯನ್ನು ಯಾರಿಗೂ ಕೊಡದಿರುವ ಶಕ್ತಿ . ಧಾರಣೆ ಒಂದು ಸಾರಿ ಆಕಾಶದಲ್ಲಿದ್ದರೆ ಇನ್ನೊಮ್ಮೆ ಪಾತಾಳದಲ್ಲಿ ಪ್ರವಾಸ ಮಾಡುತ್ತ್ತಿರುತ್ತದೆ . ಅದು ಪಾತಾಳ ಪ್ರವಾಸ ಕಾರ್ಯಕ್ರಮ ಹಾಕಿಕೊಳ್ಳುವುದೇ ಸಾಮಾನ್ಯವಾಗಿ ರೈತನ ಬೆಳೆ ಕೈಗೆ ಬರುವ ಸಮಯಕ್ಕೆ ಸರಿಯಾಗಿ .
ಅವನ ಗ್ರಹಚಾರ ಸರಿ ಇದ್ದು ( ಅದು ಸರಿ ಇಲ್ಲದೆ ಇರುವುದೇ ಹೆಚ್ಚು ) ಧಾರಣೆ ಮೇಲ್ಮುಖವಾಗಿದ್ದರೆ ಅವನು ಬಚಾವು ; ಅದೇನಾದರೂ ಪಾತಾಳದತ್ತ ಸವಾರಿ ಹೊರಟಿದ್ದರೆ , ಅವನು ಗೆದ್ದು ಬಂದ ಎರಡು ಪರೀಕ್ಷೆಗಳೂ ನಿಷ್ಫಲವಾಗಿ ಅವನು ಸಂಪೂರ್ಣವಾಗಿ ಸೋತು ಹೋಗುತ್ತಾನೆ.
ಈ ಅತ್ಯಂತ ಹಳೆಯವಾದ ಕಷ್ಟಗಳನ್ನು ಹೇಗೋ ಸಹಿಸಿ ಅವನು ಬಹಳ ಕಾಲದಿಂದ ತಾಳಿಕೊಂಡೇ ಬಂದಿದ್ದ . ಆದರೆ ಇಪ್ಪತ್ತನೆಯ ಶತಮಾನದ ಮಧ್ಯ ಭಾಗದಿಂದ , ಅವನನ್ನು ನಾಶ ಪಡಿಸಲು ; ಇನ್ನೊಬ್ಬ ಮೋಹಿನಿ ಆಧುನಿಕ ವ್ಯವಸಾಯ ಪದ್ದತಿಯ ರೂಪದಲ್ಲಿ ಪ್ರತ್ಯಕ್ಷಳಾದಳು .ಅದು ವರೆಗೆ ಅವನಿಗೆ ಕಾಯ ಕಷ್ಟದ ಹೊರತು , ಖರ್ಚುಗಳ ಹೊರೆ ಅಷ್ಟಾಗಿ ಇರಲಿಲ್ಲ. ಕೈಗೆ ಬಂದದ್ದೇ ದೇವರು ಕೊಟ್ಟದ್ದು ಎಂದು ಹೇಗೋ ಬದುಕುತ್ತಿದ್ದವನಿಗೆ ,ಹೊಸ ವ್ಯವಸಾಯ ಪದ್ದತಿ ಕಣ್ಣು ಮಿಟುಕಿಸಿತು .
ಅದು ವರೆಗೆ ಅವನ ಕೊಟ್ಟಿಗೆಯಲ್ಲಿದ್ದ ದನಗಳು , ಅವನ ಜಮೀನಿನ ಗೊಬ್ಬರದ ಅವಶ್ಯಕತೆಗಳನ್ನು ಪೂರೈಸುತ್ತಿದ್ದವು .ಅವನವೇ ಆದ ಸಾಂಪ್ರದಾಯಿಕ ಬೀಜಗಳು ಮನೆಯ ಅಟ್ಟದ ಮೇಲೆ ಭದ್ರವಾಗಿರುತ್ತಿದ್ದವು .೧೯೫೦ ರ ನಂತರ , ಕಂಪನಿಗಳ ಹೈಬ್ರೀಡ್ ಬೀಜಗಳಿಗೆ ಮೊದಲು ಅವನನ್ನು ಗುಲಾಮನನ್ನಾಗಿ ಮಾಡಲಾಯಿತು .ಆ ಬೀಜಗಳಿಗೆ ಅನುಗುಣವಾದ ಫ್ಯಾಕ್ಟರಿಯ ರಾಸಾಯನಿಕ ಗೊಬ್ಬರಗಳಿಗೆ , ಅವನು ಬೆಳೆದದ್ದೆಲ್ಲಾ ಸಂದಾಯವಾಗುವ ವ್ಯವಸ್ಟೆಯನ್ನು ನಂತರ ಕಲ್ಪಿಸಲಾಯಿತು .ಈ ಪ್ರಕೃತಿಯ ವಿರೋಧದ ಕ್ರಮಗಳಿಂದಾಗಿ ಅವನ ಜಮೀನು ಹದಗೆಟ್ಟು ಬೆಳೆದ ಬೆಳೆಗಳಿಗೆ ಚಿತ್ರ ವಿಚಿತ್ರ ರೋಗಗಳು ಎಡತಾಕತೊಡಗಿದವು ,ಇನ್ನು ಕೇಳುವುದೇನು ಹಣ ಬಾಚಲು ಔಷಧ ಕ್ಂಪನಿಗಳಿಗೆ ಸೀಜನ್ ಶುರುವಾಯಿತು . ಆಧುನಿಕ ಪದ್ದತಿಯ ಈ ಹೊಸ ವಿಧಾನದಲ್ಲಿ ರೈತನ ಶ್ರಮದ ಫಲಕ್ಕೆ ಈ ಮೇಲಿನ ಎಲ್ಲರೂ ಭಾಗಸ್ಥರಾದರು . ಹೀಗೆ ಸ್ವಾವಲಂಬಿಯಾಗಿದ್ದ ರೈತ ಪರಾವಲಂಬಿಯಾಗಿ ,ಬೆಳೆ ತೆಗೆಯಲು ಸಾಲ ಮಾಡುವುದು ಸಾಲ ತೀರಿಸಲಾಗದೇ ವಿಷ ಕುಡಿಯುವುದು ಇವೆಲ್ಲಾ ಶುರುವಿಟ್ಟುಕೊಂಡವು .
ಪಂಚತಾರಾ ಹೋಟೆಲುಗಳಲ್ಲಿ ಅಲ್ಲಿನ ಬಾಣಸಿಗ ಮಾಡಿ ಬಡಿಸುವ ವಿಧ ವಿಧದ ಬಾತುಗಳ ಹಿಂದೆ ಈ ರೈತ ಸಮುದಾಯದ ಬೆವರು , ಕಣ್ಣೀರು ಇದೆ . ಅಲ್ಲಿ ಕುಳಿತು ತಿನ್ನುವ ಒಂದೊಂದು ಅಗುಳಿನ ಹಿಂದೆ ರೈತನ ಶ್ರಮದ ಫಲ ಅಡಗಿ ಕುಳಿತಿರುತ್ತದೆ .
ಸಾಮಾನ್ಯವಾಗಿ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಭೂಮಾಲೀಕರು ಈ ಕಾಲದಲ್ಲಿ ಇಲ್ಲ ಎಂದುಕೊಂಡಿದ್ದೇನೆ , ಅದಕ್ಕೆ ಇಲ್ಲಿ ಜಾರಿಯಲ್ಲಿರುವ ಭೂಸುಧಾರಣಾ ಕಾನೂನು ಒಂದು ಕಾರಣವಾದರೆ , ಇನ್ನೊಂದು ಮನೆಯಲ್ಲಿ ಹುಟ್ಟಿದ ಎಲ್ಲಾ ಮಕ್ಕಳಿಗೂ ವಾರಸಾ ಹಕ್ಕು ಸಮಾನವಾಗಿರುವುದರಿಂದ , ಪಾಲು ಹಂಚಿಕೆಯ ಕಾರಣದಿಂದಾಗಿ ,ಹಳೆಯ ಜಮೀನುದಾರರೆಲ್ಲಾ ಕಳೆದ ಎರಡು ಮೂರು ತಲೆಮಾರುಗಳಲ್ಲಿ ಬಡ ರೈತರ ಪಟ್ಟ ಕಟ್ಟಿಕೊಂಡಿದ್ದಾರೆ .
ಹಾಗಾದರೆ ರೈತನ ಕಷ್ಟಕ್ಕೆ ಪರಿಹಾರವೇ ಇಲ್ಲವೇ ? ಎಂದರೆ ಸರಕಾರ ಮನಸ್ಸು ಮಾಡಿದರೆ ಜೊತೆಗೆ ರೈತರೂ ಎಚ್ಚತ್ತರೆ ಪರಿಹಾರವಿದ್ದಂತಿದೆ . ಮೊದಲು ಸರಕಾರ ಈ ಕಂಪನಿಗಳ ಪ್ರಭಾವಕ್ಕೆ ಮಣಿಯದೆ , ಸಾವಯವ ಪದ್ದತಿಗೆ ಒತ್ತು ಕೊಟ್ಟು , ಔಷಧ ರಾಸಾಯನಿಕ ಗೊಬ್ಬರಗಳ ಕಬಂಧ ಬಾಹುವಿನಿಂದ ಮುಕ್ತಿ ದೊರಕಿಸಬೇಕು ಆಗ ರೈತನೂ ಅವನಿಗೆ ಆಶ್ರಯವಾದ ಅವನ ಜಮೀನೂ
ಎರಡೂ ಉಳಿಯುತ್ತವೆ . ನಂತರ ಪರಿಣಾಮಕಾರಿಯಾಗಿ ಎಲ್ಲ ರೈತರಿಗೆ ಬೆಳೆ ವಿಮೆ ಪದ್ದತಿಯನ್ನು ಜಾರಿಗೊಳಿಸಿದರೆ ರೈತನಿಗೆ ಬಲು ದೊಡ್ಡ ಸಹಾಯವಾಗುತ್ತದೆ .ಪ್ರತಿ ಹಳ್ಳಿಯಲ್ಲಿರುವ ಗ್ರಾಮ ಲೆಕ್ಕಿಗರ ಸಹಾಯದಿಂದ ಪ್ರತಿ ರೈತನ ಬೆಳೆ , ಅದರ ಪರಿಸ್ಥಿತಿ , ಮಾರುಕಟ್ಟೆಯ ಪ್ರತೀಕೂಲ ಪರಿಣಾಮಗಳು ಇವನ್ನು ಗುರುತಿಸಿ ,ಅವನು ವಿಫಲನಾಗುವ ಸಮಯದಲ್ಲಿ , ಅವನ ಶ್ರಮ ವ್ಯರ್ಥವಾಗದಂತೆ ,ಅವನಿಗೆ ವಿಮೆಯ ಮೂಲಕ ನಷ್ಟ ಪರಿಹಾರದ ಜವಾಬ್ದಾರಿ ವಹಿಸಿಕೊಂಡರೆ , ಅವನು ಬದುಕಿದಂತೆಯೇ .
ಸರಕಾರಗಳಿಗೆ ಇದೇನೂ ಕಷ್ಟದ ಕೆಲಸವಲ್ಲ , ಕೆಲವೇ ಜನರ ಐಷಾರಾಮಿ ಬದುಕಿಗೆ ಸಾವಿರಾರು ಕೋಟಿ ರುಪಾಯಿ ವ್ಯಯವಾಗುತ್ತಿರುವ ಇಂದಿನ ದಿನಗಳಲ್ಲಿ ಜನ ನಾಯಕರಿಗೆ ತಾನು ಪ್ರತಿ ದಿನವೂ ತಿನ್ನುವ ಅನ್ನ ಎಲ್ಲಿಂದ ಬರುತ್ತದೆ ? ಎಂದು ಯೋಚಿಸುವ ಶಕ್ತಿ ಇದ್ದರೆ ಸಾಕು ,ಅದಕ್ಕಾಗಿ ಶಾಶ್ವತ ನಿಧಿಯನ್ನೇ ತೆಗೆದಿರಿಸಬಹುದು .

- Login or register to post comments
- 333 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ರೈತ ಮತ್ತು ಅವನ ಸಮಸ್ಯೆಗಳು
ತುಂಬಾ ಚೆನ್ನಾಗಿದೆ ಬರಹ. ನಾನೊಬ್ಬ ರೈತ ಕುಟುಂಬದವನು. ಬೇರೆ ಕೆಲಸಗಳಲ್ಲಿ ಬೇರೆ ಬೇರೆ ಲೆವೆಲ್(ಸ್ತರ)ಗಳಿರುವಂತೆ ರೈತರಲ್ಲೂ ಇವೆ. ದಿನಗೂಲಿ ರೈತರು, ಸಣ್ಣ ಬೆಳೆಗಾರರು ಮತ್ತು ದೊಡ್ಡ ರೈತರು. ದಿನಗೂಲಿ ರೈತರಿಗೇನು ಕಮ್ಮಿ ಇಲ್ಲ. ಅಂದಿನ ದಿನದ ಕೂಲಿ ಸಿಕ್ಕರಾಯಿತು ಅದರಲ್ಲಿ ಅವರ ಬದುಕು ಹೇಗೋ ನಡೆಯುತ್ತೆ. ದೊಡ್ಡ ರೈತರೂ ಹೇಗೋ ಬದುಕಿಕೊಳ್ತಾರೆ, ಯಾಕಂದ್ರೆ ಹೆಚ್ಚುವರಿ ಹೊಲ-ಗದ್ದೆ ಇರುತ್ತೆ, ಒಂದು ಬೆಳೆ ಕೈ ಕೊಟ್ಟ್ರೂ ಇನ್ನೊಂದಿರುತ್ತೆ. ಆದರೆ ಈ ನಡುವಿನ ಸಣ್ಣ ರೈತರಿದಾರಲ್ಲ... ಇವರದೇ ಬಲು ತ್ರಾಸು. ನಂಬಿದ ಬೆಳೆ ಕೈ ಕೊಟ್ರೆ ಒಂದು, ಅದಕ್ಕೆ ತಕ್ಕ ಬೆಲೆ ಸಿಗದಿದ್ರೆ ಇನ್ನೊಂದು.
ಈ ಎಲ್ಲ ಬಗೆಯ ರೈತರನ್ನೂ, ಒಟ್ಟಾರೆ ರೈತ ಸಮುದಾಯವನ್ನು ಪೆಡಂಬೂತದಂತೆ ಕಾಡ್ತಿರೋದು, ಗೊಬ್ಬರಗಳ ಗೊಡವೆ. ಗೊಬ್ಬರ ಹಾಕಿದರೇನೆ ಇಳುವರಿ ಅನ್ನುವ ಗೊಡ್ಡು ನಂಬಿಕೆ ಅದ್ಹೇಗೋ ನಮ್ ರೈತರಿಗೆ ಹೊಕ್ಕು ಬಿಟ್ಟಿದೆ. ಅಲ್ಲದೇ ಹೆಚ್ಚು ಗೊಬ್ಬರ-ಹೆಚ್ಚು ಬೆಳೆ ಅನ್ಕೊಳ್ಳೋದು ಬೇರೆ. ಹಾಗಾಗಿ ಗೊಬ್ಬರ, ಕೀಟನಾಶಕಗಳಿಗೆ ಸಾಲ.
ರೈತರು ಬರೀ ಬೆಳೆಗಳನ್ನು ಅಸ್ಟೇ ನಂಬಿಕೊಳ್ಳದೇ ಹೈಣುಗಾರಿಕೆ, ಕಾಯಿಪಲ್ಲೆ ಬೆಳೆಯೋದು, ಜೇಣುಗಾರಿಕೆ, ಸಣ್ಣ ವ್ಯಾಪಾರ ಇಂತ ಬೇರೇ ಕೆಲಸಗಳಲ್ಲಿ ತೊಡಗಿಕೊಂಡರೆ ಏನೂ ತೊಂದರೆಯಾಗದು.
ಉ: ರೈತ ಮತ್ತು ಅವನ ಸಮಸ್ಯೆಗಳು
ಸಂಗನ ಗೌಡರಿಗೆ ಪ್ರತಿಕ್ರಿಯೆಗಾಗಿ ಧನ್ಯವಾದಗಳು , ಪ್ರತಿಕ್ರಿಯೆಯಲ್ಲಿ ನಿಮ್ಮ ಅನುಭವವಿರುವುದರಿಂದ ಸಹಜವಾಗಿಯೇ ಪ್ರತಿಕ್ರಿಯೆ ಸರಿಯಾಗಿದೆ . ಪ್ರೀತಿಯ ಮಹೇಶ್ ನಿಮ್ಮ ಪ್ರತಿಕ್ರಿಯೆ ನೋಡಿ ತಕ್ಷಣ ನಗು ಬಂತು , ಈಗಾಗುತ್ತಿರುವುದು ಅದೇ ;ಹಳ್ಳಿಗಳು ಖಾಲಿಯಾಗುತ್ತಿವೆ ,ಪಟ್ಟಣಗಳು ಬೆಟ್ಟದಂತೆ ಬೆಳೆಯುತ್ತಿವೆ . ನಿಮ್ಮ ಲೇಖನಗಳನ್ನು ಕುತೂಹಲದಿಂದ ನೋಡುತ್ತಿರುತ್ತೇನೆ, ಪುಟಿಯುವ ಯುವ ಮನಸ್ಸು ಅಲ್ಲಿ ಕಾಣುತ್ತದೆ . ಧನ್ಯವಾದಗಳು.
ಉ: ರೈತ ಮತ್ತು ಅವನ ಸಮಸ್ಯೆಗಳು
ಸಂಗನ ...
ನನಗೂ ರೈತ ಹಿನ್ನಲೆ ಇದೆ. ಈ ರೈತ ಪ್ರಪಂಚ ನನಗೆ ತುಂಬ ಹತ್ತಿರದಿಂದ ನೋಡಿ ಗೊತ್ತು. ನಿಮ್ಮ ಒಂದೊಂದು ಪದವೂ ನಂಗೆ ಅರ್ಥ ವಾಗುತ್ತೆ!
>> ನಡುವಿನ ಸಣ್ಣ ರೈತರಿದಾರಲ್ಲ... ಇವರದೇ ಬಲು ತ್ರಾಸು. ನಂಬಿದ ಬೆಳೆ ಕೈ ಕೊಟ್ರೆ ಒಂದು, ಅದಕ್ಕೆ ತಕ್ಕ ಬೆಲೆ ಸಿಗದಿದ್ರೆ ಇನ್ನೊಂದು.
ಸಣ್ಣ ರೈತರದ್ದು ನಿಜವಾಗ್ಲೂ ವಿಚಿತ್ರ ಸ್ಥಿತಿ. ಲಾಸ್ ಆದ್ರೆ ಈಕಡೆ ಕೂಲಿ ಮಾಡಕ್ಕೂ ಜಂಬ ಒಪ್ಪೋಲ್ಲ. ಚೆನಾಗಿ ಬದುಕಕ್ಕೂ ಹಣ ಇರಲ್ಲ.
ಯಾಕೋ ನಂಗೂ ಈ ಬಗ್ಗೆ ಒಂದು ಬ್ಲಾಗು ಬರೀಬೇಕು ಅನ್ನಿಸ್ತಾ ಇದೆ.
ಸವಿತೃ
ಉ: ರೈತ ಮತ್ತು ಅವನ ಸಮಸ್ಯೆಗಳು
ನನ್ನಿ...
ಸರಿಯಾಗ್ ಹೇಳಿದ್ರಿ, ಸಣ್ಣ ರೈತರು ಬಡುವ ಪಾಡಿನ ಬಗ್ಗೆ.
ಬೀಜ ಬಿತ್ತಿ ಬೆಳೆ ಬರೋವರೆಗೂ ಜಗಲಿ ಮೇಲೆ ಕೂತು ಹೊತ್ತು ಕಳೆಯೋ ಕಾಲ ಹೋಯ್ತು. ಎಲ್ಲರೂ ಈಗ ಸತತ ದುಡಿಬೇಕು.
ದುಡಿದು ಮೊಬೈಲ್ಗೆ, ಫೋನ್ಗೆ, ಟಿ.ವಿಗೆ, ಪೆಟ್ರೋಲ್ ಮುಂತಾದವಕ್ಕೆ ಸುರೀಬೇಕು.
ಉ: ರೈತ ಮತ್ತು ಅವನ ಸಮಸ್ಯೆಗಳು
’ಬಡುವ’ ಅಲ್ಲ ಪಡುವ..........
ಉ: ರೈತ ಮತ್ತು ಅವನ ಸಮಸ್ಯೆಗಳು
ನುಕ್ಸಾನ್ ಆಗೋ ಜಂಬಾರ ಮಾಡೋದು ಪೆದ್ದುತನ.
ರೊಕ್ಕ ಹೆಚ್ ಬೇಕಂದ್ರೆ, ಬೇರೆ ತೆರದ ಹೆಚ್ ಮಂದಿ ಇಲ್ದೇ ಇರೋ ಕೆಲಸ ಮಾಡಬೇಕು.
ಉ: ರೈತ ಮತ್ತು ಅವನ ಸಮಸ್ಯೆಗಳು
ಮಹೇಶ...
ಇದಕ್ಕೆ ಇಷ್ಟು ಸುಲಭವಾಗಿ ಪರಿಹಾರ ಹೇಳಕ್ಕೆ ಆಗಲ್ಲ. ಇದು ತುಂಬ comlex matter!.
ಆದರೂ ರೈತರಲ್ಲಿ awareness ಉಂಟುಮಾಡೋ ಅವಶ್ಯಕತೆ ಇದೆ.
ಸವಿತೃ
ಉ: ರೈತ ಮತ್ತು ಅವನ ಸಮಸ್ಯೆಗಳು
ನಾನು ಸಂಗತಿ ಗೋಜಲು ಮತ್ತು ಒತ್ತಿನದಲ್ಲ ಎಂದಲ್ಲ ಹೇಳಿದುದು..
ಬೇಸಾಯಕ್ಕೆ ಹೆಚ್ಚುವರಿ ಮಂದಿ ಕೆಲಸಕ್ಕೆ ಇದ್ದಾರೆ, ಅವರನ್ನ ಬೇರೆ ಕೆಲಸದೆಡೆ ಒಯ್ಯೋ ಬುದ್ದಿ ನಮ್ಮನ್ನಾಳೋರಿಗೆ ಯಾಕೋ ಬಂದಿಲ್ಲ...
ರೈತರು ಅನ್ನೋರು, ಮಯ್ನಾರಿಟಿಗಳ ಹಾಗೆ ಒಂದು ಓಟುಬ್ಯಾಂಕು!
ಉ: ರೈತ ಮತ್ತು ಅವನ ಸಮಸ್ಯೆಗಳು
ಮಹೇಶ,
"ಬೇಸಾಯಕ್ಕೆ ಹೆಚ್ಚುವರಿ ಮಂದಿ ಕೆಲಸಕ್ಕೆ ಇದ್ದಾರೆ, ಅವರನ್ನ ಬೇರೆ ಕೆಲಸದೆಡೆ ಒಯ್ಯೋ ಬುದ್ದಿ ನಮ್ಮನ್ನಾಳೋರಿಗೆ ಯಾಕೋ ಬಂದಿಲ್ಲ..."
ಇದು ತಪ್ಪು ಗ್ರಹಿಕೆ. ಕೃಷಿ ಮತ್ತು ಅದರ ತೊಂದರೆಗಳನ್ನು ಹೀಗೆ "simplistic notion"ಗಳಿಂದ ಅಳೆಯಬೇಡಿ. ಇದೇ ಮಾತು ಯಾವುದೋ ಬೇರೆಯ ವೇದಿಕೆಯಲ್ಲಿ ಬಂದಿದ್ದರೆ ನಿಮ್ಮ ಅಭಿಪ್ರಾಯವನ್ನು ಸರಿಪಡಿಸುವ ಗೋಜಿಗೂ ನಾನು ಹೋಗುತ್ತಿರಲಿಲ್ಲ. ಸಂಪದದಲ್ಲಾದರೋ ಇದರ ಬಗ್ಗೆ ಸೀರಿಯಸ್ ಆದ, ಸಂಶೋಧನಾಧಾರಿತ ಲೇಖನಗಳು ಈಗಾಗಲೇ ಪ್ರಕಟಗೊಂಡಿವೆ. ದಯವಿಟ್ಟು ಓದಿ ನಂತರ ಈ ತರಹದ ಖಂಡಿತ ನಿಲುವುಗಳಿಗೆ ಬನ್ನಿ.
--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ
ಉ: ರೈತ ಮತ್ತು ಅವನ ಸಮಸ್ಯೆಗಳು
ಶ್ಯಾಮ ಕಶ್ಯಪ್ , ಸವಿತೃ ಅವರಿಗೆ ಧನ್ಯವಾದಗಳು , ನಿಮ್ಮ ಪ್ರತಿಕ್ರಿಯೆಗಳಲ್ಲಿನ ರೈತ ಕಾಳಜಿ ಸರಿಯಾದ ರೀತಿಯದು , ಬಹುತೇಕ ಭಾರತದ ಎಲ್ಲರ ಮೂಲವೂ ಕೃಷಿಯೊಂದಿಗೇನೆ ಜೋಡಿಸಿಕೊಳ್ಳುತ್ತದೆ . ಅಪ್ಪ ರೈತನಲ್ಲದಿದ್ದರೆ ಅಜ್ಜ ,ಇಲ್ಲವೇ ಮುತ್ತಜ್ಜ ಮೂಲವನ್ನು ಹುಡುಕುತ್ತಾ ಹೊರಟರೆ ಎಲ್ಲರಿಗೂ ಸಿಗುವುದು ಹೊಲದ ದಾರಿಗಳೇ .ನಮ್ಮ ಮೂಲದ ಬಗ್ಗೆಯೇ ನಮಗೆ ಕಾಳಜಿ ಇಲ್ಲದಿದ್ದರೆ , ನಾವು ತಲುಪುವುದಾದರೂ ಎಲ್ಲಿಗೆ ?