ಕಾರಂತರ ಜೀವಂತ ಪಾತ್ರಗಳು -೪ (೧)
( ಸಂಕಲನ , ೩೮ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನ )
ಬಡತನಕ್ಕೆ ಉಂಬುವ ಚಿಂತೆ ,ಎಂದು ಆರಂಭವಾಗುವ ಒಂದು ವಚನ , ಉಡುವ ಚಿಂತೆ , ಹೆಂಡಿರ ಚಿಂತೆ , ಮಕ್ಕಳ ಚಿಂತೆ , ಎಂದೆಲ್ಲಾ ಒಂದೊಂದಾಗಿ ಚಿಂತೆಗಳ ಸಂತೆಯನ್ನು ಎದುರಿಗೆ ಹರವಿಡುತ್ತದೆ . ಕಾರಂತರ ’ಇದ್ದರೂ ಚಿಂತೆ’ ಕಾದಂಬರಿ ಇದ್ದಾಗಿನ ಚಿಂತೆಗಳ ಮೇಲೆ ಬೆಳಕು ಚಲ್ಲುತ್ತದೆ . ಕಾದಂಬರಿಯನ್ನು ರಚಿಸುವ ಕಾಲಕ್ಕೇನೇ (೧೯೬೪) ಇದು ಇವತ್ತಿನ ಸಮಾಜಕ್ಕೆ ರುಚಿಸುವ ವಿಷಯವಾಗಿರಲಿಕ್ಕಿಲ್ಲ ,ಎಂಬ ಸಂದೇಹವನ್ನು ಕಾರಂತರು ವ್ಯಂಗ್ಯವಾಗಿ ವ್ಯಕ್ತಪಡಿಸುತ್ತಾರೆ .ಏಕೆಂದರೆ ಆರ್ಥಿಕ ಚಿಂತನೆಗಳು , ಎಲ್ಲ ಕಾಲಕ್ಕೂ ಒಂದೇ ತೆರನಾಗಿರುವುದು ಸಾಧ್ಯವಿಲ್ಲ.ಅಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಅವಕಾಶಗಳಿದ್ದೇ ಇವೆ .ಆದರೆ ಆ ಪ್ರಯೋಗಗಳು ಮಾನವೀಯವಾಗಿರುವ ವರೆಗೆ ಅಂತಹ ಸಮಸ್ಯೆಗಳಿಲ್ಲ ; ಅಮಾನವೀಯವಾದರೆ ಮಾನವ ಸಮಾಜ ತೆರಬೇಕಾದ ಬೆಲೆ ಮಾತ್ರ ಸಾಮಾನ್ಯವಾದುದಲ್ಲ .
’ಇದ್ದರೂ ಚಿಂತೆ’ ಯನ್ನು ಬರೆಯುವ ಕಾಲಕ್ಕೇನೇ ಸಮಕಾಲೀನವಲ್ಲ ಎನಿಸಿದ ವಿಷಯ , ಇವತ್ತಿನ ಆರ್ಥಿಕ ಜಗತ್ತಿನ ದೃಷ್ಟಿಯಿಂದಂತೂ ಅಸಂಗವೆನಿಸುವಂತೆ ಕಂಡರೆ ಆಶ್ಚರ್ಯವಿಲ್ಲ! ಏಕೆಂದರೆ ಇಪ್ಪತ್ತನೆಯ ಶತಮಾನದ ಆರಂಭದ ಕಾಲದ ಆರ್ಥಿಕ ಚಿಂತನೆಗಳು , ಒಂದು ರೀತಿಯ ಅತಿಯಾದರೆ ; ಇವತ್ತಿನ ವಿದ್ಯಮಾನಗಳು ಇನ್ನೊಂದು ರೀತಿಯ ಅತಿರೇಕದಿಂದ ಕೂಡಿ ಸಮಾಜವನ್ನು ಕಂಗೆಡಿಸುತ್ತಿವೆ .ಮದ್ಯ ಪಾನ ಮಾಡಿಸಿರುವ ಹುಚ್ಚು ಕುದುರೆಯು ನಾಗಾಲೋಟದಿಂದ ಓಡುತ್ತಿರುವ ರೀತಿಯಲ್ಲಿ ಜರುಗುತ್ತಿರುವ ಆರ್ಥಿಕ ವಿದ್ಯಮಾನಗಳು , ಮಾನವ ಪ್ರಾಣಿಯನ್ನು ಯಾವ ದಡ ಮುಟ್ಟಿಸುತ್ತವೆಯೋ ; ಅಥವಾ ಯಾವ ಪ್ರಪಾತಕ್ಕೆ ಕೆಡವುತ್ತವೆಯೋ ಹೇಳಬಲ್ಲ ನರ ಮಾನವ ಯಾರೂ ಇದ್ದಂತೆ ಕಾಣುತ್ತಿಲ್ಲ .
ಆದರೂ ಇದ್ದರೂ ಚಿಂತೆಯನ್ನು ಇಲ್ಲಿ ಪ್ರಸ್ತಾಪಿಸತೊಡಗಿರುವುದು , ಅಲ್ಲಿನ ಪಾತ್ರಗಳ ತೊಳಲಾಟವನ್ನು ಗುರುತಿಸುವ ಉದ್ದೇಶದಿಂದ . ಆರ್ಥಿಕ ಏರು ಪೇರುಗಳು ಏನಾದರೂ ಆಗಲಿ ; ಚಿಂತನೆಗಳ ರೀತಿಯಲ್ಲಿಯೇ ಅಜ ಗಜಾಂತರ ವ್ಯತ್ಯಾಸಗಳೇ ಆಗಲಿ , ಅವುಗಳ ನಡುವೆ ತೊಳಲಾಡುವ ಮನುಷ್ಯ ಮಾತ್ರ ಅವನೇ ಆಗಿರುವುದರಿಂದ ; ಕಾಲದ ಹಂಗನ್ನು ತೊರೆದು ,ಮನುಷ್ಯನ ಕೆಲವು ಮೂಲಭೂತ ಪ್ರವೃತ್ತಿಗಳು ನಿರಂತರವಾಗಿರುವುದರಿಂದ , ’ಇದ್ದರೂ ಚಿಂತೆ’ಯ ಪ್ರಸ್ತಾಪ ಪ್ರಸ್ತುತವೆನಿಸುತ್ತದೆ .
ಇದ್ದರೂ ಚಿಂತೆಯ ರಾಘವೇಂದ್ರರಾಯ ಮುಂಬಯಿ ಶಹರಿನ ಆಢ್ಯ ಮನುಷ್ಯರಲ್ಲೊಬ್ಬ ,ಅವನಿಗೆ , ಅವನ ’ಯಜಮಾನ್ ಅಂಡ್ ಕಂಪನಿ’ ಗೆ ಅಲ್ಲಿ ತುಂಬಾ ಬೆಲೆ , ಆರ್ಥಿಕ ರಂಗದಲ್ಲಿ ಮುಂದುವರಿಯುವವನಿಗೆ , ಹಣದ ಜೊತೆಗೆ ಹೆಸರು ಮತ್ತು ಬೆಲೆ ಇರಲೇಬೇಕಾದುವು .ಅವು ರಾಘವೇಂದ್ರರಾಯರಿಗೆ , ಅವರ ಶ್ರಮದಿಂದಾಗಿಯೋ ,ಅದೃಷ್ಟದಿಂದಾಗಿಯೋ , ಇನ್ನಾವ ಕಾರಣದಿಂದಲೋ ಅಂತೂ ಪ್ರಾಪ್ತಿಸಿದ್ದವು . ಹಾಗೆಂದು ರಾಘವೇಂದ್ರರಾಯ ಹುಟ್ಟುತ್ತಲೇ ಶ್ರೀಮಂತನೇನಲ್ಲ .ಕರಾವಳೀ ಕರ್ನಾಟಕದ ಅತ್ಯಂತ ಸಾಮಾನ್ಯ ಬಡ ಕುಟುಂಬದಿಂದ ಬಂದವನು .ಮುಂಬೈಗೆ ಬಂದ ಹೊಸದರಲ್ಲಿ ಒಂದು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಅವನದಾಗಿತ್ತು .ಅಲ್ಲಿ ಕರ್ನಾಟಕದ ಉತ್ತರ ಕನ್ನಡಜಿಲ್ಲೆಯಿಂದಲೇ ಬಂದು . ಮಸಾಲೆಗಳ ಮತ್ತು ಬಣ್ಣಗಳ ವ್ಯಾಪಾರದಲ್ಲಿ ತೊಡಗಿದವರೊಬ್ಬರ ಪರಿಚಯ ಅವನಿಗಾಗದಿದ್ದರೆ ,ಅವನ ಬಾಳಿನ ದಾರಿ ಯಾವ ಮಾರ್ಗ ಹಿಡೀಯುತ್ತಿತ್ತೋ ಗೊತ್ತಿಲ್ಲ .
ಅವನ ಮಡದಿ ಸಾವಿತ್ರಿಯಾದರೆ ಹಾಗಲ್ಲ . ಅವಳೂ ಸಹ ಕರಾವಳಿಯ ಮನೆತನದ ಮೂಲದವಳೇ ಆದರೂ , ಮುಂಬೈಯಲ್ಲಿ ಹೆಸರು ಮಾಡಿದ ಹೋಟೆಲ್ ಉದ್ಯಮಿಯೊಬ್ಬರ ಮಗಳು .ಅವಳ ತಂದೆ ಬಹಳ ಹಿಂದೆಯೇ ಮುಂಬೈ ಸೇರಿದುದರಿಂದ ಅವಳಲ್ಲಿ ಮುಂಬೈನ ಸಂಸ್ಕೃತಿ ಸಹಜವಾಗಿಯೇ ಮೈಗೂಡಿತ್ತು .ಸಾವಿತ್ರಿ ಬರಿಯ ಸಾಮಾನ್ಯ ಹೆಣ್ಣುಮಗಳು ಮಾತ್ರ ಅಲ್ಲ .ಪ್ರಗತಿಪರ ವಿಚಾರಗಳನ್ನುಳ್ಳವಳು ; ಮುಂಬಯಿಯ ಮಹಿಳಾ ಸಮಾಜದ ಬೆನ್ನೆಲುಬಾಗಿದ್ದವಳು .ಸಮಾಜ ಸೇವೆ ಅವಳ ಇಷ್ಟದ ಕೆಲಸ ; ಜೊತೆಗೆ ಆ ಕಾಲದ ಸ್ವಾತಂತ್ರ್ಯ ಹೋರಾಟದ ಪ್ರಭಾತ ಪೇರಿಗಳಲ್ಲಿ ಮುಂಬಯಿ ಬೀದಿಗಳಲ್ಲಿ ಅಲೆದಾಡಿ , ಪೋಲೀಸರಿಂದ ಪೆಟ್ಟು ತಿಂದವಳು ,ಈ ವಿಷಯ ಮುಂಬಯಿಯ ಪತ್ರಿಕೆಗಳಲ್ಲೂ ಪ್ರಕಟವಾಗಿ ಸಾವಿತ್ರಿಯ ಹೆಸರು ಶಹರದಲ್ಲಿ ಪರಿಚಿತವಾದುದಾಗಿತ್ತು ಇಷ್ಟಲ್ಲದೆ ಗಂಡನ ವ್ಯವಹಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ , ಕಂಪನೆಯ ಉತ್ಕರ್ಷಕ್ಕೆ ಕಾರಣಳೂ ಆಗಿದ್ದವಳು .ಕತೆ ಇಷ್ಟೇ ಆಗಿದ್ದರೆ ’ ಇದ್ದರೂ ಚಿಂತೆ’ ಬರೆಯುವ ಅಗತ್ಯವೇ ಇರಲಿಲ್ಲ .
ಇದ್ದರೂ ಚಿಂತೆಯಲ್ಲಿ ಅತಿ ಮುಖ್ಯ ತಿರುವು ಬರುವುದು ರಾಘವೇಂದ್ರ ಸಾವಿತ್ರಿಯರ ಕಿರಿಯ ಕೂಸು ಸೀತಾರಾಮನಿಂದ . ಸೀತಾರಾಮನೆಂದರೆ ಸಾವಿತ್ರಿಯ ಪಾಲಿಗೆ ಸಮಸ್ಯೆಯ ಮಗು .ಅವನ ಸ್ವಭಾವವೇ ಅವಳಿಗೆ ಅರ್ಥವಾಗದಂತಹುದು . ತಾಯಿಯೆಂಬ ಮಮತೆಯಾಗಲೀ , ಗೌರವವಾಗಲೀ ಅವನಲ್ಲಿರುವ ಬಗ್ಗೆಯೇ ಅವಳಿಗೆ ಸಂದೇಹ .ಅವನು ಚಿಕ್ಕವನಾದಾಗಿನಿಂದ ಬೆಳೆದದ್ದು ಅವನ ಅಜ್ಜಿಯ ಆಸರೆಯಲ್ಲಿ , ತನ್ನ ತಾಯಿಯೇ ತನ್ನ ವಿರೋಧಿಯಾಗಿ ಅವನನ್ನು ರೂಪಿಸಿದಳೇ ? - ಎಂಬ ಅನುಮಾನ ಸಹ ಅವಳನ್ನು ಕಾಡದಿರಲಿಲ್ಲ .’ಯಜಮಾನ್ ಅಂಡ್ ಕಂಪನಿಯ ಯಾವ ವ್ಯವಹಾರಗಳ ಬಗ್ಗೆಯೂ ಅವನು ಆಸಕ್ತಿ ತಾಳಿದುದೆಂಬುದೇ ಇಲ್ಲ .ಅವನ ಕುಟುಂಬದ ಯಾರೊಂದಿಗೂ ಅವನ ಆಪ್ತತೆ ಬೆಳೆಯಲೇ ಇಲ್ಲ .
ಸೀತಾರಾಮ ಈ ವ್ಯವಹಾರ , ರಾಜಕೀಯ ,ಮುಂಬೈನ ಸಮಾಜ ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ , ಸಸ್ಯ ಶಾಸ್ತ್ರದಲ್ಲಿ ಎಂ, ಎಸ್ ಸಿ ಮುಗಿಸಿ , ಕರ್ನಾಟಕದ ಧಾರವಾಡಕ್ಕೆ ಬಂದು ಸಸ್ಯ ಶಾಸ್ತ್ರದ ಪ್ರಾಧ್ಯಾಪಕನಾಗುತ್ತಾನೆ .ತನ್ನ ತಾಯಿ ಸಾವಿತ್ರಿಯ ಬಗ್ಗೆ ಯವ್ಯಾವುದೋ ಕಾರಣಕ್ಕೆ ಅವನಿಗೆ ಅನಾದರ .ಅವಳ ರಾಜಕೀಯ ಚಳುವಳಿ ,ಅವನಿಗೆ ಪ್ರಾಮಾಣಿಕವಾಗಿ ಕಾಣಿಸುವುದಿಲ್ಲ .ಅವಳ ಚಟುವಟಿಕೆಗಳು ಅವನಿಗೆ ತೋರಿಕೆಯವಾಗಿ , ನಾಟಕೀಯವಾಗಿ , ಅಸಹಜವಾಗಿ ಕಾಣುತ್ತವೆ .ಸಾಮಾನ್ಯವಾಗಿ ದೊಡ್ಡವರ ಈ ರೀತಿಯ ಬಯಲಾಡಂಬರದ ನಾಟಕಗಳು , ಅವನಲ್ಲಿ ತಿರಸ್ಕರಿಸಲು ಯೋಗ್ಯವಾದ ನಡಾವಳಿಗಳೆನಿಸುತ್ತವೆ . ಆದರೂ ತಾಯಿ ಎಂಬ ವ್ಯಕ್ತಿಯನ್ನು ಇಂತಹ ಕಾರಣಗಳಿಗಾಗಿ ಕಡೆಗಣಿಸುವುದು ಅಷ್ಟೊಂದು ಸಕಾರಣವಲ್ಲ .ಏಕೆ ಸೀತಾರಾಮ ಹೀಗೆ ? ಎಂಬ ಪ್ರಶ್ನೆಗೆ ಸೀತಾರಾಮನಲ್ಲಿ , ಯಾವುದೋ ರೀತಿಯ ತಾಯಿಯ ವಿಚಾರದಲ್ಲಿ ಮನಸ್ಸು ಕಹಿಯಾಗುವ ಸಂಗತಿಗಳಿವೆ . ಆ ವಿಚಾರವನ್ನು ಕಾರಂತರು ಎಲ್ಲಿಯೂ ಸೀತಾರಾಮನ ಬಾಯಿಂದಲಾಗಲೀ ಅಥವಾ ಅವರ ನಿರೂಪಣೆಯಲ್ಲಾಗಲೀ ನೇರವಾಗಿ ಪ್ರಸ್ತಾಪಿಸುವುದಿಲ್ಲ .ಆದರೆ ಅವರ ಕಂಪನಿಯ ಮೇನೇಜರನಾದ ಸದಾಶಿವರಾಯನ ವಿಷಯದಲ್ಲಿ, ಸೀತಾರಾಮ ತಳೆಯುವ ನಿಷ್ಟುರ ನಿಲುಮೆ ಮತ್ತು ಅಸಹಜ ಕೋಪ ಓದುಗರ ಗಮನಕ್ಕೆ ಕೆಲವು ಸಂಗತಿಗಳನ್ನು ಸೂಚಿಸುತ್ತವೆ .

- Login or register to post comments
- 161 hits
- Email this page





RSS: