ಅನನ್ಯ ಅಲ್ಲಮ (೧)
ಅಲ್ಲಮನ ಬಗ್ಗೆ ಹನ್ನೆರಡನೆಯ ಶತಮಾನದ , ಅವನ ಕಾಲದ ನಂತರ ,ಕಳೆದ ಒಂಭೈನೂರು ವರ್ಷಗಳಲ್ಲಿ,ನಡೆದಿರುವ ಸಂವಾದ, ಚರ್ಚೆ, ವಿಮರ್ಶೆ ಇವೆಲ್ಲವನ್ನೂ ಮೀರಿ ಅಲ್ಲಮನ ವ್ಯಕ್ತಿತ್ವ ವಿಸ್ತರಿಸುತ್ತಲೇ ಇದೆ . ಹನ್ನೆರಡರಲ್ಲಿ ಉದಯವಾದ ಆ ಚೇತನ , ನಂತರ ಅಸ್ತವಾಗಲೇ ಇಲ್ಲ;ಆವರಿಸುವ ಗುಣವಿರುವ ಯಾವುದೂ ಅಸ್ತವಾಗಲಾರದು. ಯಾವುದೇ ಆದರೂ ಸಂಕುಚಿತಗೊಳ್ಳುತ್ತಾ ಹೋದರೆ ಮಾತ್ರ , ಅದು ಎಷ್ಟೇ ಧೃಢವೆಂದು ಕಂಡರೂ ಒಂದು ದಿನ ಸಿಡಿದು ನಾಶವಾಗಲೇ ಬೇಕು .
ಅಲ್ಲಮನ ಬಗ್ಗೆ ಚಾಮರಸ ಕಟ್ಟಿ ಕೊಡುವುದು, ಅಪೂರ್ವವನ್ನು ಕಂಡ ದಿಗ್ಭ್ರಾಂತನ ದರ್ಶನವನ್ನು. ದಿಗ್ಭ್ರಾಂತನೆಂದರೆ ಮುಗಿಯಿತು , ಅಲ್ಲಿ ಹುಚ್ಚು, ಬೆಪ್ಪು ಎಲ್ಲ ಇರುತ್ತವೆ.ಆದರೂ ಚಾಮರಸನ ಒಂದು ಮಾತು ಮುಖ್ಯವಾದುದು, ’ ವಿಮಳ ಅಲ್ಲಮ ಸಿಕ್ಕದಾದನು ತಮದ ಮಾಯೆಗೆ’ ಹೌದು ಅಲ್ಲಮ ಅವನ ಚಿಂತನೆಗಳು ಮತ್ತು ನಮ್ಮ ನಡುವೆ ಅಡ್ಡವಾಗಿರುವ ಗೋಡೆಯೇ ಈ ತಮದ ಮಾಯೆ!
ಚಾಮರಸನ ಮಾತನ್ನು ಸರಿಯಾಗಿ ಗ್ರಹಿಸಿದ ಬಿ. ಪುಟ್ಟಸ್ವಾಮಯ್ಯನವರು ,ಅಲ್ಲಮನ ಬಗ್ಗೆ ಕಟ್ಟಿಕೊಡುವ ಕೆಲವು ರೂಪಕಗಳು , ಆಲೋಚನೆಯ ಸ್ತರವನ್ನು ಅಲುಗಾಡಿಸಿ ಮನಸ್ಸನ್ನು ತಲ್ಲಣಗೊಳಿಸಬಲ್ಲವು .ಆದರೆ ಬಿ. ಪುಟ್ಟಸ್ವಾಮಯ್ಯನವರು , ತಾವು ಕಟ್ಟಿಕೊಡುವ ಈ ಚಿತಮಾತ್ರ ಅಲ್ಲಮನದು ಎಂದು ಹೇಳುವುದಿಲ್ಲ ;ಓದುವವನೂ ಅದು ಅಲ್ಲಮನೇ ಎಂದು ಸ್ಪಷ್ಟಪಡಿಸುವಂತೆಯೂ ಇಲ್ಲ; ಅಲ್ಲಮನಲ್ಲವೆಂದು ಹೇಳುವಂತೆಯೂ ಇಲ್ಲ . ಅಲ್ಲಮನ ಜೀವನ , ಅವನ ಸಾಧನೆ ,ಅವನ ಬೆಡಗಿನ ವಚನಗಳು ; ಅಂತೆಯೇ ಬೆಡಗಿನ ವ್ಯಕ್ತಿತ್ವ.ಹೀಗೆ ಕಾಣುವ ಪ್ರಕೃತಿಯಂತೆ , ಕಾಣದ ಪರದಂತೆ ಎಲ್ಲವೂ ತೊಡಕಿನ ನಿಧಿ.
ಕರ್ನಾಟಕದಲ್ಲಿ ನಡೆಯುತ್ತಿದ್ದ ಹನ್ನೆರಡನೆಯ ಶತಮಾನದ ಧಾರ್ಮಿಕ, ಸಾಂಸ್ಕೃತಿಕ, ಆಂದೋಲನಗಳು ; ರಾಜಕೀಯ , ಆರ್ಥಿಕ, ಸಾಮಾಜಿಕ ಜೀವನದ ಅಸ್ಥಿರ ಗತಿಗಳು, ವ್ಯಕ್ತಿತ್ವಗಳ ಅಂತರಂಗದ ತಾಕಲಾಟಗಳು ಇವೆಲ್ಲವನ್ನು ಸಮಗ್ರವಾಗಿ ಕಟ್ಟಿ ಕೊಡುವ ಪ್ರಯತ್ನವೇ ,’ಉದಯರವಿ’ಯಿಂದ ’ ಕ್ರಾಂತಿ ಕಲ್ಯಾಣದವರೆಗಿನ ಸಂಗತಿಗಳು .
ಬಳ್ಳಿಗಾವಿಯ ಕೋಡಿಮಠ , ಪೂರ್ವದಿಂದಲೂ ವಿದ್ವಾಂಸರ ತವರು .ಅಲ್ಲಿ ಅಂದಿನ ಕಾಲಕ್ಕೆ ಪರಿಚಯವಿದ್ದ ಧರ್ಮ , ಸಾಹಿತ್ಯ, ಗಣಿತ , ಖಗೋಳ , ಆಯುರ್ವೇದ ಮುಂತಾದ ಎಲ್ಲ ಜ್ಞಾನ ಶಾಖೆಗಳನ್ನು ಗ್ರಹಿಸಿ , ಪ್ರಚುರಪಡಿಸುತ್ತಿದ್ದ ಪಂಡಿತರ ತಂಡವೇ ಇತ್ತು .ಅವರಲ್ಲಿ ಪ್ರಮುಖವಾದ ಹೆಸರು , ವಾಮಶಕ್ತಿ ಪಂಡಿತ , ಅವರ ಪಾಂಡಿತ್ಯದ ಉದ್ದ ಅಗಲಗಳನ್ನು ಅಳೆಯಲು ಸಾಧ್ಯವೇ ಇಲ್ಲವೆಂದು , ಅಲ್ಲಿನ ವಿದ್ವಾಂಸರೇ ಒಪ್ಪಿಕೊಂಡಿದ್ದರು .ಕಲಿಯಲು ಬಂದ ತರುಣ ಜ್ಞಾನ ಪಿಪಾಸುಗಳಿಗೆ ,ವಾಮಶಕ್ತಿ ಪಂಡಿತರಂತಹ ಜ್ಞಾನನಿಧಿ ದೊರಕಿದುದು ಅವರ ಸುಕೃತವಾಗಿತ್ತು . ಯಾರು ಈ ವಾಮಶಕ್ತಿ ಪಂಡಿತ ? ಇವರ ಪೂರ್ವಾಪರಗಳೇನು ಎಂಬುದೇ ಗೊತ್ತಿಲ್ಲದ ವ್ಯಕ್ತಿ . ಅದನ್ನು ಎದುರಿಗೆ ನಿಂತು ಕೇಳುವ ಧೈರ್ಯವೂ ಯಾರಿಗೂ ಬರದಷ್ಟು ಗಂಭೀರ ವ್ಯಕ್ತಿತ್ವ . ವಿದ್ಯಾರ್ಥಿಗಳಿಗೆ ಬೋಧಿಸುವ ಸಮಯದಲ್ಲಿ , ಗುರು ಶಿಷ್ಯರ ನಡುವೆ ಜ್ಞಾನ ಧಾರೆಯೇ ಹರಿಯುತ್ತಿದೆ ಎಂಬಂತೆ ,ಎರಡು ಹುಬ್ಬುಗಳ ನಡುವೆ ಹೊಳೆಯುವ ಭೃಕುಟಿಯಲ್ಲಿ ಮಿಂಚಂತೆ ಮಿಂಚುವ ಮೂರನೆಯ ಮಿನುಗು , ಎಂಥ ವಿಸ್ಮಯ ?
ದಕ್ಷಿಣಾಪಥೇಶ್ವರರೆಂಬ ಬಿರುದು ಪಡೆದು , ಒಂಭೈನೂರು ವರ್ಷಗಳ ಕಾಲ ,ಶತ್ರು ಸಮೂಹದ ನಡುವೆಯೂ ,ಕೆಚ್ಚಿನ ಕೇಸರಿಗಳಂತೆ ಬಾಳಿದ ಚಾಲುಕ್ಯರು ಜಗದ ನಿಯಮದಂತೆ ಅಸ್ತಮಯ ಸಮಯದತ್ತ ಸರಿಯುತ್ತಿದ್ದರು .ಕೊನೆಯ ಚಕ್ರವರ್ತಿ ತೈಲಪ ತಾನರಿಯದಂತೆಯೆ ತನ್ನ ಸುತ್ತಲೂ ನವಿರಾಗಿ ಆವರಿಸುತ್ತಿದ್ದ ಬಲೆಯಲ್ಲಿ, ಅರಿತೂ ಅರಿಯದಂತೆ ಸಿಲುಕಿಕೊಳ್ಳುತ್ತಲೇ ಇದ್ದ .
ಚಕ್ರವರ್ತಿಯ ರಕ್ಷಣೆಗಾಗಿಯೇ ನಿಯುಕ್ತರಾಗಿದ್ದ ಭಟರು ,ಚಕ್ರವರ್ತಿಯ ಸಮಸ್ತ ಚಲನವಲನಗಳನ್ನೂ ನಿಯಂತ್ರಿಸುತ್ತಿದ್ದರು .ತೈಲಪ ಅವರಿಗೆ ಆಣತಿ ನೀಡುತ್ತಿದ್ದನೋ? ಅವನೇ ಅವರ ಆಣತಿಯಂತೆ ನಡೆದುಕೊಳ್ಳುತ್ತಿದ್ದನೋ? ಅವನಿಗೇ ಅರಿವಿಲ್ಲದಷ್ಟು ಮರವೆ ಅದಾಗಿತ್ತು .ವರ್ತಮಾನವನ್ನು ಸರಿಯಾಗಿ ಗ್ರಹಿಸಿ ಅದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಬಲ್ಲ ಚತುರ ಮಾಂಡಳಿಕ ಬಿಜ್ಜಳ , ಚಕ್ರವರ್ತಿಗಳ ಕೂದಲು ಕೊಂಕದಂತೆ ಕಾಪಾಡುವ ಉದ್ದೇಶದಿಂದಲೇ , ಅವರ ಎಲ್ಲ ಚಲನವಲನಗಳನ್ನೂ ನಿರ್ಬಂಧಗೊಳಿಸಿ , ಅರಮನೆಯ ಅಂತಃಪುರದಲ್ಲಿ ಅವರಿಗೆ ಸಕಲ ಸವಲತ್ತುಗಳನ್ನೂ ಒದಗಿಸಿ ,ಮೊಟ್ಟೆಯೊಳಗಿನ ಮರಿಯಂತೆ ಅವರನ್ನು ಕಾಪಾಡುತ್ತಿದ್ದ . ತೈಲಪ ಸ್ವಾತಂತ್ರವೇ ಇಲ್ಲದ ಬೋನಿನ ಮೃಗದಂತೆ, ಚಡಪಡಿಸುತ್ತಾ ಒದ್ದಾಡುತ್ತಿದ್ದ .
ಚಾಲುಕ್ಯ ಸಾಮ್ರಾಜ್ಯದ ಮುಂದಿನ ಭವಿಷ್ಯವೇನು ? ಎಂಬ ಪ್ರಶ್ನೆ ತೈಲಪನ ಮನಸ್ಸಿನಲ್ಲಿ ಬೃಹದಾಕಾರ ತಳೆದು ಕುಳಿತಿತ್ತು .ಯಾರೊಡನೆಯೂ ಮಾತನಾಡಲು ಸಾಧ್ಯವಾಗುತ್ತಿಲ್ಲ ,ಯಾರೂ ಸಮಸ್ಯೆಯನ್ನು ಅರಿತು ಸಮಾಧಾನ ಹೇಳುವವರೂ ಇಲ್ಲ . ತೈಲಪನಿಗೆ ಹಂಪೆಯ ಹೇಮಕೂಟದಲ್ಲಿದ್ದ ಯೋಗಿಯೊಬ್ಬರು ಅಪಾರ ಮಹಿಮರೆಂದು ತಿಳಿದು ಬಂದಿತ್ತು ,ಅವರನ್ನು ತಾನು ಕಾಣಲೇಬೇಕೆಂದು ತೈಲಪ ಹಠ ಹಿಡಿದ "ಹೋ, ಅದೂ ಒಂದು ಆಗಲಿ,, ಎಂದು ಮಾಂಡಲಿಕರ ವ್ಯಂಗ್ಯಭರಿತ ಒಪ್ಪಿಗೆ ದೊರೆಯಿತು . ( ಮೂಂದುವರಿಯುವುದು)

- Login or register to post comments
- 113 hits
- Email this page





RSS: