Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಮಕ್ಕಳ ರಾತ್ರಿ ಶಿಬಿರ

December 20, 2005 - 7:55pm — tvsrinivas41

ಒಂದನೇಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆವಿಗೆ ಪ್ರಾಥಮಿಕ ಶಾಲೆ ಎಂದು ಹೆಸರಿಸುವರು. ಮಕ್ಕಳು ಮೊದಲು ಪ್ರಾಥಮಿಕ ಶಾಲೆಯ ಮೆಟ್ಟಿಲನ್ನು ಹತ್ತುವರು. ಆಗ ಅವರು ಎಲ್ಲಕ್ಕೂ ಹಿರಿಯರನ್ನು ಅವಲಂಬಿಸುವರು. ನಂತರ ಹೋಗುವುದೇ ಮಾಧ್ಯಮಿಕ ಶಾಲೆಗೆ. ಪ್ರಾಥಮಿಕದಿಂದ ಮಾಧ್ಯಮಿಕಕ್ಕೆ ಹೋಗುವ ಸನ್ನಿವೇಶವೊಂದು ಆಯಾಮ, ಎಂದು ತಿಳಿಯಬಹುದು. ಆಗ ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಬರುವುದು. ಇಂತಹ ಸನ್ನಿವೇಶದಲ್ಲಿ ಮಕ್ಕಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮುಂಬೈನ ಗೋಕುಲಧಾಮ ಶಾಲೆಯವರು ಪ್ರತಿವರ್ಷವೂ ನಾಲ್ಕನೆಯ ತರಗತಿಗೆ ಮಕ್ಕಳಿಗೆ ಒಂದು ರಾತ್ರಿಯ ಶಿಬಿರವನ್ನು ( ನೈಟ್ ಕ್ಯಾಂಪ್ ) ಏರ್ಪಡಿಸುತ್ತಾರೆ.

ಈ ಬಾರಿಯ ಶಿಬಿರಕ್ಕೆ ನನ್ನ ಮಗನು ಹೋಗಿದ್ದ. ಅದರ ಬಗ್ಗೆ ನನ್ನ ಒಂದೆರಡು ಮಾತುಗಳನ್ನು ನಿಮ್ಮ ಮುಂದಿಡುತ್ತಿರುವೆ.

ನಾಲ್ಕನೆ ಇಯತ್ತೆಯವರೆಗಿನ ಮಕ್ಕಳಿಗೆ ಮಧ್ಯಾಹ್ನದ ಶಾಲೆ. ಮಾಧ್ಯಮಿಕ, ಪ್ರೌಢ ಶಾಲೆಗಳು ಬೆಳಗ್ಗೆ ೭ ಘಂಟೆಗೆ ಪ್ರಾರಂಭವಾಗುವುವು. ಶುಕ್ರವಾರ ರಾತ್ರಿ ಶಿಬಿರ ಇದ್ದುದರಿಂದ ಅಂದು ಶಾಲೆಗೆ ರಜೆ ಘೋಷಿಸಿದ್ದರು. ಈ ಮಕ್ಕಳಿಗೆ ಹೊದ್ದಿಕೆ ಮತ್ತು ಕುಡಿಯುವ ನೀರಿನ ಬಾಟಲು ಮಾತ್ರ ತರಬೇಕೆಂದು ತಿಳಿಸಿದ್ದರು. ರಾತ್ರಿಯ ಉಡುಪಿನಲ್ಲಿ ಬರಬೇಕೆಂದೂ ತಿಳಿಸಿದ್ದರು. ಅಂದಿನ ದಿನವೆಲ್ಲಾ ನನ್ನ ಮಗನಿಗೆ ಶಿಬಿರದ್ದೇ ಧ್ಯಾನ. ಊಟ ತಿಂಡಿಯನ್ನೂ ಸರಿಯಾಗಿ ತಿಂದಿರಲಿಲ್ಲ. ಶಿಬಿರದ್ದೇ ಯೋಚನೆ. ಅಲ್ಲಿ ಯಾರ್‍ಯಾರ ಜೊತೆ ಆಡಬೇಕು, ಯಾರು ಪಕ್ಕದಲ್ಲಿ ಮಲಗಬೇಕು, ಯಾರೊಂದಿಗೆ ದ್ವೇಷವಿದ್ದು ರಾತ್ರಿ ಹೊಡೆದಾಡಬಹುದು (ನಮ್ಮವನು ಸ್ವಲ್ಪ ಧಡೂತಿ ಹುಡುಗ), ಇವುಗಳದ್ದೇ ಆಲೋಚನೆ.

ಸಂಜೆ ೫.೩೦ಕ್ಕೆ ಅವರು ಶಾಲೆಗೆ ಹೋಗಬೇಕಿತ್ತು. ನಮ್ಮ ಕ್ವಾರ್ಟರ್ಸಿನಿಂದ ಕಲ್ಲೆಸೆತದ ದೂರದಲ್ಲೇ ಶಾಲೆ. ಇವನು ೪.೩೦ಕ್ಕೇ ಅವರಮ್ಮನಿಗೆ ಶಾಲೆಗೆ ಕರೆದೊಯ್ಯಿ ಎಂದು ದುಂಬಾಲು ಬಿದ್ದಿದ್ದ. ಯಾವ ಮಕ್ಕಳೂ ಬಂದಿರುವುದಿಲ್ಲವೆಂದೂ ಈಗಲೇ ಒಳಗೆ ಬಿಡುವುದಿಲ್ಲವೆಂದು ಹೇಳಿದರೂ ಮಾತನ್ನು ಕೇಳಿರಲಿಲ್ಲ. ಕಾಟ ತಡೆಯಲಾರದೇ ಕಡೆಗೆ ೫ ಘಂಟೆಗೆ ಅವನನ್ನು ಶಾಲೆಗೆ ಕರೆದೊಯ್ಯಲೇಬೇಕಾಯ್ತು. ಒಳಗೆ ಬಿಡದ ಕಾರಣ ೧೫ ನಿಮಿಷಗಳ ಕಾಲ ಗೇಟಿನ ಮುಂಭಾಗದಲ್ಲೇ ನಿಲ್ಲಬೇಕಾಯ್ತು. ಇವನಂತೆಯೇ ಇನ್ನೂ ಬಹಳ ಮಕ್ಕಳು ಬಂದಿದ್ದರು.

ಅಂದು ಶಾಲೆಯಲ್ಲಿ ಮಕ್ಕಳನ್ನು ನೋಡುವುದೇ ಒಂದು ಚಂದ. ಪ್ರತಿ ದಿನವೂ ಒಂದೇ ತರಹದ ಸಮವಸ್ತ್ರ ಧರಿಸಿರುತ್ತಿದ್ದ ಚಿಣ್ಣರು ಅಂದು ಬಣ್ಣ ಬಣ್ಣದ ತರಹಾವರಿ ಬಟ್ಟೆಗಳನ್ನು ಹಾಕಿ ಕೂಗಿ ಚೀರಾಡುತ್ತಿದ್ದರು. ಮಾಸ್ತರರು ಅಂದೇನೂ ನಿರ್ಬಂಧ ಹಾಕುವುದಿಲ್ಲವೆಂದು ತಿಳಿಸಿದ್ದರಿಂದಲೋ ಏನೋ ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕ ಅನುಭವ. ಮನೆಗೆ ವಾಪಸ್ಸು ಬಂದ ನನ್ನ ಪತ್ನಿಗೆ ಅವನದ್ದೇ ಚಿಂತೆ. ಅವನು ಏನಾದರೋ ತಿಂದನೋ ಇಲ್ಲವೋ, ಯಾರ ಜೊತೆ ಹೊಡೆದಾಡಿ ಮಾಸ್ತರರಿಂದ ಏಟು ತಿಂದಿರಬಹುದು, ಎಲ್ಲಿಯಾದರೂ ಬಿದ್ದು ಅಳುತ್ತಿದ್ದಾನೋ - ಹೀಗೆ ಹತ್ತು ಹಲವಾರು ಚಿಂತೆಗಳು ಅವಳಿಗೆ.

ಸಂಜೆ ೭.೩೦ಕ್ಕೆ ನಾನು ಮನೆಗೆ ಬರುತ್ತಿದ್ದ ಹಾಗೆಯೇ ಶಾಲೆಗೆ ಹೋಗಿ ಅವನ ಯೋಗಕ್ಷೇಮ ವಿಚಾರಿಸುವ ಡ್ಯೂಟಿ ಬಿದ್ದಿತು. ನಾನು ಶಾಲೆಯ ಗೇಟಿನ ಬಳಿಗೆ ಹೋಗಲು ಸೆಕ್ಯುರಿಟಿಯವರು ತಡೆದರು. ಶಾಲೆಯ ಬದಿಯಲ್ಲಿ ದೊಡ್ಡದಾದ ಆಟದ ಮೈದಾನ. ಅದರ ಹಿಂದೆ ಈಜುಕೊಳ. ಮಕ್ಕಳೆಲ್ಲರೂ ಅಲ್ಲಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಕೆಲವರು ಕ್ರಿಕೆಟ್ ಆಡುತ್ತಿದ್ದರೆ, ಇನ್ನೂ ಕೆಲವರು ಬುಗುರಿ ಆಡುತ್ತಿದ್ದಾರೆ (ನನ್ನ ಮಗನಿಗೆ ಬೇಬ್ಲೇಡ್ ಇಷ್ಟ). ಮತ್ತೂ ಕೆಲವರು ಜೂಟಾಟ. ಆ ದೃಶ್ಯ ನೋಡುತ್ತಿದ್ದರೆ ನಾನೂ ಚಿಕ್ಕವನಾಗಿ ಅವರೊಂದಿಗೆ ಆಟವಾಡಬೇಕು ಎನ್ನಿಸುತ್ತಿತ್ತು. ಗೇಟಿನಿಂದಲೇ ನನ್ನ ಮಗನನ್ನು ಕರೆಯಲು ಪ್ರಯತ್ನಿಸಿದೆ. ಸ್ಕೂಲಿನ ಎಲ್ಲ ಮಾಸ್ತರು ಮಾಸ್ತರಿಣಿಯರೂ ಅಲ್ಲಿ ಭದ್ರ ಕೋಟೆಯಂತೆ ನಿಂತಿದ್ದರು. ಗೇಟಿನಿಂದಲೇ ನನ್ನ ಮಗನನ್ನು ಕರೆದೆ. ನನ್ನ ಮಗನೊಬ್ಬನನ್ನು ಬಿಟ್ಟು ಮಿಕ್ಕವರೆಲ್ಲರೂ ನನ್ನೆಡೆಗೆ ನೋಡಿದರು. ಮಗನ ಒಬ್ಬ ಸ್ನೇಹಿತ ನಾನು ಬಂದಿರುವುದರ ಬಗ್ಗೆ ಅವನಿಗೆ ತಿಳಿಸಿದ. ಇವನು ನೋಡಲು ವ್ಯವಧಾನವೇ ಇಲ್ಲ. ಅವನ ತುಂಟಾಟಗಳಿಗೆ ನಾನಿನ್ನೆಲ್ಲಿ ಕಡಿವಾಣ ಹಾಕುವೆನೋ ಎಂದು ನನ್ನನ್ನು ನಿರ್ಲಕ್ಷಿಸಿದ್ದ. ಆದರೂ ಬಿಡದೇ ಅಲ್ಲಿಯೇ ಇದ್ದ ಒಬ್ಬ ಮಾಸ್ತರಿಣಿಗೆ ಮಗನಿಗೆ ಏನೋ ಹೇಳಬೇಕೆಂದು ತಿಳಿಸಿದಾಗ ಅವರು ಅವನನ್ನು ಗೇಟಿನ ಬಳಿಗೆ ಕಳುಹಿಸಿದ್ದರು. ಬರುವಾಗಲೇ ದುರುಗುಟ್ಟಿಕೊಂಡು ಬಂದಿದ್ದ ಮಗರಾಯ. ಊಟಕ್ಕೆ ಏನೇನು ಕೊಡ್ತಾರೆ ಅಂತ ಅಷ್ಟೇ ಕೇಳಿ ಅವನನ್ನು ವಾಪಸ್ಸು ಕಳುಹಿಸಿದ್ದೆ. ಅವನನ್ನು ಮಾತನಾಡಿಸಲು ನನಗಿದ್ದ ಉದ್ದೇಶವಿಷ್ಟೇ, ಮರುದಿನ ಮನೆಗೆ ಬಂದ ನಂತರ ನನ್ನ ಪತ್ನಿಗೆ ಅವನು ಅಪ್ಪ ಬಂದಿದ್ರು, ಮಾತನಾಡಿಸಿದ್ರು ಅಂತ ಹೇಳಿದ್ರೆ ಸಾಕು. ಅಂದು ರಾತ್ರಿಯೆಲ್ಲ ಮನೆಯಲ್ಲಿ ನನ್ನ ಪತ್ನಿ ಮತ್ತು ಮಗಳಿಗೆ ನಿದ್ರೆಯೇ ಇಲ್ಲ. ನನ್ನ ಮಗನದ್ದೇ ಚಿಂತೆ. ನಾನೊಬ್ಬನೇ ನಿಶ್ಚಿಂತೆಯಾಗಿ ನಿದ್ರಿಸಿದವನು. ಹುಟ್ಟಿಸಿದಾತ ಕಾಪಾಡುವುದಿಲ್ಲವೇ ಎಂಬುದೇ ನನ್ನ ಪಾಲಿಸಿ.

ಸಂಜೆ ೫.೩೦ ರಿಂದ ೭ ರವರೆವಿಗೆ ಅವರಿಗೇ ಆಟ ಆಡಲು ಬಿಟ್ಟಿದ್ದರಂತೆ. ನಂತರ ಬಿಸ್ಕಿಟ್ ಮತ್ತು ಹಣ್ಣಿನ ರಸ ಕೊಟ್ಟು ಮೈದಾನದಲ್ಲಿ ಆಟ ಆಡಿಸಿ ಹಾಡುಗಳನ್ನು ಹಾಡಿಸಿದರಂತೆ. ನಂತರ ಪುಷ್ಕಳವಾದ ಉತ್ತರ ಭಾರತೀಯ ಊಟ ಕೊಟ್ಟಿದ್ದಾರೆ. ರಾತ್ರಿ ೯.೩೦ ಕ್ಕೆ ಮೈದಾನದ ಮಧ್ಯ ಭಾಗದಲ್ಲಿ ದೊಡ್ಡ ಬೆಂಕಿ ಹಾಕಿದ್ದಾರೆ - ಇದನ್ನು ಬಾನ್ ಫೈರ್ ಎನ್ನುವರಂತೆ. ಕಾಮನ ದಹನ ಮಾಡಿದಂತೆ. ಆ ನಂತರ ೧೦ ಘಂಟೆಗೆ ಶಾಲೆಯ ಹಿಂದಿನ ರಸ್ತೆಯ ಕಡೆಯಿಂದ ಒಂದು ದೊಡ್ಡ ಸುತ್ತು ಹೋಗಿ ಬರಲು ತಿಳಿಸಿದರಂತೆ. ಮಾಸ್ತರರು, ಮಾಸ್ತರಿಣಿಯರು ಇವರ ಕಣ್ಣಿಗೆ ಕಾಣದಂತಿದ್ದು ರಾತ್ರಿಯಲ್ಲಿ ಹೆದರದೇ ಓಡಾಡಲು ಅಭ್ಯಾಸವಾಗುವಂತೆ ಮಾಡಿದ್ದಾರೆ. ರಾತ್ರಿ ೧೧.೩೦ಕ್ಕೆ ಮಲಗಲು ಕಳುಹಿಸಿದ್ದಾರೆ. ಮಲಗಲು ಅನುಕೂಲವಾಗುವಂತೆ ತರಗತಿಗಳಲ್ಲಿ ಹಾಸುಗೆಗಳನ್ನು ಹಾಸಿ ಹೊದ್ದಿಕೆ ಸಿದ್ಧ ಪಡಿಸಿದ್ದರು. ರಾತ್ರಿಯಲ್ಲಿ ಇವರು ಎದ್ದು ಗಲಾಟೆ ಮಾಡಿಯಾರೆಂದು ಮಾಸ್ತರು, ಮಾಸ್ತರಿಣಿಯರ ಕಾವಲು. ಮತ್ತೆ ಬೆಳಗ್ಗೆ ೫ಕ್ಕೆ ವಿಶಲ್ ಊದಿ ಎಲ್ಲರನ್ನೂ ಎಬ್ಬಿಸಿ ಬೆಳಗಿನ ಓಟದ ಅಭ್ಯಾಸ ಮಾಡಿಸಿದ್ದಾರೆ.
ಆರು ಘಂಟೆಗೆ ಬಂದು ಮಕ್ಕಳನ್ನು ಕರೆದೊಯ್ಯಲು ತಿಳಿಸಿದ್ದರು. ನಾನು ೫.೪೫ಕ್ಕೇ ಅಲ್ಲಿಗೆ ಹೋಗಿದ್ದೆ. ನೋಡಿದರೆ ಮಕ್ಕಳೆಲ್ಲಾ ಆಗಲೇ ತಯಾರಾಗಿ ಶಾಲೆಯ ಅಂಗಳದಲ್ಲಿ ಕುಳಿತಿದ್ದಾರೆ. ನನ್ನ ಮಗ ನನ್ನನ್ನು ನೋಡಿದಂತೆಯೇ ಏನೋ ವಿಜಯ ಸಾಧಿಸಿದವನ ಹಾಗೆ ನಗೆ ಬೀರಿದ. ಮಾಸ್ತರರು ನನ್ನನ್ನು ನೋಡಿ ಅವನಿಗೆ ನನ್ನೊಡನೆ ಹೋಗಲು ತಿಳಿಸಿದರು.

ನನ್ನ ಹತ್ತಿರ ಬರುತ್ತಿದ್ದ ಹಾಗೆ ನನ್ನ ಮಗ ಮೊದಲು ಹೇಳಿದ್ದು, ಇನ್ಮೇಲೆ ನನಗೆ ನಾನೇ ಸ್ಕೂಲಿಗೆ ಬರ್ತೀನಿ, ಯಾರೂ ನನ್ಜೊತೆ ಬರ್ಬೇಕಾಗಿಲ್ಲ, ನಾನೀಗ ದೊಡ್ಡವನಾಗಿದ್ದೀನಿ, ರಾತ್ರಿ ಕೂಡಾ ನಾನೊಬ್ನೇ ಎಲ್ಲೂ ಹೋಗಬಹುದು. ಅಷ್ಟು ಧೈರ್ಯ ಬಂದಿದೆ. ಇಷ್ಟು ಹೇಳಿದ ಭೂಪ ಮನೆಗೆ ಬಂದು ಅವನಮ್ಮನ ಮುಖ ನೋಡಿದ ಕೂಡಲೇ ಅದೆಲ್ಲಿಯದೋ ದು:ಖ ಉಮ್ಮಳಿಸಿ ಬಂದು ಗೊಳೋ ಎಂದು ಅಳೋದೇ! ಎಷ್ಟೇ ಆಗಲಿ, ಮಕ್ಕಳ ಮನಸ್ಸೇ ಹಾಗೆ.

ಇಂತಹ ತರಬೇತಿಗಳನ್ನೇ ಅಲ್ಲವೇ ಮಕ್ಕಳಿಗೆ ನಾವು ಕೊಡಬೇಕಿರುವುದು. ಜೀವನದ ಪಾಠವ ಅನುಭವಸಿದ್ಧವಾಗಿ ತಿಳಿಸಿಕೊಟ್ಟರೆ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವ ಶಕ್ತಿ ಬಂದೀತು.

ಶಾಲೆಯವರ ಇಂತಹ ಕಾರ್ಯಗಳು ಪ್ರಶಂಸನೀಯವಲ್ಲದೇ ಮತ್ತಿನ್ನೇನು? ಇಂತಹ ಶಾಲೆಗಳು ಇನ್ನೂ ಹೆಚ್ಚು ಹೆಚ್ಚು ಬರಬೇಕು. ಈ ಶಾಲೆಯ ಇನ್ನೊಂದು ವೈಶಿಷ್ಟ್ಯತೆ ಎಂದರೆ ಈಜು, ಕರಾಟೆ, ಸಂಗೀತ, ಆಟಗಳು ಇತ್ಯಾದಿಗಳಲ್ಲಿ ಒಂದನ್ನು ಮಕ್ಕಳು ಅವಶ್ಯಕವಾಗಿ ಕಲಿಯಬೇಕು. ನನ್ನ ಮಗನನ್ನು ಈಜುವಿಕೆಗೆ ಕಳುಹಿಸುತ್ತಿರುವೆ. ನೀರಿನಲ್ಲಿ ಈಜಲು ಕಲಿತವನು ಜೀವನದಲ್ಲೂ ಈಜಬಹುದೆಂಬ ಅನಿಸಿಕೆಯಲ್ಲಿ.

  • ಪ್ರಬಂಧ
Ornamental seperator
  • Login or register to post comments
  • 843 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 20, 2005 - 10:30pm — Sunil Jayaprakash

ಸ್ವಂತ ಅನುಭವ

Sunil Jayaprakash's picture

ಶ್ರೀನಿವಾಸರೇ, ನೀವು ಬರೀ ಕವನವಷ್ಚೇ ಅಲ್ಲ, ನಿರೂಪಣೆಯನ್ನೂ ಚೆನ್ನಾಗೆ ಬರೆಯುತ್ತೀರಿ.

ನಿಜವಾಗಿಯೂ ನಿಮ್ಮ ಮಗನ ಶಾಲೆಯವರು ಮಾಡಿದ ಕೆಲಸ ಉಚಿತವಾಗೇ ಇದೆ. ಓದಿಗಿಂತ ಹೆಚ್ಚಾಗಿ ನಮಗೆ ಬೇಕಿರುವುದೇ ಇಂತಹ ಚಟುವಟಿಕೆಗಳು ಹಾಗು ಒಡನಾಟಗಳು (exposure ಗೆ ಸಮನಾಗಿ ಉಪಯೋಗಿಸಿರುವೆ. ಸರಿಯೇ?).

ನನ್ನ ಸ್ವಂತ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ನನಗೆ ಹತ್ತನೇ ಇಯತ್ತಿನ ತನಕ ಸೈಕಲ್ ತುಳಿಯುವುದಕ್ಕೂ ಬರುತ್ತಿರಲಿಲ್ಲ.  ಅನಿವಾರ್ಯ ಕಾರಣಗಳಿಗೆ ಕೇವಲ ಒಂದು ವರ್ಷದ ಮಟ್ಟಿಗೆ ನಾವು ತುಮಕೂರಿಗೆ ಮನೆ ಸಾಗಿಸಬೇಕಾಯಿತು. ನನ್ನ ಜೀವನದಲ್ಲಿ ಆ ಒಂದು ವರ್ಷ ನನ್ನ ಬಾಳ ಅಧ್ಯಾಯದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಪುಟಗಳಾದವು.
ತುಮಕೂರು ನನ್ನ ಜೀವನಕ್ಕೆ ಭದ್ರ ಬುನಾದಿಯನ್ನೊದಗಿಸಿದ ಕಲ್ಪತರು ನಾಡು. ನನ್ನ ಶಾಲೆ ಸ್ವಲ್ಪ ದೂರದಲ್ಲಿದ್ದ ಕಾರಣ ನನ್ನ ತಂದೆ ಒಂದು ಸೈಕಲ್ ಕೊಡಿಸಿದರು. ಸಣ್ಣವನಿದ್ದಾಗ ನನ್ನ ಅಣ್ಣ ಒಂದೆರೆಡು ಬಾರಿ ಕೈಹಿಡಿದು ಬಾಡಿಗೆ ಸೈಕಲ್ ಹೊಡಿಸಿದ್ದ. ಆದರೆ ನಾನೇನು ಒಳ್ಳೆಯ ಅಭ್ಯಾಸ ಮಾಡಿರಲಿಲ್ಲ. ಈಗ ನೋಡಿದರೆ, ನನ್ನ ಬಳಿ ಸೈಕಲ್ ಇದೆ, ಹೇಳಿಕೊಡುವವರು ಯಾರು ಇಲ್ಲ. ಏನು ಮಾಡುವುದು. ಸರಿ ನಮ್ಮ ಮನೆಬಳಿಯಿದ್ದ ಖಾಲಿ ಸೈಟಿನಲ್ಲಿ ನಾನೇ ಅಭ್ಯಾಸ ಆರಂಭಿಸಿದೆ. ಏನೊ, ಸುಮಾರಾಗಿ ಕಲಿತೆ. ಒಂದು ದಿನ, ಸರಿ ನೋಡು ಸಕತ್ತಾಗಿ ಸೈಕಲ್ ತುಳಿತೀನಿ ಅಂತ ನಮ್ಮಣ್ಣನ್ನ ಕರೆದುಕೊಂಡು ಹೋದೆ, ಎರಡು ಹೆಜ್ಜೆ ಹೋಗುವಷ್ಟರಲ್ಲಿ ಯಾರಿಗೊ ಡಿಕ್ಕಿ ಹೊಡೆದೆ. ಅವರು ಅದೇ ತಾನೆ ಹೊಸ ಪ್ಯಾಂಟ್ ಧರಿಸಿ ಹೊರ ಬಂದಿದ್ದರು ಅವರ ಪ್ಯಾಂಟ್ ಹರಿಯಿತು. ನನ್ನ ಕೈಯಲ್ಲಿ ರಕ್ತ ಚಿಮ್ಮಿತು.ಇದಾಗಿದ್ದು ಭಾನುವಾರ. ನಮ್ಮ ತಂದೆ ಹೇಳಿದರು, ಎದೆಗುಂದಬೇಡ ಎಂದು. ಮಾರನೇ ದಿನವೇ ನಾನು ಸೈಕಲ್ ತುಳಿದು ಶಾಲೆಗೆ ಹೊರಟೆ. ಮಾರ್ಗದಲ್ಲೇನಾಯಿತು ಎಂಬುದನ್ನ ನಾಳೆ ತಿಳಿಸುತ್ತೇನೆ.
____________________________
ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ  ಜೀವನ.

  • Login or register to post comments
  • link
  • Email this ಪ್ರತಿಕ್ರಿಯೆ
December 21, 2005 - 9:39am — tvsrinivas41

ನಿರೀಕ್ಷೆ

tvsrinivas41's picture

ನಿಮ್ಮ ಧಾರಾವಾಹಿಯ ರೋಚಕ ಕ್ಷಣಗಳಿಗೆ ಎದುರು ನೋಡುತ್ತಿರುವೆ. ನೀವು ತಿಳಿಸಿದಂತೆ
ಒಡನಾಟದಿಂದಲೇ ಜೀವನದ ಕಲಿಕೆ ಸಿಗುವುದು.

ನಿಮ್ಮ ಸೈಕಲ್ ಆಕಸ್ಮಿಕದಿಂದ ನಿಮ್ಮ ತಂದೆ ನಿಮ್ಮನ್ನು ಬೈಯುವ ಬದಲು ಪ್ರೋತ್ಸಾಹಿಸಿದ್ದರಲ್ಲ - ಅದೇ ಉತ್ತಮ ಗುಣ. ಅದರಿಂದಲೇ ಕಲಿಕೆಗೆ ಹೆಚ್ಚಿನ ಒತ್ತು ಸಿಗುವುದು.

ಕ್ಲೈಮಾಕ್ಸ್‍ಗೆ ಕಾಯ್ತಾ ಇದ್ದೀನಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
December 21, 2005 - 5:30pm — Sunil Jayaprakash

ಸ್ವಂತ ಅನುಭವ ೨

Sunil Jayaprakash's picture

ನಿಮಗೆಲ್ಲರಿಗೂ ತಿಳಿದ ಹಾಗೆ ನಾನು, ಅಂದು ಸೋಮವಾರ, ಸೈಕಲ್ ತುಳಿಯುತ್ತಾ ಪುಳಕಿತನಾಗಿ ಶಾಲೆಗೆ ಹೊರಟೆ. ಆಹಾ , ಎಷ್ಟೊಂದು ಹುರುಪು. ಜಗತ್ತನ್ನೆ ಗೆದ್ದ ಖುಷಿ. ತುಳಿಯುತ್ತಿದ್ದೇನೆ, ತುಳಿಯುತ್ತಿದ್ದೇನೆ, ¬ಂಚೂರು ಸುಸ್ತಿಲ್ಲ. ಅಗೋ, ನನ್ನ ಪಕ್ಕದಲ್ಲಿ ಯಾವುದೊ ವಾಹನ (ಕಾರೆಂದು ಆಮೇಲೆ ಗೊತ್ತಾಯಿತು) ವೇಗವಾಗಿ ಹೋಗುತ್ತಿತ್ತು. ಸಖತ್ ಭಯ ಆಯ್ತು. ಆ ದಿನದ ಶೂರನಾದ ನಾನು ಅದ್ಯಾವ ಬುದ್ದಿ ಅದೆಲ್ಲಿಂದ ಬಂತೋ ಗೊತ್ತಿಲ್ಲ ಸೈಕಲ್ ತುಳಿಯುವುದನ್ನು ಬಿಟ್ಟು, ಕಾರ್ ಬಾಗಿಲನ್ನು ಹಿಡಿದೆ. ಸಿನಿಮಾ ಅಲ್ಲ ಸ್ವಾಮಿ ನಿಜವಾಗಿಯೂ ಹಿಡ್ಕೊಳ್ಳಕ್ಹೋಗಿದ್ದೆ. ಬಿದ್ದೆ ನೋಡಿ ಮೈ, ಕೈ, ಎಲ್ಲ ರಕ್ತ ಮಯ. ಕಾರ್ ನವನು ಬಂದು, ಸೈಕಲ್ ತುಳಿಯೋಕ್ಕೆ ಬರದಿದ್ರೆ ಯಾಕೋ ಬಂದೆ ಎಂದ. ನನಗೆ ನಗೂ ಅಂದ್ರೆ ನಗು. ಹೌದು ನನ್ನನ್ನ ನೋಡಿ ನನಗೇ ನಗು ಬರ್ತಿದೆ. ಅಲ್ಲ ಯಾವಾನಾದ್ರು ಚಲಿಸುತ್ತಿರುವ ಕಾರ್ ಹಿಡಿಯುತ್ತಾರೆಯೇ. ಇರಲಿ, ಆ ದಿನ ಸರಿ ಶಾಲೇಲಿ ಉಪಚಾರವಾಯ್ತು. ಕರುಣೆ ಗಿಟ್ಟಿಸಿದ್ದಾಯ್ತು. ಎಲ್ಲಾ ಆಯ್ತು. ಮಾರನೇ ದಿನ ಮತ್ತೆ ಎದೆಗುಂದದೆ, ಸೈಕಲಲ್ಲೇ ಹೊರಟೆ. ಆ ದಿನ ಏನಾಯ್ತು ಗೊತ್ತೇ

  • Login or register to post comments
  • link
  • Email this ಪ್ರತಿಕ್ರಿಯೆ
December 21, 2005 - 7:58pm — tvsrinivas41

ಇದು ಏಕೆ ಹೀಗೆ?

tvsrinivas41's picture

ನನಗೂ ಹೀಗೆ ಹಲವು ಬಾರಿ ಆಗಿದೆ. ಪಕ್ಕದಲ್ಲಿ ಯಾವುದೇ ವಾಹನಗಳು ಹೋಗ್ತಿದ್ರೆ ಹಿಡಿದುಕೊಳ್ಳಬೇಕು ಅನ್ನಿಸುತ್ತದೆ. ಚಿಕ್ಕವನಿದ್ದಾಗ ಸೈಕಲ್‍, ಸ್ಕೂಟರ್‍ಗಳು ಪಕ್ಕದಲ್ಲಿ ಸಾಗಿದರೆ ತನ್ನಂತಾನೇ ಅದನ್ನು ಹಿಡಿಯಲು ಕೈ ಹೋಗ್ತಿತ್ತು. ಒಮ್ಮೆ ಸ್ಕೂಟರ್ ಹಿಡಿಯಲು ಹೋಗಿ ಬಿದ್ದಿದ್ದೆ. ಅಂದಿನಿಂದ ಈ ದುರಭ್ಯಾಸ ನಿಂತುಹೊಯ್ತು.

ನಿಮ್ಮ ಧಾರಾವಾಹಿ ಹೆಚ್ಚಿನ ಆಸಕ್ತಿ ಉಂಟು ಮಾಡ್ತಿದೆ. ಈಗ ನಿಮಗೆ ಚೆನ್ನಾಗಿ ಸೈಕಲ್ ಹೊಡೆಯಲು ಬರುತ್ತದೆ ಅನ್ನಿಸುತ್ತದೆ. ಇಂದು ತಿಳಿಸಿದಂತೆ ಎರಡು ಮೂರು ಘಟನೆಗಳು ನಡೆದ್ರೆ ಪಕ್ವತೆ ಬಂದಿರುತ್ತದೆ.

ಮುಂದಿನ ಕಂತಿಗೆ ಕಾಯುತ್ತಿರುವೆ. ಇನ್ನೂ ಹೆಚ್ಚು ಆಸಕ್ತಿಯುತವಾಗಿರುತ್ತದೆ ಎಂದು ಆಶಿಸುವೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • Email this ಪ್ರತಿಕ್ರಿಯೆ
December 21, 2005 - 10:44pm — Sunil Jayaprakash

ಸ್ವಂತ ಅನುಭವ ೩

Sunil Jayaprakash's picture

ಸ್ವಂತ ಅನುಭವ ೩
ಸರಿ, ಮಂಗಳವಾರ ಮತ್ತೆ ಸೈಕಲ್ ತುಳಿಯುತ್ತಾ ಹೊರಟೆ, ಹೋದೆ, ನಮ್ಮ ಶಾಲೆ ಹೇಗಿತ್ತೆಂದರೆ, ೧೦ ಘಂಟೆಯ ತನಕ ಯಾರನ್ನೂ ಒಳಗಡೆ ಬಿಡುತ್ತಿರಲಿಲ್ಲ. ಆದ್ದರಿಂದ ನಾವೆಲ್ಲರೂ ಶಾಲೆಯೆದುರಿಗಿದ್ದ ಖಾಲಿ ಜಾಗದಲ್ಲಿ ನಿಂತಿರುತ್ತಿದ್ದವು. ನಾನೂ ನಿಂತಿದ್ದೆ. ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ. ನನಗನ್ನಿಸಿದ್ದು ಏನಪ್ಪಾ ಅಂದ್ರೆ.
೧. ನಾನು ಹೊಸಬನಾದ್ದರಿಂದ ಹಾಗೆ ನೋಡುತ್ತಿದ್ದಾರೆ.
೨. ಮೈ ಕೈ ಗಾಯಮಾಡಿಕೊಂಡಿರುವ ಕಾರಣ ಹಾಗೆ ನೋಡುತ್ತಿದ್ದಾರೆ.
೩. ಹಿಂದಿನ ದಿನವಷ್ಟೇ ನಮ್ಮ ಸಂಸ್ಕೃತ ಮೇಷ್ಟ್ರು (ಪಂಡಿತರು ಅಂತ ಸಂಭೋದಿಸುತ್ತಿದ್ದೆವು. ಅವರಿಗೆ ೮೩ ವಸಂತಗಳು ಆಗ) ನನನ್ನು ಹೊಗಳಿದ್ದರು. ಅದಕ್ಕೆ ನೋಡುತ್ತಿದ್ದರೆ ಗೊತ್ತಿಲ್ಲ.

ಆಗ ಹಿಂದಿನ ದಿನ ಪರಿಚಯವಾಗಿದ್ದ ಒಬ್ಬ ಸ್ನೇಹಿತ ಬಂದು, ನಿನಗೆ ಅಕ್ಕಾನೋ, ತಂಗೀನೋ ಇದ್ದಾರಾ ಎಂದ. ಇದೆಂಥ ಪ್ರಶ್ನೆ. ಇರಲಿ, ಇಲ್ಲ ಎಂದೆ. ಮತ್ತೆ ಯಾಕೆ, Ladies cycle ತೊಗೊಂಡಿದ್ಯಾ ಅಂತ ಕೇಳೋದೇ?
ಅರೇ, ಅಂದೇ ನನಗೆ ಗೊತ್ತಾದ್ದು, ಸೈಕಲ್ ಗಳಲ್ಲೂ ಲಿಂಗಭೇದವಿದೆಯೆಂದು. ಎಲ್ಲರೂ ೩೦ ಬಿಟ್ಟು ನಕ್ಕಿದ್ದರು. (ಹಲ್ಲುಗಳು ೩೨ ಅಲ್ಲವೇ ಎಂದು ಕೇಳಬೇಡಿ, ಆಗ ಇನ್ನು Wisdow ಹಲ್ಲು ಬಂದಿರಲ್ಲ ಅನ್ಸುತ್ತೆ). ನಾನೂ ನಕ್ಕಿದ್ದೆ.
ಆ ದಿನ ನಮ್ಮ ಪಂಡಿತರು ಒಂದು ಸುಭಾಷಿತ, ಹೇಳಿದ್ದರು,
ಸ್ವಗೃಹೆ ಪೂಜ್ಯತೆ ಮೂರ್ಖ:
ಸ್ವಗ್ರಾಮೆ ಪೂಜ್ಯತೆ ಪ್ರಭು:
ಸ್ವದೇಶೆ ಪೂಜ್ಯತೆ ರಾಜಾ,
ವಿದ್ವಾನ್ ಸರ್ವತ್ರ ಪೂಜ್ಯತೆ

ಅಂದೇ ತೀರ್ಮಾನಿಸಿದೆ, ಸೈಕಲ್ ಹುಡುಗಿಯರದ್ದು ಅಂತ ನಾನೇಕೆ ವ್ಯಥೆಪಡಬೇಕು. ನನಗೆ ಶಾಲೆಗೆ ಬರಲು ಒಂದು ಸಾಧನ ಬೇಕು, ಇದೆಯಷ್ಟೇ. ಯಾರು ನಕ್ಕರೆ ನನಗೇನು, ನಕ್ಕರೆ ಅವರೊಂದಿಗೆ ನಾನೂ ನಗುವೆನೆಂದು ತೀರ್ಮಾನಿಸಿಬಟ್ಟೆ. ಆ ವರ್ಷವಿಡೀ ಹುಡುಗಿಯರ ಸೈಕಲ್ಲನ್ನೇ ಉಪಯೋಗಿಸಿದೆ(ಅಂದಹಾಗೆ, ಅದು ನನ್ನದೇ ಸೈಕಲ್ಲು, ಬೇರೆಯವರದಲ್ಲ ಮತ್ತೆ). ನನಗನ್ನಿಸುತ್ತೆ ಇಂತಹ ಅನುಭವಗಳೇ ನಮ್ಮನ್ನ ಜಾಗೃತಗೊಳಿಸುವುದು.  ಅದಕ್ಕೇ "ಅರಿವೇ ಗುರು" ಎನ್ನುತ್ತಾರೆಯೇ. ಗೊತ್ತಿಲ್ಲ.

ನಾನು ಇದನ್ನೆಲ್ಲ ಏಕೆ ಹೇಳಿದೆಯೆಂದರೆ, ನಮ್ಮೆಲ್ಲರ ಜೀವನದಲ್ಲಿ ಒಂದು ಹಂತದಲ್ಲಿ ಶಾಲೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಉಪಾಧ್ಯಾಯರು, ಸ್ನೇಹಿತರು ಬಹಳ ಪ್ರಭಾವ ಬೀರುತ್ತಾರೆ. ಅದಕ್ಕೆ ಶ್ರೀನಿವಾಸರ ಮಗನ ಶಾಲೆಯವರು ಏರ್ಪಡಿಸಿದ ಚಟುವಟಿಕೆ ಬಹಳ ಉಚಿತವಾಗಿದೆಯೆಂದೆ.

ನಿಮ್ಮ (ಸಂಪದ ಬಳಗದ ಪ್ರತಿಯೊಬ್ಬರ) ಹತ್ತಿರವೂ ಇಂತಹ ಅನುಭವಗಳಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸ ಅಂಗಿ
  • ನಿಮಗ್ಯಾವ ಚಿಂತೆ
  • ಪಶ್ಚಾತ್ತಾಪ
  • ವಿಚಿತ್ರವಾದರೂ ನಿಜ
  • ಕನ್ನಡದ ಕಂದ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮
  • ಜನಪದ ಕಥೆ

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator