ಅನನ್ಯ ಅಲ್ಲಮ (೪)
ಮಂಗಳವೇಡೆಯ ಕಲಚುರ್ಯರು , ಚಾಲುಕ್ಯ ಸಮ್ರಾಜ್ಯದಲ್ಲಿ ಪ್ರಬಲರಾದ ಮಾಂಡಲಿಕರು .ಅವರನ್ನು ಒಲಿಸಿಕೊಳ್ಳಲು ಚಾಲುಕ್ಯರ ಆರನೇ ವಿಕ್ರಮಾದಿತ್ಯನು , ಬಿಜ್ಜಳನ ತಾತ ಜೋಗಮನ ಮಗಳನ್ನು ಮದುವೆಯಾದನು . ಈ ಸಂಬಂಧ ಮುಂದುವರಿದು , ವಿಕ್ರಮಾದಿತ್ಯನ ಮಗಳನ್ನು ಬಿಜ್ಜಳನ ತಂದೆ ಪೆರ್ಮಾಡಿಗೆ ಕೊಟ್ಟು ವಿವಾಹವಾಗಿತ್ತು .ಹೀಗಾಗಿ ಚಾಲುಕ್ಯರ ಆರನೇ ವಿಕ್ರಮಾದಿತ್ಯನ ಮಗಳ ಮಗನೇ ಬಿಜ್ಜಳ .
ಮಂಗಳವೇಡೆಯಲ್ಲಿ ಮಾಂಡಲಿಕನಾಗಿದ್ದರೂ ,ಬಿಜ್ಜಳನ ಕಣ್ಣು ಚಾಲುಕ್ಯರ ರಾಜಧಾನಿ ಕಲ್ಯಾಣದ ಮೇಲಿತ್ತು .ದುರ್ಬಲಗೊಳ್ಳುತ್ತಿದ್ದ ಚಾಲುಕ್ಯರ ಕೈಯ್ಯಿಂದ ಅಧಿಕಾರವನ್ನು ಕಿತ್ತುಕೊಳ್ಳಬೇಕೆಂಬ ರಾಜಕೀಯ ಮಹತ್ವಾಕಾಂಕ್ಷೆಯಲ್ಲಿದ್ದ ಬಿಜ್ಜಳನಿಗೆ ,ಬಸವಣ್ಣನವರು ಆಪ್ತರೇ ಆಗಿದ್ದರೂ ,ಅವರ ಸಮಾಜ ಸುಧಾರಣೆಯ ವಿಷಯದಲ್ಲಿ ಅಷ್ಟು ಆಸಕ್ತಿ ಇರಲಿಲ್ಲ.ಅವರನ್ನು ಕೇವಲ ದಾಳವಾಗಿ ಉಪಯೋಗಿಸಿಕೊಳ್ಳುವಲ್ಲಿ ಅವನಿಗೆ ಆಸಕ್ತಿ ಇತ್ತು .
ಜನ ಕಲ್ಯಾಣದ ವಿಷಯದಲ್ಲಿ ಈ ಪ್ರಭುತ್ವದ ನೆರವನ್ನು ನಿರೀಕ್ಷಿಸುವುದು ಕೇವಲ ಮರೀಚಿಕೆ ಎಂಬುದು ಬಸವಣ್ಣನವರಿಗೆ ಮನದಟ್ಟಾಗಿ ಹೋಗಿತ್ತು ; ಅಧಿಕಾರ ದಾಹವೆಂಬ ನಿತ್ಯ ನರಕದಲ್ಲಿ ಒದ್ದಾಡುತ್ತಿರುವ ರಾಜ ವಂಶಸ್ಥರಿಂದ , ತೋರಿಕೆಯ ಉಪಚಾರದ ಹೊರತಾಗಿ , ಬೇರಾವ ಉಪಯೋಗವೂ ಇಲ್ಲವೆಂಬುದನ್ನು ಬಸವಣ್ಣನವರು ಅರಿತಿದ್ದರು .ಅದರಿಂದಾಗಿ ನೇರವಾಗಿ ಜನರನ್ನೇ ಜಾಗೃತಿಗೊಳಿಸಲು ಅವರು ಸಿದ್ದರಾದರು .
ಜನರೊಡನೆ ಬೆರೆಯಲು ಪ್ರಮುಖವಾದ ಅಡ್ಡಿ ಅಧಿಕಾರ .ಆದರೆ ರಾಜ ಕಾರ್ಯಗಳಿಗೆ ಮತ್ತು ಸಾಮಾಜಿಕ ವ್ಯವಹಾರಗಳಿಗೆ ಪ್ರತ್ಯೇಕ ಸಮಯಗಳನ್ನು ನಿಗದಿಪಡಿಸಿಕೊಂಡ ಬಸವಣ್ಣನವರು ,ಬಿಜ್ಜಳನ ಆಸ್ಥಾನದಲ್ಲಿದ್ದಾಗ ಮಾತ್ರ ಅವರು ಮಂತ್ರಿ , ಉಳಿದ ಸಮಯವನ್ನು ಜನರ ನಡುವೆ ಸಾಮಾನ್ಯರಂತೆ ಕಳೆಯತೊಡಗಿದರು .ಅದಕ್ಕಾಗಿ ಸಕಲರಿಗೂ ತಮ್ಮ ಮನೆಯ ಬಾಗಿಲನ್ನು ಅವರು ತೆರೆದಿಟ್ಟರು .
ಬಸವಣ್ಣನವರ ಈ ವ್ಯಕ್ತಿತ್ವ ಜನರು ಅವರೆಡೆಗೆ ಆಕರ್ಷಿತರಾಗಲು ಕಾರಣವಾಯಿತು .ಅನೇಕ ವಿಶಿಷ್ಟ ವ್ಯಕ್ತಿಗಳು ಅವರ ಸುತ್ತ ನೆರೆಯಲಾರಂಭಿಸಿದರು .ಈ ವೇಳೆಗೆ ಬಿಜ್ಜಳನೂ , ತನ್ನ ಕಾರ್ಯ ಕ್ಷೇತ್ರವನ್ನು ಮಂಗಳವೇಡೆಯಿಂದ ಕಲ್ಯಾಣಕ್ಕೆ ಬದಲಾಯಿಸಿಕೊಂಡುದರಿಂದ ,ಬಸವಣ್ಣನವರ ಕಾರ್ಯಕ್ಷೇತ್ರವೂ ಕಲ್ಯಾಣವೇ ಆಯಿತು .ಕಲ್ಯಾಣದಲ್ಲಿ ಬಸವಣ್ಣನವರ ಮನೆ , ಮಹಾಮನೆಯೇ ಆಯಿತು .
ಅರಸು ಮನೆ ,ದೇವಸ್ಥಾನಗಳ ಹತ್ತಿರವೂ ಸುಳಿಯಲು ಆಸ್ಪದವಿಲ್ಲದ , ದರಿದ್ರರೂ , ಅಂತ್ಯಜರೂ ಮೊದಲಾದವರಿಗೆ ಮೊದಲ ಬಾರಿಗೆ ಮಹಾಮಂತ್ರಿಯ ಮನೆ ಮುಕ್ತ ದ್ವಾರವಾಯಿತು .ದಿನದಿಂದ ದಿನಕ್ಕೆ ಬೆಳೆಯುತ್ತಿದ್ದ ಬಸವಣ್ಣನವರ ಕೀರ್ತಿಯಿಂದ ಬಸವಣ್ಣನವರ ಮನೆ ಜನಾಕರ್ಷಣೆಯ ಕೇಂದ್ರವಾಯಿತು .ಪ್ರತಿಯೊಂದು ಕಾಯಕದವರೂ ಬೇಧಭಾವವಿಲ್ಲದೆ ಮೊದಲ ಬಾರಿಗೆ ಅಲ್ಲಿ ಒಟ್ಟಾಗತೊಡಗಿದರು .ಸತತ ರಾಜಕಾರ್ಯಗಳ ನಡುವೆ ಬಿಡುವೇ ಇಲ್ಲದ ಬಸವಣ್ಣನವರಿಗೆ ನೆರೆಯುತ್ತಿದ್ದ ಜನಸ್ತೋಮವನ್ನು ವ್ಯವಸ್ಥೆಗೊಳಿಸಲು ಅವರ ಅಕ್ಕ ನಾಗಲಾಂಬಿಕೆ ಮತ್ತು ನಾಗಲಾಂಬಿಕೆಯ ಮಗ ಚನ್ನಬಸವಣ್ಣ ನೆರವಿಗೆ ನಿಂತದ್ದು ಅವರಿಗೆ ದೊಡ್ಡ ಬಲವೇ ಬಂದಂತಾಯಿತು .
ಚನ್ನಬಸವಣ್ಣನವರಿಗೆ ಅತಿ ಸಣ್ಣ ವಯಸ್ಸಿನಲ್ಲಿಯೇ ಅಧ್ಯಯನದಲ್ಲಿ ಅಪಾರ ಆಸಕ್ತಿ , ಧರ್ಮ, ದರ್ಶನಗಳ ಬಗ್ಗೆ ಹೆಚ್ಚು ತಿಳುವಳಿಕೆ .ಧಾರ್ಮಿಕತೆಯ ಲೇಪವಿಲ್ಲದ ಸಮಾಜ ಸುಧಾರಣೆ ನಿರ್ಜೀವ ಸುಂದರ ಪ್ರತಿಮೆ ಮಾತ್ರ , ಅದು ಜೀವದಳೆಯಲು ಧರ್ಮ ಅದರ ಪ್ರಾಣವಾಯು . ಧರ್ಮವೆಂದರೆ ಕಂದಾಚಾರವಲ್ಲ,ಯಾವುದೇ ಮತವಲ್ಲ, ಬೂಟಾಟಿಕೆಯೂ ಅಲ್ಲ ,ಮನುಷ್ಯ ಸಹಜವಾದ ಅಂತರಂಗದ ಹುಡುಕಾಟ ಮತ್ತು ಅದರ ಅಭಿವ್ಯಕ್ತಿ .ಅದಕ್ಕಾಗಿ ಕಲ್ಯಾಣಕ್ಕೆ ಸಮರ್ಥ ಧಾರ್ಮಿಕ ನಾಯಕನೊಬ್ಬನ ಅಗತ್ಯವಿತ್ತು .
ಅಲ್ಲಮಪ್ರಭುವಿನ ಹೆಸರನ್ನು ಬಸವಣ್ಣನವರು ಕೇಳಿದ್ದರು , ಆದರೆ ಅದು ಒಂಟಿ ಸಲಗವೆಂಬುದು ಅವರಿಗೆ ಗೊತ್ತಿತ್ತು . ಆನೆ ನಡೆದದ್ದೇ ದಾರಿ ,ಹಾಗೆ ಪ್ರಭು ತುಳಿದದ್ದೇ ಮಾರ್ಗ .ಅವರನ್ನು ಕಟ್ಟಿ ಹಾಕಬಲ್ಲ ಮಹಾನುಭಾವ ಯಾರು? ಅಷ್ಟಕ್ಕೂ ಅವರು ಎಲ್ಲಿರುತ್ತಾರೆಂದು ಯಾರಿಗೆ ಗೊತ್ತು ? ಅವತ್ತೆಲ್ಲೋ ಯಾರೋ ತೋಟಗಾರನ ಜೊತೆಗೆ ವಾದ ಮಾಡುತ್ತಾ ಕುಳಿತಿದ್ದರಂತೆ ,ಇನ್ನೊಮ್ಮೆ ಯಾರೋ ಯೋಗಿಯ ಜೊತೆ ಸಂವಾದ .ಅಜಗಣ್ಣನೆಂಬ ಶರಣ ಮರಣ ಹೊಂದಿದಾಗ ,ತುಂಬಾ ವಿಚಾರವಂತೆಯಾದರೂ , ಅಣ್ಣನ ಅಗಲಿಕೆಯಿಂದ ಮನ ನೊಂದು ಕುಳಿತಿದ್ದ ಅವನ ತಂಗಿ ಮುಕ್ತಾಯಕ್ಕನ ಮನಸ್ಸನ್ನು ಸಮಾಧಾನ ಪಡಿಸಲು ಅಲ್ಲಿಗೂ ಬಂದಿದ್ದರಂತೆ .ಒಂದು ದಿನ ಪೂರ್ವ ಪ್ರಾಂತದಲ್ಲಿ ಕಂಡರೆ ,ಇನ್ನೊಮ್ಮೆ ಪಶ್ಚಿಮದಲ್ಲಿ ,ಈ ಮಹಾನುಭಾವನಿಗೆ ಒಂದು ನೆಲೆಯೇ ಇಲ್ಲವೇ ?

- Login or register to post comments
- 229 hits
- Email this page





RSS:
ಪ್ರತಿಕ್ರಿಯೆಗಳು
ಉ: ಅನನ್ಯ ಅಲ್ಲಮ (೪)
ಅಲ್ಲಮ ಪ್ರಭುವಿನ ಬಗ್ಗೆ 8ನೇ ತರಗತಿಯಲ್ಲಿ ಓದಿದ್ದೆ ಅವರ ಯಾವುದೋ ಪವಾಡದ ಕುರಿತಾದ ಕತೆ ಅದು ಅದಾದ ಮೇಲೆ ಅವರ ಬಗೀ ತಿಳಿಯುವ ಸಂದರ್ಭ್ಹವೇ ವರಲಿಲ್ಲ
ಅವರ ಬಗ್ಗೆ ಮಾಹಿತಿ ಕೊಡುತ್ತಿರುವುದಕ್ಕಾಗಿ ಧನ್ಯವಾದಗಳು
ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ
ಉ: ಅನನ್ಯ ಅಲ್ಲಮ (೪)
ಸಿಸೋಮಶೇಖರಯ್ಯನವರೇ, ಅಲ್ಲಮನ ಬಗ್ಗೆ ಚೆನ್ನಾದ ಲೇಖನ ಮೂಡಿಬರುತ್ತಿದೆ. ಮುಂದೆ ಸಾಗಲಿ, ನಾನಂತು ಈ ಸರಣಿಯನ್ನು ತಪ್ಪದೆ ಓದುತ್ತಿದ್ದೇನೆ. ನಮ್ಮ ಮನೆಯಲ್ಲಿ, "ವಚನ ಕಟ್ಟಿದ ಅಲ್ಲಮ" ಎಂಬ ಪುಸ್ತಕ ಇದೆ. ಸಿದ್ದಲಿಂಗಯ್ಯನವರು ಬರೆದಿರೋದು ಇರಬೇಕು.
ಅಲ್ಲಮಪ್ರಭು, ಶಂಕರತತ್ವಗಳನ್ನು ಗಿಳಿಯೋದು ಅಂತ ಹಂಗಿಸಿದ್ದಾರಂತೆ, ಹೌದಾ ?
ಉ: ಅನನ್ಯ ಅಲ್ಲಮ (೪)
ಮನ್ನಿಸಿ, ಅದು ಎನ್.ಬೋರಲಿಂಗಯ್ಯನವರದ್ದು.
ಉ: ಅನನ್ಯ ಅಲ್ಲಮ (೪)
ಸುನಿಲ್ ಜಯಪ್ರಕಾಶ್ ರವರೆ , ಅಲ್ಲಮ ಎಲ್ಲಿಯೂ ಯಾವುದೇ ಸಿದ್ದಾಂತವನ್ನು ನಿಂದಿಸದೆಯೇ , ತನ್ನ ದರ್ಶನವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸಬಲ್ಲ ವ್ಯಕ್ತಿತ್ವ . ಮನುಷ್ಯರ ಕುಟಿಲ ಸ್ವಭಾವವನ್ನಷ್ಟೇ ಅಲ್ಲಮ ವಿಡಂಬಿಸುವುದು , ನನಗೆ ಕಂಡು ಬಂದಂತೆ ಆ ರೀತಿಯ ವಚನಗಳು ಎಲ್ಲಿಯೂ ನನಗೆ ಸಿಕ್ಕಿಲ್ಲ . ಯಾರಾದರೂ ತೋರಿಸಿಕೊಟ್ಟರೆ ಅದರ ಬಗ್ಗೆ ಅಧ್ಯಯನ ಮಾಡಬಹುದು ಧನ್ಯವಾದಗಳು
ಉ: ಅನನ್ಯ ಅಲ್ಲಮ (೪)
ಸೋಮಶೇಖರಯ್ಯನವರೆ, ಎನ್.ಬೋರಲಿಂಗಯ್ಯನವರ "ವಚನ ಕಟ್ಟಿದ ಅಲ್ಲಮ" ಪುಸ್ತಕದ 'ಆತ್ಮದರ್ಶನದ ಆತ್ಯಂತಿಕತೆ' ಎಂಬ ಅಧ್ಯಾಯದಲ್ಲಿ ಪ್ರಸ್ತಾಪವಾಗಿರುವ ವಿಷಯಗಳನ್ನು ಶಂಕರ ಮತ್ತು ಅಲ್ಲಮಪ್ರಭು ಎಂಬ ಎಳೆಯಲ್ಲಿ ಹಾಕಿದ್ದೇನೆ. ಬಿಡುವಾದಾದ ಓದಿ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ಇದ್ದಲ್ಲಿ ಎಲ್ಲರೊಡನೆ ಹಂಚಿಕೊಳ್ಳಿರಿ.